Tag: CCTV camera

  • ಕ್ಷಣಾರ್ಧದಲ್ಲಿ ಕಾರ್ ಗ್ಲಾಸ್ ಒಡೆದು 10 ಲಕ್ಷ ಎಗರಿಸಿದ ಕಳ್ಳರು: ವಿಡಿಯೋ ನೋಡಿ

    ಕ್ಷಣಾರ್ಧದಲ್ಲಿ ಕಾರ್ ಗ್ಲಾಸ್ ಒಡೆದು 10 ಲಕ್ಷ ಎಗರಿಸಿದ ಕಳ್ಳರು: ವಿಡಿಯೋ ನೋಡಿ

    ಬೆಂಗಳೂರು: ಹಾಡಹಗಲೇ ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು ಕ್ಷಣಾರ್ಧದಲ್ಲಿ 10 ಲಕ್ಷ ರೂ. ಲಪಟಾಯಿಸಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಸುರೇಶ್ ಎಂಬವರಿಗೆ ಸೇರಿದ್ದ ಹಣವನ್ನು ಬುಧವಾರ ಕಳ್ಳರು ಎಗರಿಸಿದ್ದಾರೆ. ಎರಡು ಪಲ್ಸರ್ ಬೈಕ್‍ನಲ್ಲಿ ಬಂದಿದ್ದ ಮೂವರು ಈ ಕೃತ್ಯ ಎಸಗಿದ್ದಾರೆ. ಜನರು ಇದ್ದರೂ ಲೆಕ್ಕಿಸದ ಕಳ್ಳರು, ಕಾರಿನ ಗಾಜು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಎರಡು ಬ್ಲಾಕ್ ಕಲರ್ ಪಲ್ಸರ್ ಬೈಕ್‍ನಲ್ಲಿ ಇಬ್ಬರು ಕಳ್ಳರು ಬಂದಿದ್ದು, ಒಬ್ಬ ಅಂಗಡಿ ಮುಂಭಾಗದಲ್ಲಿ ನಿಂತಿದ್ದ ಕಾರಿನ ಪಕ್ಕದಲ್ಲಿ ನಿಲ್ಲುತ್ತಾನೆ. ಬಳಿಕ ಮತ್ತೊಬ್ಬ ಕಾರಿನ ಹಿಂಬದಿಯಲ್ಲಿ ನಿಂತಿರುತ್ತಾನೆ. ಕೆಲವು ಜನ ಕಾರಿನ ಮುಂದೆ ಮಾತನಾಡುತ್ತಿದ್ದರೂ, ಕಳ್ಳರು ಪಕ್ಕದ ಕಾರಿನ ಗಾಜು ಒಡೆದಿದ್ದಾರೆ. ತಕ್ಷಣವೇ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಈ ಇಬ್ಬರ ಜೊತೆ ಮೂರನೆಯವನು ಕೂಡ ಸೇರಿಕೊಂಡಿದ್ದು, ನಂತರ ಮೂವರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಅಂಗಡಿಯಿಂದ ಹೊರ ಬಂದ ಇಬ್ಬರು ಮಹಿಳೆಯರು ಎಷ್ಟೇ ಕೂಗಿದರೂ ನಿಲ್ಲದೆ ಅಲ್ಲದೆ ಕಾಲ್ಕಿತ್ತಿದ್ದಾರೆ. ಆರೋಪಿಗಳು ಹೆಲ್ಮೆಟ್ ಹಾಕಿಕೊಂಡು ಕೃತ್ಯ ಎಸಗಿದ್ದಾರೆ.

    ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/doJiE7LvvKI

     

  • ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆಯೇ ಕೆಜಿಎಫ್ ನಗರ ಸಭೆ ಕಾಂಗ್ರೆಸ್ ಸದಸ್ಯರೊಬ್ಬರು ಮಾರಣಾತಿಂಕವಾಗಿ ಹಲ್ಲೆ ಮಾಡಿ ಗುಂಡಾ ವರ್ತನೆ ಮೆರೆದಿದ್ದಾರೆ.

    ಕೆಜಿಎಫ್‍ನ 33ನೇ ವಾರ್ಡ್ ನಿವಾಸಿ ಭಾಸ್ಕರ್ ಹಲ್ಲೆಗೆ ಒಳಗಾದ ದೂರುದಾರ. ಸ್ಟಾನ್ಲಿ ಹಲ್ಲೆ ನಡೆಸಿದ ನಗರಸಭೆ ಸದಸ್ಯ. ನಗರಸಭೆ ಆಯುಕ್ತ ಶ್ರೀಕಾಂತ್ ಎದುರಲ್ಲೇ ಘಟನೆ ನಡೆದಿದ್ದು, ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

    ನಡೆದದ್ದು ಏನು?
    ಕೆಜಿಎಫ್‍ನ 33ನೇ ವಾರ್ಡ್ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ ಅಂತಾ ದೂರು ನೀಡಲು ಭಾಸ್ಕರ್ ಆಯುಕ್ತರ ಕಚೇರಿಗೆ ಬಂದಿದ್ದರು. ಆಗ ಅಲ್ಲಿಯೇ ಇದ್ದ ಸ್ಟಾನ್ಲಿ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಥಳಿಸಿದ್ದಾರೆ. ಅಷ್ಟಕ್ಕೆ ಬಿಡದೇ ಸ್ಟಾನ್ಲಿ ಸಹಚರರು ಆಯುಕ್ತರ ಎದುರಲ್ಲಿಯೇ ಭಾಸ್ಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಈ ಕುರಿತು ಬುಧವಾರ ಮಧ್ಯಾಹ್ನ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಭಾಸ್ಕರ್ ಮೇಲೆ, ಕೆಲ ಪೊಲೀಸ್ ಅಧಿಕಾರಿಗಳು ರೇಗಾಡಿದ್ದಾರೆ. ನಿನ್ನದೆ ತಪ್ಪು ಇದೆ, ಸುಮ್ಮನೆ ಇಲ್ಲಿಂದ ಹೋಗು ಅಂತಾ ಗದರಿಸಿದ್ದರಂತೆ. ಸಂಜೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಎಫ್‍ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

    ಭಾಸ್ಕರ್ ಮಾನವ ಹಕ್ಕುಗಳ ಜಾಗೃತಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಸದಸ್ಯರ ಅಕ್ರಮಗಳನ್ನು ಹೊರ ಹಾಕುತ್ತಿದ್ದರು. ಹಳೇ ವೈಷಮ್ಯದಿಂದ ಭಾಸ್ಕರ್ ಮೇಲೆ ಸ್ಟಾನ್ಲಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಬೆಂಗಳೂರು: ರಾಜ್ಯವೇ ಬೆಚ್ಚಿ ಬೀಳುವಂತಹ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿಕ್ಕ ಮಕ್ಕಳನ್ನು ಕಳುಹಿಸಿ ಕಳ್ಳತನ ಮಾಡುವ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿಯಲ್ಲಿ ನಡೆದಿದೆ.

    ಇಬ್ಬರು ಚಿಕ್ಕ ಮಕ್ಕಳು ಮೊಬೈಲ್ ಅಂಗಡಿಗೆ ಬಂದು, ಕೌಂಟರ್‍ನಲ್ಲಿ ಇರುವ ವಸ್ತು ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಕಳ್ಳತನವಾಗಿದೆ ಎಂದು ಅರಿತ ಅಂಗಡಿಯ ಮಾಲೀಕ ಮಂಜುನಾಥ್ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೋಡಿದಾಗ ಮಕ್ಕಳ ಕೈ ಚಳಕ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?
    ಮಧ್ಯಾಹ್ನ ವೇಳೆಗೆ ಮೊದಲು ಒಬ್ಬ ಬಾಲಕ ಮಾತ್ರ ಅಂಗಡಿಯ ಒಳಗೆ ಬರುತ್ತಾನೆ. ತನ್ನ ಕೈಗೆ ಸಿಕ್ಕ ಹಣ ಹಾಗೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೆ. ಬಳಿಕ ತನ್ನ ಅಣ್ಣನನ್ನು ಕರೆದುಕೊಂಡು ಬಂದು ಮತ್ತಷ್ಟು ಹಣ ಹಾಗೂ ಸಿಮ್ ಕಾರ್ಡ್ ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಾರೆ. ಕ್ಷಣಾರ್ಧದಲ್ಲಿ ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿರುತ್ತಾರೆ.

    ಮಕ್ಕಳು ಸ್ಥಳೀಯ ನಿವಾಸಿಗಳು ಎಂದು ಅರಿತ ಅಂಗಡಿ ಮಾಲೀಕ ಮಂಜುನಾಥ್ ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಾರೆ. ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರನ್ನು ವಿಚಾರಿಸಿದಾಗ, ಅಲ್ಪ ಸ್ವಲ್ಪ ಮಾಹಿತಿ ದೊರೆಯುತ್ತದೆ. ಇದನ್ನು ಆಧಾರಿಸಿ ಮಂಜನಾಥ್ ಕಳ್ಳತನ ಮಾಡಿದ ಮಕ್ಕಳ ಮನೆಗೆ ಹೋದಾಗ ಒಬ್ಬ ಬಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ 18 ಸಾವಿರ ರೂ. ತಂದುಕೊಡುತ್ತಾನೆ. ಈ ಘಟನೆಯು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಸಿಟಿವಿ ಅಳವಡಿಸಿ ಕಾವೇರಿ ನದಿ ರಕ್ಷಿಸಲು ಮುಂದಾದ ಗ್ರಾಮ ಪಂಚಾಯ್ತಿ ಸದಸ್ಯ

    ಸಿಸಿಟಿವಿ ಅಳವಡಿಸಿ ಕಾವೇರಿ ನದಿ ರಕ್ಷಿಸಲು ಮುಂದಾದ ಗ್ರಾಮ ಪಂಚಾಯ್ತಿ ಸದಸ್ಯ

    ಮಡಿಕೇರಿ: ರೈತರ ಜೀವನಾಡಿ ಕಾವೇರಿ ಮೂಲದಲ್ಲೇ ಕಲುಷಿತಗೊಂಡು ಪಕ್ಕದೂರಿಗೆ ಹರಿಯುತ್ತಿದ್ದಾಳೆ. ಅದರಲ್ಲೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ನಗರದಲ್ಲಿ ನದಿ ಹೆಚ್ಚಾಗಿ ಮಲೀನಗೊಳ್ತಿದೆ.

    ಹೀಗಾಗಿ ಗ್ರಾಮ ಪಂಚಾಯ್ತಿ ಸದಸ್ಯ ಸಾಬು ವರ್ಗಿಸ್, ಕಾವೇರಿ ನದಿ ತಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ. ಸದ್ಯ ಎರಡು ಸಿಸಿಟಿವಿಗಳನ್ನು ಅಳವಡಿಸಿ, ಕಸ ಹಾಕದಂತೆ ಎಚ್ಚರಿಕೆಯ ಬೋರ್ಡ್ ಗಳನ್ನು ಹಾಕಿದ್ದಾರೆ.

    ನದಿಗೆ ಕಸ ಎಸೆಯುವವರು, ನದಿ ತಟದಲ್ಲಿ ಪಾರ್ಟಿ ಮಾಡುತ್ತಿದ್ದ ಪುಂಡರು ಕೂಡ ಇದೀಗ ಈ ಸಿಸಿಟಿವಿಗೆ ಹೆದರುತ್ತಿದ್ದಾರೆ. ಅಲ್ಲದೆ ವೈಜ್ಞಾನಿಕ ಕಸ ಘಟಕ ಸ್ಥಾಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

  • ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಡೆದಿದ್ದು, ಕಳ್ಳನ ಕೈಚಳಕ ತಡವಾಗಿ ಬೆಳಕಿಗೆ ಬಂದಿದೆ.

    ಜೂನ್ 27ರಂದು ಘಟನೆ ನಡೆದಿದ್ದು, ಜುಲೈ 3ರಂದು ಲೆಕ್ಕಹಾಕುತ್ತಿದ್ದಾಗ 50 ಸಾವಿರ ಮೌಲ್ಯದ 16.3 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಎಲ್ಲ ಸಿಸಿಟಿವಿ ಕ್ಯಾಮೆರಾ ವಿಡಿಯೋ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ.

    ನಡೆದಿದ್ದು ಏನು?
    ಊಟದ ಸಮಯದಲ್ಲಿ ವ್ಯಕ್ತಿಯೊಬ್ಬನು ಗ್ರಾಹಕನಂತೆ ಚಿನ್ನದ ಅಂಗಡಿಗೆ ಬಂದಿದ್ದನು. ಸಿಬ್ಬಂದಿ ಊಟಕ್ಕೆ ಹೋಗಿದ್ದರು, ಹೀಗಾಗಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಪಕ್ಕದಲ್ಲಿಯೇ ಗ್ರಾಹಕರಿದ್ದರೂ, ಅವರಿಗೆ ಗೊತ್ತಾಗದಂತೆ ತನ್ನ ಎದುರಿಗಿದ್ದ ಬಾಕ್ಸ್‍ನಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮತ್ತೆ ಖಾಲಿಯಾಗಿದ್ದ ಜಾಗವನ್ನು ಸರಿಪಡಿಸಿದ್ದಾನೆ. ಮಳಿಗೆಯಲ್ಲಿ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳ ಅದನ್ನು ಗಮನಿಸದೇ ಈ ಕೃತ್ಯ ಎಸಗಿದ್ದಾನೆ.

    ಕಳ್ಳತನ ಮಾಡಿರುವ ವ್ಯಕ್ತಿ ವೃತ್ತಿಪರ ಕಳ್ಳನೆಂದು ಶಂಕೆ ವ್ಯಕ್ತವಾಗಿದೆ. ಮಳಿಗೆಯ ಸಹಾಯಕ ಮ್ಯಾನೆಜರ್ ಇರ್ಷದ್ ಅವರು ನಗರದ ಲಷ್ಕರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    https://youtu.be/3mm43iHUUwA

  • ವೈನ್ ಶಾಪ್ ಗೆ ಅಬಕಾರಿ ಆಯುಕ್ತರಿಂದ ಶಾಕ್

    ವೈನ್ ಶಾಪ್ ಗೆ ಅಬಕಾರಿ ಆಯುಕ್ತರಿಂದ ಶಾಕ್

    ಬೆಂಗಳೂರು: ಇನ್ನು ಮುಂದೆ ವೈನ್ ಶಾಪ್ ನಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜ್ಯದ ಎಲ್ಲ ಮದ್ಯಂದಂಗಡಿಯಲ್ಲೂ ಇನ್ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೈನ್ ಶಾಪ್ ನಲ್ಲಿ ಪಾರ್ಸೆಲ್ ನ ಜೊತೆ ಕುಡಿಯುವ ವ್ಯವಸ್ಥೆ ಮಾಡಲಾಗುವುದರಿಂದ ಅಕ್ರಮಕ್ಕೆ ಕಡಿವಾಣ ಹಾಕಲು ಅಬಕಾರಿ ಆಯುಕ್ತರು ಈ ನಿರ್ಧಾರವನ್ನು ಮಾಡಿದ್ದಾರೆ.

    ಒಂದು ವೇಳೆ ಅಬಕಾರಿ ಇಲಾಖೆಯ ಆದೇಶವನ್ನು ಮೀರಿ ಸಿಸಿಟಿವಿ ಅಳವಡಿಸದಿದ್ದರೆ, ಇನ್ನು ಮುಂದೆ ಅಂತಹ ಶಾಪ್ ಗಳ ಲೈಸೆನ್ಸ್ ನವೀಕರಣ ಮಾಡಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ಅಬಕಾರಿ ಆಯುಕ್ತ ಮೌದ್ಗೀಲ್ ವಿರುದ್ಧ ಬಾರ್ ಮಾಲೀಕರ ಸಂಘ ಗರಂ ಆಗಿದೆ.

    ಅಬಕಾರಿ ಇಲಾಖೆ ಸಿಕ್ಕಾಪಟ್ಟೆ ಕಠಿಣ ಕಾಯ್ದೆಗಳನ್ನು ತರುತ್ತಿದೆ. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಈ ರೀತಿ ಹೊಸ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದೆಂದರೆ ಈ ರೀತಿ ತೊಂದರೆಗಳನ್ನು ಕೊಡುವುದಲ್ಲ ಅಂತ ಬಾರ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

  • ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬೆಂಗಳೂರು: ಬ್ಯಾಂಕ್ ಕಳ್ಳತನಕ್ಕೆ ಬಂದಿದ್ದವರಿಗೆ ಏನು ಸಿಗಲಿಲ್ಲವೆಂದು ಸಿಸಿಟಿವಿ ಕ್ಯಾಮೆರಾವನ್ನು ಕದ್ದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

    ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಳ್ಳರು ನೆರಳೂರು ಗ್ರಾಮದ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬ್ಯಾಂಕ್ ಲಾಕರ್ ರೂಮ್ ಒಡೆದು ಹುಡುಕಾಡಿದ್ದಾರೆ. ಅಲ್ಲಿಯೂ ಅವರಿಗೆ ಏನು ದೊರೆಯದೇ ಇದ್ದಾಗ ಸಿಸಿಟಿವಿ ಕ್ಯಾಮೆರಾವನ್ನು ತಗೆದುಕೊಂಡು ಹೋಗಿದ್ದಾರೆ.

    ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಲಕ್ನೋ: ಕಾಲೇಜು ಸಿಬ್ಬಂದಿಯೊಬ್ಬ ವಿದ್ಯಾರ್ಥಿಗಳ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

    ನಗರದ ಡಿಎಸ್ ಪದವಿ ಕಾಲೇಜಿನಲ್ಲಿ ಸಿಬ್ಬಂದಿ ಧರಮ್ ಸಮಾಜ್ ಶೌಚಾಲಯದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಇದರಿಂದ ವಿದ್ಯಾರ್ಥಿಗಳು ಇದು ಅನುಚಿತ ವರ್ತನೆಯಾಗಿದೆ ಎಂದು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಕಾಲೇಜಿನ ಅಧಿಕಾರಿಗಳು, ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಶೌಚಾಲಯದಲ್ಲಿ ಬಂದು ನಕಲು ಮಾಡುತ್ತಾರೆ ಎಂದು ಮುಂಜಾಗೃತ ಕ್ರಮವಾಗಿ ಈ ರೀತಿ ಶೌಚಾಲಯದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    ಕ್ಯಾಮೆರಾಗಳನ್ನು ನಮ್ಮ ಶೌಚಾಲಯದಲ್ಲಿ ಅಳವಡಿಸಿರುವುದು ಅವಮಾನಕರವಾಗಿದೆ. ಈ ಭದ್ರತಾ ಕ್ಯಾಮೆರಾಗಳನ್ನು ತಕ್ಷಣ ತೆಗೆದು ಹಾಕಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುಲಾಗುತ್ತದೆ. ಇದು ನಮ್ಮ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಕಾನೂನು ವಿದ್ಯಾರ್ಥಿ ಸೌರಭ್ ಚೌಧರಿ ಹೇಳಿದ್ದಾರೆ.

    ನಾವು ಶೌಚಾಲಯದೊಳಗೆ ಕಾಗದದ ಚೀಟಿ ಮತ್ತು ಇತರೆ ವಂಚನೆ ವಸ್ತುಗಳನ್ನು ಬಚ್ಚಿಟ್ಟುಕೊಳ್ಳುತ್ತಿರುವ ಅನೇಕ ದೂರುಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಹೇಮ್ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಕಾಲೇಜಿನ ಮೂರು ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಾಶ್ ರೂಮ್ ಗಳಲ್ಲಿ ಕ್ಯಾಮೆರಾಗಳನ್ನು ಇರಿಸಿಲ್ಲ. ಅಷ್ಟೇ ಅಲ್ಲದೇ ಸಿಸಿಟಿವಿಗಳ ಪರಿಶೀಲನೆಗೆ ಕಾನೂನು ವಿಭಾಗದಲ್ಲಿ ಬೇರೆ ತಂಡವನ್ನು ನಿಯೋಜಿಸಲಾಗಿದೆ. ಇಲ್ಲಿ ಖಾಸಗಿತನದ ಉಲ್ಲಂಘನೆ ಇಲ್ಲ ಎಂದು ಗುಪ್ತಾ ಹೇಳಿದ್ದಾರೆ.

    ವಿದ್ಯಾರ್ಥಿಗಳು ಅಧಿಕಾರಿಗಳಿಗೆ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದೂರನ್ನು ದಾಖಲಿಸಬಹುದು. ಆದರೆ ಶೌಚಾಲಯಗಳಲ್ಲಿ ಮಾಡುವ ನಕಲನ್ನು ಬೇರೆ ರೀತಿಯಾಗಿ ಪರೀಕ್ಷಿಸಬಹುದು. ಈ ವಿಚಾರದಲ್ಲಿ ಕಾಲೇಜು ನಿರ್ವಹಣೆ ಅಸಮರ್ಥನೀಯವಾಗಿ ಕಾರ್ಯನಿರ್ವಹಿಸಿದೆ ಎಂದು ತೋರುತ್ತದೆ ಅಂತ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ನಿಗಾ ಸಮಿತಿಯ ಸದಸ್ಯ ಮನ್ವೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.