Tag: Chetan Mundadi

  • ಸಿನಿಮಾಗಳಲ್ಲಿ ದೈವಕೋಲ ವಿರೋಧ: ರಾಷ್ಟ್ರ ಪ್ರಶಸ್ತಿ ವಿಜೇತ ಚೇತನ್ ಎತ್ತಿದ ಪ್ರಶ್ನೆಗಳು

    ಸಿನಿಮಾಗಳಲ್ಲಿ ದೈವಕೋಲ ವಿರೋಧ: ರಾಷ್ಟ್ರ ಪ್ರಶಸ್ತಿ ವಿಜೇತ ಚೇತನ್ ಎತ್ತಿದ ಪ್ರಶ್ನೆಗಳು

    ರಾಷ್ಟ್ರ ಪ್ರಶಸ್ತಿ ಪಡೆದ ಮದಿಪು (Madipu) ಸಿನಿಮಾದಲ್ಲಿ ದೈವರಾಧನೆ (Daivaradhane) ತೋರಿಸಿ, ಸೈ ಅನಿಸಿಕೊಂಡಿದ್ದ ನಿರ್ದೇಶಕ ಚೇತನ್ ಮುಂಡಾಡಿ (Chetan Mundadi) ದೈವಕೋಲವನ್ನು ಸಿನಿಮಾಗಳಲ್ಲಿ ಬಳಸುತ್ತಿರುವ ಕುರಿತಂತೆ ಎದ್ದಿರುವ ವಿರೋಧಕ್ಕೆ ಪ್ರತಿರೋಧ ತೋರಿದ್ದಾರೆ. ಕಲೆಗಳಲ್ಲಿ ದೈವರಾಧಾನ ತಂದರೆ ಆಗುವ ಸಮಸ್ಯೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.  ಅವರು ಎತ್ತಿದ ಪ್ರಶ್ನೆಗಳ ಸಾರ ಇಲ್ಲಿದೆ.

    ನಾನು ಮೂಲತಃ ತುಳುನಾಡಿನವನೇ ಆಗಿದ್ದರೂ ಹೊಟ್ಟೆಪಾಡಿಗೆ ಬೆಂಗಳೂರಿನಲ್ಲಿ ಬಂದು ನೆಲೆ ನಿಲ್ಲುವಂತಾಗಿದೆ. ಅದರಿಂದ ಈಗ ಎರಡು – ಮೂರು ವಾರದಿಂದ ನಮ್ಮ ತುಳುನಾಡಿನ ಮೂಲ ಸಂಸ್ಕೃತಿಗಳಲ್ಲಿ ಒಂದಾದ ದೈವ ಆರಾಧನೆಯನ್ನು ಕಲೆಯಾಗಿ ( ಭೂತರಾಧನೆ ) ಚಲನಚಿತ್ರ ನಾಟಕದಲ್ಲಿ ಬಳಸಬಾರದು ಎನ್ನುವ  ವಿಡಿಯೋಗಳನ್ನು ನೋಡಿದೆ. ಆಗ ನನ್ನೊಳಗೆ ಒಂದಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಆ ಗೊಂದಲವನ್ನು ದಯವಿಟ್ಟು ಯಾರಾದರೂ, ಈ ವಿಡಿಯೋ ಮಾಡಿದವರಾಗಿರಬಹುದು,  ದೈವರಾಧನೆಯ ಬಗ್ಗೆ ತಿಳಿದವರಾಗಿರಬಹುದು, ಹಿರಿಯರಾಗಿರಬಹುದು. ಯವುದೇ ದೈವದ ಸಂಘಟನೆಯವರಾಗಿರಬಹುದು. ದಯವಿಟ್ಟು ನನ್ನ ಈ ಗೊಂದಲದ  ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಬಹುದೇ ದಯವಿಟ್ಟು. ಇದು ವಾದವಲ್ಲ, ಇಲ್ಲವೇ ನಿಮ್ಮ ಮಾತುಗಳಿಗೆ,  ವಿರೋಧವಲ್ಲ.  ನಾನು ತಿಳಿದುಕೊಳ್ಳಲು, ಕಲಿತುಕೊಳ್ಳಲು, ನನ್ನ ಮಕ್ಕಳಿಗೆ ತಿಳಿಸಲು ನಿಮ್ಮ ಬಳಿ ಕೇಳುತ್ತಿರುವ ಕೆಲವು ಪ್ರಶ್ನೆಗಳು. ದಯವಿಟ್ಟು ಉತ್ತರಿಸಿ. ದೈವ ಕೋಲ ಸಂಸ್ಕೃತಿಯೇ, ಇಲ್ಲ ಜಾನಪದ ಕಲೆಯೇ!  ಇಲ್ಲ ಒಂದು ಪಂಗಡಕ್ಕೆ ಸೇರಿದ ವೃತ್ತಿಯೇ? ಒಂದು ವೇಳೆ ವೃತ್ತಿಯಾಗಿ ಪಂಗಡಕ್ಕೆ, ಸೇರಿದ್ದರೆ ಅದನ್ನು ವಿರೋಧಿಸುವುದು ಸರಿ ಎಂದುಕೊಳ್ಳೋಣ. ಅದರೇ ಸಂಸ್ಕೃತಿಯಾದರೇ ಜಾನಪದದ ಕಲೆಯಾದರೇ ನಾನು ನನ್ನ ಸಂಸ್ಕೃತಿ, ಜಾನಪದ ಕಲೆಯನ್ನು ಹತ್ತೂರಿನ ಜನರಿಗೆ ನಾನು ನಾಟಕ ಚಲನಚಿತ್ರದಲ್ಲಿ ಅದರ ಬಗ್ಗೆ ಮಾಹಿತಿ ಕೊಟ್ಟರೆ ಆಗ ತಪ್ಪೇನಿದೆ.

    ತುಳುನಾಡ ದೈವಾರಾಧನೆ ಅರಿತವ ದೈವದ ಮೂಲಕ್ರಮದ ಬದಲಾವಣೆ ಬಗ್ಗೆ ಮಾತ್ರ ವಿರೋಧಿಸುತ್ತಾನೆ. ನಮ್ಮ ದೈವರಾಧನೆಯ ಕರ್ಮಿಗಳಲ್ಲಿ ಎಲ್ಲವರ್ಗದವರೂ ಇರುತ್ತಾರೆ ಎಂಬುದು ತುಳುನಾಡಿನ ಪ್ರತಿಯೊಬ್ಬನಿಗೂ ಗೊತ್ತಿರುವ ವಿಚಾರ. ಅದು  ಒಂದು ವರ್ಗಕ್ಕೆ ಸೀಮಿತವಾದ ಕಟ್ಟಳೆಯಲ್ಲ. ದೈವಗಳ ನುಡಿ ಎಂದರೆ, ಅದು ತಲೆತಲಾಂತರದಿಂದ ಬಂದ ನುಡಿಕಟ್ಟುಗಳು. ಆ ನುಡಿಕಟ್ಟಲ್ಲಿ ಗಗ್ಗರ ತೆಗೆದುಕೊಳ್ಳುವ ಮುನ್ನ ದೈವ ಹೀಗೆನ್ನುತ್ತದೆ. ‘ನೂಲುಪಾಲ್ – ನೂರ್ದಾಲ್ – ಸಾರಾಳ್ – ಸಾರುಬಿರು ಒಂಜಿ ರಾಜ್ಯಡ ಕೇಂಡೊಂದು ಗಗ್ಗರ ದೆತೋನ್ವೆ’ ಇಲ್ಲಿ ನೂಲುಪಾಲು ಅಂದರೆ ಬ್ರಾಹ್ಮಣರು, ನೂರ್ದಾಲ್ ಅಂದರೆ ಬಂಟರು, ಜೈನರು ಎಂಬ ನಿರ್ದಿಷ್ಟ ಕುಲಕಸುಬಿಗೆ ಒಳಪಡದ ವರ್ಗ, ಸಾರಾಳ್ ಅಂದರೆ ಕುಲಕಸುಬು ಇರುವ ವರ್ಗಗಳು ಅದು ಕುಂಬಾರ, ನೇಕಾರ, ಮಡಿವಾಳ, ಆಚಾರರು, ಚಮ್ಮಾರರು ಹೀಗೆ ನಂತರದಲ್ಲಿ ಬರುವುದು ಸಾರ ಬಿರು ಅಂದರೆ ಬಿರುವರು ಅರ್ಥಾತ್ ಬಿಲ್ಲವರು ಹಾಗೂ ಮಲಯಾಳಿ ಬಿಲ್ಲವರ ವರ್ಗ. ದೈವವೇ ಇವರನ್ನೆಲ್ಲಾ ಒಳಗೊಂಡಂತೆ ಒಂದು ರಾಜ್ಯವೆಂದು ಕರೆದು ಗಗ್ಗರ ಸ್ವೀಕರಿಸಲು ಅನುಮತಿ ಕೇಳುವಾಗ  ಆಧಾರ ರಹಿತ ಪೊಟ್ಟುವಾದಕ್ಕೆ ದೈವದ ನುಡಿಯೇ ಇಲ್ಲಿ ಉತ್ತರ. ಎಲ್ಲವೂ ತುಳುನಾಡಿನ ಪದ್ದತಿಯಲ್ಲವೇ. ದೈವರಾಧನೆ ಒಂದಷ್ಟು ಜಾತಿಗಳ ಕೂಟ ಎಂದು ನನ್ನ ಹಿರಿಯರು ಹೇಳಿದನ್ನು ನಾನು ಕೇಳಿದ್ದೀನಿ. ಈಗಿರುವಾಗ ಇದು ಒಂದು ವರ್ಗದ ಆಚರಣೆ ಎಂದು ಹೇಳಲು ಸಾಧ್ಯ ನಾವು. ಇದು ನನ್ನ ತುಳುನಾಡಿನ ಮಣ್ಣಿನ ಆರಾಧನೆ. ನನ್ನ ಸಂಸ್ಕೃತಿ. ಒಂದು ದೈವ ನೇಮವಾಗಬೇಕಾದರೇ ಆ ಮನೆಯ ಅಂಗಳ ಕೆತ್ತಲು ಆಚಾರಿ ಮಾಡಿದ ಪಿಕ್ಕಸಿ ಹಾರೆ ಬೇಕು, ಅಂಗಳಕ್ಕೆ ಸೆಗಣಿ ಸಾರಿಸಲು  ಊರಿನ ಅಕ್ಕಪಕ್ಕದ ಮನೆಯ ಕೊಟ್ಟಿಗೆಯ ಸೆಗಣಿ ಬೇಕು, ಜೀಟಿಗೆಗೆ, ದೈವದ ಮಂಚಕ್ಕೆ, ನೇಕಾರರು ನೈದ ಬಟ್ಟೆ ಬೇಕು. ಗಾಣಿಗರು ತಂದು ಕೊಡುವ ಎಣ್ಣೆ ಬೇಕು, ದೈವಕ್ಕೆ ಬೇಕಾದ ಮಣ್ಣಿನ ವಸ್ತುಗಳು ಮೂಲ್ಯ ಜನಾಂಗದವರು ಕೊಡಬೇಕು, ಕೃಷನ್ ಮನೆಯ ವಿಳೆದೆಲೆ ಬೇಕು, ಚರ್ಮ ಹೊಲಿಯುವ ಜನಾಂಗದವರು ಬೇಕು, ಮನೆ ಶುದ್ದ ಮಾಡಲು ಬ್ರಾಹ್ಮಣ ಮನೆಯ ದೇವರ ನೀರು ಬೇಕು. ಶೇರಿಗರನ್ನು ಕರೆಸಿ ವಾದ್ಯ ಊದಿಸಬೇಕು, ಚರ್ಮದ ವಸ್ತುಗಳನ್ನು ತಂದು ಕೊಡುವ ಜನಾಂಗಕೂಡಬೇಕು, ಮುರುತೆಯ ಸೇದಿಕೊಡಲು ಬಿಲ್ಲವ ಜನಾಂಗಬೇಕು. ಗರ್ನಲ್ ಬಿಡಲು ಸಾಹೇಬ ಬೇಕು. ಈಗಿರುವಾಗ ದೈವ ಒಂದು ಜನಾಂಗದವರದ್ದು ಹೇಗಾಗುತ್ತೆ ಹೇಳಿ.

    ನಾವು ಚಿಕ್ಕವರಿರುವಾಗ ನನ್ನ ಹಿರಿಯರು ಹೇಳುತ್ತಿದ್ದರು. ಆಗಿನ ಮಕ್ಕಳು ಚಿಕ್ಕವರಿರುವಾಗ ದೈವಕೋಲದ ಮರುದಿವಸ ಅದ ಬಿಸಾಕಿದ ಸಿರಿ ಹಿಡಿದು ನಲಿಯುತ್ತಿದ್ದರು ಅಂತ. ಈಗಿನ ದೈವದ ಸೇವೆ ಮಾಡುವವರು ದಯವಿಟ್ಟು ಒಂದು ಸಾರಿ ತಮ್ಮ ಎದೆ ಮುಟ್ಟಿ ಹೇಳಲಿ. ಅವರು ಚಿಕ್ಕವರಿರುವಾಗ ಈ ರೀತಿ ಮಾಡಿಲ್ಲ ಅಂತ. ಇಂತಹ ಜಾಗದಲ್ಲೇ ಕಲೆ ಹುಟ್ಟುವುದಲ್ವಾ. ಆಗ ಅವನು ಒಬ್ಬ ಕಲಾವಿದನಲ್ಲವೇ. ದೈವದ ಬಣ್ಣ ಹಾಕಿ ಬಿಸಾಕಿದ ಬಾಳೆ ಎಲೆಯಲ್ಲಿ  ಇದ್ದ ಅರದಾಳವನ್ನು ಅವರ ಮಕ್ಕಳು ಕದ್ದು ಮುಚ್ಚಿ ಹಾಕಿರುವ ಎಷ್ಟು ಉದಾಹರಣೆ ಇಲ್ಲ ಹೇಳಿ. ಅಭಿರುಚಿಯಿಂದ ಬಂದಿರುವ ಕಲೆ ಅದು. ಅವನ ತೃಪ್ತಿಗಳಿಗೆ, ಅದು ವೃತ್ತಿಯಾಗುತ್ತದೆ ಅಲ್ವಾ. ನಾನು ಮಾಡುವ ವೃತ್ತಿ ಯನ್ನು ಇನ್ನೊಬ್ಬ ಮಾಡಿದರೆ ನನಗೆ ಯಾಕೆ ಚಿಂತೆ ಸ್ವಾಮಿ. ನನ್ನ ವೃತ್ತಿ ರಂಗದಲ್ಲಿ ತೊಂದರೆಯಾದರೇ ನಾನು ತಲೆ ಕೆಡಿಸ್ಕೋ ಬೇಕು ಅಲ್ವಾ? ಹತ್ತು ಇದ್ದರೆ ಮುತ್ತು ಎನ್ನುವ ಗಾದೇನೇ ಇದೆ.  ನನ್ನ ಹಿರಿಯರು ನನಗೆ ಹೇಳಿದಂತೆ ನನ್ನ  ಮಣ್ಣಿನ ದೈವಗಳು ಕಾರ್ಣೀಕದ ಶಕ್ತಿಗಳು. ತಪ್ಪು ಮಾಡಿದವರನ್ನು ಯಾವತ್ತೂ ಬಿಟ್ಟಿಲ್ಲ ಅಂತೆ. ನನ್ನ ಮನೆಯ ಅಂಗಳದಲ್ಲಿ ಇದ್ದ ಅಡಿಕೆ ಕದ್ದವರನ್ನು ಬಿಟ್ಟಿಲ್ಲಂತೆ. ಸರಿ ದೈವಗಳ ಪ್ರತಾಪಗಳೇ ಹೀಗೆ. ದೇವರ ಭಯವೇ ಜ್ಞಾನದ ಅರಂಭ. ಭಯದ ಮೂಲಕವೇ ಆರಾಧನೆ ಪ್ರಾರಂಭವಾಗಿದೆ ಎಂದುಕೊಳ್ಳೋಣ. ಈಗ ಗೊಂದಲವಿರುವುದು ದೈವಗಳಿಗೆ ಅಪಮಾನ – ದೈವ ಭಕ್ತರಿಗೆ ಅಪಮಾನ. ದೈವವಿದ್ದರೆ ದೈವ ಭಕ್ತರು. ನಾನು ನಂಬುವ ದೈವ ಕದ್ದು ತೆಗೆದುಕೊಂಡು ಹೋದವರನ್ನು, ಕಾಡಿನಲ್ಲಿ ತಪ್ಪಿಕೊಂಡ ಹಸುಗಳನ್ನು ವಾಪಸ್ ತರಿಸಿಕೊಂಡ ಉದಾಹರಣೆಗಳಿಲ್ಲವೇ. ಕದಿಯುತ್ತಿದ್ದ ವ್ಯಕ್ತಿಯನ್ನು, ಕೆಟ್ಟದನ್ನು ಮಾಡಿದವರ ಕುಟುಂಬ ಸಮೇತ ನಸಿಸಿ ಹಾಕಿಸಿ, ಭಕ್ತಿಯಿಂದ ಹರಕೆ ಹೊತ್ತ ಕುಟುಂಬಕ್ಕೆ ಸಂತನ ದಯಪಾಲಿಸಿದ ನನ್ನ ಯೋದ ಶಕ್ತಿ ದೈವಗಳು ನಮ್ಮೂರಿನಲ್ಲಿ ಎಷ್ಟಿಲ್ಲ ಹೇಳಿ. ಈ ಕಲಿಕಾಲದಲ್ಲೂ ಎಷ್ಟೋ ಪಾಲು ಬಿದ್ದ ದೈವದ ಗುಡಿಗಳು ಜೀರ್ಣೋದ್ಧಾರ ಆಗುವಂತೆ ಮಾಡಿ, ಕೋಲ ಪಡೆದು ಕಾರ್ಣೀಕ  ದೈವಗಳು ತೋರಿಸಿಲ್ವಾ ಹೇಳಿ? ಮಂಗಳೂರಿನ MRPL ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ದೈವ ತನ್ನ ಅಸ್ತಿತ್ವಕ್ಕೆ ತೊಂದರೆ ಆದಾಗ ಅವರಿಂದ ಹಿಂದೆ ಪಡೆದಿರುವುದನ್ನು ನಾವು ನೋಡಿಲ್ಲವೇ ಹೇಳಿ?

    ಹಾಗಾದರೇ ಒಂದು ವೇಳೆ ನಾಟಕವಾದ ಶಿವದೂತ ಗುಳಿಗ ಮದಿಪು ಇಲ್ಲ ಕಾಂತಾರ ಚಲನಚಿತ್ರದಿಂದ  ನಮ್ಮ ದೈವದ ಅಸ್ತಿತ್ವಕ್ಕೆ ತೊಂದರೆ ಆಗಿದ್ದಾರೆ ಅದು ಕಾರ್ಣೀಕ ತೋರಿಸಿ, ಎಲ್ಲರಿಗೂ ತೊಂದರೆ ಕೊಡುತ್ತಿತ್ತು ಅಲ್ವಾ! ನಾನು ನಂಬಿದ ದೈವ, ಕಾರ್ಣೀಕ ತೋರಿಸಿದ ದೈವ ಅಸ್ತಿತ್ವಕ್ಕೆ ತೊಂದರೆ ಆಗಿದ್ದರೆ ಅದರ ಅಸ್ತಿತ್ವವನ್ನು ಅದಕ್ಕೆ ಉಳಿಸಿಕೊಳ್ಳಲಾಗಿಲ್ಲವೆಂದರೆ ನನ್ನ ಪ್ರಾಣ ಮಾನವನ್ನು ನನ್ನ ದೈವ ಹೇಗೆ ಕಾಪಾಡಿತ್ತು. ನಾನು ಯಾಕೆ ಆ ನನ್ನ ದೈವವನ್ನು ನಂಬಬೇಕು.  ದೈವ ಅದರ ಅಸ್ತಿತ್ವ ಉಳಿಸಿಕೊಡಲು ಯಾವುದಾದರೂ ಸಂಘ ಸಂಸ್ಥೆಗಳಿಗೆ ನನ್ನ  ಮಣ್ಣಿನ ದೈವಗಳು ಗುತ್ತಿಗೆ ಕೊಟ್ಟಿದೆಯಾ ಹೇಳಿ. ದೈವಗಳು ತುಳುನಾಡಿನ ಪ್ರತಿ ಮನೆ ಮನೆಯಲ್ಲಿ ಇದೆ. ವಿಧ ವಿಧದಲ್ಲಿ ಇದೆ . ದೈವದ ಇನ್ನೊಂದ ವರ್ಗ ಹೇಳುತ್ತದೆ. ತೆಯ್ಯಂ ದೈವರಾಧನೆಯ ಒಳಗೆ ಇತ್ತು ಅಂತ.  ಅದೇ ತೆಯ್ಯಂ ಇವತ್ತು ರಾಷ್ಟ್ರೀಯತೆಗೆ ಹೋಗಿ ಹೇಗೆ ನಿಂತಿದೆ ಹೇಳಿ? ಹೀಗಿರುವಾಗ ನಾಟಕ, ಚಲನಚಿತ್ರದಲ್ಲಿ ದೈವವನ್ನು ತೋರಿಸಿದರೆ ತಪ್ಪೇನಿದೆ ಹೇಳಿ. ರಿಷಬ್ ಶೆಟ್ಟಿಯವರು ಕಾಂತಾರ ಚಿತ್ರದಲ್ಲಿ ದೈವಕಟ್ಟಿಸಿದ್ದರಿಂದ ಮದಿಪು ಚಿತ್ರದಲ್ಲಿ ನಾನು ದೈವಕೋಲ ಕಟ್ಟಿಸಿದ್ದರಿಂದ, ಶಿವದೂತ ಗುಳಿಗ ನಾಟಕದಲ್ಲಿ ಕೊಡಿಯಲ್ ಬೈಲ್ ಕಟ್ಟಿಸಿದ್ದರಿಂದ ಯಾವುದಾದರೂ ನಮ್ಮ ಮನೆಯ ದೈವ ದುಃಖಿಸಿ, ಚಲನಚಿತ್ರದಿಂದ ನಾಟಕದಿಂದ ತನ್ನ ಅಸ್ತಿತ್ವಕ್ಕೆ  ತೊಂದರೆ ಆಗಿದೆ ಅಂತ ಏನಾದರೂ ನುಡಿ ಕೊಟ್ಟು ಹೇಳಿಕೊಂಡಿದೇಯಾ ಹೇಳಿ. ಮತ್ತೆ ಯಾಕೆ ಈ ವಿರೋಧ ಸ್ವಾಮಿ.

    ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಅಂತ ಭೂತರಾಧನೆಯಲ್ಲೇ ಹೇಳಿದೆ. ಮೂಲ ನಂಬಿಕೆ ಅಂತ ನಾವು ಹೋಗುವುದಾದರೆ ನನ್ನ ದೈವದ ಗುಡಿಯಲ್ಲಿರುವ ಮಣೆಮಂಚದಲ್ಲಿರುವ ಬೊಳ್ಳಿಯ ವಸ್ತುಗಳನ್ನು ನಾನು ಹೊರಗೆ ಬಿಸಾಕಬೇಕಾ ಹೇಳಿ. ದೈವಕೋಲ ಕಟ್ಟಿಸಲು ನಾನು ಕಾಡಿನ ಅಡಿಕೆ ತಿರಿಯಿಂದಲೇ ಕೆಲಸಮಾಡಿಲಾಗುತ್ತದೆಯೇ, ಮನೆಯಲ್ಲೇ ಪೊದೊಲು ಮಾಡಲಾಗುತ್ತದೆಯೇ..!. ದೈವಧಾರಿ ಕಾಡಿನ ಹೂವಿನಿಂದ ಮುಖಕ್ಕೆ ಹರದಳ ಈಗ ಹಾಕಲು ಸಾಧ್ಯವೇ ಹೇಳಿ. ದೊಂದಿ  ಬೆಳಕಿನಿಂದಲೇ ಕೋಲನಡೆಸಲು ಈಗ ಸಾಧ್ಯವೇ? ಮನೆಯವರು ಅಂಗಡಿ ಹೂವನ್ನು ಬಳಸದೇ ಕಾಡು ಹುಡುಕಿ ಹೋಗಿ ಕೇಪುಳ ಹೂ ತರಲು ಸಾಧ್ಯವೇ? ದೈವಕ್ಕೆ ಕೊಡುವ ಕೋಳಿಯನ್ನು ಅಂಗಡಿಯಿಂದ ತರದೇ ನಾವು ಸಾಕಿ ಬಲಿಕೊಡಲು ಸಾಧ್ಯವೇ. ನಾವು ಈಗ ದೈವಕೋಲ ನಡೆಸುವ ಎಷ್ಟೋ ಮನೆಯಲ್ಲಿ ಕ್ಯಾಟ್ರೀಂಗ್ ಗಳನ್ನು ಕರೆಸಿ ಊಟದ ಮಾಡಿ ಹೋಗುವುದನ್ನು ನೋಡಿಲ್ಲ. ಬದಲಾಗಬೇಕಾಗಿರುವುದು ದೈವದ ಕ್ರಮ. ತಲಾಕ್ ಅಲ್ಲವೇ ಹೇಳಿ.  ಅಲ್ಲಾ ಸ್ವಾಮಿ ನಮಗೆ ಶಿವದೂತ ಗುಳಿಗ ನಾಟಕದಲ್ಲಿ ಹಾಕಿರುವ LED Light ನಾವು ತೆಗೆದು ಹಾಕಬೇಕು ಎನ್ನುವ ನನ್ನ ಹಿರಿಯರೇ, LED Light ಎನ್ನುವುದು ನಾಟಕ ಚಲನಚಿತ್ರ ರಂಗದ ಬಿಳಿ ಬೆಳಕು. ಈ ನಾಟಕದಲ್ಲಿ LED light ದೈವದಾರಿ ಕಲಾವಿದನ್ನ ಮೈಮೇಲೆ ಎಲ್ಲಿ ಹಾಕಿದ್ದಾನೇ ಸ್ವಾಮಿ. ‌ನಾಟಕ ನೋಡಿದವರು ದಯವಿಟ್ಟು ನನಗೆ ಹೇಳಿ.‌ ಅಲ್ಲ ರಂಗಭೂಮಿ ನಿಂತಿರುವುದು ಲೈಟ್ಗಳ ಜೊತೆಗೆ ಬೆಳೆದು ಬಂದಿದೆ. LED ಲೈಟ್ ರಂಗಭೂಮಿಯಲ್ಲಿ ಬಳಸಬಾರದು ಎಂದು ರಂಗಭೂಮಿಯ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕನ್ನು ನನಗೆ ಕೊಟ್ಟವರು ಯಾರು ಸ್ವಾಮಿ. ನಾಳೆ  l Elo – Jin Light, spotlight, ಹಾಕಬಾರದು ಅಂತ ನಾವು ಹೇಳುವುದಿಲ್ಲವೇ..?. ರಂಗಭೂಮಿಯಲ್ಲಿ ಆಗದೇ ಇರುವ ನ್ಯೂನತೆಯನ್ನು ಹೇಳುವ ನಾವು ನಾಳೆ ದೈವದ ಚಾಕರಿಯಲ್ಲಿ ನಡೆಯುವ ನ್ಯೂನತೆಯನ್ನು ನಾವು ಹೇಗೆ ಸರಿಪಡಿಸುತ್ತೇವೆ ಹೇಳಿ. ಇದೇ ಶಿವದೂತ ಗುಳಿಗೆ ನಾಟಕದ cold fire ನಮ್ಮನ್ನು disturb ಮಾಡುತ್ತೆ ಅಂದರೆ ದೈವ ಕುಣಿಯುವಾಗ ನಾವು ಬಳಸುವ ಬೆಡಿಮರ್ದ್ ಗರ್ನಾಲ್, ಪಟಾಕಿ, ಬೆಂಕಿಯ ಭತ್ತಿಗಳು ಕೂಡ ನಮ್ಮನ್ನು disturb ಮಾಡುತ್ತದೆ ಎಂದು ಚರ್ಚೆ ಆದರೆ ನನ್ನ ದೈವದ ಮೂಲ ಎಲ್ಲಿ ಹೋಗಿ ನಿಲ್ಲಬಹುದು ಎನ್ನುವ ಭಯ ನನಗೆ. ಇದೇ ರೀತಿ ದೈವಕ್ಕೆ ಬಳಸುವ ವಾದ್ಯ ಚೆಂಡೆ, ತಾಸೆ, ಬೇಡ ಎನ್ನುವ ಚರ್ಚೆ ಹುಟ್ಟಿಕೊಂಡರೆ ದೈವಕೋಲ ಎಲ್ಲಿ ಹೋಗಿ ನಿಲ್ಲಬಹುದು ಎನ್ನುವ ಭಯ ಮತ್ತೊಂದು. ಈ ಎಲ್ಲಾ ಸಂಘರ್ಷಕ್ಕೆ ನಾನು , ನಾವು ಯಾಕೆ ಜಾಗ ಮಾಡಿ ಕೊಡಬೇಕು ಹೇಳಿ

    ಕಾಂತರ ಚಲನಚಿತ್ರದಲ್ಲಿ ರಿಷಭ್ ತಪ್ಪು ಮಾಡಿದ್ದಾರೆ ಅಂತ ಹೇಳುವ ಮಹಾತ್ಮರೇ, ಅವರು ಎಲ್ಲಿ ತಪ್ಪು ಮಾಡಿದ್ದಾರೆ ತಿಳಿಸಿ. ಕುಡಿದು ದೈವಕೋಲಕ್ಕೆ ಬಂದ ಫಾರೇಸ್ಟ್ ಆಫೀಸರ್ ದೈವಕೋಲದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗ ಅದಕ್ಕೆ ಉತ್ತರಕೊಟ್ಟು, ಎಲ್ಲ ವರ್ಗದ ಸಂಘರ್ಷವನ್ನು ಮಿರಿಸಿ, ದೈವವನ್ನೇ ಗೆಲ್ಲಿಸಿಲ್ಲವೇ ಇದು ತಪ್ಪಾ. ಅಲ್ಲಾ ಸ್ವಾಮಿ ಹಿಂದೆ ಊರಿನಲ್ಲಿ ಕೋಟಿ-ಚೆನ್ನಯ, ಕೊರಪು ಬಾರಗೆ, ಕಲ್ಕುಡ ಕಲ್ಲುಟ್ಟಿ,  ಬಬ್ಬು ಬಾರಗೆ, ಯಕ್ಷಗಾನ ನಡೆಯುತ್ತಿತ್ತು. ಇದರಿಂದ ಈ ದೈವಗಳ ಕತೆಗಳು ಹೆಚ್ಚು ಜನಗಳಿಗೆ ನಮ್ಮ ಮಕ್ಕಳಿಗೆ ತಲುಪುಂತೆ ಆಯಿತ್ತು.‌ ದೈವದ ಗ್ರಾಮ್ಯದ ತುಳು ಯಾರಿಗೆ ಅರ್ಥವಾಗುತ್ತೆ ಹೇಳಿ ನೋಡೋಣ.  ಅದನ್ನೇ ಯಕ್ಷಗಾನ, ನಾಟಕ, ಚಲನಚಿತ್ರಗಳ ಮೂಲಕ ಆ ಕಥೆಗೊಂದು ಲೇಪನ ಕೊಟ್ಟು ಬಿಡಿಸಿ, ಹೇಳಿದ್ದಾಗಲೇ ಈ ಕತೆಗಳು ಜನರಿಗೆ ತಲುಪುದಲ್ಲವೇ. ಕೊಡಿಯಲ್ ಬೈಲ್ ತಮ್ಮ ನಾಟಕದಲ್ಲಿ ಮಾಡಿದ್ದು ಇದನ್ನೇ ಅಲ್ಲವೇ? ನಾವು ದೈವವನ್ನು ದೇವರ ರೂಪವೆಂದು ಯಾರಾದರೂ ಸಾಧಿಸಲು  ಸಾರಲು ಯತ್ನಿಸಿದ ವ್ಯಕ್ತಿಗಳನ್ನು ವಿರೋಧಿಸಬೇಕೇ ವಿನಹಃ ದೈವವೇ ಕರೆಯುವ ನೂಲುಪಾಡಿ ಸಂಸಾರವನ್ನ ವಿರೋಧಿಸಲು ನಾವ್ಯಾರು? ದೈವಕ್ಕೆ ಚಂಡಿಕಾಯಾಗ ಮಾಡಹೊರಟರೆ, ಆರತಿ ಎತ್ತಿದರೆ ಅದಕ್ಕೆ ವಿರೋಧಿಸೋಣ ಅಥವಾ ಅದನ್ನ ಇನ್ಯಾವುದೋ ದೇವರ ಅಂಶವೆಂದೋ ಸಾರಹೊರಟರೆ ಅದನ್ನ ವಿರೋಧಿಸೋಣ. ಜನರಿಗೆ ದೈವದ ಬಗ್ಗೆ ಭಕ್ತಿ ಬರುವಂತೆ ಮಾಡುವ ಈ ನಾಟಕ ಚಲನಚಿತ್ರವನ್ನು ಅಲ್ಲ. ಅಲ್ಲ ನಾಟಕ ಚಲನಚಿತ್ರವನ್ನು ತಡೆಯುವ ಅಧಿಕಾರವನ್ನು ನಮಗೆ ಕೊಟ್ಟವರು ಯಾರು. ಕಾಂತಾರ ಚಿತ್ರಿಸಿದ ರಿಷಬ್ ರನ್ನು ಬಹಿಷ್ಕಾರದ ಹಾಕಲು ನಾವು ಯಾರು. ಅವರು ಏನು ಕೊಲೆ ದರೋಡೆ ಮಾಡಿದ್ದಾರೆಯೇ. ಶಿವದೂತ ಗುಳಿಗ ನಾಟಕ ನಾಯಕನಿಗೆ ಕರೆ ಮಾಡಿ ನಿಮ್ಮ ಮಕ್ಕಳು ನಸಿಸಿಹೋಗಬೇಕು ಅಂತ ಹೇಳಲು ನಾವು ಯಾರು ದೈವಗಳೇ ಅಲ್ಲವಲ್ಲ. ಒಬ್ಬ ಕಲಾವಿದ ಅವನ ಹೊಟ್ಟೆಪಾಡಿಗೆ ಕಲೆಯನ್ನು ಮಾಡುತ್ತಾನೆ. ದೈವದ ಕಲದಲ್ಲಿ ಕೂಡ ಇದನ್ನೇ ಮಾಡುವುದಲ್ಲವೇ. ಅದು ಸರಿಯಾದರೇ ಇದು ಯಾಕೆ ತಪ್ಪು?

    ಇನ್ನೂ ದೈವವು ತನ್ನ ನುಡಿಗಟ್ಟಲ್ಲಿ ಘಟ್ಟದ ಪುಡೆರ್ದ್ – ಕಡಲ ಪುಡೆ ಮುಟ್ಟ – ದಂಡ್’ದ ರಾಜ್ಯೊರ್ದ್ – ಏಳ್ ಗಂಗೆದ ಕಡಪ ಇಪ್ಪುನಂಚಿನ ದೈವ ನಂಬಿಂಚಿ ಸಂಸಾರಲೆನ್ ಎನ್ನ ಮಾಯದ ಪೊರುವೆಳ್’ಡ್ ದೀದ್ ಕಾಪುವೆ….ಅಂದರೆ ಘಟ್ಟದ ಬುಡದಿಂದ, ಕಡಲತಡಿ ತನಕ ದಂಡಿನ ರಾಜ್ಯದಿಂದ ಏಳು ಕಡಲಿನ ಗಡಿ ತನಕ ಇರುವಂತಹ ದೈವ ನಾನು, ನಂಬಿದಂತಹ ಸಂಸಾರವನ್ನು ಅಂದರೆ ಇಲ್ಲಿ ನಂಬಿದವನ ಜಾತಿ ಹೇಳಿಲ್ಲ ,ಬದಲಾಗಿ ಯಾರೇ ನಂಬಿದರೂ ಅವರನ್ನ ಮಾಯದ ರಕ್ಷಣೆಯಲ್ಲಿ ಕಾಪಾಡುತ್ತೇನೆ ಎಂದು ಹೇಳುತ್ತದೆ. ಇಲ್ಲಿ ಜಾತಿಯವಾದಕ್ಕೆ ಅವಕಾಶವಿದೆಯೇ? ಮತ್ತು ಯಾಕೇ ನಾವು ಒಂದು ಜಾತಿಯನ್ನು ಎತ್ತಿಕಟ್ಟಬೇಕು ನೀವೇ ಹೇಳಿ. ಮುಂಬೈಯ ಕೆಲವು ಜಾಗದಲ್ಲಿ ದೈವದ ಗುಡಿ, ನಾಗನ ಗುಡಿಗಳು ಇದ್ದಾವೆ. ಅಲ್ಲಿಕೋಲವಾಗುತ್ತದೆ. ಇದು ಮದಿಪು, ಕಾಂತಾರ, ಇಲ್ಲ ಶಿವದೂತ ಗುಳಿಗೆ ನಾಟಕದಲ್ಲಿ ಬಂದ ನಂತರವಾಗಿದ್ದಲ್ಲಾ ಹಲವು ವರುಷದ ಹಿಂದಿನಿಂದ ಇದೆ. ಆಗ ಯಾಕೆ ನಮ್ಮ ಹಿರಿಯರು ವಿರೋಧಿಸಿಲ್ಲ.  ತುಳುನಾಡಿನ  9 ಚಲನಚಿತ್ರಕ್ಕೆ ರಾಷ್ಟ್ರೀಯ ರಾಜ್ಯ ಪ್ರಶಸ್ತಿ ಬಂದ ಚಿತ್ರಗಳೆಲ್ಲಾ ದೈವಕೋಲದ ಕತೆಗಳೇ. ಕಾಂತಾರ ಸೇರಿ. ಹಾಗಾದರೇ ಅದನ್ನು ನೋಡಿದ, ವೀಕ್ಷಕರು, ಜ್ಯೂರಿಗಳು ಯಾಕೆ ವಿರೋಧಿಸಿಲ್ಲ. ಅವರು ದಡ್ಡರೇ. ಅದರಿಂದ ದೈವರಾಧನೆ ಹೆಚ್ಚಾಗಿದೆ ಹೊರತು ಕಡಿಮೆ ಆಗಿಲ್ಲ ಅಲ್ವಾ. ವರುಷಕ್ಕೆ ಒಂದೋ ಎರಡು ಕೋಲ ಕಟ್ಟುತ್ತಿದ್ದವರು ಈಗ ಕುತ್ತಿಗೆ ಕೆಜಿ ಚಿನ್ನ ಹಾಕುವಷ್ಟು ದೈವಕೋಲ ಕಟ್ಟುತ್ತಿಲ್ಲವೇ. ದೈವಕೋಲ ಕಟ್ಟುವವರನ್ನು ದೈವದ ಚಾಕರಿಯವರು ಎಂದು ಕರೆಯುತ್ತಾರೆ  ಚಾಕರಿ ಅಂದರೆ ಕೆಲಸ ಮಾಡುವವರು. ಇದರಲ್ಲಿ ಎಲ್ಲಾ ವರ್ಗ ಜಾತಿಯವರು ಸೇರುತ್ತಾರೆ.  ದೈವಧಾರಿ ಸೇವೆ ಮಾಡುವುದ್ದಾದರೆ ಅವರು ಹಣ ಪಡೆಯುವಂತಿಲ್ಲ. ಚಾಕರಿ ಮಾಡುವುದ್ದಾರೆ ಅವರು ಹಣ ಪಡೆಯುತ್ತಾರೆ ಅಂದರೆ ಅದು ಕಲೆಯಾಗುತ್ತದೆ ಅಲ್ಲವೇ ಆ ಕಾರಣಕ್ಕೆ ಕೆಲವು ಕಲಾವಿದರಿಗೆ (ದೈವಧಾರಿಗಳಿಗೆ) ರಾಜ್ಯ, ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇದು ಹೇಗೆ ಈಗ ನಾನು ಇದನ್ನು ಕಲೆ ಅಂತನೇ ನೋಡಬೇಕಲ್ವಾ.

    ದೈವಕೋಲ ನಡೆಯುವಾಗ ಇದೇ ಕಾಂತಾರದ, ಮದಿಪು ಚಿತ್ರದ ಹಾಡುಗಳನ್ನು ಕೋಲದಲ್ಲಿ ಬಳಸಿ ದೈವಧಾರಿ ಕುಣಿಯುವಾಗ ಯಾಕೇ ನಾವು ಯಾರು ವಿರೋಧಿಸಿಲ್ಲ. ಇದೇ ದೈವಧಾರಿಗಳು ಮೈಸೂರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಹೀಗೆ ತುಳುನಾಡಿನ ಮೇಲೆ ಘಟ್ಟದಲ್ಲಿ ಹೋಗಿ ದೈವಕೋಲ ಕಟ್ಟಿದವರು ಅದೇ ವರ್ಗದವರಲ್ಲವೇ. ಕಲಾವಿದರಲ್ಲವೇ?  ಆಗ ಅದೇ ವರ್ಗದವರು ಯಾಕೆ ವಿರೋಧಿಸಿಲ್ಲ? ಆಗ ದೈವದ ಅಸ್ತಿತ್ವಕ್ಕೆ ತೊಂದರೆ ಆಗಿಲ್ಲವೇ ಹೇಳಿ. ನನ್ನಂತಹ ದೈವದ ಮೇಲೆ ನಂಬಿಕೆ ಇರುವ ದೈವ ಆರಾಧಕ ದೈವಕೋಲ ಮಾಡಲು ಶಕ್ತಿ ಇಲ್ಲದೇ ದೈವಕ್ಕೆ ಬರೀ ತಂಬಿಲ, ಅಗೇಲ್ ಮಾಡಿಕೊಂಡು ಬಂದವರು ಕಾಂತಾರ ಚಿತ್ರ ಬಂದ ನಂತರ ತುಳುನಾಡಿನಿಂದ ಹೊರಗಿರುವರು ತಮ್ಮ ಕುಟುಂಬದ ಜೊತೆಗೆ ಊರಿಗೆ ಬಂದು ತಮ್ಮ ದೈವಕ್ಕೆ ಕೋಲ ತಂಬಿಲ ಕೊಟ್ಟಿದ್ದು ಹೆಚ್ಚಾಗಿದೆಯಾ, ಕಮ್ಮಿಯಾಗಿದೆಯಾ. ತಿಳಿಸಿ. ಇದರಿಂದ ಒಂದಷ್ಟು ದೈವಕೋಲ ಕಟ್ಟುವ ಕಲಾವಿದರು ಬದುಕಿಗೆ ದಾರಿಯಾಗಿದೆ ಅಲ್ವಾ. ದೈವಕೋಲ ಕಟ್ಟುವ ಗ್ರಾಮದಿಂದ ಪಟ್ಟಿ ಕಟ್ಟಿಸಿಕೊಂಡ  ದೈವಧಾರಿ ಹೊರಗೆ ಓಡಾಡುವಾಗ ಬಿಳಿ ಪಂಚೆ ಬಿಳಿ ಅಂಗಿ ಹೆಗಲ ಮೇಲೆ ಒಂದು ಚೀಲ, ಇದ್ದು ಅದರಲ್ಲಿ ಕಂಚಿನ ತಟ್ಟೆ ಲೋಟ ಇರಬೇಕು ಅದರಲ್ಲೇ ಊಟ ನೀರು ಕುಡಿಯಬೇಕು, ಈ ರೀತಿಯ ಕೆಲವು ಪದ್ದತಿಗಳು ಇವೆ ಎಂದು ಕೇಳಿದ್ದೀನಿ. ಈ ಕ್ರಮವನ್ನು ಎಷ್ಟು ಎಷ್ಟು ಜನ ನಡೆಸುತ್ತಾರೆ.  ಒಂದು ನಾಟಕ ತಂಡದ ಸದಸ್ಯರನ್ನು ಒಟ್ಟು ಮಾಡಿ, ಅದರ ಜೊತೆಗೆ ನಾಟಕದ ಸೇಟ್ ಗಳನ್ನು, ಲೈಟ್ ಗಳನ್ನು  ಜೊತೆಗೆ ಹಾಕಿಕೊಂಡು ಒಂದು ಬಸ್ ಮಾಡಿ ಒಂದು ಊರಿನಲ್ಲಿ ನಾಟಕ ಆಡಿದರೆ ಅವರಿಗೆ ಸಿಗುವುದು 30ರಿಂದ 35 ಸಾವಿರ. ಅದೇ ದೈವಕೋಲ ಕಟ್ಟುವ ಕಲಾವಿದನಿಗೆ 60ರಿಂದ 80 ಸಾವಿರ. ಹೀಗಿರುವಾಗ ಯಾಕೆ ಸ್ವಾಮಿ ಕಲಾವಿದರ ಮೇಲೆ ಸವಾರಿ.  ಇಲ್ಲಿ ಗೊಂದಲದ ನನ್ನೊಳಗಿನ, ನಾನು ಹೇಳಿದ್ದ ಮಾತುಗಳು ತಪ್ಪು ಇದ್ದರೆ ಹೇಳಿ ತಿದ್ದಿಕೊಳ್ಳುವೆ.

  • ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನ ‘ಭಾವಪೂರ್ಣ’ ಟ್ರೈಲರ್

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕನ ‘ಭಾವಪೂರ್ಣ’ ಟ್ರೈಲರ್

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ (Chetan Mundadi) ನಿರ್ದೇಶನದ, ಪ್ರಶಾಂತ್ ಅಂಜನಪ್ಪ ನಿರ್ಮಾಣದ ಹಾಗೂ ರಮೇಶ್ ಪಂಡಿತ್ (Ramesh Pandit) ನಾಯಕರಾಗಿ ನಟಿಸಿರುವ ‘ಭಾವಪೂರ್ಣ’ (Bhavapurna) ಚಿತ್ರದ ಟ್ರೈಲರ್ (Trailer) ಇತ್ತೀಚೆಗೆ ಬಿಡುಗಡೆಯಾಯಿತು. ಆನಂತರ ಚಿತ್ರದ ಕುರಿತು ತಂಡದ ಸದಸ್ಯರು ಮಾಹಿತಿ ನೀಡಿದರು.

    ಭಾವಪೂರ್ಣ ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ ತೀರ ಯಾನ.  ಸಾವಿನಾಚೆಗೂ ತಾನು ಈ ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟುಹೋಗುವ  ಪ್ರಯತ್ನ ಎಂದು ಕೊಂಡು ಪ್ರತಿಹೆಜ್ಜೆಯಲ್ಲೂ ಪಡುವ ಬವಣೆ, ಆಗುವ ಒದ್ದಾಟ,  ಅವಘಡ ಮತ್ತು ಮನತಟ್ಟುವ ಮುಗ್ದ ತಮಾಷೆಗಳು. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಇನ್ನೊಬ್ಬ ಯುವಕ.  ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್ ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ  ಪ್ರೀತಿಯ ಪಯಣ.  ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು.ಇವರು ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ ಎನ್ನುವುದೇ ಭಾವಪೂರ್ಣ ಎದೆ ಬಡಿತದ ಕಥಾವಸ್ತುವಾಗಿ ಕಾಡುವುದು ಎಂದರು ನಿರ್ದೇಶಕ ಚೇತನ್ ಮುಂಡಾಡಿ.

    ನನಗೆ ಸುಮಾರು ವರ್ಷಗಳಿಂದ ಚಿತ್ರರಂಗದವರೊಂದಿಗೆ ಒಡನಾಟವಿದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಚೇತನ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ‌. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ಮಾಪಕ ಪ್ರಶಾಂತ್ ಆಂಜನಪ್ಪ ತಿಳಿಸಿದರು.

    ಚಿತ್ರದಲ್ಲಿ ನಟಿಸಿರುವ ಶೈಲಶ್ರೀ ಧರ್ಮೇಂದ್ರ ಅರಸ್, ಅಥರ್ವ ಪ್ರಕಾಶ್, ಛಾಯಾಗ್ರಾಹಕ ಪ್ರಸನ್ನ, ಹಿನ್ನೆಲೆ ಸಂಗೀತ ನೀಡುರುವ ಅಕ್ಷಯ್ ಹಾಗೂ ಸಂಕಲನಕಾರ ಕೀರ್ತಿರಾಜ್.ಡಿ. ಭಾವಪೂರ್ಣದ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾ ಅಂಕಣಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿ(ತೀರ್ಪುಗಾರರ ವಿಶೇಷ ಪ್ರಶಸ್ತಿ)ಪಡೆದಿರುವ ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಲಿಂಗದೇವರು ಹಾಗೂ ಸತ್ಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ಹೊಸ ಚಿತ್ರಕ್ಕೆ ಚಾಲನೆ

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ಹೊಸ ಚಿತ್ರಕ್ಕೆ ಚಾಲನೆ

    ದಿಪು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಚೇತನ್ ಮುಂಡಾಡಿ.  ಪ್ರಸ್ತುತ ಇವರು ನಿರ್ದೇಶಿಸುತ್ತಿರುವ “ಭಾವಪೂರ್ಣ” ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 8 ರಿಂದ ಆರಂಭವಾಗಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈವರೆಗೂ ಕಲಾತ್ಮಕ ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಇದು ಮೊದಲ ಕಮರ್ಷಿಯಲ್ ಚಿತ್ರ. ಇದು ತೊಂಭತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಭಾವನೆಗಳೇ ಇಲ್ಲಿನ ಪಾತ್ರಗಳು. ಪುಟ್ಟಗ್ರಾಮವೊಂದರಲ್ಲಿ 50ರ ವಯಸ್ಸಿನ ವ್ಯಕ್ತಿಯಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಆತ ಪಡುವ ಪರಿಪಾಟಗಳೇ ಚಿತ್ರದ ಮುಖ್ಯ ಕಥಾಹಂದರ. ಧರ್ಮಣ್ಣ ಎಂಬ ಮುಖ್ಯಪಾತ್ರದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಅಭಿನಯಿಸುತ್ತಿದ್ದಾರೆ. ಮಂಜುನಾಥ್ ಹೆಗಡೆ ಮತ್ತೊಂದು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿ.ಮನೋಹರ್, ಸುಜಯ್ ಶಾಸ್ತ್ರಿ, ಎಂ.ಕೆ.ಮಠ, ವಿನ್ಯಾ, ಉಗ್ರಂ ಮಂಜು, ಜೆಜಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸೆಪ್ಟೆಂಬರ್ 8 ರಿಂದ ಸೌತಡ್ಕ, ಸಾಗರ, ಜೋಗ, ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಚೇತನ್ ಮುಂಡಾಡಿ ಚಿತ್ರದ ಕುರಿತು ಮಾಹಿತಿ ನೀಡಿದರು.

    ಈ ಚಿತ್ರದಲ್ಲಿ ಧರ್ಮಣ್ಣ ಎನ್ನುವ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅನ್ವೇಷಣೆಯ ಮೇಲೆ ಕಥೆ ಸಾಗುತ್ತದೆ ಎಂದು ರಮೇಶ್ ಪಂಡಿತ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನನಗೆ ಅಳುವ ಹಾಗೂ ಸಂದೇಶ ನೀಡುವ ಚಿತ್ರಗಳಲ್ಲಿ ಆಸಕ್ತಿ ಇಲ್ಲ. ಜನ ಸಿನಿಮಾ ನೋಡಲು ಬರುವುದು ತಮ್ಮ ನಿತ್ಯದ ಕಷ್ಟಗಳನ್ನು ಮರೆಯುವುದಕ್ಕಾಗಿ. ಚಿತ್ರದಲ್ಲೂ ದುಖದ ಸಂಗತಿ ಇದ್ದರೆ ಯಾರು ಇಷ್ಟ ಪಡುವುದಿಲ್ಲ. ಹಾಗಾಗಿ ಚೇತನ್ ಮುಂಡಾಡಿ ಒಳ್ಳೆಯ ಮನೋರಂಜನೆಯಿರುವ ಕಥೆ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದನ್ನು ಒದಗಿಸುವುದನ್ನು ನಾನು ಮಾಡುತ್ತೇನೆ ಎಂದರು ನಿರ್ಮಾಪಕ ಪ್ರಶಾಂತ್ ಅಂಜನಪ್ಪ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    “ಭಾವಪೂರ್ಣ” ದ ಬಗ್ಗೆ ಸವಿಸ್ತಾರವಾಗಿ ಸಂಭಾಷಣೆ ಬರೆದಿರುವ ಸುಂದರ್ ವಿವರಿಸಿದರು. ಮತ್ತೊಬ್ಬ ಮುಖ್ಯ ಪಾತ್ರಧಾರಿ ಮಂಜುನಾಥ್ ಹೆಗಡೆ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ವಿ.ಮನೋಹರ್ ಸಂಗೀತ ನಿರ್ದೇಶನ, ಪ್ರಸನ್ನ ಛಾಯಾಗ್ರಹಣ, ಕೀರ್ತಿ ಸಂಕಲನ ಹಾಗೂ ಅನಂತರಾಜ್ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಸುಂದರ್ ವೀಣಾ ಸಂಭಾಷಣೆ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]