Tag: bullet train

  • ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಅಹ್ಮದಾಬಾದ್: ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಇದೀಗ ಹೈ ಸ್ಪೀಡ್ ರೈಲು ಪ್ರಯಾಣದ ಅಂದಾಜು ದರವನ್ನೂ ಸಹ ಪ್ರಕಟಿಸಲಾಗಿದೆ.

    ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸಲಿರುವ ಹೈ ಸ್ಪೀಡ್ ರೈಲಿನ ದರ ಅಂದಾಜು 3 ಸಾವಿರ ರೂ. ಇರಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೋರೇಷನ್ ಲಿ.(ಎನ್‍ಎಚ್‍ಎಸ್‍ಆರ್‍ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಈಗಾಗಲೇ 622 ಹೆಕ್ಟೇರ್ (ಶೇ.45ರಷ್ಟು)ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಉಳಿದ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬುಲೆಟ್ ರೈಲು ಯೋಜನೆಗೆ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಇದರಲ್ಲಿ ಖಾಸಗಿ, ಸರ್ಕಾರಿ, ಅರಣ್ಯ ಮತ್ತು ರೈಲ್ವೇ ಭೂಮಿ ಒಳಗೊಂಡಿದೆ. ಈವರೆಗೆ 622 ಹೆಕ್ಟೇರ್(ಶೇ.45) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಡಿಸೆಂಬರ್ 2023ರ ಗಡುವು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿ ದಿನ ಬುಲೆಟ್ ರೈಲು 70 ಟ್ರಿಪ್ ಸಂಚರಿಸಲಿದ್ದು, ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕಾರ್ಯನಿರ್ವಹಿಸಲಿದೆ. ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಟೆಂಡರ್ ನೀಡಲಾಗಿದೆ. ಮಾರ್ಚ್ 2020ರೊಳಗೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

    ಈ ಪ್ಯಾಕೇಜ್‍ಗಳಲ್ಲಿ ವಾಪಿ ಮತ್ತು ವಡೋದರಾ ನಡುವೆ 237 ಕಿ.ಮೀ. ಸೇತುವೆ ನಿರ್ಮಾಣ ಹಾಗೂ ವಡೋದರಾ ಮತ್ತು ಅಹ್ಮದಾಬಾದ್ ನಡುವೆ 87ಕಿ.ಮೀ. ಇನ್ನೊಂದು ಪ್ಯಾಕೇಜ್ ಗುರುತಿಸಲಾಗಿದೆ. ಈ ಯೋಜನೆಯನ್ನು ಒಟ್ಟು 27 ಪ್ಯಾಕೇಜ್‍ಗಳಾಗಿ ವಿಂಗಡಿಸಿದ್ದು, ಮಹಾರಾಷ್ಟ್ರದಲ್ಲಿ ಸಮುದ್ರದೊಳಗಿನ ಸುರಂಗ ಮಾರ್ಗ ಸೇರಿದಂತೆ ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಈಗಾಗಲೇ ಟೆಂಡರ್ ನೀಡಿದ್ದೇವೆ ಎಂದು ಖರೆ ವಿವರಿಸಿದರು.

    ಪ್ರಸ್ತುತ ಇಡೀ ಯೋಜನೆಯ ಅಂದಾಜು ವೆಚ್ಚ 1.08 ಲಕ್ಷ ಕೋಟಿ ರೂ.ಗಳಾಗಿದೆ. ಡಿಸೆಂಬರ್ 2022ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಭೂಸ್ವಾಧಿನದ ಕುರಿತು ಕೆಲವು ರೈತರಲ್ಲಿ ಅಸಮಾಧಾನ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

    ಗುಜರಾತ್‍ನಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಿದ್ದ ಸುಮಾರು 5,300 ಖಾಸಗಿ ಪ್ಲಾಟ್‍ಗಳಲ್ಲಿ ಈಗಾಗಲೇ 2,600 ಪ್ಲಾಟ್‍ಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಗುಜರಾತ್‍ನ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ, 4,000 ದೊಡ್ಡ ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ನಗರದ ಪ್ರಸ್ತುತ ರೈಲ್ವೆ ನಿಲ್ದಾಣಗಳಲ್ಲೇ ಅಹ್ಮದಾಬಾದ್‍ನ ಹೈ ಸ್ಪೀಡ್ ರೈಲ್ವೆ ನಿಲ್ದಾಣದ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿವೆ. ಈಗಿರುವ ರೈಲ್ವೇ ಮಾರ್ಗಗಳ ಮೇಲೆಯೇ ಬುಲೆಟ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ರೈಲು ಒಟ್ಟು 508 ಕಿ.ಮೀ. ಸಂಚರಿಸಲಿದ್ದು, 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

    2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದರೆ ರೈತರು ಈ ಯೋಜನೆ ವಿರುದ್ಧ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೆಲ ಸಮಯ ಅಡ್ಡಿಯಾಗಿತ್ತು.

    ಮುಂಬೈ ಅಹ್ಮದಾಬಾದ್ ಮಧ್ಯೆ 508.5 ಕಿ.ಮೀ ಅಂತರವಿದ್ದು ಗಂಟೆಗೆ 320 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

  • ಚೀನಾದಲ್ಲಿ ಓಡಲಿದೆ ಗಂಟೆಗೆ 1 ಸಾವಿರ ಕಿ.ಮೀ ವೇಗದ ಫ್ಲೈಟ್- ರೈಲು!

    ಚೀನಾದಲ್ಲಿ ಓಡಲಿದೆ ಗಂಟೆಗೆ 1 ಸಾವಿರ ಕಿ.ಮೀ ವೇಗದ ಫ್ಲೈಟ್- ರೈಲು!

    ಬೀಜಿಂಗ್: ಗಂಟೆಗೆ 1 ಸಾವಿರ ಕಿ.ಮೀ. ವೇಗದಲ್ಲಿ ಚಲಿಸುವ ಫ್ಲೈಟ್-ಟ್ರೈನ್ ಮಾದರಿಯನ್ನು ಚೀನಾ ಅನಾವರಣಗೊಳಿಸಿದೆ.

    ಚೀನಾದಲ್ಲಿ ಈಗ ಗಂಟೆಗೆ 350 ಕಿ.ಮೀ ವೇಗದಲ್ಲಿ ಕ್ರಮಿಸುವ ಬುಲೆಟ್-ರೈಲು ಇದೆ. ಸುಧೀರ್ಘ ಸಂಶೋಧನೆಯ ನಂತರ ಮುಂದಿನ ಪೀಳಿಗೆಯ ಮ್ಯಾಗ್ನೆಟಿಕ್-ಲೆವಿಟೇಷನ್ ರೈಲುಗಳನ್ನ ತರಲು ಸಿದ್ಧತೆ ನಡೆಸುತ್ತಿದ್ದು, 2025ಕ್ಕೆ ಗಂಟೆಗೆ 1 ಸಾವಿರ ಕಿ.ಮೀ ವೇಗದಲ್ಲಿ ಸಂಚರಿಸುವ ಈ ರೈಲು ಹಳಿಗೆ ಇಳಿಯುವ ಸಾಧ್ಯತೆಯಿದೆ.

    ಈ ಹೊಸ ಮಾದರಿಯ ಫ್ಲೈಟ್-ಟ್ರೈನ್ ಮಾದರಿಯನ್ನು ಸಸಿಚ್ವಾನ್ ಪ್ರಾಂತ್ಯದ ಚೆಂಗ್ಡುವಿನಲ್ಲಿ ನಡೆದ 2018 ರ ರಾಷ್ಟ್ರೀಯ ಆವಿಷ್ಕಾರ ಮತ್ತು ಉದ್ಯಮಶೀಲತೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ.

    ಈ ಮಾದರಿಯನ್ನ ಚೈನಾ ಏರೋಸ್ಪೇಸ್ ಸೈನ್ಸ್ ಆಂಡ್ ಇಂಡಸ್ಟ್ರಿ ಕಾರ್ಪೊರೇಷನ್ ಲಿಮಿಟೆಡ್ (ಸಿಎಎಸ್‍ಐಸಿ) 2015 ರಿಂದಲೇ ಅಭಿವೃದ್ಧಿ ಪಡಿಸುತ್ತ ಬಂದಿದೆ. ಈ ರೈಲಿನ ವಿಶೇಷತೆ ಏನೆಂದರೆ, 29.2 ಮೀಟರ್ ಉದ್ದ ಮತ್ತು 3 ಮೀಟರ್ ಅಗಲವಿದ್ದು, ಬೆಳಕು ಮತ್ತು ಶಾಖ-ನಿರೋಧಕ ಕ್ಯಾಬಿನ್ ವ್ಯವಸ್ಥೆ ಇರುತ್ತದೆ.

    ವಾಕ್ಯೂಮ್ ರೈಲ್ವೇ ಎನ್ವಿರನ್‍ಮೆಂಟ್ ಮತ್ತು ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನವನ್ನು ಬಳಸಿ ಹಳಿಯ 100 ಮಿಲಿಮೀಟರ್ ಎತ್ತರದಲ್ಲಿ ರೈಲು ಸಂಚರಿಸಲಿದೆ. ಈ ರೈಲು 1,000 ಕಿ.ಮೀ.ಗೆ ನಿಧಾನವಾಗಿ ತನ್ನ ವೇಗವನ್ನ ಹೆಚ್ಚಿಸುತ್ತದೆ ಮತ್ತು ಪ್ರಯಾಣಿಕರು ಆರಾಮವಾಗಿ ಮತ್ತು ಸುರಕ್ಷಿತವಾಗಿರುತ್ತಾರೆಂದು ಸಿಎಎಸ್‍ಐಸಿ ನ ಅಧಿಕಾರಿ ವಾಂಗ್ ಹೇಳಿದ್ದಾರೆ.

    ಅಮೆರಿಕದ ಸ್ಪೇಸ್ ಎಕ್ಸ್ ಕಂಪನಿ ಗಂಟೆಗೆ 1 ಸಾವಿರ ಕಿ.ಮಿ ವೇಗದಲ್ಲಿ ಚಲಿಸುವ ಚಲಿಸುವ ಹೈಪರ್ ಲೂಪ್ ಅಭಿವೃದ್ಧಿ ಪಡಿಸುತ್ತಿದೆ. ವಿಶ್ವದಲ್ಲಿ ಚೀನಾದಲ್ಲೇ ಅತಿ ದೊಡ್ಡ ಹೈ ಸ್ಪೀಡ್ ರೈಲಿನ ಜಾಲ ಇದ್ದು ಒಟ್ಟು, ದೇಶದ ಒಳಗಡೆಯೇ 22 ಸಾವಿರ ಕಿ.ಮೀ ಹಳಿಯನ್ನು ಹೊಂದಿದೆ. ಇದನ್ನು ಓದಿ: ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುಲೆಟ್ ಟ್ರೈನ್‍ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಷ್ಟೇ ಓಡಾಡಬಹುದು: ಮೆಟ್ರೋಮ್ಯಾನ್ ಇ. ಶ್ರೀಧರನ್

    ಬುಲೆಟ್ ಟ್ರೈನ್‍ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಷ್ಟೇ ಓಡಾಡಬಹುದು: ಮೆಟ್ರೋಮ್ಯಾನ್ ಇ. ಶ್ರೀಧರನ್

    ಬೆಂಗಳೂರು: ಬುಲೆಟ್ ಟ್ರೈನ್‍ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಷ್ಟೇ ಓಡಾಡಬಹುದು. ಅದು ಅತ್ಯಂತ ದುಬಾರಿ. ಅದು ಜನಸಾಮಾನ್ಯರನ್ನು ತಲುಪಲು ಸಾಧ್ಯವೇ ಇಲ್ಲ. ನಮಗೆ ಬೇಕಾಗಿರೋದು ಆಧುನಿಕ, ಸ್ವಚ್ಛ, ಸುರಕ್ಷಿತ ಮತ್ತು ವೇಗದ ರೈಲು ವ್ಯವಸ್ಥೆ ಎಂದು ಮೆಟ್ರೋಮ್ಯಾನ್ ಎಂದೇ ಖ್ಯಾತರಾಗಿರೋ ಇ. ಶ್ರೀಧರನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಶ್ರೀಧರನ್, ಪರೋಕ್ಷವಾಗಿಯೇ ಪ್ರಧಾನಿ ಮೋದಿಯ ಮಹತ್ವಕಾಂಕ್ಷೆಯ 1 ಲಕ್ಷ ಕೋಟಿ ರೂಪಾಯಿ ವೆಚ್ಚದ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪ್ರಾಮಾಣೀಕರಣ ಹಾಗೂ ಸ್ಥಳೀಯೀಕರಣಕ್ಕಾಗಿ ಮೆಟ್ರೋ ಸೇವೆ ದೀರ್ಘ ಕಾಲ ಇರಲಿ. ಪ್ರಾಮಾಣೀಕರಣದಿಂದ ರೈಲುಗಳ ಸಾಮಥ್ರ್ಯ ಹೆಚ್ಚುತ್ತದೆ ಹಾಗೂ ವೆಚ್ಚ ಕಡಿಮೆಗೊಳಿಸುತ್ತದೆ. ನಾವು ಇದರಿಂದ ‘ಮೇಕ್ ಇನ್ ಇಂಡಿಯಾ’ ಪ್ರಾಜೆಕ್ಟ್ ನಲ್ಲಿ ಕೋಚ್ ಹಾಗೂ ಉಳಿದ ಭಾಗಗಳನ್ನು ತಯಾರಿಸಬಹುದು ಎಂದು ಹೇಳಿದ್ದಾರೆ.

    ದೆಹಲಿ ಮೆಟ್ರೋ ದೇಶದಲ್ಲೇ ಒಂದು ಹೊಸ ಮೆಟ್ರೋ ಕ್ರಾಂತಿಯನ್ನು ಸೃಷ್ಟಿಸಿದೆ. ಈಗ 13 ಮೆಟ್ರೋ ರೈಲುಗಳನ್ನು ತಯಾರಿಸಲಾಗುತ್ತಿದೆ. 20 ವರ್ಷದಲ್ಲಿ ದೆಹಲಿ ಮೆಟ್ರೋ 260 ಕಿ.ಮೀವರೆಗೂ ತಲುಪುತ್ತಿದ್ದು, ವಿಶ್ವದಲ್ಲೇ ಅತ್ಯಂತ ವೇಗವಾಗಿ ತಲುಪುತ್ತಿದೆ. ನನಗೆ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ ಬಗ್ಗೆ ಹಮ್ಮೆ ಇದೆ ಎಂದು ತಿಳಿಸಿದ್ದಾರೆ.

    ಭಾರತೀಯ ರೈಲ್ವೇ ವ್ಯವಸ್ಥೆ 20 ವರ್ಷಗಳಷ್ಟು ಹಿಂದಿದೆ. ಬಯೋ ಟಾಯ್ಲೆಟ್ ಬಿಟ್ಟು ರೈಲ್ವೆಯಲ್ಲಿ ಏನೂ ಸುಧಾರಣೆ ಆಗಿಲ್ಲ. ರೈಲುಗಳ ವೇಗ ಅದರಲ್ಲೂ ಪ್ರತಿಷ್ಠಿತ ರೈಲುಗಳ ಸರಾಸರಿ ವೇಗ ಕಡಿಮೆಯಾಗಿದೆ. ರೈಲು ಅಪಘಾತಗಳಲ್ಲಿ ಪ್ರತಿವರ್ಷ 20 ಸಾವಿರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀಧರನ್, ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

  • ಡೆಡ್‍ಲೈನ್ ಒಳಗೆ ಬುಲೆಟ್ ರೈಲು ಯೋಜನೆ ಕಂಪ್ಲೀಟ್ ಆಗೋದು ಡೌಟ್!

    ಡೆಡ್‍ಲೈನ್ ಒಳಗೆ ಬುಲೆಟ್ ರೈಲು ಯೋಜನೆ ಕಂಪ್ಲೀಟ್ ಆಗೋದು ಡೌಟ್!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮುಂಬೈ ಅಹಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ನಿಗದಿತ ಅವಧಿಯೊಳಗಡೆ ಪೂರ್ಣಗೊಳ್ಳುವುದು ಅನುಮಾನ ಎನ್ನುವ ಮಾತು ಈಗ ಕೇಳಿಬಂದಿದೆ.

    ಹಣ್ಣು ಬೆಳೆಗಾರರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಬೇಕಾದ ಭೂಮಿಯನ್ನು ಡಿಸೆಂಬರ್ ಒಳಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿಗಳ ಸಚಿವಾಲಯ ಪ್ರತಿವಾರ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದು, ಮಹಾರಾಷ್ಟ್ರದ ಸಪೋಟ ಹಾಗೂ ಮಾವು ಬೆಳೆಗಾರರ ಜೊತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ)ಗೆ ಅಧಿಕಾರಿಗಳು ನೀಡಿದ್ದಾರೆ.

    108 ಕಿ.ಮೀ ಹಳಿ ನಿರ್ಮಿಸಲು ಜಾಗವನ್ನು ಸ್ವಾಧೀನ ಪಡಿಸಬೇಕಿದೆ. ಪ್ರತಿಭಟನಾಕಾರರ ಜೊತೆ ಜನ ಪ್ರತಿನಿಧಿಗಳು ಕೈ ಜೋಡಿಸಿದ್ದರಿಂದ ಕೆಲವು ತಿಂಗಳಿಂದ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.

    ಈ ಹಣ್ಣಿನ ತೋಟವನ್ನು ಬೆಳೆಸಲು ಮೂರು ದಶಕಗಳ ಕಾಲ ಶ್ರಮಪಟ್ಟಿದ್ದೇನೆ. ಈಗ ಬಿಟ್ಟುಕೊಡುವಂತೆ ಹೇಳುತ್ತಿದ್ದಾರೆ. ನನ್ನ ಇಬ್ಬರು ನಿರುದ್ಯೋಗಿ ಮಕ್ಕಳಲ್ಲಿ ಒಬ್ಬರಿಗೆ ಉದ್ಯೋಗ ಕೊಡುವ ಭರವಸೆ ಕೊಟ್ಟಲ್ಲಿ ಬಿಟ್ಟು ಕೊಡುತ್ತೇನೆ ಎಂದು 62 ವರ್ಷದ ಸಪೋಟ ಬೆಳೆಗಾರ ದಶರತ್ ಪುರವ್ ಹೇಳಿದ್ದಾರೆ.

    ಯೋಜನೆಯನ್ನು ಮುಂದಿನ ತಿಂಗಳು ಜೈಕಾ ಪರಿಶೀಲಿಸಲಿದ್ದು, ಈ ಅವಧಿಯ ಒಳಗಡೆ ಸ್ವಾಧೀನ ಪ್ರಕ್ರಿಯೆ ಮುಗಿದಿರಬೇಕು. ಭೂಮಿ ಸ್ವಾಧೀನವಾಗದೇ ಇದ್ದಲ್ಲಿ ಯೋಜನೆಗೆ ಬೇಕಾದ ಸಾಲ ಬಿಡುಗಡೆ ಮಾಡಲು ಜೈಕಾ ತಡ ಮಾಡುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲು ಇಚ್ಚಿಸದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.

    ನಮ್ಮ ಮಾರ್ಗದರ್ಶಿಯ ಪ್ರಕಾರ ಪರಿಸರ ಹಾಗೂ ಸಾಮಾಜಿಕವಾಗಿ ಭಾರತ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಿ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ಜೈಕಾ ವಕ್ತಾರೆ ತಿಳಿಸಿದ್ದಾರೆ.

    2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಈ ಕಾರಣಕ್ಕೆ ಜಪಾನ್ ನ ಸಾರಿಗೆ ಅಧಿಕಾರಿಗಳ ಜೊತೆ ಇದೇ ತಿಂಗಳು ಭಾರತ ಮಾತುಕತೆಯನ್ನು ನಿಗದಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಯ ಒಟ್ಟು ಮೊತ್ತ 1.14 ಲಕ್ಷ ಕೋಟಿ ರೂ. ಆಗಿದ್ದು, ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ.

    ಭಾರತದಲ್ಲಿ ಯಾವುದೇ ಯೋಜನೆಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್(ಎನ್ ಹೆಚ್ ಆರ್ ಸಿ ಎಲ್) ವಕ್ತಾರ ಧನಂಜಯ್ ಕುಮಾರ್ ಹೇಳಿದ್ದಾರೆ.

  • ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ!

    ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ!

    ನವದೆಹಲಿ: ಅಹಮದಾಬಾದ್- ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಪ್ರಸ್ತುತ ಈ ಎರಡು ನಗರಗಳ ಮಧ್ಯೆ ಕ್ರಮಿಸುವ ರೈಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದು, ರೈಲ್ವೇಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

    ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ ಎಂಬವರು ಜುಲೈ 1 ರಿಂದ – ಸೆಪ್ಟೆಂಬರ್ 30 ರವರೆಗೆ ಮುಂಬೈ- ಅಹಮದಾಬಾದ್ ನಗರಗಳ ಮಧ್ಯೆ ಸಂಚರಿಸುತ್ತಿರುವ ರೈಲುಗಳಿಂದ ಬಂದಿರುವ ಆದಾಯ ಎಷ್ಟು ಎಂದು ಆರ್‍ಟಿಐ ಅಡಿ ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಗೆ ಪಶ್ಚಿಮ ರೈಲ್ವೇ, ಈ ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಶೇ.40 ರಷ್ಟು ಸೀಟ್ ಗಳು ಖಾಲಿ ಇರುತ್ತದೆ. ಇದರಿಂದಾಗಿ 30 ಕೋಟಿ ರೂ.(ತಿಂಗಳಿಗೆ 10 ಕೋಟಿ ರೂ.) ನಷ್ಟವಾಗುತ್ತಿದೆ ಎಂದು ಉತ್ತರಿಸಿದೆ.

    ಇದೇ ವೇಳೆ ಈ ಎರಡು ನಗರಗಳ ಮಧ್ಯೆ ಹೊಸದಾಗಿ ಯಾವುದೇ ರೈಲು ಓಡಿಸುವ ಪ್ರಸ್ತಾಪ ಇಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಸಂಚರಿಸುವ ರೈಲಿನಲ್ಲಿ ಶೇ.40 ಸೀಟ್ ಗಳು ಖಾಲಿ ಇದ್ದರೆ, ಅಹಮದಾಬಾದ್- ಮುಂಬೈ ನಡುವೆ ಸಂಚರಿಸುವ ರೈಲಿನಲ್ಲಿ ಶೇ.44 ಸೀಟ್ ಗಳು ಖಾಲಿ ಇದೆ ಎಂದು ಉತ್ತರಿಸಿದೆ.

    ಈ ಅವಧಿಯಲ್ಲಿ ಮುಂಬೈ- ಅಹಮದಾಬಾದ್ ನಡುವೆ ಒಟ್ಟು 7,35,630 ಸೀಟ್‍ಗಳ ಪೈಕಿ 4,44,795 ಸೀಟ್ ಗಳು ಬುಕ್ ಆಗಿದ್ದು, ಒಟ್ಟು 30,16,24,623 ರೂ. ಆದಾಯ ಸಂಗ್ರಹವಾಗಿದೆ. 44,29,08,220 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ 14,12,83,597 ರೂ. ನಷ್ಟವಾಗಿದೆ ಎಂದು ಹೇಳಿದೆ.

    ಅಹಮದಾಬಾದ್- ಮುಂಬೈ ನಡುವೆ ಒಟ್ಟು 7,06,446 ಸೀಟ್ ಗಳ ಪೈಕಿ ಕೇವಲ 3,98,002 ಸೀಟ್ ಗಳು ಬುಕ್ ಆಗಿವೆ. ಒಟ್ಟು ಸೀಟ್ ಗಳಿಂದ 26,74,56,982 ರೂ. ಆದಾಯವನ್ನು ನಿರೀಕ್ಷಿಸಿದ್ದ ರೈಲ್ವೇಗೆ ಒಟ್ಟು 42,53,11,471 ರೂ. ಆದಾಯ ಬಂದಿದ್ದು, 15,78,54,489 ರೂ. ನಷ್ಟವಾಗಿದೆ ಎಂದು ಉತ್ತರಿಸಿದೆ.

    ಅತಿ ಹೆಚ್ಚು ಪ್ರಯಾಣಿಕರು ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಿದರೆ, ಹೆಚ್ಚಿನ ಸಂಖ್ಯೆಯ ಎಸಿ ಸೀಟ್ ಗಳು ಖಾಲಿ ಇರುತ್ತದೆ ಎಂದು ಮಾಹಿತಿ ನೀಡಿದೆ.

    ಈ ಎರಡು ನಗರಗಳ ಮಧ್ಯೆ ಸಂಚರಿಸುತ್ತಿರುವ ದುರಂತೋ, ಶತಾಬ್ಧಿ ಎಕ್ಸ್ ಪ್ರೆಸ್, ಲೋಕಶಕ್ತಿ ಎಕ್ಸ್ ಪ್ರೆಸ್, ಗುಜರಾತ್ ಮೇಲ್, ಭಾವಾ ನಗರ್ ಎಕ್ಸ್ ಪ್ರೆಸ್, ಸೌರಾಷ್ಟ್ರ ಎಕ್ಸ್ ಪ್ರೆಸ್, ವಿವೇಕ್ – ಭುಜ್ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸುತ್ತಿವೆ.

    ಭಾರತ ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ತರಾತುರಿಯಲ್ಲಿ ಬುಲೆಟ್ ಯೋಜನೆ ಆರಂಭಿಸಲು ಮುಂದಾಗಿದೆ. 1 ಲಕ್ಷ ಕೋಟಿ ರೂ. ಹಣದ ಯೋಜನೆ ನಿಜವಾಗಿಯೂ ಕಾರ್ಯಸಾಧುವೆ ಎಂದು ಅನಿಲ್ ಗಲಗಲಿ ಅವರು ಗಂಭೀರ ಪ್ರಶ್ನೆ ಎತ್ತಿದ್ದಾರೆ.

    ಮುಂಬೈ- ಅಹಮದಾಬಾದ್ ಮಾರ್ಗ ನಷ್ಟದಲ್ಲಿರುವುದಾಗಿ ಆರ್‍ಟಿಐ ಅಡಿ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಯೋಜನೆ ಆರಂಭಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸುವುದು ಒಳಿತು. ಆರಂಭಗೊಂಡ ಬಳಿಕ ಭಾರತೀಯ ಪ್ರಜೆಗಳಿಗೆ ಇದು ಬಿಳಿಯಾನೆ ಆಗಬಾರದು ಎನ್ನುವುದೇ ನನ್ನ ಕಳಕಳಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

    ಬುಲೆಟ್ ರೈಲು ಬೇಕು ಎನ್ನುವವರ ವಾದ ಏನು?
    ಈ ಹಿಂದೆ ಭಾರತ ಸರ್ಕಾರ ಉಪಗ್ರಹ ನಿರ್ಮಾಣಕ್ಕೆ ಕೈ ಹಾಕಿದಾಗಲೂ ವಿರೋಧ ಕೇಳಿ ಬಂದಿತ್ತು. ವಿಮಾನ ಯಾನ ಸೇವೆ ಆರಂಭಗೊಂಡ ಅವಧಿಯಲ್ಲಿ ಭಾರತಕ್ಕೆ ಈ ಸೇವೆ ಅಗತ್ಯವಿದೆಯೇ? ವಿಮಾನದಲ್ಲಿ ಎಷ್ಟು ಮಂದಿ ಹೋಗುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ವಿಮಾನ ಪ್ರಯಾಣ ದುಬಾರಿ ಆಗಿದ್ದರೂ ಹೆಚ್ಚಿನ ಸಂಖ್ಯೆಯ ಜನ ಈ ಸೇವೆ ಬಳಸುತ್ತಿದ್ದಾರೆ. ಮೆಟ್ರೋ ಸೇವೆ ಆರಂಭಗೊಂಡಾಗಲೂ ಜನರಿಂದ ಪ್ರಶ್ನೆ ಎದ್ದಿತ್ತು. ಆದರೆ ಈಗ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬುಲೆಟ್ ರೈಲು ಆರಂಭದಲ್ಲಿ ಎಷ್ಟೇ ಟೀಕೆ ಬಂದರೂ ಭವಿಷ್ಯದಲ್ಲಿ ಜನರಿಗೆ ನೆರವಾಗಲಿದೆ ಎನ್ನುವ ವಾದ ಬುಲೆಟ್ ರೈಲು ಪ್ರಿಯ ಜನರದ್ದು.

    ಇದನ್ನೂ ಓದಿ: 31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ

    ಪರ ವಿರೋಧ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತ ಬುಲೆಟ್ ರೈಲು ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇದರಿಂದ ದೇಶದ ಆರ್ಥಿಕತೆ ಬದಲಾಗುತ್ತಾ? ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

  • ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತೆ? ಇಲ್ಲಿದೆ ಮಾಹಿತಿ

    ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತೆ? ಇಲ್ಲಿದೆ ಮಾಹಿತಿ

    ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಬಟನ್ ಒತ್ತುವ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ವಿಶ್ವದಲ್ಲಿರುವ ಬುಲೆಟ್ ರೈಲುಗಳು ಎಷ್ಟು ವೇಗದಲ್ಲಿ ಸಂಚರಿಸುತ್ತದೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

    ವಿಶ್ವದ ಅತೀ ವೇಗದ ರೈಲುಗಳು:
    1. ಮ್ಯಾಗ್ಲೆವ್ ಬುಲೆಟ್ ರೈಲು – ಜಪಾನ್: ವಿಶ್ವದಲ್ಲೇ ಅತೀ ವೇಗವಾಗಿ ಹೋಗುವ ರೈಲಾಗಿದ್ದು, 2015 ರಲ್ಲಿ ಆರಂಭವಾಗಿದೆ. ಸುಮಾರು 900 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, 603 ಕಿ.ಮೀ. ದೂರವನ್ನು ಒಂದು ಗಂಟೆಗಳಲ್ಲಿ ಕ್ರಮಿಸುತ್ತದೆ. ಅಂದರೆ ಈ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಹೊರಟರೆ ಕೇವಲ 40 ನಿಮಿಷಗಳಲ್ಲಿ ಕ್ರಮಿಸಬಹುದು.

    2. ಎಲ್‍ಜಿವಿ (ಲಿಗ್ನೇ ಗ್ರ್ಯಾಂಡೆ ವಿಟೇಸ್) ಈಸ್ಟ್ – ಫ್ರಾನ್ಸ್: ಫ್ರೆಂಚ್‍ನ ವೇಗದ ಬುಲೆಟ್ ರೈಲಾಗಿದ್ದು, 2007 ರಲ್ಲಿ ಪರಿಶೀಲಿಸಿ ನಂತರ ಪ್ರಾರಂಭ ಮಾಡಲಾಯಿತು. ಇದು ಗಂಟೆಗೆ 574 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.

    3. ಎಲ್‍ಜಿವಿ ಅಟ್ಲಾಂಟಿಕ್ – ಫ್ರಾನ್ಸ್: ವಿಶ್ವದ ಮೂರನೇ ಅತೀ ವೇಗದ ರೈಲಾಗಿದೆ. 1989-1990 ರಲ್ಲಿ ಪ್ರಾರಂಭವಾಗಿದ್ದು, ಸುಮಾರು 515 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

    4. ಬೀಜಿಂಗ್-ಶಾಂಘೈ ಎಚ್‍ಎಸ್‍ಆರ್, ಸಿಆರ್‍ಎಚ್380ಎ – ಚೀನಾ: ಬೀಜಿಂಗ್ ಮತ್ತು ಶಾಂಘೈ ನಡುವೆ ಸುಮಾರು 487 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಆದರೆ ಸಾಮಾನ್ಯ ಕಾರ್ಯಾಚರಣೆಯಲ್ಲಿ 400 ಕಿ.ಮೀ ಹಚ್ಚಿನ ವೇಗವನ್ನು ದಾಟುವುದಿಲ್ಲ. ಈ ರೈಲು 494 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

    5. ಟಿಆರ್-09 – ಜರ್ಮನಿ:  ಇದು 450 ಕಿ.ಮೀ. ಅನ್ನು 1 ಗಂಟೆಯಲ್ಲಿ ವೇಗವಾಗಿ ಚಲಿಸುತ್ತದೆ ಹಾಗೂ 500 ಕಿ.ಮೀ ವರೆಗೆ ಗರಿಷ್ಟ ವೇಗದಲ್ಲು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

    6. ಶಿಂಕಾನ್ಸೆನ – ಜಪಾನ್: ಇದು 425-445 ಕಿ.ಮೀ. ದೂರವನ್ನು ಒಂದು ಗಂಟೆಯಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಜಪಾನ್ ನಲ್ಲಿ ಬಹು ನಗರಗಳನ್ನು ಈ ರೈಲು ಸಂಪರ್ಕಿಸುತ್ತದೆ.

    ಗತಿಮಾನ್ ಎಕ್ಸ್ ಪ್ರೆಸ್: ಭಾರತದಲ್ಲಿ ಸದ್ಯಕ್ಕೆ ಅತಿ ವೇಗದಲ್ಲಿ ಚಲಿಸುವ ರೈಲು ಎಂಬ ಹೆಗ್ಗಳಿಕಿ ಗತಿಮಾನ್ ಎಕ್ಸ್ ಪ್ರೆಸ್ ರೈಲಿಗಿದೆ. 2016ರ ಏಪ್ರಿಲ್ ನಲ್ಲಿ ಈ ರೈಲಿನ ಸಂಚಾರ ಆರಂಭಗೊಂಡಿದ್ದು ದೆಹಲಿ-ಆಗ್ರ ನಡುವೆ 160 ಕಿ.ಮೀ ದೂರವನ್ನು 1 ಗಂಟೆಯಲ್ಲಿ ಕ್ರಮಿಸುತ್ತದೆ.

    ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

  • ಬುಲೆಟ್ ರೈಲು ಕಾಂಗ್ರೆಸ್ ಯೋಜನೆ, ಈಗ ಮೋದಿಯದ್ದು ಎಲೆಕ್ಷನ್ ರೈಲು: ಮಲ್ಲಿಕಾರ್ಜುನ ಖರ್ಗೆ

    ಬುಲೆಟ್ ರೈಲು ಕಾಂಗ್ರೆಸ್ ಯೋಜನೆ, ಈಗ ಮೋದಿಯದ್ದು ಎಲೆಕ್ಷನ್ ರೈಲು: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಬುಲೆಟ್ ರೈಲು ಅಲ್ಲ. ಇದು ಮೋದಿಯ ಎಲೆಕ್ಷನ್ ರೈಲು ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಬುಲೆಟ್ ರೈಲು ಯೋಜನೆ ಆರಂಭಿಸಿದ್ದು ಕಾಂಗ್ರೆಸ್. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿಯೇ ಯೋಜನೆ ಸಿದ್ದಪಡಿಸಲಾಗಿತ್ತು. 2005 ರಿಂದ ಬುಲೆಟ್ ಟ್ರೈನ್ ಯೋಜನೆಗೆ ತಯಾರಿ ನಡೆದಿದೆ ಎಂದು ಹೇಳಿದರು.

    ಮೂರು ವರ್ಷದಿಂದ ಸುಮ್ಮನಿದ್ದ ಮೋದಿ ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಂಬೈ-ಅಹಮದಾಬಾದ್ ಮಧ್ಯೆ 12 ನಿಲ್ದಾಣ ಬರಲಿವೆ. ಬುಲೆಟ್ ರೈಲಿಗೆ 12 ನಿಲ್ದಾಣಗಳು ಯಾಕೆ? ಅದರಲ್ಲೂ ಗುಜರಾತ್ ನಲ್ಲೇ ಅತ್ಯಧಿಕ ನಿಲ್ದಾಣಗಳು ಬರಲಿದೆ. ಹೀಗಾಗಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗಿಂತ ಕಡೆಯಾಗಿ ಬುಲೆಟ್ ರೈಲು ನಿಲ್ದಾಣ ತಲುಪಲಿದೆ ಎಂದು ವ್ಯಂಗ್ಯವಾಡಿದರು.

    ಶೇ.1 ರ ಬಡ್ಡಿಯಲ್ಲಿ ಜಪಾನ್ ಆರ್ಥಿಕ ಸಹಾಯ ಮಾಡಿದೆ ಅಂತಾ ಮೋದಿ ಹೇಳುತ್ತಾರೆ. ಆದರೆ ಜಪಾನ್ ಹಣವನ್ನು ಪುಕ್ಕಟೆ ನೀಡುತ್ತಿಲ್ಲ. ಜಪಾನ್ ದೇಶದಲ್ಲೇ ಹಳಿ, ಬೋಗಿ ತಯಾರಾಗುತ್ತದೆ. ನಮ್ಮ ದೇಶದಲ್ಲಿ ಹಳಿ, ಬೋಗಿ ತಯಾರು ಮಾಡಲು ಕಾರ್ಖಾನೆಗಳಿಲ್ಲ. ಅದರ ಕಮಿಷನ್ ಯಾರಿಗೆ ಹೋಗುತ್ತೆ ಅಂತಾ ಗೊತ್ತಿದೆಯಾ? ಮೇಕ್ ಇನ್ ಇಂಡಿಯಾಗೆ ಅರ್ಥ ಎಲ್ಲಿದೆ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

  • ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಅಹಮದಾಬಾದ್: ಬುಲೆಟ್ ರೈಲಿನಿಂದ ಎರಡು ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಜಪಾನಿನ ಪ್ರಧಾನಿ ಶಿಂಜೋ ಅಬೆ ಜೊತೆಗೂಡಿ ಅಹಮದಾಬಾದ್‍ನಲ್ಲಿ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕಸ್ಥಾಪನೆಯನ್ನು ಮೋದಿ ನೆರವೇರಿಸಿದರು. ಬಳಿಕ ಬುಲೆಟ್ ರೈಲು ಯೋಜನೆಗೆ ಹಣಕಾಸಿನ ಸಹಕಾರ ನೀಡಿದ್ದಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಧನ್ಯವಾದ ಹೇಳಿದರು.

    ಇದು ಭಾರತದ ದಶಕಗಳ ಕನಸನಾಗಿದ್ದು, ಎರಡು ದೇಶಗಳ ಸ್ನೇಹ ಪೂರಕವಾಗಿ ಜಪಾನ್ ಭಾರತಕ್ಕೆ ಬುಲೆಟ್ ರೈಲನ್ನು ನೀಡುತ್ತಿರುವ ಉಡುಗೊರೆಯಿದು. ಬುಲೆಟ್ ರೈಲು ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿ ಉದ್ಯೋಗ ನೀಡಲಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ಬಡತನ ನಿರ್ಮೂಲನೆಯಾಗುವ ಮೂಲಕ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

    ಯಾವುದೇ ದೇಶ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದರೆ ಅದು ಅಭಿವೃದ್ಧಿಯನ್ನು ಸೂಚಿಸುತ್ತದೆ. ಆದ್ದರಿಂದ ಸಾರಿಗೆ ವ್ಯವಸ್ಥೆ ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

    ಭಾರತವು ಯಾವಾಗ ಬುಲೆಟ್ ರೈಲನ್ನು ಪ್ರಾರಂಭಿಸುತ್ತದೆ ಎಂದು ಚಿಂತೆಯಾಗಿತ್ತು. ಆದರೆ ಇಂದು ಈ ಯೋಜನೆಗೆ ಚಾಲನೆ ನೀಡಿದ ಬಳಿಕ ನನಗೆ ಭರವಸೆ ಬಂದಿದೆ. ಆದ್ದರಿಂದ ಈ ಯೋಜನೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದರು.

    ಯಾವುದೇ ವ್ಯಕ್ತಿಯಾಗಲಿ ಅಥವಾ ದೇಶವಾಗಲಿ ಸಾಲ ಕೊಟ್ಟು 50 ವರ್ಷಗಳಲ್ಲಿ ಸಾಲ ಹಿಂದಿರುಗಿಸು ಎಂದು ಯಾರಾದರೂ ಹೇಳುತ್ತಾರಾ? ಆದರೆ ಭಾರತದ ಮಿತ್ರ ಜಪಾನ್ ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ತಾಂತ್ರಿಕ ನೆರವು ಅಲ್ಲದೇ ಶೇ.01 ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರೂ. ಹಣವನ್ನು ಸಾಲವಾಗಿ ನೀಡಿದೆ. ಈ ಕಾರಣಕ್ಕೆ ಬುಲೆಟ್ ರೈಲು ಜಪಾನ್ ನೀಡುತ್ತಿರುವ ಉಡುಗೊರೆ ಎಂದು ಹೇಳಿದೆ ಎಂದು ಮೋದಿ ಬಣ್ಣಿಸಿದರು.

    ಬುಲೆಟ್ ರೈಲು ನವ ಭಾರತದ ಸಂಕೇತವಾಗಿದ್ದು ಇದಕ್ಕೆ ಕಾರಣರಾದ ನನ್ನ ಮಿತ್ರ ಅಬೆ ಅವರಿಗೆ ಧನ್ಯವಾದಗಳು. ಜೊತೆಗೆ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ಭಾರತದ ಸಮಸ್ತ ಜನರಿಗೆ ಧನ್ಯವಾದಗಳನ್ನು ತಿಳಿಸಿ ಮೋದಿ ಭಾಷಣ ಮುಕ್ತಾಯಗೊಳಿಸಿದರು.

  • ಮತ್ತೆ ಮಲತಾಯಿ ಧೋರಣೆ, ಕರ್ನಾಟಕಕ್ಕಿಲ್ಲ ಬುಲೆಟ್ ರೈಲು ಭಾಗ್ಯ!

    ಮತ್ತೆ ಮಲತಾಯಿ ಧೋರಣೆ, ಕರ್ನಾಟಕಕ್ಕಿಲ್ಲ ಬುಲೆಟ್ ರೈಲು ಭಾಗ್ಯ!

    ನವದೆಹಲಿ: ಇಂದು ಇಡೀ ದೇಶಕ್ಕೆ ಮಹತ್ವದ ದಿನ. ಪ್ರಗತಿಯತ್ತ ಭಾರತ ಮತ್ತೊಂದು ಮೈಲಿಗಲ್ಲಿನ ಕಡೆಗೆ ದಾಪುಗಾಲು ಇಡುತ್ತಿದೆ. ಜಪಾನ್‍ನ ಸಹಕಾರದಲ್ಲಿ ಬುಲೆಟ್ ರೈಲು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಇಂದು ಶಂಕುಸ್ಥಾಪನೆ ನಡೆಯಲಿದೆ. ಆದರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ.

    2022 ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣವಾಗಲಿದ್ದು ಅದೇ ದಿನ ಅಹಮದಾಬಾದ್ – ಮುಂಬೈ ಬುಲೆಟ್ ರೈಲಿನ ಸಂಚಾರ ಆರಂಭಿಸಲು ರೈಲ್ವೇ ಇಲಾಖೆ ಗುರಿಯನ್ನು ಹಾಕಿಕೊಂಡಿದೆ. ಈ ರೈಲು ಮಾರ್ಗ ಅಲ್ಲದೇ ಇನ್ನು 6 ಮಾರ್ಗಗಳಲ್ಲಿ ಬುಲೆಟ್ ರೈಲು ಓಡಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಮಾರ್ಗಗಳ ಪಟ್ಟಿಯಲ್ಲಿ ಕರ್ನಾಟಕವನ್ನು ಕೈಬಿಡಲಾಗಿದೆ.

    ಸಪ್ತ ಮಾರ್ಗಗಳು:
    ಅಹಮದಾಬಾದ್- ಮುಂಬೈ, ದೆಹಲಿ – ಕೋಲ್ಕತ್ತಾ, ದೆಹಲಿ – ಮುಂಬೈ, ಮುಂಬೈ – ಚೆನ್ನೈ, ದೆಹಲಿ – ಚಂಡೀಘಡ, ಮುಂಬೈ – ನಾಗಪುರ, ದೆಹಲಿ – ನಾಗಪುರ. ಈ ಏಳು ಮಾರ್ಗಗಳ ಪೈಕಿ ಕರ್ನಾಟಕಕ್ಕೆ ಒಂದೇ ಒಂದು ಮಾರ್ಗವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಚೆನ್ನೈ ಮತ್ತು ನಾಗಪುರಕ್ಕೆ ಎರಡು ಮಾರ್ಗಗಳನ್ನು ನೀಡಿದ್ದು ಐಟಿ ಬಿಟಿ ಸಿಟಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರನ್ನು ಯಾಕೆ ಕೈ ಬಿಟ್ಟಿದ್ದಾರೆ ಎನ್ನುವುದು ಈಗಿರುವ ಪ್ರಶ್ನೆ.

    ಕಾವೇರಿ, ಮಹದಾಯಿಯಲ್ಲಿ ಅನ್ಯಾಯ ಆಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ಬುಲೆಟ್ ರೈಲು ಕರ್ನಾಟಕಕ್ಕೆ ಕೈತಪ್ಪಿದೆ. ಈ ಬೃಹತ್ ಯೋಜನೆ ರಾಜ್ಯಕ್ಕೆ ಕೈತಪ್ಪಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು ಕಾರಣವೇ? ಅಥವಾ ಅಥವಾ ರಾಜ್ಯ ಬಿಜೆಪಿ ಸಂಸದರಿಗೆ ಇಚ್ಛಾ ಶಕ್ತಿ ಕೊರತೆಯೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

    ಇದನ್ನೂ ಓದಿ: ಬುಲೆಟ್ ರೈಲು ಯೋಜನೆಗೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ