Tag: Cauvery River

  • ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    -ಯುವಕ, ಯುವತಿಯರ ಅಸಭ್ಯ ವರ್ತನೆ ತಡೆಯಲು

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆಯನ್ನು ಕಾವೇರಿ ನದಿ ತೀರದಲ್ಲಿ ಫುಲ್ ಮೋಜು ಮಸ್ತಿ ಮೂಲಕ ಎಂಜಾಯ್ ಮಾಡಬೇಕು ಅಂದುಕೊಂಡಿದ್ದ ಜನರಿಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಶಾಕ್ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರವಾಸಿ ಸ್ಥಳ ಸೇರಿದಂತೆ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಂಡ್ಯ ಎಸ್‍ಪಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಡಿಸಂಬರ್ 31 ಮತ್ತು ಜನವರಿ 01ಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ತೀರದಲ್ಲಿ ಬರುವ ಪ್ರವಾಸಿ ಸ್ಥಳಗಳು, ಮಳವಳ್ಳಿ ತಾಲೂಕಿನ ಪ್ರವಾಸಿ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಬಲಮುರಿ, ಎಡಮುರಿ, ಸಂಗಮ, ಕರಿಘಟ್ಟ ಸೇರಿದಂತೆ ಇನ್ನಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಇದಲ್ಲದೇ ಮಳವಳ್ಳಿ ತಾಲೂಕಿನ ಮುತ್ತತ್ತಿಗೂ ಸಹ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಪ್ರಮುಖವಾಗಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ:
    ಮಂಡ್ಯ ಜಿಲ್ಲೆ ಎಂದರೆ ಕಾವೇರಿ ನದಿ ತೀರದ ಜಿಲ್ಲೆ ಎಂದು ರಾಜ್ಯದಲ್ಲಿ ಹೆಸರುವಾಸಿ ಪಡೆದಿದೆ. ಕಾವೇರಿ ತೀರದಲ್ಲಿ ಹಲವು ರಮಣೀಯವಾದ ಪ್ರವಾಸಿ ಸ್ಥಳಗಳು ಇವೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಈ ಭಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅಪಾರ ಜನರು ಬಂದು ಮೋಜು ಮಸ್ತಿ ಮಾಡುತ್ತಾರೆ. ಇಲ್ಲೆ ಮಂಸಾಹಾರವನ್ನು ತಯಾರು ಮಾಡಿಕೊಂಡು ಮದ್ಯಪಾನ ಸೇವನೆ ಮಾಡಿಕೊಂಡು ಫುಲ್ ಎಂಜಾಯ್ ಮಾಡ್ತಾರೆ. ಈ ವೇಳೆ ಈ ಭಾಗದಲ್ಲಿ ಸಾಕಷ್ಟು ಅವಘಡಗಳು ಸಹ ಜರುಗಿವೆ. ಅಲ್ಲದೆ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತದೆ. 2013 ರಿಂದ 2019ನೇ ಸಾಲಿನ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸುಮಾರು 55 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಈ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್‍ಪಿ ಪರಶುರಾಮ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಅಸಭ್ಯ ವರ್ತನೆ ತಡೆಯುವ ಉದ್ದೇಶ:
    ಇತ್ತೀಚಿಗೆ ದೇಶದ ಹಲವು ಭಾಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಕಾವೇರಿ ನದಿ ತೀರದ ಪ್ರದೇಶಗಳಲ್ಲೂ ಸಹ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಒಂದು ಘಟನೆಗಳನ್ನು ತಡೆಯುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ.

    ಪೇಜಾವರ ಶ್ರೀಗಳ ಶೋಕಾಚರಣೆ:
    ರಾಜ್ಯದಲ್ಲಿ ಮೂರು ದಿನಗಳ ಕಾಲ ಪೇಜಾವರ ಶ್ರೀಗಳ ನಿಧನ ಹಿನ್ನೆಲೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಾದ್ಯಾಂತ ಹೊಸ ವರ್ಷ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವಂತಿಲ್ಲ. ಅತೀ ಹೆಚ್ಚು ಸೌಂಡ್‍ ಕೊಟ್ಟುಕೊಂಡು ಧ್ವನಿ ವರ್ಧಕಗಳನ್ನು ಸಹ ಬಳಸಿಕೊಳ್ಳುವ ಹಾಗೆ ಇಲ್ಲ. ಸರಳವಾಗಿ ಸಂಭ್ರಮಾಚರಣೆ ಆಚರಣೆ ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.

  • ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕಾವೇರಿ ಒಡಲಿಗೆ ಕಲ್ಲು ಬೀಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

    ಕೊಡಗು: ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ನದಿಪಾತ್ರದ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿರುವುದು ಕಾವೇರಿ ನದಿ ಉಕ್ಕಿ ಹರಿಯೋದಕ್ಕೆ ಕಾರಣ ಎನ್ನೋದು ಸಾಬೀತಾಗಿದೆ. ಇಷ್ಟೆಲ್ಲಾ ಆದರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಕೆಲ ಮಂದಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು, ಮಣ್ಣು ಸುರಿದು ಸಮತಟ್ಟು ಮಾಡುತ್ತಿದ್ದಾರೆ. ಆದರೆ ಇತ್ತ ಗಮನ ಕೊಡದೇ ಸ್ಥಳೀಯ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುತ್ತಮುತ್ತಲು ಹರಿಯುತ್ತಿರುವ ಕಾವೇರಿ ನದಿಯ ಒಡಲು ಇದೀಗ ಬರಿದಾಗುತ್ತಿದೆ. ನದಿಯ ಒಂದಡಿ ಜಾಗವನ್ನು ಬಿಡದಂತೆ ಮನೆಗಳನ್ನು ನಿರ್ಮಿಸಿರುವುದು ಅದಕ್ಕೆ ಕಾರಣವಾಗಿದೆ. ಹಲವರು ನದಿ ಪಾತ್ರದ ಜಾಗಗಳನ್ನು ಒತ್ತುವರಿ ಮಾಡಿ ಲೇಔಟ್‍ಗಳನ್ನು ಮಾಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಕೊಡಗಿನಲ್ಲಿ ಎರಡು ದಿನ ಮಳೆ ಸುರಿದರೆ ಸಾಕು ಪ್ರವಾಹ ಸೃಷ್ಟಿಯಾಗಿ ಬಿಡುತ್ತದೆ.

    ಈ ಬಗ್ಗೆ ಗೊತ್ತಿದ್ದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆಯಲ್ಲಿ ಕಾವೇರಿ ನದಿಗೆ ಸಾವಿರಾರು ಲೋಡ್ ಕಲ್ಲು ಮಣ್ಣನ್ನು ತುಂಬಲಾಗಿದೆ. ಇದರ ಜೊತೆಗೆ ಬರೋಬ್ಬರಿ 20 ಅಡಿ ಆಳದಷ್ಟು ನದಿಯ ಪಕ್ಕದಲ್ಲಿ ಇರುವ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಬ್ಬಾಲೆ ಕ್ಷೇತ್ರದ ಶ್ರೀನಿವಾಸ್ ಅವರು ತಮ್ಮ ಜಮೀನಿನಲ್ಲಿದ್ದ ದೊಡ್ಡ ಗುಡ್ಡವೊಂದನ್ನು ಅಗೆಸಿ, ಅಲ್ಲಿನ ಭಾರೀ ಗಾತ್ರದ ಕಲ್ಲು, ಮಣ್ಣನ್ನು ಕಾವೇರಿ ನದಿಗೆ ತುಂಬಿಸಿದ್ದಾರೆ. ಯಾಕೆ ಹೀಗೆ ಕಲ್ಲು, ಮಣ್ಣು ತುಂಬುತ್ತಿದ್ದೀರಾ ಎಂದು ಪ್ರಶ್ನಿಸಿದರೆ ಕಣಿವೆ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನದಿ ಹರಿಯುತ್ತಿದ್ದು, ಅದರ ರಕ್ಷಣೆಗೆ ಹಾಕುವಂತೆ ಜನರು ಆಗ್ರಹಿಸಿದ್ದಕ್ಕೆ ತುಂಬಿಸಿದ್ದೇನೆ ಎಂದಿದ್ದಾರೆ.

    ನದಿಯಿಂದ ಬರೋಬ್ಬರಿ 900 ಅಡಿ ಜಾಗ ಬಫರ್ ಜೋನ್ ಆಗಿದ್ದು, ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ಕಣಿವೆ ಜಾಗದಲ್ಲಿಯೇ ಹಾರಂಗಿಯಿಂದ ಹರಿದು ಬರುವ ಸಾವಿರಾರು ಕ್ಯೂಸೆಕ್ ನೀರು ಕೂಡ ಕಾವೇರಿ ನದಿ ಸೇರುತ್ತದೆ. ಆದರೆ ಹೀಗೆ ನದಿಗೆ ಸಾವಿರಾರು ಲೋಡ್ ಮಣ್ಣು ತುಂಬಿದರೆ ಕಾವೇರಿ ನೀರು ಮತ್ತು ಹಾರಂಗಿ ನೀರು ಎಲ್ಲಿ ಹರಿದು ಹೋಗಬೇಕು? ನದಿಯ ಜಾಗ ದೊಡ್ಡ ಗಾತ್ರದಲ್ಲಿ ಇರುವಾಗಲೇ ಕಾವೇರಿ ನೀರು ಉಕ್ಕಿ ಹರಿದು ಕಣಿವೆ, ಕೂಡುಮಂಗಳೂರು, ಕುಶಾಲನಗರದ ಹಲವು ಬಡಾವಣೆ ಸೇರಿದಂತೆ ಮೂರ್ನಾಡುವರೆಗೆ ಹಲವು ಗ್ರಾಮಗಳು ಮುಳುಗಿದ್ದವು. ಇಷ್ಟೆಲ್ಲಾ ಸಮಸ್ಯೆ ಎದುರಾಗಿರುವಾಗಲೂ ಕಾವೇರಿಗೆ ಇಷ್ಟೊಂದು ಮಣ್ಣು ತುಂಬುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ.

  • ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಮೇಲೆಯೇ ಜನರ ‘ಸಾವಿನ ನಡಿಗೆ’

    -ಪ್ರವಾಹ ಇಳಿದು ತಿಂಗಳಾದ್ರೂ ಆಗಿಲ್ಲ ಸೇತುವೆ ದುರಸ್ತಿ ಕಾರ್ಯ

    ಮಡಿಕೇರಿ: ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಬಿಟ್ಟೆರೆ ಬೇರೆ ಮಾರ್ಗವಿಲ್ಲದೆ, ಅಲ್ಲಲ್ಲಿ ಕಿತ್ತುಹೋಗಿ ದುಸ್ಥಿತಿಯಲ್ಲಿರುವ ತೂಗು ಸೇತುವೆ ಮೇಲೆಯೇ ನೂರಾರು ಜನರು ಭಯದಿಂದ ಓಡಾಟ ನಡೆಸುತ್ತಿದ್ದಾರೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆ ತೂಗುಸೇತುವೆ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಆದ್ದರಿಂದ ಸೇತುವೆಯ ಕೆಳಭಾಗ ಅಲ್ಲಲ್ಲಿ ಕಿತ್ತು ಹೋಗಿದೆ. ಯಾವಾಗ ಬೇಕಾದರು ಬೀಳುವ ಪರಿಸ್ಥಿತಿಯಲ್ಲಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕಣಿವೆ ತೂಗುಸೇತುವೆ ಇದಾಗಿದ್ದು, ಚನ್ನಕೇಶವಪುರ, ದಿಂಡಗಾಡು, ಅಂಬಲಾರೆ ಸೇರಿ 13 ಗ್ರಾಮಗಳಿಗೆ ಸಂಪರ್ಕ ಸೇತುವೆ ಆಗಿದೆ. ಆದ್ದರಿಂದ ಬೇರೆ ಮಾರ್ಗವಿಲ್ಲದೆ ಜನರು ಇದರ ಮೇಲೆ ಭಯದಿಂದ, ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆ.

    ಈಗಲೂ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಸ್ವಲ್ಪ ಯಾಮಾರಿ ಜಾರಿಬಿದ್ದರೆ ಜನರು ನೇರವಾಗಿ ನೀರು ಪಾಲಾಗುತ್ತಾರೆ. ಅಲ್ಲದೆ ಬೇರೆ ಮಾರ್ಗವಿಲ್ಲದ ಕಾರಣಕ್ಕೆ ಕೂಡಿಗೆ, ಹೆಬ್ಬಾಲೆಯ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಸೇತುವೆ ಮೂಲಕ ಹಾದು ಹೋಗುತ್ತಾರೆ.

    ಜಿಲ್ಲೆಯಲ್ಲಿ ಪ್ರವಾಹ ಇಳಿದು ತಿಂಗಳಾದರೂ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಸರಿಯಾಗಿ ಸ್ಪಂದಿಸಿಲ್ಲ. ಜನ ಕಷ್ಟ ಪಡುತ್ತಿದ್ದಾರೆ ಎಂದು ತಿಳಿದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಕೊಟ್ಟಿಲ್ಲ. ತೂಗು ಸೇತುವೆ ದುರಸ್ಥಿ ಕಾರ್ಯವನ್ನು ಕೂಡ ಮಾಡಿಸಿಲ್ಲ. ಆದ್ದರಿಂದ ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೇತುವೆ ದುರಸ್ತಿ ಕಾರ್ಯ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ಚಾಮರಾಜನಗರ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎರಡು ದಿನಗಳಿಂದ ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದವು. ಆದರೆ ಈಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಇದೀಗ ಮಳೆ ಅಬ್ಬರ ಕೊಂಚ ತಗ್ಗಿರುವ ಕಾರಣಕ್ಕೆ ಭಾರೀ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅವುಗಳನ್ನು ಬಿಟ್ಟು ಇತರೆ ಕಾರು, ಬೈಕ್‍ಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಕಾವೇರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮತ್ತಷ್ಟು ಕುಸಿಯುವ ಹಂತಕ್ಕೆ ಬಂದಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಕುಸಿದು ಹೋಗಿತ್ತು. ಉಕ್ಕಿ ಹರಿಯುವ ನದಿ ನೀರಿನ ಹೊಡೆತಕ್ಕೆ ಸೇತುವೆ ಮತ್ತಷ್ಟೂ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಅಬ್ಬರಕ್ಕೆ ಸೇತುವೆ ಕುಸಿದು ಇತಿಹಾಸದ ಪುಟ ಸೇರುತ್ತಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

  • ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಕೆ.ಆರ್.ಎಸ್ ನಿಂದ ನೀರು ಬಿಡುಗಡೆ-ಮುಳುಗೋ ಭೀತಿಯಲ್ಲಿ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ

    ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟಿನಿಂದ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದೆ.

    ವೆಲ್ಲೆಸ್ಲಿ ಸೇತುವೆ ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಇತಿಹಾಸ ಪ್ರಸಿದ್ಧವಾದ ಈ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆಯ ಅಕ್ಕ ಪಕ್ಕ ಇರುವ ತೋಟಗಳು ಸಂಪೂರ್ಣ ಜಲಾವೃತವಾಗಿದೆ.

    ತೆಂಗಿನ ಮರದ ಅರ್ಧದವರೆಗೂ ನೀರು ಆವರಿಸಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ವೆಲ್ಲೆಸ್ಲಿ ಸೇತುವೆ ಬಳಿ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಕೆ.ಆರ್.ಎಸ್ ನಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ವೆಲ್ಲಿಸ್ಲಿ ಸೇತುವೆ ಬಳಿಯಿರುವ ರಾಮಕೃಷ್ಣ ಮಠ ಕೂಡ ಜಲಾವೃತವಾಗಿದೆ.

    ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ 118.75 ಅಡಿ ಇದೆ. 1,87,721 ಕ್ಯೂಸೆಕ್ ಒಳಹರಿವು ಇದ್ದರೆ 1,19,997 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಎತ್ತರದ ಡ್ಯಾಂನಲ್ಲಿ ಪ್ರಸ್ತುತ 41.484 ಟಿಎಂಸಿ ನೀರು ಸಂಗ್ರಹಗೊಂಡಿದೆ.

  • ರಂಗನತಿಟ್ಟುವಿನಲ್ಲಿ ಬೋಟಿಂಗ್ ಸ್ಟಾಪ್, ಸೆಲ್ಫಿ ನಿಷೇಧ

    ರಂಗನತಿಟ್ಟುವಿನಲ್ಲಿ ಬೋಟಿಂಗ್ ಸ್ಟಾಪ್, ಸೆಲ್ಫಿ ನಿಷೇಧ

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟಿನಿಂದ 1 ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ಮೈಸೂರು ಉಪವಲಯ ಅರಣ್ಯಾಧಿಕಾರಿ ಅಲೆಕ್ಸಾಂಡರ್ ಭೇಟಿ ನೀಡಿದ್ದಾರೆ.

    ಪಕ್ಷಿಧಾಮದ ವೀಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷಿಧಾಮದ ಇತಿಹಾಸ ನೋಡಿದರೆ ಎರಡು ಲಕ್ಷ ಕ್ಯೂಸೆಕ್ ನೀರು ಬಿಟ್ಟರೂ ಯಾವುದೇ ತೊಂದರೆ ಆಗಲ್ಲ. ಕಳೆದ ಸಾಲಿನಲ್ಲಿ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರು. ಆ ಸಮಯದಲ್ಲಿ ಪಕ್ಷಿಗಳಿಗೆ ಏನೂ ಸಮಸ್ಯೆ ಆಗಿಲ್ಲ. ಪಕ್ಷಿಗಳು ಮರದ ತುದಿಯಲ್ಲಿ ಗೂಡು ಕಟ್ಟುವುದರಿಂದ ಸಮಸ್ಯೆ ಎದುರಾಗಲ್ಲ. ಆದರೆ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್ ಸ್ಟಾಪ್ ಮಾಡಿದ್ದೇವೆ ಎಂದರು.

    ಪ್ರವಾಸಿಗರು ನೋಡಲು ಪಕ್ಷಿಧಾಮಕ್ಕೆ ಬರಬಹುದು. ಆದರೆ ನದಿ ದಡಕ್ಕೆ ಯಾರನ್ನೂ ಬಿಡುವುದಿಲ್ಲ. ಈ ಸಮಯದಲ್ಲಿ ಸ್ಥಳೀಯ ಪಕ್ಷಿಗಳು ಪಕ್ಷಿಧಾಮದಲ್ಲಿ ಇರುತ್ತವೆ. ಆದರೆ ಹೊರಗಿನಿಂದ ಬರುವ ಪಕ್ಷಿಗಳು ಇರುವುದು ಕಡಿಮೆ. ಪ್ರವಾಸಿಗರು ಯಾವುದೇ ವಿಧವಾದ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

    ರಂಗನತಿಟ್ಟು ಪಕ್ಷಿಧಾಮದಲ್ಲೂ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದಾಗಿ ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಯಾಕಂದರೆ ಬೋಟಿಂಗ್ ಬಳಿ ಮೆಟ್ಟಿಲವರೆಗೂ ನೀರು ಆವರಿಸಿದೆ. ಸದ್ಯಕ್ಕೆ ಪಕ್ಷಿಗಳಿಗೆ ಯಾವುದೇ ಅಪಾಯವಿಲ್ಲ ಎಂದರು.

    ನದಿ ದಡದ ಜಮೀನುಗಳಿಗೆ ನೀರು ನುಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇಂದು ರಜಾ ದಿನವಾದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ಕೆಆರ್‍ಎಸ್, ಪಕ್ಷಿಧಾಮ ಸೇರಿದಂತೆ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ನದಿಗಿಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

  • ಕೊಡಗಿನಲ್ಲಿ ಕೊಚ್ಚಿಹೋಯ್ತು ನಾಲ್ಕು ಎಕ್ರೆ ಕಾಫಿತೋಟ – ಬಿರುನಾಣಿಯಲ್ಲಿ ಭಾರೀ ಭೂಕುಸಿತ

    ಕೊಡಗಿನಲ್ಲಿ ಕೊಚ್ಚಿಹೋಯ್ತು ನಾಲ್ಕು ಎಕ್ರೆ ಕಾಫಿತೋಟ – ಬಿರುನಾಣಿಯಲ್ಲಿ ಭಾರೀ ಭೂಕುಸಿತ

    ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಈ ನಡುವೆ ವರುಣನ ರೌದ್ರಾವತಾರಕ್ಕೆ ಭೂಕುಸಿತವಾಗಿ ನಾಲ್ಕು ಎಕ್ರೆ ಕಾಫಿತೋಟ ಕೊಚ್ಚಿಹೋಗಿದೆ.

    ವಿರಾಜಪೇಟೆ ತಾಲ್ಲೂಕಿನ ಬಿರುನಾಣಿಯಲ್ಲಿ ಭಾರೀ ಭೂಕುಸಿತವಾಗಿದ್ದು, ಕರ್ತಮಾಡಿನ ನಿವಾಸಿ ಸುಜನ್ ಅವರ ಕಾಫಿತೋಟ ಸಂಪೂರ್ಣ ಕೊಚ್ಚಿಹೋಗಿದೆ. ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.

    ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣಕ್ಕೆ ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಒಳಹರಿವು ಹೆಚ್ಚುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದ್ದರಿಂದ ನದಿ ತಟದಲ್ಲಿರುವ ಸಾರ್ವಜನಿಕರು ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಕಾವೇರಿ ನದಿ ನೀರಿನಿಂದ ನಾಪೋಕ್ಲುವಿನ ಹಲವು ಬಡಾವಣೆಗಳಿಗೆ ನೀರು ನುಗ್ಗಿ, 150 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸದ್ಯ ನಿರಾಶ್ರಿತರಿಗೆ ನಾಪೋಕ್ಲಿನ ಕಲ್ಲುಮಟ್ಟೆ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿಕೊಡಲಾಗಿದೆ. ಆದರೆ ಸ್ಥಳದಲ್ಲಿ ಯಾವುದೇ ಸೌಲಭ್ಯವಿಲ್ಲದೆ ನಿರಾಶ್ರಿತರು ಪರದಾಡುತ್ತಿದ್ದಾರೆ. ಅಲ್ಲದೆ ತಕ್ಷಣವೇ ಸೌಲಭ್ಯ ಕಲ್ಪಿಸಿಕೊಡಿ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಇತ್ತ ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿರುವ ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ಕುಶಾಲನಗರದ ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಇದರಿಂದ ಇಲ್ಲಿನ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.

    ಜಿಲ್ಲಾಡಳಿತದಿಂದ ಕುಶಾಲನಗರದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರಯಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅನೀಸ್ ಎಪಿ ಸುಮಾನ್ ಪನ್ನೇಕರ್ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇತ್ತ ಕಾವೇರಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅವಾಂತರ ಸೃಷ್ಟಿಯಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.

    ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡು, ಮೊಬೈಲ್ ನೆಟ್‍ವರ್ಕ್ ಸರಿಯಾಗಿ ಸಿಗದ ಕಾರಣಕ್ಕೆ ಕೊಡಗಿನ ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮಗಳಲ್ಲಿ ಕತ್ತಲಲ್ಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

    ಕುಟ್ಟಾ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿ ಬಸ್ಸುಗಳನ್ನು ನಿಲ್ಲಿಸಲಾಗಿದೆ. 5 ದಿನಗಳ ಹಿಂದೆ ಮಾಕುಟ್ಟ ರಸ್ತೆ ಕುಸಿತವಾಗಿ ಕೇರಳದ ಒಂದು ಮಾರ್ಗ ಬಂದ್ ಆಗಿತ್ತು, ಇಂದು ಮರ ಬಿದ್ದ ಪರಿಣಾಮ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಪರಿಣಾಮ ಕೇರಳಕ್ಕೆ ತೆರಳುವ ವಾಹನ ಸವಾರರು ಪರದಾಡುತ್ತಿದ್ದಾರೆ.

  • ಕೊಡಗಿನಲ್ಲಿ ಮುಂದುವರಿದ ಮಳೆ – ಮುಳುಗುವ ಭೀತಿಯಲ್ಲಿ ಕುಶಾಲನಗರ

    ಕೊಡಗಿನಲ್ಲಿ ಮುಂದುವರಿದ ಮಳೆ – ಮುಳುಗುವ ಭೀತಿಯಲ್ಲಿ ಕುಶಾಲನಗರ

    ಮಡಿಕೇರಿ: ರಾಜ್ಯದಲ್ಲಿ ಇಂದು ಕೂಡ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಡಿಕೇರಿ ತಾಲೂಕಿನ ಭೇತ್ರಿ ಹೊಳೆ ಉಕ್ಕಿ ಹರಿಯುತ್ತಿದೆ. ಪರಿಣಾಮ ಮಡಿಕೇರಿ ವಿರಾಜಪೇಟೆ ಸಂಪರ್ಕ ರಸ್ತೆ ಜಲಾವೃತವಾಗಿದ್ದು, ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ.

    ಕಳೆದ ಬಾರಿಯಂತೆ ಈ ವರ್ಷವೂ ಕುಶಾಲನಗರ ಮತ್ತೆ ಮುಳುಗುವ ಭೀತಿಯಲ್ಲಿದೆ. ಕುಶಾಲನಗರ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳು ಕಳೆದ ಬಾರಿ ಮುಳುಗಡೆಯಾಗಿತ್ತು. ಸದ್ಯ ನೀರು ಕುಶಾಲನಗರದ ತಗ್ಗು ಪ್ರದೇಶದಗಳಿಗೆ ನೀರು ಹರಿದಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಗೋಣಿಕೊಪ್ಪದ ಹರಿಶ್ಚಂದ್ರಪುರದ ಬಡಾವಣೆಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿದೆ.

    ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಗ್ರಾಮಗಳು ಭಾರೀ ಸಮಸ್ಯೆ ಎದುರಿಸಿದ್ದು, ಸೂರ್ಲಬ್ಬಿ, ಕಿಕ್ಕರಳ್ಳಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು ಗ್ರಾಮದಲ್ಲಿ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ಮೊಬೈಲ್ ನೆಟ್‍ವರ್ಕ್ ಕೂಡ ಸಿಗುತ್ತಿಲ್ಲ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣ ಮೂಲಕ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ವಿರಾಜಪೇಟೆ ತಾಲ್ಲೂಕಿನ ನಾಪೋಕ್ಲು ಬಳಿಕ ಚೆರಿಯಪರಂಬು ಗ್ರಾಮದ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಪರಿಣಾಮ ಗ್ರಾಮದ ಜನರನ್ನು ನಾಪೋಕ್ಲುವಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

    ಈ ನಡುವೆ ಕರ್ನಾಟಕ ಕೇರಳ ನಡುವಿನ ಅಂತರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕುಟ್ಟ-ಕೇರಳ ರಸ್ತೆಯಲ್ಲಿ ಮರ ಬಿದ್ದ ಹಿನ್ನೆಲೆ ವಾಹನ ಸಂಚಾರ ಸ್ಥಗಿತವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯಲ್ಲಿ ಬಸ್ ಗಳ ನಿಲುಗಡೆ ಮಾಡಲಾಗಿದೆ. 5 ದಿನಗಳ ಹಿಂದೆಯಷ್ಟೇ ಮಾಕುಟ್ಟ ರಸ್ತೆ ಕುಸಿತ ಆಗಿದ್ದ ಪರಿಣಾಮ ಕೇರಳಕ್ಕೆ ತೆರಳುವ ಒಂದು ಮಾರ್ಗ ಬಂದ್ ಆಗಿತ್ತು. ಇಂದು ಮರ ಉರುಳಿಬಿದ್ದು ಇಬ್ಬ ಏಕೈಕ ಮಾರ್ಗವಾದ ಕುಟ್ಟ ಮಾರ್ಗ ಕೂಡ ಬಂದ್ ಆಗಿದೆ. ಕೊಡಗಿನಲ್ಲಿ ಮಳೆ ಮುಂದುವರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕುಶಾಲನಗರ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯ 275ರ ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ. ಒಂದೊಮ್ಮೆ ಸೇತುವೆ ಜಲಾವೃತವಾದಲ್ಲಿ ಕೊಡಗು, ಮೈಸೂರು ಸಂಪರ್ಕ ಕಡಿತ ಸಾಧ್ಯತೆ ಇದೆ.

  • ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ಮಂಡ್ಯ: ತಾಯಿಯ ಅಸ್ಥಿ ವಿಸರ್ಜನೆಗೆ ಆಗಮಿಸಿದ್ದ ಮಗ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ನಡೆದಿದೆ.

    ಶ್ರೀಕಾಂತ್ (45) ಕೊಚ್ಚಿ ಹೋದ ವ್ಯಕ್ತಿ. ಬೆಂಗಳೂರಿನ ರಾಜಾಜಿ ನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಅವರ ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು.

    ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಮಡಿಕೇರಿ: ತನ್ನ ನೈಜ ಪ್ರಕೃತಿ ಸೌಂದರ್ಯದಿಂದ ಲಕ್ಷಾಂತರ ಮಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಕೊಡಗಿನಲ್ಲಿ ಈಗ ಪ್ರವಾಸಿಗರ ಅಬ್ಬರ ಜೋರಾಗಿದೆ. ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್ ಆಗಿದ್ದು, ಪ್ರವಾಸಿಗರು ಬೋಟ್ ಮೇಲೇರಿ ದುಬಾರೆ ಕ್ಯಾಂಪ್ ಕಡೆ ತೆರಳಿ ಆನೆಗಳ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ವೀಕೆಂಡ್ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪ್ರವಾಸಿಗಳು ಕೊಡಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ದುಬಾರೆ ಸಾಕಾನೆ ಶಿಬಿರವಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ತಾಣಕ್ಕೆ ಬರುವ ಪ್ರವಾಸಿಗರು ಒಂದಷ್ಟು ಕಾಲ ಆನೆಗಳ ಜೊತೆ ಕಳೆಯಲೇ ಬೇಕು.

    ನದಿ ನೀರು ಹೆಚ್ಚಾಗಿದ್ದ ಪರಿಣಾಮ ದುಬಾರೆಗೆ ನಿಷೇಧ ಹೇರಲಾಗಿತ್ತು. ಯಾಕೆಂದರೆ ಒಂದು ತೀರದಿಂದ ಇನ್ನೊಂದು ತೀರದಲ್ಲಿರುವ ಸಾಕಾನೆ ಶಿಬಿರಕ್ಕೆ ಹೋಗಬೇಕು ಎಂದರೆ ಸುಮಾರು 300 ಮೀ. ಕಾವೇರಿ ನದಿಯಲ್ಲಿ ಬೋಟಿಂಗ್ ಮಾಡಿಕೊಂಡು ಹೋಗಬೇಕು. ಕಾವೇರಿ ನದಿಯ ನೀರು ಮುಂಗಾರು ಮಳೆಗೆ ಹೆಚ್ಚಾಗಿದ್ದ ಪರಿಣಾಮ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶ ಇರಲಿಲ್ಲ. ಜೊತೆಗೆ ಬೋಟ್ ವ್ಯವಸ್ಥೆ ಕೂಡ ಇಲ್ಲದೆ ಪ್ರವಾಸಿಗರು ಆನೆ ಶಿಬಿರದ ಕಡೆ ತೆರಳಲಾಗದೆ ಬೇಸರ ವ್ಯಕ್ತಪಡಿಸಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಮೂರು ಬೋಟ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ. ಬೋಟ್ ಮೂಲಕ ಸಾಗುವ ಪ್ರವಾಸಿಗರು ಸಾಕಾನೆ ಶಿಬಿರ ತಲುಪಿ ಸಾಕಾನೆಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.