Tag: C. C. Patil

  • ಘೋಷಣೆಗಷ್ಟೇ ಸೀಮಿತವಾಗಿದ್ದ ಮುಖ್ಯಮಂತ್ರಿ ಪದಕ ಶೀಘ್ರದಲ್ಲೇ ಅರಣ್ಯ ಸಿಬ್ಬಂದಿಗೆ ವಿತರಣೆ

    ಘೋಷಣೆಗಷ್ಟೇ ಸೀಮಿತವಾಗಿದ್ದ ಮುಖ್ಯಮಂತ್ರಿ ಪದಕ ಶೀಘ್ರದಲ್ಲೇ ಅರಣ್ಯ ಸಿಬ್ಬಂದಿಗೆ ವಿತರಣೆ

    – ಅರಣ್ಯ ಸಚಿವ ಸಿಸಿ ಪಾಟೀಲ್ ಭರವಸೆ

    ಬೆಂಗಳೂರು: ಅರಣ್ಯ ಇಲಾಖೆಗೆ ಮುಖ್ಯಮಂತ್ರಿ ಪದಕ ಪಡೆಯುವ ಕಾಲ ಕೂಡಿ ಬಂದಂತಿದೆ. ವಿತರಣೆಯಾಗದೇ ಇರುವ ಮುಖ್ಯಮಂತ್ರಿ ಪದಕವನ್ನು ಕೊಡಿಸುವುದಾಗಿ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

    ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಲ್ಲೂ ವಿಶೇಷ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿ ಹೆಸರಿನಲ್ಲಿ ಪದಕ ನೀಡಲು ಇಲಾಖೆ ಮುಂದಾಗಿತ್ತು. 2017ರಲ್ಲಿ ಅರಣ್ಯ ಇಲಾಖೆ ವಿಶೇಷ ಸೇವೆ ಸಲ್ಲಿಸಿದವರ ಹೆಸರು ಸಿದ್ಧಪಡಿಸಿತ್ತು. ಆದರೆ ಈವರೆಗೂ ಒಂದು ಬಾರಿಯೂ ಪದಕ ವಿತರಣೆ ಆಗಿಲ್ಲ. ಘೋಷಣೆಗೆ ಅಷ್ಟೇ ಮುಖ್ಯಮಂತ್ರಿ ಪದಕ ಸೀಮಿತವಾಗಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸ್ತಾ ಇದ್ದರು. ಈಗ ಸಚಿವರ ಭರವಸೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಮಾರಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಉಳಿಸಲು ಅವಿರತ ಶ್ರಮಿಸುತ್ತಿರುವವರಿಗೆ ಕಾನೂನು ಮೂಲಕ ಎಲ್ಲಾ ರೀತಿಯ ರಕ್ಷಣೆ ನೀಡಲಾಗುವುದು. ಅರಣ್ಯ ಇಲಾಖೆಯಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ಹಿರಿಯರಿಗೆ ಸಲ್ಲುತ್ತದೆ. ಅದರ ಹಿಂದೆ ನಿಜವಾಗಿ ಕೆಲಸ ಮಾಡುವುದು ಕೆಳ ಹಂತದ ಸಿಬ್ಬಂದಿ. ಪ್ರಾಣದ ಹಂಗು ತೊರೆದು ಕಾಡನ್ನು ಕಾಪಾಡುತ್ತಾರೆ. ಇಂಥವರನ್ನು ಗುರುತಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ಚಾಮರಾಜನಗರದಲ್ಲಿ ನರಭಕ್ಷಕ ಹಲಿ ಸೆರೆ ಸಿಕ್ಕಾಗ ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿತ್ತು. ಆದರೆ ನಾನೇನೂ ಮಾಡಿರಲಿಲ್ಲ. ಆ ಸಾಧನೆ ಸಲ್ಲಬೇಕಿದ್ದದ್ದು ಕೆಳ ಹಂತದ ಸಿಬ್ಬಂದಿಗೆ ಎಂದು ಸಚಿವರು ಹೇಳಿದರು. ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡುವ ಕುರಿತು ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ಶೀಘ್ರದಲ್ಲೇ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

  • ಸಚಿವ ಸಿ.ಸಿ.ಪಾಟೀಲ್‍ಗೆ ನೆರೆ ಸಂತ್ರಸ್ತ ಮಹಿಳೆಯಿಂದ ಕ್ಲಾಸ್

    ಸಚಿವ ಸಿ.ಸಿ.ಪಾಟೀಲ್‍ಗೆ ನೆರೆ ಸಂತ್ರಸ್ತ ಮಹಿಳೆಯಿಂದ ಕ್ಲಾಸ್

    – ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ

    ಗದಗ: ಮಾಧ್ಯಮಗಳ ವರದಿಯಿಂದ ಎಚ್ಚೆತ್ತು ಪ್ರವಾಹ ಪ್ರದೇಶ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತವಾರಿ ಸಚಿವ ಸಿ.ಸಿ.ಪಾಟೀಲ್ ಅವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆದಿದೆ.

    ಪ್ರವಾಹ ಪ್ರದೇಶ ವೀಕ್ಷಣೆಗೆ ಸಚಿವರು ರೋಣ ತಾಲೂಕಿನ ಹೊಳೆಆಲೂರ ಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಸಚಿವರ ವಿರುದ್ಧ ಕಿಡಿಕಾರಿದ ಹೊಳೆಆಲೂರಿನ ನಿವಾಸಿ ಈರಮ್ಮ ಹೆಬ್ಬಳ್ಳಿ ಅವರು, ಇಷ್ಟು ದಿನ ಎಲ್ಲಿ ಹೋಗಿದ್ರಿ? ಈಗ ಯಾಕೆ ಬಂದ್ರಿ ಎಂದು ಪ್ರಶ್ನಿಸಿದರು. ಇದರಿಂದಾಗಿ ಗರಂ ಆದ ಸಚಿವರು, ಯಾರೋ ಹೇಳಿಕೊಟ್ಟಂತೆ ಮಾತನಾಡ ಬೇಡಿ. ರಸ್ತೆ ದುರಸ್ತಿ, ಮನೆ ದುರಸ್ತಿ ಆಮೇಲೆ ನೋಡುತ್ತೇವೆ. ಒಂದು ಬುಟ್ಟಿ ಮಣ್ಣು ಹಾಕಲಿಕ್ಕೂ ಸರ್ಕಾರದಲ್ಲಿ ಹಣವಿಲ್ಲ ಎಂದರು. ಇದನ್ನೂ ಓದಿ: ನಮಗೆ ಇರಲು ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ಇದ್ದೇನೆ: ಸಿದ್ದುಗೆ ವೃದ್ಧೆ ತರಾಟೆ

    ಈ ಮಧ್ಯೆ ಈರಮ್ಮ ಹೆಬ್ಬಳ್ಳಿ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಆಗ ಸಚಿವರು, ನಾನು ಬೆಂಗಳೂರಿಗೆ ಹೋಗಬೇಕು. ಫ್ಲೈಟ್ ಮಿಸ್ ಆಗುತ್ತದೆ. ಟೈಂ ಇಲ್ಲ ಬೇಗ ಹೋಗಬೇಕು ಎಂದರು. ಇದರಿಂದ ಕೋಪಗೊಂಡ ನೆರೆ ಸಂತ್ರಸ್ತ ಮಹಿಳೆ, ಟೈಂ ಇಲ್ಲದಿದ್ದರೆ, ಬೆಂಗಳೂರಲ್ಲೇ ಕುಳಿತು ಮಾತನಾಡಿ, ನಾವು ಟಿವಿಯಲ್ಲೇ ನೋಡುತ್ತೇವೆ. ಇಲ್ಲಿಗ್ಯಾಕೆ ಬಂದ್ರಿ ಎಂದು ತರಾಟೆ ತೆಗೆದುಕೊಂಡರು. ಇದರಿಂದಾಗಿ ತಕ್ಷಣವೇ ಸಚಿವರು ಪಟ್ಟಣದಿಂದ ಕಾಲ್ಕಿತ್ತರು.

    ಬೆಣ್ಣೆಹಳ್ಳ ಪ್ರವಾಹಕ್ಕೆ ಶ್ವಾನವೊಂದು ಕೊಚ್ಚಿಕೊಂಡು ಹೊಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಬಳಿ ನಡೆದಿದೆ. ನೋಡನೋಡುತ್ತಿದ್ದಂತೆ ಪ್ರವಾಸುರನ ಅಟ್ಟಹಾಸಕ್ಕೆ ನಾಯಿ ನೀರು ಪಾಲಾಗಿದೆ. ಸುರಕೋಡ ಗ್ರಾಮ ನಡುಗಡ್ಡೆಯಂತಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

    ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾನದಿಗೆ ಅಪಾರ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಮನೆಗಳು, ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ಸಂತ್ರಸ್ತರು ಮತ್ತೆ ಕಂಗಾಲಾಗಿದ್ದಾರೆ. ಮಲಪ್ರಭಾ ಪ್ರವಾಹಕ್ಕೆ ಕೊಣ್ಣೂರು, ಲಖಮಾಪುರ, ವಾಸನ, ಬೂದಿಹಾಳ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ.