Tag: business

  • ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ವ್ಯಾಪಾರಕ್ಕೆಂದು ಬಂದ ವೃದ್ಧರು ಬಸ್ ಇಲ್ಲದೆ ಪರದಾಟ

    ಗದಗ: ಸಾರಿಗೆ ನೌಕರರ ಮುಷ್ಕರದ ಬಿಸಿ ವೃದ್ಧ ವ್ಯಾಪಾರಸ್ಥ ದಂಪತಿಗೂ ತಟ್ಟಿದೆ. ನಗರದ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆಂದು ಬಂದ ವೃದ್ಧ ದಂಪತಿ ವಾಹನ ಸಿಗದೆ ಪರದಾಡುತ್ತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ವೃದ್ಧರು ಮರಳಿ ತಮ್ಮೂರಿಗೆ ಹೋಗಲಾಗದೇ 2 ದಿನಗಳಿಂದ ಪರದಾಡುತ್ತಿರುವ ಸ್ಥಿತಿ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರದಂದು ಕಸಬಾರಿಗೆ, ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕೆಂದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಂದಿದ್ದರು. ನಿನ್ನೆಯೇ ಇಳಕಲ್ ಗೆ ಹೋಗಬೇಕಿತ್ತು. ಆದರೆ 2 ದಿನಗಳಿಂದ ಬಸ್ ಇಲ್ಲದಕ್ಕೆ ಇಳಕಲ್ ಹೋಗಲಾಗದೇ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಖಾಸಗಿ ವಾಹನಗಳ ದುಪ್ಪಟ್ಟು ಹಣಕ್ಕೆ ಬೇಸತ್ತಿದ್ದಾರೆ. ಗದಗದಿಂದ ಗಜೇಂದ್ರಗಡಕ್ಕೆ 300 ರೂಪಾಯಿ ಹಣ ಕೇಳುತ್ತಿದ್ದಾರೆ. ಗಜೇಂದ್ರಗಡದಿಂದ ಮುಂದೆ ಇಳಕಲ್ ಗೆ ಹೋಗಬೇಕು. ಅಲ್ಲಿ ಎಷ್ಟು ಹಣ ಕೇಳುತ್ತಾರೋ ಗೊತ್ತಿಲ್ಲ. ಹೀಗಾದರೆ ಏನು ಮಾಡೋದು ಎಂದು ಸರ್ಕಾರ ಹಾಗೂ ಸಾರಿಗೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಲಾಕ್‍ಡೌನ್, ಬೆಲೆ ಏರಿಕೆ ಮಧ್ಯೆ ದುಡಿದ ಹಣ ಖಾಸಗಿ ವಾಹನಕ್ಕೆ ಕೊಡುವ ಸ್ಥಿತಿ ಬಂತಲ್ಲಾ ಅಂತ ಗೋಳಾಡಿದರು.

  • ಬಾಳೆ ಮಾರಾಟದ ಹಣಕ್ಕಾಗಿ ಗಲಾಟೆ- ವ್ಯಕ್ತಿ ನೇಣಿಗೆ ಶರಣು

    ಬಾಳೆ ಮಾರಾಟದ ಹಣಕ್ಕಾಗಿ ಗಲಾಟೆ- ವ್ಯಕ್ತಿ ನೇಣಿಗೆ ಶರಣು

    ಚಾಮರಾಜನಗರ: ಬಾಳೆ ಮಾರಾಟ ಮಾಡಿದ್ದ ಹಣದ ಸಂಬಂಧ ಇಬ್ಬರ ನಡುವೆ ಗಲಾಟೆ ನಡೆದಿದ್ದು, ವ್ಯಕ್ತಿ ನೇಣು ಬಿಗಿದುಕೊಂಡಿರುವ ಆಘಾತಕಾರಿ ಘಟನೆ ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಹಾದೇವಪ್ಪ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಗ್ರಾಮದ ಚೇತನ್ ಗೆ ಮಹಾದೇವಪ್ಪ ಬಾಳೆ ಮಾರಾಟ ಮಾಡಿದ್ದರು. ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಪ್ರಕರಣ ಬಳಿಕ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಪೊಲೀಸ್ ಠಾಣೆಯಲ್ಲಿ ವಿಷದ ಬಾಟಲ್ ಹಿಡಿದು ಮಹಾದೇವಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ತಡೆದಿದ್ದರು.

    ಇದೆಲ್ಲರ ಬಳಿಕ ಪೊಲೀಸ್ ಠಾಣೆಯಿಂದ ಗ್ರಾಮಕ್ಕೆ ವಾಪಸ್ ಆಗಿದ್ದ ಮಹಾದೇವಪ್ಪ, ಚೇತನ್ ತೋಟದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಿ ನೇತು ಹಾಕಿರುವ ಶಂಕೆ ಇದೆ ಎಂದು ಮೃತನ ಪುತ್ರ ಮೋಹನ್ ಆರೋಪಿಸಿದ್ದಾರೆ. ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಗೆಳತಿಯರ ಜೊತೆ ಸೇರಿ ಸ್ಟಾರ್ಟ್ ಅಪ್- ತಿಂಗಳಿಗೆ ಲಕ್ಷಕ್ಕೂ ಅಧಿಕ ವ್ಯವಹಾರ

    ಗೆಳತಿಯರ ಜೊತೆ ಸೇರಿ ಸ್ಟಾರ್ಟ್ ಅಪ್- ತಿಂಗಳಿಗೆ ಲಕ್ಷಕ್ಕೂ ಅಧಿಕ ವ್ಯವಹಾರ

    – ನಾಲ್ವರಿಂದ ಆರಂಭವಾದ ವ್ಯವಹಾರದಲ್ಲಿಂದು 200 ಮಹಿಳೆಯರು

    ದೆಹಲಿಯ ನಿವಾಸಿ 40 ವರ್ಷದ ದಿವ್ಯಾ ರಜಪೂತ್ ಗೆಳತಿಯರ ಜೊತೆಗೂಡಿ ಆರಂಭಿಸಿದ ಸ್ಟಾರ್ಟ್ ಅಪ್ ಯಶಸ್ವಿಯಾಗಿದ್ದು, ತಿಂಗಳಿಗೂ ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸುತ್ತಿದ್ದಾರೆ. ಇದರ ಜೊತೆಗೆ 200ಕ್ಕೂ ಅಧಿಕ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಜನರಿಗೆ ಪ್ರತಿನಿತ್ಯ ಬಳಕೆಯ ವಸ್ತುಗಳನ್ನ ಆನ್‍ಲೈನ್ ಮೂಲಕ ದಿವ್ಯಾ ಮಾರಾಟ ಮಾಡುತ್ತಾರೆ. ತಿಂಗಳಿಗೆ 200ಕ್ಕೂ ಅಧಿಕ ಆರ್ಡರ್ ಪೂರೈಸುತ್ತಾರೆ. 20 ವರ್ಷಕ್ಕೂ ಅಧಿಕ ಕಾಲ ಶಿಕ್ಷಣ ಇಲಾಖೆಯಲ್ಲಿ ದಿವ್ಯಾ ಕೆಲಸ ಮಾಡಿದ್ದು, ದಿಢೀರ್ ಅಂತ ಗೆಳತಿಯರ ಸಹಾಯದಿಂದ ತಮ್ಮದೇ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

    ನನ್ನ ಗೆಳತಿ ಕಾಕುಲ್ ರಿಜ್ವಿ ಮಾರ್ಕೆಟಿಂಗ್ ಕೆಲಸ ಮಾಡಿಕೊಂಡಿದ್ದರು. ಆದ್ರೆ ಕಾಕುಲ್ ಕ್ಯಾನ್ಸರ್ ಗೆ ತುತ್ತಾಗಿದ್ದರಿಂದ, ವೈದ್ಯರು ಆರ್ಗೆನಿಕ್ ಪ್ರೊಡೆಕ್ಟ್ ಬಳಸುವಂತೆ ಸಲಗೆ ನೀಡಿದ್ದರು. ಈ ಸಮಯದಲ್ಲಿ ಕಾಕುಲ್ ಮತ್ತು ನನಗೆ ಈ ರೀತಿಯ ಉತ್ಪನ್ನಗಳನ್ನ ಮಾರಾಟ ಏಕೆ ಮಾಡಬಾರದು ಅನ್ನೋ ಪ್ಲಾನ್ ಹೊಳೆಯಿತು. ನಾನು ಸಹ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಆರ್ಗೆನಿಕ್ ಪ್ರೊಡೆಕ್ಟ್ ಮಾರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆ ಎಂದು ದಿವ್ಯಾ ಹೇಳುತ್ತಾರೆ.

    ಆರಂಭದಲ್ಲಿ ದೊಡ್ಡ ಆಘಾತ: ಆರ್ಗೆನಿಕ್ ಪ್ರೊಡಕ್ಟ್ ಮಾರಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಕಾಕುಲ್ ರಿಜ್ವಿ ಸಾವನ್ನಪ್ಪುತ್ತಾರೆ. ಮಾರ್ಕೆಟಿಂಗ್ ಬಗ್ಗೆ ಹೆಚ್ಚಾಗಿ ತಿಳಿಯದ ದಿವ್ಯಾ ಅವರಿಗೆ ದೊಡ್ಡ ಆಘಾತ ಎದುರಾಗಿತ್ತು. ಆದ್ರೆ ಛಲ ಬಿಡದ ದಿವ್ಯಾ ಮತ್ತೆ ಬ್ಯುಸಿನೆಸ್ ಆರಂಭಿಸಿದ್ರು. ಈ ಕಠಿಣ ಸಮಯದಲ್ಲಿ ದಿವ್ಯಾ ಅವರ ಕೆಲಸಕ್ಕೆ ಪೂಜಾ ಅರೋರ, ಸುರಭಿ ಸಿನ್ಹಾ, ಆಸ್ಥಾ ಮತ್ತು ಕ್ರಿಸ್ಟಿನಾ ಗ್ರೋವರ್ ಸಾಥ್ ನೀಡಿ ಉದ್ಯಮ ಬೆಳವಣಿಗೆಗೆ ಸಹಾಯಕರಾದರು.

    ಆರಂಭದಲ್ಲಿ ದಿವ್ಯಾ ಅವರು ಜನನಿಬಿಡ ಪ್ರದೇಶದಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸುತ್ತಿದ್ದರು. ಈ ಮೂಲಕ ಆರ್ಗೆನಿಕ್ ಪ್ರೊಡಕ್ಟ್ ಮಾರುತ್ತಿದ್ದರು. ಲಾಕ್‍ಡೌನ್ ಘೋಷಣೆಯಾದಾಗ ಮನೆಯಿಂದ ಹೊರ ಹೋಗುವ ಹಾಗಿರಲಿಲ್ಲ. ಮತ್ತೆ ದಿವ್ಯಾ ಅವರಿಗೆ ದೊಡ್ಡ ಸವಾಲು ಎದುರಾಯ್ತು. ಗೆಳತಿಯರ ಸಲಹೆ ಮೇರೆಗೆ ದಿವ್ಯಾ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ತಮ್ಮದೇ ವೆಬ್‍ಸೈಟ್ ಲಾಂಚ್ ಮಾಡಿದರು. ವೆಬ್‍ಸೈಟ್ ನಲ್ಲಿ ಪ್ರತಿ ಉತ್ಪನ್ನಗಳ ಮಾಹಿತಿ, ಬಳಕೆ, ಲಾಭಗಳನ್ನ ವಿವರಿಸಲಾಗಿದೆ. ಅಂದಿನಿಂದ ದಿವ್ಯಾ ಅವರ ಬ್ಯುಸಿನೆಸ್ ಸಂಪೂರ್ಣ ಆನ್‍ಲೈನ್ ರೂಪಕ್ಕೆ ಬದಲಾಯ್ತು.

    ಉತ್ಪನ್ನಗಳ ತಯಾರಿಕೆ ಹೇಗೆ?: ಉತ್ಪನ್ನಗಳ ತಯಾರಿಕೆಗೂ ಮುನ್ನ ಅದು ಇಕೋ ಪ್ರೆಂಡ್ಲಿ ಅನ್ನೋದನ್ನ ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ 20 ರಿಂದ 25 ಮಹಿಳೆಯರ ತಂಡ ವಿವಿಧ ಉತ್ಪನ್ನಗಳನ್ನ ತಯಾರಿಸಲು ಮುಂದಾಗುತ್ತಾರೆ. ಕೆಲ ಆರ್ಗನಿಕ್ ವಸ್ತುಗಳನ್ನ ದಿವ್ಯಾ ಅವರು ಬೇರೆ ರೈತರಿಂದ ನೇರವಾಗಿ ಖರೀದಿಸುತ್ತಾರೆ. ಅಸ್ಸಾಂ, ಹಿಮಾಚಲ, ಮೇಘಾಲಯ ಸೇರಿದಂತೆ ಹಲವು ರಾಜ್ಯಗಳ ರೈತರೊಂದಿಗೆ ದಿವ್ಯಾ ಅವರ ಒಡೆತನದ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಮೇಘಾಲಯದಿಂದ ಅರಿಶಿನ, ನಾಗಾಲ್ಯಾಂಡ್ ನಿಂದ ಗಿಡ ಮೂಲಿಕೆಗಳನ್ನ ಖರೀದಿಸುತ್ತಾರೆ.

    ಏನೆಲ್ಲ ಸಿಗುತ್ತೆ?: ದಿವ್ಯಾ ಅವರ ತಂಡ 100ಕ್ಕೂ ಉತ್ಪನ್ನಗಳನ್ನ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಸ್ಟೆಶನರಿ ವಸ್ತುಗಳಾದ ಅಗ್ರಿ ವೆಸ್ಟ್ ಮಗ್, ಕ್ಯಾನ್‍ವಾಸ್ ಬ್ಯಾಗ್, ಹರ್ಬಲ್ ಪ್ರೊಡಕ್ಸ್, ಇಮ್ಯುನಿಟಿ ಬೂಸ್ಟರ್, ಕರಕುಶಲ ಸಾಮಾಗ್ರಿಗಳು, ವೆಲನೆಸ್ ಪ್ರೊಡಕ್ಟ್ ಸಹ ಮಾರಲಾಗುತ್ತದೆ. ಇನ್ನು ಹಬ್ಬ ಸೇರಿದಂತೆ ವಿಶೇಷ ದಿನಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನ ಸಹ ದಿವ್ಯಾ ಮಾರಾಟ ಮಾಡುತ್ತಾರೆ.

    ಮುಂದಿನ ದಿನಗಳಲ್ಲಿ ಇದೇ ಪ್ಲಾಟ್‍ಫಾರಂನಲ್ಲಿ ಇನ್ನು ಅಧಿಕ ಬಗೆ ಬಗೆಯ ಉತ್ಪನ್ನಗಳ ಮಾರುವ ಗುರಿಯನ್ನ ಹೊಂದಿದ್ದೇವೆ. ನಮ್ಮ ಉತ್ಪನ್ನಗಳನ್ನ ಗ್ರಾಮೀಣ ಭಾಗದ ಜನ ಉಪಯೋಗಿಸುವಂತಾಗಬೇಕು. ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಸಿಗುತ್ತಿಲ್ಲ. ಹಾಗಾಗಿ ಇವುಗಳ ಮಾರಾಟ ಹೆಚ್ಚಿಸುವ ಮಾರ್ಗದಲ್ಲಿ ನಮ್ಮ ಚಿಂತನೆ ನಡೆದಿದೆ ಎಂದು ದಿವ್ಯಾ ಹೇಳಿದ್ದಾರೆ.

  • ಲಾಕ್‍ಡೌನ್‍ನಿಂದ ಕೆಲಸ ಹೋಯ್ತು, ಕುರುಕಲು ತಿಂಡಿ ಮಾರಿ ತಿಂಗಳಿಗೆ 45 ಸಾವಿರ ಸಂಪಾದನೆ

    ಲಾಕ್‍ಡೌನ್‍ನಿಂದ ಕೆಲಸ ಹೋಯ್ತು, ಕುರುಕಲು ತಿಂಡಿ ಮಾರಿ ತಿಂಗಳಿಗೆ 45 ಸಾವಿರ ಸಂಪಾದನೆ

    – ಮಾದರಿ ಮಂಗಳಮುಖಿಯ ನೈಜ ಕಥೆ

    ಮಂಗಳಮುಖಿಯರನ್ನ ನೋಡುವ ದೃಷ್ಟಿಕೋನ ಸಮಾಜದಲ್ಲಿ ಬದಲಾಗಬೇಕಿದೆ. ಕೇವಲ ಭಿಕ್ಷಾಟನೆಗೆ ಮಾಡದೇ ಹಲವು ಮಂಗಳಮುಖಿಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಎಷ್ಟೋ ಜನರ ಉದ್ಯೋಗವನ್ನ ಲಾಕ್‍ಡೌನ್ ನುಂಗಿ ಸ್ವಾಹಃ ಮಾಡಿತ್ತು. ಆದ್ರೆ ಗುಜರಾತಿನ ಸ್ವಾವಲಂಬಿ ಮಂಗಳಮುಖಿ ದೃತಿಗೆಡದೇ ತಮ್ಮದೇ ಬ್ಯುಸಿನೆಸ್ ಆರಂಭಿಸಿ ತಿಂಗಳಿಗೆ ಸುಮಾರು 45 ಸಾವಿರ ಸಂಪಾದಿಸಿ, ಕೆಲಸ ಇಲ್ಲ ಅಂತ ಕೈಕಟ್ಟಿ ಕುಳಿತುಕೊಳ್ಳುವ ಸೋಮಾರಿಗಳಿಗೆ ಮಾದರಿಯಾಗಿದ್ದಾರೆ.

    ಗುಜರಾತ್ ರಾಜ್ಯದ ಸೂರತ್ ನಗರದ ನಿವಾಸಿ ರಾಜವಿ ಜಾನ್ ಬದುಕು ಕಟ್ಟಿಕೊಂಡ ಕಥೆ ಇಲ್ಲಿದೆ. ಸಮಾಜದಲ್ಲಿ ಮಂಗಳಮುಖಿ ಬದುಕು ಕಟ್ಟಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ತಮಗೆದುರಾದ ಎಲ್ಲ ಕಷ್ಟಗಳನ್ನ ಫೇಸ್ ಮಾಡಿರುವ ರಾಜವಿ ಕುರುಕಲ ತಿಂಡಿ ಅಂಗಡಿ ನಡೆಸುತ್ತಿದ್ದು, ಪ್ರತಿನಿತ್ಯ 1,500 ರೂ.ಯಿಂದ 2,000 ರೂ.ವರೆಗೂ ವ್ಯಾಪರ ಮಾಡುತ್ತಾರೆ.

    ಐದು ವರ್ಷಗಳಿಂದ ರಾಜವಿ ಪೆಟ್ಸ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಒಳ್ಳೆಯ ಸಂಬಳದ ಜೊತೆಗೆ ಗೌರವ ಎಲ್ಲವೂ ರಾಜವಿ ಅವರಿಗೆ ಸಿಕ್ಕಿತ್ತು. ಆದರೆ ದೇಶಕ್ಕೆ ಒಕ್ಕರಿಸಿದ ಕೊರೊನಾದಿಂದ ಎಲ್ಲ ವ್ಯಾಪಾರ ನಿಂತ ಪರಿಣಾಮ ರಾಜವಿ ಕೆಲಸ ಕಳೆದುಕೊಂಡರು. ಲಾಕ್‍ಡೌನ್ ನಿಂದಾಗಿ ಮಾಡಿಕೊಂಡು ಸಾಲ ಹಿಂದಿರುಗಿಸಲಾಗದೇ ರಾಜವೀ ಸಂಕಷ್ಟದಲ್ಲಿ ಸಿಲುಕಿಕೊಂಡರು. ಆರ್ಥಿಕ ಸಂಕಷ್ಟದಿಂದಾಗಿ ಎಷ್ಟೋ ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ ಅಂತ ಸ್ವತಃ ರಾಜವಿ ಹೇಳ್ತಾರೆ. ಆದ್ರೆ ಆತ್ಮಸ್ಥೈರ್ಯ ಕಳೆದುಕೊಳ್ಳದ ರಾಜವಿ ಕಷ್ಟಗಳ ನಡುವೆಯೇ ಪುಟ್ಟದಾದ ಕುರುಕಲು ತಿಂಡಿ (ರೆಡಿಮೇಡ್ ಸ್ನಾಕ್ಸ್) ಅಂಗಡಿ ತೆರೆದರು. ಈಗ ಅಂಗಡಿಯಲ್ಲಿ ಪ್ರತಿನಿತ್ಯ 1,500 ರೂ.ಯಿಂದ 2 ಸಾವಿರ ರೂ.ವರೆಗೆ ವ್ಯಾಪಾರ ನಡೆಯುತ್ತಿದೆ.

    ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದ ರಾಜವಿ: ಠಾಕೂರ್ ಕುಟುಂಬದಲ್ಲಿ ನನ್ನ ಜನ್ಮವಾಯ್ತು. ತಂದೆ-ತಾಯಿ ಚಿತೆಯೂ ಠಾಕೂರ್ ಅಂತ ಹೆಸರಿಟ್ಟಿದ್ದರು. ಮೂರನೇ ಲಿಂಗದಲ್ಲಿ ನಾನು ಹುಟ್ಟಿದ್ದರೂ ಕುಟುಂಬಸ್ಥರಿಂದ ಸಿಗುವ ಪ್ರೀತಿಯಲ್ಲಿ ಯಾವುದೇ ಕಡಿಮೆಯಾಗಲಿಲ್ಲ. ಅಮ್ಮನ ಪ್ರೀತಿಯ ಮಗುವಾಗಿ ಬೆಳೆದ ನನಗೆ ಎಲ್ಲದಕ್ಕೂ ಬೆನ್ನಲುಬಾಗಿ ನಿಂತರು. ಸಾಮಾನ್ಯವಾಗಿ ನನ್ನಂತಹ ಮಕ್ಕಳನ್ನ ಮಂಗಳಮುಖಿಯರಿಗೆ ನೀಡುತ್ತಾರೆ. ಆದ್ರೆ ನನ್ನ ಅಮ್ಮ ಹಾಗೆ ಮಾಡಲಿಲ್ಲ. ನನ್ನನ್ನು ಓರ್ವ ಹುಡುಗನ ರೀತಿಯಲ್ಲಿ ಬೆಳೆಸಿದ ಅಪ್ಪ-ಅಮ್ಮ ಸಮಾಜದಲ್ಲಿ ಮಾದರಿ ಪೋಷಕರು ಆಗಿದ್ದರು, ಇಂತಹ ಮಕ್ಕಳನ್ನ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಿದ್ದರು. ತೃತೀಯ ಲಿಂಗಿಯಾದ್ರೂ ನನ್ನ ಮೇಲೆ ಅಪ್ಪ-ಅಮ್ಮನ ಪ್ರೀತಿ ಎಂದೂ ಕಡಿಮೆಯಾಗಿಲ್ಲ ಎಂದು ರಾಜವಿ ಸಂತೋಷ ವ್ಯಕ್ತಪಡಿಸುತ್ತಾರೆ.

    12ನೇ ವಯಸ್ಸಿನಲ್ಲಿ ಮಂಗಳಮುಖಿಯರ ಜೊತೆ ಸೇರ್ಪಡೆ: ಗುಜರಾತಿನಲ್ಲಿ ಹೆಚ್ಚು ಮಂಗಳಮುಖಿಯರನ್ನ ಕಾಣಬಹುದು. ಪೋಷಕರ ಜೊತೆಯಲ್ಲಿದ್ದರೂ ರಾಜವಿ ಮಂಗಳಮುಖಿ ಸಮುದಾಯವನ್ನ ಸೇರಿಕೊಂಡರು. ಅಲ್ಲಿಯೂ ರಾಜವಿ ಅವರಿಗೆ ಒಳ್ಳೆಯ ಸ್ನೇಹ, ಪ್ರೀತಿ ಸಿಕ್ತು. ಗುಜರಾತಿನ ಶೇ.95 ರಷ್ಟು ಮಂಗಳಮುಖಿಯರು ರಾಜವಿ ಅವರನ್ನ ಗುರುತಿಸುತ್ತಾರೆ. 18ನೇ ವಯಸ್ಸಿನಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳುವ ಕೆಲಸವನ್ನ ರಾಜವಿ ಮೊದಲಿಗೆ ಆರಂಭಿಸುತ್ತಾರೆ. ಸುಮಾರು 11 ವರ್ಷ ಈ ಕೆಲಸ ಮಾಡಿದ್ರೂ ಎಂದೂ ಮಕ್ಕಳಲ್ಲಿ ಬೇದಭಾವ ಮಾಡಿಲ್ಲ. ಹಾಗಾಗಿ ಮಕ್ಕಳಿಗೆ ರಾಜವಿ ಅಚ್ಚುಮೆಚ್ಚಿನ ಟೀಚರ್. ಇಂದಿಗೂ ಬಹುತೇಕರು ರಾಜವಿ ಅವರ ಸಂಪರ್ಕದಲ್ಲಿದ್ದಾರೆ.

    32ನೇ ವಯಸ್ಸಿನಲ್ಲಿ ಮಹಿಳೆಯಾಗಿ ಬದಲು: ಕುಟುಂಬಸ್ಥರು ನನ್ನನ್ನ ಹುಡುಗನಾಗಿಯೇ ಬೆಳೆಸಿದರು. ಆದ್ರೆ ಶಾರೀರಿಕ ರಚನೆ, ಆಲೋಚನೆಗಳೂ ಬೇರೆ ಇತ್ತು. ಹಾಗಾಗಿ 32ನೇ ವಯಸ್ಸಿಗೆ ಪುರುಷರ ರೀತಿಯಲ್ಲಿ ಬಟ್ಟೆ ತೊಡುವುದನ್ನ ನಿಲ್ಲಿಸಿ, ಸೀರೆ ತೊಟ್ಟು, ಕುಂಕುಮ ಹಚ್ಚಿ, ಕೈತುಂಬ ಬಳೆ ಹಾಕಿಕೊಂಡು ನಿಜವಾದ ಮಂಗಳಮುಖಿಯಂತೆ ಜೀವನ ಆರಂಭಿಸಿದೆ. ಚಿತೆಯೂನಿಂದ ರಾಜವಿ ಜಾನ್ ಆಗಿ ಬದಲಾದೆ. ಕುಟುಂಬಸ್ಥರು ನನ್ನ ನಿರ್ಧಾರಕ್ಕೆ ಬೆಂಬಲ ನೀಡಿದರು ಎಂದು ರಾಜವಿ ಹೇಳುತ್ತಾರೆ.

    ಆರಂಭದಲ್ಲಿ ನನ್ನ ಅಂಗಡಿಗೆ ಬರಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಈಗ ಸಮಯ ಬದಲಾಗಿದ್ದು, ಗ್ರಾಹಕರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನ ಖರೀದಿಸುತ್ತಾರೆ. ದಿನದಿಂದ ದಿನಕ್ಕೆ ನಗರದಲ್ಲಿ ಅಂಗಡಿ ಚಿರಪರಿಚಿತವಾಗುತ್ತಿದ್ದು, ವ್ಯಾಪಾರವೂ ವೃದ್ಧಿ ಆಗ್ತಿದೆ. ಮುಂದಿನ ದಿನಗಳಲ್ಲಿ ನನ್ನ ಸಮಾಜದವರಿಗೆ ಗೌರವ ಸಿಗುವಂತಾಗಲಿ ಎಂದು ರಾಜವಿ ತಮ್ಮ ಆಸೆಯನ್ನ ಹೊರ ಹಾಕಿದರು.

  • 15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    15 ಸಾವಿರದಲ್ಲಿ ಸ್ಟಾರ್ಟ್ ಅಪ್, 4ನೇ ತಿಂಗಳಿನಲ್ಲಿ ಸಿಕ್ತು 15 ಲಕ್ಷ ಫಂಡಿಂಗ್- ಕಂಪನಿಯ ಮೌಲ್ಯ 2.5 ಕೋಟಿಗೂ ಅಧಿಕ

    – ಸಾಮಾನ್ಯ ವಿದ್ಯಾರ್ಥಿಗಳ ಅಸಾಮಾನ್ಯ ಸಾಧನೆ

    ಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು. ಛಲಗಾರನಿಗೆ ಅಸಾಧ್ಯವಾದದ್ದು ಸರಳವಾಗುತ್ತೆ. ಅಂತಹ ಇಬ್ಬರು ಯುವಕರ ಸ್ಫೂರ್ತಿದಾಯಕದ ಸಾಧನೆ ಕಥೆ ಇಲ್ಲಿದೆ. ಕೇವಲ 15 ಸಾವಿರ ರೂ.ದಲ್ಲಿ ಸ್ಟಾರ್ಟ್ ಅಪ್ ಆರಂಭಿಸಿದ್ದ ಯುವಕರಿಗೆ ನಾಲ್ಕು ತಿಂಗಳಲ್ಲಿ 15 ಲಕ್ಷ ರೂ. ಫಂಡಿಂಗ್ ಸಿಕ್ಕಿದ್ದು, ಸದ್ಯ ಕಂಪನಿಯ ಮೌಲ್ಯ ಎರಡೂವರೆ ಕೋಟಿಗೂ ಅಧಿಕ.

    22 ವರ್ಷದ ರಿಷಬ್ ಮತ್ತು 21 ವರ್ಷದ ಲಕ್ಕಿ ರೊಹಿಲ್ಲಾ ಇಬ್ಬರು ಕುರುಕ್ಷೇತ್ರದ ಎನ್‍ಐಟಿಯ ಫೈನಲ್ ಇಯರ್ ವಿದ್ಯಾರ್ಥಿಗಳು. ಕಾಲೇಜಿನ ಎರಡನೇ ವರ್ಷದಲ್ಲಿ ಇಬ್ಬರು ಜೊತೆಗೂಡಿ ಒಂದು ಆ್ಯಪ್ ಡೆವಲಪ್ ಮಾಡಿದ್ದರು. ಆದ್ರೆ ಹೆಚ್ಚು ಬಳಕೆಯಾಗದ ಹಿನ್ನೆಲೆ ನಾಲ್ಕು ತಿಂಗಳಲ್ಲೇ ಆ್ಯಪ್ ಕ್ಲೋಸ್ ಮಾಡಲಾಯ್ತು. ಮೂರನೇ ವರ್ಷದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಬಂದಿತ್ತು. ಈ ಸೆಮಿಸ್ಟರ್ ನಲ್ಲಿ ಹೆಚ್ಚು ಓದೋದು ಇರಲ್ಲ. ಹಾಗಾಗಿ ಲಕ್ಕಿ ಹಾಗೂ ರಿಷಬ್ ತಮ್ಮದೇ ಹೊಸ ಸ್ಟಾರ್ಟ್ ಅಪ್ ಆರಂಭಿಸುವ ಕುರಿತು ಪ್ಲಾನ್ ಮಾಡತೊಡಗಿದರು. 2020 ಮಾರ್ಚ್ ನಲ್ಲಿ ಕೆಲವು ಐಡಿಯಾಗಳ ಕೆಲಸ ಮಾಡಲು ಆರಂಭಿಸಿದ ಗೆಳೆಯರು ಕೆಲವೇ ದಿನಗಳಲ್ಲಿ quantel.in (ಕ್ವಾಂಟೆಲ್.ಇನ್) ಹೆಸರಿನ ಪ್ಲಾಟ್‍ಫಾರಂ ನಿರ್ಮಿಸಿದರು. ಈ ವೇದಿಕೆಯಲ್ಲಿ ತಜ್ಞರ ಜೊತೆ ವಿದ್ಯಾರ್ಥಿಗಳು ಫೇಸ್ ಟು ಫೇಸ್ ಮಾತಾಡಬಹುದು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ತಜ್ಞರಿಂದ ನೇರವಾಗಿ ಭವಿಷ್ಯದ ಕುರಿತ ಸಲಹೆಗಳನ್ನ ಪಡೆಯಬಹುದಾಗಿದೆ.

    ಹೂಡಿಕೆ ಮಾಡಿದ್ದು 15 ಸಾವಿರ ರೂಪಾಯಿ!: ಹೌದು ರಿಷಬ್ ಮತ್ತು ಲಕ್ಕಿ ಆ್ಯಡ್‍ಟೆಕ್ ಸ್ಟಾರ್ಟ್ ಅಪ್‍ಗಾಗಿ ಆರಂಭದಲ್ಲಿ 15 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಕಂಪನಿಯ ನೋಂದಣಿಗಾಗಿ ತಮ್ಮ ಸೇವಿಂಗ್ಸ್ ಹಣ ಬಳಸಿದ್ದರು. ಸ್ಟಾರ್ಟ್ ಅಪ್ ಆರಂಭಿಸಿದ ನಾಲ್ಕು ತಿಂಗಳಲ್ಲಿಯೇ ಕ್ಯಾಲಿಫೋರ್ನಿಯಾದ ಕಂಪನಿ ಬಂಡವಾಳ ಹೂಡಿಕೆಗೆ ಮುಂದೆ ಬಂದು 15 ಲಕ್ಷ ರೂ. ಫಂಡಿಂಗ್ ಮಾಡಿದೆ. ಸದ್ಯ ಋಷಬ್ ಮತ್ತು ಲಕ್ಕಿ ಕಂಪನಿಯ ಒಟ್ಟು ಮೌಲ್ಯ 2.5 ಕೋಟಿ ರೂ.ಗೆ ತಲುಪಿದೆ.

    ತಜ್ಞರಿಂದ ಸಲಹೆ, ಮಾರ್ಗಸೂಚಿ, ಆಯ್ಕೆಯ ಮಾಹಿತಿ: 12ನೇ ತರಗತಿ ಬಳಿಕ ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಪದವಿ ನಂತರ ಏನು ಮತ್ತು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳು ಪಡೆದುಕೊಳ್ಳುವ ತರಬೇತಿಯ ಗುಣಮಟ್ಟ ಹೇಗಿರಬೇಕು ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ನಮ್ಮ ಕ್ವಾಂಟೆಲ್.ಇನ್ ಉತ್ತರ ನೀಡುತ್ತದೆ ಎಂದು ರಿಷಬ್ ಹೇಳ್ತಾರೆ. ಕ್ವಾಂಟೆಲ್ ವೇದಿಕೆಯಲ್ಲಿ ಬೇರೆ ಬೇರೆ ಕ್ಷೇತ್ರದ ತಜ್ಞರನ್ನ ನೇರವಾಗಿ ಸಂಪರ್ಕಿಸಿ ಸಲಹೆ ಪಡೆಯಬಹುದು. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ. ನಿಮ್ಮ ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳನ್ನ ಕೇಳಿ ವಿದ್ಯಾರ್ಥಿಗಳು ಉತ್ತರ ಪಡೆದುಕೊಳ್ಳಬಹುದು ಎಂದು ಹೇಳ್ತಾರೆ ರಿಷಬ್.

    200 ರೂ. ಪಾವತಿಸಿ ಉತ್ತರ ಕಂಡುಕೊಳ್ಳಿ: ಕ್ವಾಂಟೆಲ್ ಪ್ಲಾಟ್‍ಫಾರಂನಲ್ಲಿರುವ ತಜ್ಞರ ಮಾಹಿತಿ ನೀಡಲಾಗಿರುತ್ತದೆ. ಪ್ರತಿ ತಜ್ಞರ ಕ್ಷೇತ್ರ, ಅನುಭವವನ್ನ ಅವರ ಪ್ರೊಫೈಲ್ ನಲ್ಲಿ ತಿಳಿಸಲಾಗಿರುತ್ತದೆ. ವಿದ್ಯಾರ್ಥಿಗಳೇ ತಮ್ಮ ಸಮಸ್ಯೆಗೆ ಯಾರಿಂದ ಪರಿಹಾರ ಸಿಗುತ್ತೆ ಅಂತ ನಿರ್ಧರಿಸಬಹುದು. ವಿದ್ಯಾರ್ಥಿಗಳಿಗೆಯೇ ತಜ್ಞರನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ. 30 ರಿಂದ 40 ನಿಮಿಷ ವರ್ಚುವಲ್ ಸೆಷನ್ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿ ಸೆಷನ್ ಗೆ 200 ರೂಪಾಯಿ ಪಾವತಿಸಬೇಕು. ಅತ್ಯಧಿಕ ಶುಲ್ಕವೇ ಆರು ನೂರು ರೂಪಾಯಿ ಇದೆ.

    ತಜ್ಞರ ಜೊತೆಗೆ ನೇರವಾಗಿ ಮಾತನಾಡಲು ಯಾವುದೇ ಕಂಪನಿ ನಮಗಿಂತ ಕಡಿಮೆ ಮೊತ್ತ ಚಾರ್ಜ್ ಮಾಡಲಾರದು. ಸದ್ಯ ಅತಿ ಕಡಿಮೆ ಶುಲ್ಕಕ್ಕೆ ಸೇವೆಯನ್ನ ನೀಡಲಾಗುತ್ತಿದೆ. ಇದುವರೆಗೂ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ನಮ್ಮ ವೇದಿಕೆ ತಲುಪಿದ್ದಾರೆ ಎಂದು ರಿಷಬ್ ಸಂತೋಷ ವ್ಯಕ್ತಪಡಿಸಿದ್ದಾರೆ. ಅವಶ್ಯವಿರುವ ಎಲ್ಲ ವಿದ್ಯಾರ್ಥಿಗೂ ಸೂಕ್ತ ಮಾರ್ಗದರ್ಶನ ಸಿಗಬೇಕು ಎಂಬುವುದು ನಮ್ಮ ಸ್ಟಾರ್ಟ್ ಅಪ್ ಉದ್ದೇಶ ಎಂದು ಹೇಳ್ತಾರೆ ಲಕ್ಕಿ. ಸದ್ಯ ಟಯರ್-1, 2 ಮತ್ತು ಮೂರನೇ ಹಂತದ ನಗರಗಳ ವಿದ್ಯಾರ್ಥಿಗಳತ್ತ ನಮ್ಮ ಗಮನವಿದೆ. ವ್ಯವಹಾರ ಒಂದೆಡೆ ಇರಬಹುದು, ನಮ್ಮ ಸ್ಟಾರ್ಟ್ ಅಪ್ ಮೂಲಕ ಸೋಶಿಯಲ್ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಮೆಂಟರ್ ಶಿಪ್ ಸಿಗುವಂತಾಗಬೇಕು ಎಂದು ಸ್ಟಾರ್ಟ್ ಅಪ್ ಆರಂಭದ ಉದ್ದೇಶವನ್ನ ಲಕ್ಕಿ ತಿಳಿಸಿದರು.

    ಬಂಡವಾಳ ಹೂಡಿಕೆಗೆ 35 ಹೂಡಿಕೆದಾರರು ಹಿಂದೇಟು: ಸ್ಟಾರ್ಟ್ ಅಪ್ ಆರಂಭಿಸಿದ ಬಳಿಕ ಲಕ್ಕಿ ಮತ್ತು ರಿಷಬ್ ಫಂಡಿಂಗ್ ಗಾಗಿ ಇನ್ವೆಸ್ಟರ್ಸ್ ಗಳನ್ನ ಹುಡುಕಾಡಿದ್ದಾರೆ. ನೀವಿನ್ನೂ ಕಾಲೇಜಿನ ವಿದ್ಯಾರ್ಥಿಗಳು. ಒಂದು ದಿನದ ಜೋಶ್ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತೆ ಎಂದು 35 ಹೂಡಿಕೆದಾರರು ಫಂಡಿಂಗ್ ಮಾಡಲು ಮುಂದೆ ಬರಲಿಲ್ಲ. ಆದ್ರೆ 36ನೇ ಹೂಡಿಕೆದಾರರಿಗೆ ರಿಷಬ್ ಮತ್ತು ಲಕ್ಕಿಯ ಐಡಿಯಾ ಇಷ್ಟವಾಗಿದೆ. ನಮ್ಮ ಇನ್ವೆಸ್ಟರ್ ದೆಹಲಿಯಲ್ಲಿಯೇ ಶಿಕ್ಷಣ ಪಡೆದಿದ್ದು, ಉದ್ಯೋಗ ಅರಸಿ ಯುಎಸ್ ಗೆ ತೆರಳಿದ್ದು, ಅಲ್ಲಿಯೇ ಸೆಟಲ್ ಆಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಅವರು ಅಲ್ಲಿಂದಲೇ 15 ಲಕ್ಷ ರೂ. ಫಂಡಿಂಗ್ ಮಾಡಿದರು. ಇದೇ ಹಣದಿಂದ ಪ್ರೊಜೆಕ್ಟರ್, ಮಾರ್ಕೆಟ್ ಖರ್ಚು, ನೌಕರರ ಸಂಬಳ, ಪೀಠೋಪಕರಣ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಯ್ತು ಎಂದು ಲಕ್ಕಿ ಕಂಪನಿ ಆರಂಭದಲ್ಲಿ ಎದುರಾದ ಸವಾಲುಗಳನ್ನ ಹಂಚಿಕೊಂಡರು.

    ರಿಷಬ್ ಮತ್ತು ಲಕ್ಕಿ ಒಂದೇ ಕೋಚಿಂಗ್ ಸೆಂಟರ್ ನಿಂದ ಜೆಇಇ ಯ ತಯಾರಿ ನಡೆಸಿದ್ದರು. ಆದ್ರೆ ಅಲ್ಲಿ ಇಬ್ಬರಿಗೂ ಪರಿಚಯವಿರಲಿಲ್ಲ. ಕುರುಕ್ಷೇತ್ರದ ಎನ್‍ಐಟಿಯಲ್ಲಿ ರಿಷಬ್ ಮೆಕ್ಯಾನಿಕಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಮತ್ತು ಲಕ್ಕಿ ಸಿವಿಲ್ ಇಂಜಿನೀಯರಿಂಗ್ ಬ್ರ್ಯಾಂಚ್ ಸೇರಿಕೊಂಡಿದ್ದರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಇಬ್ಬರ ಸ್ನೇಹ ಬೆಳೆದಿತ್ತು. ಇಬ್ಬರ ಆಲೋಚನೆಗಳು ಒಂದೇ ಆಗಿದ್ದರಿಂದ ರಿಷಬ್ ಮತ್ತು ಲಕ್ಕಿ ಸ್ನೇಹ ಗಾಢವಾಗಿತ್ತು. ಯಾವುದೋ ಕಂಪನಿಯಲ್ಲಿ ನೌಕರನಾಗಿ ಕೆಲಸ ಮಾಡುವ ಬದಲಾಗಿ ಇಬ್ಬರು ತಮ್ಮದೇ ಬ್ಯುಸಿನೆಸ್ ಆರಂಭಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು.

    ಹೊಸ ಬ್ಯುಸಿನೆಸ್ ಆರಂಭಕ್ಕೂ ಇಬ್ಬರ ಕುಟುಂಬಸ್ಥರು ಸಪೋರ್ಟ್ ಮಾಡಿದ್ದಾರೆ. ನಂತರ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಕುಳಿತು ತಮ್ಮ ಸ್ಟಾರ್ಟ್ ಅಪ್ ಹೇಗಿರಬೇಕು? ಫಂಡಿಂಗ್, ಕಚೇರಿ, ಉದ್ಯೋಗಿಗಳ ಆಯ್ಕೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಸಿ, ಕ್ವಾಂಟೆಲ್ ಪ್ಲಾಟ್‍ಫಾರಂ ಸೆಟಪ್ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ.

    ಸದ್ಯ 24 ಜನರ ಟೀಂ, ಎಲ್ಲರೂ 18ರಿಂದ 22 ವಯಸ್ಸಿನವರೇ: ಇಬ್ಬರಿಂದ ಆರಂಭವಾದ ತಂಡದಲ್ಲಿ ಸದ್ಯ 24 ಜನರಿದ್ದಾರೆ. ಕೋರ್ ಟೀಂನಲ್ಲಿ ಎಂಟು ಜನ ಮತ್ತು 15 ಇಂಟರ್ನ್ ಗಳಿದ್ದಾರೆ. ರಿಷಬ್, ಆತನಿಬ್ಬರು ಗೆಳೆಯರೇ 22 ವರ್ಷದವರು. ಡಿಸೈನಿಂಗ್ ಕೆಲಸ ಮಾಡುವ ಉದ್ಯೋಗಿಯ ವಯಸ್ಸು 18 ವರ್ಷ. 24 ಜನರು 18 ರಿಂದ 22 ವಯಸ್ಸಿನ ಒಂದೇ ವಯೋಮಾನದವರು ಎಂಬುವುದು ಮತ್ತೊಂದು ವಿಶೇಷ.

    ಲಕ್ಕಿಗೆ 2019ರಲ್ಲಿ ಬಿಡುಗಡೆಯಾದ ಅಪ್‍ ಸ್ಟಾರ್ಟ್ಸ್ ಸಿನಿಮಾ ಪ್ರೇರಣೆಯಾದ್ರೆ, ರಿಷಬ್ ಗೆ ಸ್ಟಾರ್ಟ್ ಅಪ್ ಮತ್ತು ಮೋಟಿವೇಷನಲ್ ಕಂಪನಿಯ ಕಥೆಗಳನ್ನು ಓದೋದು ಇಷ್ಟ. ಓಯೋ ಫೌಂಡರ್ ರಿತೇಶ್ ಅಗರ್‍ವಾಲ್ ಯಶಸ್ಸಿನ ಕಥೆ ಸ್ಟಾರ್ಟ್ ಅಪ್ ಆರಂಭಿಸಲು ಪ್ರೇರಣೆ ನೀಡಿದೆ. ಇಬ್ಬರು ಟಿವಿಎಫ್ ವೆಬ್ ಸಿರೀಸ್ ಪೀಚರ್ಸ್ ನಿಂದ ಪ್ರಭಾವಿತರಾಗಿದ್ದಾರೆ.

  • ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ವ್ಯಕ್ತಿ

    ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ವ್ಯಕ್ತಿ

    – 91 ಲಕ್ಷ ಸಾಲ ತೀರಿಸಲು ಈ ನಿರ್ಧಾರ

    ಶ್ರೀನಗರ: ತಾನು ಮಾಡಿದ 91 ಲಕ್ಷ ರೂ. ಸಾಲವನ್ನು ತೀರಿಸಲಾಗದೆ ವ್ಯಕ್ತಿ ತನ್ನ ಕಿಡ್ನಿ ಮಾರುವ ಕುರಿತು ನಿರ್ಧಾರ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ವ್ಯಕ್ತಿಯನ್ನು ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಖಾಜಿಗುಂಡ್‍ನ ನುಸ್ಸು ಪ್ರದೇಶದ ಸಬ್ಝರ್ ಅಹ್ಮದ್ ಖಾನ್(28) ಎಂದು ಗುರುತಿಸಲಾಗಿದೆ. ವ್ಯಕ್ತಿ ತನ್ನ ಕಿಡ್ನಿ ಮಾರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಖಾನ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಬ್ಯುಸಿನೆಸ್‍ನಲ್ಲಿ ನಷ್ಟವಾಗಿದ್ದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾರೆ.

    ನನ್ನ ಕಿಡ್ನಿಯನ್ನು ಮಾರಾಟ ಮಾಡಬೇಕೆಂದಿದ್ದೇನೆ. ನನಗೆ ಬ್ಯುಸಿನೆಸ್‍ನಲ್ಲಿ ಎಲ್ಲ ರೀತಿಯ ನಷ್ಟ ಉಂಟಾಗಿದ್ದು, ಇನ್ನೂ 91 ಲಕ್ಷ ರೂ. ಸಾಲ ಮರುಪಾವತಿಸಬೇಕಿದೆ. ಹೀಗಾಗಿ ಯಾರಿಗಾದರೂ ಕಿಡ್ನಿ ಅವಶ್ಯಕತೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಜಾಹೀರಾತಿನ ಮೂಲಕ ಮನವಿ ಮಾಡಿದ್ದಾರೆ.

    ಖಾನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಂಟ್ರ್ಯಾಕ್ಟರ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಹೇರಲಾಗಿದ್ದ ಎರಡು ಬಾರಿಯ ಲಾಕ್‍ಡೌನ್‍ನಿಂದಾಗಿ ಭಾರೀ ನಷ್ಟ ಉಂಟಾಗಿದ್ದು, ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. 370ನೇ ವಿಧಿ ರದ್ದುಪಡಿಸಿದ ವೇಳೆ ಮೊದಲ ಬಾರಿಗೆ ಲಾಕ್‍ಡೌನ್ ವಿಧಿಸಲಾಗಿತ್ತು. ಬಳಿಕ ಕೊರೊನಾ ಮಹಾಮಾರಿಯಿಂದಾಗಿ ಎರಡನೇ ಬಾರಿ ಲಾಕ್‍ಡೌನ್ ವಿಧಿಸಲಾಗಿದೆ. ಹೀಗಾಗಿ ಖಾನ್‍ಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

    ಎಲ್ಲವನ್ನೂ ಕಳೆದುಕೊಂಡಿದ್ದು, ಸಾಲ ತೀರಿಸಲು ಹಣವಿಲ್ಲದೆ ಕಂಗಾಲಾಗಿದ್ದಾರೆ. ಅವರ ಕುಟುಂಬಕ್ಕೆ ಇವರೇ ಆಧಾರ. ಬ್ಯಾಂಕ್‍ನಲ್ಲಿ 61 ಲಕ್ಷ ಹಾಗೂ ಸ್ನೇಹಿತರ ಬಳಿ 30 ಲಕ್ಷ ರೂ. ಸಾಲ ಮಾಡಿದ್ದಾರೆ. ತನ್ನ ಕಿಡ್ನಿ ಮಾರುವ ನಿರ್ಧಾರದ ಕುರಿತು ಖಾನ್ ತಮ್ಮ ಮನೆಯವರಿಗೂ ತಿಳಿಸಿದ್ದಾರೆ.

    ಖಾನ್ ತಮ್ಮ ಸಹ ಸಾಲ ತೀರಿಸಲು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಪೋಸ್ಟ್ ಮಾಡಿದ ಬಳಿಕ ಕೆಲವರು ಕಿಡ್ನಿ ಕೊಳ್ಳಲು ಕರೆ ಮಾಡಿದ್ದಾರೆ. ಒಬ್ಬರು 20 ಲಕ್ಷ ರೂ., ಮತ್ತೊಬ್ಬರು 25 ಲಕ್ಷ ರೂ.ಗೆ ಕೇಳಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪಿಲ್ಲ. ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಖಾನ್ ತಿಳಿಸಿದ್ದಾರೆ.

  • ತಂದೆ ಬಿಡುಗಡೆಗೆ ಪೊಲೀಸ್ ವ್ಯಾನ್‍ಗೆ ತಲೆ ಚಚ್ಚಿಕೊಂಡ ಬಾಲಕಿ- ಕಂದಮ್ಮಗಳಿಗೆ ದೀಪಾವಳಿ ಗಿಫ್ಟ್ ಕೊಟ್ಟ ಸಿಎಂ

    ತಂದೆ ಬಿಡುಗಡೆಗೆ ಪೊಲೀಸ್ ವ್ಯಾನ್‍ಗೆ ತಲೆ ಚಚ್ಚಿಕೊಂಡ ಬಾಲಕಿ- ಕಂದಮ್ಮಗಳಿಗೆ ದೀಪಾವಳಿ ಗಿಫ್ಟ್ ಕೊಟ್ಟ ಸಿಎಂ

    ಲಕ್ನೋ: ಕಂದಮ್ಮನ ಆಕ್ರಂದನವನ್ನು ನೋಡಲಾರದೆ ಬಡ ಪಟಾಕಿ ವ್ಯಾಪಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಂಧನದಿಂದ ಬಿಡುಗಡೆಗೊಳಿಸಿ ಬಾಲಕಿಗೆ ದೀಪಾವಳಿ ಗಿಫ್ಟ್ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

    ಉತ್ತರ ಪ್ರದೇಶದ ಬುಲಾಂದ್‍ಶಹರ್ ನ ಖುರ್ಜಾದಲ್ಲಿ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಮಾರುವಂತಿಲ್ಲ. ಆದರೆ ಈ ಮಾರುಕಟ್ಟೆಯಲ್ಲಿ ಕದ್ದು ಮುಚ್ಚಿ ಪಟಾಕಿ ಮಾರಲಾಗುತ್ತಿತ್ತು. ಅಂತಹವರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಬಾಲಕಿಯ ತಂದೆಯನ್ನೂ ಬಂಧಿಸಲಾಗಿದೆ. ಅಪ್ಪನನ್ನು ಎಳೆದುಕೊಂಡು ಹೋಗುವುದನ್ನು ನೋಡಲಾಗದೆ ಬಾಲಕಿ ತಕ್ಷಣವೇ ಜೋರಾಗಿ ಅಳಲು ಪ್ರಾರಂಭಿಸಿದ್ದು, ತಂದೆಯನ್ನು ಬಂಧಿಸದಂತೆ ಪೊಲೀಸರ ಬಳಿ ಗೋಗರೆದಿದ್ದಾಳೆ. ಆದರೆ ಪೊಲೀಸರು ಲೆಕ್ಕಿಸಿಲ್ಲ.

    ಬಳಿಕ ಪೊಲೀಸರು ವ್ಯಾಪಾರಿಯನ್ನು ವ್ಯಾನ್ ಬಳಿ ಎಳೆ ತಂದಿದ್ದಾರೆ. ಈ ವೇಳೆ ಸಹ ಬಾಲಕಿ ಬೇಡಿಕೊಂಡಿದ್ದಾಳೆ. ಆದರೆ ಪೊಲೀಸರು ಕೇಳಿಲ್ಲ. ಹೀಗಾಗಿ ವ್ಯಾನ್‍ಗೆ ಹಲವು ಬಾರಿ ತಲೆ ಚೆಚ್ಚಿಕೊಂಡಿದ್ದಾಳೆ. ಆದರೂ ಪೊಲೀಸರು ವ್ಯಾಪಾರಿಯನ್ನು ಬಂಧಿಸಿ ಕೊಂಡೊಯ್ದಿದ್ದಾರೆ. ಘಟನೆಯ ಸಂಪೂರ್ಣ ಚಿತ್ರಣವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಸಹ ಈ ವಿಡಿಯೋ ನೋಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ವ್ಯಾಪಾರಿಯನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

    ತಂದೆಯನ್ನು ಬಂಧಿಸದಂತೆ ಬಾಲಕಿ ಪೊಲೀಸರ ಕೈ ಹಿಡಿದು ಎಳೆದಿದ್ದಾಳೆ. ಅಲ್ಲದೆ ಪೊಲೀಸರ ವ್ಯಾನ್‍ಗೆ ತಲೆ ಚೆಚ್ಚಿಕೊಂಡಿದ್ದು ಎಂತಹವರಿಗಾದರೂ ಕರುಳು ಹಿಂಡಿದಂತಾಗುತ್ತದೆ. ಹೀಗಾಗಿ ವಿಡಿಯೋ ಗಮನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಗುವಿನ ತಂದೆಯನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ಬಾಲಕಿಯ ಮನೆಗೆ ಸ್ವೀಟ್ ಹಾಗೂ ಗಿಫ್ಟ್‍ಗಳನ್ನು ಸಹ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

    ಈ ಕುರಿತು ಬುಲಾಂದ್‍ಶಹರ್ ಎಸ್‍ಪಿ ಸಂತೋಷ್ ಕುಮಾರ್ ಸಿಂಗ್ ಖಚಿತಪಡಿಸಿದ್ದು, ಸಿಎಂ ಆದೇಶದ ಮೇರೆಗೆ ಪೊಲೀಸರು ಬಾಲಕಿಯ ಮನೆಗೆ ತೆರಳಿ ಸ್ವೀಟ್ ಹಾಗೂ ಗಿಫ್ಟ್ ನೀಡಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

    ಮಾನವೀಯತೆ ಮರೆತ ಪೊಲೀಸರು
    ಬಾಲಕಿ ಅಷ್ಟು ಗೋಗರೆದರೂ ಪೊಲೀಸರು ಕ್ಯಾರೆ ಎನ್ನದೆ ಎಳೆದೊಯ್ದಿದ್ದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಹೀಗಾಗಿ ಸಿಎಂ ಎಚ್ಚೆತ್ತು ಬಿಡುಗಡೆಗೆ ಸೂಚಿಸಿದ್ದಾರೆ.

  • ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗಳೂರು: ದೆಹಲಿಯ ಬಾಬಾ ಕಾ ಡಾಭಾ ವೃದ್ಧರ ಸಂಕಷ್ಟದ ಕುರಿತು ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬೆಂಗಳೂರಿನ ಸಸಿ ಮಾರುವ ವೃದ್ಧನ ವಿಡಿಯೋ ಸಖತ್ ವೈರಲ್ ಆಗಿದ್ದು, ಸಹಾಯ ಮಾಡುವಂತೆ ಬಾಲಿವುಡ್ ಸ್ಟಾರ್‍ ಗಳು ಸಹ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಸಸಿ ಮಾರುವ ರೇವಣಸಿದ್ದಪ್ಪ ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಬಾಲಿವುಡ್ ನಟರು ಪ್ರತಿಕ್ರಿಯಿಸಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

    ರೇವಣಸಿದ್ದಪ್ಪ ಅವರು ಸುಡುವ ಬಿಸಿಲಿನಲ್ಲಿ ಸಿಗ್ನಲ್ ಪಕ್ಕ ಕುಳಿತುಕೊಂಡು 10 ರಿಂದ 30 ರೂಪಾಯಿಗೆ ಸಸಿ ಮಾರುತ್ತಿದ್ದಾರೆ. ಈ ವೃದ್ಧನ ಬಗ್ಗೆ ಐ ಆಮ್ ಶುಭಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇವರಿಗೆ ಸಹಾಯ ಮಾಡಿ ಎಂದು ನಟರಾದ ಸೋನು ಸೂದ್, ಮಾಧವನ್, ಕಾಂಚನಾ ಗುಪ್ತ ಮತ್ತು ಪ್ರವೀಣ್ ಕಸ್ವನ್ ಗೆ ಟ್ಯಾಗ್ ಮಾಡಲಾಗಿದೆ. ಇದನ್ನು ಕಂಡ ಹಲವರು ರೀಟ್ವೀಟ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ ನೋಡಿದ ಬಾಲಿವುಡ್ ನಟ ರಣದೀಪ್ ಹೂಡಾ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಹೂಡಾ, ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ತೋರಿಸುವುದನ್ನು ಮಾಡಿ, ಇವರು ವುಲಾರ್ ಫ್ಯಾಷನ್ ಫ್ಯಾಕ್ಟರಿ, ಜೆಪಿ ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ, ಬೆಂಗಳೂರು. ಈ ವಿಳಾಸದಲ್ಲಿ ಕುಳಿತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.

    ಸುಡುವ ಬಿಸಿಲಿನಲ್ಲಿ ಕೊಡೆ ಹಿಡಿದು ವ್ಯಾಪಾರ ಮಾಡುವ ಈ ವೃದ್ಧನ ಕಥೆ ಪರಿಸ್ಥಿತಿ ಎಂತಹವರಿಗೂ ಮನಮಿಡಿಯುತ್ತದೆ. ರಸ್ತೆ ಪಕ್ಕ ಕೊಡೆ ಹಿಡಿದುಕಂಡು ಸಸಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಬಾರದ ಹಿನ್ನೆಲೆ ಬೇಸರಗೊಂಡಿದ್ದಾರೆ. ಸಸಿಗಳನ್ನು ಯಾರು ತೆಗೆದುಕೊಳ್ಳದ್ದಕ್ಕೆ ವೃದ್ಧನಿಗೆ ತುಂಬಾ ನೋವುಂಟಾಗಿದೆ. ಇದನ್ನು ಮನಗಂಡ ಸೈನಿಕರೊಬ್ಬರು ಟ್ವೀಟ್ ಮಾಡಿ, ಬಾಲಿವುಡ್ ನಟರಿಗೆ ಟ್ಯಾಗ್ ಮಾಡಿದ್ದಾರೆ. ವೃದ್ಧನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  • ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಕೊರೊನಾ ನಡುವೆ ಗೌರಿ, ಗಣೇಶ ಹಬ್ಬ – ಮಾರ್ಕೆಟ್‍ನಲ್ಲಿ ಭರ್ಜರಿ ವ್ಯಾಪಾರ

    ಬೆಂಗಳೂರು: ಕೊರೊನಾದ ಮಧ್ಯೆ ಜನರು ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಸಂಭ್ರಮದಲ್ಲಿ ಜನರು ಕೊರೊನಾ ಆತಂಕವನ್ನ ಮರೆತಿದ್ದಾರೆ ಎನ್ನುವಂತಿದೆ. ಬೆಳ್ಳಂಬೆಳ್ಳಗ್ಗೆ ಜನರು ಮಾರ್ಕೆಟ್‍ನಲ್ಲಿ ಹಬ್ಬದ ವಸ್ತುಗಳನ್ನ ಖರೀದಿ ಮಾಡಲು ಗುಂಪು ಗೂಡಿದ್ದಾರೆ.

    ಇವತ್ತು ಗೌರಿ ಹಬ್ಬ, ನಾಳೆ ಗಣೇಶ ಚತುರ್ಥಿ. ಆದರೆ ಈ ಬಾರಿ ಗೌರಿ ಗಣೇಶ ಹಬ್ಬಕ್ಕೆ ಕೊರೊನಾ ಕವಿದಿದೆ. ಸಾಮಾಜಿಕ ಅಂತರವನ್ನು ಮರೆತು, ಮಾಸ್ಕ್ ಹಾಕಿಕೊಳ್ಳದೆ ಅಗತ್ಯ ವಸ್ತುಗಳನ್ನ ಖರೀದಿ ಮಾಡುವುದರಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ  ಜನ ಕೊರೊನಾ ಆತಂಕವನ್ನು ಮರೆತು ಅಜಾಗೃತರಾಗಿ ವ್ಯಾಪಾರ ಮಾಡುತ್ತಿದ್ದಾರೆ.

    ಹಬ್ಬಕ್ಕೆ ಹೂ, ಹಣ್ಣು, ಬಾಳೆ ಕಂದಿನ, ಮಾರಾಟ ಬೆಂಗಳೂರಿನಲ್ಲಿ ಜೋರಾಗಿ ಆಗುತ್ತಿದೆ. ಕೊರೊನಾದ ನಡುವೆ ಗಣೇಶ ಹಬ್ಬವನ್ನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ಹೂವಿನ ವ್ಯಾಪಾರಿಗಳು ತಾತ್ಕಾಲಿಕವಾಗಿ ಕೆ.ಆರ್ ರೋಡ್‍ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡಿದ್ದಾರೆ.

    ಇತ್ತ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಭರ್ಜರಿಯಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೌಸಿಂಗ್ ಬೋಡಿನಲ್ಲಿ ಸಂತೆ ಮಾರುಕಟ್ಟೆಗೆ ಹಬ್ಬದ ಅಗತ್ಯ ವಸ್ತುಗಳ ಖರೀದಿ ಮಾಡಲು ಅಪಾರ ಜನರು ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದೆ ಮಾಸ್ಕ್ ಧರಿಸದೆ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು

    ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು

    ದಾವಣಗೆರೆ: ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದ್ದು, ಸೋಂಕು ತಗುಲಿದವರು ಚಿಕಿತ್ಸೆಗಾಗಿ ಪರದಾಡಿದರೆ, ಉಳಿದವರು ಲಾಕ್‍ಡೌನ್‍ನಿಂದಾಗಿ ಪರದಾಡು ಸ್ಥಿತಿ ಬಂದೊದಗಿದಿದೆ. ಲಾಕ್‍ಡೌನ್‍ನಿಂದಾಗಿ ಬಹುತೇಕ ಯುವಕರು ಕೆಲಸ ಕಳೆದುಕೊಂಡಿದ್ದು, ಇದರಿಂದಾಗಿ ಎಲ್ಲ ವಲಯಗಳಿಗೂ ಹೊಡೆತ ಬಿದ್ದಿದೆ. ಹಲವು ಯುವಕರು ಪರ್ಯಾಯವಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದು, ಇನ್ನೂ ಹಲವರು ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇನ್ನೂ ನೋವಿನ ಸಂಗತಿ ಎಂದರೆ ಅತಿಥಿ ಉಪನ್ಯಾಸಕರ ಸ್ಥಿತಿ ಹೇಳತೀರದಾಗಿದೆ.

    ಲಾಕ್‍ಡೌನ್‍ನಿಂದಾಗಿ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಾಗೂ ಖಾಸಗಿ  ಕಾಲೇಜುಗಳ ಉಪನ್ಯಾಸಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮೊದಲೇ 10-12 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದ ಉಪನ್ಯಾಸಕರಿಗೆ ಇದೀಗ ಲಾಕ್‍ಡೌನ್‍ನಿಂದಾಗಿ ಅದೂ ಇಲ್ಲವಾಗಿದೆ. ಹೀಗಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದು, ಸಣ್ಣ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದಾರೆ. ತರಕಾರಿ, ಮಾಸ್ಕ್, ಎಗ್ ರೈಸ್ ಮಾರುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಉಪನ್ಯಾಸಕರು ತೊಡಗಿದ್ದಾರೆ.

    ದಾವಣಗೆರೆಯಲ್ಲಿ ಕೆಲ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಅಥಿತಿ ಉಪನ್ಯಾಸಕರು ಕುಟುಂಬದ ನಿರ್ವಹಣೆಗಾಗಿ ಮಾಸ್ಕ್, ತರಕಾರಿ ಹಾಗೂ ಎಗ್ ರೈಸ್ ಮಾರಾಟ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವಿದ್ಯಾ ನಗರದ ಮುಖ್ಯ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದ ಕಾಲೇಜು ತೆರೆಯದ ಹಿನ್ನೆಲೆ ಇವರ ಕುಟುಂಬ ಬೀದಿಗೆ ಬಿದ್ದಿದೆ. ಎಂಎ, ಎಂಕಾಂ, ಎಂಬಿಎ ಪದವೀಧರರಾಗಿರುವ ಉಪನ್ಯಾಸಕರಿಗೆ ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ.

    ಕುಟುಂಬದ ನಿರ್ವಹಣೆಗಾಗಿ ಪಡಬಾರದ ಕಷ್ಟಪಡುವಂತಾಗಿದ್ದು, ಹೇಗೋ ತರಕಾರಿ, ಮಾಸ್ಕ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಸಹಾಯಧನ ನೀಡುವಂತೆ ಉಪನ್ಯಾಸಕರು-ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಕೆಲಸವಿಲ್ಲದೆ ಈ ಹಿಂದೆ ಎಂಎಸ್‍ಸಿ, ಬಿ.ಕಾಂ. ಬಿಎ ಸೇರಿದಂತೆ ಹೆಚ್ಚು ಕಲಿತ ಯುವಕರು ಸಹ ನರೇಗಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ರಸ್ತೆ ಕೆಲಸ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಇದೀಗ ಉಪನ್ಯಾಸಕರಿಗೂ ಸಂಕಷ್ಟ ಎದುರಾಗಿದೆ.

    ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರ ಶಾಲಾ, ಕಾಲೇಜುಗಳನ್ನು ತೆರೆಯಲು ಅನುಮತಿ ಸೂಚಿಸಿಲ್ಲ. ಇದೆಲ್ಲದರ ಭಯದ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಾಡಿ ಮುಗಿಸಲಾಗಿದೆ. ಆದರೆ ಶಾಲೆ, ಕಾಲೇಜು ಪ್ರಾರಂಭದ ಕುರಿತು ನಿರ್ಧಾರ ಕೈಗೊಂಡಿಲ್ಲ. ಕೊರೊನಾ ಕಡಿಮೆಯಾಗಲು ಇನ್ನು ಹೆಚ್ಚು ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಶಾಲೆಗಳು ತೆರೆಯುವುದಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗೆ ಏನು ಮಾಡುವುದು ಎಂದು ಚಿಂತಿಸಿ, ಶಿಕ್ಷಕರು ತರಕಾರಿ, ಮಾಸ್ಕ್ ಹಾಗೂ ಎಗ್ ರೈಸ್ ಮಾರಟ ಮಾಡುವ ಕೆಲಸಕ್ಕೆ ನಿಂತಿದ್ದಾರೆ.