Tag: Central Government

  • `ಬಾಂಗ್ಲಾ’ ಆಗಲಿದೆ `ಪಶ್ಚಿಮ ಬಂಗಾಳ’ – ಹೆಸರು ಬದಲಾವಣೆಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಶಿಫಾರಸ್ಸು

    `ಬಾಂಗ್ಲಾ’ ಆಗಲಿದೆ `ಪಶ್ಚಿಮ ಬಂಗಾಳ’ – ಹೆಸರು ಬದಲಾವಣೆಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಶಿಫಾರಸ್ಸು

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ರಾಜ್ಯದ ವಿಧಾನಸಭೆಯಲ್ಲಿ ಇಂದು ಒಪ್ಪಿಗೆ ಸಿಕ್ಕಿದ್ದು, ಕೇಂದ್ರದ ಅಂತಿಮ ಸಮ್ಮತಿಗೆ ಶಿಫಾರಸ್ಸು ಮಾಡಲಾಗಿದೆ.

    ಪಶ್ಚಿಮ ಬಂಗಾಳ ಹೆಸರು ಎಲ್ಲಾ ಭಾಷೆಗಳಲ್ಲಿ ಬಾಂಗ್ಲಾ ಎಂದು ರೂಢಿಗೆ ಬರಲಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹೆಸರು ಬದಲಿಸಲು ಮುಂದಾಗಿದ್ದು, ಈ ನಡೆಗೆ ಎಲ್ಲ ಪಕ್ಷಗಳು ಬೆಂಬಲ ನೀಡಿದೆ. 1999 ರಲ್ಲೇ ಹೆಸರು ಪಶ್ಚಿಮ ಬಂಗಾಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲಹೆ ನೀಡಿದ್ದನ್ನು ನೆನಪು ಮಾಡಬಹುದಾಗಿದೆ.

    ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕಳೆದ 2 ವರ್ಷಗಳ ಹಿಂದೆ ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಈ ವೇಳೆ ಪಶ್ಚಿಮ ಬಂಗಾಳ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬೆಂಗಾಲ್, ಹಿಂದಿಯಲ್ಲಿ ಬಂಗಾಳ ಹಾಗೂ ಬಾಂಗ್ಲಾ ಭಾಷೆಯಲ್ಲಿ ಬೆಂಗಾಳ ಎಂದು ಬದಲಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು. ಈ ವೇಳೆ ಕೇಂದ್ರ ಸರ್ಕಾರ, ಎಲ್ಲಾ ಭಾಷೆಗಳಲ್ಲಿ ಒಂದು ಹೆಸರು ಮಾತ್ರ ಬರುವಂತೆ ಸೂಚಿಸಿ ಎಂದು ಸಲಹೆ ನೀಡಿತ್ತು.

    ರಾಜ್ಯದ ಹೆಸರು ಬದಲಾವಣೆಗೆ ಮಮತಾ ಬ್ಯಾನರ್ಜಿ ಸರ್ಕಾರ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಆಂಗ್ಲ ಭಾಷೆಯಲ್ಲಿ ಎಲ್ಲ ರಾಜ್ಯಗಳ ಕ್ರಮಾಂಕ ಬಂದಾಗ ವೆಸ್ಟ್ ಬೆಂಗಾಲ್ ಹೆಸರು ಕೊನೆಯಲ್ಲಿ ಪ್ರಕಟಗೊಳ್ಳುತ್ತದೆ. ಈ ಕಾರಣಕ್ಕೆ ಹೆಸರು ಬದಲಾವಣೆ ಮಾಡಲು ಮುಂದಾಗಿತ್ತು.

    ಸ್ಥಳೀಯವಾಗಿ ಸಿಗುವ ಮದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ‘ಬಾಂಗ್ಲಾ’ ಎಂದು ಕರೆಯಲಾಗುತ್ತದೆ. ಹೀಗಾಗಿ ಸರ್ಕಾರ ಸೂಚಿಸಿರುವ ಹೊಸ ಹೆಸರು ಸಹ ಬೆಂಗಾಲಿ ಭಾಷಿಕರಿಗೆ ಕಷ್ಟವಾಗಲಿದೆ ಎನ್ನಲಾಗಿದೆ.

  • ರಾಜ್ಯ ಸರ್ಕಾರದಿಂದಲೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ: ಸಚಿವ ವೆಂಕಟರಾವ್ ನಾಡಗೌಡ

    ರಾಜ್ಯ ಸರ್ಕಾರದಿಂದಲೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ: ಸಚಿವ ವೆಂಕಟರಾವ್ ನಾಡಗೌಡ

    ಬೆಂಗಳೂರು: ರಾಜ್ಯ ಸರ್ಕಾರವೇ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಮಾಡಲಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಿಸೋದನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ವಿತರಿಸಲಿದೆ ಸ್ಪಷ್ಟಪಡಿಸಿದರು.

    ಜರ್ಮನಿ ಕಂಪೆನಿಯ ಬ್ಯಾಟರಿ ಚಾಲಿತ ಯಂತ್ರದ ಬೋಟ್‍ಗಳನ್ನು ಪ್ರಾಯೋಗಿಕವಾಗಿ ಬಳಸಲು ಚಿಂತನೆ ನಡೆದಿದ್ದು, ಇದರ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಮಾಡುತ್ತೇವೆ. ಮೀನುಗಾರಿಕೆ ಬಳಕೆಗೆ ಫ್ಲೋಟಿಂಗ್ ಜೆಟ್ಟಿ ತರಲು ಚಿಂತನೆ ನಡೆದಿದೆ. ಈಗಾಗಲೇ ಗೋವಾದಲ್ಲಿ ಫ್ಲೋಟಿಂಗ್ ಜೆಟ್ಟಿ ಇದೆ. ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇವೆ ಹಾಗೂ ಮೀನುಗಾರರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ಸಾಲ ಸೌಲಭ್ಯ ಸಿಗಲಿದೆ ಎಂದರು.

    ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ನಾವು ಸರ್ಕಾರದಿಂದ ಕೊಡುವ ಸಹಾಯಧನ 5 ರೂಪಾಯಿ ಕೊಡುವುದನ್ನ ನಿಲ್ಲಿಸೋದಿಲ್ಲ ಅದನ್ನು ಹಾಗೇ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

    ಹಾಲಿನ ಪೌಡರ್ ಮಾಡಲು ಹೆಚ್ಚು ವೆಚ್ಚ ತಗಲುವದರಿಂದ ಹಾಗಾಗಿ ಪೌಡರ್ ಮಾಡಲ್ಲ. ಆದ್ರೆ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುವ ಚಿಂತನೆಗಳಿವೆ. ಬೇರೆ ರಾಜ್ಯಗಳಿಂದ ಹಾಲು ರಾಜ್ಯಕ್ಕೆ ಬರುತ್ತಿದ್ದು, ಜಿಎಸ್ ಟಿ ಬಂದ ಮೇಲೆ ಹೊರ ರಾಜ್ಯದ ಹಾಲು ಮಾರಾಟಕ್ಕೆ ನಿರ್ಬಂಧ ಹಾಕುವುದು ಕಷ್ಟ. ಆದ್ರೆ ಕಲಬೆರಕೆ ಹಾಲಿನ ಬಗ್ಗೆ ಕ್ರಮ ಕೈಗೊಳ್ಳಲು ಶೀಘ್ರ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ಸದ್ಯ ಹಾಲಿನ ದರ ಹೆಚ್ಚಳದ ಬಗ್ಗೆ ಕುರಿತು ಯಾವುದೇ ಪ್ರಸ್ತಾಪ ಸರ್ಕಾರ ಮುಂದೆ ಬಂದಿಲ್ಲ. ಹಾಲು ಒಕ್ಕೂಟಗಳಿಂದಲ್ಲೂ ಕೂಡ ಯಾವುದೇ ದರ ಏರಿಕೆ ಪ್ರಸ್ತಾಪಗಳು ಬಂದಿಲ್ಲ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.

  • ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಮುಂದಾದ ವಾಟ್ಸಪ್

    ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಮುಂದಾದ ವಾಟ್ಸಪ್

    – ದಿನಕ್ಕೆ 5 ಮೆಸೇಜ್ ಮಾತ್ರ ಫಾರ್ವರ್ಡ್

    ನವದೆಹಲಿ: ಸುಳ್ಳು ಸುದ್ದಿ ಹಬ್ಬುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ವಾಟ್ಸಪ್ ತನ್ನ ವಾಟ್ಸಪ್ ಆ್ಯಪ್ ಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಿದೆ.

    ಇನ್ನು ಮುಂದೆ ವಾಟ್ಸಪ್ ನಲ್ಲಿ ಬಳಕೆದಾರರು ಕೇವಲ 5 ಮಂದಿಗೆ ಫಾರ್ವಡ್ ಮೇಸೆಜ್ ಮಾಡಲು ಮಾತ್ರವೇ ಸಾಧ್ಯವಾಗುತ್ತದೆ. ಅಲ್ಲದೇ ವಾಟ್ಸಪ್ ಆ್ಯಪ್ ನಲ್ಲಿರುವ ಕ್ವಿಕ್ ಫಾರ್ವರ್ಡ್ ಆಯ್ಕೆಯನ್ನು ತೆಗೆದುಹಾಕಿರುವುದಾಗಿ ವಾಟ್ಸಪ್ ತಿಳಿಸಿದೆ.

    ಈ ಕುರಿತು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ವಾಟ್ಸಪ್, ಏಕ ಏಕಕಾಲದಲ್ಲಿ ಅನೇಕ ಮಂದಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅನುವಾಗುವಂತೆ ಫೀಚರ್ ಅನ್ನು ಕೆಲ ವರ್ಷಗಳ ಹಿಂದೆ ಜಾರಿಗೊಳಿಸಿದ್ದೆವು. ಆದರೆ ಈಗ ಫಾರ್ವರ್ಡ್ ಸಂದೇಶಗಳನ್ನು ಮಿತಿಗೊಳಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆ. ಇದನ್ನು ಪರೀಕ್ಷಾರ್ಥವಾಗಿ ಭಾರತದಲ್ಲಿರುವ ಬಳಕೆದಾರರು ಯಾವುದೇ ದೇಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫಾರ್ವರ್ಡ್ ಮಾಡಲಾಗುತ್ತಿದ್ದ ಫೋಟೋಗಳು, ವಿಡಿಯೋಗಳು ಹಾಗೂ ಸಂದೇಶಗಳಿಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ಈ ಹೊಸ ಮಿತಿಗೆ ಯಾವ ಪ್ರತಿಕ್ರಿಯೆ ಸಿಗಲಿದೆ ಎಂದು ನೋಡುತ್ತೇವೆ. ಹಾಗೂ ಖಾಸಗಿತನ ಕುರಿತು ಸಾಕಷ್ಟು ಕಾಳಜಿ ವಹಿಸಿರುವುದಾಗಿ ಸಂಸ್ಥೆ ತಿಳಿಸಿದೆ.

    ಇತ್ತೀಚೆಗೆ ದೇಶದಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಹತ್ತಾರು ಅಮಾಯಕರು ಸಾವನ್ನಪ್ಪಿದ್ದರು. ಅಲ್ಲದೇ ದೇಶಾದ್ಯಂತ ಕಲ್ಲುತೂರಾಟ, ಗುಂಪು ಘರ್ಷಣೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳೇ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆಪಾದನೇ ಮಾಡಿತ್ತು. ಈ ಕುರಿತು ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಸುಳ್ಳು ಸುದ್ದಿಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳು ಕಂಡು ಕಾಣದಂತಿದ್ದರೆ, ಅಂತಹರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

  • ಮೋದಿ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ – ಪಕ್ಷಗಳ ಬಲಾಬಲ ಇಂತಿದೆ

    ಮೋದಿ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ – ಪಕ್ಷಗಳ ಬಲಾಬಲ ಇಂತಿದೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಶುಕ್ರವಾರ ಅಗ್ನಿಪರೀಕ್ಷೆ ನಡೆಯಲಿದ್ದು, ತೆಲುಗುದೇಶಂ, ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭವಾಗಲಿದೆ.

    ಸರ್ಕಾರದ ವಿರುದ್ಧದ ನಡೆ ವಿಫಲ ಕಸರತ್ತು ಎಂದು ಗೊತ್ತಿದ್ದರೂ, ರಾಜಕೀಯ ಲೆಕ್ಕಾಚಾರದಲ್ಲಿ ಪ್ರತಿಪಕ್ಷಗಳಿಗೆ ಇದು ಮುಖ್ಯವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಳಿವು-ಉಳಿವಿನ ಹೋರಾಟಕ್ಕೆ ವಿಪಕ್ಷಗಳು ಇದನ್ನು ಕೊನೆಯ ಅಸ್ತ್ರವಾಗಿ ಬಳಸಿಕೊಂಡಿವೆ. ಮಿತ್ರಪಕ್ಷಗಳ ಬೆಂಬಲದ ಹೊರತಾಗಿ 273 ಸದಸ್ಯಬಲ ಹೊಂದಿರುವ ಬಿಜೆಪಿ ಸವಾಲು ಎದುರಿಸಲು ಸಿದ್ಧ ಎಂದಿದೆ.

    ಇದೇ ವೇಳೆ ತಮ್ಮ ಪರ ಬೆಂಬಲ ನೀಡುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಇತ್ತ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಆಂಧ್ರದ ಟಿಡಿಪಿ ಪಕ್ಷವೇ ಹೊರತು ನಾವಲ್ಲ ಎಂದು ಹೇಳುವ ಮೂಲಕ ತಮಿಳುನಾಡು ಸಿಎಂ ಪಳನಿಸ್ವಾಮಿ, ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಆರಂಭವಾಗಲಿದೆ.

    ಲೋಕಸಭೆಯ ಬಲಾಬಲ:
    * ಲೋಕಸಭೆ ಒಟ್ಟು ಸ್ಥಾನ – 543
    * ಹಾಲಿ ಲೋಕಸಭೆ ಬಲ – 536
    * ಗೊತ್ತುವಳಿ ಪಾಸ್ ನಂಬರ್ – 268

    ಸರ್ಕಾರದ ಪರ:
    ಬಿಜೆಪಿ – 273
    ಶಿವಸೇನೆ – 18
    ಎಸ್‍ಎಡಿ – 04
    ಎಲ್‍ಜಿಪಿ – 06
    ಜೆಡಿಯು – 02
    ಇತರೆ – 10
    ಎನ್‍ಡಿಎ ಬಲ – 313

    ಅವಿಶ್ವಾಸ ಗೊತ್ತುವಳಿ ಪರ:
    ಕಾಂಗ್ರೆಸ್ – 48
    ಟಿಎಂಸಿ – 34
    ಟಿಡಿಪಿ – 16
    ಸಿಪಿಎಂ – 09
    ಎಸ್‍ಪಿ – 07
    ಎನ್‍ಸಿಪಿ – 07
    ಆರ್‍ಜೆಡಿ – 04
    ಆಪ್ – 04
    ಎಐಎಂಐಎಂ – 01
    ಸಿಪಿಐ – 01
    ಆರ್‍ಎಲ್‍ಡಿ – 01
    ಒಟ್ಟು ಸ್ಥಾನ – 132

    ತಟಸ್ಥ ನಿಲುವು:
    ಎಐಎಡಿಎಂಕೆ – 37
    ಬಿಜೆಡಿ – 20
    ಟಿಆರ್ ಎಸ್ – 11
    ಒಟ್ಟು – 68

     

  • ಅವಿಶ್ವಾಸ ಮಂಡನೆ ವಿರುದ್ಧ ಶಿವಸೇನೆ ಮತ – ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ

    ಅವಿಶ್ವಾಸ ಮಂಡನೆ ವಿರುದ್ಧ ಶಿವಸೇನೆ ಮತ – ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ

    ನವದೆಹಲಿ: ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಡಸಲಿಚ್ಚಿಸಿರುವ ಅವಿಶ್ವಾಸ ಮಂಡನೆ ವಿರುದ್ಧ ಮತ ನೀಡಿ, ಬಿಜೆಪಿಗೆ ಬೆಂಬಲ ನೀಡಲು ಶಿವಸೇನೆ ಮುಂದಾಗಿದೆ.

    ಶಿವಸೇನೆ ಪಕ್ಷ ತನ್ನ ಸಂಸದರಿಗೆ ಈ ಕುರಿತು ವಿಪ್ ಜಾರಿ ಮಾಡಿದ್ದು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಲು ಸೂಚಿಸಿದೆ.

    ಇದಕ್ಕೂ ಮುನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಬೆಂಬಲ ನೀಡಲು ಮನವಿ ಮಾಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿತ್ತು, ಇದರ ಬೆನ್ನಲ್ಲೇ ಸದ್ಯ ಶಿವಸೇನೆ ವಿಪ್ ಜಾರಿ ಮಾಡಿದೆ.

    ಶಿವಸೇನೆ ಪಕ್ಷದ ನಿರ್ಣಯಕ್ಕೂ ಮುನ್ನ ತಮಿಳುನಾಡು ಸಿಎಂ ಕೆ ಪಳಣಿಸ್ವಾಮಿ ಅವರು ಎಐಎಂಡಿಕೆ ಪಕ್ಷ ಅವಿಶ್ವಾಸ ನಿರ್ಣಯ ವಿರುದ್ಧ ಮತ ಚಲಾಯಿಸುವುದಾಗಿ ಪರೋಕ್ಷವಾಗಿ ತಿಳಿಸಿದ್ದರು.

    ಅಂದಹಾಗೇ ತೆಲುಗುದೇಶಂ ಪಕ್ಷವೂ ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನ ಆಗ್ರಹಿಸಿ ಸಂಸತ್ ನಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕಲ್ಪಿಸಿವಂತೆ ಮನವಿ ಮಾಡಿತ್ತು. ಇದರಂತೆ ಮನ್ಸೂನ್ ಅಧಿವೇಶನದ ಮೊದಲ ದಿನವಾದ ಬುಧವಾರದಂದು ಸ್ಪೀಕರ್ ಸುಮಿತ್ರಾ ಮಹಾಜನ್ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಶುಕ್ರವಾರ ಅವಕಾಶ ನೀಡಿದ್ದರು.

    ಈ ಹಿಂದೆ ಹಲವು ಬಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ 2019ರ ಲೋಕಸಭಾ ಚುನಾವಣೆಯ ವೇಳೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅಲ್ಲದೇ ಮಹಾರಾಷ್ಟ್ರ ಚುನಾವಣೆಯ ವೇಳೆಯೂ ಏಕಾಂಗಿಯಾಗಿ ಸ್ಪರ್ಧೆ ಮಾಡುವ ನಿರ್ಣಯವನ್ನು ಶಿವಸೇನೆ ಪಕ್ಷ ಘೋಷಿಸಿತ್ತು.

  • ಶುಕ್ರವಾರದಿಂದ ದೇಶಾದ್ಯಂತ ಲಾರಿ ಮುಷ್ಕರ

    ಶುಕ್ರವಾರದಿಂದ ದೇಶಾದ್ಯಂತ ಲಾರಿ ಮುಷ್ಕರ

    ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ದೇಶಾದ್ಯಂತ ಅನಿರ್ಧಿಷ್ಟಾವದಿ ಮುಷ್ಕರ ನಡೆಸಲು ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಸಂಘಟನೆ ಮುಂದಾಗಿದೆ.

    ಬಸ್ ಮಾಲೀಕರು ಮತ್ತು ಟ್ಯಾಕ್ಸಿ ಮಾಲೀಕರು ಭಾಗಿಯಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ ವಿವಿಧ ಬೇಡಿಕೆಗಳ ಆಗ್ರಹಕ್ಕಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿದಿದ್ದೇವೆ ಎಂದು ತಿಳಿಸಿದರು.

    ಶುಕ್ರವಾರದಿಂದ ದೇಶಾದ್ಯಂತ ಸರಕು ಸಾಗಣಿಕೆ ವಾಹನಗಳಾದ ಲಾರಿ, ಟ್ರ್ಯಾಕ್ಟರ್, ಪ್ರವಾಸಿ ವಾಹನ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್, ಟೆಂಪೋ ಸೇರಿದಂತೆ ಒಟ್ಟು 90 ಲಕ್ಷ ವಾಹನಗಳ ಸೇವೆ ಸ್ಥಗಿತಗೊಳ್ಳಲಿವೆ ಎಂದು ತಿಳಿಸಿದರು.

    ಕರ್ನಾಟಕದಲ್ಲೂ ಆರು ಲಕ್ಷ ವಾಹನಗಳು ಸ್ಥಗಿತಗೊಳ್ಳುತ್ತಿದ್ದು, ಇದಕ್ಕೆ ಗ್ಯಾಸ್ ಸಿಲಿಂಡರ್ ವಿತರಣೆಯ ವಾಹನಗಳು ಕೂಡ ಬಂದ್‍ಗೆ ಬೆಂಬಲ ನೀಡಲಿವೆ. ಕೇಂದ್ರ ಸರ್ಕಾರ ಎರಡು ದಿನದ ಒಳಗಡೆ ತಮ್ಮ ಬೇಡಿಕೆಗೆ ಬಗ್ಗದೆ ಇದ್ದರೆ ಇಡೀ ರಸ್ತೆ ರಸ್ತೆಯಲ್ಲಿ ವಾಹನ ನಿಲ್ಲಿಸಿಬಿಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಬೇಡಿಕೆಗಳೇನು?
    ಟೋಲ್ ಮುಕ್ತ ರಸ್ತೆಯ ಸೇವೆಯನ್ನು ನೀಡಿ ಇನ್ಯೂರೆನ್ಸ್ ಪ್ರೀಮಿಯಂ ದರವನ್ನು ಕಡಿತಗೊಳಿಸಬೇಕು. ತೈಲ ದರ ಏರಿಕೆಗೆ ಕಡಿವಾಣ ಹಾಕುವುದರ ಜೊತೆಗೆ ಪೆಟ್ರೋಲ್, ಡಿಸೇಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ಮಾಲೀಕರು ಮುಷ್ಕರಕ್ಕೆ ಇಳಿದಿದ್ದಾರೆ.

  • ಅಸ್ತಿತ್ವವೇ ಇಲ್ಲದ ಜಿಯೋ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ಸಿಕ್ಕಿದ್ದು ಹೇಗೆ? ಶಿಕ್ಷಣ ಸಂಸ್ಥೆಗಳಿಗೆ ಏನು ಲಾಭ?

    ಅಸ್ತಿತ್ವವೇ ಇಲ್ಲದ ಜಿಯೋ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ಸಿಕ್ಕಿದ್ದು ಹೇಗೆ? ಶಿಕ್ಷಣ ಸಂಸ್ಥೆಗಳಿಗೆ ಏನು ಲಾಭ?

    ನವದೆಹಲಿ: ಅಸ್ತಿತ್ವವೇ ಇಲ್ಲದ ಜಿಯೋ ಶಿಕ್ಷಣ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ನೀಡಿದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದೆ.

    ಸೋಮವಾರದಂದು ಕೇಂದ್ರ ಸರ್ಕಾರ ಮೂರು ಖಾಸಗಿ ಮತ್ತು ಮೂರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳೆಂದು ಪ್ರಕಟಿಸಿತ್ತು. ಈ ಪ್ರಕಟಣೆಯಲ್ಲಿ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ಮದ್ರಾಸ್ ಐಐಟಿ ಮತ್ತು ಐಐಟಿ ಖರಗ್‍ಪುರ ಪಟ್ಟಿಯಲ್ಲಿ ಸ್ಥಾನ ನೀಡಿರಲಿಲ್ಲ. ಅಲ್ಲದೇ ಇನ್ನೂ ಅಸ್ತಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು.

    ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆ ಸುಬ್ರಮಣ್ಯಂ ಅವರು, ಗ್ರೀನ್ ಫೀಲ್ಡ್ ಕೆಟಗರಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ ಎನ್ನುವ ದೂರದೃಷ್ಟಿ ಯೋಜನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಉತ್ಕೃಷ್ಟ ಸ್ಥಾನಮಾನ ನೀಡಿದೆ. ಈ ಯೋಜನೆಯಲ್ಲಿ ಸ್ಥಾನಮಾನ ಹೊಂದಿದ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಇಂತಹ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದೇ ಸ್ವಂತತ್ರವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಸಂಸ್ಥೆಗಳಿಗೆ ಸರ್ಕಾರದ ನೀತಿಗಳಿಂದ ಕೊಂಚ ರಿಯಾಯಿತಿ ಮಾತ್ರ ದೊರೆಯುತ್ತದೆ. ಆಯಾ ಶಿಕ್ಷಣ ಸಂಸ್ಥೆಗಳು ಇಲಾಖೆಗೆ ನೀಡಿರುವ ವಿಷನ್ ಡಾಕ್ಯುಮೆಂಟ್ ಆಧಾರದ ಮೇರೆಗೆ ಶ್ರೇಷ್ಠ ಸ್ಥಾನಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಒಟ್ಟು 800 ವಿಶ್ವವಿದ್ಯಾಲಯಗಳಿವೆ. ಆದರೆ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯಗಳ ಪೈಕಿ 100 ಹಾಗೂ 200 ರೊಳಗೆ ಒಂದು ಸಹ ಇಲ್ಲ. ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಪ್ರಕಟಿಸಿದ 6 ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಮೂಲಕ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸೇರುವುದಕ್ಕೆ ಈ ಪ್ರಕಟಣೆ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.

    ಸರ್ಕಾರ ಪ್ರಕಟಿಸಿದ್ದ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಪೈಕಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್‍ಸಿ ಬೆಂಗಳೂರು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದುಕೊಂಡಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಿಟ್ಸ್ ಪಿಲಾನಿ ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳು ಸ್ಥಾನಪಡೆದುಕೊಂಡಿದ್ದರೆ, ಗ್ರೀನ್ ಫೀಲ್ಡ್ ಕೆಟಗರಿ ವಿಭಾಗದಿಂದ ಜಿಯೋ ಶಿಕ್ಷಣ ಸಂಸ್ಥೆ ಸ್ಥಾನಗಳಿಸಿದೆ.

    ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಲು ಕೇಂದ್ರ ಸರ್ಕಾರ ಈ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿತ್ತು.
    1. ಶಿಕ್ಷಣ ಸಂಸ್ಥೆಯ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಭೂಮಿಯನ್ನು ಹೊಂದಿರುವುದು.
    2. ಉನ್ನತ ಮಟ್ಟದ ಅರ್ಹತೆಯುಳ್ಳ ಅನುಭವಿ ಬೋಧಕ ತಂಡವನ್ನು ಹೊಂದಿರುವುದು.
    3. ಶಿಕ್ಷಣ ಸಂಸ್ಥೆಗೆ ಬೇಕಾಗುವ ಆರ್ಥಿಕ ಬಂಡವಾಳವನ್ನು ಹೂಡಲು ಶಕ್ತವಾದ ಸಂಸ್ಥೆಗಳು.
    4. ಶಿಕ್ಷಣ ಯೋಜನೆಯಲ್ಲಿ ಕಾರ್ಯತಂತ್ರ ರೂಪಿಸಿ ವಾರ್ಷಿಕ ಮೈಲುಗಲ್ಲನ್ನು ಸ್ಥಾಪಿಸುವ ಕಾರ್ಯಕ್ಷಮತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು.

    ಗ್ರೀನ್ ಫೀಲ್ಡ್ ಕೆಟಗರಿ ಸ್ಥಾನ ಪಡೆಯಲು ಒಟ್ಟು 11 ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಇವುಗಳ ಪೈಕಿ ಜಿಯೋ ಸಂಸ್ಥೆ ಮಾತ್ರ ಆಯ್ಕೆಯಾಗಿದೆ.

    ಏನೇನು ವಿಶೇಷ ಸೌಲಭ್ಯ ಸಿಗುತ್ತೆ?
    ಈ ಸ್ಥಾನಮಾನದಿಂದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ದೊರೆಯಲಿದೆ. ಮೂರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ದೊರೆಯಲಿದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ಈ ಅನುದಾನ ಸಿಗುವುದಿಲ್ಲ.

    ಏನು ಲಾಭ?
    ಆರೂ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ಸಿಗುವ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಯಾವುದೇ ಹೊಸ ಕೋರ್ಸ್ ಆರಂಭಕ್ಕೆ ಅವಕಾಶವಿದೆ. ವಿದೇಶದ ಬೋಧಕರನ್ನು ನೇಮಿಸಲು ಅವಕಾಶದ ಜೊತೆಗೆ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಸ್ವಾತಂತ್ರ್ಯವಿದೆ. ಸರಕಾರದ ಅನುಮತಿ ಇಲ್ಲದೆಯೇ ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳ ಜತೆ ಮಾತುಕತೆ ನಡೆಸಬಹುದು.

  • ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಕೇವಲ ವೋಟಿಗಾಗಿ ನನ್ನನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸಲಾಗ್ತಿದೆ: ಕೇಂದ್ರದ ವಿರುದ್ಧ ಮಲ್ಯ ಕಿಡಿ

    ಲಂಡನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಲು ನನ್ನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.

    ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೇಶ ಹೊರಡಿಸಿದೆ. ನ್ಯಾಯಾಲಯದ ತೀರ್ಪಿಗೆ ತಲೆಬಾಗಿದ್ದು, ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ತಿಳಿಸಿದ್ದಾರೆ.

    ಬ್ರಿಟಿಷ್ ಫಾರ್ಮುಲಾ ಒನ್ ರೇಸ್ ವೇಳೆ ಪಾಲ್ಗೊಂಡಿದ್ದ ಮಲ್ಯ ಅವರನ್ನು ಮಾಧ್ಯಮವೊಂದು ಮಾತನಾಡಿಸಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ಭಾರತದ 13 ಬ್ಯಾಂಕ್ ಗಳ ಸಾಲ ಮರುಪಾವತಿಗಾಗಿ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವು ರಾಜಕೀಯ ಉದ್ದೇಶದಿಂದ ನನ್ನನ್ನು ಇಂಗ್ಲೆಂಡ್ ನಿಂದ ಭಾರತಕ್ಕೆ ಕರೆತರಲು ಯತ್ನಿಸುತ್ತಿದೆ. ಈ ವರ್ಷ ಚುನಾವಣಾ ವರ್ಷವಾಗಿರುವುದರಿಂದ ಈ ರೀತಿ ಮಾಡಿದರೆ ಮತಗಳು ಹೆಚ್ಚಿಗೆ ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದು ಆರೋಪಿಸಿದರು.

    ಇಂಗ್ಲೆಂಡಿನಲ್ಲಿರುವ ನನ್ನ ಆಸ್ತಿಯ ವಿವರಗಳ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನಲ್ಲಿ ಕೆಲವೊಂದು ಕಾರುಗಳು, ಚಿನ್ನಾಭರಣಗಳು ಇವೆ. ಅದನ್ನು ವಶಕ್ಕೆ ಪಡೆಯಲು ನೀವು ನನ್ನ ಮನೆಗೆ ಬರಬೇಕಿಲ್ಲ. ದಿನಾಂಕ, ಸಮಯ ಹಾಗೂ ಸ್ಥಳವನ್ನು ತಿಳಿಸಿದರೆ ನಾನೇ ಅವುಗಳನ್ನು ತಮ್ಮ ವಶಕ್ಕೆ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‍ಬಿಐನಿಂದ 963 ಕೋಟಿ ರೂ. ಮೌಲ್ಯದ ವಿಜಯ್‍ಮಲ್ಯ ಆಸ್ತಿ ವಶ!

    ನನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಮಾತ್ರ ಬ್ಯಾಂಕ್‍ಗಳು ವಶಕ್ಕೆ ಪಡೆಯಬಹುದೇ ಹೊರತು ಇತರೆ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ವಿಜಯ ಮಲ್ಯ ಇಂಗ್ಲೆಂಡಿನಲ್ಲಿರುವ ಬೆಲೆ ಬಾಳುವ ಆಸ್ತಿಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಳ್ಳದೇ ಕುಟುಂಬ ಸದಸ್ಯರ ಹೆಸರಿನಲ್ಲಿರಿಸಿದ್ದಾರೆ.

  • ಪರಿಹಾರ ನೀಡದ್ದಕ್ಕೆ ವಿದ್ಯುತ್ ಕಂಬ ಏರಿ ಪ್ರತಿಭಟಿಸಿದ ರೈತರು

    ಪರಿಹಾರ ನೀಡದ್ದಕ್ಕೆ ವಿದ್ಯುತ್ ಕಂಬ ಏರಿ ಪ್ರತಿಭಟಿಸಿದ ರೈತರು

    ಬೆಂಗಳೂರು: ಪರಿಹಾರ ನೀಡದೇ ತಮ್ಮ ಜಮೀನುಗಳಲ್ಲಿ ಪವರ್ ಗ್ರಿಡ್ ಕಂಪನಿ ವಿದ್ಯುತ್ ಕಂಬಗಳನ್ನು ಹಾಕುತ್ತಿದೆ ಎಂದು ಆರೋಪಿಸಿ ರೈತರು ವಿದ್ಯುತ್ ಕಂಬ ಏರಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಹೊರವಲಯದ ಆನೇಕಲ್ ತಾಲೂಕು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ರೈತರ ಹೊಲದಲ್ಲಿ ತಮಿಳುನಾಡಿನ ಧರ್ಮಪುರಿಯಿಂದ ರಾಮನಗರದ ಸೋಮನಹಳ್ಳಿ ಪವರ್ ಸ್ಟೇಷನ್ ವರೆಗೆ 400 ಕೆವಿ ಯ ಹೈಟೆನ್ಷನ್ ಪವರ್ ಪ್ರೊಜೆಕ್ಟ್ ನ್ನು ಪವರ್ ಗ್ರಿಡ್ ಕಂಪನಿ ನಿರ್ಮಿಸುತ್ತಿದೆ. ಆದರೆ ಕಂಪನಿ ಯಾವುದೇ ಪರಿಹಾರವನ್ನು ನೀಡದೇ ನಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

    ಕೇಂದ್ರ ಸರ್ಕಾರ ತಯಾರು ಮಾಡಿರುವ ಸ್ಯಾಟಲೈಟ್ ನೀಲಿ ನಕ್ಷೆಯನ್ನು ಬಿಟ್ಟು ಅಕ್ರಮವಾಗಿ ನಮ್ಮ ಜಮೀನುಗಳಲ್ಲಿ ಕಾಮಗಾರಿಯನ್ನು ನಡೆಸುತ್ತಿದೆ. ಪ್ರಭಾವಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಜಮೀನುಗಳ ಮೇಲೆ ಹೋಗುತ್ತಿದ್ದ ಕಂಬಗಳ ಮಾರ್ಗ ಬದಲಿಸಿ ಅಧಿಕಾರಿಗಳು ನಮ್ಮ ಜಮೀನುಗಳಲ್ಲಿ ಕಂಬಗಳನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿದ ರೈತರು, ಬನ್ನೇರುಘಟ್ಟ ಸಮೀಪದ ಬೆಲಮರದದೊಡ್ಡಿ ಬಳಿ ನಿರ್ಮಿಸುತ್ತಿರುವ ಹೈಟೆಕ್ಷನ್ ಕಂಬವನ್ನು ಏರಿ ಪ್ರತಿಭಟನೆ ನಡೆಸಿದರು.

  • ಸಿಎಂ ಗೆ ಉದ್ಯೋಗ ಸೃಸ್ಟಿಸುವಂತೆ ವಿನಂತಿಸಿ ನೇಣಿಗೆ ಶರಣಾದ ವಿದ್ಯಾರ್ಥಿ!

    ಸಿಎಂ ಗೆ ಉದ್ಯೋಗ ಸೃಸ್ಟಿಸುವಂತೆ ವಿನಂತಿಸಿ ನೇಣಿಗೆ ಶರಣಾದ ವಿದ್ಯಾರ್ಥಿ!

    ದಾವಣಗೆರೆ: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜ್ಯದಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಸ್ಟಿ ಮಾಡುವಂತೆ ವಿನಂತಿಸಿ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ದಾವಣಗೆರೆ ವಿಶ್ವವಿದ್ಯಾಲಯ ದಲ್ಲಿ ಎಂಎ ಓದುತ್ತಿದ್ದ ಚನ್ನಗಿರಿ ತಾಲೂಕಿನ ಹೊಸ ನಗರ ಗ್ರಾಮದ ನಿವಾಸಿಯಾದ ಅನಿಲ್.ಬಿ (22)ಎಂಬವನೇ ನೇಣಿಗೆ ಶರಣಾದ ವಿದ್ಯಾರ್ಥಿ.

    ಸರ್ಕಾಗಳು ಯುವಜನತೆಗೆ ಅನ್ಯಾಯ ಮಾಡುತ್ತಿವೆ. ವಿದ್ಯಾವಂತ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ಸರ್ಕಾರ ಯುವಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಮನನೊಂದು ನೇಣಿಗೆ ಶರಣಾಗುತ್ತೇನೆ ಎಂದು ವಿಡಿಯೋ ಹೇಳಿದ್ದಾನೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ ಜನಾಂಗಕ್ಕೆ ಉದ್ಯೋಗ ಸೃಸ್ಟಿ ಮಾಡುವಲ್ಲಿ ವಿಫಲವಾಗಿವೆ. ಇದರಿಂದ ವಿದ್ಯಾವಂತರು ಕೂಲಿ ಮಾಡುವಂತಾಗಿದೆ. ಈ ನನ್ನ ಪರಿಸ್ಥಿತಿ ನನ್ನಂತಹ ಬಡವರಿಗೆ ಮಾತ್ರ ಅರ್ಥವಾಗುತ್ತದೆ. ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಿ ಎಂದು ಯುವಕ ಅನಿಲ್ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಈ ನನ್ನ ಸಾವಿನಿಂದಾದರೂ ಎಚ್ಚೆತ್ತು ಸರ್ಕಾರ ವಿದ್ಯಾವಂತರಿಗೆ ಉದ್ಯೋಗ ಸೃಸ್ಟಿಮಾಡಲಿ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಸವ ಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.