Tag: by election

  • ಸೋನಿಯಾ ಹುಟ್ಟುಹಬ್ಬಕ್ಕೆ ಸೋಲಿನ ಗಿಫ್ಟ್ ಕೊಟ್ಟ ಕೆಪಿಸಿಸಿ

    ಸೋನಿಯಾ ಹುಟ್ಟುಹಬ್ಬಕ್ಕೆ ಸೋಲಿನ ಗಿಫ್ಟ್ ಕೊಟ್ಟ ಕೆಪಿಸಿಸಿ

    ನವದೆಹಲಿ: ಹುಟ್ಟುಹಬ್ಬದ ಖುಷಿಯಲ್ಲಿದ್ದ ಎಐಸಿಸಿ ಅಧಿನಾಯಕಿ ಸೋನಿಯಗಾಂಧಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ನೀಡಿದ್ದಾರೆ.

    ಉಪ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಲ್ಪ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಗೂ ಮುನ್ನ ಉಪಚುನಾವಣೆಗೆ ಸಿದ್ಧವಾಗಿದ್ದ ಕಾಂಗ್ರೆಸ್ ಸಾಕಷ್ಟು ತಂತ್ರಗಳನ್ನು ಮಾಡಿತ್ತು. ಅಲ್ಲದೇ ಹೋದ ಕಡೆಯಲ್ಲ ಅನರ್ಹ ಶಾಸಕರಿಗೆ ಪಾಠ ಕಲಿಸಬೇಕು ಅವರನ್ನು ಸೋಲಿಸುವುದು ನಮ್ಮ ಆದ್ಯತೆ ಎನ್ನುವಂತೆ ಸಿದ್ದರಾಮಯ್ಯ ಭಾಷಣ ಮಾಡಿದ್ದರು.

    ಚುನಾವಣಾ ನೇತೃತ್ವದ ಹೊತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದ್ದರು. ತಮ್ಮ ಬೆಂಬಲಿಗರು ಕಟ್ಟಾ ಶಿಷ್ಯರಿಗೆ ಟಿಕೆಟ್ ಕೊಡಿಸುವ ಮೂಲಕ ಕನಿಷ್ಠ 5-6 ಸೀಟುಗಳನ್ನು ಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಸಿದ್ದರಾಮಯ್ಯ ತಂತ್ರಗಾರಿಕೆ ಸಂಪೂರ್ಣ ಉಲ್ಟಾ ಆಗಿದ್ದು ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸೋನಿಯಗಾಂಧಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ಕೊಟ್ಟಂತಾಗಿದೆ.

    ದೇಶದಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಸರಣಿ ದೌರ್ಜನ್ಯಗಳ ಹಿನ್ನೆಲೆ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸೋನಿಯಗಾಂಧಿ ನಿರಾಕರಿಸಿದ್ದಾರೆ.

  • ಅಗ್ನಿ ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್ – ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್ ಬಿದ್ದಿದೆ? ಅಂತರ ಎಷ್ಟು ಹೆಚ್ಚಾಗಿದೆ?

    ಅಗ್ನಿ ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್ – ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್ ಬಿದ್ದಿದೆ? ಅಂತರ ಎಷ್ಟು ಹೆಚ್ಚಾಗಿದೆ?

    ಬೆಂಗಳೂರು: 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸಿದ್ದು ಬಿಎಸ್‍ವೈ ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಮೂಲಕ ಇನ್ನು ಮೂರುವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ.

    ಸರ್ಕಾರ ಉಳಿಯಬೇಕಾದರೆ ಕನಿಷ್ಟ 6 ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯಲ್ಲಿತ್ತು. ಆದರೆ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಅದರಲ್ಲೂ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಾರಾಯಣ ಗೌಡ ಗೆದ್ದು ಇತಿಹಾಸ ಸೃಷ್ಟಿಯಾಗಿದೆ. ಹಳೆ ಮೈಸೂರು ಭಾಗದ ಎರಡು ಕಡೆ ಕಮಲ ಅರಳಿದ್ದು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

    ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ವೋಟ್?
    1 ಕೆ.ಆರ್.ಪೇಟೆ – ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆಯನ್ನು ತೆರೆದಿದ್ದು, ನಾರಾಯಣ ಗೌಡ 9,728 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರ 66,087 ಮತಗಳು ಬಿದ್ದರೆ ಜೆಡಿಎಸ್ ಅಭ್ಯರ್ಥಿ ದೇವರಾಜ್ ಪರ 56,359 ಮತ ಬಿದ್ದಿದೆ. ಕಾಂಗ್ರೆಸ್ ಪರ 41,673 ಮತಗಳು ಚಲಾವಣೆಯಾಗಿದೆ. ಕಳೆದ ಚುನಾವಣೆಯಲ್ಲಿ ನಾರಾಯಣ ಗೌಡ 17,119 ಮತಗಳಿಂದ ಜಯಗಳಿಸಿದ್ದರೆ ಬಿಜೆಪಿಗೆ 9,819 ಮತಗಳು ಮಾತ್ರ ಬಿದ್ದಿತ್ತು.

    2. ಹೊಸಕೋಟೆ – ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ  ನಾಗರಾಜ್ ವಿರುದ್ಧ  ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಿಂದ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.

    3. ಹುಣಸೂರು – ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಸೋತಿದ್ದಾರೆ. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದಾರೆ.

    4. ಹಿರೇಕೆರೂರು – ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದ ಬಿಸಿ ಪಾಟೀಲ್ 29,076 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪರ 85,562 ಮತಗಳು ಚಲಾವಣೆಗೊಂಡರೆ ಕಾಂಗ್ರೆಸ್ ಪರ 56,495 ಮತಗಳು ಚಲಾವಣೆಗೊಂಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಬಣಕಾರ್ ವಿರುದ್ಧ ಕೇವಲ 555 ಮತಗಳಿಂದ ಜಯಗಳಿಸಿದ್ದ ಬಿಸಿ ಪಾಟೀಲ್ ಈ ಬಾರಿ ತಮ್ಮ ಗೆಲುವಿನ ಅಂತರವನ್ನು 29 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದಾರೆ.

    5. ಚಿಕ್ಕಬಳ್ಳಾಪುರ – ಹಳೆ ಮೈಸೂರು ಭಾಗದ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವೇ ಜಾಸ್ತಿ. ಆದರೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿದೆ. ಮೆಡಿಕಲ್ ಕಾಲೇಜು ತರುತ್ತೇನೆ ಎಂಬ ಸುಧಾಕರ್ ಭರವಸೆ ಕೆಲಸ ಮಾಡಿದ್ದು 34,801 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 84,389 ಮತಗಳು ಬಿದ್ದರೆ ಕಾಂಗ್ರೆಸ್ ಪರವಾಗಿ 49,588 ಮತಗಳು ಬಿದ್ದಿದೆ. ಜೆಡಿಎಸ್ 35,869 ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಸುಧಾಕರ್ 45,177 ಮತಗಳಿಂದ ಜಯಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿವಿ ಮಂಜುನಾಥ್ ಅವರಿಗೆ 5,576 ಮತಗಳು ಬಿದ್ದಿತ್ತು.

    6. ವಿಜಯನಗರ – ಬಳ್ಳಾರಿಯ ವಿಜಯನಗರದ ಕಿಂಗ್ ನಾನೇ ಎಂಬುದನ್ನು ಆನಂದ್ ಸಿಂಗ್ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. 30,207 ಮತಗಳಿಂದ ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಬಳ್ಳಾರಿ ರಾಜಕೀಯಕ್ಕೆ ತಿರುಗೇಟು ನೀಡಿದ್ದಾರೆ. ಬಿಜೆಪಿ 85,332 ಮತಗಳನ್ನು ಪಡೆದರೆ, ಕಾಂಗ್ರೆಸ್ 55,270 ಮತಗಳನ್ನು ಪಡೆದಿದೆ. 2018ರಲ್ಲಿ ಬಿಜೆಪಿಯ ಗವಿಯಪ್ಪ ವಿರುದ್ಧ 8,228 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    7. ಯಶವಂತಪುರ – ಎಸ್.ಟಿ. ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.

    8. ಗೋಕಾಕ್ – ದೋಸ್ತಿ ಸರ್ಕಾರದ ವಿರುದ್ಧ ಆರಂಭದಲ್ಲೇ ಬಂಡಾಯ ಎದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ 27,973 ಮತಗಳಿಂದ ಗೆದ್ದಿದ್ದಾರೆ. ಬಿಜೆಪಿ ಪರ 86,060 ಮತಗಳು ಚಲಾವಣೆಗೊಂಡರೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿಗೆ 58,736 ಮತಗಳು ಬಿದ್ದಿದೆ. ಕಳೆದ ಚುನಾವಣೆಯಲ್ಲಿ 14,280 ಮತಗಳಿಂದ ಜಾರಕಿಹೊಳಿ ಜಯಗಳಿಸಿದ್ದರು.

    9. ರಾಣೆಬೆನ್ನೂರು – ಬಿಜೆಪಿಯ ಅರುಣ್ ಕುಮಾರ್ 23,222 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಕಣ್ಣೀರು ಹಾಕಿದ್ದರೂ ಜನ ಕಾಂಗ್ರೆಸ್ಸಿನ ಕೋಳಿವಾಡ ಅವರನ್ನು ಸೋಲಿಸಿದ್ದಾರೆ. ಬಿಜೆಪಿ 95,438 ಮತಗಳನ್ನು ಪಡೆದರೆ ಕಾಂಗ್ರೆಸ್ 72,216 ಮತಗಳನ್ನು ಪಡೆದಿದೆ. 2018ರಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್ ಶಂಕರ್ 4,338 ಮತಗಳಿಂದ ಗೆದ್ದಿದ್ದರು. ಮೂರನೇ ಸ್ಥಾನ ಪಡೆದ ಬಿಜೆಪಿಗೆ 48,973 ಮತಗಳು ಬಿದ್ದಿತ್ತು.

    10. ಕಾಗವಾಡ – 18,557 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ಜಯಗಳಿಸಿದ್ದಾರೆ. ಬಿಜೆಪಿ 76,952 ಮತಗಳನ್ನು ಪಡೆದರೆ, ಕಾಂಗ್ರೆಸ್ 58,395 ಮತಗಳನ್ನು ಪಡೆದಿದೆ. ಜೆಡಿಎಸ್ 2,448 ಮತಗಳನ್ನು ಮಾತ್ರ ಪಡೆಯಲು ಶಕ್ತ್ಯವಾಯಿತು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ 32,942 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ಜಯಗಳಿಸಿದ್ದರು.

    11. ಯಲ್ಲಾಪುರ – ಶಿವಾರಂ ಹೆಬ್ಬಾರ್ 31,406 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಪರ 80,440 ಮತ, ಕಾಂಗ್ರೆಸ್ ಪರ 49,034 ಮತಗಳು ಚಲಾವಣೆಗೊಂಡರೆ ಜೆಡಿಎಸ್ ಪರವಾಗಿ 1,235 ಮತಗಳು ಬಿದ್ದಿದೆ. 1,444 ಮಂದಿ ನೋಟಾಗೆ ಮತ ಒತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ 1,483 ಮತಗಳಿಂದ ಶಿವರಾಂ ಹೆಬ್ಬಾರ್ ಗೆದ್ದಿದ್ದರು.

    12. ಮಹಾಲಕ್ಷ್ಮಿ ಲೇಔಟ್ – ಜೆಡಿಎಸ್ ನಿಂದ ಅನರ್ಹಗೊಂಡಿದ್ದ ಗೋಪಾಲಯ್ಯ 54,386 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ 85,889 ಮತಗಳನ್ನು ಪಡೆದರೆ, ಕಾಂಗ್ರೆಸ್ 31,503 ಜೆಡಿಎಸ್ 23,516 ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ 41,100 ಮತಗಳ ಅಂತರದಿಂದ ಬಿಜೆಪಿಯ ನರೇಂದ್ರ ಬಾಬು ಅವರನ್ನು ಸೋಲಿಸಿದ್ದರು.

    13. ಕೆ.ಆರ್.ಪುರಂ – ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.

    14. ಅಥಣಿ – ಮಹೇಶ್ ಕುಮಟಳ್ಳಿ 39,918 ಮತಗಳಿಂದ ಜಯಗಳಿಸಿದ್ದಾರೆ. ಕುಮಟಳ್ಳಿ 99,114 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಬಾಲಚಂದ್ರ ಅವರು 59,196 ಮತಗಳನ್ನು ಪಡೆದಿದ್ದಾರೆ. 2018ರ ಚುನಾವಣೆಯಲ್ಲಿ ಹಾಲಿ ಸಾರಿಗೆ ಸಚಿವರಾಗಿರುವ ಲಕ್ಷ್ಮಣ್ ಸವದಿ ವಿರುದ್ಧ ಕುಮಟಳ್ಳಿ 2,331 ಮತಗಳಿಂದ ಜಯಗಳಿಸಿದ್ದರು.

    15. ಶಿವಾಜಿನಗರ – ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ 13,520 ಮತಗಳ ಅಂತರದಿಂದ ಗೆದ್ದಿದ್ದಾರೆ. ರಿಜ್ವಾನ್ 49,887 ಮತಗಳನ್ನು ಪಡೆದರೆ ಬಿಜೆಪಿಯ ಶರವಣ 36,367 ಮತಗಳನ್ನು ಪಡೆದಿದ್ದಾರೆ. 2018ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ರೋಶನ್ ಬೇಗ್ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ವಿರುದ್ಧ 15,040 ಮತಗಳ ಅಂತರದಿಂದ ಜಯಗಳಿಸಿದ್ದರು.

  • ನಾನೂ ಸಚಿವ ಸ್ಥಾನದ ಆಕಾಂಕ್ಷಿ – ಶಾಸಕ ಡಾ.ಶಿವರಾಜ್ ಪಾಟೀಲ್

    ನಾನೂ ಸಚಿವ ಸ್ಥಾನದ ಆಕಾಂಕ್ಷಿ – ಶಾಸಕ ಡಾ.ಶಿವರಾಜ್ ಪಾಟೀಲ್

    ರಾಯಚೂರು: ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದು, ಈ ಕುರಿತು ಸಂತಸ ವ್ಯಕ್ತಪಡಿಸಿ ಮಾತನಾಡಿದ ಶಾಸಕ ಡಾ.ಶಿವರಾಜ್ ಪಾಟೀಲ್ ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.

    ಉಪಚುನಾವಣೆ ಜಯಭೇರಿ ಬಾರಿಸಿದ ಹಿನ್ನೆಲೆ ರಾಯಚೂರಿನಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

    ಈ ವೇಳೆ ಮಾತಮಾಡಿದ ಶಾಸಕ ಡಾ. ಶಿವರಾಜ ಪಾಟೀಲ್, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಾನು ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇವೆ. ಪಕ್ಷ ಹಾಗೂ ಸರ್ಕಾರ ವಹಿಸುವ ಕೆಲಸ ನಿಭಾಯಿಸುತ್ತೇವೆ ಎಂದರು. ಅಲ್ಲದೇ ರಾಜ್ಯದಲ್ಲಿ ಹಿಂದಿನ ಮೈತ್ರಿ ಸರಕಾರದ ವಿರುದ್ಧ ಜನ ಮತ ಮಾಡಿದ್ದಾರೆ. ಆ ಮೂಲಕ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

  • 31 ಸಾವಿರ ಮತಗಳ ಅಂತರದಿಂದ ಶಿವರಾಂ ಹೆಬ್ಬಾರ್ ಭರ್ಜರಿ ಗೆಲುವು

    31 ಸಾವಿರ ಮತಗಳ ಅಂತರದಿಂದ ಶಿವರಾಂ ಹೆಬ್ಬಾರ್ ಭರ್ಜರಿ ಗೆಲುವು

    ಕಾರವಾರ: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಅವರು 80,440 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದರು. ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ ಅವರನ್ನು 31,406 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದ ಶಿವರಾಂ ಹೆಬ್ಬಾರ್ ಅವರ ರಾಜೀನಾಮೆ ಹಾಗೂ ಅನರ್ಹತೆಯಿಂದಾಗಿ ಕ್ಷೇತ್ರಕ್ಕೆ ಡಿ.5ರಂದು ಉಪಚುನಾವಣೆಯ ಮತದಾನ ನಡೆದಿತ್ತು. 1.72 ಲಕ್ಷ ಮತದಾರರಿದ್ದ ಕ್ಷೇತ್ರದಲ್ಲಿ ಶೇ.77.52 ಮತದಾನವಾಗಿತ್ತು. 65,381 ಪುರುಷ ಹಾಗೂ 68,182 ಮಹಿಳೆಯರು ಸೇರಿ ಒಟ್ಟು 1,33,564 ಮಂದಿಯಿಂದ ಮತದಾನವಾಗಿತ್ತು.

    ಶಿರಸಿಯ ಎಂ.ಇ.ಎಸ್ ಕಾಮರ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಹೆಬ್ಬಾರ್ ಅವರು 80,440 ಮತಗಳನ್ನು ಪಡೆದರೆ, ಭೀಮಣ್ಣ ನಾಯ್ಕ 49,034 ಮತಗಳನ್ನು ಪಡೆದು ಸೋಲನನುಭವಿಸಿದರು. 1,444 ಮತಗಳು ನೋಟಾಕ್ಕೆ ಬಿದ್ದಿದೆ.

    ಈ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಚೈತ್ರಾ ಗೌಡ 1,235 ಮತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜೈತುನಬಿ ಜಿಗಳೂರರಿಗೆ 443, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುನೀಲ ಪವಾರ ಅವರಿಗೆ 281, ಪಕ್ಷೇತರ ಅಭ್ಯರ್ಥಿ ಮಹೇಶ್ ಹೆಗ್ಡೆ ಅವರಿಗೆ 301 ಚಿದಾನಂದ ಹರಿಜನ ಅವರಿಗೆ 413 ಮತಗಳು ಬಿದ್ದಿವೆ.

    2018ರ ಚುನಾವಣೆಯಲ್ಲಿ ಶಿವರಾಂ ಹೆಬ್ಬಾರ್ 66,290 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿ.ಎಸ್.ಪಾಟೀಲ ಅವರನ್ನು ಕೇವಲ 1,904 ಮತಗಳಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ವಿ.ಎಸ್.ಪಾಟೀಲ ಅವರ ವಿರುದ್ಧ 24,489 ಮತಗಳ ಅಂತರದಿಂದ ಗೆದ್ದಿದ್ದರು. ಈ ವೇಳೆ 58,025 ಮತಗಳನ್ನು ಪಡೆದಿದ್ದರು. 2008ರಲ್ಲಿ 39,109 ಮತಗಳನ್ನು ಪಡೆದ ಹೆಬ್ಬಾರ್ ವಿ.ಎಸ್.ಪಾಟೀಲ ವಿರುದ್ಧ 2,485 ಮತಗಳ ಅಂತರದಿಂದ ಸೋಲು ಕಂಡಿದ್ದರು.

  • ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ : ವಿಶ್ವನಾಥ್

    ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ : ವಿಶ್ವನಾಥ್

    ಮೈಸೂರು: ಅಯೋಗ್ಯ ಸರ್ಕಾರ ಬೀಳಿಸಿ, ಸ್ಥಿರ ಸರ್ಕಾರ ಸ್ಥಾಪಿಸಿದ ತೃಪ್ತಿ ನನಗಿದೆ ಎಂದು ಹುಣಸೂರಿನಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಮತದಾರನ ತೀರ್ಪು. ಗೆಲುವು-ಸೋಲು ಎಲ್ಲ ಅವರ ಕೈಯಲ್ಲಿ ಇದೆ. ಅವರು ನನಗೆ ಸೋಲಿನ ತೀರ್ಪು ನೀಡಿದರು. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ. ಅಂತಹ ವಾತಾವರಣಗಳು ಇರಲಿಲ್ಲ. ಜೆಡಿಎಸ್ ಮತ ಕಾಂಗ್ರೆಸ್‍ಗೆ ಶಿಫ್ಟ್ ಆದವು. ಹಾಗಾಗಿ ಈ ಸೋಲನ್ನು ನಾನು ಅನುಭವಿಸಬೇಕಾಯಿತು ಎಂದರು.

    ಒಂದು ಕೆಟ್ಟ, ಅಯೋಗ್ಯ ಸರ್ಕಾರ. ಅಯೋಗ್ಯ ಸರ್ಕಾರವನ್ನು ಕೆಡವುದಕ್ಕೆ ನಾನು ಮುಂದೆ ನಿಂತೆ. ಅದು ಅವರಿಗೆ ಕಾರಣವಾಯಿತು. ಇದರಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ಒಂದು ಅಯೋಗ್ಯ ಸರ್ಕಾರ ಕೆಡವಿ, ಇನ್ನೊಂದು ಸರ್ಕಾರ ಸ್ಥಾಪನೆಯಾಗಿ, ಸ್ಥಾಪನೆಯಾದ ಸರ್ಕಾರ ಸ್ಥಿರ ಸರ್ಕಾರವಾಗಿ ಇಂದು 12 ಜನ ಬಿಜೆಪಿಯವರೇ ಗೆದ್ದಿದೆ. ಬಿಎಸ್‍ವೈಗೆ ಸ್ಥಿರ ಸರ್ಕಾರ ಕೊಡುವುದರ ಜೊತೆಗೆ ಅನರ್ಹರು ಎಂದು ಹೇಳುತ್ತಿದ್ದವರಿಗೆ ಅರ್ಹರು ಎಂಬ ಪಟ್ಟವನ್ನು ರಾಜ್ಯದ ಮತದಾರರು ಕೊಟ್ಟಿದ್ದಾರೆ ಎಂಬ ಖುಷಿಯಿದೆ ಎಂದರು.

    ನನ್ನ ಸೋಲಿಗೆ ನೋವಿಲ್ಲ ಬದಲಾಗಿ ಅನರ್ಹರು ಎಂಬ ಪಟ್ಟವನ್ನು ಮತದಾರರು ತೆಗೆದಿದ್ದಾರೆ ಎಂಬುದು ಖುಷಿಯಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನರ್ಹರು, ಅವರಿಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದರು. ಆದರೆ ಈಗ ಬಿಜೆಪಿಯಲ್ಲಿ 12 ಮಂದಿ ಗೆದ್ದಿದ್ದಾರೆ. ನಾನು ಇಂದು ಸೋತಿರಬಹುದು. ಆದರೆ 12 ಮಂದಿ ಗೆದ್ದಿದ್ದಾರೆ. ನನಗೆ ಸೋಲಿನಿಂದ ನೋವಾಗಿಲ್ಲ. ವೈಯಕ್ತಿಕ ಕಾರಣದಿಂದ ಸೋತಿದ್ದೇನೆ. ಬಿಎಸ್‍ವೈ ಅವರ ಮೂರುವರೆ ವರ್ಷದ ಅಭಿವೃದ್ಧಿಗೆ ಮತದಾರರು ಸಾಥ್ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ನಾನು ರಾಜೀನಾಮೆ ನೀಡಿದ್ದು ಸರಿಯಾಗಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ಕೇವಲ ಮೂರು, ನಾಲ್ಕು ಜನರಿಗಿದ್ದ ಅಯೋಗ್ಯ ಸರ್ಕಾರ ಕೆಡವಿದ್ದು ಸರಿ. ಮತ್ತು ಹೊಸ ಸರ್ಕಾರದ ಸ್ಥಾಪನೆ ಮಾಡುವುದರಲ್ಲಿ ನನ್ನ ತ್ಯಾಗವಿದೆ ಎಂದರು. ಇದೇ ವೇಳೆ ಹುಣಸೂರು ಜನರ ಬಳಿ ಕ್ಷಮೆ ಕೇಳಬೇಕೆಂಬ ಎಚ್.ಪಿ ಮಂಜುನಾಥ್ ಅವರ ಹೇಳಿಕೆಗೆ ಈ ಮಾತು ಅಯೋಗ್ಯವಾದ ಮಾತು. ಮಂಜುನಾಥ್ ಅವರು ಈ ಮಾತನ್ನು ವಾಪಸ್ ಪಡೆಯಬೇಕು ಎಂದರು.

  • ‘ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ’ – ಯಲ್ಲಾಪುರದಲ್ಲಿ ಶಿವರಾಂ ಹೆಬ್ಬಾರ್ ಗೆಲುವು

    ‘ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ’ – ಯಲ್ಲಾಪುರದಲ್ಲಿ ಶಿವರಾಂ ಹೆಬ್ಬಾರ್ ಗೆಲುವು

    ಕಾರವಾರ: ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ.

    17 ಸುತ್ತುಗಳು ಮುಕ್ತಾಯಗೊಂಡಿದ್ದು ಶಿವರಾಂ ಹೆಬ್ಬಾರ್ 31,406 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿವರಾಂ ಹೆಬ್ಬಾರ್ 80,440 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ್ 49,034 ಮತಗಳು ಪಡೆದಿದ್ದಾರೆ. ಜಡಿಎಸ್‍ನಿಂದ ಸ್ಪರ್ಧಿಸಿದ್ದ ಚೈತ್ರಾ ಗೌಡ 1,235 ಮತಗಳು ಪಡೆದಿದ್ದು 1,444 ನೋಟಾ ಮತ ಚಲಾವಣೆಯಾಗಿದೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಿವರಾಂ ಹೆಬ್ಬಾರ್, ಅನರ್ಹ ಮಾಡಿದವರಿಗೆ ಪಾಠ ಕಲಿಸಿದ್ದಾರೆ. ಜನ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

    ಬೆಳಗ್ಗೆ 10.30ರ ವೇಳೆಗೆ ಬಿಜೆಪಿ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 2, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ.

    ಕಾಗವಾಡ, ಅಥಣಿ, ಗೋಕಾಕ್, ಕೆಆರ್ ಪುರಂ, ಚಿಕ್ಕಬಳ್ಳಾಪುರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ರಾಣೇಬೆನ್ನೂರು, ಕೆಆರ್ ಪೇಟೆ, ಯಶವಂತಪುರ, ವಿಜಯನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

  • ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    -ಜೆಡಿಎಸ್‍ಗೆ ಕರ್ನಾಟಕದಿಂದ ಗೇಟ್ ಪಾಸ್

    ಉಡುಪಿ: ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿವೆ. ಮತ್ತೊಮ್ಮೆ ಕಾಂಗ್ರೆಸ್, ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಎಂದಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಉಡುಪಿಯ ಹೆಬ್ರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಹೆಬ್ರಿ ಮಿನಿ ವಿಧಾನಸೌಧಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.

    ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತದೆ. ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂದಾಗುತ್ತದೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ನಾಳೆ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಮೈತ್ರಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರು ರೋಸಿದ್ದಾರೆ. ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ರಾಜ್ಯದ ಎಲ್ಲೆಡೆ ಬರುತ್ತೆ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ಫಲಿತಾಂಶದ ನಂತರ ಜೆಡಿಎಸ್ ಗೆ ಕರ್ನಾಟಕದಿಂದ ಗೇಟ್ ಪಾಸ್ ಕೊಡಲಾಗುವುದು ಎಂದರು.

    ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರೆ. ಕಾಂಗ್ರೆಸ್ ಎರಡು ಭಾಗವಾಗಿದೆ. ಇತ್ತ ಜೆಡಿಎಸ್ ಕೂಡಾ ಎರಡು ಭಾಗ ಆಗಿದೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿರುವಾಗ ಈ ನಾಲ್ಕು ಪಾರ್ಟಿ ಒಂದಾಗೋದು ಯಾವಾಗ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ? ಕಾಂಗ್ರೆಸ್ ಭ್ರಮಾಲೋಕದಲ್ಲಿದ್ದು, ಅವರು ಭ್ರಮಾಲೋಕದಲ್ಲೇ ಇರಲಿ ಎಂದು ಸಚಿವ ಆರ್. ಅಶೋಕ್ ಛೇಡಿಸಿದರು.

  • ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    – ಅನರ್ಹರಿಗೆ ಮಂತ್ರಿಗಿರಿ ಕೊಡಲ್ಲಾಂದ್ರೆ ಮೊದಲೇ ಹೇಳ್ಬೇಕಿತ್ತು
    – ಬಿಜೆಪಿ ಸರ್ಕಾರ ಆಗೋದು ಬೇಡ ಅನ್ಬೇಕಿತ್ತು
    – ಕಾಂಗ್ರೆಸ್‍ನಲ್ಲಿ ಇದ್ದೀದ್ರೆ ಸಮಾಧಿ ಆಗುತ್ತಿದ್ವಿ

    ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅರ್ನಹ ಶಾಸಕರಿಗೆ ಸಚಿವಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಬಿಜೆಪಿಯವರು ಮೊದಲೇ ಹೇಳಬೇಕಿತ್ತು. ಬಿಜೆಪಿ ಸರ್ಕಾರ ರಚನೆ ಆಗುವುದು ಬೇಡ ಅಂತ ಹೇಳಬೇಕಿತ್ತು. ಸಚಿವಸ್ಥಾನ ನೀಡಿದರೆ ಅಸಮಾಧಾನ ಉಂಟಾಗುತ್ತದೆ ಅಂತ ಹೇಳುವುದಾದರೆ ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಗುಡುಗಿದರು. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಶಿವಾಜಿ ನಗರ ಉಪ ಚುನಾವಣೆ ಸ್ಪರ್ಧೆಗೆ ರೋಷನ್ ಬೇಗ್ ಮುಂದಾಗಲಿಲ್ಲ. ರಾಣೇಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡುತ್ತಾರೆ ಎಂಬ ಮಾಹಿತಿ ಇದೆ. ಅನರ್ಹರಿಗೆ ಸಚಿವ ಸ್ಥಾನ ತಪ್ಪುವುದಿಲ್ಲ ಎಂದರು.

    ನಾವು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ಸಮಾಧಿ ಆಗುತ್ತಿದ್ದೇವು. ಈಗ ಸಮಾಧಿಯಿಂದ ಹೊರಗೆ ಬಂದಿದ್ದೇವೆ. ಟೀಕೆ ಮಾಡುವವರು ಮಾಡಲಿ. ನಾವು ಮಾತ್ರ ಚೆನ್ನಾಗಿದ್ದೇವೆ. ನಮ್ಮ ವಿರುದ್ಧ ಕಾಂಗ್ರೆಸ್‍ನವರಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡಿದರೆ ಏನು ಪ್ರಯೋಜನ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ನಾನೊಬ್ಬನೇ ಚುನಾವಣೆ ಎದುರಿಸಿದ್ದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರನ್ನು ಒಗ್ಗೂಡಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಯಕರು ಪ್ರಚಾರಕ್ಕೆ ಬಂದಿದ್ದರು. 641 ಬೂತ್‍ಗಳಲ್ಲಿ ಎಲ್ಲ ರೀತಿಯ ಅಧ್ಯಯನ ಮಾಡಿದ್ದೇನೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ತಿಳಿಸಿದರು.

    ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೋಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೋಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್- ಜೆಡಿಎಸ್ ಒಪ್ಪಂದದ ಆಡಿಯೋ ಈಗಲೂ ನನ್ನ ಬಳಿಯಿದೆ. ಸೂಕ್ತ ಸಮಯ ಬಂದಾಗ ಆಡಿಯೋ ಬಿಡುತ್ತೇಮೆ. ಆ ಲೀಡರ್ ಯಾರು ಅಂತ ಹೇಳುತ್ತೇನೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬೀಳಲ್ಲ. 9 ಜನ ಜೆಡಿಎಸ್ ಶಾಸಕರು, 4 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತೇವೆ ಅಂದಿದ್ದಾರೆ. ಆದರೆ ನಾವು ನಮ್ಮ ಕಷ್ಟ ಹೇಳಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದರು.

    ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಆರೋಗ್ಯ ಎಲ್ಲವನ್ನೂ ಕೊಟ್ಟು ಒಳ್ಳೆಯದು ಮಾಡಲಿ. ನಾವು ಮೂರ್ನಾಲ್ಕು ತಿಂಗಳು ನೋವು ಅನುಭವಿಸಿದ್ದೇವೆ. ಈ ಎಲ್ಲ ನೋವನ್ನು ರಾಜೀನಾಮೆ ಕೊಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಿಳಿಸಿದ್ದೇವೆ ಎಂದರು.

  • ಫಲಿತಾಂಶದ ನಂತರ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕು: ಕೆ.ಎಸ್ ಈಶ್ವರಪ್ಪ

    ಫಲಿತಾಂಶದ ನಂತರ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕು: ಕೆ.ಎಸ್ ಈಶ್ವರಪ್ಪ

    ಗದಗ: ನಾಳೆಯ ಫಲಿತಾಂಶದಲ್ಲಿ 15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತೆ. ಮುಂದೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಬರುತ್ತೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದೆ ಮೂರೂವರೆ ವರ್ಷ ಯಡಿಯೂರಪ್ಪ ನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕಂಡ ಕನಸನ್ನು ಇನ್ನೂ ಕಾಣುತ್ತಿದ್ದಾರೆ. ಹಿಂದಿನ ಆ ಮುಖ್ಯಮಂತ್ರಿ ಖುರ್ಚಿ, ಹಿಂದೆ-ಮುಂದೆ ಹೋಗುವ ಆ ಜನ, ಇದೇ ಕನಸು ಬಿದ್ದು ಬಿದ್ದು ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಇನ್ನು ಜೀವನ ಪರ್ಯಂತ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಮುಖ್ಯಮಂತ್ರಿ ಆಗೋಲ್ಲ ಎಂದು ಭವಿಷ್ಯ ನುಡಿದರು.

    ಉಪಚುನಾವಣೆ ವೇಳೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊದರು. ಹೊಂದಾಣಿಕೆ ಇಲ್ಲದವರು ರಾಜ್ಯದ ಆಡಳಿತ ಹೇಗಪ್ಪಾ ಮಾಡ್ತಾರೆ? ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿತು ಎಂಬುದು ಕಾಂಗ್ರೆಸ್ ನವರಿಗೂ ಈಗ ಮನವರಿಕೆಯಾಗುತ್ತಿದೆ. ನಾಳೆ ಫಲಿತಾಂಶ ಬರುತ್ತೆ ಬಿಜೆಪಿ ಇನ್ನೊಂದು ದಿನ ಅಧಿಕಾರದಲ್ಲಿರುತ್ತೆ ಎಂದು ಹೇಳಿಕೊಂಡು ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದಾರೆ. ಹೇಳಿಕೆಗಳಲ್ಲಿ ಆಸೆ ತೀರಿಸಿಕೊಳ್ಳಲು ನಾನು ಯಾಕೆ ಬೇಡ ಅನ್ನಲಿ ಎಂದರು.

    ಜನ ಹೊಡಿತಾರೆ, ಹೊಡಿತಾರೆ ಅಂತಾರೆ. ಕರ್ನಾಟಕ ಜನ ಕಾಂಗ್ರೆಸ್‍ನವರನ್ನು ಹೊಡಿಬೇಕು ಅಂದ್ರೆ ಕೈನಿಂದ ಹೊಡಿಬೇಕಂತಲ್ಲ, ಈಗಾಗಲೇ ಜನ ಮತದಾನದ ಮೂಲಕ ಅಧಿಕಾರದಿಂದ ಹೊಡೆದು ಹಾಕಿದ್ದಾರೆ. ಕೈನಿಂದ ಯಾರು ಹೊಡಿಬೇಡಿ. ಮತದಾನದ ಮೂಲಕವೇ ಹೊಡೆದಿದ್ದು ಸಾಕಾಗಿದೆ. ಎಂಪಿ ಚುನಾವಣೆ ವೇಳೆ ದೇವೇಗೌಡ್ರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬಿಜೆಪಿ 2 ಸ್ಥಾನವೂ ಬರಲ್ಲ ಅಂದಿದ್ದರು. ಆದರೆ ಅವರು ಗೆದ್ದದ್ದು ಒಬ್ಬೊಬ್ಬರು ಒಂದೊಂದೆ ಸೀಟು ಮಾತ್ರ. ಈಗ ಮತ್ತೆ ಡಿಕೆ ಶಿವಕುಮಾರ್ ವ್ಯಂಗ್ಯ ಮಾತನಾಡಿದ್ದಾರೆ. ನಾಳೆ ಫಲಿತಾಂಶ ಮತ್ತೆ ಪಾಠ ಕಲಿಸುತ್ತೆ. ಅವರು ವ್ಯಂಗ್ಯವಾಗಿ ಹೇಳ್ತಾನೆ ಇರಲಿ, ಜನ ಬಿಜೆಪಿ ಗೆಲ್ಲಿಸ್ತಾನೇ ಇರಲಿ ಎಂದು ಈಶ್ವರಪ್ಪ ವಿರೋಧ ಪಕ್ಷದವರಿಗೆ ಮಾತಿನಲ್ಲೇ ತಿರುಗೇಟು ನೀಡಿದರು.

  • ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಮತ ಎಣಿಕೆ ದಿನ ಬಿಜೆಪಿ ಕಾರ್ಯಕರ್ತರಿಗೆ ಸಮವಸ್ತ್ರ ಕಡ್ಡಾಯ

    ಚಿಕ್ಕಬಳ್ಳಾಪುರ: ಉಪಚುನಾವಣಾ ಕಣದ ಫಲಿತಾಂಶ ಸೋಮವಾರ ಹೊರಬೀಳಲಿದ್ದು, ಎಲ್ಲರ ಕೂತೂಹಲ ಫಲಿತಾಂಶದತ್ತ ನೆಟ್ಟಿದೆ. ಆದರೆ ಇತ್ತ ಚುನಾವಣಾ ಫಲಿತಾಂಶದ ಮತ ಎಣಿಕೆ ವೇಳೆ ಆಗಮಿಸುವ ಬಿಜೆಪಿ ಕಾರ್ಯಕರ್ತರೆಲ್ಲಾ ಬಿಳಿ ವಸ್ತ್ರ ಹಾಗೂ ಕೇಸರಿ ಶಲ್ಯ ಧರಿಸಿ ಆಗಮಿಸುವಂತೆ ಮನವಿ ಮಾಡಲಾಗಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಆಗಮಿಸುವಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಬೆಂಬಲಿಗರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದರಲ್ಲೂ ಎಲ್ಲರೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿ ಬರಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡಲಾಗಿದೆ.

    ಬಿಜೆಪಿ ಕಾರ್ಯಕರ್ತರು ಹಾಗೂ ಸುಧಾಕರ್ ಬೆಂಬಲಿಗರು ಮತದಾನದ ದಿನವೂ ಬಿಳಿ ಬಟ್ಟೆ ಹಾಗೂ ಕೇಸರಿ ಶಲ್ಯ ಧರಿಸಿದ್ದರು. ಇದು ವಿಶೇಷವಾಗಿ ಎಲ್ಲರ ಗಮನ ಸೆಳೆದಿತ್ತು. ಈಗ ಮತ ಎಣಿಕೆ ದಿನವೂ ಕೇಸರಿ ಹಾಗೂ ಬಿಳಿ ಬಟ್ಟೆ ಧರಿಸಲು ತಿಳಿಸಲಾಗಿದೆ.

    ಮತ ಎಣಿಕೆ ದಿನ ನಿಷೇಧಾಜ್ಞೆ ಜಾರಿ:
    ಮತ ಎಣಿಕೆ ಕಾರ್ಯಯು ನಗರದ ಬಿಬಿ ರಸ್ತೆಯ ಜೂನಿಯರ್ ಕಾಲೇಜು ಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ಬಳಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 10 ಟೇಬಲ್‍ಗಳ ಮೂಲಕ 26 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 09 ರ ಬೆಳಗ್ಗೆ 06ರಿಂದ ಡಿಸೆಂಬರ್ 10ರ ಬೆಳಗ್ಗೆ 06 ರವರೆಗೆ ವಿಧಾನಸಭಾ ಕ್ಷೇತ್ರಾದ್ಯಾಂತ 144 ಸೆಕ್ಷೆನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅರ್ ಲತಾ ಆದೇಶಿಸಿದ್ದಾರೆ.