Tag: Chhapaak

  • ಛಪಾಕ್ ಚಿತ್ರದಿಂದ ಎಚ್ಚೆತ್ತ ಮಧ್ಯಪ್ರದೇಶ ಸರ್ಕಾರ – ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ

    ಛಪಾಕ್ ಚಿತ್ರದಿಂದ ಎಚ್ಚೆತ್ತ ಮಧ್ಯಪ್ರದೇಶ ಸರ್ಕಾರ – ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ

    ಭೋಪಾಲ್: ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್ ಸಿನಿಮಾದಿಂದ ಪ್ರೇರಣೆಗೊಂಡು ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ.

    ಛಪಾಕ್ ಚಿತ್ರ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಅವರ ಕಥೆಯಾಗಿದ್ದು, ಆ್ಯಸಿಡ್ ದಾಳಿ ಬಳಿಕ ಹೇಗೆ ಲಕ್ಷ್ಮಿ ಅವರು ಜೀವನದಲ್ಲಿ ಹೋರಾಡಿದರು ಎನ್ನುವ ಬಗ್ಗೆ ಸಿನಿಮಾದಲ್ಲಿ ತಿಳಿಸಲಾಗಿದೆ. ಈ ಚಿತ್ರದಿಂದ ಪ್ರೇರೇಪಿತವಾದ ಮಧ್ಯಪ್ರದೇಶ ಸರ್ಕಾರ ಮೊದಲು ರಾಜ್ಯದೆಲ್ಲೆಡೆ ಛಪಾಕ್ ಚಿತ್ರಕ್ಕೆ ತೆರಿಗೆ ಹಾಕಲ್ಲ ಎಂದು ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಸರ್ಕಾರ ಆಕ್ರಮ ಆ್ಯಸಿಡ್ ಮಾರಾಟದ ವಿರುದ್ಧ ಅಭಿಯಾನ ಆರಂಭಿಸಿದೆ. ಅಕ್ರಮ ಆ್ಯಸಿಡ್ ಮಾರಾಟದಿಂದ ಆ್ಯಸಿಡ್ ದಾಳಿ ಆಗುತ್ತದೆ. ಅಮಾಯಕ ಹೆಣ್ಣುಮಕ್ಕಳ ಜೀವನ ಇದರಿಂದ ಹಾಳಾಗುವುದನ್ನು ತಡೆಯಲು ಮಧ್ಯಪ್ರದೇಶ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಇದನ್ನೂ ಓದಿ: ಕಪ್ಪು ವಸ್ತ್ರಧರಿಸಿ ಜೆಎನ್‍ಯುಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

    ಈ ಬಗ್ಗೆ ಸ್ವತಃ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಗುರುವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಆ್ಯಸಿಡ್ ಮಾರಾಟವನ್ನು ತಡೆಯುವುದು ಅತ್ಯಂತ ಮುಖ್ಯವಾಗಿದೆ. ಇನ್ನೂ ಆ್ಯಸಿಡ್ ದಾಳಿಗಳನ್ನು ಸಹಿಸಿಕೊಳ್ಳಲು ಆಗಲ್ಲ. ರಾಜ್ಯಾದ್ಯಂತ ಈ ವಿರುದ್ಧ ಅಭಿಯಾನ ನಡೆಸಲು ಈಗಾಗಲೇ ಸೂಚಿಸಲಾಗಿದೆ. ಆ್ಯಸಿಡ್ ದಾಳಿ ಅನಾಗರಿಕತೆ, ಕ್ರೌರ್ಯತೆಯ ಸುಳಿವು. ಇದನ್ನು ನಾವು ಮಟ್ಟಹಾಕಬೇಕು ಎಂದಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

    ಕೇವಲ ಸಿನಿಮಾವನ್ನು ತೆರಿಗೆ ರಹಿತ ಮಾಡಿದರೆ ಸಾಲುವುದಿಲ್ಲ. ಇಂತಹ ಅಮಾನವೀಯ ಕೃತ್ಯಗಳನ್ನು ನಾವು ತಡೆಯಬೇಕು. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಆದ್ದರಿಂದಲೇ ಈ ಅಭಿಯಾನ ಆರಂಭಿಸಿದ್ದೇವೆ ಎಂದು ಕಮಲ್‍ನಾಥ್ ಟ್ವೀಟ್ ಮಾಡಿದ್ದಾರೆ.

    ಪದ್ಮಾವತ್ ಬಳಿಕ ದೀಪಿಕಾ ಪಡುಕೋಣೆ ಛಪಾಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ.

    ಓದಬೇಕೆಂಬ ದೊಡ್ಡ ಕನಸು ಕಂಡ ಯುವತಿಯ ಮೇಲೆ ದುಷ್ಕರ್ಮಿಗಳ ಆ್ಯಸಿಡ್ ದಾಳಿ, ಸ್ಪುರದ್ರೂಪಿಯಾಗಿದ್ದ ಯುವತಿ ತನ್ನನ್ನ ಕನ್ನಡಿಯಲ್ಲಿ ನೋಡಿಕೊಂಡು ಭಯಬೀಳುವ ದೃಶ್ಯಗಳು, ಆ್ಯಸಿಡ್ ದಾಳಿ ಬಳಿಕ ಮನೆಯಿಂದ ಹೊರ ಬರಲು ಹಿಂಜರಿತ, ಆಕೆಯ ಬೆನ್ನಲುಬಾಗಿ ನಿಲ್ಲುವ ಹೋರಾಟಗಾರ್ತಿಯರು, ಸ್ನೇಹಿತರ ಬಾಂಧವ್ಯವನ್ನು ಚಿತ್ರತಂಡ ತೋರಿಸಿರೋದು ಕಣ್ಣಿಗೆ ಕಟ್ಟುವಂತಿದೆ. ಧೈರ್ಯಗುಂದದೇ ನ್ಯಾಯಕ್ಕಾಗಿ ಹೋರಾಟ, ಸಮಾಜ ಸಂತ್ರಸ್ತೆಯನ್ನು ಕಾಣುವ ದೃಷ್ಟಿ, ಕಷ್ಟಗಳ ಸಂಕೋಲೆಯಲ್ಲಿ ಬದುಕುತ್ತಿದ್ದ ಜೀವಕ್ಕೆ ಗೆಳೆಯನ ತಂಪಾದ ಆಸರೆ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

    ದೀಪಿಕಾ ಜೆಎನ್‍ಯುಗೆ ಭೇಟಿ ಕೊಟ್ಟ ಹಿನ್ನೆಲೆ ಛಪಾಕ್ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ಚಿತ್ರದಲ್ಲಿರುವ ಸಂದೇಶ, ಸತ್ಯಾಂಶ ಮನಗಂಡವರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಆಫೀಸ್‍ನ್ನಲ್ಲಿ ಈ ಚಿತ್ರ ಹೆಚ್ಚು ಗಳಿಸದಿದ್ದರೂ ಇದರ ಸಂದೇಶ ಮಾತ್ರ ಜನರನ್ನು ತಲುಪಿದೆ.

  • ಛಪಾಕ್ ಶೋನ ಚಿತ್ರಮಂದಿರದ ಎಲ್ಲಾ ಟಿಕೆಟ್ ಬುಕ್ ಮಾಡಿದ ಕಲಬುರಗಿ ಯೂತ್ ಕಾಂಗ್ರೆಸ್

    ಛಪಾಕ್ ಶೋನ ಚಿತ್ರಮಂದಿರದ ಎಲ್ಲಾ ಟಿಕೆಟ್ ಬುಕ್ ಮಾಡಿದ ಕಲಬುರಗಿ ಯೂತ್ ಕಾಂಗ್ರೆಸ್

    ಕಲಬುರಗಿ: ಜೆಎನ್‍ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟನೆ ‘ಛಪಾಕ್’ ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ಆದರೆ ಇದಕ್ಕೆ ಕಲಬುರಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕೌಂಟರ್ ನೀಡಿದ್ದಾರೆ.

    ಈ ಹಿನ್ನೆಲೆ ಶನಿವಾರ ಕಲಬುರಗಿಯ ಮಿರಜ್ ಚಿತ್ರಮಂದಿರದಲ್ಲಿ ಮಧ್ಯಾಹ್ನ 1 ಗಂಟೆಯ ಹಿಂದಿ ಸಿನಿಮಾ ‘ಛಾಪಕ್’ ಶೋನ ಎಲ್ಲಾ ಟಿಕೆಟ್‍ಗಳನ್ನು ಬುಕ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಸಾಧ್ಯವಾದರೆ ಶಾಸಕ ಪ್ರಿಯಾಂಕ್ ಖರ್ಗೆ ಸಹ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ರೀಲ್, ರಿಯಲ್‍ನಲ್ಲಿಯೂ ನೀವು ಬೋಲ್ಡ್: ದೀಪಿಕಾಗೆ ಧನ್ಯವಾದ ಹೇಳಿದ ಪ್ರಕಾಶ್ ರೈ

    ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್ಸಿನ ಈ ಪ್ರಯತ್ನ ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ಕೊಡುತ್ತದೆ. ಅಲ್ಲದೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಪ್ರದರ್ಶನವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ 1 ಗಂಟೆಯ ಶೋ ಮುನ್ನ ಶಾಸಕರು ಉಪಸ್ಥಿತರಿರಲಿದ್ದಾರೆ. ಅಲ್ಲದೇ ಜೆಎನ್‍ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಶುಭಹಾರೈಸಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.

  • ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

    ಆ್ಯಸಿಡ್ ದಾಳಿಗೊಳಗಾದ ಯುವತಿಯ ನೈಜ ಕಥೆಯೇ ಛಪಾಕ್

    – ಯುವತಿಯರಿಗೆ ಧೈರ್ಯ ತುಂಬುತ್ತೆ ಛಪಾಕ್ ಟ್ರೈಲರ್
    – ಹೊಸ ಪಾತ್ರದಲ್ಲಿ ದೀಪಿಕಾ ಪಡುಕೋಣೆ

    ಮುಂಬೈ: ಪದ್ಮಾವತ್ ಬಳಿಕ ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ರಿಲೀಸ್ ಗೊಂಡ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮಹಾಪೂರವೇ ಚಿತ್ರತಂಡಕ್ಕೆ ಹರಿದು ಬರುತ್ತಿದೆ. ಟ್ರೈಲರ್ ನೋಡುಗರ ರೋಮಗಳಲ್ಲಿ ರೋಮಾಂಚನ ತರುವಲ್ಲಿ ಯಶಸ್ವಿಯಾಗಿದ್ದು, ಕೊನೆಗೆ ನಾವು ಸಿನಿಮಾ ನೋಡಲೇಬೇಕೆಂಬ ತುಡಿತವನ್ನು ಉಂಟು ಮಾಡುವಲ್ಲಿ ಛಪಾಕ್ ಯಶಸ್ವಿಯಾಗಿದೆ.

    ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ. ದೀಪಿಕಾ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ ಚಿತ್ರ ಭರವಸೆಯನ್ನು ಮೂಡಿಸಿತ್ತು. ಪ್ರತಿ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ದೀಪಿಕಾ ಮತ್ತೊಮ್ಮೆ ಆ ವಿಷಯದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

    https://twitter.com/deepikapadukone/status/1204312689977253888

    ಓದಬೇಕೆಂಬ ದೊಡ್ಡ ಕನಸು ಕಂಡ ಯುವತಿಯ ಮೇಲೆ ದುಷ್ಕರ್ಮಿಗಳ ಆ್ಯಸಿಡ್ ದಾಳಿ. ಸ್ಪುರದ್ರೂಪಿಯಾಗಿದ್ದ ಯುವತಿ ತನ್ನನ್ನ ಕನ್ನಡಿಯಲ್ಲಿ ನೋಡಿಕೊಂಡು ಭಯಬೀಳುವ ದೃಶ್ಯಗಳು ನೋಡುಗರ ಮನ ಮುಟ್ಟುವಂತಿವೆ. ಆ್ಯಸಿಡ್ ದಾಳಿ ಬಳಿಕ ಮನೆಯಿಂದ ಹೊರ ಬರಲು ಹಿಂಜರಿತ, ಆಕೆಯ ಬೆನ್ನಲುಬಾಗಿ ನಿಲ್ಲುವ ಹೋರಾಟಗಾರ್ತಿಯರು, ಸ್ನೇಹಿತರ ಬಾಂಧವ್ಯವನ್ನು ಚಿತ್ರತಂಡ ತೋರಿಸಿರೋದು ಕಣ್ಣಿಗೆ ಕಟ್ಟುವಂತಿದೆ.

    https://twitter.com/deepikapadukone/status/1204312684747010048

    ಆಸ್ಪತ್ರೆಯಿಂದ ಮನೆಗೆ ಆಗಮಿಸುವ ಮಾಲತಿ ತನ್ನ ಎಲ್ಲ ಕಿವಿಯೊಲೆ, ಮೂಗುತಿ ತೆಗೆದಿಡುವಾಗ ಮೂಗು, ಕಿವಿ ಇಲ್ಲ, ಹೇಗೆ ಈ ಆಭರಣಗಳನ್ನ ಧರಿಸಲಿ ಎಂದು ಹೇಳುವ ಮಾತು ನೋಡಗರಿಗೆ ಸಂತ್ರಸ್ತೆಯ ಕತ್ತಲೆಯ ಬದುಕುನ್ನು ಪರಿಚಯಿಸುತ್ತದೆ. ಧೈರ್ಯಗುಂದದೇ ನ್ಯಾಯಕ್ಕಾಗಿ ಹೋರಾಟ, ಸಮಾಜ ಸಂತ್ರಸ್ತೆಯನ್ನು ಕಾಣುವ ದೃಷ್ಟಿ, ಕಷ್ಟಗಳ ಸಂಕೋಲೆಯಲ್ಲಿ ಬದುಕುತ್ತಿದ್ದ ಜೀವಕ್ಕೆ ಗೆಳೆಯನ ತಂಪಾದ ಆಸರೆ ಎಲ್ಲವೂ ಟ್ರೈಲರ್ ನಲ್ಲಿದೆ.

    ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದವರ ಹೋರಾಟ ನಡೆಸುವ ಮಾಲತಿಗೆ ನ್ಯಾಯ ಸಿಗುತ್ತಾ? ಕತ್ತಲೆಯಲ್ಲಿ ಹೊಂಗಿರಣವಾಗಿ ಬಂದ ಗೆಳೆಯನ ಆಸರೆ ಮಾಲತಿಗೆ ಸಿಗುತ್ತಾ? ಮತ್ತೆ ಮಾಲತಿ ಬದುಕು ಎಲ್ಲರಂತೆ ನಡೆಯುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಜನವರಿ 10ರವರೆಗೆ ನೀವು ಕಾಯಬೇಕು. ಚಿತ್ರ ಜನವರಿ 10 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

    https://twitter.com/deepikapadukone/status/1203926836016795648