Tag: Bus Priority Lane

  • ಪವರ್ ಸ್ಟಾರ್ ಪುನೀತ್ ಈಗ ಬಿಎಂಟಿಸಿಯ ಬ್ರಾಂಡ್ ಅಂಬಾಸಿಡರ್

    ಪವರ್ ಸ್ಟಾರ್ ಪುನೀತ್ ಈಗ ಬಿಎಂಟಿಸಿಯ ಬ್ರಾಂಡ್ ಅಂಬಾಸಿಡರ್

    ಬೆಂಗಳೂರು: ಕಳೆದ ನವೆಂಬರ್ 15ರಿಂದ ನಗರದ ಕೆ.ಆರ್.ಪುರಂ ನಿಂದ ವೈಟ್‍ಫೀಲ್ಡ್ ವರೆಗೆ ಆರಂಭಗೊಂಡಿರುವ ಬಸ್ ಪ್ರಿಯಾರಿಟಿ ಲೇನ್ ಹಾಗೂ ಬಿಎಂಟಿಸಿಗೆ ನೂತನ ಅಂಬಾಸಿಡರ್ ಆಗಲು ನಟ ಪುನೀತ್ ರಾಜ್‍ಕುಮಾರ್ ಸಮ್ಮತಿ ಸೂಚಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ನಿನ್ನೆಯಷ್ಟೇ ಮಾತನಾಡಿದ್ದ ಬಿಎಂಟಿಸಿಯ ಅಧ್ಯಕ್ಷರಾದ ನಂದೀಶ್ ರೆಡ್ಡಿ, ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾತನಾಡಿದ್ದೇವೆ. ಅವರು ಒಪ್ಪಿದರೆ ಈ ಯೋಜನೆ ಸಕ್ಸಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು. ಇಂದು ಅವರನ್ನು ಭೇಟಿ ಮಾಡಿದ್ದ ನಂದೀಶ್ ರೆಡ್ಡಿ ಅವರ ಮನವಿಗೆ ಪುನೀತ್ ರಾಜ್‍ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.

    ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದ ಮಹತ್ವಾಕಾಂಕ್ಷಿ ಯೋಜನೆ ಪ್ರತ್ಯೇಕ ಬಸ್ ಪಥ (ಬಸ್ ಪ್ರಿಯಾರಿಟಿ ಲೇನ್). ಆದರೆ ಈ ಪಥ ಅಷ್ಟು ಜನಪ್ರಿಯವಾಗಿಲ್ಲ. ಈ ಬಗ್ಗೆ ಫೇಸ್ ಬುಕ್ ಹಾಗೂ ವಾಟ್ಸಾಪ್‍ಗಳಲ್ಲಿ ಬಿಎಂಟಿಸಿಯಿಂದ ಜಾಹೀರಾತುಗಳನ್ನು ಮಾಡಿ ಪ್ರಚಾರ ಮಾಡಲಾಗುತ್ತಿದೆ.

    ಬಿಎಂಟಿಸಿ ಬ್ರಾಂಡ್ ಅಂಬಾಸಿಡರ್ ಆಗಲು ಪುನೀತ್ ಯಾವುದೇ ಸಂಭಾವನೆಯನ್ನು ಪಡೆಯದೆ ಒಪ್ಪಿಗೆ ನೀಡಿರುವುದು ವಿಶೇಷವಾಗಿದೆ. ಈ ಕುರಿತು ಮಾಹಿತಿ ನೀಡಿ ಮಾತನಾಡಿದ ನಂದೀಶ್ ರೆಡ್ಡಿ ಅವರು, ಪುನೀತ್ ಒಪ್ಪಿಗೆ ನೀಡಿದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಈ ವೇಳೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅನುಪಮ್ ಅಗ್ರವಾಲ್ ಉಪಸ್ಥಿತರಿದ್ದರು.