Tag: byelection

  • ಕಾರು ನಿಲ್ಲಿಸದೆ ಬಸವರಾಜ್ ಬೊಮ್ಮಾಯಿ ಉದ್ಧಟತನ

    ಕಾರು ನಿಲ್ಲಿಸದೆ ಬಸವರಾಜ್ ಬೊಮ್ಮಾಯಿ ಉದ್ಧಟತನ

    ಮಂಡ್ಯ: ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದು, ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.

    ಬಸವರಾಜ್ ಬೊಮ್ಮಾಯಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನ ತಪಾಸಣೆಗೆಂದು ಚುನಾವಣಾ ಸಿಬ್ಬಂದಿ ಕಾರನ್ನು ತಡೆಯಲು ಮುಂದಾದರು. ಆದರೆ ಬೊಮ್ಮಾಯಿ ವಾಹನ ತಪಾಸಣೆಗೆ ಸಹಕರಿಸದೆ ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.

    ಈಗಾಗಲೇ ಗೃಹ ಮಂತ್ರಿ ಎರಡು ಕಡೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬುಧವಾರ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಅವರು ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟ ಹಾಗೂ ಮಂಡ್ಯ ತಾಲೂಕಿನ ಹನಕೆರೆ ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

    ಬುಧವಾರ ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಮೊದಲು ನಿಡಘಟ್ಟ ಬಳಿ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಹನಕೆರೆ ಬಳಿ ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಸಿಬ್ಬಂದಿ ಸಿದ್ಧವಾಗಿದ್ದರು. ಇಲ್ಲೂ ವಾಹನ ನಿಲ್ಲಿಸದೆ ಸಚಿವರ ಉದ್ಧಟತನ ಪ್ರದರ್ಶಿಸಿದ್ದಾರೆ.

  • ವಿಶ್ವನಾಥ್ ‘ಗೂಗ್ಲಿ’ಗೆ ಕೈ, ತೆನೆ ನಾಯಕರು ಕಂಗಾಲು

    ವಿಶ್ವನಾಥ್ ‘ಗೂಗ್ಲಿ’ಗೆ ಕೈ, ತೆನೆ ನಾಯಕರು ಕಂಗಾಲು

    ಮೈಸೂರು: ಹುಣಸೂರು ಉಪಚುನಾವಣೆಯ ಮಾತಿನ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಕಟ್ಟಿ ಹಾಕುವುದು ಬಹುಸುಲಭ ಎಂದು ಕೈ, ತೆನೆ ನಾಯಕರು ಭಾವಿಸಿದ್ದರು. ವಿಶ್ವನಾಥ್ ವಿರುದ್ಧ ಅನರ್ಹಗಿಂತಾ ದೊಡ್ಡ ಅಸ್ತ್ರ ಬೇಕಾ? ಎನ್ನುವುದು ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣ. ಆದರೆ, ಹಳ್ಳಿ ಹಕ್ಕಿ ಹಾಕಿದ ಒಂದು ಗ್ಲೂಗಿಗೆ ಕೈ ಪಾಳಯ ತತ್ತರಿಸಿದಂತೆ ಕಾಣುತ್ತಿದೆ.

    ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹುಣಸೂರು ಚುನಾವಣಾ ಅಖಾಡಕ್ಕೆ ಇಳಿದ ಕೂಡಲೇ ಹುಣಸೂರು ಹೊಸ ಜಿಲ್ಲೆ ಮಾಡೇ ಮಾಡುತ್ತೇನೆ. ಇದು ನನ್ನ ಶಪಥ ಎಂದು ಘೋಷಿಸಿ ಬಿಟ್ಟರು. ವಿಶ್ವನಾಥ್ ಅವರ ಈ ಘೋಷಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಕ್ಕಾಬಿಕ್ಕಿಯಾಗಿ ಬಿಟ್ಟಿವೆ. ಚುನಾವಣೆ ಘೋಷಣೆಗೆ ಮುನ್ನ ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡಿದ್ದ ಎಚ್. ವಿಶ್ವನಾಥ್, ಚುನಾವಣಾ ಅಖಾಡಕ್ಕೆ ಇಳಿದ ದಿನವೇ ಈ ವಿಚಾರ ಮರು ಪ್ರಸ್ತಾಪಿಸಿ ಶಪಥ ಮಾಡಿ ಬಿಟ್ಟರು.

    ವಿಶ್ವನಾಥ್ ಮಾಡಿದ ಈ ಶಪಥ ನೋಡಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಅಲ್ಲಿಯವರೆಗೂ ವಿಶ್ವನಾಥ್ ಅವರನ್ನು ಅನರ್ಹ ಶಾಸಕ ಎಂದಯ ಕ್ಷೇತ್ರದಲ್ಲಿ ಹೇಳುತ್ತಾ ಅವರ ವಿರುದ್ಧ ಸುಲಭವಾಗಿ ಜನಾಭಿಪ್ರಾಯ ರೂಪಿಸಬಹುದು ಎಂದುಕೊಂಡಿದ್ದ ಕಾಂಗ್ರೆಸ್, ಜೆಡಿಎಸ್‍ಗೆ ಈ ಶಪಥ ದೊಡ್ಡ ಏಟನ್ನು ನೀಡುತ್ತಿದೆ. ಎಚ್. ವಿಶ್ವನಾಥ್ ಎತ್ತಿರುವ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ ವ್ಯಕ್ತಪಡಿಸಿದರೆ ಅದರಿಂದ ಆಗುವ ನಷ್ಟ ದೊಡ್ಡದಿದೆ. ಈ ಪ್ರಸ್ತಾಪಕ್ಕೆ ಧ್ವನಿಗೂಡಿಸಿದರೆ ಅದರಿಂದ ವಿಶ್ವನಾಥ್ ಹೆಚ್ಚು ಲಾಭವಾಗಲಿದೆ. ಹೀಗಾಗಿ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿವೆ.

    ಎಚ್. ವಿಶ್ವನಾಥ್ ತಮ್ಮ ಪ್ರತಿ ಪ್ರಚಾರದಲ್ಲೂ ಈ ಪ್ರತ್ಯೇಕ ಜಿಲ್ಲೆಯ ವಿಚಾರ ಪ್ರಸ್ತಾಪ ಮಾಡುತ್ತಾ ತಾನೂ ಗೆದ್ದರೆ ಮಾತ್ರ ಇದು ಸಾಧ್ಯ. ಇದು ಸಾಧ್ಯವಾದರೆ ಹುಣಸೂರಿನ ಅಭಿವೃದ್ಧಿ ಚಿತ್ರಣ ಬದಲಾಗುತ್ತೆ. ನಿಮಗೆ ಒಂದು ಜಿಲ್ಲೆಯಾದರೆ ದೊಡ್ಡ ಅನುಕೂಲ ಆಗುತ್ತೆ ಎಂದು ಜನರಲ್ಲಿ ಬಗೆಬಗೆಯ ಕನಸು ಬಿತ್ತುತ್ತಿದ್ದಾರೆ. ಜನರು ಮನದಲ್ಲಿ ಈ ಕನಸು ಉಳಿಯುತ್ತಿದೆ ಎಂಬುದು ನಿಧಾನವಾಗಿ ಸ್ಪಷ್ಟವಾಗುತ್ತಿರುವ ಕಾರಣ ಕಾಂಗ್ರೆಸ್, ಜೆಡಿಎಸ್ ನಾಯಕರು ಈ ‘ಗೂಗ್ಲಿ’ಗೆ ಪ್ರತಿಯಾಗಿ ಯಾವ ರೀತಿ ನಾವು ‘ಯಾರ್ಕರ್’ ಹಾಕಿ ವಿಶ್ವನಾಥ್ ಅವರನ್ನು ಕ್ಲೀನ್ ಬೌಲ್ಡ್ ಮಾಡಬಹುದು ಎಂದು ಚಿಂತಿಸುತ್ತಿದ್ದಾರೆ.

    ಕಾಂಗ್ರೆಸ್ – ಜೆಡಿಎಸ್ ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸುತ್ತವೆ ಎಂಬುದನ್ನು ಎಚ್. ವಿಶ್ವನಾಥ್ ಸ್ಪಷ್ಟವಾಗಿ ಅಂದಾಜು ಮಾಡಿಯೇ ಈ ಪ್ರತ್ಯೇಕ ಜಿಲ್ಲೆಯ ಬ್ರಹ್ಮಾಸ್ತ್ರ ಸಿದ್ಧ ಮಾಡಿಕೊಂಡು ಈಗ ಪ್ರಯೋಗಿಸಿದ್ದಾರೆ. ಈ ಕ್ಷಣದ ಮಟ್ಟಿಗೆ ಇದು ಕೆಲಸ ಮಾಡಿದಂತೆ ಕಾಣುತ್ತಿದೆ.

    ವಿಶ್ವನಾಥ್ ಹೇಳಿದ್ದು ಏನು?
    ಅಖಾಡಕ್ಕಿಳಿದ ಮೊದಲ ದಿನವೇ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ. ನಾನು ಹುಣಸೂರಿನಿಂದ ಗೆದ್ದು ಮಂತ್ರಿಯಾಗುತ್ತೇನೆ. ಹುಣಸೂರು ತಾಲೂಕನ್ನು ಹೊಸ ಜಿಲ್ಲೆಯಾಗಿ ಮಾಡುತ್ತೇನೆ. ಇದು ನನ್ನ ಶಪಥ ಎಂದು ವಿಶ್ವನಾಥ್ ಭರವಸೆ ನೀಡಿದ್ದಾರೆ.

    ನನ್ನದು ಬರೀ ಮಾತು, ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡುತ್ತೇನೆ. ನಮ್ಮದೇ ಸರ್ಕಾರ ಇದೆ. ಹುಣಸೂರು ತಾಲೂಕಿನ್ನು ಜಿಲ್ಲೆಯನ್ನಾಗಿ ಮಾಡಿಯೇ ಮಾಡುತ್ತೇನೆ. ಅದಕ್ಕೆ ದೇವರಾಜ ಅರಸು ಹೆಸರನ್ನು ಇಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶದ ಮರುದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ವಿಶ್ವನಾಥ್ ಮಾತು ಕೊಟ್ಟಿದ್ದಾರೆ.

    ಬಿಜೆಪಿ ಸೇರುವುದಕ್ಕೂ ಮುನ್ನ ಸಹ ಸಹ ವಿಶ್ವನಾಥ್ ಅವರು ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ್ದರು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.

  • ಕೆ.ಆರ್‌ ಪೇಟೆ ಜೆಡಿಎಸ್‍ನಲ್ಲೂ ಒಳಬೇಗುದಿ- ಪ್ರಚಾರಕ್ಕೆ ಜಿಲ್ಲೆಯ ತೆನೆ ನಾಯಕರು ಗೈರು

    ಕೆ.ಆರ್‌ ಪೇಟೆ ಜೆಡಿಎಸ್‍ನಲ್ಲೂ ಒಳಬೇಗುದಿ- ಪ್ರಚಾರಕ್ಕೆ ಜಿಲ್ಲೆಯ ತೆನೆ ನಾಯಕರು ಗೈರು

    ಮಂಡ್ಯ: ಕೆ.ಆರ್‌ ಪೇಟೆ ಕ್ಷೇತ್ರದ ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅದರಲ್ಲೂ ಜೆಡಿಎಸ್ ಪಕ್ಷದ ಮಂಡ್ಯ ಜಿಲ್ಲೆಯ ಶಾಸಕರು, ಮುಖಂಡರನ್ನು ಹೊರತುಪಡಿಸಿ ಕೆ.ಆರ್ ಪೇಟೆ ಹಾಗೂ ಕೆಲ ರಾಜ್ಯದ ನಾಯಕರು ಫುಲ್ ಆಕ್ಟಿವ್ ಆಗಿದ್ದಾರೆ. ಆದರೆ ಜಿಲ್ಲೆ ನಾಯಕರು ಈ ಕಡೆ ತಲೆನೆ ಹಾಕ್ತಿಲ್ಲ.

    ಕೆ.ಆರ್‌ ಪೇಟೆ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕು ಎಂಬ ಉದ್ದೇಶದಿಂದ ದಳಪತಿಗಳು ಫುಲ್ ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಕೆಲ ಮುಖಂಡರು ಪ್ರಚಾರಕ್ಕೆ ಇಲ್ಲಿವರೆಗೂ ಬಂದಿಲ್ಲ. ಸೋಮವಾರ ನಾಮಪತ್ರ ಸಲ್ಲಿಸುವ ಜೆಡಿಎಸ್ ಮೆರವಣಿಗೆ ಮಾಡುವ ವೇಳೆ ಮಾಜಿ ಸಚಿವ ಪುಟ್ಟರಾಜು ಕಾಣಿಸಿಕೊಂಡಿದರು. ಬಳಿಕ ನಾಮಪತ್ರ ಸಲ್ಲಿಸುವ ವೇಳೆ ಪುಟ್ಟರಾಜು ಕಾಣಿಸಿಕೊಂಡಿರಲಿಲ್ಲ.

    ಜಿಲ್ಲೆಯಲ್ಲಿ 6 ಮಂದಿ ಜೆಡಿಎಸ್ ಶಾಸಕರು ಇದರೂ ಪ್ರಚಾರ ಕೆಲಸಕ್ಕೆ ಮಾತ್ರ ಇದುರೆಗೂ ಬಂದಿಲ್ಲ. ಸದ್ಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪಕ್ಕದ ಶ್ರವಣಬೆಳಗೊಳ ಕ್ಷೇತ್ರದ ಬಾಲಕೃಷ್ಣ ಹಾಗೂ ಕೆ.ಆರ್‌ ಪೇಟೆ ನಾಯಕರು ಮಾತ್ರ ಪ್ರಚಾರದ ವೇಳೆ ಸಾಥ್ ನೀಡುತ್ತಿದ್ದಾರೆ.

    ಕೆ.ಆರ್‌ ಪೇಟೆ ಉಪಚುನಾವಣೆಗೆ ಜೆಡಿಎಸ್‍ನಿಂದ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಡಿ ಮಂಜು ಅವರಿಗೆ ಟಿಕೆಟ್ ನೀಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಪುಟ್ಟರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಮುಖಂಡರಿಗೆ ಒಲವಿತ್ತು. ಆದರೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರಿಗೆ ಟಿಕೆಟ್ ನೀಡಿದರು. ಇದರಿಂದ ಬೇಸರಗೊಂಡ ಹಿನ್ನೆಲೆಯಲ್ಲಿ ಇಲ್ಲಿವರೆಗೂ ಮಂಡ್ಯ ಮುಖಂಡರು ಕೆಆರ್‍ಪೇಟೆಗೆ ಬಂದಿಲ್ಲ ಎನ್ನಲಾಗುತ್ತಿದೆ.

    ಒಂದೆಡೆ ಜಿಲ್ಲೆಯ ನಾಯಕರು ಪ್ರಚಾರದ ವೇಳೆ ಕಾಣಿಸಿಕೊಳ್ಳುತ್ತಿಲ್ಲ, ಇನ್ನೊಂದೆಡೆ ಈ ಡ್ಯಾಮೆಜ್‍ನ್ನು ಕಂಟ್ರೋಲ್ ಮಾಡಲು ಇಂದು ಮಾಜಿ ಸಚಿವ ರೇವಣ್ಣ ಜೆಡಿಎಸ್ ಅಭ್ಯರ್ಥಿ ಪರ ಮತ ಭೇಟೆ ಮಾಡಲು ಅಖಾಡಕ್ಕೆ ಧುಮ್ಮುಕುತ್ತಿದ್ದಾರೆ.

  • 6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    ಬೆಂಗಳೂರು: ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಿಂದ ಬಿಗ್ ರಿಲೀಫ್ ಸಿಕ್ಕಿದರೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರಿಯಬೇಕಾದರೆ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

    ಹೌದು. ಕರ್ನಾಟಕ ವಿಧಾನಸಭೆ ಬಲಾಬಲ 224 ಆಗಿದ್ದು ಒಬ್ಬರು ಅಂಗ್ಲೋ ಇಂಡಿಯನ್ ಸದಸ್ಯರಿದ್ದಾರೆ. 17 ಮಂದಿ ಶಾಸಕರು ಅನರ್ಹಗೊಂಡ ಪರಿಣಾಮ ಬಲ 207ಕ್ಕೆ ಕುಸಿದಿದೆ. ಬಹುಮತ ಸಾಧಿಸಲು 104 ಶಾಸಕರು ಬೆಂಬಲ ಬೇಕಿದ್ದ ಪರಿಣಾಮ ಬಿಜೆಪಿ 105 ಜನ ಶಾಸಕರ ಜೊತೆ ಓರ್ವ ಪಕ್ಷೇತರ ಶಾಸಕರ ಬೆಂಬಲ ಇದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 66, ಜಿಡಿಎಸ್ 34 ಶಾಸಕರಿದ್ದರೆ ಬಿಎಸ್‍ಪಿಯಿಂದ ಉಚ್ಚಾಟಿದ ಶಾಸಕ ಮಹೇಶ್ ಇದ್ದಾರೆ.

    15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಪರಿಣಾಮ ವಿಧಾನಸಭೆಯ ಬಲಾಬಲ 222+1 ಏರಿಕೆ ಆಗಲಿದೆ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ 112 ಶಾಸಕರ ಬೆಂಬಲ ಬೇಕಿದ್ದು, ಬಿಎಸ್‍ವೈ ಸಿಎಂ ಪಟ್ಟ ಉಳಿಸಿಕೊಳ್ಳಬೇಕಾದರೆ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿ.5 ರಂದು ಮತದಾನ ನಡೆಯಲಿದ್ದು ಡಿ.9 ಸೋಮವಾರದಂದು ಫಲಿತಾಂಶ ಪ್ರಕಟವಾಗಲಿದೆ.

    ಈ 15 ಕ್ಷೇತ್ರಗಳ ಪೈಕಿ ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಡಿತವಿದೆ. ಆದರೆ ಹಳೆ ಮೈಸೂರು ಭಾಗವಾದ ಕೆ.ಆರ್.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರವಾದ ಸ್ಪರ್ಧೆ ಇದೆ. ಆದರೆ ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಬಿಜೆಪಿ ಗೆದ್ದಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದಾರೆ.

    2 ಕ್ಷೇತ್ರಗಳಿಗೆ ಇಲ್ಲ:
    ಆನರ್ಹ ಶಾಸಕರ 17 ಕ್ಷೇತ್ರದ ಪೈಕಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹಾಗೂ ರಾಯಚೂರಿನ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ಚುನಾವಣೆ ನಡೆಯುತ್ತಿಲ್ಲ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆ ಹಿಡಿಯಲಾಗಿದೆ.

    ಇನ್ನು ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯಿಲ್ಲ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದು, ಬೋಗಸ್ ಮತದಾನ ನಡೆಯದಿದ್ದರೆ ನಾನೇ ಗೆಲ್ಲುತ್ತಿದ್ದೆ ಎನ್ನುವುದು ಬಸನಗೌಡ ತುರ್ವಿಹಾಳ ವಾದ. ಹೀಗಾಗಿ ಎರಡು ಪ್ರಕರಣ ಕೋರ್ಟಿನಲ್ಲಿ ಇರುವ ಕಾರಣದಿಂದ 2 ಕ್ಷೇತ್ರಗಳ ಉಪಚುನಾವಣೆ ಕೋರ್ಟ್ ತೀರ್ಪು ಬರುವವರೆಗೂ ಕೈ ಬಿಡಲಾಗಿದೆ.

  • ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

    ಮಹಾರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ರಾಜ್ಯದ ರಾಜಕೀಯ ಭವಿಷ್ಯ

    ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತೆ ಎನ್ನಲಾಗುತ್ತಿದ್ದು, ರಾಜ್ಯದಲ್ಲಿ ಯಾವ ಕ್ಷಣದಲ್ಲಿ ಬೇಕಾದರು ಚುನಾವಣೆ ನಡೆಯಬಹುದು ಅನ್ನೋ ವಿಪಕ್ಷಗಳ ಮಾತು ನಿಜವಾಗುತ್ತೆ ಎಂಬ ಅನುಮಾನಗಳು ಶುರುವಾಗಿದೆ.

    ನೆರೆಯ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಕರ್ನಾಟಕವನ್ನ ಟಾರ್ಗೆಟ್ ಮಾಡಲಿದ್ದಾರೆ. ಕೇಂದ್ರದಂತೆ ರಾಜ್ಯದಲ್ಲಿ ಕೂಡ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿ ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆ ಫಲಿತಾಂಶದ ಮೇಲೆ ಕರ್ನಾಟಕದ ಮಧ್ಯಂತರ ಚುನಾವಣೆ ಭವಿಷ್ಯ ನಿರ್ಧಾರವಾಗುತ್ತದೆ. ಸ್ವತಃ ಬಿಜೆಪಿ ನಾಯಕರುಗಳೇ ಚುನಾವಣೆಗೆ ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದೆ. ಆದ್ದರಿಂದ ಇನ್ನು 6 ತಿಂಗಳಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯೋದು ಗ್ಯಾರಂಟಿನಾ? ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧದ ನಡುವೆಯು ಬಿಜೆಪಿಯಲ್ಲಿ ಚುನಾವಣಾ ಸಿದ್ಧತೆ ಆರಂಭವಾಗಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಮೋದಿ, ಶಾ ಅವರ ಈ ಲೆಕ್ಕಾಚಾರಕ್ಕೆ ರಾಜ್ಯ ಬಿಜೆಪಿಯ ಕೆಲವು ನಾಯಕರು ಸಹ ಸಮ್ಮತಿ ಸೂಚಿಸಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಚುನಾವಣೆಯ ಬಗ್ಗೆ ಮಾತನಾಡದೆ ಸರ್ಕಾರ ಉಳಿಸಿಕೊಂಡು ಹೋಗುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣದ ಭವಿಷ್ಯವು ನಿರ್ಧಾರವಾಗಲಿದೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರ ಚುನಾವಣಾ ಆಸಕ್ತಿ ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಸುತ್ತಿನ ರಾಜಕೀಯ ಜಿದ್ದಾ ಜಿದ್ದಿಗೆ ವೇದಿಕೆ ಸೃಷ್ಟಿಸಿ ಕೊಡುವ ಸಾಧ್ಯತೆ ಕಂಡುಬರುತ್ತಿದೆ.

  • 2019ರಲ್ಲಿ ಮಂಡ್ಯದಲ್ಲಿ ಬಿಜೆಪಿ ಬರುತ್ತೆ: ಅಂಕಿ ಸಂಖ್ಯೆಯ ಮಾಹಿತಿ ಕೊಟ್ಟ ಸಿಟಿ ರವಿ

    2019ರಲ್ಲಿ ಮಂಡ್ಯದಲ್ಲಿ ಬಿಜೆಪಿ ಬರುತ್ತೆ: ಅಂಕಿ ಸಂಖ್ಯೆಯ ಮಾಹಿತಿ ಕೊಟ್ಟ ಸಿಟಿ ರವಿ

    ಬೆಂಗಳೂರು: ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಸೋಲಾಗಿರಬಹುದು. ಆದರೆ 2019ರಲ್ಲಿ ಮಂಡ್ಯದಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

    ಸಿ.ಟಿ ರವಿ ತಮ್ಮ ಟ್ವಿಟ್ಟರಿನಲ್ಲಿ, “2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಡ್ಯದಲ್ಲಿ 86,993 ಮತಗಳನ್ನು ಪಡೆದಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 2,44,377 ಮತಗಳನ್ನು ಪಡೆದಿದ್ದಾರೆ. 1,57,384 ಮತಗಳು ಹೆಚ್ಚಾಗಿದ್ದು, ಮಂಡ್ಯದ ಜನರು ನಮ್ಮ ಮೇಲೆ ಇನ್ನೂ ನಂಬಿಕೆ ಇಟ್ಟಿದ್ದಾರೆ. 2019ಕ್ಕೆ ನಾವು ಇದನ್ನು ಉಪಯೋಗಿಸಿಕೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಂಡ್ಯದಲ್ಲಿ ದಾಖಲೆ ನಿರ್ಮಿಸಿದ ಶಿವರಾಮೇಗೌಡ – ಯಾರಿಗೆ ಎಷ್ಟು ಮತ?

    ಈ ಮೊದಲು ಸಿ.ಟಿ ರವಿ ತಮ್ಮ ಟ್ವಟ್ಟರಿನಲ್ಲಿ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ. ಮುಂದೆ ದೊಡ್ಡ ಗುರಿ ಇದೆ ಎಂದು ಬರೆದು ಕಾರ್ಯಕರ್ತರನ್ನು ತಮ್ಮ ಟ್ವೀಟ್ ಮೂಲಕ ಹುರಿದುಂಬಿಸಿದ್ದರು. ಇದನ್ನೂ ಓದಿ: ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಹೇಳಿಕೆ ವೈಯಕ್ತಿಕವಾಗಿ ನೋವುಂಟು ಮಾಡಿದೆ- ಎಚ್‍ಡಿಕೆಗೆ ಈಶ್ವರಪ್ಪ ಬಹಿರಂಗ ಪತ್ರ

    ಸಿಎಂ ಹೇಳಿಕೆ ವೈಯಕ್ತಿಕವಾಗಿ ನೋವುಂಟು ಮಾಡಿದೆ- ಎಚ್‍ಡಿಕೆಗೆ ಈಶ್ವರಪ್ಪ ಬಹಿರಂಗ ಪತ್ರ

    ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ಅವರು ಪದೇ ಪದೇ ಸಾಯುವ ಹೇಳಿಕೆ ನೀಡುತ್ತಿದ್ದಾರೆ. ಆದರೆ ಒಬ್ಬ ಮುಖ್ಯಮಂತ್ರಿ ಆಗಿ ಅವರು ಜನತೆಗೆ ಆತ್ಮಸ್ಥೈರ್ಯ ತುಂಬಬೇಕು. ರಾಜ್ಯದ ರೈತರ ಸಾಲ ಮನ್ನಾ ಮಾಡಿ, ಅವರ ಆಶೀರ್ವಾದ ಪಡೆಯಿರಿ ಎಂದು ಬಿಜೆಪಿ ಮುಖಂಡ, ಶಾಸಕ ಕೆಎಸ್ ಈಶ್ವರಪ್ಪ ಸಿಎಂ ಕುಮಾರಸ್ವಾಮಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

    ಉಪಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಈಶ್ವರಪ್ಪ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಉಲ್ಲೇಖಿಸಿರುವ ಅವರು, ಮುಖ್ಯಮಂತ್ರಿಗಳಾಗಿ ಸಾವಿನ ಬಗ್ಗೆ ಪದೇ ಪದೇ ಕೇಳಿಕೆ ನೀಡುತ್ತಿರುವುದು ವಿಷಾದ ತಂದಿದೆ. ರೈತರ ಸಾಲಮನ್ನಾ ಮಾಡುವ ಮೂಲಕ ರಾಜ್ಯದ ಜನರಲ್ಲಿ ಆತ್ಮಸ್ಥೈರ್ಯ ತುಂಬಿ, ರೈತರ ಆಶೀರ್ವಾದ ಪಡೆಯಬೇಕು. ಈ ಮೂಲಕ ಹತ್ತಾರು ವರ್ಷ ಬದುಕಿ ಬಾಳಿ ಎಂದು ಕಿವಿಮಾತು ಹೇಳಿದ್ದಾರೆ.

    ಸುದೀರ್ಘ 4 ಪುಟಗಳ ಪತ್ರ ಬರೆದಿರುವ ಈಶ್ವರಪ್ಪ ಅವರು, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಹಾಗೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಶೋಭಾ ಕರಂದ್ಲಾಜೆ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವುದು ಉತ್ತಮವಲ್ಲ. ಅಲ್ಲದೇ ನಿಮ್ಮದೇ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ಅವರು ಕೂಡ ಅವರದ್ದೇ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮ ಪರಂಪರೆಯಲ್ಲಿ ಹೆಣ್ಣುಮಕ್ಕಳಿಗೆ ತಾಯಿ ಸ್ಥಾನ ನೀಡಿದ್ದೇವೆ. ಅವರಿಗೆ ಗೌರವ ನೀಡಲು ಸೂಕ್ತವಾದ ನಿರ್ದೇಶನ ನೀಡಲು ಆಗ್ರಹಿಸಿದ್ದಾರೆ.

    ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನ ಬಂದ್ ಮಾಡಲಾಗುವುದು ಎಂಬ ದೇವೇಗೌಡರು ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ ಅವರು, ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆದ್ದಿದೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ನಮಗೆ ತಡೆಯಲು ಇವರಿಗೆ ಆಗುತ್ತಾ. ಅವರ ಕ್ಷೇತ್ರವಾಗಿರುವ ಹಾಸನದಲ್ಲಿಯೇ, ಒಂದು ಕ್ಷೇತ್ರವನ್ನ ಬಿಜೆಪಿ ಗೆದ್ದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ ಜಿಲ್ಲೆ, ರಾಜ್ಯ ಹಾಗೂ ದೇಶದ ಅಧಿಕಾರ ಹಿಡಿಯಲಿದ್ದೇವೆ. ದಕ್ಷಿಣ ಭಾರತವನ್ನೂ ಗೆಲ್ಲಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ನೂತನ ಶಾಸಕರಾಗಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಹಾಗೂ ಡಾ. ಗೀತಾ ಮಹದೇವ ಪ್ರಸಾದ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಪೀಕರ್ ಕೆಬಿ ಕೋಳಿವಾಡ ಪ್ರಮಾಣ ವಚನ ಬೋಧನೆ ಮಾಡಿದ್ರು.

    ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಕಳಲೆ ಕೇಶವಮೂರ್ತಿ ಅವರು ಶ್ರೀಕಂಠೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಹಾಗೆ ಮಲೆ ಮಹದೇಶ್ವರನ ಹೆಸರಿನಲ್ಲಿ ಗೀತಾ ಮಹದೇವಪ್ರಸಾದ್ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

    ಇದೇ ವೇಳೆ ಮಾತನಾಡಿದ ಶಾಸಕಿ ಗೀತಾ ಮಹದೇವಪ್ರಸಾದ್, ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ. ಅದರ ಬಗ್ಗೆ ನಾನು ಯಾವುದೇ ಯೋಚನೆ ಮಾಡಿಲ್ಲ. ಅವರು ಕೊಟ್ಟರೆ ಮುಂದೆ ನೋಡೋಣ ಅಂದ್ರು.

    ಕ್ಷೇತ್ರದಲ್ಲಿ ಮಹದೇವಪ್ರಸಾದ್ ರವರು ಶೇ. 85ರಷ್ಟು ಕೆಲಸ ಮಾಡಿದ್ದಾರೆ. ನಾನು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಬೇಕಾಗಿದೆ. ಅವರ ನೆನಪು ಇನ್ನೂ ನಮ್ಮನ್ನ ಕಾಡುತ್ತಿದೆ. ಕೆರೆಗೆ ನೀರು ತುಂಬುವ ಯೋಜನೆ ಬಾಕಿಯಿದೆ. ಆ ಕೆಲಸವನ್ನ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ. ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಖುಷಿ ತಂದಿದೆ. ನಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಅಂತ ಗೀತಾ ಮಹದೇವಪ್ರಸಾದ್ ಹೇಳಿದ್ರು .

    ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಾಸಕನಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ತುಂಬಾ ಸಂತೋಷವಾಗಿದೆ. ಕ್ಷೇತ್ರದ ಮತದಾರರಿಗೆ ನಾನು ಋಣಿಯಾಗಿರುವೆ. ಉಳಿದ ಅಲ್ಪಾವಧಿಯಲ್ಲೇ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತೇನೆ ಅಂದ್ರು.

     

  • ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್, ಸರ್ಕಾರದ ಅಭಿವೃದ್ಧಿಗೆ ಜನ್ರ ಮತ: ಆಂಜನೇಯ

    ಬೆಂಗಳೂರು: ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಕಾಂಗ್ರೆಸ್ ಮೇಲೆ ಸಾಕಷ್ಟು ಅಪಪ್ರಚಾರ ನಡೆಸಲಾಗಿತ್ತು. ಜನರು ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ಜನ ಯಾವುದಕ್ಕೂ ಕಿವಿಗೊಡದೆ ಕಾಂಗ್ರೆಸ್‍ಗೆ ಮತಹಾಕಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಗೆ ಮತದಾರರು ಮಣೆ ಹಾಕಿದ್ದಾರೆ ಅಂತಾ ಸಚಿವ ಆಂಜನೇಯ ಹೇಳಿದ್ದಾರೆ.

    ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಂಜನಗೂಡು, ಗುಂಡ್ಲುಪೇಟೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳನ್ನ ಜನರು ಒಪ್ಪಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ದೇಶ ಕಟ್ಟಿದ್ದು, ಬೆಳೆಸಿದ್ದು ಕಾಂಗ್ರೆಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಈ ಫಲಿತಾಂಶದಿಂದ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತಾ ಹೇಳಿದ್ರು.

    ಸಂಭ್ರಮಾಚರಣೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಿಎಂ ಮನೆ ಮುಂದೆ ಸಿಹಿ ಹಂಚಿ ಸಂಭ್ರಮಿಸಿದ್ರು. ಅಲ್ಲದೇ ಕಾವೇರಿ ನಿವಾಸದ ಮುಂದೆ ಪಟಾಕಿ ಸಿಡಿಸಿ ಗೆಲುವನ್ನು ಆಚರಿಸಲು ಮುಂದಾದಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಘೋಷಣೆ ಕೂಗುವ ಮೂಲಕ ಸಂತಸ ವ್ಯಕ್ತಪಡಿಸಿದ್ರು.

  • ಉಪಚುನಾವಣೆ ಸೋಲಿನ ಬಗ್ಗೆ ಅಮಿತ್ ಶಾಗೆ ಬಿಎಸ್‍ವೈ ವರದಿ

    ಉಪಚುನಾವಣೆ ಸೋಲಿನ ಬಗ್ಗೆ ಅಮಿತ್ ಶಾಗೆ ಬಿಎಸ್‍ವೈ ವರದಿ

    – ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ
    – ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ
    – ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ

    ರವೀಶ್ ಎಚ್.ಎಸ್.
    ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಸೋಲಿನ ಬಗ್ಗೆ ರಾಜ್ಯ ಬಿಜೆಪಿ, ಹೈಕಮಾಂಡ್‍ಗೆ ವರದಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಎರಡೂ ಕ್ಷೇತ್ರಗಳ ಸೋಲಿನ ಬಗ್ಗೆ ವರದಿಯನ್ನು ರವಾನಿಸಿದ್ದಾರೆ.

    ಈ ವರದಿಯ ಸಂಪೂರ್ಣ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಇದರಲ್ಲಿ ಕ್ಷೇತ್ರದ ಎಲ್ಲಾ ಮಾಹಿತಿಗಳನ್ನು ನೀಡಿದ್ದಾರೆ.

    ವರದಿಯಲ್ಲೇನಿದೆ..?: ನಾವು ಸೋತಿದ್ದೇವೆ, ಆದ್ರೆ ನಮ್ಮ ಶೇಕಡಾವಾರು ಮತ ಗಳಿಕೆ ಹೆಚ್ಚಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರಗಳು ನಮ್ಮದ್ದಲ್ಲ. ಇವು ಕಾಂಗ್ರೆಸ್ ಭದ್ರಕೋಟೆ ಕ್ಷೇತ್ರಗಳು. ರಾಜ್ಯದಲ್ಲಿ ಸರ್ಕಾರವೂ ಕಾಂಗ್ರೆಸ್‍ನವರದ್ದೇ ಇತ್ತು. ಹಾಗಾಗಿ ನಾವು ಸೋತಿದ್ದೇವೆ. ಆದರೆ, ನಂಜನಗೂಡಿನಲ್ಲಿ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಬಿಜೆಪಿ ಶೇಕಡಾವಾರು ಮತ 25.05% ಇತ್ತು, ಈಗ ಬಿಜೆಪಿ 41.50 ಶೇಕಡಾವಾರು ಮತ ಪಡೆದಿದೆ.

    ಗುಂಡ್ಲುಪೇಟೆಯಲ್ಲೂ ಬಿಜೆಪಿಗೆ ಶೇಕಡಾವಾರು ಮತ ಹೆಚ್ಚಾಗಿದೆ. 2013ರಲ್ಲಿ ಕೆಜೆಪಿ+ಬಿಜೆಪಿ ಶೇಕಡಾವಾರು ಮತ 42.05% ಇತ್ತು, ಈಗ ಬಿಜೆಪಿ ಶೇಕಡಾವಾರು 45.37% ಮತ ಪಡೆದಿದೆ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸಾಧನೆ ಉತ್ತಮವಾಗಿದೆ. ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಪ್ರಬಲವಾಗ್ತಿದೆ. ಹಾಗಾಗಿ ಈ ಎರಡು ಕ್ಷೇತ್ರಗಳ ಸೋಲಿನಿಂದ ಬಿಜೆಪಿಗೆ ಯಾವುದೇ ನಷ್ಟ ಆಗಿಲ್ಲ.

    ರಾಜ್ಯ ಬಿಜೆಪಿಯ ಎಲ್ಲ ನಾಯಕರ ಸಂಘಟಿತ ಪ್ರಚಾರ ಕೂಡ ಈ ಚುನಾವಣೆಯಲ್ಲಿತ್ತು. ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ಆದ್ರೆ ಮುಂದಿನ ಚುನಾವಣೆಗೆ ಅತಿಯಾದ ಆತ್ಮವಿಶ್ವಾಸ ಬೇಡ ಎಂಬ ಸಂದೇಶ ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ನಾವು 2018ರ ಚುನಾವಣೆಗೆ ತಯಾರಾಗುತ್ತೇವೆ ಎಂದು ಬಿಎಸ್‍ವೈ ಅಮಿತ್ ಶಾ ಅವರಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.