Tag: chambal river

  • ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಭೋಪಾಲ್: ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಪೋಷಕರೇ ಹತ್ಯೆ ಮಾಡಿ ಮೊಸಳೆಗಳಿಗೆ (Crocodile) ಎಸೆದ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ನಡೆದಿದೆ.

    ಆರೋಪಿಗಳು ಹೇಳಿದ ಚಂಬಲ್ ನದಿಯ (Chambal River) ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಘಟನೆ ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರ ಜೊತೆ ಸೇರಿ ಆರೋಪಿಗಳು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ನದಿಯಲ್ಲಿ ಮುಳುಗಿಸಿದ್ದಾರೆ. ಪ್ರಕರಣದಲ್ಲಿ ಮರ್ಯಾದ ಹತ್ಯೆಯ (Honour Killing) ಶಂಕೆ ವ್ಯಕ್ತವಾಗಿದೆ ಎಂದು ಮೊರೆನಾ ಎಸ್‍ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ರತನ್‍ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಶಿವಾನಿ (18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್ (21) ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಜಾತಿ ಸಮಸ್ಯೆಗಳಿಂದ ಯುವತಿ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.

    ಜೂನ್ 3 ರಿಂದ ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು. ರಾಧೇಶ್ಯಾಮ್ ತೋಮರ್ ಅವರ ಕುಟುಂಬವು, ಯುವತಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಈ ವೇಳೆ ಆರೋಪಿಸಿತ್ತು. ಯುವಕನ ಕುಟುಂಬ ಪೊಲೀಸರಿಗೆ ಕೊಲೆ ಬಗ್ಗೆ ಆರೋಪಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದರೂ, ಆರಂಭದಲ್ಲಿ ಇಬ್ಬರೂ ಬೇರೆಲ್ಲೋ ಹೋಗಿರಬಹುದು ಎಂದು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಬಳಿಕ ಪದೇ ಪದೇ ಇದೇ ಆರೋಪವನ್ನು ಮಾಡಿದ ಮೇಲೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಯುವತಿಯ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶವಗಳನ್ನು ನದಿಯಲ್ಲಿ ಎಸೆದು ಈಗಾಗಲೇ 15 ದಿನಗಳು ಕಳೆದಿವೆ. ಮೀನು ಮತ್ತು ಮೊಸಳೆಗಳಂತಹ ಜಲಚರಗಳು ಮೃತದೇಹಗಳನ್ನು ತಿಂದಿರುವ ಸಾಧ್ಯತೆ ಇದೆ. ಇದರಿಂದಾಗಿ ಮೃತದೇಹಗಳನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪ್ರಕರಣದಲ್ಲಿ 15 ಜನ ಭಾಗಿಯಾಗಿದ್ದಾರೆ. ಆದರೆ ಈವರೆಗೂ ಸೈಬರ್ ಪೊಲೀಸರಿಗಾಗಲಿ, ಗುಂಡು ಹಾರಿಸಿ ಕೊಲೆಗೈದಿರುವುದಕ್ಕೆ ಬಂದೂಕಿನ ಸಾಕ್ಷಿಯಾಗಲಿ ಪತ್ತೆಯಾಗಿಲ್ಲ. ಆದರೆ ಯುವತಿಯ ಪೋಷಕರು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ

  • ಮದುವೆಗೆ ಹೋಗುತ್ತಿದ್ದವ್ರು ಮಸಣ ಸೇರಿದ್ರು – ಅಪಘಾತದಲ್ಲಿ ವರ ಸೇರಿ 9 ಮಂದಿ ದುರ್ಮರಣ

    ಮದುವೆಗೆ ಹೋಗುತ್ತಿದ್ದವ್ರು ಮಸಣ ಸೇರಿದ್ರು – ಅಪಘಾತದಲ್ಲಿ ವರ ಸೇರಿ 9 ಮಂದಿ ದುರ್ಮರಣ

    ಜೈಪುರ: ಮದುವೆ ಮನೆಗೆ ಹೋಗುತ್ತಿದ್ದ ಕಾರೊಂದು ನದಿಗೆ ಬಿದ್ದು ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ.

    ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ ಮದುವೆ ಎಂದು ಇಡೀ ಕುಟುಂಬವೇ ಸಂಭ್ರಮದಲ್ಲಿ ತೇಲಾಡುತ್ತಿತ್ತು. ಆದರೆ ಆ ವಿಧಿಯಾಟ ಬೇರೆಯಿತ್ತು. ಮದ್ಯಪಾನ ಸೇವಿಸಿ ಚಾಲಕನು ವರನಿದ್ದ ಕಾರನ್ನು ಚಲಾಯಿಸುತ್ತಿದ್ದ. ಇದರ ಪರಿಣಾಮ ಕಾರು ನಿಯಂತ್ರಣ ತಪ್ಪಿ ಕೋಟಾದ ಚಂಬಲ್ ನದಿಗೆ ಬಿದ್ದಿದೆ. ಇದರಿಂದಾಗಿ ನದಿಯಲ್ಲೇ 9 ಮಂದಿ ಮೃತಪಟ್ಟರು.

    ಮುಂಜಾನೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಈ ಕುರಿತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಎಸ್‍ಪಿ ಹಿರಿಯ ನಾಯಕ ಅಹ್ಮದ್ ಹಸನ್ ನಿಧನ – ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡ ಸಾವು