Tag: chikkarasinakere

  • ಪವಾಡದಂತೆ ನಡೆದ ಗುಡ್ಡಪ್ಪನ ಆಯ್ಕೆ- ನೇಮಕ ವಿರೋಧಿಸಿದವರನ್ನು ಅಟ್ಟಾಡಿಸಿದ ಬಸವ

    ಪವಾಡದಂತೆ ನಡೆದ ಗುಡ್ಡಪ್ಪನ ಆಯ್ಕೆ- ನೇಮಕ ವಿರೋಧಿಸಿದವರನ್ನು ಅಟ್ಟಾಡಿಸಿದ ಬಸವ

    ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ (ಪೂಜಾರಿ)ಯನ್ನು ಪವಾಡ ರೀತಿಯಲ್ಲಿ ನೇಮಕ ಮಾಡಿತು.

    ಗ್ರಾಮದ ಹೊಸಹಳ್ಳಿಯಲ್ಲಿ ಚನ್ನಪ್ಪ ಎಂಬವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನ ಕನಸಿನಲ್ಲಿ ಬಂದು ನಾನು ಇಲ್ಲೇ ನೆಲೆಸಿದ್ದೇನೆ. ನನಗೆ ಚೆನ್ನಾಗಿರುವ ಗುಡಿ ಕಟ್ಟಿಸು, ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ಹೇಳಿದ್ದಳಂತೆ. ಆ ಹಿನ್ನೆಲೆಯಲ್ಲಿ 2 ಲಕ್ಷ ರೂ. ಹಾಕಿ ದಾನಿಗಳಿಂದ 13 ಲಕ್ಷ ರೂ. ಸಂಗ್ರಹಿಸಿ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಿದ್ದು, ಸೋಮವಾರ, ಮಂಗಳವಾರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

    ಮಾರಮ್ಮನಿಗೆ ಮಂಗಳವಾರ ಗುಡ್ಡಪ್ಪನ ಆಯ್ಕೆಗೆ ಚಿಕ್ಕಅರಸಿನಕೆರೆ ಬಸವನನ್ನು ಕರೆಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ದೇವಾಲಯದಿಂದ ಹನಿಯಂಬಾಡಿ ರಸ್ತೆಯಲ್ಲಿನ ಹೆಬ್ಬಾಳದ ಬಳಿ ಗ್ರಾಮದ 5 ದೇವರುಗಳ ಮೆರವಣಿಗೆ ತೆರಳಿ, ಬಸವನಿಗೆ ಪೂಜೆ ಪುನಸ್ಕಾರ ಮಾಡಿ ನಿಂತರು. ನೂರಾರು ಜನರ ನಡುವೆ ನಿಂತಿದ್ದ ಮನು ಅವರನ್ನು ಬಸವ ನೇಮಕ ಮಾಡಿತು. ಆದರೆ ಆತ ಬಸವನ ಕಾಲು ಹಿಡಿದುಕೊಂಡು ನನ್ನಿಂದ ಆಗುವುದಿಲ್ಲ. ಬೇರೆಯವರನ್ನು ನೇಮಕ ಮಾಡು ಎಂದು ಕೋರಿದರು.

    ಸ್ಥಳದಲ್ಲಿದ್ದ ಜನತೆ ಬಲವಂತ ಮಾಡಿದರು ಮನು ನಿರಾಕರಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತ ಬಸವ, ಗ್ರಾಮದ ಜನತೆ ಪೂಜೆಗಳನ್ನು ತಲೆ ಮೇಲೆ ಹೊತ್ತು ಹೊರಟು ದೇವಾಲಯದತ್ತ ಹೆಜ್ಜೆ ಹಾಕಿತು. ಅರ್ಧ ಕಿ.ಮೀ. ಸಾಗಿ ರಸ್ತೆಲ್ಲಿಯೇ ನಿಂತಿತು. ಇತ್ತ ಮನು ಮನವೊಲಿಕೆಗೆ ಜನತೆ ಕಸರತ್ತು ನಡೆಸಿದ್ದರು ಪ್ರಯೋಜನವಾಗಿರಲಿಲ್ಲ. ಪರಿಣಾಮ ಪೂಜೆ ಮಾಡುವವರು ಯಾರೆಂಬ ಚಿಂತೆ ಗ್ರಾಮಸ್ಥರನ್ನು ಕಾಡಲಾರಂಭಿಸಿ, ಬಸವ ನಿಂತಿದ್ದ ಸ್ಥಳದಲ್ಲೇ ನಮಗೆ ಪರಿಹಾರ ಕಲ್ಪಿಸದೆ ಹೋಗಬೇಡ ಎಂದು ಮತ್ತೇ ಪೂಜೆ ಸಲ್ಲಿಸಿ ಕೋರಿಕೊಂಡರು.

    ಕೆಲಹೊತ್ತು ಸುಮ್ಮನಿದ್ದ ಬಸವ ಹೊನ್ನೇಗೌಡ ಎಂಬವರ ಪುತ್ರ ಜಗದೀಶ್ ಅವರತ್ತ ತೆರಳಿತು. ಆತ ಹೆದರಿ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಬಿಡದ ಬಸವ ಮತ್ತೇ ಹೆಬ್ಬಾಳದ ತನಕ ಆತನನ್ನು ಅಟ್ಟಿಸಿಕೊಂಡು ಬಂದು ನೀರಿನೊಳಗೆ ನೂಕಿತು. ಆತ ಕೈಮುಗಿದು ಬೇಡಿಕೊಂಡರು ಬಿಡಲಿಲ್ಲ.

    ಬೇಡ ಎಂದವರನ್ನು ಅಟ್ಟಾಡಿಸಿದ ಬಸವ:
    ಜಗದೀಶ್ ನೇಮಕ ಮಾಡಿದ್ದಕ್ಕೆ ಆತನ ದೊಡ್ಡಪ್ಪನ ಪುತ್ರ ರಾಜಕುಮಾರ್ ವಿರೋಧ ವ್ಯಕ್ತಪಡಿಸಿ ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಕೆರಳಿದ ಬಸವ ಅವರನ್ನು ಅಟ್ಟಾಡಿಸಿ ಬಟ್ಟೆ ಹರಿದು ಮತ್ತೆ ಜಗದೀಶ್ ನಿಂತಿದ್ದ ಹೆಬ್ಬಾಳಕ್ಕೆ ಇಳಿಯಿತು. ರಾಜಕುಮಾರ್ ಮಾತು ಮುಂದುವರಿಸಿದ್ದ ಮತ್ತೆ ಅವರನ್ನು ಅಟ್ಟಾಡಿಸಿ ಅಲ್ಲಿಂದ ದೂರ ಕಳಿಸಿತು. ನಂತರ ಜಗದೀಶ್ ಸ್ನಾನ ಮಾಡುವವರೆಗೂ ಬಿಡಲಿಲ್ಲ. ಆತ ಸ್ನಾನ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ದೇವಾಲಯದತ್ತ ಆಗಮಿಸಿತು. ಜಗದೀಶ್ ತಾತಂದಿರು ಪೂಜಾ ಕಾರ್ಯ ನೆರವೇರಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಅನ್ನ ಸಂತರ್ಪಣೆ:
    ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ 5.15ರಿಂದಲೇ ಗುರು ಗಣಪತಿ ಪೂಜೆ, ಪುಣ್ಯಾಹ, ಪ್ರಾಣಪ್ರತಿಷ್ಠಾಪನೆ, ಕಲಾತತ್ವಹೋಮ, ಶಾಂತಿಪ್ರಾಯಶ್ಚಿತ್ತ ಹೋಮ, ಕುಂಭಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಪೂರ್ಣಾಹುತಿ, ಮಹಾಪೂಜೆ, ಮಹಾ ಮಂಗಳಾರತಿ, ಆಶೀರ್ವಚನ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮದ ಎಲ್ಲ ಜನತೆ ಸೇರಿ ಅಕ್ಕಪಕ್ಕದ ಗ್ರಾಮದ ಜನತೆ, ಹೊರಗಿನಿಂದ ಆಗಮಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು.

  • ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ- ಸುಮಲತಾ

    ಅವಕಾಶ ಸಿಕ್ರೆ ಖಂಡಿತಾ ಅಂಬಿ ಪ್ರೀತಿಯ ಋಣ ತೀರಿಸುವೆ- ಸುಮಲತಾ

    ಮಂಡ್ಯ: ಇಲ್ಲಿನ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡುವ ಇಂಗಿತವನ್ನು ಸಮಲತಾ ಅಂಬರೀಶ್ ಅವರು ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ನೀವು ನೋಡಿಕೊಂಡಿದ್ದೀರಿ, ಸಾಕಿದ್ದೀರಿ, ಬೆಳೆಸಿದ್ದೀರಿ. ಆ ಒಂದು ಪ್ರೀತಿಯ ಋಣ ನಮ್ಮಲ್ಲಂತೂ ಇದ್ದೇ ಇದೆ. ಆ ಋಣ ತೀರಿಸಲು ಅವಕಾಶ ಸಿಕ್ಕರೆ ಖಂಡಿತಾ ನಾನು ಅದನ್ನು ನೆರವೇರಿಸುತ್ತೇನೆ ಎಂದು ಅವರು ಹೇಳಿದ್ರು.

    ಅಭಿಮಾನಿಗಳ ಪ್ರೀತಿ ವಿಶ್ವಾಸದ ಮಾತುಗಳೇ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಆ ದೇವರ ಆಶೀರ್ವಾದ ಇದ್ದರೆ ಖಂಡಿತಾ ನಿಮ್ಮೆಲ್ಲರ ಆಸೆಯಂತೆ ಒಳ್ಳೆಯದಾಗಬೇಕು ಎಂದು ನನಗೂ ಆಸೆ ಇದೆ. ಅದರಂತೆ ಮುಂದೆ ಏನು ಮಾಡಬೇಕು ಅನ್ನೋ ತೀರ್ಮಾನವನ್ನು ನಿಮ್ಮೆಲ್ಲರನ್ನು ಕೇಳಿ, ನಿಮ್ಮ ಆಶೀರ್ವಾದ ತೆಗೆದುಕೊಂಡು ಮುಂದಿನ ಹೆಜ್ಜೆ ಏನಿದ್ದರೂ ನಿಮ್ಮ ಜೊತೆಯಲ್ಲೇ ಇಡುತ್ತೇನೆ ಅಂದ್ರು.

    ಸಿದ್ದರಾಮಯ್ಯ ಭೇಟಿ:
    ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ. ಮಂಡ್ಯದ ಜನತೆ ಹಾಗೂ ಅಂಬರೀಶ್ ಅವರ ಅಭಿಮಾನಿಗಳ ಆಸೆ, ಅಪೇಕ್ಷೆಯನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದೇನೆ. ಪಕ್ಷದ ಕಾರ್ಯಕರ್ತರು ಕೂಡ ಸ್ಪರ್ಧೆ ಮಾಡಬೇಕೆಂದು ಇಷ್ಟಪಡುತ್ತಿದ್ದಾರೆ. ಜನರು ಕೂಡ ಅಂಬರೀಶ್ ಅವರ ಮೇಲಿರುವ ಪ್ರೀತಿಯಿಂದ ಪ್ರೀತಿ, ವಿಶ್ವಾಸವನ್ನು ಇಷ್ಟು ವರ್ಷ ಪಡೆದುಕೊಂಡು ಬಂದಿದ್ದೇವೆ. ಅದನ್ನು ಇದೇ ರಿತಿ ಮುಂದುವರಿಸಿಕೊಂಡು ಹೋಗುವ ಆಸೆ ಜನರಲ್ಲಿದೆ. ಹೀಗಾಗಿ ಅವರ ಆಸೆಯನ್ನು ನಾನು ಇಷ್ಟು ದೂರ ಬಂದು ಹೇಳುತ್ತಿದ್ದೇನೆ ಎಂದು ಹೇಳಿದ್ದೇನೆ. ಈ ವೇಳೆ ಅವರು ಕೂಡ ಈ ವಿಚಾರ ನನಗೆ ಗೊತ್ತಾಯಿತು. ಹೀಗಾಗಿ ಈ ಕುರಿತು ನಾವು ಚರ್ಚೆ ಮಾಡಿ ನಿಮಗೆ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಅವರ ಜೊತೆ ನಡೆಸಿದ ಮಾತುಕತೆಯ ಬಗ್ಗೆ ತಿಳಿಸಿದ್ರು.

    ಸ್ವತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಧಾರದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಸದ್ಯ ಅಂಬರೀಶ್ ಅವರು 20, 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಲಾಯಲ್ ಪಾರ್ಟಿ ವರ್ಕರ್ ಆಗಿದ್ದರು. ಅವರು ಯಾವುದೇ ಆಫರ್ ಗಳತ್ತ ಹೋಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಸೇವೆ ಇದೆ. ಅದೇ ರೀತಿ ನಾವು ಕೂಡ ಕಾಂಗ್ರೆಸ್ ಪಕ್ಷದಿಂದಲೇ ಗುರುತಿಸಿಕೊಳ್ಳಬೇಕು ಅನ್ನೋ ಭಾವನೆ ಇರುವುದಾಗಿ ಅವರು ಅಭಿಪ್ರಾಯಿಸಿದ್ರು.

    ಬಿಜೆಪಿಯ ಆಫರ್ ಅಥವಾ ಬೇರೆ ಆಫರ್ ಇನ್ನೂ ತೀರ್ಮಾನಿಸಿಲ್ಲ. ರಾಜಕೀಯವಾಗಿ ಬರಬೇಕು ಎಂದು ತೀರ್ಮಾನಿಸಿರಲಿಲ್ಲ. ಜನರ ಇಷ್ಟ ಆ ನಿಟ್ಟಿನಲ್ಲಿ ಯೋಚನೆ ಮಾಡುವಂತೆ ಮಾಡಿದೆ. ಜೆಡಿಎಸ್ ನಿಂದ ಇದೂವರೆಗೂ ಯಾರು ನನ್ನ ಸಂಪರ್ಕಿಸಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಅವರ ನಿರ್ಧಾರ ಮೇಲೆ ಎಲ್ಲವೂ ಬಿಟ್ಟಿದ್ದೇನೆ ಎಂದು ಅವರು ತಿಳಿಸಿದ್ರು.

    ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಮಲತಾ ಅವರು ಇಂದು ಸಲ್ಲಿಸಿದ ಪೂಜೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೇವಸ್ಥಾನ ಭೇಟಿ ವೇಳೆ ಸುಮಲತಾ ಅವರಿಗೆ ರಾಕ್‍ಲೈನ್ ವೆಂಕಟೇಶ್, ಸಂಬಂಧಿಕರು, ಚಿಕ್ಕರಸಿನಕೆರೆ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv