ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಕೇಸ್ ವಿಚಾರವಾಗಿ ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಡ್ರಗ್ ಮಾಫಿಯಾ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಪೊಲೀಸರು ಹುಡುಕುತ್ತಿದ್ದಾರೆ. ಆರೋಪಿ ಆದಿತ್ಯ ಆಳ್ವಾ, ನಟ ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿದ್ದು ಅವರ ಮನೆಯಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಇಂದು ಒಬೆರಾಯ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ನಾಪತ್ತೆಯಾಗಿರುವ ಆರೋಪಿ ಆದಿತ್ಯ ಆಳ್ವಾನಿಗೆ ವಿವೇಕ್ ಒಬೆರಾಯ್ ತನ್ನ ಮನೆಯಲ್ಲಿ ಆಶ್ರಯ ನೀಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸರ್ಚ್ ಮಾಡಲು ಬೆಂಗಳೂರು ಸಿಸಿಬಿ ಪೊಲೀಸರು ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು. ಈ ವಿಚಾರವಾಗಿ ನಿನ್ನೆಯೇ ಮುಂಬೈಗೆ ಸಿಸಿಬಿ ಅಧಿಕಾರಿಗಳು ಹೋಗಿದ್ದರು. ಆದರೆ ಮುಂಬೈ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಇಂದು ತಡವಾಗಿ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿತ್ತು.
ಯಾರು ಈ ಆದಿತ್ಯ ಆಳ್ವಾ?
ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ. ಆದಿತ್ಯ ಆಳ್ವಾನ ಸಹೋದರಿಯನ್ನು ನಟ ವಿವೇಕ್ ಒಬೆರಾಯ್ಗೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬಾಮೈದನ ರಕ್ಷಣೆಗಾಗಿ ನಟ ವಿವೇಕ್ ಒಬೆರಾಯ್ ನಿಂತಿರುವ ಶಂಕೆ ವ್ಯಕ್ತವಾಗಿದ್ದು, ಇಂದು ಅವರ ಮನೆಯ ಮೇಲೂ ಸಿಸಿಬಿ ದಾಳಿ ಮಾಡಿದೆ.
– ಸಿಸಿಬಿ ಪೊಲೀಸರಿಂದ 850 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ – ಮಧ್ಯಂತರ ಚಾರ್ಜ್ಶೀಟ್ನಲ್ಲಿ ಸಂಪತ್ ರಾಜ್ 51ನೇ ಆರೋಪಿ
ಬೆಂಗಳೂರು: ದೇವರಜೀವನಹಳ್ಳಿ(ಡಿಜೆ ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮಧ್ಯಂತರ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
60 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗಿದ್ದರಿಂದ ಇಂದು ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 850 ಪುಟಗಳ ಮಧ್ಯಂತರ ಚಾರ್ಜ್ ಶೀಟ್ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಪ್ರಕರಣದ ತನಿಖೆಯಲ್ಲಿ ಟೆಕ್ನಿಕಲ್ ಮತ್ತು ಡಿಜಿಟಲ್ ಸಾಕ್ಷ್ಯಗಳೇ ಪ್ರಮುಖ ಪಾತ್ರ ವಹಿಸಿದೆ. ವಿಡಿಯೋ ಎವಿಡೆನ್ಸ್ ಆರೋಪಿಗಳ ಪಾಲಿಗೆ ಮುಳುವಾಗಿದೆ. 30ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಬರೋಬ್ಬರಿ 52 ಆರೋಪಿಗಳ ವಿರುದ್ದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದೆ ತನಿಖೆ ಬಳಿಕ ಉಳಿದ ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಹೇಳಿದೆ.
ಸದ್ಯದ ಮಟ್ಟಿಗೆ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ರಿಲೀಫ್ ಸಿಕ್ಕಿದೆ. ಸಂಪತ್ ರಾಜ್ ಅನಾರೋಗ್ಯ ಸಂಬಂಧ ಡಾಕ್ಟರ್ ನೀಡಿದ ಪ್ರಮಾಣಪತ್ರವನ್ನು ಲಗತ್ತಿಸಲಾಗಿದೆ. ಸಂಪತ್ ರಾಜ್ ಅವರಿಗೆ ಕೋವಿಡ್ ಲಕ್ಷಣಗಳು ಇನ್ನೂ ಹೋಗಿಲ್ಲ. ಅಲ್ಲದೆ ಎದೆ ನೋವು, ಬಿಪಿ, ಶುಗರ್ ಇದೆ ಎಂದು ವೈದ್ಯರು ವರದಿ ನೀಡಿದ್ದರು. ಸಂಪತ್ ರಾಜ್ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಸಿಸಿಬಿ ಪೊಲೀಸರು ಮೆಡಿಕಲ್ ವರದಿ ಪಡೆದುಕೊಂಡಿದ್ದರು.
ಚಾರ್ಜ್ಶೀಟ್ನಲ್ಲಿ ಏನಿದೆ?
ಪ್ರತಿಭಟನೆ ಮಾಡಲು ಹೋದವರು ಬೇರೆಯವರ ಕುಮ್ಮಕ್ಕಿಗೆ ಕಿವಿಗೊಟ್ಟು ಬೆಂಕಿ ಹಾಕಿದ್ದಾರೆ. ನವೀನ್ ಫೇಸ್ಬುಕ್ ಪೋಸ್ಟ್ ಕೇವಲ ನೆಪಮಾತ್ರ. ಈ ಪೋಸ್ಟ್ ವಿರುದ್ಧ ಪ್ರತಿಭಟನೆ ನಡೆಸಲು ಮುಸ್ಲಿಂ ಮುಖಂಡರು ಮುಂದಾಗಿದ್ದರು. ಆದರೆ ಪ್ರತಿಭಟನೆಯನ್ನ ಕೆಲವರು ದುರುಪಯೋಗ ಮಾಡಿಕೊಂಡು ಶಾಸಕರ ಮೇಲಿನ ದ್ವೇಷದಿಂದ ಗಲಭೆಗೆ ಸಂಚು ರೂಪಿಸಿದರು.
ಅಖಂಡ ಶ್ರೀನಿವಾಸ ಮೂರ್ತಿ ರಾಜಕೀಯವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆಗೆ ಕುಮ್ಮಕ್ಕು ನೀಡಲಾಯಿತು. ರಾಜಕೀಯ ವೈಷಮ್ಯ ಸಾಧಿಸಲು ಶಾಸಕರ ಮನೆ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಯಿತು. ಅರುಣ್ ರಾಜ್ ಮತ್ತು ಮುಜಾಹೀದ್ ಅಖಂಡ ಮನೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಇಬ್ಬರ ಕುಮ್ಮಕ್ಕಿನಿಂದ ಪ್ರತಿಭಟನಾಕಾರರು ಬೆಂಕಿ ಹಂಚಿದ್ದರು. ಇಬ್ಬರು ಆರೋಪಿಗಳ ಮೊಬೈಲಿನಲ್ಲಿ ವಾಟ್ಸಪ್ ಚಾಟ್ ಮತ್ತು ಕರೆ ಮಾಹಿತಿಯಲ್ಲಿ ಸಂಚಿನ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ.
52 ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಎಲ್ಲರ ಕಾಲ್ ಡಿಟೈಲ್ಸ್, ವಾಟ್ಸಪ್ ಚಾಟಿಂಗ್ ಸಂಗ್ರಹಿಸಲಾಗಿದೆ. ಅರುಣ್ ರಾಜ್ ಮತ್ತು ಮುಜಾಹೀದ್ ಪ್ರತಿಭಟನಾಕಾರರ ಜೊತೆ ಮಾತಾನಾಡುತ್ತಿದ್ದರು ಎಂದು ಗಲಭೆ ವೇಳೆ ಇದ್ದ ವ್ಯಕ್ತಿಗಳು ಸಾಕ್ಷ್ಯ ಹೇಳಿದ್ದಾರೆ. ಒಟ್ಟು 100ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ.
ಪೂರ್ವ ನಿಯೋಜಿತ ಸಂಚು:
ಆಖಂಡ ಶ್ರೀನಿವಾಸಮೂರ್ತಿ ಹೆಸರು ಹಾಳು ಮಾಡಲು ಪೂರ್ವ ನಿಯೋಜಿತ ಸಂಚು ಎಂಬುದು ತನಿಖೆ ವೇಳೆ ಬಯಲಾಗಿದೆ. ಶಾಸಕರ ಹೆಸರು ಕೆಡಿಸಲು ಒಳ್ಳೆಯ ಸಮಯಕ್ಕೆ ಕೆಲವು ಮುಖಂಡರು ಕಾದಿದ್ದರು. ನವೀನ್ ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಸಕ್ರಿಯರಾಗಿ ಈ ಗಲಭೆ ನಡೆಸಿದ್ದಾರೆ ಎಂಬ ಅಂಶ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎ ಆರ್ ಝಾಕೀರ್ ಅವರ ವಿಚಾರಣೆ ನಡೆಸಿಲ್ಲ. ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸದ್ಯಕ್ಕೆ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.
– ಆರು ಮಂದಿ ಮಾಜಿ ಸಿಎಂಗಳಿದ್ದೇವೆ
– ಸರ್ಕಾರ, ಗೃಹ ಸಚಿವರಿಗೆ ಪತ್ರ ಬರೆಯುವೆ
ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ ಪ್ರಕರಣದಲ್ಲಿ ‘ಮಾಜಿ ಸಿಎಂ’ ಹೆಸರು ಪ್ರಸ್ತಾಪ ಆಗಿದ್ದು, ಈ ಹಿನ್ನೆಲೆಯಲ್ಲಿ ಆ ಮಾಜಿ ಸಿಎಂ ಯಾರು ಎಂದು ಬಹಿರಂಗ ಪಡಿಸಿ ಎಂದು ಹೆಚ್. ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡ್ರಗ್ಸ್ ಕೇಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ನಾನು ಮೊದಲೇ ಹೇಳಿದ್ದೆ. ದಿನಕ್ಕೊಂದು ಕಪೋಲ ಕಲ್ಪಿತ ವರದಿಗಳು ಬರುತ್ತಿವೆ. ಇತ್ತೀಚೆಗೆ ಟಿವಿ ಆ್ಯಂಕರ್ ಅನುಶ್ರೀ ವಿಚಾರವಾಗಿ ಲಿಂಕ್ ಗಳು ಶುರುವಾಗಿವೆ. ಸಿಸಿಬಿ ಪೊಲೀಸರು ನೋಟಿಸ್ ನೀಡಿದ ತಕ್ಷಣ ರಾಜ್ಯದ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರಿಗೆ ಒತ್ತಡ ತರಲು ಆ ಹೆಣ್ಣು ಮಗಳು ಫೋನ್ ಮೂಲಕ ಚರ್ಚೆ ಮಾಡಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ನಂಬರ್ ಸಿಕ್ಕಿದೆ ಅಂತೆ. ಅವರ ಕಾಲ್ ಲಿಸ್ಟ್ನಲ್ಲಿ ಪ್ರಭಾವಿ ನಾಯಕರ ನಂಬರ್ ನೋಡಿ ಸಿಸಿಬಿ ಪೊಲೀಸ್ ಶಾಕ್ ಆಗಿದ್ದಾರಂತೆ ಎಂಬ ವರದಿಯನ್ನು ನಾನು ನೋಡಿದೆ ಎಂದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರೋದು ನಾನು. ನಾನು ಬದುಕಿದ್ದೇನೆ. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಮೊಯ್ಲಿ, ಜಗದೀಶ್ ಶೆಟ್ಟರ್, ಡಿವಿಎಸ್ ಇನ್ನೂ ಇದ್ದೇವೆ. ಯಾವ ಅಧಿಕಾರಿ ಮಾಜಿ ಸಿಎಂ ಅಂತ ಮಾಹಿತಿ ಕೊಟ್ಟಿದ್ದಾರೆ. ಯಾವ ಆಧಾರದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಸರು ಬಂದಿದೆ. ಯಾರು ಆ ಮಾಜಿ ಸಿಎಂ ಹೇಳಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಆ ಹೆಣ್ಣು ಮಗಳು ಮಾಜಿ ಸಿಎಂ ಜೊತೆ ಮಾತಾಡಿದ್ದರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಸಿಎಂ ಅಂತ ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ. ಆ ಮಾಜಿ ಸಿಎಂಗೆ ಶಿಕ್ಷೆ ಆಗಲಿ. ಯಾವ ಮಾಜಿ ಸಿಎಂ ಮಗನ ಹೆಸರು ಇದೆ ಗೊತ್ತಾಗಲಿ. ನಾನು ಯಾರು ಈ ವರದಿ ಕೊಟ್ಟಿದ್ದಾರೋ ಆ ವರದಿಗಾರರ ಬಳಿ ಬೇರೆ ಮೂಲದಿಂದ ತಿಳಿದುಕೊಂಡೆ. ಒಂದು ನಂಬರ್ನಿಂದ ಮಾಹಿತಿ ಕೊಟ್ಟಿದ್ದಾನೆ ಎಂದು ನನಗೆ ವರದಿಗಾರ ಫೋನ್ ನಂಬರ್ ಕೊಟ್ಟಿದ್ದಾರೆ. ಆ ನಂಬರ್ ಯಾರದು ಎಂದು ಪರಿಶೀಲಿಸಿದೆ. ಇದು ಶಿವಪ್ರಕಾಶ್ ನಾಯಕ್ ಬಳಸುತ್ತಿದ್ದ ನಂಬರ್ ಆಗಿದೆ. ಹೀಗಾಗಿ ಇದರ ಬಗ್ಗೆ ಅಧಿಕಾರಿ ಶಿವಪ್ರಕಾಶ್ ನಾಯಕ್ ಸತ್ಯ ಹೇಳಬೇಕು. ಮಾಹಿತಿ ಕೊಟ್ಟಿರೋದು ಸತ್ಯನಾ ಅನ್ನೋದನ್ನ ಹೇಳಲಿ ಎಂದರು.
ಯಾವ ಮಾಜಿ ಸಿಎಂ ಅಂತ ಜನರು ತಿಳಿದುಕೊಳ್ಳಬೇಕು. ನಾನು ಸರ್ಕಾರಕ್ಕೆ, ಸಿಎಂಗೆ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಯಾರು ಆ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮಾಧ್ಯಮಗಳಿಗೆ ಕೊಟ್ಟವರು ಯಾರು?, ಮಾಜಿ ಸಿಎಂ ಮಗ ಎಂದೂ ವರದಿಗಳು ಬರುತ್ತಿವೆ. ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ. ನಾನು ಅಷ್ಟು ಸುಲಭಕ್ಕೆ ಬಿಡೋನು ಅಲ್ಲ. ಯಾರು ಒತ್ತಡ ಹಾಕಿದವರು ಅನ್ನೋದು ಗೊತ್ತಾಗಬೇಕು?. ತನಿಖೆ ಹಳ್ಳ ಹಿಡಿಸಲು, ದಾರಿ ತಪ್ಪಿಸಲು ಬಿಡಲ್ಲ. ಒತ್ತಡ ಹಾಕಿದವನು ಯಾವನೇ ಆಗಿರಲಿ, ಅವನನ್ನ ಒದ್ದು ಒಳಗೆ ಹಾಕಲಿ. ಮಂಗಳೂರು ಕಮಿಷನರ್ಗೂ ನಾನು ಕರೆ ಮಾಡಿ ಮಾತಾಡಿದ್ದೇನೆ ಎಂದು ಎಚ್ಡಿಕೆ ಹೇಳಿದರು.
– ಅನುಶ್ರೀ ಸೇರಿ ಹಲವು ನಟ, ನಟಿಯರ ಬಗ್ಗೆ ಬಾಯ್ಬಿಟ್ಟ ಸ್ಯಾಮ್
ಮಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಅರೆಸ್ಟ್ ಆದ ಬಳಿಕ ಪ್ರತಿ ದಿನ ಒಬ್ಬಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಡ್ಯಾನ್ಸ್ ಕೊರಿಯೋಗ್ರಾಫರ್ನ್ನು ಪೊಲೀಸರು ಬಂಧಿಸಿದ್ದಾರೆ.
ಕಿಶೋರ್ ನ ಹಳೆ ಮಿತ್ರ ಸ್ಯಾಮ್ ಫರ್ನಾಂಡಿಸ್ನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಸ್ಯಾಮ್ ನನ್ನು ಟಿಪಿಕಲ್ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದ ಬಳಿಕ ನಿರೂಪಕಿ ಅನುಶ್ರೀ ಬಗೆಗಿನ ಮತ್ತಷ್ಟು ಮಾಹಿತಿಗಳು ಸಿಸಿಬಿ ಪೊಲೀಸರಿಗೆ ಲಭ್ಯವಾಗಿವೆ. ಕಿಶೋರ್ ನಡೆಸುತ್ತಿದ್ದ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಸ್ಯಾಮ್ ಫರ್ನಾಂಡಿಸ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ಎರಡೂ ಕಡೆ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಾಗಿ ಸ್ಯಾಮ್ ಹೇಳಿದ್ದಾನೆ. ಅನುಶ್ರೀ ಸೇರಿದಂತೆ ಬೆಳ್ಳಿತೆರೆ, ಕಿರುತೆರೆ ಹಾಗೂ ರಿಯಾಲಿಟಿ ಶೋನ ನಟ, ನಟಿಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಸ್ಯಾಮ್ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಈಗ ಢವ ಢವ ಆರಂಭವಾಗಿದೆ.
ಇನ್ನೊಂದೆಡೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ರಾಜಕೀಯ ಒತ್ತಡ ಕೂಡ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕಿಶೋರ್ ಅರೆಸ್ಟ್ ಆದ ದಿನವೇ ಆತನನ್ನು ಪ್ರಕರಣದಿಂದ ಬಿಡುಗಡೆಗೊಳಿಸಲು ಮಂಗಳೂರಿನ ಶಾಸಕರೊಬ್ಬರು ಪ್ರಯತ್ನಿಸಿರುವುದು ಗೊತ್ತಾಗಿದೆ. ಕಿಶೋರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಮತ್ತು ಕ್ರಿಕೆಟ್ ಬುಕ್ಕಿಯಾಗಿರುವ ಮಂಗಳೂರಿನ ಪ್ರತಿಷ್ಠಿತ ಯುವ ಉದ್ಯಮಿಯೋರ್ವ ಶಾಸಕನ ಮೂಲಕ ಕಿಶೋರ್ ಶೆಟ್ಟಿಯನ್ನು ಕೇಸ್ ನಿಂದ ತೆಗೆಯಲು ಯತ್ನಿಸಿರೋದಾಗಿ ತಿಳಿದುಬಂದಿದೆ. ಆದರೆ ಸಿಸಿಬಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ. ಒಟ್ಟಾರೆ ಮಂಗಳೂರಿನ ಡ್ರಗ್ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾದಕತೆಯ ಅಮಲೇರಿಸಿಕೊಂಡವರು ಅಂದರ್ ಆಗುವ ಸಾಧ್ಯತೆಗಳಿವೆ.
ಮಂಗಳೂರು: ಮಂಗಳೂರು ಪೊಲೀಸರು ಡ್ರಗ್ ವಿರುದ್ಧದ ಸಮರವನ್ನು ಮುಂದುವರಿಸಿದ್ದು, ಇಂದು ಮತ್ತೊಬ್ಬ ಪೆಡ್ಲರ್ನನ್ನು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ದಂಧೆಯ ಮತ್ತೊರ್ವ ಪ್ರಮುಖ ಪೆಡ್ಲರ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ ಶಾನ್ ಮುಂಬೈನಲ್ಲಿ ಬಂಧಿತನಾದ ಪ್ರಮುಖ ಪೆಡ್ಲರ್. ಮೂಲತಃ ಮಂಗಳೂರಿನ ಬಂದರು ನಿವಾಸಿಯಾಗಿರುವ ಶಾನ್, ತರುಣ್ ರಾಜ್ನ ಪಾರ್ಟಿಗಳಿಗೆ ಡ್ರಗ್ಸ್ ನೀಡುತ್ತಿದ್ದ. ಇತ್ತೀಚಿಗೆ ಬಂಧನವಾಗಿದ್ದ ಶಾಕೀರ್ ಮೂಲಕ ಡ್ರಗ್ಸ್ ಪಾರ್ಟಿಗಳಿಗೆ ಶಾನ್ ನಿಂದ ಡ್ರಗ್ಸ್ ಮಾಡಲಗುತ್ತಿತ್ತು ಎಂಬ ಮಾಹಿತಿ ಆಧರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈ, ಗೋವಾದಿಂದ ಡ್ರಗ್ಸ್ ತರಿಸಿಕೊಡುತ್ತಿದ್ದ ಶಾನ್, ರಾಜ್ಯದ ವಿವಿಧೆಡೆ ನಡೆಯುವ ಪರ್ಟಿಗಳಿಗೆ ಸಪ್ಲೈ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಮಂಗಳೂರು ಸಿಸಿಬಿ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧಿತರಾಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀನ್ನನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ನಾರ್ಕೊಟಿಕ್ ಕ್ರೈಂ ಪೊಲೀಸರು ಈ ಹಿಂದೆ ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದ ಪೊಲೀಸರು, ಅ.9 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸೆಪ್ಟೆಂಬರ್ 19ರಂದು ಮಂಗಳೂರಿನ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.
ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತರು ಈ ಹಿಂದೆ ಮಾಹಿತಿ ನೀಡಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಶೋಯೆಬ್ ಬಂಧಿತ ಆರೋಪಿಯಾಗಿದ್ದು, ಎಟಿಎಸ್ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2008ರಿಂದ ಆರೋಪಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಮಾತ್ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಹುಡುಕಾಟದಲ್ಲೇ ತೊಡಗಿದ್ದರು. ಹೀಗೆ ತನಿಖೆ ನಡೆಸುವಾಗ ಕೇರಳದಲ್ಲಿರುವುದು ಪತ್ತೆಯಾಗಿದ್ದು, ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದಂತಾಗಿದೆ.
ಪ್ರಕರಣದ ಬಹುತೇಕ ಆರೋಪಿಗಳು ಕೇರಳದಲ್ಲೇ ತಲೆ ಮರೆಸಿಕೊಂಡಿದ್ದು, ಎಟಿಎಸ್ ಪೊಲೀಸರು ಎಷ್ಟೇ ಹುಡುಕಿದರೂ ಪ್ರಮುಖ ಆರೋಪಿ ಶೋಯೆಬ್ ಸಿಕ್ಕಿರಲಿಲ್ಲ. ಈ ಹಿಂದೆ ಆರೋಪಿ ಸಲೀಂನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತ ಸಹ ಕೇರಳದಲ್ಲಿಯೇ ತಲೆಮರೆಸಿಕೊಂಡಿದ್ದ. 2018ರಲ್ಲಿ ಸಲೀಂನನ್ನು ಬಂಧಿಸಲಾಗಿತ್ತು. ಬಳಿಕ ಪ್ರಮುಖ ಆರೋಪಿಗಾಗಿ ಬಲೆ ಬೀಸಲಾಗಿತ್ತು.
2008ರ ಜುಲೈ 25ರಂದು ಮಡಿವಾಳ ಸೇರಿದಂತೆ ಒಟ್ಟು ಒಂಬತ್ತು ಕಡೆ ಬಾಂಬ್ ಸ್ಫೋಟಗಳು ನಡೆದಿದ್ದವು. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ವರ್ಷ ಜೈಪುರ ಮತ್ತು ಅಹಮದಾಬಾದ್ಗಳಲ್ಲಿಯೂ ಸರಣಿ ಸ್ಫೋಟ ಸಂಭವಿಸಿದ್ದವು. ಈ ಸ್ಫೋಟದ ಪ್ರಮುಖ ಸಂಚುಕೋರ ಈತನೇ ಎಂದು ಶಂಕಿಸಲಾಗಿದೆ.
– ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ
– ಸಿಸಿಬಿ ತನಿಖೆ ಅಷ್ಟು ಖುಷಿ ಕೊಟ್ಟಿಲ್ಲ
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ನಟಿಯರಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ ಎಂದು ನಟ, ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್, ನನಗೆ ಗೊತ್ತಿರುವ ವಿಚಾರವನ್ನು ಸಿಸಿಬಿ ಮುಂದೆ ಹೇಳಿದ್ದೇನೆ. ಈ ಮೂಲಕ ಇಡೀ ಕರ್ನಾಟಕಕ್ಕೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಡ್ರಗ್ಸ್ ಸೇವನೆ ಮಾಡುವುದು ತಪ್ಪು ಎಂಬ ಸಂದೇಶ ಹೋಗಿದೆ. ಆದರೆ ನಾನು ಸಿಸಿಬಿಗೆ ಮಾಹಿತಿ ಕೊಟ್ಟ ನಂತರ ಆದ ಬೆಳವಣಿಗೆ ಅಷ್ಟು ಖುಷಿ, ಸಂತೋಷ ಕೊಟ್ಟಿಲ್ಲ. ಏನು ಆಗಬೇಕಿತ್ತೋ ಅದು ಇನ್ನೂ ಹೆಚ್ಚಾಗಿ ಆಗಬೇಕಿತ್ತು. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದರೂ ಎಲ್ಲೋ ಒಂದುಕಡೆ ಕೈ ಕಟ್ಟಿ ಹಾಕಿರುವಾಗಿದೆ ಎಂದು ಅಭಿಪ್ರಾಯಪಟ್ಟರು.
ಡ್ರಗ್ಸ್ ಮಾಫಿಯಾದಲ್ಲಿ ನಟಿಯಷ್ಟೇ ಅಲ್ಲ ನಟರು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳಿದ್ದಾರೆ. ಈವೆಂಟ್ ಮ್ಯಾನೇಜರ್ಗಳು, ಹಲವಾರು ರಾಜಕಾರಣಿಗಳು ಇದ್ದಾರೆ. ಆದರೆ ಇಲ್ಲಿ ಇಬ್ಬರೂ ನಟಿಯನ್ನು ಮಾತ್ರ ಅರೆಸ್ಟ್ ಮಾಡಿ, ಇಲ್ಲಿ ಎಲ್ಲೂ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ನಾಮಕಾವಸ್ಥೆಗೆ ಮಾಡಿದಂತೆ ಇದೆ. ಯಾವುದೇ ರಾಜಕೀಯ ವ್ಯಕ್ತಿಗಳ ಒತ್ತಡವಿಲ್ಲದೆ, ಯಾರ್ಯಾರು ದೊಡ್ಡ ವ್ಯಕ್ತಿಗಳಿದ್ದಾರೆ, ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಹಿರಿಯ ನಿರ್ದೇಶಕರ ಮಕ್ಕಳನ್ನು ಕರೆಸಿ ಕೂಲಂಕುಶವಾಗಿ ವಿಚಾರಣೆ ಮಾಡಬೇಕು. ಆಗ ನಿಮ್ಮ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ಕೊಟ್ಟದಂತಾಗುತ್ತದೆ ಎಂದು ಸಿಸಿಬಿ ತನಿಖೆ ಬಗ್ಗೆ ಮಾತನಾಡಿದರು.
ಸರ್ಕಾರದಲ್ಲೇ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗನನ್ನ ಯಾಕೆ ಇನ್ನೂ ಕರೆಸಿಲ್ಲ? ಎಂದು ಪ್ರಶ್ನೆ ಮಾಡಿದರು. ಇಲ್ಲಿ ಬೇರೇ ಇಲ್ಲದೆ ಇರುವವರನ್ನು ಕರೆದುಕೊಂಡು ಬಂದು ಸುಮ್ಮನೆ ವಿಚಾರಣೆ ಮಾಡುತ್ತಿದ್ದಾರೆ. ಹೀಗಾಗಿ ಇದು ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ನಡೆಸುತ್ತಿರುವ ವಿಚಾರಣೆ ಎಂದು ನಮಗೆ ಅನ್ನಿಸುತ್ತಿಲ್ಲ. ಇದು ಯಾವುದೇ ಲವ್ ಜಿಹಾದ್ ಅಲ್ಲ. ಡ್ರಗ್ ವಿಚಾರವನ್ನ ಡೈವರ್ಟ್ ಮಾಡಲು ಹೋಗಬೇಡಿ. ಒಬ್ಬ ನಟಿಗೆ ಲವ್ ಜಿಹಾದ್ ಮಾಡಲಿಕೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಒಬ್ಬ ನಟಿ ಒಂದು ಬಾರಿ ಹಂದಿ, ನಾಯಿ ಅಂತ ಹೇಳಿರುವುದು. ಆದರೆ ಅದನ್ನು ಹೇಳಿಸಿಕೊಂಡಿರುವುದು ಹತ್ತತ್ತು ಸಾರಿ ಹೇಳುವ ಮೂಲಕ ಹಾಸ್ಯಾಸ್ಪದ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಸಂಬರಗಿಗೆ ಇಂದ್ರಜಿತ್ ಟಾಂಗ್ ನೀಡಿದರು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಯ ಕೈವಾಡ ದೊಡ್ಡದಾಗಿದೆ. ಕರ್ನಾಟಕದಲ್ಲಿ ಸರಿಯಿಲ್ಲ ಅನ್ನಿಸುತ್ತದೆ. ಬಿಜೆಪಿ ಸರ್ಕಾರ ಇದೆ. ಆದರೆ ಕೇಂದ್ರ ಸರ್ಕಾರಕ್ಕೆ ಸರಿಯಾದ ವಿಷಯ ರವಾನೆ ಆಗುತ್ತಿರಲಿಲ್ಲ ಎಂದರು.
ಆದಿತ್ಯ ಆಳ್ವಾನ ಇನ್ನೂ ಬಂದಿಸಿಲ್ಲ. ಎ1 ಆರೋಪಿಯನ್ನ ಬಂಧಿಸಿಲ್ಲ. 12 ದಿನಗಳ ಬಳಿಕ ಒಂದಿಬ್ಬರನ್ನ ಬಂಧಿಸಿದ್ದಾರೆ. ಆದರೆ ನಟರ ಮಕ್ಕಳು, ರಾಜಕಾರಣಿ ಮಕ್ಕಳನ್ನ ಇನ್ನೂ ಯಾಕೆ ವಿಚಾರಣೆಗೆ ಕರೆಸಿಲ್ಲ. ಸುಶಾಂತ್ ಕೇಸ್ ಕೂಡ ಸೂಸೈಡ್ ಅಂತ ಹೇಳಿದರು. ಆದರೆ ಸಿಸಿಬಿಗೆ ಕೇಸ್ ಒಪ್ಪಿಸಲಾಗಿದೆ. ಇಲ್ಲೂ ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ. ಇಂದು ವಿರೋಧ ಪಕ್ಷ ಕೇಳಬೇಕಾದ ಪ್ರಶ್ನೆಯನ್ನು ಮಾಧ್ಯಮ ಕೇಳುತ್ತಿದೆ. ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟು ಬಿಡಿ ಅಂತಿದ್ದಾರೆ ಎಂದು ಇಂದ್ರಜಿತ್ ಹೇಳಿದರು.
ಡ್ರಗ್ ಮಾಫಿಯಾ ಸಣ್ಣ ವಿಷಯ ಅಲ್ಲ. ರಾಜಕಾರಣಿ ಪುತ್ರ ಎಂದು ಆಳ್ವಾನನ್ನು ಅರೆಸ್ಟ್ ಮಾಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರ ಇದ್ದಾನೆ. ಅವನು ಪೆಡ್ಲರ್, ಅವನನ್ನ ಯಾಕೆ ಕರೆದು ವಿಚಾರಣೆ ಮಾಡುತ್ತಿಲ್ಲ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತ್ಯಾಪೆ ಕೆಲಸ ಮಾಡಬೇಡಿ. ವಿಚಾರಣೆಯನ್ನ ಕೇವಲ ನೆಪವಾಗಿ ಮಾಡಬೇಡಿ. ರಾಜಕೀಯ ಪಕ್ಷದ ಮಕ್ಕಳನ್ನ ಕರೆಸಬೇಕು. ಹಳೆಯ ಡ್ರಗ್ ಪ್ರಕರಣಗಳನ್ನ ಕೆದಕಿದರೆ ಇನ್ನೂ ಸಾಕಷ್ಟು ಪ್ರಕರಣ ಬಯಲಿಗೆ ಬರುತ್ತೆ. ಆದರೆ ಈಗ ಪ್ರಕರಣದ ತನಿಖೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರಿಗೆ ರಾಜಕೀಯ ಪ್ರಭಾವ ಇಲ್ಲ ಅಂತವರನ್ನ ಕರೆದು ವಿಚಾರಣೆ ಮಾಡುತ್ತಿದ್ದಾರೆ. ಯಾರು ಸರ್ಕಾರದಿಂದ ಈ ಪ್ರಕರಣ ಮುಚ್ಚು ಹಾಕಲು ಒತ್ತಡ ಹಾಕ್ತಿರೋರು? ಆ ವಿಚಾರ ಯಾರು ಮಾತನಾಡುತ್ತಿಲ್ಲ. ಅವರಿಗೂ ಡ್ರಗ್ ಮಾಫಿಯಾಗೂ ಏನ್ ಕನೆಕ್ಷನ್ ಇದೆ? ಅನ್ನೋದರ ಬಗ್ಗೆ ತನಿಖೆ ಆಗಬೇಕು. ಡ್ರಗ್ ಮಾಫಿಯಾ ಚಿಕ್ಕ ವಿಷಯ ಅಲ್ಲ. ಚಿಕ್ಕ ಮಕ್ಕಳಿಗೆ ಚಾಕ್ಲೇಟ್ ರೀತಿ ಸಿಗುತ್ತಿದೆ. ತನಿಖೆ ಸರಿಯಾಗಿ ಆದರೆ ಪೆಟ್ಟಿಗೆಯಲ್ಲಿರುವ ಶವಗಳು ಆಚೆ ಬರುತ್ತದೆ ಎಂದು ಇಂದ್ರಜಿತ್ ಹೇಳಿದರು.
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ನಟಿ ರಾಣಿಗೆ ಜೈಲು ಸೇರಿದಂತೆ ಮಗಳ ಪ್ರೀತಿಯ ಮನೆಯನ್ನು ಅವರ ತಂದೆ ನಿವೃತ್ತ ಸೇನಾಧಿಕಾರಿ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು
ಯಲಹಂಕದ ಅನನ್ಯ ಅಪಾರ್ಟ್ಮೆಂಟ್ನಲ್ಲಿ ರಾಗಿಣಿ ಅವರ ಫ್ಲ್ಯಾಟ್ ಇತ್ತು. ಇದೀಗ ಆ ಫ್ಲ್ಯಾಟನ್ನು ನಟಿ ರಾಗಿಣಿ ತಂದೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಮಗಳ ಪ್ರೀತಿಯ ಮನೆಯನ್ನು ಬರೋಬ್ಬರಿ ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?
ಈ ಅಪಾರ್ಟ್ಮೆಂಟ್ ಮಾಲೀಕರು ರಾಗಿಣಿಯ ತಂದೆ ರಾಕೇಶ್ ದ್ವಿವೇದಿ ಆಗಿದ್ದಾರೆ. ಹೀಗಾಗಿ ಅವರೇ 3 ಬಿಎಚ್ಕೆ ಫ್ಲ್ಯಾಟನ್ನು ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ. ನ್ಯಾಯಾಂಗ ಬಡಾವಣೆಯಲ್ಲಿ ಈ ಅನನ್ಯ ಅಪಾರ್ಟ್ಮೆಂಟ್ ಇದ್ದು, ಇದರಲ್ಲಿ ನಟಿ ರಾಗಿಣಿ ಎರಡು ಫ್ಲ್ಯಾಟ್ ಹೊಂದಿದ್ದಾರೆ. ಅದರಲ್ಲಿ ಒಂದು ಮನೆಯನ್ನು ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ. ಮನೆ ಸೇಲ್ಗಿಟ್ಟಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ.
ಡ್ರಗ್ಸ್ ಮಾಫಿಯಾಗೆ ಸಂಬಂಧಪಟ್ಟಂತೆ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿಗೆ ನೋಟಿಸ್ ಕೊಟ್ಟಿದ್ದರು. ಆದರೆ ನಟಿ ರಾಗಿಣಿ ಬೇರೆ ಬೇರೆ ಕಾರಣ ಹೇಳುವ ಮೂಲಕ ವಿಚಾರಣೆಗೆ ಹಾಜರಾಗುವುದನ್ನು ತಡ ಮಾಡಿದ್ದರು. ಆಗ ಸಿಸಿಬಿ ಪೊಲೀಸರು ಇದೇ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದರು. ಸುಮಾರು ಮೂರು-ನಾಲ್ಕು ಗಂಟೆಗಳು ಕಾಲ ಸಿಸಿಬಿ ಅವರು ರೇಡ್ ಮಾಡಿದ ಬಳಿಕ ನಟಿ ರಾಗಿಣಿಯನ್ನು ವಶಪಡಿಸಿಕೊಂಡು ಸಿಸಿಬಿ ಕಚೇರಿಗೆ ವಿಚಾರಣೆಗೆಂದು ಕರೆದುಕೊಂಡು ಹೋಗಿ ಬಳಿಕ ಅರೆಸ್ಟ್ ಮಾಡಿದ್ದರು.
ಕಳೆದ 12 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿ ರಾಗಿಣಿ ಮುಂದಿನ 14 ದಿನ ಅಂದರೆ ಸೆಪ್ಟೆಂಬರ್ 28ರವರೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಇರಲಿದ್ದಾರೆ. ಸಿಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ರಾಗಿಣಿಯನ್ನು ಪರಪ್ಪನ ಅಗ್ರಹಾರದಲ್ಲಿರೋ ಸೆಂಟ್ರಲ್ ಜೈಲಿಗೆ ಕಳಿಸಿದ್ದಾರೆ. ಮಡಿವಾಳದ ಎಫ್ಎಸ್ಎಲ್ ಕೇಂದ್ರದಿಂದ ಸೋಮವಾರ ಸಂಜೆ 7 ಗಂಟೆ ಹೊತ್ತಿಗೆ ನಟಿ ರಾಗಿಣಿ ಸೇರಿ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ನಟಿ ರಾಗಿಣಿ ಜೈಲು ಸೇರಿದ್ದಾರೆ. ಸದ್ಯಕ್ಕೆ ನಟಿ ಸಂಜನಾ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಇದೀಗ ಇಬ್ಬರು ನಟಿಯರು ಸಿಸಿಬಿ ವಿಚಾರಣೆ ವೇಳೆ ತಮ್ಮ ತಮ್ಮ ಲವ್ ಬ್ರೇಕಪ್ ಆಗಿರುವ ಬಗ್ಗೆ ಹೇಳಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ನಟಿ ರಾಗಿಣಿ ಮತ್ತು ಸಂಜನಾ ಇಬ್ಬರಿಗೂ ಲವ್ ಬ್ರೇಕಪ್ ನೋವು ಕಾಡುತ್ತಿದೆ ಎನ್ನಲಾಗಿದೆ. ಸಿಸಿಬಿ ತನಿಖೆ ವೇಳೆಯಲ್ಲಿ ನಟಿಯರಿಬ್ಬರು ಸಿಸಿಬಿ ಮುಂದೆ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಡ್ರಗ್ಸ್ ಪ್ರಕರಣದ ಆರೋಪಿ 1 ಶಿವಪ್ರಕಾಶ್ ಹಾಗೂ ರಾಗಿಣಿ ನಡುವೆ ಲವ್ ಬ್ರೇಕಪ್ ಆಗಿ ಸುಮಾರು ಮೂರು ವರ್ಷ ಆಗಿದೆಯಂತೆ. ಇದನ್ನೂ ಓದಿ: ಮಧ್ಯರಾತ್ರಿವರೆಗೂ ಕಣ್ಣೀರಾಕುತ್ತಾ ಕುಳಿತ ರಾಗಿಣಿ – ಬುಕ್ ಓದಿದ ನಂತ್ರ ಜಂಖಾನ ಹಾಸ್ಕೊಂಡು ನಟಿ ನಿದ್ದೆ
3 ವರ್ಷದ ಹಿಂದೆಯೇ ಆರೋಪಿ ಶಿವಪ್ರಕಾಶ್ಗೆ ಏನು ನೀಡಬೇಕಿತ್ತೋ ಅದನ್ನು ಆತನಿಗೆ ನೀಡಿದ್ದು, ಆತನಿಂದ ತೆಗೆದುಕೊಳ್ಳುವುದನ್ನ ತೆಗೆದುಕೊಂಡು ದೂರವಾಗಿದ್ದೇನೆ. ಹೀಗಾಗಿ ಮೂರು ವರ್ಷದಿಂದ ನನಗೂ ಅವನಿಗೂ ಯಾವುದೇ ಸಂಬಂಧ ಇಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ರೆಸ್ಟೋರೆಂಟ್ನಲ್ಲಿ ಆದ ಗಲಾಟೆ ಅನಿರೀಕ್ಷಿತ ಎಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಕನ್ನಡದ ಮೊದಲ ನಟಿ ಜೈಲಿಗೆ – ಕೋರ್ಟಿನಲ್ಲಿ ಇಂದು ಏನೇನಾಯ್ತು?
ಇನ್ನೂ ನಟಿ ಸಂಜನಾ ಕೂಡ ತಮ್ಮ ಲವ್ ಬ್ರೇಕಪ್ ಬಗ್ಗೆ ಸಿಸಿಬಿ ಮುಂದೆ ಹೇಳಿದ್ದಾರೆ. ನಾನು ಹಾಗೂ ವೈದ್ಯ ಅಜೀಜ್ ಪಾಷ ಒಟ್ಟಿಗೆ ಇಲ್ಲ. ನನಗೂ ಅವರಿಗೂ ಬ್ರೇಕಪ್ ಆಗಿ ವರ್ಷವೇ ಕಳೆದಿದೆ. ಮದುವೆ ಆಗುವ ತೀರ್ಮಾನ ಮಾಡಿದ್ದೆವು. ಆದರೆ ಮದುವೆ ಆಗಿರಲಿಲ್ಲ. ಆದರೆ ಕಳೆದ 1 ವರ್ಷದಿಂದ ಇಬ್ಬರು ದೂರವಾಗಿದ್ದೇವೆ. ಹೀಗಾಗಿ ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ತನಿಖೆ ವೇಳೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಮತ್ತೊಂಡೆದೆ ಡ್ರಗ್ಸ್ ಕೇಸ್ನಿಂದ ಬಚಾವಾಗಲು ರಾಗಿಣಿ ಈ ಬ್ರೇಕಪ್ ಕಥೆ ಹೇಳಿದ್ದಾರಾ? ಎಂಬ ಅನುಮಾನ ಮೂಡಿದೆ. ಇನ್ನೂ ಭಾವಿ ಪತಿಯನ್ನು ಸೇಫ್ ಮಾಡಲು ಸಂಜನಾ ಈ ಪ್ರೇಮದ ಸ್ಟೋರಿ ಹೇಳಿದ್ದಾರಾ ಎಂದು ಪ್ರಶ್ನೆ ಮೂಡಿದೆ. ಆದರೆ ಡ್ರಗ್ಸ್ ಕೇಸಲ್ಲಿ ಸಿಕ್ಕಿಬಿದ್ದ ನಟಿಯರಿಬ್ಬರು ಮೂರು ವರ್ಷ ಹಾಗೂ ಒಂದು ವರ್ಷದ ಬ್ರೇಕಪ್ ಸ್ಟೋರಿಯನ್ನು ಪೊಲೀಸರ ಮುಂದಿಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಸಂಜನಾ ಮದುವೆ:
ಸಿಸಿಬಿ ಪೊಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೋಟೋವೊಂದು ಹೊರಬಿದ್ದಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ.
– ಕಿಕ್ಕೇರಿಸಿ ಪೂಲ್ ಪಾರ್ಟಿ, ಹೋಲಿ ಪಾರ್ಟಿ
– ನಟಿಯರ ಮೂಲಕ ಪಾರ್ಟಿ ಆಯೋಜಿಸಿ ಹಣ ಮಾಡ್ತಿದ್ದ ಖನ್ನಾ?
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣವನ್ನು ಬೇಧಿಸುತ್ತಿರುವ ಸಿಸಿಬಿ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಒಂದು ಕಡೆ ರಾಜಕಾರಣಿ ಹಾಗೂ ಬ್ಯುಸಿನೆಸ್ ಮೆನ್ ಮಕ್ಕಳಿದ್ರೆ, ಇನ್ನೊಂದೆಡೆ ಹತ್ತಾರು ಮಾದರಿಯ ಪಾರ್ಟಿಗಳಲ್ಲಿ ನಟಿ ಮಣಿಯರು ಕಿಕ್ಕೇರಿಸಿಕೊಂಡು ಕುಣಿದಿರುವ ವಿಡಿಯೋಗಳು ಲಭ್ಯವಾಗುತ್ತಿವೆ.
ನಟಿ ಮಣಿಯರ ಪಾರ್ಟಿಗಳಿಗೆ ಡ್ರಗ್ಸ್ ಡೀಲರ್ ವೀರೇನ್ ಖನ್ನಾ ಸೂತ್ರದಾರ ಎಂದು ಹೇಳಲಾಗಿದ್ದು, ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ವಿವಿಧ ಬಗೆಯ ಪಾರ್ಟಿಗಳ ಪ್ಲಾನ್ ಮಾಡಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ. ವೀಕೆಂಡ್ ನಲ್ಲಿ ಪೂಲ್ ಪಾರ್ಟಿ ಆಯೋಜಿಸಿ ಖನ್ನಾ ಕಿಕ್ಕೇರಿಸುತ್ತಿದ್ದ. ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ಸಂದರ್ಭಕ್ಕೆ ತಕ್ಕ ಪಾರ್ಟಿ ಆಯೋಜಿಸಿ ಹಣ ಕೀಳುತ್ತಿದ್ದ. ಸ್ಟಾರ್ ಹೋಟೆಲ್ ಗಳ ಪೂಲ್ ಬಳಿ ಪಾರ್ಟಿ ಆಯೋಜಿಸಿ, ನಶೆಯೇರಿಸುತ್ತಿದ್ದ ಎನ್ನಲಾಗಿದೆ.
ಪಕ್ಕಾ ಪ್ಲಾನ್ ಮಾಡಿ ಪಾರ್ಟಿ ಆಯೋಜಿಸಿ ಸಖತ್ ಹಣ ಮಾಡುತ್ತಿದ್ದ ಖನ್ನಾ, ಪಾರ್ಟಿ ಪ್ಲಾನ್ ಇವನದ್ದು, ಆಯೋಜನೆ ಎಲ್ಲಾ ಹೋಟೆಲ್ ನವರದ್ದು. ಹೀಗೆ ಪಾರ್ಟಿ ಆಯೋಜಿಸಿ ಬಂದ ಹಣದಲ್ಲಿ ಹೋಟೆಲ್ನವರಿಂದ ಖನ್ನಾ ಪರ್ಸೆಂಟೇಜ್ ಪಡೆಯುತ್ತಿದ್ದ. ಪ್ರತಿ ಟೇಬಲ್ ಗೆ 25,000 ಎಂಟ್ರಿ ಫೀಸ್ ಇಡುತ್ತಿದ್ದ. ಪೂಲ್ ಪಾರ್ಟಿಗೆ ನಟ, ನಟಿಯರು, ವಿಐಪಿಗಳಂಥ ಗೆಸ್ಟ್ ಗಳನ್ನು ಸಹ ಕರೆ ತರುತ್ತಿದ್ದ ಎಂದು ತಿಳಿದು ಬಂದಿದೆ.
ಒಂದೆರಡು ಪೂಲ್ ಪಾರ್ಟಿಗಳಲ್ಲಿ ನಟಿ ಸಂಜನಾ ಸಹ ಭಾಗವಹಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇದೀಗ ಸಂಜನಾ ಪೂಲ್ ಸ್ವಿಮ್ಮಿಂಗ್ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋ ಆಧರಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ನಟಿಯರು ಪೂಲ್ ಪಾರ್ಟಿಯಲ್ಲಿ ಭಾಗವಹಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.