Tag: Bus facility

  • Kodagu | ಬಸ್‌ ಸೌಲಭ್ಯದ ಕೊರತೆ – ವಿದ್ಯಾರ್ಥಿಗಳಿಗೆ ಸಂಕಷ್ಟ

    Kodagu | ಬಸ್‌ ಸೌಲಭ್ಯದ ಕೊರತೆ – ವಿದ್ಯಾರ್ಥಿಗಳಿಗೆ ಸಂಕಷ್ಟ

    ಮಡಿಕೇರಿ: ʻಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆʼ ಎಂಬ ಮಾತು ಜನಜನಿತ. ಇದರೊಂದಿಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ವಿದ್ಯಾರ್ಥಿಗಳಿಗೆ (Students) ʻಬಸ್ ಸೌಲಭ್ಯ ಕಲ್ಪಿಸಿದರೆ, ಉನ್ನತ ಶಿಕ್ಷಣ ಪಡೆದಂತೆʼ ಎಂಬ ಹೊಸ ಮಾತನ್ನು ಸೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಕುಶಾಲನಗರದಿಂದ ಮಡಿಕೇರಿಗೆ (Madikeri) ತೆರಳುವ ಬಸ್‌ ಸೌಲಭ್ಯದ ಕೊರತೆಯಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

    ಇರುವ ಒಂದೆರಡು ಬಸ್‌ಗಳಲ್ಲೇ ಪ್ರಯಾಣಿಕರು ನೇತಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ದೂರದ ಊರುಗಳಿಂದ ಬರುವ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲ್ಲಿಸದೇ ಮುಂದೆ ಸಾಗುತ್ತವೆ. ಹೀಗಾಗಿ ಕುಶಾಲನಗರದಿಂದ ಮಡಿಕೇರಿಯ ಶಾಲೆ, ಪಿಯು ಕಾಲೇಜು, ಐಟಿಐ ಹಾಗೂ ಇನ್ನಿತರ ವಿದ್ಯಾಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಒಂದೆಡೆ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಲಾರದೇ ಹಾಜರಾತಿ ಕೊರತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಪಾಠ ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಆರೋಪ. ಇದನ್ನೂ ಓದಿ: ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ: ಸುಪ್ರೀಂ

    ಪ್ರಮುಖ ವಾಣಿಜ್ಯೋದ್ಯಮ ಕೇಂದ್ರವಾಗಿರುವ ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಪದವಿ ಕಾಲೇಜು ಅಥವಾ ಐಟಿಐ ವಿದ್ಯಾಸಂಸ್ಥೆಗಳು ಇಲ್ಲದಿರುವುದರಿಂದ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಕಾನ್‌ಬೈಲ್, ಮಂಜಿಕೆರೆ, ಅಂದಗೋವೆ, ಶಾಂತಿಗೇರಿ, ಗುಂಡುಗುಟ್ಟಿ, ಹರದೂರು, ಗರಗಂದೂರು, ಪೊನ್ನತ್ ಮೊಟ್ಟೆ, ಭೂತನಕಾಡು, ಮತ್ತಿಕಾಡು ಹಾಗೂ ಇನ್ನಿತರ ಹಲವು ಗ್ರಾಮಗಳ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಮಡಿಕೇರಿಯಲ್ಲಿರುವ ಶಾಲೆ, ಕಾಲೇಜು ಹಾಗೂ ಇನ್ನಿತರ ವಿದ್ಯಾಸಂಸ್ಥೆಗಳಿಗೆ ತೆರಳುತ್ತಿದ್ದಾರೆ. ಬೆಳಗ್ಗೆ ಸುಂಟಿಕೊಪ್ಪ ಪಟ್ಟಣಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.

    ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಬರುವ ಬಸ್‌ಗಳು ಕುಶಾಲನಗರದಿಂದಲೇ ಪ್ರಯಾಣಿಕರಿಂದ‌ ತುಂಬಿಕೊಂಡಿರುತ್ತದೆ. ಆದ್ದರಿಂದ ಸುಂಟಿಕೊಪ್ಪದಲ್ಲಿ ನಿಲುಗಡೆಯಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಇದನ್ನೂ ಓದಿ: ಕೊಲೆ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ – ಜಾಮೀನು ಅರ್ಜಿ ವಿಚಾರಣೆ ನ.21ಕ್ಕೆ ಮುಂದೂಡಿಕೆ

    ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟಿಕೊಂಡು ಪ್ರತಿದಿನ ಬೆಳಗ್ಗೆ 8.30 ರಿಂದ 9:30 ಗಂಟೆಗೆ ಸುಂಟಿಕೊಪ್ಪ – ಮಡಿಕೇರಿ ಮಾರ್ಗಕ್ಕೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವಂತೆ ಪೋಷಕರು ಮನವಿ ಮಾಡಿದ್ದದಾರೆ.

  • ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    – ಬಸ್ ಇಲ್ಲದೇ ಹೆಚ್ಚಾದ ಆಟೋ ಹಾವಳಿ

    ಹಾವೇರಿ: ಹಾವೇರಿ (Haveri) ಜಿಲ್ಲಾ ಕೇಂದ್ರವಾಗಿ 27 ವರ್ಷ ಕಳೆದಿದೆ. ಆದರೆ ನಗರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಜೊತೆಗೆ ಸಾರಿಗೆ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದಾರೆ.

    ಹಾವೇರಿ ನಗರಸಭೆಯು ನಗರದ ಜನರ ಅನುಕೂಲಕ್ಕಾಗಿ ಕಚೇರಿ ಹಾಗೂ ಬೇರೆ ಬೇರೆ ಏರಿಯಾಗಳಿಗೆ ಸಾಗಲು ನಗರ ಸಂಚಾರವನ್ನು ಆರಂಭಿಸಿತ್ತು. ಪ್ರಮುಖ ನಗರದಲ್ಲಿ ಬಸ್ ನಿಲ್ದಾಣ (Bus Stand) ನಿರ್ಮಾಣ ಮಾಡಿ 12 ವರ್ಷ ಕಳೆದಿದೆ. 2013ರಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಗರದ ಪ್ರಮುಖ ಏರಿಯಾದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಯಿತು.ಇದನ್ನೂ ಓದಿ:

    ನಗರ ಸಂಚಾರ ಆರಂಭಿಸಿದ ಒಂದೇ ಒಂದು ತಿಂಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಬಿಡದೇ ಬಸ್ ನಿಲ್ದಾಣಗಳೇ ಹಾಳಾಗಿವೆ. ನಗರಸಭೆ, ಸಾರಿಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಜನರು ಪರಿಸ್ಥಿತಿ ಪರದಾಡುವಂತಾಗಿದೆ.

    ಇದರಿಂದ ಆಟೋಗಳ ಹಾವಳಿ ಹೆಚ್ಚಾಗಿದೆ. ಸಮೀಪದ ಪ್ರದೇಶಗಳಿಗೆ 50 ರಿಂದ 100 ರುಪಾಯಿ ಕೇಳುತ್ತಾರೆ. ಹೀಗಾಗಿ ಬಡ ಜನರು ನಗರದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಶಾಲೆಯ ಮಕ್ಕಳು ಸಹ ನಿತ್ಯವು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದಲ್ಲಿ 2 ಎಲೆಕ್ಟ್ರಿಕ್ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಹಾವೇರಿ ಜಿಲ್ಲಾಕೇಂದ್ರವಾಗಿ 27 ವರ್ಷ ಕಳೆದರೂ ಜನರು ವಂಚಿತರಾಗುತ್ತಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಹಾವೇರಿ ನಗರದಲ್ಲಿ ನಗರಸಾರಿಗೆ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಮಾಡಬೇಕಿದೆ.ಇದನ್ನೂ ಓದಿ:

  • ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ಬೆಳಗಾವಿ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಅಂತ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಸಾಂಭ್ರಾ ಗ್ರಾಮದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಪಂತಬಾಳೇಕುಂದ್ರಿ ಹಾಗೂ ಸುಳೇಬಾವಿ ಮಾರ್ಗದ ಬಸ್‍ಗಳು ಬೆಳಗ್ಗೆ ನಿಲುಗಡೆಯಾಗುತ್ತಿಲ್ಲ. ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ಕಳೆದ ಹಲವು ತಿಂಗಳಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಒಂದು ಗಂಟೆಗಳ ಕಾಲ ರಸ್ತೆ ತಡೆಯಿಂದ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

    ನಂತರ ಮಾರಿಹಾಳ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು