Tag: chandigarh

  • ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ನಿಂದಿಸಿದ ಪೋಷಕರು

    – ಮನನೊಂದ ಯುವಕ ಎರಡು ದಿನದ ನಂತ್ರ ನೇಣಿಗೆ ಶರಣು

    ಚಂಡೀಗಢ್: ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಪೋಷಕರು ನಿಂದಿಸಿದ್ದು, ಇದರಿಂದ ಬೇಸತ್ತ ಯುವಕ ಎರಡು ದಿನದ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಜಗಾದ್ರಿಯಲ್ಲಿ ನಡೆದಿದೆ.

    ಸುರೇಶ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಸುರೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಆಕೆಯನ್ನು ತನ್ನ ಮನೆಗೂ ಕರೆದುಕೊಂಡು ಹೋಗುತ್ತಿದ್ದನು. ಆದರೆ ಇದು ಆತನ ತಾಯಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸುರೇಶ್‍ಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಎರಡು ದಿನಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಸುರೇಶ್ ಸಹೋದರ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ನನ್ನ ತಮ್ಮ ಸುರೇಶ್ ಯಾವಾಗಲೂ ಬೈಕ್ ಮೆಕ್ಯಾನಿಕ್ ಜೊತೆ ಇರುತ್ತಿದ್ದನು. ಅಲ್ಲದೆ ಆತ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಸುರೇಶ್, ಬಾಲಕಿಯನ್ನು ಹಲವಾರು ಬಾರಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ನಮ್ಮ ಕುಟುಂಬಸ್ಥರಿಗೆ ತಿಳಿದಾಗ ಆತನಿಗೆ ಬೈದು ಬುದ್ಧಿ ಹೇಳಲಾಗಿತ್ತು. ಜ. 1ರಂದು ನನ್ನ ಪತ್ನಿ ಒಬ್ಬಳೇ ಮನೆಯಲ್ಲಿದ್ದಳು. ಈ ವೇಳೆ ಸುರೇಶ್, ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದನು ಎಂದು ತಿಳಿಸಿದ್ದಾರೆ.

    ಈ ವಿಷಯವನ್ನು ನನ್ನ ಪತ್ನಿ ನನ್ನ ತಾಯಿಯ ಬಳಿ ಹೇಳಿದ್ದಳು. ಆಗ ನನ್ನ ತಾಯಿ ಆತನಿಗೆ ಬೈದು ಬುದ್ಧಿ ಹೇಳಿದ್ದರು. ಬಳಿಕ ಸೋಮವಾರ ರಾತ್ರಿ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸುರೇಶ್ ಪ್ರೀತಿಸುತ್ತಿದ್ದ ಬಾಲಕಿ 16 ವರ್ಷದವಳಾಗಿದ್ದು, ಇಬ್ಬರು ಈಗಲೇ ಮದುವೆಯಾಗಲು ಸಾಧ್ಯವಿರಲಿಲ್ಲ. ಹಾಗಾಗಿ ಆತನಿಗೆ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯುವಕನ ಪೋಷಕರು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಅಲ್ಲದೆ ಯುವಕ ಮೃತದೇಹದ ಬಳಿ ಯಾವುದೇ ಡೆತ್‍ನೋಟ್ ಕೂಡ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

  • ಪ್ರಿಯಕರನ ಮನೆಯಲ್ಲಿದ್ದ ಪತ್ನಿಯ ಜೊತೆ ಪತಿ ಸೆಕ್ಸ್ – ಕೆಲ್ಸದಿಂದ ಬಂದ ಪ್ರೇಮಿಗೆ ಶಾಕ್

    ಪ್ರಿಯಕರನ ಮನೆಯಲ್ಲಿದ್ದ ಪತ್ನಿಯ ಜೊತೆ ಪತಿ ಸೆಕ್ಸ್ – ಕೆಲ್ಸದಿಂದ ಬಂದ ಪ್ರೇಮಿಗೆ ಶಾಕ್

    – ಹೆಲ್ಮೆಟ್ ಮೂಲಕ ಆರೋಪಿ ಪತಿ ಸಿಕ್ಕಿ ಬಿದ್ದ
    – ಮೊಬೈಲ್ ಚಾರ್ಜರ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ

    ಚಂಡೀಗಢ: ಪ್ರಿಯಕರನ ಜೊತೆಗಿದ್ದ ಪತ್ನಿಯ ಜೊತೆ ಸೆಕ್ಸ್ ಮಾಡಿ ನಂತರ ಪತಿಯೇ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಖರಾರ್ ನಲ್ಲಿ ನಡೆದಿದೆ.

    ಸುಖ್ವಿಂದರ್ ಕೌರ್ (25) ಮೃತ ಮಹಿಳೆ. ಪತಿಯೇ ಮೊಬೈಲ್ ಫೋನ್ ಚಾರ್ಜರ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರದ ಮೇರೆಗೆ ಮೃತ ಮಹಿಳೆಯ ಪತಿ ಹರ್ಜಿಂದರ್ ಸಿಂಗ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆತನ ವಿರುದ್ಧ ಐಪಿಸಿ ಸೆಕ್ಸನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಸುಖ್ವಿಂದರ್ ಕೌರ್ ಸೊಲಾಖಿಯಾನ್ ಗ್ರಾಮದ ಹರ್ಜಿಂದರ್ ಸಿಂಗ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಮದುವೆಯಾದಾಗಿನಿಂದ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ಆದ್ದರಿಂದ ಕೌರ್ ಪತಿಯ ಮನೆ ಬಿಟ್ಟು ಪ್ರಿಯಕರ ದಪಿಂದರ್ ಸಿಂಗ್ ಜೊತೆ ವಾಸಿಸುತ್ತಿದ್ದಳು.

    ಕೌರ್ ಮತ್ತು ಪ್ರಿಯಕರ ದಪಿಂದರ್ ಸಿಂಗ್ ಇಬ್ಬರೂ 15 ದಿನಗಳ ಹಿಂದೆ ಗುರುದ್ವಾರ ರಸ್ತೆಯಲ್ಲಿ ತಾವಿಬ್ಬರೂ ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ದಪಿಂದರ್ ಸಿಂಗ್ ಗುರುವಾರ ಕೆಲಸಕ್ಕೆಂದು ಮನೆಯಿಂದ ಹೊರಹೋಗಿದ್ದನು. ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಮೊಬೈಲ್ ಚಾರ್ಜರ್ ವೈರ್‌ನಿಂದ ಕೌರ್‌ನ ಕತ್ತು ಹಿಸುಕಿ ಕೊಲೆ ಮಾಡಿರುವುದನ್ನು ನೋಡಿದ್ದಾನೆ. ತಕ್ಷಣ ದಪಿಂದರ್ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪೊಲೀಸ್ ಸಿಬ್ಬಂದಿ, ಇನ್ಸ್ ಪೆಕ್ಟರ್ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಫೊರೆನ್ಸಿಕ್ ಲ್ಯಾಬ್ ಸಿಬ್ಬಂದಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳದಲ್ಲಿದ್ದ ಫಿಂಗರ್ ಪ್ರಿಂಟ್‍ಗಳ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದರು. ಇತ್ತ ಕೌರ್ ಪತಿ ಯಾವಾಗಲೂ ಜಗಳ ಮಾಡುತ್ತಿದ್ದನು. ಹೀಗಾಗಿ ಆಕೆ ಪತಿಯನ್ನು ಬಿಟ್ಟು ನನ್ನ ಜೊತೆ ಬಂದಿದ್ದಳು ಎಂದು ದಪಿಂದರ್ ಸಿಂಗ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

    ಹೆಲ್ಮೆಟ್ ಮೂಲಕ ಸಿಕ್ಕಿಬಿದ್ದ ಆರೋಪಿ
    ಸುಖ್ವಿಂದರ್ ಕೌರ್ ಮತ್ತು ಹರ್ಜಿಂದರ್ ಸಿಂಗ್ ಮದುವೆಯಾಗಿ 8 ವರ್ಷಗಳಾಗಿದೆ. ಆರೋಪಿ ಪತಿ ಸುಖ್ವಿಂದರ್ ಕೌರ್ ನನ್ನು ಎರಡನೇ ಮದುವೆಯಾಗಿದ್ದನು. ಮೊದಲನೆಯ ಪತ್ನಿ ಕೂಡ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಅದೇ ರೀತಿ ಕೌರ್ ಕೂಡ ಪತಿಯಿಂದ ದೂರವಾಗಿ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು.

    ಗುರುವಾರ ಆರೋಪಿ ಪತಿ ಮದ್ಯವನ್ನು ಖರೀದಿಸಿ ಪತ್ನಿಯ ಪ್ರಿಯಕರನ ಮನೆಗೆ ಹೋಗಿದ್ದನು. ಅಲ್ಲಿ ಅವನು ಮದ್ಯಪಾನ ಮಾಡಿದ್ದಾನೆ. ಜೊತೆಗೆ ಪತಿಯ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದನು. ಕೊನೆಗೆ ಪತ್ನಿಯ ಜೊತೆ ಸೆಕ್ಸ್ ಮಾಡಿದ ನಂತರ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಪತಿ ಅಲ್ಲಿಂದ ಹೋಗಿದ್ದಾನೆ. ಆದರೆ ಆರೋಪಿ ಕೊಲೆ ಮಾಡಿ ಹೋಗುವ ಆತುರದಲ್ಲಿ ತನ್ನ ಹೆಲ್ಮೆಟ್ ಬಿಟ್ಟು ಹೋಗಿದ್ದನು. ಹೀಗಾಗಿ ಹೆಲ್ಮೆಟ್ ಮೂಲಕ ಆರೋಪಿ ಪತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • 3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    3 ದಿನ ಆಶ್ರಮದಲ್ಲಿ ಅಪ್ರಾಪ್ತೆಯರಿಬ್ಬರ ಮೇಲೆ ಬಾಬಾ ಅತ್ಯಾಚಾರ

    – ಕೇಸ್ ದಾಖಲಾಗ್ತಿದ್ದಂತೆ ಬಾಬಾ ಎಸ್ಕೇಪ್

    ಚಂಡೀಗಢ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಬಾನ ವಿರುದ್ಧ ಹರಿಯಾಣ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.

    ಆರೋಪಿ ಬಾಬಾನನ್ನು ಸ್ವಾಮಿ ಲಕ್ಷಾನಂದ್ ಎಂದು ಗುರುತಿಸಲಾಗಿದೆ. ಈತ ಪಂಚಕುಲ ಜಿಲ್ಲೆಯ ಚೋಟಾ ತ್ರಿಲೋಕ್‍ಪುರದಲ್ಲಿ ಆಶ್ರಮ ನಡೆಸುತ್ತಿದ್ದನು. ಸ್ವಾಮಿ ಲಕ್ಷಾನಂದ್ 14 ಮತ್ತು 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

    ಇಬ್ಬರು ಅಪ್ರಾಪ್ತ ಬಾಲಕಿಯರು ಸೇವೆ ಮಾಡಲು ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರಿಬ್ಬರನ್ನು ಬಂಧನದಲ್ಲಿಟ್ಟು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪ್ರಾಪ್ತ ಬಾಲಕಿಯರು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯವರಾಗಿದ್ದು, ನಡೆದ ಘಟನೆಯನ್ನು ತಾಯಿಯ ಬಳಿ ಹೇಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.

    ಪೊಲೀಸರು ಸ್ವಾಮಿ ಲಕ್ಷಾನಂದ್ ವಿರುದ್ಧ ದೂರು ದಾಖಲಿಸಿದ ನಂತರ ಆರೋಪಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸ್ವಾಮಿ ಲಕ್ಷಾನಂದ್ ವಿರುದ್ಧ ದಾಖಲಾದ ದೂರಿನ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಬ್ಬರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ಆಶ್ರಮದಲ್ಲಿ ಮೂರು ದಿನಗಳ ಕಾಲ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿ ಬಾಬಾನಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿ ಸ್ವಾಮಿ ಲಕ್ಷಾನಂದ್‍ನನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

  • ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಚಂಡೀಗಢ್: ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಹರಿಯಾಣದ ರಾಜೀವ್ ಕಾಲೋನಿಯಲ್ಲಿ ನಡೆದಿದೆ.

    21 ವರ್ಷದ ಫೈಝಾನ್ ತನ್ನ ಪತ್ನಿ ಶಾಬ್-ಇ-ನೂರ್ ನನ್ನು ಕೊಲೆ ಮಾಡಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಫೈಝಾನ್ ಹಾಗೂ ಶಾಬ್‍ನ ಮೊದಲನೇ ವಿವಾಹ ವಾರ್ಷಿಕೋತ್ಸವವಿತ್ತು. ಈ ನಡುವೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಫೈಝಾನ್ ತನ್ನ ಪತ್ನಿಯನ್ನು ಮೊಬೈಲ್ ಚಾರ್ಜಿಂಗ್ ವೈರ್ ಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಎಸ್‍ಎಚ್‍ಒ ಅಧಿಕಾರಿ ನವೀನ್ ಶಹಾರಾನ್ ಪ್ರತಿಕ್ರಿಯಿಸಿ, ಬುಧವಾರ ರಾತ್ರಿ ಫೈಝಾನ್ ಚಾರ್ಜಿಂಗ್ ವೈರ್ ನಿಂದ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮರುದಿನ ಬೆಳಗ್ಗೆ ವಿಕಾಸ್ ನಗರಕ್ಕೆ ಹೋಗಿ ಅಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮಹಿಳೆಯ ಮೃತದೇಹವನ್ನು ಸಿವಿಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೈರನ್ನು ಮಹಿಳೆಯ ಕುತ್ತಿಗೆಗೆ ಸುತ್ತಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

    ಫೈಯಾನ್ ತಂದೆ ದಿಲ್‍ಶಾದ್ ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಸೊಸೆ ಹಲವು ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ನನ್ನ ಮಗ ಆಕೆಯ ಹಾಗೂ ಆಕೆಯ ಪ್ರಿಯಕರನ ಕಾಲ್ ಡೀಟೆಲ್ಸ್ ತಂದಿದ್ದನು. ಬುಧವಾರ ಶಾಬ್ ವಿವಾಹ ವಾರ್ಷಿಕೋತ್ಸವಕ್ಕೆ ಏನೂ ಉಡುಗೊರೆ ಕೊಟ್ಟಿಲ್ಲ ಎಂದು ಜಗಳವಾಡುತ್ತಿದ್ದಳು. ಶಾಬ್ ಅದ್ಧೂರಿ ಜೀವನಶೈಲಿ ನಡೆಸಬೇಕು ಎಂದು ಹೇಳುತ್ತಿದ್ದಳು. ಅಲ್ಲದೆ ಪ್ರತಿದಿನ ಮಾಂಸಹಾರ ತಿನ್ನಬೇಕು, ಆದರೆ ನಮಗೆ ಕೇವಲ ತರಕಾರಿ ತರಲು ಆಗುತ್ತಿತ್ತು ಎಂದು ಹೇಳಿದ್ದಾರೆ.

    ಫೈಝಾನ್ ಮೃತದೇಹ ಗುರುವಾರ ಬೆಳಗ್ಗೆ 9.30ಕ್ಕೆ ಪತ್ತೆಯಾಗಿದ್ದು, 10 ಗಂಟೆಗೆ ಪತ್ನಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೈಝಾನ್ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆಯ ಪೋಷಕರು ಮೀರತ್‍ನಲ್ಲಿದ್ದ ಕಾರಣ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ ಎಂದು ವರದಿಯಾಗಿದೆ.

  • ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿ – ಶಿಕ್ಷಕಿ ಸ್ಥಳದಲ್ಲೇ ಸಾವು

    ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿ – ಶಿಕ್ಷಕಿ ಸ್ಥಳದಲ್ಲೇ ಸಾವು

    ಚಂಡೀಗಢ: ಇಯರ್‌ಫೋನ್ ಹಾಕಿಕೊಂಡು ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.

    ಹರ್ಮಿಂದರ್ ಕೌರ್(26) ಮೃತಪಟ್ಟ ಶಿಕ್ಷಕಿ. ಹರ್ಮಿಂದರ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆ ಮುಗಿದ ನಂತರ ಹರ್ಮಿಂದರ್ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಮನೆಗೆ ಹೋಗುತ್ತಿದ್ದರು.

    ಈ ವೇಳೆ ಹಳಿ ದಾಟುವಾಗ ಅಂಬಾಲಾದಿಂದ ಪ್ಯಾಸೆಂಜರ್ ರೈಲು ಬರುತ್ತಿತ್ತು. ಇಯರ್‌ಫೋನ್ ಹಾಕಿದ್ದ ಕಾರಣ ಹರ್ಮಿಂದರ್ ಗೆ ರೈಲಿನ ಶಬ್ದ ಕೇಳಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಹರ್ಮಿಂದರ್ ಕೌರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಘಟನೆ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಯಿತು.

    ಈ ಬಗ್ಗೆ ಜಿಆರ್ ಪಿ ಪೊಲೀಸ್ ಅಧಿಕಾರಿ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ಶಿಕ್ಷಕಿ ಇಯರ್‌ಫೋನ್ ಹಾಕಿದ ಕಾರಣ ರೈಲಿನ ಶಬ್ದ ಕೇಳಿಸಲಿಲ್ಲ. ಹಾಗಾಗಿ ರೈಲು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

  • ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್

    ಕಿಡ್ನಾಪ್ ಯತ್ನ ವಿಫಲವಾದಾಗ ಬಾಲಕಿಯ ಮೂಗನ್ನೇ ಕತ್ತರಿಸಿದ ಗ್ಯಾಂಗ್

    ಚಂಡೀಗಢ: ಮನೆಗೆ ನುಗ್ಗಿ ಬಾಲಕಿಯೋರ್ವಳನ್ನು ಅಪಹರಿಸಲು ಗ್ಯಾಂಗೊಂದು ಯತ್ನಿಸಿದ್ದು, ತಮ್ಮ ಪ್ರಯತ್ನ ವಿಫಲವಾದಾಗ ಆಕೆಯ ಮೂಗನ್ನೇ ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾದ ಅಮಾನವೀಯ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಭಾನುವಾರ ಈ ಘಟನೆ ನಡೆದಿದೆ. ಸಂತ್ರಸ್ತೆ ಪೂನಂ ಕುಮಾರಿ ತನ್ನ ಕುಟುಂಬಸ್ಥರೊಂದಿಗೆ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಗೌರವ್ ಯಾದವ್, ಆಕಾಶ್ ಯಾದವ್, ಸತೀಶ್ ಯಾದವ್, ಮೋನು ಯಾದವ್ ಮತ್ತು ಲೀಲು ಯಾದವ್ ಈ ದುಷ್ಕøತ್ಯವೆಸೆಗಿದ್ದಾರೆ. ಮನೆಗೆ ನುಗ್ಗಿದ ಆರೋಪಿಗಳು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆಕೆಯ ಅಣ್ಣ ಅಡ್ಡಬಂದಾಗ ಆತನ ಮೇಲೆ ಹಾಗೂ ಕುಟುಂಬಸ್ಥರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗೌರವ್ ಹಾಗೂ ಆಕಾಶ್ ಇಬ್ಬರು ಸೇರಿ ಹರಿತವಾದ ವಸ್ತುವಿನಿಂದ ಬಾಲಕಿಯ ಮೂಗು ಕತ್ತರಿಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ಬಗ್ಗೆ ಬಾಲಕಿ ಅಣ್ಣ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ಮಾಡಿದ ಆರೋಪಿಗಳು ಪ್ರಭಾವಿಗಳು. ಊರಿನಲ್ಲಿ ಎಲ್ಲರ ಜೊತೆಗೂ ಅವರು ಜಗಳವಾಡುತ್ತಾರೆ. ಆಸ್ತಿ ವಿಚಾರಕ್ಕೆ ಅವರ ವಿರುದ್ಧ ನಮ್ಮ ಕುಟುಂಬ ದೂರು ನೀಡಿತ್ತು. ಅದಕ್ಕಾಗಿ ನಮ್ಮ ಕುಟುಂಬದ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ನನ್ನ ತಂಗಿಯ ಮೂಗನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    5ರಿಂದ 6 ಮಂದಿ ಆರೋಪಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅವರು ಹಲ್ಲೆ ನಡೆಸುತ್ತಿದ್ದಾಗ ಮನೆಯ ಹೊರಗೆ 15ರಿಂದ 20 ಮಂದಿ ಇದ್ದರು. ಅವರು ಅಕ್ಕಪಕ್ಕದ ಮನೆಯವರು ನಮ್ಮ ಸಹಾಯಕ್ಕೆ ಬರಬಾರದೆಂದು ಅವರನ್ನು ತಡೆಯುತ್ತಿದ್ದರು ಎಂದು ಬಾಲಕಿ ಅಣ್ಣ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ಹುತಾತ್ಮನಾದ ಮಗನ ಮುಖ ನೋಡದೆಯೇ ಅಂತ್ಯ ಸಂಸ್ಕಾರ

    ಹುತಾತ್ಮನಾದ ಮಗನ ಮುಖ ನೋಡದೆಯೇ ಅಂತ್ಯ ಸಂಸ್ಕಾರ

    – ಸೆಲ್ಯೂಟ್ ಮಾಡಿ, ನಮಸ್ಕರಿಸಿ ಬಿಕ್ಕಿಬಿಕ್ಕಿ ಅತ್ತ ತಾಯಿ

    ಚಂಡೀಗಢ: ಹುತಾತ್ಮನಾದ ಮಗನ ಮುಖ ನೋಡದೆಯೇ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ ಮನಕಲಕುವ ಘಟನೆ ಪಂಜಾಬ್‍ನ ಚಂಡೀಗಢ್‍ನಲ್ಲಿ ನಡೆದಿದೆ.

    ಜಮ್ಮು- ಕಾಶ್ಮೀರದ ರಾಜೌರಿ ಸೆಕ್ಟರಿನ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಸುಖ್ವಿಂದರ್ ಸಿಂಗ್ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸುಖ್ವಿಂದರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಫತೇಪುರವನ್ನು ಗ್ರಾಮದಲ್ಲಿ ತರಲಾಯಿತು. ಈ ವೇಳೆ ಅಲ್ಲಿದ್ದ ಜನರು ಭಾರತ್ ಮಾತಾ ಕೀ ಜೈ ಹಾಗೂ ಸುಖ್ವಿಂದರ್ ಸಿಂಗ್ ಅಮರವಾಗಿರಲಿ ಎಂದು ಘೋಷಣೆ ಕೂಗುತ್ತಿದ್ದರು.

    ಹುತಾತ್ಮರಾದ ಸುಖ್ವಿಂದರ್ ಅವರ ಮುಖವನ್ನು ಯಾರಿಗೂ ತೋರಿಸಲಿಲ್ಲ. ಸುಖ್ವಿಂದರ್ ಅವರ ತಾಯಿ ರಾಣಿ ದೇವಿ ಹಾಗೂ ಅವರ ಸಹೋದರ ಗುರುಪಾಲ್ ಸಿಂಗ್ ಮುಖ ತೋರಿಸಲು ಹೇಳುತ್ತಾರೆ. ಆದರೆ ಅಧಿಕಾರಿಗಳು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸುಖ್ವಿಂದರ್ ಸಿಂಗ್ ಅವರ ಮುಖಕ್ಕೆ ಸಾಕಷ್ಟು ಗಾಯಗಳಾಗಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸುಖ್ವಿಂದರ್ ಅವರ ತಾಯಿ ಜೋರಾಗಿ ಕಿರುಚಿ ಮಗನಿಗೆ ಸೆಲ್ಯೂಟ್ ಮಾಡಿದ್ದಾರೆ.

    ಸುಖ್ವಿಂದರ್ ಹುತಾತ್ಮರಾದ ಸುದ್ದಿ ಅವರ ತಾಯಿಗೆ ಬುಧವಾರ ಬೆಳಗ್ಗೆ ತಿಳಿಸಲಾಯಿತು. ಮಧ್ಯಾಹ್ನ ಸುಮಾರು 3 ಗಂಟೆಗೆ ಗ್ರಾಮದ ಸ್ಮಶಾನದಲ್ಲಿ ಸೇನೆಯ ಗೌರವಗಳೊಂದಿಗೆ ಸುಖ್ವಿಂದರ್ ಅವರ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಈ ವೇಳೆ ಸೈನ್ಯದ ತುಕಡಿ ಹುತಾತ್ಮರ ಗೌರವವನ್ನು ನೀಡಿತು. ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಸುಖ್ವಿಂದರ್ ಸಿಂಗ್ ಅವರ ಫೋಟೋ, ಪೋಸ್ಟರ್ ಹಿಡಿದು ಅಂತಿಮ ವಿದಾಯ ತಿಳಿಸಿದರು. ಸುಖ್ವಿಂದರ್ ಅವರ ಚಿತೆಗೆ ಅವರ ಹಿರಿಯ ಸಹೋದರ ಅಗ್ನಿಸ್ಪರ್ಶ ನೀಡಿದರು.

    21 ವರ್ಷದ ರೈಫಲ್‍ಮ್ಯಾನ್ ಆಗಿರುವ ಸುಖ್ವಿಂದರ್ ಅವರ ತಂದೆ ಅವಿನಾಶ್ ಸಿಂಗ್ ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೂಡ 2007ರಲ್ಲಿ ನಿಧನರಾಗಿದ್ದರು. ಸಿಖ್ವಿಂದರ್ 2017ರಲ್ಲಿ ಸೇನೆಗೆ ಸೇರಿದ್ದರು. ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲು ಸಿಖ್ವಿಂದರ್ ನವೆಂಬರ್ 22ರಿಂದ 15 ದಿನ ರಜೆ ತೆಗೆದುಕೊಂಡು ಡ್ಯೂಟಿಗೆ ಹಿಂದಿರುಗಿದ್ದರು.

  • ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಚಂಡೀಗಢ್: ಮದುವೆಯಾಗಿ ಎರಡೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಆಶ್ರಮದಿಂದ ಮಗುವನ್ನು ಕದ್ದು ಅರೆಸ್ಟ್ ಆದ ಘಟನೆ ಹರಿಯಾಣದ ಕೈತಲ್ ಜಿಲ್ಲೆಯಲ್ಲಿ ನಡೆದಿದೆ.

    ವಿಕಾಸ್ ಮಗುವನ್ನು ಕದ್ದು ಅರೆಸ್ಟ್ ಆದ ವ್ಯಕ್ತಿ. ಮದುವೆಯಾಗಿ ಎರಡೂವರೆ ವರ್ಷವಾದರೂ ದಂಪತಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದನು.

    ಆಶ್ರಮದಿಂದ ವಿಕಾಸ್ ಮಗುವನ್ನು ಕದ್ದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಶುರುವಾಯಿತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಕಾಸ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಹಿಂದಿರುಗಿಸಿದ್ದನು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಪಿ ವಿರೇಂದ್ರ ಅವರು, ಮದುವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಕಳಾಗದ ಕಾರಣ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೆ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದಾನೆ ಎಂದರು.

    ಮಾಧ್ಯಮದಲ್ಲಿ ಈ ಸುದ್ದಿ ಪ್ರಸಾರವಾಗಿದ್ದಕ್ಕೆ ವಿಕಾಸ್ ತನ್ನ ಮನಸ್ಸು ಬದಲಾಯಿಸಿ ಮಗುವನ್ನು ನಮ್ಮ ಬಳಿ ಬಿಟ್ಟು ಹೋಗಿದ್ದಾನೆ ಎಂದು ಎಸ್‍ಪಿ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಶನಿವಾರ ಆಶ್ರಮದಿಂದ ಕಾಣೆಯಾದ ಮಗುವನ್ನು ಕೇವಲ 18 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಬಳಿ ಕರೆಸಿಕೊಂಡಿದ್ದೆವೆ. ಸದ್ಯ ನಾವು ವಿಕಾಸ್‍ನನ್ನು ವಿಚಾರಣೆ ನಡೆಸುತ್ತಿದ್ದೆವೆ ಎಂದು ಎಸ್‍ಪಿ ವಿರೇಂದ್ರ ತಿಳಿಸಿದರು.

  • 5 ವರ್ಷದ ಮಗಳ ಮುಂದೆ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ

    5 ವರ್ಷದ ಮಗಳ ಮುಂದೆ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ

    ಚಂಡೀಗಢ್: 5 ವರ್ಷದ ಮಗಳ ಮುಂದೆಯೇ ಶಿಕ್ಷಕಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಪಂಜಾಬ್‍ನ ಮೊಹಾಲಿಯಲ್ಲಿ ನಡೆದಿದೆ.

    ಸರಂಜೀತ್ ಕೌರ್(35) ಕೊಲೆಯಾದ ಶಿಕ್ಷಕಿ. ಏಪ್ರಿಲ್ ತಿಂಗಳಿನಿಂದ ಸರಂಜೀತ್ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯಲ್ಲಿ ಫ್ರೆಂಚ್ ಹಾಗೂ ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶಾಲೆಗೆ ಬಂದ ಸಂದರ್ಭದಲ್ಲಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಂದು ಬೆಳಗ್ಗೆ ಖರಾರ್ ನ ಸನ್ನಿ ಎನ್‍ಕ್ಲೇವ್ ಪ್ರದೇಶದ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯ ಹೊರಗಡೆ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ 7.45ಕ್ಕೆ ಸರಂಜೀತ್ ಶಾಲೆಗೆ ಆಗಮಿಸಿ ತನ್ನ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

    ವ್ಯಕ್ತಿಯೊಬ್ಬ ಶಾಲು ಹಾಕಿಕೊಂಡು ಬೆಳಗ್ಗೆಯಿಂದ ಶಾಲೆಯ ಬಳಿ ತಿರುಗಾಡುತ್ತಿದ್ದನು. ಶಿಕ್ಷಕಿ ಬರುತ್ತಿದ್ದಂತೆ ಆತ ಅವರ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾರಿನಲ್ಲಿ ಪರಾರಿ ಆಗಿದ್ದಾನೆ ಎಂದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

    ಗುಂಡು ಬಿದ್ದ ತಕ್ಷಣ ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಚಂಢೀಗಡ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಈ ನಡುವೆ ಪಂಜಾಬ್‍ನ ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಶುರು ಮಾಡಿದ್ದಾರೆ.

    ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಶುರು ಮಾಡಿದ್ದಾರೆ. ಇದರಿಂದ ತಡರಾತ್ರಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದರೆ, ಅವರು ನೇರವಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಕ್ಯಾಬ್‍ಗಾಗಿ ಅವರು ಪೊಲೀಸರನ್ನು ಕೇಳಬಹುದು.

    ಭಾನುವಾರ ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಅವರು ಮಾತನಾಡಿ, ಮಹಿಳೆಯರು ಎಲ್ಲಿಂದ ಕರೆ ಮಾಡುತ್ತಾರೋ, ಅಲ್ಲಿ ಹತ್ತಿರದ ಪೊಲೀಸರ ನಿಯಂತ್ರಣ ಕೊಠಡಿ ಅಥವಾ ಮಹಿಳೆಯರು ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು ಪೊಲೀಸರ ಜವಾಬ್ದಾರಿ. ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಮಹಿಳೆಯರಿಗಾಗಿ 1091 ಹಾಗೂ 78370 18555 ಸಹಾಯವಾಣಿ ಸಂಖ್ಯೆ ಲಭ್ಯವಿರುತ್ತದೆ. ಈ ನಂಬರ್ 24 ಗಂಟೆ ಚಾಲ್ತಿಯಲ್ಲಿರುತ್ತದೆ. ಮಹಿಳೆಯರು ಯಾವುದೇ ತೊಂದರೆ ಅನುಭವಿಸಬಾರದು ಎಂದು ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಈ ಯೋಜನೆಯನ್ನು ಶುರು ಮಾಡಿದ್ದಾರೆ.