Tag: by election

  • ಅತಂತ್ರ ಫಲಿತಾಂಶ ಬಂದ್ರೆ ಯಡಿಯೂರಪ್ಪ ಬಿಹಾರಕ್ಕೆ ಹೋಗ್ತಾರೆ – ಬಿಕೆ ಹರಿಪ್ರಸಾದ್

    ಅತಂತ್ರ ಫಲಿತಾಂಶ ಬಂದ್ರೆ ಯಡಿಯೂರಪ್ಪ ಬಿಹಾರಕ್ಕೆ ಹೋಗ್ತಾರೆ – ಬಿಕೆ ಹರಿಪ್ರಸಾದ್

    ಶಿವಮೊಗ್ಗ: ಬಿಹಾರದಲ್ಲಿ ಮಹಾಮೈತ್ರಿ ಅಧಿಕಾರಕ್ಕೆ ಬರುವುದು ಹಾಗೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರಕ್ಕೆ ಹೋಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುವುದರಲ್ಲಿ ಎಕ್ಸ್‍ಪರ್ಟ್ ಇದ್ದಾರೆ. ಹೀಗಾಗಿ ಬಿಹಾರಕ್ಕೆ ಹೋಗುತ್ತಾರೆ ಎಂದು ಹೇಳಿ ಕಾಲೆಳೆದರು.

    ಶಿರಾ ಹಾಗೂ ಆರ್.ಆರ್ ನಗರ ಚುನಾವಣೆಯ ಫಲಿತಾಂಶದ ಬಗ್ಗೆ ಈಗಾಲೇ ಹೇಳಲು ನಾನು ಜ್ಯೋತಿಷಿಯಲ್ಲ. ಮತದಾರ ದೇವರು ಯಾರಿಗೆ ಆಶೀರ್ವಾದಿಸಿದ್ದಾನೋ ಅವರು ಗೆಲ್ಲುತ್ತಾರೆ ಎಂದು ಹೇಳಿದರು.

    ಶಿವಮೊಗ್ಗದಲ್ಲಿ ಈ ಬಗ್ಗೆ ಯಡಿಯೂರಪ್ಪ ಅವರ ಪುತ್ರರು ಉಪ ಚುನಾವಣೆಯಲ್ಲಿ ಹಣ ಖರ್ಚು ಮಾಡುವುದರಲ್ಲಿ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಖಜಾನೆಯನ್ನೇ ತೆಗೆದುಕೊಂಡು ಹೋಗಿ ಚುನಾವಣೆ ನಡೆಸಿದ್ದಾರೆ. ನನ್ನ 46 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಚುನಾವಣೆಯನ್ನೇ ನಾನು ನೋಡಿಲ್ಲ ಎಂದರು.

    ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಬಿಜೆಪಿ ಬಹಳಷ್ಟು ಮಂದಿಗೆ ಬಿಜೆಪಿಗೆ ಸೇರುವಂತೆ ಗಾಳ ಹಾಕುತ್ತದೆ. ಅವರ ಮಾತು ಕೇಳದಿದ್ದಾಗ ಅವರ ಮುಂಚೂಣಿ ಘಟಕಗಳಾದ ಐಟಿ, ಇಡಿ ಹಾಗೂ ಸಿಬಿಐ ಉಪಯೋಗಿಸಿಕೊಂಡು ಇಂತಹ ಕೆಲಸ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿಯೂ ಸಹ ವಿನಯ ಕುಲಕರ್ಣಿ ಪ್ರಕರಣದಲ್ಲಿ ಇದೇ ಕೆಲಸವಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

  • ವಿಪಕ್ಷ ನಾಯಕ ಹುದ್ದೆಯಿಂದ ಸಿದ್ದರಾಮಯ್ಯ ಬದಲಾಗುತ್ತಾರೆ – ದೆಹಲಿ ಸುದ್ದಿ ತಿಳಿಸಿ ಸಿಎಂ ತಿರುಗೇಟು

    ವಿಪಕ್ಷ ನಾಯಕ ಹುದ್ದೆಯಿಂದ ಸಿದ್ದರಾಮಯ್ಯ ಬದಲಾಗುತ್ತಾರೆ – ದೆಹಲಿ ಸುದ್ದಿ ತಿಳಿಸಿ ಸಿಎಂ ತಿರುಗೇಟು

    ಮಂಗಳೂರು: ವಿಪಕ್ಷ ನಾಯಕ ಸ್ಥಾನ ಹುದ್ದೆಯಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ನಮಗೂ ದೆಹಲಿಯಿಂದ ಬಂದಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

    ನಾಳೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದಾರೆ. ಬಿಎಸ್‍ವೈ ಜೊತೆ ಸಚಿವ ಆರ್ ಅಶೋಕ್, ಈಶ್ವರಪ್ಪ ಮತ್ತು ಡಿಸಿಎಂ ಕಾರಜೋಳ ಸಭೆಗೆ ಬಂದಿದ್ದಾರೆ. ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

    ಇದೇ ವೇಳೆ ಉಪಚುನಾವಣೆಯ ನಂತರ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯನವರನ್ನು ಕುಟುಕಿದ ಸಿಎಂ, ಸಿದ್ದರಾಮಯ್ಯನವರ ಹೇಳಿಕೆಗೆ ನಾನು ರಿಯಾಕ್ಷನ್ ನೀಡುತ್ತಿರಲಿಲ್ಲ. ಮಾಧ್ಯಮದವರು ಪ್ರಶ್ನಿಸಿದ್ದಕ್ಕಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಅವರು ದಿಲ್ಲಿಯಿಂದ ನನಗೆ ಸುದ್ದಿ ಬಂದಿದೆ ಎನ್ನುತ್ತಿದ್ದಾರೆ. ನಾನು ಇದೇ ರೀತಿ ಹೇಳಿಕೆ ನೀಡಲೇ? ನಮಗೂ ದೆಹಲಿಯಿಂದ ಮಾಹಿತಿ ಬಂದಿದೆ. ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗುತ್ತೆ ಎಂದು, ಈ ರೀತಿಯ ಹಗುರವಾದ ಹೇಳಿಕೆಯನ್ನು ನಾನು ಇಷ್ಟಪಡಲ್ಲ. ಜವಾಬ್ದಾರಿಯುತವಾಗಿ ಮಾತಾಡುವಂತೆ ವಿನಂತಿ ಮಾತಾಡುತ್ತೇನೆ ಎಂದರು. ಇದನ್ನು ಓದಿ: I am very confident ಉಪಚುನಾವಣೆ ನಂತ್ರ ಯಡಿಯೂರಪ್ಪ ಬದಲಾಗ್ತಾರೆ: ಸಿದ್ದರಾಮಯ್ಯ

    ಶಿರಾ, ಆರ್.ಆರ್ ನಗರ ಉಪಚುನಾವಣೆಯನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಎದುರಿಸಿದೆ. ನೂರಕ್ಕೆ ನೂರು ದಯಾನೀಯ ಸೋಲನ್ನು ಕಾಂಗ್ರೆಸ್ಸಿನವರು ಅನುಭವಿಸುತ್ತಾರೆ. ಬೈ ಎಲೆಕ್ಷನ್, ಪದವೀಧರ ಚುನಾವಣೆಯಲ್ಲಿ ಸೋಲನುಭವಿಸುತ್ತಾರೆ. ಬಿಜೆಪಿ ಗೆದ್ದ ಮೇಲೆ ಯಾರು ರಾಜೀನಾಮೆ ಕೊಡಬೇಕಾಗುತ್ತೆ? ಆಗ ಕ್ರಮ ಸಿದ್ದರಾಮಯ್ಯ ಮೇಲೋ ಅಥವಾ ಯಾರ ಮೇಲೆ ಎಂದು ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.

  • ಕಾಲಾವಕಾಶ ತೆಗೆದುಕೊಂಡು ಶಾಲೆ ತೆರೆಯುವುದು ಸೂಕ್ತ: ಪ್ರತಾಪ್ ಸಿಂಹ

    ಕಾಲಾವಕಾಶ ತೆಗೆದುಕೊಂಡು ಶಾಲೆ ತೆರೆಯುವುದು ಸೂಕ್ತ: ಪ್ರತಾಪ್ ಸಿಂಹ

    ಮಡಿಕೇರಿ: ಕಾಲಾವಕಾಶ ತೆಗೆದುಕೊಂಡು ಪೋಷಕರು ಹಾಗೂ ಶಿಕ್ಷಕ ಸಮುದಾಯವನ್ನು ಕೊರೊನಾ ಟೆಸ್ಟ್ ತಪಾಸಣೆ ಬಳಿಕ ಶಾಲೆ ತೆರೆಯುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಶಾಲೆಗಳನ್ನು ಆದಷ್ಟು ಬೇಗ ತೆರೆಯಬೇಕು. ಹಾಗೆಯೇ ಬೇಡ ಎನ್ನುವ ಭಾವನೆ ಇದೆ. ಈಗಾಗಲೇ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಎಲ್ಲರೊಂದಿಗೆ ಶಾಲೆ ತೆರೆಯುವ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ದೆಹಲಿಯ ಎನ್‍ಸಿಆರ್ ಭಾಗದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಶಾಲೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಅದಕ್ಕೂ ಮೊದಲು ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳುವುದು ಒಳಿತು ಎಂದರು.

    ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆರ್‍ಆರ್ ನಗರದಲ್ಲಿ ಕನಿಷ್ಠ 40 ಸಾವಿರ ಮತ್ತು ಶಿರಾ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಬ್ ಗೋಸ್ವಾಮಿ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿರುವ ಬಗ್ಗೆ ಮಾತನಾಡಿ, ಬಾಳಾಠಾಕ್ರೆ ಅವರನ್ನು ಮಹಾರಾಷ್ಟ್ರದ ಹುಲಿ ಎನ್ನುತ್ತಿದ್ದರು. ಇದನ್ನು ನೋಡಿದರೆ ಹುಲಿ ಎದುರಿಸಲು ಇಲಿ ಹುಟ್ಟಿಕೊಂಡಿದೆ ಅನ್ನಿಸುತ್ತಿದೆ. ಉದ್ಧವ್ ಠಾಕ್ರೆ ಒಂದು ರಾಜ್ಯದ ಸಿಎಂ ಆಗಿ ಪೊಲೀಸರನ್ನು ಕಳುಹಿಸಿ ಬಂಧಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾಧ್ಯಮಗಳು ಅವುಗಳ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಮಾಧ್ಯಮಗಳ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

    ಒಂದು ವೇಳೆ ಮಾಧ್ಯಮಗಳು ಆಧಾರ ರಹಿತ ಆರೋಪ ಮಾಡಿದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ನಟಿ ಕಂಗನಾ ರಾಣಾವತ್ ಹೇಳಿದಂತೆ ಇದು ಶಿವಸೇನಾ ಅಲ್ಲ ಸೋನಿಯಾ ಸೇನೆ ಎನ್ನುವಂತೆ, 1975 ರಲ್ಲಿ ಕಾಂಗ್ರೆಸ್ ತುರ್ತುಪರಿಸ್ಥಿತಿ ಹೇರಿದಂತೆ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಇದರಲ್ಲಿ ಪೊಲೀಸರು ಆಡಳಿತ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.

  • ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ: ಸೋಮಶೇಖರ್

    ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ: ಸೋಮಶೇಖರ್

    ಮೈಸೂರು: ಮಾಧ್ಯಮದವರ ಮಾತು ಕೇಳಿ ಮಂತ್ರಿಮಂಡಲ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡೋಕೆ ನನಗೆ ಅಧಿಕಾರ ಇಲ್ಲ. ಮಾಧ್ಯಮದವರು ಅಧಿಕಾರ ಕೊಡಿಸಿದರೆ ಮಾತನಾಡಬಹುದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟಕ್ಕೆ ಮಾತ್ರ ಉತ್ತರಿಸುತ್ತೇನೆ. ಪದೇ ಪದೆ ಮಂತ್ರಿಮಂಡಲ ವಿಸ್ತರಣೆಯ ಪ್ರಶ್ನೆ ಕೇಳಿಬೇಡಿ. ಅದಕ್ಕೆ ನಾನು ಉತ್ತರ ಕೊಟ್ಟರೆ ಇರೋ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಗೆಲ್ಲುತ್ತಾರೆ. ಮುಂಚೆ ಒಂದು ಜಮಾನ ಇತ್ತು. ಕಡಿಮೆ ಮತದಾನವಾದರೆ ಇನ್ನೊಂದು ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ನಡುವೆ ಆರ್‍ಆರ್ ನಗರದಲ್ಲಿ ಉತ್ತಮ ಮತ ಚಲಾವಣೆ ಆಗಿದೆ. ವಿದ್ಯಾವಂತರು ಬಂದು ಮತ ಹಾಕಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಆರ್‍ಆರ್ ನಗರ ಕ್ಷೇತ್ರದಲ್ಲಿ ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

    ಶಿರಾ ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಒಪ್ಪಿಕೊಂಡಿದ್ದಾರೆ. ಇವಿಎಂ ಮೇಲೆ ಅವರು ಮಾಡಿರೋ ಆರೋಪ ಸೋಲು ಮತ್ತು ಹತಾಶೆಯ ಸಂಕೇತ. ಫಲಿತಾಂಶ ಬಂದ ಮೇಲೆ ಕಾರಣ ಕೊಡುವುದಕ್ಕಿಂತ, ಟಿ.ಬಿ.ಜಯಚಂದ್ರ ಮುಂಚೆಯೇ ಕಾರಣ ಹುಡುಕಿಕೊಂಡಿದ್ದಾರೆ ಎಂದು ಹರಿಹಾಯ್ದರು.

  • ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಅತ್ತೆ-ಸೊಸೆ, ತಾಯಿ-ಮಗಳಂತೆ ಚೆನ್ನಾಗಿರಲಿ: ಸಿ.ಟಿ ರವಿ

    ಚಿಕ್ಕಮಗಳೂರು: ಕಾಂಗ್ರೆಸ್ಸಿನಂತಹ ಜನರನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆದ್ದರೆ ಜನಾದೇಶ ಅಂತಾರೆ, ಸೋತರೆ ಇವಿಎಂ ಮೇಲೆ ಆರೋಪಿಸುತ್ತಾರೆ. ಈ ರೀತಿಯ ಜನರನ್ನು ನೀವೆಲ್ಲೂ ನೋಡಲು ಆಗುವುದಿಲ್ಲ ಎಂದು ಸಚಿವ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಆರ್.ಆರ್.ನಗರದಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಾಂಗ್ರೆಸ್ ಸೋಲು ಗ್ಯಾರಂಟಿಯಿಂದ ಇವಿಎಂ ಮೇಲೆ ಆರೋಪಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಇವಿಎಂಗೆ ಇಂಟರ್ ನೆಟ್ ಕನೆಕ್ಷನ್ ಇರುವುದಿಲ್ಲ. ಅವರು ಈ ಆರೋಪಗಳಿಗೆ ಸಾಕ್ಷಿ ಕೂಡ ನೀಡಿಲ್ಲ. ಈ ರೀತಿಯ ಆರೋಪ ಮಾಡಿದಾಗ ಚುನಾವಣಾ ಆಯೋಗ ನೀಡಿದ ನೋಟಿಸ್‍ಗೆ ಉತ್ತರಿಸಲಾಗದೆ ತಡಪಡಿಸಿದ್ದಾರೆ. ನ್ಯಾಯಾಲಯದ ತೀರ್ಪ ಬಂದರೆ ನ್ಯಾಯಾಧೀಶರನ್ನೇ ಅನುಮಾನಿಸೋದು, ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಗೂಬೆ ಕೂರಿಸೋದು, ಕಾಂಗ್ರೆಸ್ಸಿನವರಿಗೆ ಇದೊಂದು ಕೆಟ್ಟ ಖಾಯಿಲೆ. 2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಗೆದ್ದಾಗ ಯಾವುದು ಕೆಲಸ ಮಾಡಿತ್ತು. ಇದೇ ಇವಿಎಂನಲ್ಲಿ ತಾನೇ ಗೆದ್ದದ್ದು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಡಿ.ಕೆ.ರವಿ ತಾಯಿ ಸೊಸೆಯನ್ನು ಗೆಲ್ಲಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ.ರವಿ, ಅತ್ತೆ ಸೊಸೆ, ತಾಯಿ ಮಗಳಂತೆ ಇರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ನಾವು ಹೇಳೂ ಇಲ್ಲ, ಬಯಸಿದ್ದೂ ಇಲ್ಲ. ಚುನಾವಣೆ ಮುಗಿದ ಮೇಲೂ ಚೆನ್ನಾಗಿರಲಿ. ಮುಖವನ್ನೇ ನೋಡುವುದಿಲ್ಲ ಎಂದವರು ನೋಡುವಂತಾಗಿರೋದು ಸಂತೋಷದ ಸಂಗತಿ ಎಂದಿದ್ದಾರೆ. ನಾವು ನಮ್ಮ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇವೆ. ನಮ್ಮ ತಾತ್ವಿಕ ಹೋರಾಟ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಎಂದು ತಿಳಿಸಿದರು.

  • ನಮ್ಮ ಭವಿಷ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿ: ಪ್ರೇಮ್

    ನಮ್ಮ ಭವಿಷ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿ: ಪ್ರೇಮ್

    ಬೆಂಗಳೂರು: ಏನೇ ಕೊರೊನಾ ಇದ್ದರೂ ನಮ್ಮ ಭವಿಷ್ಯಕ್ಕಾಗಿ ವೋಟ್ ಮಾಡಲೇಬೇಕು. ಕೊರೊನಾ ಜೊತೆ ಬದುಕೋದನ್ನ ಜನರು ಅಭ್ಯಾಸ ಮಾಡಿಕೊಂಡಿದ್ದಾರೆ. ಕೊರೊನಾ ಬಳಿಕ ಜನರ ಬದುಕು ಸಾಮಾನ್ಯ ಪರಿ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದರು.

    ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್ ನಲ್ಲಿ ನಟ ಪ್ರೇಮ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್, ಮತದಾನ ನಮ್ಮ ಹಕ್ಕು ಮತ್ತು ಎಲ್ಲರ ಭವಿಷ್ಯವನ್ನ ನಿರ್ಧಾರ ಮಾಡುತ್ತದೆ. ಹಾಗಾಗಿ ಚುನಾವಣೆಯಲ್ಲಿ ಎಲ್ಲರೂ ವೋಟ್ ಮಾಡಬೇಕು. ನಾನು ಸಹ ಕುಟುಂಬದ ಜೊತೆ ಬಂದು ಮತ ಚಲಾಯಿಸಿದ್ದೇನೆ. ಚುನಾವಣೆ ಆಯೋಗ ಮತಗಟ್ಟೆಯಲ್ಲಿ ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗದುಕೊಂಡಿದೆ. ಆರಕ್ಷಕ ಮತ್ತು ಚುನಾವಣಾಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ತುಂಬಾ ಶಿಸ್ತುಬದ್ಧವಾಗಿ ಕೊರೊನಾ ನಿಯಮಗಳನ್ನ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.

    ಕೊರೊನಾ ಕ್ಯಾನ್ಸರ್ ಗಿಂತ ದೊಡ್ಡ ರೋಗವೇನು ಅಲ್ಲ. ಭಯದಿಂದ ಮನೆಯಲ್ಲಿ ಕುಳಿತುಕೊಳ್ಳದೇ ಮತಗಟ್ಟೆಗೆ ಬಂದು ಮತ ಚಲಾಯಿಸಿ. ವೋಟ್ ಮಾಡದಿದ್ರೆ ನಮ್ಮ ಭವಿಷ್ಯದ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಆಗುತ್ತೆ. ನಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಮತ ಹಾಕಲೇಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಇಂದಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ: ಮುನಿರತ್ನ

    ಇಂದಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ: ಮುನಿರತ್ನ

    ಬೆಂಗಳೂರು: ಮತದಾರರ ಬಳಿ ಮತ ಭಿಕ್ಷೆ ಕೇಳಿದ್ದೀನಿ. ಆ ಭಿಕ್ಷೆ ಕೊಡುತ್ತಾರೆ ಎಂದು ನಂಬಿದ್ದೀನಿ ಎಂದು ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾದಂತಹ ಸಂದರ್ಭದಲ್ಲಿ ಮತದಾನ ಮಾಡುವುದು ವಿಶೇಷವಾಗಿದೆ. 18 ವರ್ಷದ ಯುವಕ ತನ್ನ ಮೊದಲ ಮತದಾನದಲ್ಲಿ ಭಾಗಿಯಾಗುತ್ತಿದ್ದರೆ, ಇವತ್ತಿನ ಮತದಾನ ಇತಿಹಾಸದಲ್ಲಿ ಉಳಿಯುತ್ತದೆ. ಏಕೆಂದರೆ ಕೊರೊನಾ ಕಾರಣದಿಂದ ಚುನಾವಣಾ ಆಯೋಗ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕೊರೊನಾಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ಶಾಂತಿಯುತ ಮತದಾನ ನಡೆಯುತ್ತಿದೆ. ಕೈಗೆ ಗ್ಲೌಸ್, ಫೇಸ್ ಮಾಸ್ಕ್ ಹಾಕಿಕೊಂಡು ಸ್ಯಾನಿಟೈಸರ್ ಬಳಕೆ ಮಾಡಿ ಕೊರೊನಾ ಸಂದರ್ಭದಲ್ಲಿ ಮತದಾನ ಮಾಡಿದ ಅನುಭವ ಜೀವನದಲ್ಲಿ ನೆನಪಿನಲ್ಲಿ ಉಳಿಯುತ್ತೆ ಎಂದರು.

    ಕ್ಷೇತ್ರದ ಮತದಾರರು ಬುದ್ಧಿವಂತರಾಗಿದ್ದು, ಎಲ್ಲರೂ ಖಂಡಿತ ಬಂದು ಮತ ಚಲಾಯಿಸುತ್ತಾರೆ. ಯಾರಿಗಾದರೂ ಮತ ಹಾಕಿ ಆದರೆ ಎಲ್ಲರೂ ಮತದಾನ ಮಾಡಿ. ನಾನು ಮಲ್ಲೇಶ್ವರಂ ನಿವಾಸಿಯಾಗಿದ್ದು, ನನಗೆ ಆರ್.ಆರ್ ನಗರದಲ್ಲಿ ಮತದಾನದ ಅವಕಾಶವಿಲ್ಲ. ಆದ್ದರಿಂದ ಮನೆಯಲ್ಲಿ ಇರುತ್ತೇನೆ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದು, ಜನರ ತೀರ್ಪು ಅಂತಿಮವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾಡಿದ ಆರೋಪಿಗಳಿಗೆ ನಾನು ಫಲಿತಾಂಶದ ದಿನ ಉತ್ತರ ಕೊಡುತ್ತೇನೆ. ಆರೋಪ ಮಾಡಿದವರು ತಿರುಪತಿಗೆ ಅಲ್ಲ, ಈ ಭೂಲೋಕದ ಯಾವುದೇ ದೇವಸ್ಥಾನಕ್ಕೆ ಕರೆದರೂ ನಾನು ಬರಲು ಸಿದ್ಧನಾಗಿದ್ದೇನೆ. ಅವರು ಸಿದ್ಧರಾಗಿ ಇರಲಿ. ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ದೊಡ್ಡ ವಿಚಾರವಿಲ್ಲ ಎಂದರು.

    ರಾಜಕಾರಣಿಗೂ ಭಿಕ್ಷೆ ಬೇಡುವವನಿಗೂ ಯಾವುದೇ ವ್ಯತ್ಯಾಸವಿಲ್ಲ. ಭಿಕ್ಷೆ ಬೇಡುವವರು ಅಮ್ಮ ಊಟ ಎನ್ನುತ್ತಾನೆ, ನಾವು ಅಮ್ಮ ಮತ ನೀಡಿ ಎನ್ನುತ್ತೇವೆ. ನನ್ನ ಮೇಲಿನ ಆರೋಪಗಳಿಗೆ ನಾನು ಉತ್ತರ ಕೊಡಲು ಸಿದ್ಧವಾಗಿದ್ದು, ಚುನಾವಣಾ ಆಯೋಗ ಅನುಮತಿ ಪಡೆದು ಪ್ರತಿಕಾಗೋಷ್ಠಿ ನಡೆಸುತ್ತೇನೆ. ಅಲ್ಲದೇ ನಾನು ಜಂಟಿ ಸುದ್ದಿಗೋಷ್ಠಿ ನಡೆಸಲು ಕೂಡ ಸಿದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

  • ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಉಪಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪೀಣ್ಯ ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ಕಂಡು ಬಂದಿದೆ.

    ಹೌದು. ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಿಸಾಡಲಾಗಿದೆ. ಮತದಾನ ಮಾಡಿದ ಬಳಿಕ ಜನ ಎಲ್ಲೆಂದರಲ್ಲಿ ಹಾಕಿಹೋಗಿದ್ದಾರೆ. ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಒಂದು ಗ್ಲೌಸ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಜನ ಮತದಾನ ಮಾಡಿ ಬಳಿಕ ಗ್ಲೌಸ್ ಗಳನ್ನು ಸಿಕ್ಕ ಸಿಕ್ಕ ಕಡೆ ಬಿಸಾಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಸ್ಟ್‍ಬಿನ್ ವ್ಯವಸ್ಥೆ ಮಾಡಬೇಕಿದೆ.

    ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಆಗ್ಗಾಗ್ಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮತದಾನ ಕೇಂದ್ರದ ಹೊರಗೆ, ಕಾರಿಡಾರ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡ್ತಿದ್ದಾರೆ.

  • ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ

    ಬೆಂಗಳೂರು: ಪ್ರತಿಷ್ಠೆಯ, ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಶುರು ಆಗಿದೆ. ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.

    ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.

    ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಪುರುಷ ಮತದಾರರು 1 ಲಕ್ಷದ 10 ಸಾವಿರದ 281 ಮಂದಿ ಇದ್ದರೆ, ಮಹಿಳಾ ಮತದಾರರು 1 ಲಕ್ಷದ 5 ಸಾವಿರದ 434 ಮಂದಿ ಇದ್ದು, ಒಟ್ಟು ಮತದಾರರು 2 ಲಕ್ಷದ 15 ಸಾವಿರದ 725 ಮಂದಿ ಇದ್ದಾರೆ. ಆರ್ ಆರ್ ನಗರದಲ್ಲಿ 4 ಲಕ್ಷದ 62 ಸಾವಿರ ಮಂದಿ ಮತದಾರರಿದ್ದಾರೆ.

    ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿರೋರು, ಕ್ವಾರಂಟೈನ್‍ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೋನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.

  • ಸಿಎಂ ಆಗೋ ಭ್ರಮೆಯಲ್ಲಿರೋ ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ: ಶ್ರೀರಾಮುಲು

    ಸಿಎಂ ಆಗೋ ಭ್ರಮೆಯಲ್ಲಿರೋ ಡಿಕೆಶಿಗೆ ಸೋಲಿನ ಭಯ ಕಾಡ್ತಿದೆ: ಶ್ರೀರಾಮುಲು

    ಬಳ್ಳಾರಿ: ಉಪ ಚುನಾವಣೆ ಗೆದ್ದರೆ ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

    ಶಿರಾದಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣಾ ಉಸ್ತುವಾರಿ ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಹೋದ ಕಡೆ ಸೋಲು ಇಲ್ಲ. ಆದ್ರೆ ಶಿರಾದ ಜನತೆ ಮಾತ್ರ ಬಿಜೆಪಿಗೆ ಮತ ನೀಡಲಿದ್ದಾರೆ. ಈ ಹಿಂದೆ ಕೆ.ಆರ್.ಪೇಟೆ ಗೆಲುವಿಗೆ ಶ್ರಮಿಸಿದ್ದರು. ಆದ್ರೆ ಕಾಂಗ್ರೆಸ್ ಒಳ ಜಗಳದಿಂದಲೇ ಸೋಲುತ್ತೆ. ಸಿದ್ದರಾಮಯ್ಯನರವರು ಶಿರಾ ವಿಧಾನಸಭಾ ಕ್ಷೇತ್ರವನ್ನ ಬಹಳಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಡಿ.ಕೆ.ಸುರೇಶ್ ಆರ್.ಆರ್.ನಗರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರ ನಡೆಸಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇಬ್ಬರಿಗೂ ನಾನು ಶುಭ ಹಾರೈಸುತ್ತೇನೆ, ಆದ್ರೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

    ಒಂದು ವೇಳೆ ಆರ್.ಆರ್.ನಗರ ಕ್ಷೇತ್ರವನ್ನ ಉಳಿಸಿಕೊಳ್ಳಲು ಡಿಕೆ ಸೋದರರು ಸೋತ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಸೂಕ್ತವೇ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಿಎಂ ಆಗೋ ಕನಸಿನನಲ್ಲಿರುವ ಡಿ.ಕೆ.ಶಿವಕುಮಾರ್ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವ್ಯಾಪ್ತಿಯ ಕ್ಷೇತ್ರ ಸೋತರೆ ರಾಜ್ಯವನ್ನ ಡಿಕೆಶಿ ಹೇಗೆ ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಉದ್ಭವವಾಗುತ್ತೆ ಎಂದರು.