Tag: canada

  • ಭಾರತದ ಜೊತೆ ಚೇಷ್ಟೆ ಮಾಡಿದ್ದ ಟ್ರುಡೋ ಶೀಘ್ರವೇ ರಾಜೀನಾಮೆ?

    ಭಾರತದ ಜೊತೆ ಚೇಷ್ಟೆ ಮಾಡಿದ್ದ ಟ್ರುಡೋ ಶೀಘ್ರವೇ ರಾಜೀನಾಮೆ?

    ಒಟ್ಟಾವಾ: ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

    ಉಪಪ್ರಧಾನಿ ಹುದ್ದೆಯೊಂದಿಗೆ ಹಣಕಾಸು ಖಾತೆಯನ್ನು ಹೊಂದಿದ್ದ ಫ್ರೀಲ್ಯಾಂಡ್ ಟ್ರುಡೋ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ಸಚಿವರಾಗಿದ್ದರು. ಕಳೆದ 4 ವರ್ಷಗಳಲ್ಲಿ ಸರ್ಕಾರದಿಂದ ಹೊರಬಂದ ಎರಡನೇ ಹಣಕಾಸು ಸಚಿವೆ ಇವರಾಗಿದ್ದಾರೆ.

    ಟ್ರುಡೋ ರಾಜೀನಾಮೆ ನೀಡಲು ಚಿಂತನೆ ಮಾಡಿದ್ದಾರೆ ಮತ್ತು ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಡಾ ಮಾಧ್ಯಮವೊಂದು ವರದಿ ಮಾಡಿದೆ.

    ಕೆನಡಾದಿಂದ ಅಕ್ರಮವಾಗಿ ವಲಸಿಗರು ಅಮೆರಿಕಕ್ಕೆ ನುಸುಳುತ್ತಿದ್ದಾರೆ. ನುಸುಳುಕೋರರ ವಿರುದ್ಧ ಕೆನಡಾ ಕ್ರಮ ಕೈಗೊಳ್ಳುತ್ತಿಲ್ಲ. ತಾನು ಅಧಿಕಾರಕ್ಕೆ ಏರಿದ ಬಳಿಕ ಕೆನಡಾದಿಂದ ಆಮದಾಗುವ ವಸ್ತುಗಳ ಮೇಲೆ 25% ಆಮದು ತೆರಿಗೆ ವಿಧಿಸುವುದಾಗಿ ಟ್ರಂಪ್‌ (Donald Trump) ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜಸ್ಟಿನ್‌ ಟ್ರುಡೋ ಕೆನಡಾದ ಗವರ್ನರ್‌ ಎಂದು ಟ್ರಂಪ್‌ ವ್ಯಂಗ್ಯವಾಡಿದ್ದಾರೆ. ಅಮೆರಿಕ ಕೆನಡಾದ ಸಂಬಂಧ ಹಾಳಾಗುತ್ತಿರುವ ಬೆನ್ನಲ್ಲೇ ಟ್ರುಡೋ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ.

    ಕೆನಡಾದ ಪ್ರಮುಖ ವ್ಯಾಪಾರ ಪಾಲುದಾರ ಅಮೆರಿಕವಾಗಿದ್ದು ಪ್ರತಿ ವರ್ಷ ಅದರ ರಫ್ತಿನ 75 ಪ್ರತಿಶತವು ಅಮೆರಿಕಕ್ಕೆ ಹೋಗುತ್ತಿದೆ. ಕೆಲ ದಿನಗಳ ಹಿಂದೆ ಜಸ್ಟಿನ್‌ ಟ್ರುಡೋ ಟ್ರಂಪ್‌ ಅವರನ್ನು ಫ್ಲೋರಿಡಾದಲ್ಲಿ ಭೇಟಿಯಾಗಿ ಮಾತನಾಡಿದ್ದರು. ಆಮದು ಸುಂಕದ ಬಗ್ಗೆ ಟ್ರುಡೋ ಮಾತುಕತೆ ನಡೆಸಿದ್ದರೂ ಟ್ರಂಪ್‌ ಕಡೆಯಿಂದ ಯಾವುದೇ ಧನಾತ್ಮಕ ನಿರ್ಧಾರ ಪ್ರಕಟವಾಗಿಲ್ಲ.

    ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿವೆ.

    ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

  • ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ

    ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ

    ಕೆನಡಾ: 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು (Indian Origin Student) ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಕೆನಡಾದ  (Canada) ಎಡ್ಮಂಟನ್‌ನ (Edmonton) ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡುತ್ತಿದ್ದ ಹರ್ಷನದೀಪ್ ಸಿಂಗ್‌ನನ್ನು ಶುಕ್ರವಾರ ಮಧ್ಯರಾತ್ರಿ 12:30ರ ಸುಮಾರಿಗೆ ಶೂಟೌಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರನ್ಮು ಇವಾನ್ ರೈನ್ ಮತ್ತು ಜುಡಿತ್ ಸಾಲ್ಟ್ಯಾಕ್ಸ್ ಎಂದು ಗುರುತಿಸಲಾಗಿದೆ. ಮೂವರು ಸದಸ್ಯರ ಗ್ಯಾಂಗ್ ಹರ್ಷನದೀಪ್‌ಗೆ ಗುಂಡಿಕ್ಕಿ ಹತ್ಯೆಗೈಯ್ಯುವ ದೃಶ್ಯ ಸಿಸಿಟಿವಿ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು – ಭಯಕ್ಕೆ ತೋಟದ ಕಡೆ ತೆರಳದ ಕಾರ್ಮಿಕರು

    ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹರ್ಷನದೀಪ್ ಸಿಂಗ್‌ನನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಹರ್ಷನದೀಪ್ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಸೋಮವಾರ ನಿಗದಿಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಕುಮಾರಸ್ವಾಮಿ, ಅಶೋಕ್‌ ಕನಸು – 5 ವರ್ಷ ನಮ್ಮದೇ ಸರ್ಕಾರ ಎಂದ ಸಿದ್ದರಾಮಯ್ಯ

  • ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ಕಡಿಮೆಗೊಳಿಸುತ್ತಿದೆ. ಯುಎಸ್-ಕೆನಡಾ ಗಡಿ ದುರುಪಯೋಗ ಆರೋಪ, ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ.

    ಕೆನಡಾವು ಭಾರತೀಯರಿಗೆ ನೀಡುತ್ತಿರುವ ಪ್ರವಾಸಿ ವೀಸಾಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದು, 80% ರಿಂದ 20% ಇಳಿಸಿದೆ.

    ಇತ್ತೀಚಗೆ ಕೆನಡಾ ತನ್ನ ವೀಸಾ ನೀತಿಯನ್ನು ತಿದ್ದುಪಡಿ ಮಾಡಿದೆ. 10 ವರ್ಷಗಳ ಹಳೆಯವೀಸಾಗಳನ್ನು ಸ್ಥಗಿತಗೊಳಿಸಿದೆ. ಇನ್ನೂ ವಿಸ್ತೃತ ಅವಧಿಯ ವೀಸಾಗಳನ್ನು ವೈಯಕ್ತಿಕ ಮೌಲ್ಯಮಾಪನದ ಆಧಾರದ ಮೇಲೆ ಅನುಮತಿ ನೀಡುತ್ತದೆ. ಈ ವೀಸಾ ನೀತಿಯ ಬದಲಾವಣೆಯು ತಮ್ಮ ಜೀವನ ಮಟ್ಟವನ್ನು ನಿರ್ವಹಿಸಲು, ವಸತಿ ಕೊರತೆಯನ್ನು ಪರಿಹರಿಸಲು, ಜೀವನ ವೆಚ್ಚವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

    ಕುಸಿತಕ್ಕೆ ಮೂಲ ಕಾರಣವೇನು?
    ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಒತ್ತಡದ ಹೊರತಾಗಿಯೂ, 2024ರ ಮೊದಲಾರ್ಧದಲ್ಲಿ ಕೆನಡಾದಿಂದ ಭಾರತೀಯರಿಗೆ ನೀಡಲಾದ ಪ್ರವಾಸಿ ವೀಸಾಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನವರಿ ಮತ್ತು ಜುಲೈ ನಡುವೆ ಭಾರತೀಯರಿಗೆ 3,65,750 ಸಂದರ್ಶಕರ ವೀಸಾಗಳನ್ನು ನೀಡಿದೆ. ಇನ್ನೂ 2023ರ ಇದೇ ಅವಧಿಯಲ್ಲಿ 3,45,631 ವೀಸಾಗಳನ್ನು ನೀಡಲಾಗಿತ್ತು.

    ಈ ಕುರಿತು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್, ಭಾರತದಲ್ಲಿ ಕೆನಡಾ ವಲಸೆ ಅಧಿಕಾರಿಗಳು 2023ರಲ್ಲಿ 27 ಜನರಿದ್ದರು. ಆದರೆ ಇದೀಗ ವಲಸೆ ಅಧಿಕಾರಿಗಳು ಕಡಿಮೆಯಾಗಿದ್ದು, 4ಕ್ಕೆ ಇಳಿದಿದೆ. ಹೀಗಾಗಿ ಇದು ಕೆನಡಾದಲ್ಲಿ ನೀಡಲಾಗುವ ವೀಸಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

    ಗಡಿ ದುರ್ಬಳಕೆ: ಭಾರತೀಯ ಪ್ರವಾಸಿಗರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಕೆನಡಾ ಗಡಿಯನ್ನು ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕಾ ಸರ್ಕಾರ ವೀಸಾ ನೀಡಲು ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಹೊಂದಿದ್ದು, ವೀಸಾ ಪಡೆಯಲು ದೀರ್ಘ ಕಾಲ ಕಾಯಬೇಕಾಗುತ್ತದೆ. ಈ ಕಾರಣದಿಂದ ಯುಎಸ್ ವೀಸಾಗಳನ್ನು ಕೆನಡಾದಲ್ಲಿ ಪಡೆಯುವ ಉದ್ದೇಶದಿಂದ ಕೆನಾಡಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಪ್ರಕಾರ, ಜೂನ್ 2024 ರಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಕೆನಡಾದಿಂದ ಯುಎಸ್‌ಗೆ ಕಾಲ್ನಡಿಗೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಪ್ರವೇಶಿದ್ದಾರೆ ಎಂದು ತಿಳಿಸಿದೆ.

    ದೇಶೀಯ ಕಾಳಜಿಗಳು: ದೇಶವು ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರತಿ ಅರ್ಜಿದಾರರ ಪರಿಶೀಲನೆಯ ನಂತರ ವೀಸಾ ನೀಡುತ್ತದೆ. 2023ರ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಅಧಿಕಾರಿಗಳ ಸಂಬಂಧವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಸಂಸತ್ತಿನಲ್ಲಿ ಆರೋಪಿಸಿದರು. ಈ ಕಾರಣದಿಂದ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದು ಒಂದು ಕಾರಣವಾಗಿದ್ದು, ವೀಸಾ ಕಡಿತಗೊಳಿಸಲು ಇದು ಕಾರಣವಲ್ಲ ಎಂದು ಕೆನಡಾ ಸ್ಪಷ್ಟನೆ ನೀಡಿದೆ.

    ಕೆನಡಾದ ಹೊಸ ವೀಸಾ ಮಾರ್ಗಸೂಚಿಗಳು ಯಾವುವು?
    ಹೊಸ ನಿಯಮದ ಪ್ರಕಾರ, ವೀಸಾ ಅಧಿಕಾರಿಗಳು ಪ್ರತಿ ಅರ್ಜಿದಾರರನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಾರೆ. ಏಕ-ಪ್ರವೇಶ ಮತ್ತು ಬಹು-ಪ್ರವೇಶದ ಕೆನಡಿಯನ್ ವೀಸಾದ ವೆಚ್ಚವು ಪ್ರತಿ ವ್ಯಕ್ತಿಗೆ ಕೆನಡಾ ಮೌಲ್ಯ 100 ಆಗಿದೆ. ಒಂದು ಹಾಗೂ ಎರಡು ವೀಸಾಗಳ ನಡುವೆ ಯಾವುದೇ ವೆಚ್ಚದ ವ್ಯತ್ಯಾಸವಿಲ್ಲ. ಸರ್ಕಾರವು ತನ್ನ ವಲಸೆ ಮಟ್ಟದ ಯೋಜನೆಯನ್ನು ಕೂಡ ಪರಿಷ್ಕರಿಸಿದ್ದು, ಅದರ ಗುರಿಯನ್ನು 5,00,000 ಹೊಸ ಶಾಶ್ವತ ನಿವಾಸಿಗಳಿಂದ 2025ರಲ್ಲಿ 3,95,000, 2026ರಲ್ಲಿ 3,80,000 ಮತ್ತು 2027ರಲ್ಲಿ 3,65,000ಕ್ಕೆ ಇಳಿಸಿದೆ.

  • ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ಅಧಿಕಾರಕ್ಕೆ ಏರುವ ಮುನ್ನವೇ ಚೀನಾ, ಕೆನಡಾಗೆ ಟ್ರಂಪ್ ಶಾಕ್

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಡೊನಾಲ್ಡ್‌ ಟ್ರಂಪ್ (Donald Trump) ಚೀನಾ, ಮೆಕ್ಸಿಕೋ ಮತ್ತು ಕೆನಡಾಗೆ ಶಾಕ್ ನೀಡಿದ್ದಾರೆ.

    ಜ.20 ರಂದು ತಾನು ಅಧಿಕಾರ ಸ್ವೀಕರಿಸಿದ ಕೂಡಲೇ ಮೆಕ್ಸಿಕೋ, ಕೆನಡಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 25% ರಷ್ಟು ತೆರಿಗೆ ವಿಧಿಸುವ ಕಡತಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಪ್ರಕಟಿಸಿದ್ದಾರೆ.

    ಕಾನೂನುಬಾಹಿರವಾದ ಮಾದಕವಸ್ತು ಸರಬರಾಜು, ವಲಸೆಗಳಿಗೆ ವಿರುದ್ಧವಾಗಿ ತಾನು ಈ ನಿರ್ಧಾರ ತೆಗೆದುಕೊಳ್ಳೋದಾಗಿ ಟ್ರಂಪ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಚೀನಾ (China) ಉತ್ಪನ್ನಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಹಿಂಸಾಚಾರಕ್ಕೆ ನಾಲ್ವರು ಸೈನಿಕರು ಸೇರಿ 5 ಸಾವು – ಸೇನೆಯಿಂದ ಕಂಡಲ್ಲಿ ಗುಂಡು ಆದೇಶ

    ಅಮೆರಿಕ (USA) ವಿಶ್ವದ ದೊಡ್ಡ ಆಮುದುದಾರ ದೇಶವಾಗಿದೆ. ಅಮರಿಕಕ್ಕೆ ಆಮದಾಗುವ ವಸ್ತುಗಳ ಪೈಕಿ ಕೆನಡಾ, ಚೀನಾ, ಮೆಕ್ಸಿಕೋದ ಪಾಲು 40% ಇದೆ.

    ಟ್ರಂಪ್ ಘೋಷಣೆ ಮಾಡಿದ ನಂತರ, ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗೆ ಸುಮಾರು 10 ನಿಮಿಷಗಳ ಕಾಲ ವ್ಯಾಪಾರ ಮತ್ತು ಗಡಿ ಭದ್ರತೆಯ ಬಗ್ಗೆ ಚರ್ಚಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಗೆ ಹೋಲಿಸಿದರೆ ಕೆನಡಾದ ಗಡಿಯನ್ನು ದಾಟುವ ವಲಸಿಗರ ಸಂಖ್ಯೆ ಬಹಳ ಸಣ್ಣದು ಎಂದು ಟ್ರುಡೋ ಹೇಳಿರುವುದಾಗಿ ವರದಿಯಾಗಿದೆ.

     

  • ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

    ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

    ಒಟ್ಟಾವಾ: ಖಲಿಸ್ತಾನಿ ಉಗ್ರ ನಿಜ್ಜರ್‌ (Hardeep Singh Nijjar) ಹತ್ಯೆಯ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಿಳಿದಿತ್ತು ಎಂದು ನಾವು ಹೇಳಿಲ್ಲ ಎಂದು ಹೇಳುವ ಮೂಲಕ ಮಾಧ್ಯಮ ವರದಿಯನ್ನು ಕೆನಡಾ ಸರ್ಕಾರ (Canada Government) ಅಧಿಕೃತವಾಗಿ ತಿರಸ್ಕರಿಸಿದೆ.

    ಭಾರತದ ಒತ್ತಡ ತೀವ್ರವಾದ ಬೆನ್ನಲ್ಲೇ ಕೆನಡಾ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ ಡ್ರೂಯಿನ್ ಹೇಳಿಕೆ ಪ್ರಕಟಿಸಿ ಎರಡು ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ತಿಕ್ಕಾಟವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಅಕ್ಟೋಬರ್ 14 ರಂದು ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯ ಕಾರಣ ಕೆನಡಾ ಪೊಲೀಸ್‌ (RCMP) ಮತ್ತು ಅಧಿಕಾರಿಗಳು ಕೆನಡಾದಲ್ಲಿ ಭಾರತ ಸರ್ಕಾರದ ಏಜೆಂಟರು ನಡೆಸಿದ ಗಂಭೀರ ಅಪರಾಧ ಚಟುವಟಿಕೆಯ ಬಗ್ಗೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುವ ಕ್ರಮವನ್ನು ತೆಗೆದುಕೊಂಡರು. ಆದರೆ ಕೆನಡಾ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಕೆನಡಾದೊಳಗಿನ ಗಂಭೀರ ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆ ಇಲ್ಲ. ಮಾಧ್ಯಮ ವರದಿ ಕೇವಲ ಊಹೆ ಮತ್ತು ನಿಖರವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ವರದಿಯಲ್ಲಿ ಏನಿತ್ತು?
    ಕೆನಡಾದ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ಅನಾಮಧೇಯ ಕೆನಡಾ ಸರ್ಕಾರಿ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನ ಹತ್ಯೆ ಸಂಚನ್ನು ಗೃಹ ಸಚಿವ ಅಮಿತ್ ಶಾ ರೂಪಿಸಿದ್ದರು. ಈ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಮಾಹಿತಿ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲಖಿಸಲಾಗಿತ್ತು.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌, ನಾವು ಸಾಮಾನ್ಯವಾಗಿ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹೀಗಿದ್ದರೂ ಕೆನಡಾದ ಸರ್ಕಾರದ ಮೂಲವನ್ನು ಆಧಾರಿಸಿ ಪತ್ರಿಕೆಗೆ ನೀಡಿದ ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ಅರ್ಹವಾದ ಖಂಡನೆಗಳೊಂದಿಗೆ ತಿರಸ್ಕರಿಸಬೇಕು. ಈ ರೀತಿಯ ಸುಳ್ಳು ಆರೋಪಗಳು ಈಗಾಗಲೇ ಹದಗೆಟ್ಟಿರುವ ನಮ್ಮ ಸಂಬಂಧಗಳನ್ನು ಇನ್ನಷ್ಟು ಹಾಳುಮಾಡುತ್ತವೆ ಎಂದು ಖಡಕ್‌ ಆಗಿಯೇ ಹೇಳಿದ್ದರು.

     

  • ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ

    ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಬಂಧನ

    ಒಟ್ಟಾವಾ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಯುವಕರನ್ನ ಪ್ರಚೋದಿಸುತ್ತಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹಾಗೂ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ ಸಹಾಯಕ ಅರ್ಶ್‌ದೀಪ್‌ ಡಲ್ಲಾನನ್ನ (Arshdeep Dalla) ಕೆನಡಾ ಭದ್ರತಾ ಏಜೆನ್ಸಿ ಅಧಿಕಾರಿಗಳು ಬಂಧಿಸಿದ್ದಾರೆ. ಆದ್ರೆ ಬಂಧಿತನನ್ನ ಜೈಲಿನಲ್ಲಿಟ್ಟಿದ್ದಾರಾ? ಅಥವಾ ಬಿಡುಗಡೆ ಮಾಡಿದ್ದಾರೆಯೇ ಅನ್ನೋ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.

    ಕಳೆದ ಅಕ್ಟೋಬರ್ 27-28 ರಂದು ಕೆನಡಾದಲ್ಲಿ (Canada) ಮಿಲ್ಟನ್‌ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿದಂತೆ ಡಲ್ಲಾನನ್ನ ಬಂಧಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಭದ್ರತಾ ಏಜೆನ್ಸಿಗಳು ಸ್ಪಷ್ಟಪಡಿಸಿವೆ. 28 ವರ್ಷದ ಡಲ್ಲಾ ತನ್ನ ಪತ್ನಿಯೊಂದಿಗೆ ಕೆನಡಾದ ಸರ್ರೆಯಲ್ಲಿ ನೆಲೆಸಿದ್ದಾನೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಿಂದ ಕೆನಡಾ-ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

    ಡಲ್ಲಾ ಸುಲಿಗೆ, ಕೊಲೆ ಮತ್ತು ಇತರ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ. ಅಲ್ಲದೇ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪಂಜಾಬ್‌ನ ಜಾಗರಾನ್‌ನಿಂದ ಎಲೆಕ್ಟ್ರಿಷಿಯನ್ ಪರಮ್‌ಜೀತ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡ ನಂತರ ಈತನ ವಿರುದ್ಧ ಪಂಜಾಬ್ ಪೊಲೀಸರು ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಿದ್ದರು. ಇದನ್ನೂ ಓದಿ: ಯುಪಿ ಪ್ರಧಾನಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಎಣ್ಣೆ, ಮಾಂಸ – ಬ್ರಿಟಿಷ್‌ ಹಿಂದೂಗಳು ಶಾಕ್‌!

    ಭಾರತದಲ್ಲಿ ಭಯೋತ್ಪಾದನೆಗೆ ಪ್ರಚೋದನೆ:
    ಜೊತೆಗೆ 2020ರ ನವೆಂಬರ್‌ನಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಮನೋಹರ್ ಲಾಲ್‌ನನ್ನ ಅಪಹರಣ, ಹತ್ಯೆಗೆ ಸಂಚು ರೂಪಿಸುವ ಪ್ರಕರಣದಲ್ಲೂ ಭಾಗಿಯಾಗಿದ್ದ. ಜೊತೆಗೆ ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆ ನಡೆಸಲು ಯುವಕರನ್ನು ಪ್ರೇರೇಪಿಸುತ್ತಿದ್ದ, ಆಮೂಲಾಗ್ರಿಕರಣ ಮಾಡುವಲ್ಲಿ ಪರಿಣಿತನಾಗಿದ್ದ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

  • ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ನವದೆಹಲಿ: ಕೆನಡಾದ (Canada) ಬ್ರಾಂಪ್ಟನ್‌ನಲ್ಲಿರುವ ಹಿಂದೂ (Hindu) ದೇವಾಲಯದ ಮೇಲೆ ಖಲಿಸ್ತಾನ್ (Khalistan) ಪರ ಗುಂಪು ನಡೆಸಿದ ದಾಳಿಯನ್ನು ವಿರೋಧಿಸಿ ಹಿಂದೂ ಮತ್ತು ಸಿಖ್ ಕಾರ್ಯಕರ್ತರು ನವದೆಹಲಿಯ ಕೆನಡಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಬೆನ್ನಲ್ಲೇ ಕೆನಡಾದ ರಾಯಭಾರ ಕಚೇರಿ ಎದುರು ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಆದರೂ ಮೆರವಣಿಗೆ ನಡೆಸುತ್ತಿದ್ದ ಹಿಂದೂ ಸಿಖ್ ಗ್ಲೋಬಲ್ ಫೋರಂನ (Hindu Sikh Global Forum) ಹಲವಾರು ಕಾರ್ಯಕರ್ತರು, ಪೊಲೀಸ್ ಬ್ಯಾರಿಕೇಡ್‌ಗಳನ್ನು ಏರಲು ಪ್ರಯತ್ನಿಸಿದರು. ಅಲ್ಲದೇ ಅವುಗಳನ್ನು ಕೆಡವಿ ಹಾಕಿದ್ದಾರೆ.

    ಪ್ರತಿಭಟನಾ ಮೆರವಣಿಗೆಯಲ್ಲಿ ಎರಡೂ ಧರ್ಮದ ಜನರು ‘ಹಿಂದೂಗಳು ಮತ್ತು ಸಿಖ್ಖರು ಒಗ್ಗಟ್ಟಾಗಿದ್ದಾರೆ’ ಮತ್ತು ʻಕೆನಡಾದಲ್ಲಿ ದೇವಸ್ಥಾನಗಳ ಅವಮಾನವನ್ನು ಭಾರತೀಯರು ಸಹಿಸುವುದಿಲ್ಲ’ ಎಂಬ ಬರಹಗಳಿರುವ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

    ನವೆಂಬರ್ 4 ರಂದು ಕಾನ್ಸುಲರ್ ಕ್ಯಾಂಪ್ ನಡೆಯುತ್ತಿದ್ದಾಗ ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಮಂದಿರದ ಹೊರಗೆ ಹಲವಾರು ಖಲಿಸ್ತಾನಿ ಬೆಂಬಲಿಗರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯು ಉದ್ದೇಶಪೂರ್ವಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಖಂಡಿಸಿದ್ದರು.

  • ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ

    ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ

    ವಾಷಿಂಗ್ಟನ್‌: ಮುಂದಿನ ವರ್ಷ ನಡೆಯಲಿರುವ ಕೆನಡಾ ಚುನಾವಣೆಯಲ್ಲಿ (Canada Election) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಸೋಲುತ್ತಾರೆ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ (Elon Musk) ಭವಿಷ್ಯ ನುಡಿದಿದ್ದಾರೆ.

    ಎಕ್ಸ್‌ನಲ್ಲಿ ಒಬ್ಬರು ಜರ್ಮನ್‌ನಲ್ಲಿರುವ ಸಮಾಜವಾದಿ ಸರ್ಕಾರವು ಕುಸಿದಿದೆ ಮತ್ತು ಈಗ ಕ್ಷಿಪ್ರ ಚುನಾವಣೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ಪೋಸ್ಟ್‌ ಮಾಡಿದ್ದರು.

    ಈ ಪೋಸ್ಟ್‌ ಅನ್ನು ಮಸ್ಕ್‌ ಅವರಿಗೆ ಟ್ಯಾಗ್‌ ಮಾಡಿದ ಕೆನಡಾದ ಬಳಕೆದಾರ, ಟ್ರುಡೋವನ್ನು ತೊಡೆದುಹಾಕಲು ನಮಗೆ ಕೆನಡಾದಲ್ಲಿ ನಿಮ್ಮ ಸಹಾಯದ ಅಗತ್ಯವಿದೆ ಎಂದು ಬರೆದಿದ್ದರು. ಇದಕ್ಕೆ ಮಸ್ಕ್‌ ಮುಂದಿನ ಚುನಾವಣೆಯಲ್ಲಿ ಅವರು ಹೋಗುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.

    ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. 2015 ರಿಂದ ಜಸ್ಟಿನ್‌ ಟ್ರುಡೋ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ. ಇದನ್ನೂ ಓದಿ: ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್‌!

    ಖಲಿಸ್ತಾನ (Khalistan) ಉಗ್ರ ಸಂಘಟನೆಯ ವಿಚಾರ ಹಿಡಿದುಕೊಂಡು ಭಾರತದೊಂದಿಗೆ ಚೇಷ್ಟೆ ಮಾಡುತ್ತಿರುವ ಜಸ್ಟಿನ್‌ ಟ್ರುಡೋ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿಂದೆ ವರದಿಯಾಗಿತ್ತು. ಟ್ರುಡೋ ಪ್ರತಿನಿಧಿಸುತ್ತಿರುವ ಲಿಬರಲ್ ಪಕ್ಷದ ಸಂಸದರೇ ಈಗ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

    ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿದ್ದವು.  ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ಖಲಿಸ್ತಾನ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

     

  • ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾರತ-ಕೆನಡಾ (India-Canada) ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಹೇಳಿಕೆ ನೀಡಿದ ವಿದೇಶಾಂಗ ಸಚಿವ ಜೈಶಂಕರ್‌(S Jaishankar) ಅವರ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡಿದ್ದಕ್ಕೆ ಅಸ್ಟ್ರೇಲಿಯಾ ಟುಡೇಯನ್ನು (Australia Today) ಕೆನಡಾ ನಿಷೇಧಿಸಿದೆ.

    ಸಿಡ್ನಿಯಲ್ಲಿ ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಮಾಧ್ಯಮಗೋಷ್ಠಿಯನ್ನು ಆಸ್ಟ್ರೇಲಿಯಾ ಟುಡೇ ಪ್ರಸಾರ ಮಾಡಿತ್ತು. ಮಾಧ್ಯಮಗೋಷ್ಠಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಜಸ್ಟಿನ್‌ ಟ್ರುಡೋ ನೇತೃತ್ವದ ಕೆನಡಾ ಸರ್ಕಾರ ಆಸ್ಟ್ರೇಲಿಯಾ ಟುಡೇಯನ್ನು ನಿಷೇಧಿಸಿದೆ.


    ಈ ವಿಚಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ಟುಡೇಯನ್ನು ನಿಷೇಧಿಸಿದ ಕೆನಡಾ (Canada) ನಿರ್ಧಾರ ಆಶ್ಚರ್ಯ ತಂದಿದೆ. ವಾಕ್‌ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆನಡಾದ ಬೂಟಾಟಿಕೆಯನ್ನು ಇದು ತೋರಿಸುತ್ತದೆ ಎಂದು ಕಿಡಿಕಾರಿದರು.

    ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳು ಮತ್ತು ವೆಬ್‌ಸೈಟ್‌ ಅನ್ನು ನಿರ್ಬಂಧಿಸಲಾಗಿದೆ. ಕೆನಡಾದ ವೀಕ್ಷಕರಿಗೆ ಈ ವೆಬ್‌ಸೈಟ್‌ ಲಭ್ಯವಿಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಜೈಶಂಕರ್‌ ಸುದ್ದಿಗೋಷ್ಠಿ ನಡೆಸಿದ ಕೆಲ ಗಂಟೆಯಲ್ಲಿ ಕೆನಡಾ ಈ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

    ಎಸ್‌ ಜೈಶಂಕರ್‌ ಅವರು ಸುದ್ದಿಗೋಷ್ಠಿಯಲ್ಲಿ, ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲದೆ ನಮ್ಮ ಮೇಲೆ ಕೆನಡಾ ಆರೋಪಗಳನ್ನು ಮಾಡುತ್ತಿದೆ. ಭಾರತೀಯ ರಾಜತಾಂತ್ರಿಕರ ಮೇಲೆ ಕೆನಡಾ ಕಣ್ಗಾವಲು ಇರಿಸಿದೆ. ಕೆನಡಾದಲ್ಲಿ ಭಾರತ ವಿರೋಧಿ ವ್ಯಕ್ತಿಗಳಿಗೆ ರಾಜಕೀಯವಾಗಿ ಆಶ್ರಯ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

     

  • Canada| ಹಿಂದೂಗಳ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹಲ್ಲೆ ಖಂಡಿಸಿ ಪ್ರತಿಭಟನೆ

    Canada| ಹಿಂದೂಗಳ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹಲ್ಲೆ ಖಂಡಿಸಿ ಪ್ರತಿಭಟನೆ

    ಬ್ರಾಂಪ್ಟನ್: ಬ್ರಾಂಪ್ಟನ್‌ನಲ್ಲಿರುವ (Brompton) ಹಿಂದೂ ಸಭಾ ಮಂದಿರದ (Hindu Sabha Mandir) ಹೊರ ಭಾಗದಲ್ಲಿ ಖಲಿಸ್ತಾನಿ ಪರ ಬೆಂಬಲಿಗರಿಂದ (Khalistan Suppoters) ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಹಿಂದೂಗಳ ಒಕ್ಕೂಟ (CoHNA) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಕೆನಡಾದ ಹಿಂದೂಗಳು ಒಗ್ಗಟ್ಟಿನಿಂದ ಮೆರವಣಿಗೆ ನಡೆಸಿದರು.

    ಪ್ರತಿಭಟನಾಕಾರರು ಕೆನಡಾ ಮತ್ತು ಭಾರತದ ಧ್ವಜಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು. ಇದೇ ವೇಳೆ ಖಲಿಸ್ತಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು 20 ವರ್ಷಗಳಿಂದ ಕೆನಡಾದಲ್ಲಿ ಹಿಂದೂಗಳು ಸತತವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಕೆಲವು ಪ್ರತಿಭಟನಾಕಾರರು ಆರೋಪಿಸಿದರು. ಇದನ್ನೂ ಓದಿ: ಮುಡಾ ಕೇಸ್ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರೋ ಷಡ್ಯಂತ್ರ: ಮಹದೇವಪ್ಪ

    ಹಿಂದೂ ಕೆನಡಿಯನ್ನರು ಕೆನಡಾಕ್ಕೆ ತುಂಬಾ ನಿಷ್ಠರಾಗಿದ್ದಾರೆ. ಹಿಂದೂ ಕೆನಡಿಯನ್ನರ ವಿರುದ್ಧ ನಡೆಯುತ್ತಿರುವುದು ತಪ್ಪು. ಎಲ್ಲಾ ರಾಜಕಾರಣಿಗಳು ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ಕೆನಡಾ ಇಲ್ಲಿರುವ ಹಿಂದೂಗಳನ್ನು ಚೆನ್ನಾಗಿ ನಡೆಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಮಗೆ ಭಾರತ ಬೇಕು ಮತ್ತು ಕೆನಡಾ ಸಂಬಂಧಗಳನ್ನು ಬಲಪಡಿಸಬೇಕು ಎಂದು ಮತ್ತೋರ್ವ ಪ್ರತಿಭಟನಾಕಾರರು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು

    ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದಾರೆ. ಈ ದೇವಾಲಯವು ಟೊರೊಂಟೊದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ದಾಳಿಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖಲಿಸ್ತಾನಿ ಧ್ವಜ ಹಿಡಿದಿರುವುದು, ಭಕ್ತರನ್ನು ನಿಂದಿಸುತ್ತಾ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ಬೆಳಗಾವಿ| ತಹಶೀಲ್ದಾರ್‌ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ

    ಹಿಂದೂ ದೇವಾಲಯದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಖಂಡಿಸಿದ್ದರು. ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿದ್ದು, ಭಾರತೀಯ ರಾಯಭಾರಿಗಳನ್ನು ಬೆದರಿಸುವ ಪ್ರಯತ್ನ ಎಂದು ಮೋದಿ ಟೀಕಿಸಿದ್ದರು. ಇದನ್ನೂ ಓದಿ: ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಕೊಡಿ: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ