Tag: Chikkamagaluru

  • ವೈರಲ್ ಆಯ್ತು ಅಪ್ಪನ ಜೊತೆಗಿನ ಸಿದ್ದಾರ್ಥ್ ಫೋಟೋ

    ವೈರಲ್ ಆಯ್ತು ಅಪ್ಪನ ಜೊತೆಗಿನ ಸಿದ್ದಾರ್ಥ್ ಫೋಟೋ

    -ಎಸ್ಟೇಟ್‍ನಲ್ಲಿ ನೀರವ ಮೌನ
    -ಸಾವಿನ ಸುತ್ತ 10 ಅನುಮಾನದ ಹುತ್ತ

    ಚಿಕ್ಕಮಗಳೂರು: ಕಾಫಿ ಡೇ ಮಾಲೀಕ, ಸಾವಿರಾರು ಕೋಟಿ ಒಡೆಯ ವಿ.ಜಿ.ಸಿದ್ದಾರ್ಥ್ ಸಾವಿನಿಂದ ಚಿಕ್ಕಮಗಳೂರಿನಲ್ಲಿರುವ ಸಿದ್ದಾರ್ಥ್ ಅವರ ಚೇತನಹಳ್ಳಿ ಎಸ್ಟೇಟ್‍ನಲ್ಲಿ ನೀರವ ಮೌನ ಆವರಿಸಿದೆ.

    ಈ ಮಧ್ಯೆ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರ ಜೊತೆಗಿನ ಕೊನೆಯ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಅವರ ತಂದೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಪಕ್ಕದಲ್ಲಿ ಅಪ್ಪ ತಮ್ಮೊಂದಿಗೆ ಮಾತನಾಡುತ್ತಿಲ್ಲ ಎಂದು ಚಿಂತೆಯಿಂದ ಸಿದ್ದಾರ್ಥ್ ಕೂತಿರುವಂತೆ ಕಾಣುತ್ತಿದೆ. ಈ ಫೋಟೋ ಎಲ್ಲರ ಮನಕಲಕುತ್ತಿದೆ.

    ಸಿದ್ದಾರ್ಥ್ ಅವರ ಕಾಫಿ ಎಸ್ಟೇಟ್ ಮನೆಯಲ್ಲಿ ನೀರವ ಮೌನ ಅವರಿಸಿದ್ದು, ಪ್ರತಿದಿನ ಕಾರ್ಮಿಕರಿಂದ ತುಂಬಿರುತ್ತಿದ್ದ ಎಸ್ಟೇಟ್‍ನಲ್ಲಿ ಮೌನ ಆವರಿಸಿದೆ. ಕಾರ್ಮಿಕರನ್ನು ಕೆಲಸಗಾರರಂತೆ ನೋಡದೆ ತಮ್ಮ ಮನೆಯ ಸದಸ್ಯರಂತೆ ಕಾಣುತ್ತಿದ್ದ ಮಾಲೀಕ ಅನ್ನದಾತ ಇಲ್ಲವೆಂಬುವುದನ್ನು ಕಲ್ಪನೆ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬ ಸದಸ್ಯರು ಇಂದು ಹಾಗೂ ನಾಳೆ ಎಲ್ಲಾ ಕಾರ್ಮಿಕರಿಗೆ ರಜೆ ನೀಡಿದ್ದಾರೆ. ಕುಟುಂಬ ಸದ್ಯಸರು ಮಾತ್ರ ಮನೆಯಲ್ಲಿದ್ದಾರೆ.

    ಹಿಂದೂ ಸಂಪ್ರದಾಯದಂತೆ ಸಿದ್ದಾರ್ಥ್ ಅವರ ಅಸ್ಥಿಗಳನ್ನು ಇಂದು ಮುಂಜಾನೆ ಕುಟುಂಬ ಕೆಲ ಸದಸ್ಯರು ಸಂಗ್ರಹಿಸಿದರು. ಶುಕ್ರವಾರ ಅಸ್ಥಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ಸಿದ್ದಾರ್ಥ್ ಅವರ ತಾಯಿ ವಾಸಂತಿ ಮತ್ತು ಪತ್ನಿ ಮಾಲವಿಕ ಹಾಗೂ ಪುತ್ರ ಮನೆಯಲ್ಲಿದ್ದಾರೆ. ಮುಂದಿನ ಕಾರ್ಯಕ್ರಮಗಳ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಿದ್ದಾರೆ.

    ಸಿದ್ಧಾರ್ಥ್ ತಂದೆ:
    ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ ಅವರು ಕೋಮಾ ಪರಿಸ್ಥಿತಿಯಲ್ಲಿದ್ದು, ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಯ್ಯ ಹೆಗಡೆ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಗೌಪ್ಯವಾಗಿಟ್ಟಿದ್ದರು. ಗೋಪಾಲಗೌಡ ಆಸ್ಪತ್ರೆ ಮಾಲೀಕ ಸಂತೃಪ್ತ ಹೆಗ್ಡೆ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಸಂಬಂಧಿ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕರಿಗೆ ಸಿದ್ಧಾರ್ಥ್ ತಂದೆ ಕುರಿತು ಮಾಹಿತಿ ನೀಡದೇ ಗೌಪ್ಯವಾಗಿ ಇಟ್ಟಿದ್ದರು.

    ಈ ಬಗ್ಗೆ ಆಸ್ಪತ್ರೆಯಲ್ಲಿ ಮಾಹಿತಿ ವಿಚಾರಿಸಿದಾಗ ಗಂಗಯ್ಯ ಹೆಗಡೆ ಅವರು ಭಾನುವಾರವೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಸದ್ಯ ಗಂಗಯ್ಯ ಅವರಿಗೆ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಗಂಗಯ್ಯ ಹೆಗಡೆ ಅವರು ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದು ಬಂದಿತ್ತು.

    ಸಿದ್ದಾರ್ಥ್ ಸಾವಿನ ಸುತ್ತ 10 ಅನುಮಾನ:
    ಕಾಫಿ ಡೇ ಮಾಲೀಕ, ಸಾವಿರಾರು ಕೋಟಿ ಒಡೆಯ ವಿ.ಜಿ.ಸಿದ್ದಾರ್ಥ್ ದುರಂತ ಸಾವು ಅಚ್ಚರಿನ ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದಾರ್ಥ ಸಾವು ಆಕಸ್ಮಿಕವೋ, ಆತ್ಮಹತ್ಯೆಯೋ ಅನ್ನುವ ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದು, ತನಿಖೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿಗೂ ಒಂದು ತಂಡ ಬಂದೋಗಿದೆ.

    ಸಿದ್ದಾರ್ಥ್ ಸಾವಿನ ಸುತ್ತ 10 ಅನುಮಾನದ ಹುತ್ತ
    ಅನುಮಾನ 1: ಸಿದ್ದಾರ್ಥ್ ಧರಿಸಿದ್ದರು ಎನ್ನಲಾದ ಟೀಶರ್ಟ್ ನಾಪತ್ತೆ ಯಾಕೆ?
    ಅನುಮಾನ 2: ಪ್ಯಾಂಟ್, ಜೇಬ್‍ನಲ್ಲಿದ್ದ ಮೊಬೈಲ್ ಯಾಕೆ ನಾಪತ್ತೆಯಾಗಿಲ್ಲ?
    ಅನುಮಾನ 3: ಮೃತದೇಹ 35 ಗಂಟೆ ನೀರಲ್ಲೇ ಇದ್ದರೂ ಯಾಕೆ ಊದಿಕೊಂಡಿಲ್ಲ, ಕೊಳೆಯಲಿಲ್ಲ?
    ಅನುಮಾನ 4: ಮೃತದೇಹ 35 ಗಂಟೆ ನೀರಲ್ಲೇ ಇದ್ದು, ದಡ ಸೇರಿದಾಗ ಮುಖದಲ್ಲಿ ರಕ್ತದ ಕಲೆಗಳು ಹೇಗೆ ಉಳಿದುಕೊಂಡವು?
    ಅನುಮಾನ 5: ನೀರಲ್ಲೇ ಇದ್ದ ಮೃತದೇಹದಲ್ಲಿದ್ದ ರಕ್ತದ ಕಲೆಗಳು ಹಸಿ ಹಸಿಯಾಗಿಯೇ ಇದ್ದದ್ದು ಹೇಗೆ?
    ಅನುಮಾನ 6: ಟೀಶರ್ಟ್ ನಾಪತ್ತೆಯಾಗಿದ್ರೆ ಕಾಲಿನಲ್ಲಿದ್ದ ಶೂ ಯಾಕೆ ಕಾಲಲ್ಲೇ ಉಳಿದಿತ್ತು.
    ಅನುಮಾನ 7: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದರೆ ಬೆಂಗಳೂರಿನಿಂದ ಮಂಗಳೂರಿನ ನೇತ್ರಾವತಿ ನದಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು?
    ಅನುಮಾನ 8: ವಾಹನಗಳು, ಜನ ಓಡಾಡುವ ಸೇತುವೆಯಲ್ಲಿ ಸಂಜೆ 7 ಗಂಟೆಗೆ ಅದೇಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು?
    ಅನುಮಾನ 9: ದೊಡ್ಡ ಮಟ್ಟದ ಶೋಧ ಕಾರ್ಯ ನಡೆದಾಗಲೂ ಸಿಗದ ಮೃತದೇಹ, ಮೀನುಗಾರರಿಗೇ ಹೇಗೆ ಸಿಕ್ತು?
    ಅನುಮಾನ 10: ಯಾವಾಗ್ಲೂ ಜೊತೆಗಿರುತ್ತಿದ್ದ ಗನ್‍ಮ್ಯಾನ್ ಆ ದಿನ ಮಾತ್ರ ಯಾಕೆ ಇರಲಿಲ್ಲ?

    https://www.youtube.com/watch?v=7JQjQIj9a1Y

  • ಕಾಫಿ ತೋಟದಲ್ಲಿ ‘ಕಾಫಿ ಕಿಂಗ್’ ಲೀನ

    ಕಾಫಿ ತೋಟದಲ್ಲಿ ‘ಕಾಫಿ ಕಿಂಗ್’ ಲೀನ

    ಚಿಕ್ಕಮಗಳೂರು: ಉದ್ಯಮಿ ವಿಜಿ ಸಿದ್ಧಾರ್ಥ್ ಹೆಗ್ಡೆ ಅವರ ಅಂತ್ಯಸಂಸ್ಕಾರವು ಸ್ವಗ್ರಾಮ ಬೇಲೂರಿನ ಚಿಕ್ಕನಹಳ್ಳಿಯ ಚೇತನಹಳ್ಳಿ ಎಸ್ಟೇಟ್ ನಿವಾಸದ ಬಳಿ ಸಾವಿರಾರು ಜನರ ಕಣ್ಣೀರಧಾರೆ ನಡುವೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು.

    ವಿಜಿ ಸಿದ್ಧಾರ್ಥ ಅವರ ಚಿತೆಗೆ ಹಿರಿಯ ಪುತ್ರ ಅಮರ್ತ್ಯ ಅಂತಿಮ ವಿಧಿವಿಧಾನ ನಡೆಸಿ ಪೂಜೆ ನಡೆಸಿದರು. ಬಳಿಕ ಪುತ್ರರಾದ ಅಮರ್ತ್ಯ ಮತ್ತು ಕಿರಿಯ ಪುತ್ರ ಇಶಾನ್ ಅಗ್ನಿ ಸ್ಪರ್ಶ ನೇರವೇರಿಸಿದರು. ಹಲಸು, ಶ್ರೀಗಂಧ, ಮಾವು, ಆಲದ ಮರದಿಂದ ಸಿದ್ಧಪಡಿಸಿರುವ ಚಿತೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

    ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ದಾರ್ಥ್ ಮೂರು ದಿನಗಳ ಹಿಂದೆ ಇಳಿ ಸಂಜೆ ನೇತ್ರಾವತಿ ಸೇತುವೆ ಮೇಲಿನಿಂದ ಕಣ್ಮರೆಯಾಗಿದ್ದರು. ಅವರಿಗಾಗಿ ನಿರಂತರವಾಗಿ ಮೂರು ದಿನ ಹುಡುಕಾಟ ನಡೆಸಲಾಗಿತ್ತು. ಸಿದ್ಧಾರ್ಥ್ ಅವರು ಹೊಯಿಗೆ ಬಜಾರಿನ ಅಳಿವೆ ಬಾಗಿಲಿನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಶವದ ರೂಪದಲ್ಲಿ ಪತ್ತೆಯಾದರು. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಕಣ್ಣಿಗೆ ಸಿದ್ದಾರ್ಥ್ ಮೃತದೇಹ ಕಂಡಿತ್ತು. ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರು, ಆಪ್ತರು, ಕಾಫಿಡೇ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.

    ಮಧ್ಯಾಹ್ನ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್‍ನಲ್ಲಿ ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ಅವರಣಕ್ಕೆ ತರಲಾಯಿತು. ಅಳಿಯ ಪಾರ್ಥಿವ ಶರೀರ ನೋಡಿದ ಹಿರಿಯ ಜೀವ ಎಸ್.ಎಂ.ಕೃಷ್ಣ ಮನಸ್ಸು ಭಾರವಾಗಿತ್ತು. ಕಪ್ಪು ಕನ್ನಡಕ ಅವರ ದುಃಖವನ್ನು ಮರೆ ಮಾಚಿತ್ತು. ಎಸ್‍ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಸಿದ್ದಾರ್ಥ್ ಧರ್ಮಪತ್ನಿ ಮಾಳವಿಕಾ, ತಾಯಿ ವಸಂತಿ ಕಣ್ಣಾಲಿಗಳು ತುಂಬಿಬಂದಿದ್ದವು. ಎಲ್ಲರ ದುಃಖದ ಕಟ್ಟೆ ಒಡೆದಿತ್ತು. ಮಕ್ಕಳಾದ ಅಮಥ್ಯ ಮತ್ತು ಇಶಾನ್‍ರ ಕಣ್ಣೀರ ಕೋಡಿ ನಿಲ್ಲಲೇ ಇಲ್ಲ. ಆದರೆ ಮೈಸೂರಿನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪ ಗಂಗಯ್ಯ ಹೆಗ್ಡೆ ಅವರಿಗೆ ಪುತ್ರನ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿಲ್ಲ.

    ಎಬಿಸಿ ಕಾಫಿ ಕ್ಯೂರಿಂಗ್ ಅವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ನೂರಾರು ರಾಜಕಾರಣಿಗಳು, ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು, ಕಾರ್ಮಿಕರು ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ಧಾರ್ಥ್ ಅವರನ್ನು ನೆನೆದು ಕಣ್ಣೀರಿಟ್ಟರು.

    ಕಾಫಿ ನಾಡು ಚಿಕ್ಕಮಗಳೂರಿಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರಿಗೂ ಅವಿನಾಭಾವ ಸಂಬಂಧ. ಚಿಕ್ಕಮಗಳೂರಿನ ಬಹುತೇಕರು ಒಂದಲ್ಲ ಒಂದು ರೀತಿ, ಒಂದಲ್ಲ ಒಂದು ಕ್ಷಣದಲ್ಲಿ ಸಿದ್ಧಾರ್ಥ್ ಅವರಿಂದ ನೆರವು ಪಡೆದವರೇ. ಹೀಗಾಗಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಿದ್ಧಾರ್ಥ್ ಪಾರ್ಥಿವ ಶರೀರವನ್ನು ತರುವ ಮಾರ್ಗದುದ್ದಕ್ಕೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಂತಾಪ ಸೂಚಿಸಿದರು. ಮಲೆನಾಡ ಹೆಬ್ಬಾಗಿಲು ಕೊಟ್ಟಿಗೆಹಾರ, ಬಣಕಲ್‍ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿತ್ತು. ಪಾರ್ಥಿವ ಶರೀರ ಬರುವಿಕೆಗಾಗಿ ಮಾರ್ಗದುದ್ದಕ್ಕೂ ಕಾದು ನಿಂತ ಸಾವಿರಾರು ಜನ, ವಾಹನ ನಿಲ್ಲಿಸಿ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು, ಹಾಸನ, ಮಡಿಕೇರಿ ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಾಫಿ ಕೆಲಸ ಸಂಪೂರ್ಣ ಸ್ತಬ್ಧವಾಗಿತ್ತು.

    ಸಿದ್ಧಾರ್ಥ್ ಅಕಾಲಿಕ ಅಗಲಿಕೆಗೆ ರಾಜಕೀಯ ಗಣ್ಯರು, ಸ್ವಾಮೀಜಿಗಳು, ಆಪ್ತರ ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ. ಸಿದ್ದಾರ್ಥ್ ಬದುಕಿನ ವಿಚಾರದಲ್ಲಿ ದುಡುಕಿದ್ದಾರೆ. ಭಗವಂತ ಎಸ್‍ಎಂ ಕೃಷ್ಣ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದಾರ್ಥ್ ನಿಧನವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಇದು ದೇಶಕ್ಕೆ ದೊಡ್ಡ ನಷ್ಟ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ ಆರಿ ಹೋಗಿದೆ ಅಂತ ಸಂತಾಪ ಸೂಚಿಸಿದ್ದಾರೆ. ಅವರ ಈ ದಾರುಣ ಸಾವಿಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

    ಡಿಕೆ ಶಿವಕುಮಾರ್ ಮಾತನಾಡಿ, ಸಿದ್ಧಾರ್ಥ್ ನಮ್ಮ ರಾಜ್ಯದ ಆಸ್ತಿ. ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ್ದರು. ಆದಾಯ ತೆರಿಗೆ ಇಲಾಖೆ ಏನ್ ಬೇಕಾದರೂ ಮಾತಾಡಿಕೊಳ್ಳಲಿ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.

    ಖುದ್ದು ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮಾಜಿ ಸಚಿವ ಯು.ಟಿ ಖಾದರ್, ಸಂತಾಪ ಸೂಚಿಸಿದರು. ಶವ ಪತ್ತೆಯಾದ ರೀತಿಯನ್ನು ವಿವರಿಸಿದರು. ನೀರಿನ ಸೆಳೆತ, ವೇಗಕ್ಕೆ ಸಿದ್ಧಾರ್ಥ್ ಧರಿಸಿದ್ದ ಟೀ ಶರ್ಟ್ ಬಿಚ್ಚಿ ಹೋಗಿದೆ. ಸಿದ್ಧಾರ್ಥ್ ಪ್ಯಾಂಟಿನಲ್ಲಿ ಮೊಬೈಲ್, ಕರ್ಚಿಫ್ ಸಿಕ್ಕಿದೆ. ಕೈಯಲ್ಲಿ ಉಂಗುರ, ಡಿಜಿಟಲ್ ವ್ಹಾಚ್ ಇದೆ ಎಂದು ತಿಳಿಸಿದರು. ಶೃಂಗೇರಿ ಶಾಸಕ ರಾಜೇಗೌಡರರು ಆಪ್ತ ಮಿತ್ರ ಸಿದ್ಧಾರ್ಥ್ ಅವರನ್ನು ನೆನೆದು ಕಂಬನಿ ಮಿಡಿದರು.

    https://www.youtube.com/watch?v=zudpwA7rBm4

  • ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿದ್ದನ್ನು ನಂಬಕ್ಕಾಗ್ತಿಲ್ಲ- ಸಿ.ಟಿ ರವಿ

    ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿದ್ದನ್ನು ನಂಬಕ್ಕಾಗ್ತಿಲ್ಲ- ಸಿ.ಟಿ ರವಿ

    – ಕಾಫಿ ಡೇ ನಿರ್ದೇಶಕರಲ್ಲಿ ವಿನಂತಿ

    ಚಿಕ್ಕಮಗಳೂರು: ಸೋಮವಾರ ಸಂಜೆಯಿಂದ ಕಾಣೆಯಾಗಿದ್ದ ಕಾಫಿ ಸಾಮ್ರಾಟ ವಿ.ಜಿ ಸಿದ್ಧಾರ್ಥ್ ಅವರ ಮೃತದೇಹ ಇಂದು ಮಂಗಳೂರಿನ ಹೊಯಿಗೆ ಬಜಾರಿನಲ್ಲಿ ಪತ್ತೆಯಾಗಿದೆ. ಈ ಕುರಿತು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಸಂತಾಪ ಸೂಚಿಸಿದ್ದಾರೆ.

    ವಿಡಿಯೋ ಮೂಲಕ ಮಾತನಾಡಿದ ಅವರು ಸಿದ್ಧಾರ್ಥಣ್ಣ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ ಹಾಗೂ ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.

    ಸಿಟಿ ರವಿ ಹೇಳಿದ್ದೇನು?:
    ಸಿದ್ಧಾರ್ಥಣ್ಣ ತನ್ನ ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ, ಮಾಡಿಲ್ಲ. ಅವರಿಂದ ಇಂದು ಸಾವಿರಾರು ಜನ ಬದುಕು ಕಂಡುಕೊಂಡಿದ್ದಾರೆ. ಎಲ್ಲೋ ಬದುಕಿ ಬರಬಹುದೆಂಬ ವಿಶ್ವಾಸ ಇಂದು ಹುಸಿಯಾಗಿದೆ. ಸಿದ್ಧಾರ್ಥಣ್ಣ ಶವವಾಗಿ ಹೊರಗೆ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಜನ ಜನಸಾಮಾನ್ಯರಿಗೆ ಮಾತ್ರವಲ್ಲ, ನನ್ನಂತವರಿಗೂ ಬೆನ್ನೆಲುಬಾಗಿ ನಿಂತು ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿ ಬೆನ್ನು ತಟ್ಟಿದ್ದಾರೆ. ಅಲ್ಲದೆ ಆಗಾಗ ಪ್ರೊಫೈಲ್ ಚೆನ್ನಾಗಿ ಇಟ್ಟುಕೊಳ್ಳಬೇಕು ನಿಮಗೆಲ್ಲ ಭವಿಷ್ಯವಿದೆ. ಯಾವ ಕಾರಣಕ್ಕೂ ಹೆಸರು ಕೆಡಿಸಿಕೊಳ್ಳಬಾರದು ಎಂದು ಕರೆದು ಮಾತನಾಡುತ್ತಿದ್ದರು. ಇಂತಹ ಅಣ್ಣ ಇನ್ನಿಲ್ಲ ಎಂದು ನಂಬುವಂತಹ ಸ್ಥಿತಿಯಲ್ಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಜಿಗುಪ್ಸೆ ತೋರಿಸುತ್ತಿದ್ದಂತಹ, ಆತ್ಮವಿಶ್ವಾಸದ ಪ್ರತೀಕವಾಗಿದ್ದಂತಹ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದೇ ನಂಬಕ್ಕಾಗದಿರುವಂತಹ ಸಂಗತಿಯಾಗಿದೆ ಎಂದಿದ್ದಾರೆ.

    ನಾವು ಮಕ್ಕಳಿಗೂ ಸಿದ್ಧಾರ್ಥಣ್ಣನೇ ರೋಲ್ ಮಾಡೆಲ್, ಅವರಂತೆ ನೀವೂ ಆಗಿ ಎಂದು ಹೇಳುತ್ತಿದ್ದೆವು. ಸಾವಿರಾರು ಜನರಿಗೆ ಬದುಕು ಕೊಟ್ಟು ತನ್ನ ಬದುಕಿನ ಕಥೆಯನ್ನು ತಾನೇ ಮುಗಿಸಿಕೊಂಡ ಸಿದ್ಧಾರ್ಥಣ್ಣ ಇನ್ನಿಲ್ಲವಾಗಿದ್ದಾರೆ. ಅವರ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ, ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಸಿದ್ಧಾರ್ಥಣ್ಣ ಆತ್ಮ ವಿಶ್ವಾಸದ ಪ್ರತೀಕವಾಗಿ ಮತ್ತೆ ಹುಟ್ಟಿ ಬರಬೇಕು. ಅವರು ಬೆಳೆಸಿದ ಕಾಫಿ ಡೇ ಕೊನೆಯಾಗಬಾರದು. ಅದನ್ನು ಮುನ್ನಡೆಸುವ ಕೆಲಸವನ್ನು ನಿರ್ದೇಶಕರು ಮಾಡಬೇಕು ಎಂದು ವಿನಂತಿಸಿಕೊಂಡರು.

    https://www.youtube.com/watch?v=6uimTfq4xXo

  • ಕಾಫಿ ಬ್ರಾಂಡ್ ಅಂಬಾಸಿಡರ್ ಇನ್ನಿಲ್ಲ- ಚೇತನಹಳ್ಳಿಯಲ್ಲಿ ನೀರವ ಮೌನ

    ಕಾಫಿ ಬ್ರಾಂಡ್ ಅಂಬಾಸಿಡರ್ ಇನ್ನಿಲ್ಲ- ಚೇತನಹಳ್ಳಿಯಲ್ಲಿ ನೀರವ ಮೌನ

    – 3 ಜಿಲ್ಲೆಯಲ್ಲಿ ಕಾಫಿ ಕೆಲಸ ರದ್ದು

    ಚಿಕ್ಕಮಗಳೂರು: ಕಾಫಿ ಬ್ರಾಂಡ್ ಅಂಬಾಸಿಡರ್, ಕಾಫಿ ಸಾಮ್ರಾಟ ವಿ.ಜಿ ಸಿದ್ಧಾರ್ಥ್ ಅವರ ಮೃತದೇಹ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿರುವ ಚೇತನಹಳ್ಳಿ ಎಸ್ಟೇಟ್ ನಲ್ಲಿ ನೀರವ ಮೌನ ಆವರಿಸಿದೆ.

    ಸಿದ್ಧಾರ್ಥ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಚೇತನಹಳ್ಳಿ ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ತಮ್ಮೂರ ಸಿದ್ದಾರ್ಥಣ್ಣರಿಗೆ ಸಂತಾಪ ಸೂಚಿಸಿದ್ದಾರೆ. ಸೋಮವಾರ ಕಾಣೆಯಾಗಿದ್ದ ಸಿದ್ಧಾರ್ಥ್ ಇಂದು ನೇತ್ರಾವತಿ ನದಿ ತಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕರರು ಹಾಗೂ ಸಿದ್ಧಾರ್ಥ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಚೇತನಹಳ್ಳಿಯ ಸಿದ್ದಾರ್ಥ್ ಮನೆಯಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮೊನ್ನೆ ರಾತ್ರಿಯಿಂದ ಸಿದ್ದಾರ್ಥ್ ಸುರಕ್ಷಿತವಾಗಿ ಬರಲಿ ಎಂದು ಕಾಯುತ್ತಿದ್ದರು. ಆದರೆ ಇದೀಗ ಅವರು ಇನ್ನಿಲ್ಲ ಎಂಬ ವಿಚಾರವನ್ನು ಕುಟುಂಬಸ್ಥರಿಗೆ ಹಾಗೂ ನೌಕರರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಸಿದ್ದಾರ್ಥ್ ತಾಯಿ ವಸಂತಿ ಹೆಗ್ಡೆ ಅವರು ಚೇತನಹಳ್ಳಿಯ ಮನೆಯಲ್ಲಿದ್ದು, ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಇತ್ತ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಹಾಸನ, ಮಡಿಕೇರಿ ಈ ಮೂರು ಜಿಲ್ಲೆಯಲ್ಲೂ ಕಾಫಿ ಕೆಲಸವನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಎಬಿಸಿ ಕಾಫಿ ಕ್ಯೂರಿಂಗ್ ಹಾಗೂ ಚೇತನಹಳ್ಳಿ ಎಸ್ಟೇಟ್ ಎರಡೂ ಕಡೆ ಸಿದ್ಧಾರ್ಥ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

    https://www.youtube.com/watch?v=rlj9LGGpYN4

  • ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅಂತ್ಯಕ್ರಿಯೆ

    ಮಂಗಳೂರು/ಚಿಕ್ಕಮಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲಾಗುತ್ತಿದೆ.

    11 ಗಂಟೆಗೆ ಸುಮಾರಿಗೆ ಮೃತದೇಹ ಚಿಕ್ಕಮಗಳೂರಿಗೆ ರವಾನೆಯಾಗುತ್ತಿದ್ದು, ಎರಡು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಕಾಫಿ ಡೇ ಸಿಬ್ಬಂದಿ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬೇಲೂರು ಚೇತನಹಳ್ಳಿಯ ಸಿದ್ಧಾರ್ಥ್ ಕಾಫಿ ಎಸ್ಟೇಟ್ ಹಾಗೂ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರು ಹಾಗೂ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರುವ ಸಾಧ್ಯೆತೆಗಳಿವೆ.

    ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    https://www.youtube.com/watch?v=i3MTQLbm1KE

  • ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಅನ್ನ ಕೊಟ್ಟ ದೇವರಿಗೆ ಏನೂ ಆಗಲ್ಲ: ನೌಕರರ ಕಣ್ಣೀರು

    ಚಿಕ್ಕಮಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ನೌಕರರು ಕಣ್ಣೀರು ಹಾಕುತ್ತಿದ್ದಾರೆ.

    ಚಿಕ್ಕಮಗಳೂರಿನಲ್ಲಿರುವ ಕಾಫಿ ಡೇಗೆ ಸೇರಿದ ಕಾಫಿ ಕ್ಯೂರಿಂಗ್ ಘಟಕದ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಕೆಲಸ ಕೊಟ್ಟ ಧಣಿಗೆ ಏನೂ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ ಕಣ್ಣೀರು ಹಾಕುತ್ತಿದ್ದಾರೆ.

    ನಮಗೆಲ್ಲಾ ಅನ್ನ ಕೊಟ್ಟಂತಹ ಧಣಿಗೆ ಯಾವುದೇ ರೀತಿಯ ತೊಂದರೆ ಆಗದೇ ದೇವರು ಅವರನ್ನು ವಾಪಸ್ ಕಳುಹಿಸಲಿ. ನಾವು ಕಾಫಿ ಡೇ ಎಲ್ಲ ಸಿಬ್ಬಂದಿ ಸಂಬಳ ಬಿಟ್ಟು ಅವರಿಗೆ ತೊಂದರೆಯಾಗಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ನನಗೆ ಹಾಗೂ ನನ್ನ ಪತ್ನಿಗೆ ಅವರು ಅನ್ನ ಕೊಟ್ಟ ದೇವರು. ಅವರು ಕ್ಷೇಮವಾಗಿ ಬರಲಿ ಎಂದು ಸಿಬ್ಬಂದಿಯೊಬ್ಬರು ಸಿದ್ಧಾರ್ಥ್ ಅವರನ್ನು ನೆನೆಸಿಕೊಂಡು ಭಾವುಕರಾದರು.

    ಸಿದ್ಧಾರ್ಥ್ ಅವರು ನನಗೆ 10 ವರ್ಷದಿಂದ ಅನ್ನ ಕೊಡುತ್ತಿದ್ದಾರೆ. ಅವರಿಗೆ ಏನೂ ಆಗಲ್ಲ. ಕಾರ್ಮಿಕರಿಗೆ ಯಾವುದೇ ತೊಂದರೆ ಆಗಲ್ಲ. ಸಿದ್ಧಾರ್ಥ್ ಅವರು 50 ಸಾವಿರ ಜನರಿಗೆ ಅನ್ನ ನೀಡಿದ್ದು, ಎಲ್ಲವೂ ಒಳ್ಳೆಯದು ಆಗುತ್ತದೆ ಎಂದು ನೌಕರ ಕಣ್ಣೀರು ಹಾಕಿದ್ದಾರೆ.

    ಇತ್ತ ಸಿದ್ಧಾರ್ಥ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಕ್ಕೆ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ. ಸಿದ್ಧಾರ್ಥ್ ಅವರು ಎಬಿಸಿ ಸೇರಿದಂತೆ ಹಲವು ಕಂಪನಿಯ ಮಾಲೀಕರಾಗಿದ್ದು, ಆ ಕಂಪನಿಯಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದ ಕಾರಣ ಕಾರ್ಮಿಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.

    https://www.youtube.com/watch?v=9H9GW25r8zA

  • 5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    5 ಲಕ್ಷ ರೂ. ಹಿಡಿದು ಮುಂಬೈ ಹೋಗಿ, ದೇಶವೇ ನೋಡುವಂತೆ ಬೆಳೆದ್ರು ಸಿದ್ಧಾರ್ಥ್

    – ಕಂಪನಿ ಸಿಬ್ಬಂದಿ ಕಣ್ಣೀರು

    ಚಿಕ್ಕಮಗಳೂರು: ಖ್ಯಾತ ಉದ್ಯಮಿ ಸಿದ್ಧಾರ್ಥ್ ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

    ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ ಬಳಿಕ ನಾನು ಮುಂಬೈಗೆ ಹೋಗಬೇಕು, 5 ಲಕ್ಷ ರೂ. ಕೊಡಿ ಎಂದು ಪಟ್ಟು ಹಿಡಿದಿದ್ದರು. ಮಗನಿಗೆ ಹಣ ನೀಡಲು ಸಿದ್ಧಾರ್ಥ್ ಅವರ ತಂದೆ ಸ್ವಲ್ಪ ಜಮೀನು, ಜಾಗ ಮಾರಾಟ ಮಾಡಿದ್ದರು ಎಂದು ರುದ್ರೇಶ್ ಕಡೂರು ತಿಳಿಸಿದ್ದಾರೆ.

    ಅಂದು 5 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದ ಸಿದ್ಧಾರ್ಥ್ ಅವರು ಕೆಲವೇ ವರ್ಷಗಳಲ್ಲಿ ಪ್ರಪಂಚವೇ ಅವರತ್ತ ನೋಡುವಂತೆ ಬೆಳೆದರು. ಅವರನ್ನು ನಂಬಿ ಇಂದು ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ದನಿ ನಮ್ಮನ್ನ ಬಿಟ್ಟು ಎಲ್ಲಿಗೆ ಹೋದರು ಎನ್ನುವಷ್ಟು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂದಾಜು 13 ಸಾವಿರ ಎಕರೆ ಕಾಫಿ ತೋಟ ಹೊಂದಿದ್ದಾರೆ. ಅವರ ವಿವಿಧ ಕಂಪನಿಗಳಲ್ಲಿ ಸುಮಾರು ಒಂದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಟಿವಿ ಆನ್ ಮಾಡುತ್ತಿದ್ದಂತೆ ಸಿದ್ಧಾರ್ಥ್ ಅವರು ನಾಪತ್ತೆ ಸುದ್ದಿ ಕೇಳಿ ದುಃಖವಾಯಿತು ಎಂದು ಭಾರವಾದ ಮನಸ್ಸಿನಿಂದ ಹೇಳಿದರು.

    ಸಿದ್ಧಾರ್ಥ್ ಅವರು ಚಿಕ್ಕಮಗಳೂರು, ಕರ್ನಾಟಕದ ಆಸ್ತಿ. ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಅವರು ವಾಪಸ್ ಬರಲಿ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದೇವೆ ಎಂದು ತಿಳಿಸಿದರು.

  • ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ದಾರ್ಥ್ ನಾಪತ್ತೆಯಾಗಿ ಸುಮಾರು 15-16 ಗಂಟೆಯಾದ್ರೂ ಇನ್ನೂ ಯಾವುದೇ ಸುಳಿಯೂ ಪತ್ತೆಯಾಗಿಲ್ಲ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಸತತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು, ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು. ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಜೊತೆಗೆ ಐಷಾರಾಮಿ ಸೆರಾಯ್ ಹೊಟೇಲ್ ಮಾಲೀಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಮಾಲೀಕರಾಗಿದ್ದಾರೆ.

    ಎಬಿಸಿ ಕಾಫಿ ಕ್ಯೂರಿಂಗ್ ಮಾಲೀಕರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ನೋಡಲು ತುಂಬಾ ಸರಳವಾಗಿರುತ್ತಿದ್ದ ಸಿದ್ದಾರ್ಥ್ ಅವರ ಸರಳ ಜೀವನ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಕೋಟಿಗಳ ಒಡೆಯರಾಗಿದ್ದರು. ಸಿದ್ಧಾರ್ಥ್ ಅವರು ತುಂಬಾ ಸರಳವಾಗಿರುತ್ತಿದ್ದರು. ಹಣವಿದೆ ಎಂದು ದರ್ಪ ತೋರುತ್ತಿರಲಿಲ್ಲ.

    ತಮ್ಮ ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ.

  • ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಫಿನಾಡಿನ ಹೊನ್ನಮ್ಮನಹಳ್ಳ ಫಾಲ್ಸ್

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಫಿನಾಡಿನ ಹೊನ್ನಮ್ಮನಹಳ್ಳ ಫಾಲ್ಸ್

    ಚಿಕ್ಕಮಗಳೂರು: ಕಾಫಿನಾಡಿನ ಅರಣ್ಯದೊಳಗೆ ವರ್ಷಪೂರ್ತಿ ಮೈದುಂಬಿ ಹರಿಯುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಫೆವರೆಟ್ ತಾಣವಾಗಿದ್ದು, ದಿನೇ ದಿನೇ ಈ ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

    ಚಿಕ್ಕಮಗಳೂರಿನಲ್ಲಿರುವ ಹೊನ್ನಮ್ಮನಹಳ್ಳ ಫಾಲ್ಸ್ ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿಗೆ ಆಗಮಿಸೋ ಪ್ರವಾಸಿಗರು ಇಲ್ಲಿಗೂ ತಪ್ಪದೇ ಭೇಟಿ ನೀಡುತ್ತಾರೆ. ಶೋಲಾ ಅರಣ್ಯದೊಳಗೆ ವರ್ಷದ 365 ದಿನವೂ ಮೈದುಂಬಿ ಹರಿಯುವ ಜಲಪಾತದಲ್ಲಿ ಪ್ರವಾಸಿಗರು ಆಟವಾಡಿ, ಫೋಟೋ ಶೂಟ್ ಮಾಡಿಸಿಕೊಂಡು ಮುಂದೆ ಖುಷಿಯಿಂದ ಮುಂದೆ ಸಾಗುತ್ತಾರೆ.

    ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿ ಹೊನ್ನಮ್ಮನಹಳ್ಳ ಜಲಪಾತವಿದೆ. ಪ್ರವಾಸಿಗರು ಚಿಕ್ಕಮಗಳೂರಿನಿಂದ ಕೈಮರಕ್ಕೆ ಹೋಗಿ ಅಲ್ಲಿಂದ ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಹೊನ್ನಮ್ಮನಹಳ್ಳ ಜಲಪಾತ ಸಿಗುತ್ತದೆ. ರಸ್ತೆ ಪಕ್ಕದಲ್ಲೇ ಈ ಜಲಪಾತ ಸಿಗುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

    ಪಶ್ಚಿಮ ಘಟ್ಟಗಳ ಸಾವಿರಾರು ಗಿಡಮೂಲಿಕೆಗಳ ನಡುವೆ ಹರಿದು ಬರುವ ಈ ನೀರಿನಲ್ಲಿ ಆರೋಗ್ಯಕಾರಿ ಶಕ್ತಿ ಇದೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗಾಗಿ ಪ್ರವಾಸಿಗರು ಈ ನೀರಲ್ಲಿ ಸ್ನಾನ ಮಾಡಿ, ನೀರನ್ನು ಬಾಟಲಿಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ.

    ಹೊನ್ನಮ್ಮನಹಳ್ಳ ಫಾಲ್ಸ್ ಕೇವಲ ಕಣ್ಮನ ಸೆಳೆಯುವ ಸೌಂದರ್ಯವನ್ನು ಮಾತ್ರ ಹೊಂದಿರದೆ, ಜಲಪಾತದ ನೀರಿನಲ್ಲಿ ಪ್ರಾಕೃತಿಕ ಗಿಡಮೂಲಿಕೆಗಳ ಶಕ್ತಿ ಕೂಡ ತುಂಬಿವುರುವುದು ಪ್ರವಾಸಿಗರು ಇತ್ತ ಖುಷಿಯಿಂದ ಬರಲು ಪ್ರಮುಖ ಕಾರಣವಾಗಿದೆ. ಅದರಲ್ಲು ಮಳೆಗಾಲದಲ್ಲಿ ಜಲಪಾತ ಸೌಂದರ್ಯ ವರ್ಣಿಸಲು ಪದಗಳೆ ಸಾಲದು. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಹೊನ್ನಮ್ಮನಹಳ್ಳ ಜಲಪಾತ ಸೌಂದರ್ಯಕ್ಕೆ ಮರುಳಾಗದವರೆ ಇಲ್ಲ ಎನ್ನಬಹುದು.

  • ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

    ಚಿಕ್ಕಮಗಳೂರು: ಎರಡು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಮರ್ಲೆ, ತಿಮ್ಮನಹಳ್ಳಿ, ನಾಗರಹಳ್ಳಿ, ಗೌಡನಹಳ್ಳಿ, ಇಂದಾವರ ಸೇರಿದಂತೆ ಹಲವು ಗ್ರಾಮದ ಜನರು ಜ್ವರದಿಂದ ಬಳಲುತ್ತಿದ್ದಾರೆ. ಒಂದೇ ತಿಂಗಳಲ್ಲಿ ಜ್ವರಕ್ಕೆ ಮೂವರು ಬಲಿಯಾಗಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಏಳಕ್ಕೂ ಹೆಚ್ಚು ಗ್ರಾಮದ ಜನ ಹಾಸಿಗೆ ಹಿಡಿದಿದ್ದು, ಹಳ್ಳಿಯಿಂದ ಹಳ್ಳಿಗೆ ಹರಡುತ್ತಿರುವ ವೈರಲ್ ಫಿವರ್ ನಿಂದ ಸಾವಿರ ಜನಸಂಖ್ಯೆವುಳ್ಳ ಗ್ರಾಮದಲ್ಲಿ ಆರೋಗ್ಯವಾಗಿ ಇರುವವರನ್ನು ಹುಡುಕುವಂತಾಗಿದೆ. ಜನ ಹಾಸಿಗೆ ಹಿಡಿಯುತ್ತಿರುವುದರಿಂದ ಹಳ್ಳಿ ಮಂದಿ ಆತಂಕಕ್ಕೀಡಾಗಿದ್ದಾರೆ. ಒಂದೇ ತಿಂಗಳಲ್ಲಿ ಏಳು ತಿಂಗಳ ಲೋಚನ್, 16ರ ಹರೆಯದ ಮೇಘನಾ ಹಾಗೂ ತಿಮ್ಮಣ್ಣ(56) ಎಂಬ ಮೂವರು ಜ್ವರಕ್ಕೆ ಬಲಿಯಾಗಿದ್ದಾರೆ.

    ಆಶಾ ಕಾರ್ಯಕರ್ತರು, ನರ್ಸ್‍ಗಳು ಬರುತ್ತಾರೆ ಮಾತ್ರೆ ಕೊಟ್ಟು ಹೋಗುತ್ತಾರೆ. ಆದರೆ ಜನರು ಮಾತ್ರ ಹುಷಾರಾಗುತ್ತಿಲ್ಲ. ಹುಷಾರಾದವರು ವಾರವಷ್ಟೇ ಓಡಾಡಿ ಮತ್ತೆ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯೂ ಸಿಗದ ಕಾರಣ ಹಳ್ಳಿ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಗೌಡನಹಳ್ಳಿ, ಚಿಕ್ಕಮಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ 300 ಮನೆಗಳುಳ್ಳ ಗ್ರಾಮವಾಗಿದೆ. ಆದರೆ ಈ ಗ್ರಾಮದಲ್ಲಿ ಆರೋಗ್ಯವಾಗಿರುವವರನ್ನು ಹುಡುಕಬೇಕಾಗಿದೆ. ಯಾಕೆಂದರೆ 300 ಮನೆಗಳ ಗ್ರಾಮದಲ್ಲಿ ಇರುವವರೆಲ್ಲರೂ ಕಾಯಿಲೆಯಿಂದ ಮಲಗಿದ್ದಾರೆ. ಹೇಳುವುದಕ್ಕೆ ಚಿಕ್ಕ ಹಳ್ಳಿಯಾದರು ಪ್ರತಿದಿನ ಆಸ್ಪತ್ರೆಗೆ ಹೋಗುವವರ ಸಂಖ್ಯೆ 300ಕ್ಕೂ ಅಧಿಕವಾಗಿದೆ. ಅಂಬಳೆ ಹೋಬಳಿಯ ಬಹುತೇಕ ರೋಗಿಗಳು ಅಲ್ಲಿಗೆ ಬರುತ್ತಾರೆ.

    ಆರ್ಥಿಕವಾಗಿ ಬಲವಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಕೂಲಿ ಕಾರ್ಮಿಕರು, ರೈತರು ಜಿಲ್ಲಾಸ್ಪತ್ರೆಗೆ ಬಂದು ನರಳಾಡುತ್ತಾ ಬದುಕುತ್ತಿದ್ದಾರೆ. ಇಂಜೆಕ್ಷನ್ ಪವರ್ ಇರುವ ತನಕ ನಾರ್ಮಲ್ ಆಗಿರೋರು ಬಳಿಕ ಮತ್ತೆ ಕುಂಟುತ್ತಾ ಸಾಗುತ್ತಾರೆ. ವಾರಕ್ಕೆ ಹುಷಾರಾದವರು ಮುಂದಿನ ವಾರ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಇಲ್ಲಿನ ಕಾಯಿಲೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಗ್ರಾಮಸ್ಥ ಮರೀಗೌಡ ಒತ್ತಾಯಿಸಿದ್ದಾರೆ.

    ಕಾಫಿನಾಡಿನ ಗ್ರಾಮೀಣ ಭಾಗದ ಒಂದಲ್ಲ ಒಂದು ಹಳ್ಳಿಯ ಜನ ಪ್ರತಿದಿನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಅಲ್ಲಿನ ಜನ ಹಾಸಿಗೆ ಹಿಡಿಯುತ್ತಿರುವುದು ಚಿಂತೆಗೀಡು ಮಾಡಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೋಂಕು ತಗಲದಿರುವ ಗ್ರಾಮಗಳತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನ ತಪ್ಪಿಸಬೇಕು. ಜೊತೆಗೆ ಡೇಂಘಿ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವ ಗ್ರಾಮಗಳಲ್ಲಿ ಹೆಲ್ತ್ ಕ್ಯಾಂಪ್ ಹಾಕಿ ಜನರ ಆರೋಗ್ಯವನ್ನು ಸುಧಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.