Tag: cabinet public tv

  • ಕೊನೆಗೂ ಸಚಿವರಾಗಿ 7 ಮಂದಿ ಪ್ರಮಾಣ ವಚನ

    ಕೊನೆಗೂ ಸಚಿವರಾಗಿ 7 ಮಂದಿ ಪ್ರಮಾಣ ವಚನ

    ಬೆಂಗಳೂರು: ಕೊನೆಗೂ ಬಿಜೆಪಿಯ ನೂತನ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಂದು 7 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಅವರಿಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರಮಾಣವಚನ ಬೋಧಿಸಿದರು.

    ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜಭವನಕ್ಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಅಲ್ಲದೆ ಸಚಿವರ ಆಪ್ತರಿಗೂ ಒಳಗಡೆ ಪ್ರವೇಶ ನಿರಾಕರಿಸಲಾಗಿತ್ತು. ಒಟ್ಟಾರೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಯೂಟ್ಯೂಬ್ ಲಿಂಕ್ ಮೂಲಕ ಸಮಾರಂಭ ನೋಡಲು ಅವಕಾಶ ಕಲ್ಪಿಸಲಾಗಿತ್ತು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುತಿನ ಚೀಟಿ ರೆಡ್ ಪಾಸ್, ಬ್ಲ್ಯೂ ಪಾಸ್ ಇದ್ದರೆ ಮಾತ್ರ ರಾಜಭವನದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ರಾಜಭವನದ ಹೊರಗೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಹೊರಗೆ ಜನ ಸೇರದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

    ಕೆಲ ದಿನಗಳಿಂದ ತಾವೂ ಸಚಿವರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಇಂದು ನಿರಾಸೆಯಾಗಿದೆ. ಮುನಿರತ್ನ, ಸುನಿಲ್ ಕುಮಾರ್ ಮೊದಲಾದವರ ಹೆಸರು ಸಚಿವರ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದರೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 7 ಜನರ ಹೆಸರನ್ನು ಸಿಎಂ ಬಹಿರಂಗಪಡಿಸಿದ್ದರು. ಈ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತು. ಅಸಮಾಧಾನಿತರು ಸಿಎಂ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

    ಇತ್ತ ಸಚಿವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಮುನಿರತ್ನ ಹೆಸರನ್ನು ಕೂಡ ಕೈ ಬಿಡಲಾಗಿದೆ. ಆದರೆ ಕೆಲವೇ ತಿಂಗಳಲ್ಲಿ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಬಿಜೆಪಿಯಲ್ಲೂ ಬಂಡಾಯ ಸಾರಿದ್ರಾ ರಮೇಶ್ ಜಾರಕಿಹೊಳಿ?

    ಬಿಜೆಪಿಯಲ್ಲೂ ಬಂಡಾಯ ಸಾರಿದ್ರಾ ರಮೇಶ್ ಜಾರಕಿಹೊಳಿ?

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬ, ಗೊಂದಲ ಹಿನ್ನೆಲೆಯಲ್ಲಿ ಪಕ್ಷಾಂತರಿ ಶಾಸಕರು ಹಾಗೂ ಮೂಲ ಬಿಜೆಪಿ ಆಕಾಂಕ್ಷಿ ಶಾಸಕರು ಅಸಮಧಾನಗೊಂಡಿದ್ದಾರೆ. ಸಂಪುಟ ಸೇರ್ಪಡೆ ಸಂಘರ್ಷದ ಜೊತೆ ಜೊತೆಗೇ ಖಾತೆಗಾಗಿ ಪಟ್ಟು ಕಾಳಗವೂ ಜೋರಾಗಿದೆ. ಈ ಬೆನ್ನಲ್ಲೇ ಮಿತ್ರಮಂಡಳಿ ಗುಂಪಿನ ನಾಯಕರಾಗಿರುವ ರಮೇಶ್ ಜಾರಕಿಹೊಳಿ ರಾಜೀನಾಮೆಯ ಮೆಗಾ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ.

    ನನಗೆ ಡಿಸಿಎಂ ಸ್ಥಾನ ಬೇಕಾಗಿಲ್ಲ. ನನಗೆ ಅದೇ ಖಾತೆ ಬೇಕು ಅಂದ್ರೆ ಬೇಕು. ಆ ಖಾತೆ ಸಿಗದಿದ್ದರೆ ನಾನು ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಮುಂದೆ ರಮೇಶ್ ಜಾರಕಿಹೊಳಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ.

    ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಯೇ ಬೇಕೆಂದು ತೀವ್ರ ಪಟ್ಟು ಹಿಡಿದು ಕೂತಿದ್ದಾರೆ ಎನ್ನಲಾಗಿದೆ. ಮೈತ್ರಿ ಅವಧಿಯಲ್ಲಿ ಡಿಕೆಶಿ ಪಡೆದಿದ್ದ ಜಲಸಂಪನ್ಮೂಲ ಖಾತೆಯೇ ಬೇಕು. ನನ್ನನ್ನು ಡಿಸಿಎಂ ಕೂಡ ಮಾಡಬೇಡಿ. ಆದರೆ ಸಚಿವ ಪದವಿ ಜತೆಗೆ ಜಲಸಂಪನ್ಮೂಲ ಇಲಾಖೆಯನ್ನೇ ಕೊಡಿ ಎಂದು ರಮೇಶ್ ಜಾರಕಿಹೊಳಿ ಪ್ರಬಲವಾಗಿ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಡಿಕೆಶಿಗೆ ಚಾಲೆಂಜ್ ಮಾಡಿ ನಾನು ರಾಜೀನಾಮೆ ಕೊಟ್ಟು ಬಂದೆ. ಜಲಸಂಪನ್ಮೂಲ ಖಾತೆಯನ್ನೇ ತೆಗೆದುಕೊಂಡು ಬರ್ತೀನಿ ಎಂದು ಚಾಲೆಂಜ್ ಮಾಡಿದ್ದೆ. ಹಾಗಾಗಿ ಸ್ವಾಭಿಮಾನಕ್ಕಾಗಿ ನನ್ನ ರಾಜಕೀಯ ಭವಿಷ್ಯ ಲೆಕ್ಕಿಸದೇ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದೇನೆ. ಈಗ ಆ ಖಾತೆಯೆ ಸಿಗಲಿಲ್ಲ ಅಂದ್ರೆ ನನ್ನ ಸ್ವಾಭಿಮಾನ ಮತ್ತು ಚಾಲೆಂಜ್‍ಗೆ ಧಕ್ಕೆ ಬರುತ್ತೆ. ಕೊಟ್ರೆ ಆ ಖಾತೆಯನ್ನೇ ಕೊಡಿ, ಇಲ್ಲ ಅಂದ್ರೆ ನಾನು ಈಗ ಮತ್ತೆ ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಎದುರೇ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ; ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ

    ರಮೇಶ್ ಜಾರಕಿಹೊಳಿ ಮಾತಿಗೆ ಸಿಎಂ ಯಡಿಯೂರಪ್ಪ ತೆಲೆಕೆಡಿಸಿಕೊಂಡಿದ್ದಾರಂತೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಈ ತಿಂಗಳಲ್ಲೇ ಸುಸೂತ್ರವಾಗಿ ನಡೆದರೆ ಸಾಕೆಂದು ಒದ್ದಾಡುತ್ತಿರುವ ಸಿಎಂಗೆ ಬೆಳಗಾವಿ ಸಾಹುಕಾರ್‍ನ ಈ ಹೊಸ ಆಟ ಪೇಚಿಗೆ ಸಿಲುಕಿಸಿದೆಯಂತೆ. ಹಾಗಾದ್ರೆ ರಮೇಶ್ ಜಾರಕಿಹೊಳಿ ಖಾತೆಗಾಗಿ ಒತ್ತಡ ತಂತ್ರ ಹಾಕ್ತಿದ್ದಾರಾ..? ಒಂದು ವೇಳೆ ಜಲಸಂಪನ್ಮೂಲ ಖಾತೆ ಸಿಗದಿದ್ದರೆ ನಿಜಕ್ಕೂ ಅವರು ರಾಜೀನಾಮೆ ಮಾಡ್ತಾರಾ ಎಂಬ ಈ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.