Tag: Budget 2021

  • ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ – ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್ ಅಂದ್ರು ಅಶ್ವಥ್ ನಾರಾಯಣ್

    ಉನ್ನತ ಶಿಕ್ಷಣಕ್ಕೆ ಉತ್ತೇಜನ, ಸಂಶೋಧನೆ ಅಗ್ರಮಾನ್ಯತೆ – ರಾಷ್ಟ್ರ ನಿರ್ಮಾಣಕ್ಕೆ ಪೂರಕ ಬಜೆಟ್ ಅಂದ್ರು ಅಶ್ವಥ್ ನಾರಾಯಣ್

    ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ಅತ್ಯುತ್ತಮವಾದದ್ದು, ಕೋವಿಡ್ ನಂತರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಮರ್ಥವಾಗಿ ಮುನ್ನಡೆಸುವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಶ್ಲಾಘಿಸಿದ್ದಾರೆ.

    ಮುಖ್ಯವಾಗಿ ಸಂಶೋಧನೆಗೆ ಹೆಚ್ಚು ಒತ್ತು ನೀಡಿರುವ ಅವರು ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂ.ಗಳನ್ನು ವೆಚ್ಚ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಹೊತ್ತಿನಲ್ಲಿ ಗುಣಮಟ್ಟದ ಶಿಕ್ಷಣ ಉದ್ದೇಶ ಸಾಕಾರಕ್ಕಾಗಿ ಈ ಉಪಕ್ರಮ ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಕಳೆದ ಬಜೆಟ್‍ನಲ್ಲಿಯೇ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಲಾಗತ್ತು. ಆಯೋಗ ರಚನೆಗೆ ಈ ವರ್ಷ ಕಾಯ್ದೆ ಜಾರಿಗೊಳಿಸುವುದಾಗಿ ವಿತ್ತ ಸಚಿವರು ಪ್ರಕಟಿಸಿದ್ದಾರೆ. ಇದರಲ್ಲಿ ಒಂದೇ ವೇದಿಕೆಯಡಿಯಲ್ಲಿ ಗುಣಮಟ್ಟ ನಿಗದಿ ಮಾಡುವುದು, ಮಾನ್ಯತೆ, ನಿಯಂತ್ರಣ ಹಾಗೂ ಹಣಕಾಸು ನೆರವಿನ ನಾಲ್ಕು ಪ್ರತ್ಯೇಕ ವಿಭಾಗಗಳಿರುತ್ತವೆ. ರಾಷ್ಟ್ರೀಯ ಉನ್ನತ ಶಿಕ್ಷಣ ಆಯೋಗ ರಚನೆಯಾದರೆ ಉನ್ನತ ಶಿಕ್ಷಣಕ್ಕೆ ಆನೆ ಬಲ ಬರಲಿದೆ ಎಂದು ತಿಳಿಸಿದ್ದಾರೆ.

    ಲೇಹ್‍ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಅತ್ಯಂತ ಮಹತ್ವದ ಘೋಷಣೆ. ಪ್ರಾಥಮಿಕ ಅಂದರೆ ಶಾಲಾ ಶಿಕ್ಷಣದಲ್ಲಿ 15,000ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತದೆ ಎಂಬುದು ಕೂಡ ಪ್ರಮುಖ ಘೋಷಣೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಇವಿಷ್ಟೂ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂಬ ಸಚಿವರ ಹೇಳಿಕೆ ಸ್ವಾಗತಾರ್ಹ ಎಂದು ಹೇಳಿದ್ದಾರೆ.

    ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇದು ರೈತರ ಬಗ್ಗೆ ಕೇಂದ್ರ ಸರಕಾರಕ್ಕಿರುವ ಬದ್ಧತೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅನಗತ್ಯವಾಗಿ ಉಯಿಲೆಬ್ಬಿಸುವವರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದರಿಂದ 1.54 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಇದು ಸಾಮಾನ್ಯ ಸಂಗತಿಯಲ್ಲ ಎಂದಿರುವ ಡಿಸಿಎಂ, ಕೋವಿಡ್ ಹಿನ್ನೆಲೆಯಲ್ಲಿ 27.1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿರುವುದು, ಆರೋಗ್ಯ ಕ್ಷೇತ್ರಕ್ಕೆ ಅಗ್ರಮಾನ್ಯತೆ ನೀಡಿರುವುದು ಕ್ರಾಂತಿಕಾರಕ ಅಂಶ ಎಂದು ತಿಳಿಸಿದ್ದಾರೆ.

    ಬೆಂಗಳೂರು ನಗರದ ನಮ್ಮ ಮೆಟ್ರೋಗೆ 14,788 ಕೋಟಿ ರೂ. ಅನುದಾನವನ್ನು ಕೇಂದ್ರ ವಿತ್ತ ಸಚಿವರು ಘೋಷಿಸಿದ್ದಾರೆ. ಇದು ಬೆಂಗಳೂರು ಜನರಿಗೆ ಸಿಕ್ಕಿರುವ ದೊಡ್ಡ ಗಿಫ್ಟ್. ರೈಲ್ವೇ ಮಿಷನ್ 2030 ಯೋಜನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಮೆಟ್ರೋಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ. ಇದು ಸಂತಸದ ಸಂಗತಿ. ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ಎಲ್ಲ ಆಯಾಮಗಳ ಒಳಗೊಂಡಂತೆ ಪ್ರಗತಿಯತ್ತ ಮುನ್ನಡೆಸಲು ಬೇಕಾದ ಸಮರ್ಥ ಕಾರ್ಯಸೂಚಿಯನ್ನು ಅನಾವರಣ ಮಾಡಿದ್ದಾರೆ. ಜೊತೆಗೆ ತುರ್ತು ಆದ್ಯತೆಗಳ ಬಗ್ಗೆ ಗಮನ ಹರಿಸಿದ್ದಾರೆ.

  • ಬಜೆಟ್ 2021 – ಯಾವುದರ ಬೆಲೆ ಏರಿಕೆ? ಇಳಿಕೆ?

    ಬಜೆಟ್ 2021 – ಯಾವುದರ ಬೆಲೆ ಏರಿಕೆ? ಇಳಿಕೆ?

    ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು, ಆಮದು ಸುಂಕವನ್ನ ಏರಿಕೆ ಮಾಡಿದ್ದಾರೆ. ಆಮದು ಸುಂಕ ಏರಿಕೆ ಹಿನ್ನೆಲೆ ರೆಫ್ರಿಜಿರೇಟರ್, ಏರ್ ಕಂಡೀಷನರ್, ಮದ್ಯ, ಕಚ್ಚಾ ರೇಷ್ಮೆ, ಸ್ಪಾಂಡೆಕ್ಸ್ ಫೈಬರ್, ಸೋಲಾರ್ ಲ್ಯಾಂಟೆನ್ರ್ಸ್, ಮೊಬೈಲ್ ಫೋನ್, ಪವರ್ ಬ್ಯಾಂಕ್ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಬಿಡಿಭಾಗಳು ಮತ್ತು ಪವರ್ ಬ್ಯಾಂಕ್ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಲಾಗಿದ್ದು, ಆದ್ರೆ ಚಿನ್ನ ಮತ್ತು ಬೆಳ್ಳಿ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ. ರೆಫ್ರಿಜಿರೇಟರ್, ಏರ್ ಕಂಡೀಷನರ್ ಬಿಡಿ ಭಾಗಗಳ ಮೇಲಿನ ಆಮದು ತೆರಿಗೆ ಶೇ.12.5 ರಿಂದ ಶೇ.15ಕ್ಕೆ ಏರಿಕೆ ಮಾಡಲಾಗಿದೆ. ಏಪ್ರಿಲ್ ಒಂದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.

    ವಿತ್ತ ಸಚಿವರು ಭಾರತದಲ್ಲಿ ಸಿದ್ಧವಾಗುವ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದ್ದಾರೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಬೆಳವಣಿಗೆಗೆ ಸಹಕಾರಿಯಾಗುವ ಕೆಲ ಘೋಷಣೆಗಳನ್ನ ಘೋಷಿಸಿದ್ದಾರೆ. ಎಂಎಸ್‍ಎಂಇ ಗಳು ಉತ್ತಮ ಗುಣಮಟ್ಟ ಮತ್ತು ಬಾಳಿಕೆ ಹೊಂದಿರುತ್ತವೆ. ಹಾಗಾಗಿ ಫಿನಿಶಡ್ ಸಿಂಥೆಟಿಕ್ ಜೆಮ್ ಸ್ಟೋನ್ ಮೇಲೆ ತೆರಿಗೆ ಏರಿಕೆ ಮಾಡಲಾಗಿದೆ. ಇದರಿಂದ ದೇಶಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಆಗಲಿದೆ.

    ಆಟೋಮೊಬೈಲ್ ವಲಯದ ಉತ್ಪನ್ನಗಳಾದ ವೈರಿಂಗ್ ಸೆಟ್, ಸೇಫ್ಟಿ ಗ್ಲಾಸ್ ಮತ್ತು ಸಿಗ್ನಲ್ ಉಪಕರಣಗಳ ಮೇಲಿನ ತೆರಿಗೆ ಶೇ.7.5/10ರಿಂದ ಶೇ.15ಕ್ಕೆ ಏರಿಕೆ ಕಾಣಲಿದೆ. ಪೆಟ್ರೋಲಿಯಂ ಮತ್ತು ರಬ್ಬರ್ ಉತ್ಪನ್ನಗಳ ಮೇಲಿನ ಸೆಸ್ ಶೇ.2.5 ಇಳಿಕೆಯಾಗಲಿದೆ. ಚಿನ್ನ ಮತ್ತು ಬೆಳ್ಳಿ ಆಮದು ಸುಂಕ ಶೇ. 7.5ರಷ್ಟು ಇಳಿಕೆಯಾಗಿದ್ದು, ಪ್ಲಾಟಿನಂ, ಹವಳ ಮೇಲೆ ತೆರಿಗೆ ಶೇ.12.5ರಿಂದ ಶೇ.10ಕ್ಕೆ ಇಳಿಕೆಯಾಗಿದೆ.

    ಯಾವುದರ ಬೆಲೆ ಹೆಚ್ಚಳ?:
    * ಮೊಬೈಲ್ ಫೋನ್, ಪವರ್ ಬ್ಯಾಂಕ್, ಚಾರ್ಜರ್
    * ಕಾಟನ್ ಬಟ್ಟೆ
    * ವಿದೇಶಿ ಮದ್ಯ, ವಿದೇಶಿ ಬಟ್ಟೆ
    * ರೆಫ್ರಿಜಿಟರೇಟರ್
    * ಏರ್ ಕಂಡೀಷನರ್
    * ವಿದೇಶಿ ಆಟಿಕೆ ವಸ್ತುಗಳು
    * ಪೆಟ್ರೋಲ್ ಮತ್ತು ಡೀಸೆಲ್

    ಯಾವುದರ ಬೆಲೆ ಕಡಿಮೆ?
    * ಚಿನ್ನ ಮತ್ತು ಬೆಳ್ಳಿ
    * ಪೆಟ್ರೋಲಿಯಂ ಮತ್ತು ರಬ್ಬರ ಉತ್ಪನ್ನಗಳು
    * ಪೇಂಟ್
    * ಕಾಪರ್ ಸ್ಕ್ರಾಪ್, ಮೆಟಲ್ ಕಾಯಿನ್
    * ನೈಲಾನ್ ಫೈಬರ್
    * ಪ್ಲಾಟಿನಂ
    * ಚರ್ಮದ ವಸ್ತುಗಳು

  • ಕೊರೊನಾ ಸಂಕಷ್ಟದಲ್ಲೂ ಜನಪರವಾದ ಬಜೆಟ್: ಕಾರಜೋಳ

    ಕೊರೊನಾ ಸಂಕಷ್ಟದಲ್ಲೂ ಜನಪರವಾದ ಬಜೆಟ್: ಕಾರಜೋಳ

    ಬೆಂಗಳೂರು: ಕೊರೊನಾ ಸಂಕಷ್ಟದಲ್ಲೂ ಎಲ್ಲಾ ವರ್ಗಗಳ, ಸಮುದಾಯಗಳ, ವಲಯಗಳ ಅಭಿವೃದ್ಧಿಗಾಗಿ ದೂರದೃಷ್ಠಿಯುಳ್ಳ, ಅತ್ಯತ್ತಮವಾದ ಹಾಗೂ ಜನಪರವಾದ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಜೆಟ್‍ನ್ನು ಮುಕ್ತಕಂಠದಿಂದ ಸ್ವಾಗತಿಸುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

    ಬಡವರ, ಪರಿಶಿಷ್ಟರ, ಕೃಷಿಕರ, ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಹಲವಾರು ಅಭಿವೃದ್ಧಿ ಕ್ಷೇತ್ರಗಳಿಗೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ಕೊಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ಕೋವಿಡ್ ಹೆಮ್ಮಾರಿಯನ್ನು ತಡೆಗಟ್ಟಲು ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. 11,000 ಕಿಮೀ. ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 650 ಕಿ.ಮೀ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಉನ್ನತೀಕರಿಸಲು ಅನುದಾನ ಮೀಸಲಿರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿದ್ಯಾವಂತ ನಿರುದ್ಯೋಗಗಳಿಗೆ ಉದ್ಯೋಗ ನೀಡುವ ಸದುದ್ದೇಶದಿಂದ 7 ಹೊಸ ಟೆಕ್ಸ್‍ಟೈಲ್ಸ್ ಸ್ಥಾಪನೆ, ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ನೀಡಲು 3000 ಕೋಟಿ ರೂ. ಮೀಸಲು. ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 15000 ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ಗಿರಿಜನ ಪ್ರಂದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ, 100 ಹೊಸ ಸೈನಿಕ ಶಾಲೆಗಳ ಸ್ಥಾಪನೆಯ ಗುರಿ ಹೊಂದಿದ್ದು, ಐತಿಹಾಸಿಕ ವಿಷಯವಾಗಿದೆ. ಕೃಷಿ ಕ್ಷೇತ್ರವನ್ನು ಸಬಲಗೊಳಿಸಲು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ದೊರಕಿಸುವ ಸಲುವಾಗಿ 1000 ಎ.ಪಿ.ಎಂ.ಸಿ.ಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಸ್ಥೆ ಹಾಗೂ ಬೆಂಬಲ ಬೆಲೆ (ಎಂ.ಎಸ್.ಪಿ.) ಅಡಿ ಸರ್ಕಾರದಿಂದಲೇ ಧಾನ್ಯಗಳ ಖರೀದಿಗೆ ನಿರ್ಧರಿಸಿದೆ ಎಂದಿದ್ದಾರೆ.

    ಅಸಂಘಟಿತ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ, ಕನಿಷ್ಠ ವೇತನ ಕಾಯಿದೆ ಸೌಲಭ್ಯ ಜಾರಿಗೊಳಿಸುವ ಮೂಲಕ ಕಾರ್ಮಿಕ ಹಿತ ಕಾಯಲು ಗುರಿಹೊಂದಲಾಗಿದೆ. ಕ್ಷೇತ್ರ ಸಂಪರ್ಕ ವ್ಯವಸ್ಥೆ, ನಗರ ಪ್ರದೇಶಗಳ ಸಾರಿಗೆ ಸಂಪರ್ಕ ಅಭಿವೃದ್ಧಿ ಪಡಿಸಲು ಗಮನ ನೀಡಲಾಗಿದೆ. ಮೆಟ್ರೋ ವಿಸ್ತರಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರು ನಗರಕ್ಕೆ ಇನ್ನೂ 2 ಮಾರ್ಗಗಳ ಮೆಟ್ರೋ ರೈಲು ಯೋಜನೆಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

    ಅತಿಮುಖ್ಯವಾಗಿ ಅಭಿವೃದ್ಧಿ ಅಂಶವೆಂದರೆ ವಸತಿ ಸೌಕರ್ಯಗಳ ವಿತರಣೆ, ಕರ್ನಾಟಕವೂ ಸೇರಿದಂತೆ ಈಗ ಕೈಗೊಳ್ಳಲಾಗಿರುವ ವಸತಿ ಕಾರ್ಯಯೋಜನೆಗಳಿಗೆ ಹೆಚ್ಚು ಅನುದಾನ ದೊರಕಲಿದೆ. ತೆರಿಗೆ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಿ.ಎಸ್.ಟಿ. ಯನ್ನು ಬಿಗಿಗೊಳಿಸಿ ಆದಾಯ ಹೆಚ್ಚಳಕ್ಕೆ ಕ್ರಮವಹಿಸಿದೆ.

  • ರೈತರ ಆದಾಯ ವೃದ್ಧಿಗೆ ಬಜೆಟ್‍ನಲ್ಲಿ ನಿರ್ಮಲಾ ಸೂತ್ರಗಳು

    ರೈತರ ಆದಾಯ ವೃದ್ಧಿಗೆ ಬಜೆಟ್‍ನಲ್ಲಿ ನಿರ್ಮಲಾ ಸೂತ್ರಗಳು

    ನವದೆಹಲಿ: ಸರ್ಕಾರ ರೈತರ ಪರವಾಗಿದ್ದು, ಅವರ ಅಭಿವೃದ್ಧಿಗೆ ಪ್ರತಿಬದ್ಧವಾಗಿದೆ ಎಂದ ವಿತ್ತ ಸಚಿವರು ಅನ್ನದಾತರ ಆದಾಯ ಹೆಚ್ಚಳಕ್ಕೆ ಕೆಲವು ಸೂತ್ರಗಳನ್ನ ಘೋಷಣೆ ಮಾಡಿದರು.

    ಸರ್ಕಾರ 2022ರೊಳಗೆ ರೈತರ ಆದಾಯವನ್ನ ದ್ವಿಗುಣಗೊಳಿಸುವ ಕಾರ್ಯದಲ್ಲಿ ಯಶಸ್ಸಿನ ಹೆಜ್ಜೆ ಇರಿಸಿದೆ. ಪ್ರಧಾನಿಗಳು 8 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ಗ್ಯಾಸ್ ನೀಡಿದ್ದಾರೆ. 4 ಕೋಟಿಗೂ ಅಧಿಕ ರೈತ, ಮಹಿಳೆಯರು ಮತ್ತು ಬಡವರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

    2013-14ರಲ್ಲಿ ಸರ್ಕಾರ ಗೋಧಿ ಖರೀದಿಗಾಗಿ 33 ಸಾವಿರ ಕೋಟಿ ರೂ. ಖರ್ಚು ಮಾಡಿತ್ತು. 2019ರಲ್ಲಿ 63 ಸಾವಿರ ಕೋಟಿ ರೂ. ಖರೀದಿಸಿದ್ರೂ ಅದು 75 ಸಾವಿರ ಕೋಟಿಗೆ ಏರಿಕೆಯಾಯ್ತು. 2020-21ರಲ್ಲಿ 43 ಲಕ್ಷ ರೈತರಿಗೆ ಇದರ ಲಾಭ ಪಡೆದಿದ್ದಾರೆ.

    ಧಾನ್ಯಗಳ ಖರೀದಿಗೆ ಸರ್ಕಾರ 2013-14ರಲ್ಲಿ 63 ಸಾವಿರ ಕೋಟಿ ಖರ್ಚು ಮಾಡಿತ್ತು. ಆದ್ರೆ 1 ಲಕ್ಷ 45 ಸಾವಿರ ಕೋಟಿಗೆ ಏರಿಕೆ ಆಯ್ತು. ಈ ವರ್ಷ ಧಾನ್ಯ ಖರೀದಿಯ ಮೊತ್ತ 1.72 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಕಳೆದ ಬಾರಿ 1.2 ಕೋಟಿ ರೈತರಿಗೆ ಧಾನ್ಯ ಖರೀದಿಯಿಂದ ಲಾಭವಾಗಿತ್ತು. ಈ ವರ್ಷ ಸುಮಾರು 1.5 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಇದನ್ನೂ ಓದಿ: ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ

    2014ರಲ್ಲಿ ಬೇಳೆ ಖರೀದಿಗಾಗಿ 236 ಕೋಟಿ ರೂ. ವ್ಯಯಿಸಲಾಗಿತ್ತು. ಈ ವರ್ಷ ಸರ್ಕಾರ 10 ಸಾವಿರ 500 ಕೋಟಿಯಷ್ಟು ಬೇಳೆ ಖರೀದಿಸಲಿದೆ. ಈ ಖರೀದಿ ಶೇ.40 ರಷ್ಟು ಏರಿಕೆ. ಎಂಎಸ್‍ಪಿ ಒಂದೂವರೆ ಪಟ್ಟು ಹೆಚ್ಚಿಸಲಾಗುವುದು ಹಾಗೂ ಸರ್ಕಾರ ಅನ್ನದಾತರ ಅಭಿವೃದ್ಧಿಗೆ ಬದ್ಧವಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ

    ಈ ವರ್ಷ ಸ್ವಾಮಿತ್ವ ಸ್ಕೀಂ ಆರಂಭಿಸಲಾಗಿದ್ದು, ಇದುವರೆಗೂ 1.8 ಲಕ್ಷ ಜನಕ್ಕೆ ಕಾರ್ಡ್ ಲಭ್ಯವಾಗಿದೆ. 2021ರೊಳಗೆ ಪ್ರತಿ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗಾಗಿ ಒಂದು ಪೋರ್ಟಲ್ ರಚನೆ ಮಾಡಲಾಗವುದು. ಕಟ್ಟಡ ನಿರ್ಮಾಣದಲ್ಲಿ ತೊಡಗುವ ಕಾರ್ಮಿಕರಿಗೆ ಆರೋಗ್ಯ, ವಸತಿ ಮತ್ತು ಆಹಾರ ಸ್ಕೀಂ ಆರಂಭಿಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ:  ಚುನಾವಣೆ ನಡೆಯುಲಿರುವ ರಾಜ್ಯಗಳಿಗೆ ಬಂಪರ್ ಯೋಜನೆಗಳು

  • ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ

    ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ

    ನವದೆಹಲಿ: 2021ರ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಉದ್ದದ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

    ಭಾರತಮಾಲಾ ಯೋಜನೆ ಅಡಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಕಿಲೋ ಮೀಟರ್ ರಸ್ತೆ ನಿರ್ಮಾಣವಾಗಿದೆ. ಮಾರ್ಚ್ ನೊಳಗೆ 8 ಸಾವಿರ ಕಿಲೋ ಮೀಟರ್ ಗುರಿ ತಲುಪಲಾಗುವುದು. ಹೆದ್ದಾರಿಗಳಲ್ಲಿ ಮೂಲ ಸೌಕರ್ಯ ಮತ್ತು ಇಕಾನಾಮಿಕ್ ಕಾರಿಡರ್ ಮೇಲೆ ಸರ್ಕಾರ ಕೆಲಸ ಮಾಡುತ್ತಿದೆ. ತಮಿಳುನಾಡಿನಲ್ಲಿ 3,500 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಮಧುರೈ-ಕೊಲ್ಲಂ ಕಾರಿಡರ್ ಒಳಗೊಂಡಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದರು.

    ಕೇರಳದಲ್ಲಿ 1,100 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ 65 ಸಾವಿರ ಕೋಟಿ ಖರ್ಚು ಆಗಲಿದೆ. ಮುಂಬೈ-ಕನ್ಯಾಕುಮಾರಿ ಕಾರಿಡರ್ ಇದರ ಭಾಗವಾಗಲಿದೆ. ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದ್ದು, ಇದಕ್ಕಾಗಿ 25 ಸಾವಿರ ಕೋಟಿ ಅನುದಾನ ಮೀಸಲು ಇರಿಸಲಾಗುವುದು. ಇದೇ ಅನುದಾನದಲ್ಲಿ ಕೋಲ್ಕತ್ತಾ-ಸಿಲ್ಲಿಗುಡಿ ರಸ್ತೆಯ ರಿಪೇರಿ ಆಗಲಿದೆ ಎಂದರು.

    ರೈಲ್ವೆ ಡೆಡಿಕೇಟೆಡ್ ಫ್ರಂಟ್ ಕಾರಿಡಾರ್, ಎನ್‍ಎಚ್‍ಎಐನ ಟೋಲ್ ರಸ್ತೆ, ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ ಇತರ ಆದಾಯವನ್ನು ಅಸೆಟ್ ಮ್ಯಾನೇಜ್‍ಮೆಂಟ್ ಅಡಿಯಲ್ಲಿ ತರಲಾಗುವುದು ಎಂದು ಸೀತಾರಾಮನ್ ಹೇಳಿದರು.

    ರಾಷ್ಟ್ರೀಯ ರೈಲ್ವೇ ಪ್ಲಾನ್-2030 ಸಿದ್ಧಪಡಿಸಲಾಗಿದ್ದು, ಭವಿಷ್ಯದ ರೈಲ್ವೇ ಸಿಸ್ಟಂ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಈ ಗುರಿಯಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಾಮುಖ್ಯತೆ ನೀಡಲಾಗುವುದು. ವೆಸ್ಟರ್ನ್ ಮತ್ತು ಈಸ್ಟರ್ನ್ ಫ್ರೆಟ್ ಕಾರಿಡರ್ ಜೂನ್, 2022ರೊಳಗೆ ಪೂರ್ಣಗೊಳಿಸೋದಾಗಿ ತಿಳಿಸಿದರು, ಸೋನ ನಗರ-ಗೋಮೋ ಸೆಕ್ಷನ್ ಪಿಪಿಪಿ (ಸರ್ಕಾರ-ಖಾಸಗಿ ಸಹಭಾಗಿತ್ವ) ಮೋಡ್ ನಲ್ಲಿ ಮಾಡಲಾಗುವುದು.

  • 20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಪದೇ ಪದೇ ಹೇಳುತ್ತಿದ್ದ ʼಗುಜುರಿ ನೀತಿʼಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

    ಇಂದಿನ ಬಜೆಟ್‌ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ಕಮರ್ಷಿಯಲ್‌ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು 42 ನಗರ ಕೇಂದ್ರಗಳಿಗೆ ಒಟ್ಟು 2,217 ಕೋಟಿ ರೂ. ಅನುದಾನವನ್ನು ಸೀತಾರಾಮನ್‌ ಪ್ರಕಟ ಮಾಡಿದ್ದಾರೆ.

    ಗಡ್ಕರಿ ಹೇಳಿದ್ದು ಏನು?
    ದೇಶದ ಅಟೋಮೊಬೈಲ್‌ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ‘ಗುಜುರಿ ನೀತಿʼಯನ್ನು ಜಾರಿಗೆ ತರಲು ಮಂದಾಗುತ್ತಿದೆ. ವಾಹನ ಕ್ಷೇತ್ರ ಸಂಕಷ್ಟದಲ್ಲಿದೆ ಎಂಬುದು ಸರ್ಕಾರಕ್ಕೆ ತಿಳಿದಿದೆ. ಕಳೆದ ಒಂದೂವರೆ ವರ್ಷಗಳಿಂದ ನಾನು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇನೆ. ಈಗ ಇದು ಅಂತಿಮಗೊಂಡಿದ್ದು ಕೊನೆಯ ಹಂತದಲ್ಲಿದೆ ಎಂದು ಈ ಹಿಂದೆ ನಿತಿನ್‌ ಗಡ್ಕರಿ ಹೇಳಿದ್ದರು.

    ಅಟೋಮೋಟಿವ್ ಕಾಂಪೋನೆಂಟ್ ತಯಾರಕರ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ‘ಗುಜುರಿ ನೀತಿ’ ಜಾರಿಯ ಬಗ್ಗೆ ಗಡ್ಕರಿ ಮಾತನಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಈ ಗುಜುರಿ ನೀತಿಯ ಬಗ್ಗೆ ಹೇಳುತ್ತಲೇ ಇದ್ದೇನೆ. ಈಗ ಅದು ಅಂತಿಮಗೊಂಡಿದೆ. ಇದರಿಂದ ಭಾರತೀಯ ಉತ್ಪಾದಕರಿಗೆ ನೆರವಾಗಲಿದೆ. ತಡವಾಗಿ ನೀತಿ ಜಾರಿಯಾಗುತ್ತಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದರು.

    ಮುಂದಿನ 5 ವರ್ಷದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಟೋಮೊಬೈಲ್‍ ಕ್ಷೇತ್ರದ ಹಬ್‍ ಆಗಿ ಪರಿವರ್ತನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಕಂಪನಿಗಳು ವಿದೇಶದ ಆಮದು ಅವಲಂಬನೆ ಕಡಿಮೆ ಮಾಡಬೇಕು. ಮುಂದಿನ ದಿನಗಳಲ್ಲಿ ಆಮದು ಸುಂಕವನ್ನ ಸರ್ಕಾರ ಹೆಚ್ಚಿಸಲಿದೆ ಎಂದು ಈ ವೇಳೆ ಹೇಳಿದ್ದರು.

    ಏನಿದು ನೀತಿ?
    ಹಳೆಯ ವಾಹನಗಳನ್ನು ಗುಜುರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ಸಹಾಯದ ಜೊತೆಗೆ ಹೊಸ ವಾಹನದ ಖರೀದಿಗೆ ಉತ್ತೇಜನ ನೀಡುವುದು ಈ ನೀತಿಯ ಮುಖ್ಯ ಉದ್ದೇಶ. ಕಳೆದ ಎರಡು ವರ್ಷದಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕಡಿಮೆಯಾಗುತ್ತಿದೆ. ಹೀಗಾಗಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ ಗುಜುರಿ ನೀತಿ ಜಾರಿ ಮಾಡುವಂತೆ ವಾಹನ ತಯಾರಕ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು.

    ದರ ನಿಗದಿ ಹೇಗೆ?
    ವಾಹನದ ಬಿಡಿಭಾಗಗಳ ಕಂಡೀಷನ್‌ ನೋಡಿಕೊಂಡು ಸರ್ಕಾರ ವಾಹನವನ್ನು ಗುಜುರಿಗೆ ಹಾಕುವ ಮಾಲೀಕರಿಗೆ ಹಣ ನೀಡಲಿದೆ.

    ಗುಜುರಿ ನೀತಿಯ ಲಾಭ ಏನು?
    15 ವರ್ಷಕ್ಕಿಂತ ಹೆಚ್ಚಿನ ವರ್ಷದ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇವುಗಳನ್ನು ಗುಜುರಿಗೆ ಹಾಕಿದರೆ ವಾಯ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಹಳೇ ವಾಹನಗಳು ಗುಜುರಿ ಸೇರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

    ವಿರೋಧ ಯಾಕೆ?
    ಮಧ್ಯಮ ವರ್ಗದವರು ಖರೀದಿಸಿದ ವಾಹನ ಹಳೆಯಾದರೂ ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಈ ವಾಹನಗಳನ್ನು ಗುಜುರಿಗೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯದ ಸಂಚಾರಿ ನಿಯಮಗಳ ಪ್ರಕಾರ ಪ್ರತಿ ವಾಹನ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಎಮಿಶನ್ ಟೆಸ್ಟ್ ಮಾಡಿಸಬೇಕು. ಎಮಿಶನ್‌ ಟೆಸ್ಟ್‌ನಲ್ಲಿ ಪಾಸಾದರೂ 15 ವರ್ಷ ಆಗಿದೆ ಎಂಬ ಕಾರಣಕ್ಕೆ ಅದನ್ನ ಗುಜುರಿಗೆ ಹಾಕುವುದು ಎಷ್ಟು ಸರಿ? ಹಾಗಾದರೆ ಎಮಿಶನ್‌ ಟೆಸ್ಟ್‌ ಸರಿ ಇಲ್ಲವೇ ಎಂಬ ಮತ್ತೊಂದು ಪ್ರಶ್ನೆಯೂ ಎದ್ದಿದೆ.

    ಈಗ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಾಗುತ್ತದೆ. ಗುಜುರಿ ನೀತಿ ಜಾರಿಗೆ ಬಂದರೆ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕತೆ ಏನು ಎಂಬ ಮೂರನೇ ಪ್ರಶ್ನೆಯೂ ಎದ್ದಿದೆ. ಈ ಎಲ್ಲ ಪ್ರಶ್ನೆಗಳಿಗೆ ಅಂತಿಮವಾಗಿ ಬರಲಿರುವ ನೀತಿಯಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.

    ಬಿಡಿ ಭಾಗಗಳು ಮರುಬಳಕೆ:
    ಗುಜರಿ ನೀತಿ ಜಾರಿಗೆ ಬಂದರೆ 2020-21ರ ಹಣಕಾಸು ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುತ್ತದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ‌ ಕಾರು, ಬೈಕ್ ಖರೀದಿಸಬಹುದು.

    ತಡವಾಗಿದ್ದು ಯಾಕೆ?
    ಕಳೆದ ಒಂದೂವರೆ ವರ್ಷಗಳಿಂದ ನಿತಿನ್‌ ಗಡ್ಕರಿ ಈ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆರಂಭದಲ್ಲಿ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈ ವರ್ಷದ ಆರಂಭದಲ್ಲಿ ಈ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿತ್ತು. ಆದರೆ ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಮುಂದಕ್ಕೆ ಹೋಗಿತ್ತು. ಸದ್ಯ ಕೇಂದ್ರ ಸರ್ಕಾರದ ‘ಆತ್ಮನಿರ್ಭರ್‌ ಭಾರತʼ ಜಪವನ್ನು ಜಪಿಸುತ್ತಿರುವ ಸಮಯದಲ್ಲಿ ಈ ಗುಜುರಿ ನೀತಿ ಜಾರಿ ಮಾಡಲು ಸಿದ್ಧತೆ ಮಾಡುತ್ತಿದೆ.

    ಹಲವು ದೇಶಗಳಲ್ಲಿ ಜಾರಿ
    ಆರ್ಥಿಕ ಹಿಂಜರಿತದಿಂದ ಚೇತರಿಸಿದ ಬಳಿಕ 2008-09ರಲ್ಲಿ ಹಲವು ದೇಶಗಳು ಈ ಗುಜುರಿ ನೀತಿಯನ್ನು ಜಾರಿ ಮಾಡಿವೆ. ಅಮೆರಿಕ, ಆಸ್ಟ್ರೀಯಾ, ಕೆನಡಾ, ಚೀನಾ, ಜರ್ಮನಿ, ಜಪಾನ್‌, ಇಂಗ್ಲೆಂಡ್‌ ಸೇರಿದಂತೆ ಹಲವು ಯುರೋಪಿಯನ್‌ ದೇಶಗಳಲ್ಲಿ ಈ ನೀತಿ ಈಗಾಗಲೇ ಜಾರಿಯಾಗಿವೆ. ಜರ್ಮನಿಯಲ್ಲಿ 9 ವರ್ಷ ಮೀರಿದ ವಾಹನಗಳಿಗೆ 2,500 ಯುರೋ(ಅಂದಾಜು2.16 ಲಕ್ಷ ರೂ.), ಇಟಲಿಯಲ್ಲಿ 10 ವರ್ಷ ಮೀರಿದ ವಾಹನಗಳಿಗೆ 3,500 ಯುರೋ( ಅಂದಾಜು 3.03 ಲಕ್ಷ ರೂ.) ನೀಡುತ್ತದೆ.

    ಹೊಸ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್‌ ಮಾಡಿ ತಿಳಿಸಿ

  • ಕೊರೊನಾ ಮಧ್ಯೆ ಬಜೆಟ್ – ದೇಶದ ಆರ್ಥಿಕತೆ ಚೇತರಿಕೆಗೆ ಸಿಗುತ್ತಾ ಮದ್ದು?

    ಕೊರೊನಾ ಮಧ್ಯೆ ಬಜೆಟ್ – ದೇಶದ ಆರ್ಥಿಕತೆ ಚೇತರಿಕೆಗೆ ಸಿಗುತ್ತಾ ಮದ್ದು?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್ ಇಂದು ಮಂಡನೆ ಆಗ್ತಿದೆ. ಒಂದು ವರ್ಷಗಳ ಕಾಲ ಹೆಮ್ಮಾರಿ ಕೊರೊನಾದಿಂದಾಗಿ ಇಡೀ ಪ್ರಪಂಚವೇ ಹೈರಾಣಾಗಿ ಹೋಗಿದೆ. ಭಾರತ ಕೂಡ ಜನತಾ ಕರ್ಫ್ಯೂ, ಲಾಕ್‍ಡೌನ್, ಸೀಲ್‍ಡೌನ್, ನೈಟ್ ಕರ್ಫ್ಯೂ, ಕಂಟೈನ್ಮೆಂಟ್ ಝೋನ್ ಹೀಗೆ ಎಲ್ಲಾ ಕಂಟ್ರೋಲ್ ಕ್ರಮಗಳನ್ನು ಕಂಡಿದೆ. ಇದರಿಂದಾಗಿ ದೇಶದ ಆರ್ಥಿಕತೆಗೆ ಹೇಳದಷ್ಟು ಹೊಡೆತವೇ ಬಿದ್ದೋಗಿದೆ. ಪ್ರಪಾತಕ್ಕೆ ಕುಸಿದಿರೋ ಆರ್ಥಿಕತೆಗೆ ಉತ್ತೇಜನ, ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಅತ್ಯಂತ ಕ್ಲಿಷ್ಟಕರ ಬಜೆಟ್ ಮಂಡಿಸುತ್ತಿದೆ ಎನ್ನಲಾಗಿದೆ.

    ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕಷ್ಟಕರ ಬಜೆಟ್ ಇದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಇಂದಿನ ಬಜೆಟ್ ಅಗ್ನಿಪರೀಕ್ಷೆಯೇ ಆಗಿದೆ. ಕೋವಿಡ್ ಅವಧಿಯಲ್ಲಿ ಮಧ್ಯ ಮಧ್ಯ ಕೆಲವೊಂದು ಆರ್ಥಿಕ ಪ್ಯಾಕೇಜ್‍ಗಳನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದರೂ ಕೂಡ ಅದು ಕಾಗದಗಳಲ್ಲೇ ಉಳಿದವು ಅನ್ನೋ ಟೀಕೆ ಎದುರಿಸಬೇಕಾಗಿತ್ತು. ಈಗ ಕೊರೊನಾ ವ್ಯಾಕ್ಸಿನ್, ರೈತರು, ಬಡ ವರ್ಗ-ಮಧ್ಯಮ ವರ್ಗ, ಆರೋಗ್ಯ, ರಕ್ಷಣೆ, ಉದ್ಯಮದ ಜೊತೆಗೆ ಆತ್ಮನಿರ್ಭರ ಭಾರತ ರೂಪಿಸುವ ಅತಿದೊಡ್ಡ ಸವಾಲು ಮುಂದಿದೆ. ಹಾಗಾಗಿ ಬಜೆಟ್ ಮೇಲೆ ಕೋಟ್ಯಂತರ ಭಾರತೀಯರು ಚಾತಕಪಕ್ಷಿಗಳ ರೀತಿ ನೋಟ ನೆಟ್ಟಿದ್ದಾರೆ.

    ಕೊರೊನಾದಿಂದಾಗಿ ಈ ಬಾರಿಯ ಬಜೆಟ್ ಕಾಗದ ರಹಿತವಾಗಿರಲಿದೆ. ಬದಲಿಗೆ ಕೇಂದ್ರ ಬಜೆಟ್ ವೆಬ್‍ಸೈಟ್ <http://www.indiabudget.gov.in> ನಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಲ್ಲಿ ಮೊಬೈಲ್‍ನಲ್ಲೇ ಬಜೆಟ್‍ನ 14 ದಾಖಲೆಗಳು ಲಭ್ಯವಾಗಲಿವೆ. ಆಂಡ್ರಾಯ್ಡ್ ಮತ್ತು ಐಎಸ್‍ಓ ಫ್ಲಾಟ್‍ಫಾರ್ಮ್‍ಗಳಲ್ಲೂ ಆ್ಯಪ್ ಲಭ್ಯ ಇದೆ.

  • ಬಜೆಟ್ 2021: ವಿತ್ತ ಸಚಿವೆ ಸೀತಾರಾಮನ್ ಟೀಂ ಸದಸ್ಯರ ಪರಿಚಯ

    ಬಜೆಟ್ 2021: ವಿತ್ತ ಸಚಿವೆ ಸೀತಾರಾಮನ್ ಟೀಂ ಸದಸ್ಯರ ಪರಿಚಯ

    ನವದೆಹಲಿ: ಫೆಬ್ರವರಿ 1ರಂದು ದೇಶದ ಬಜೆಟ್ ಮಂಡನೆಯಾಗಲಿದೆ. ಈ ವರ್ಷದ ಬಜೆಟ್ ಸಂಪೂರ್ಣ ಭಿನ್ನವಾಗಿರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಡೀ ದೇಶದ ಕಣ್ಣು ಸೀತಾರಾಮನ್ ಹೊತ್ತು ತರುವ ಹೊತ್ತಿಗೆ ಮೇಲಿದೆ. ಬಜೆಟ್ ಸಿದ್ಧಪಡಿಸುವ ನಿರ್ಮಲಾ ಸೀತಾರಾಮನ್ ಟೀಂನಲ್ಲಿರುವ ಸದಸ್ಯರ ಪರಿಚಯ ಇಲ್ಲಿದೆ.

    1. ಅಜಯ್ ಭೂಷಣ್ ಪಾಂಡೆ: ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್, 1984ರ ಬ್ಯಾಚ್‍ನ ಐಎಎಸ್ ಅಧಿಕಾರಿ ಮತ್ತು ಯುಐಡಿಎಐ ಸಿಇಓ ಸಹ ಆಗಿದ್ದರು. ಕಾನ್ಪುರ ಐಐಟಿಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು, ಮಿನ್‍ಸೇನಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್‍ಡಿ ಸಹ ಪಡೆದಿದ್ದಾರೆ. ಫೆಬ್ರವರಿ ಅಂತ್ಯಕ್ಕೆ ಅಜಯ್ ಭೂಷಣ್ ನಿವೃತ್ತಿ ಹೊಂದಲಿದ್ದಾರೆ. ಆರೋಗ್ಯ ಮತ್ತು ರಕ್ಷಣೆಗೆ ನಿಧಿ ಹೆಚ್ಚಳ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅನುದಾನ ಸಮತೋಲನೆ ಜವಾಬ್ದಾರಿ ಪಾಂಡೆ ಅವರ ಮೇಲಿದೆ.

    2. ಕೃಷ್ಣಮೂರ್ತಿ ಸುಬ್ರಮಣಿಯನ್: ಮುಖ್ಯ ಆರ್ಥಿಕ ಸಲಹಗಾರರಾಗಿರುವ ಕೃಷ್ಣಮೂರ್ತಿ ಅವರು ಫೈನಾನಿಶಿಯಲ್ ಇಕಾನಮಿಕ್ಸ್ ನಲ್ಲಿ ಪಿಹೆಚ್‍ಡಿ ಪಡೆದಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರುವ ಮುನ್ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಉಪನ್ಯಾಸಕರಾಗಿದ್ದರು. ಬ್ಯಾಂಕಿಂಗ್, ಕಾರ್ಪೋರೇಟ್ ನಿಯಮ, ಆರ್ಥಿಕ ಕಾನೂನುನಗಳ ಎಕ್ಸಪರ್ಟ್ ಆಗಿದ್ದಾರೆ. ಲಾಕ್‍ಡೌನ್ ವೇಳೆ ಸುಬ್ರಮಣಿಯನ್ ಭಾರತದ ಅರ್ಥವ್ಯವಸ್ಥೆ ವಿ ಶೇಪ್ ನಲ್ಲಿ ದಾಖಲಾಗಿದೆ ಎಂದು ಹೇಳಿದ್ದರು.

    3. ಟಿ.ವಿ.ಸೋಮನಾಥನ್: ಇವರು ಖರ್ಚು ವಿಭಾಗದ ಮುಖ್ಯಸ್ಥರಾಗಿದ್ದು, ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿದ್ದಾರೆ. ಸೋಮನಾಥನ್ 1987ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಸೋಮನಾಥನ್ ವಿಶ್ವ ಬ್ಯಾಂಕ್ ನಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಸಹ ಆಗಿದ್ದರು.

    4. ತರೂಣ್ ಬಜಾಜ್: ಸದ್ಯ ವಿತ್ತ ಸಚಿವಾಲಯದ ಆರ್ಥಿಕ ವಿಭಾಗದಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1988ರ ಹರಿಯಾಣ ಬ್ಯಾಚಿನ ಐಎಎಸ್ ಅಧಿಕಾರಿ. ವಿತ್ತ ಸಚಿವಾಲಯಕ್ಕೂ ಮುನ್ನ ತರೂಣ್ ಬಜಾಜ್ ಪ್ರಧಾನ ಮಂತ್ರಿಗಳ ಕಾರ್ಯಲಯದ ಸೇವೆಯಲ್ಲಿದ್ದರು. ಮೂರು ಆತ್ಮನಿರ್ಭರ ಭಾರತ ಪ್ಯಾಕೇಜ್ ಸಿದ್ಧಪಡಿಸಿದ ತಂಡದಲ್ಲಿ ತರೂಣ್ ಬಜಾಜ್ ಪ್ರಮುಖರು.

    5. ದೇಬಶೀಷ್ ಪಾಂಡಾ: ವಿತ್ತ ಸಚಿವಾಲಯದ ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರೋ ದೇಶಾಶೀಷ್ ಪಾಂಡೆ, 1987ರ ಉತ್ತರ ಪ್ರದೇಶದ ಬ್ಯಾಚ್ ಐಎಎಸ್ ಅಧಿಕಾರಿ. ರಿಸರ್ವ್ ಬ್ಯಾಂಕ್ ಜೊತೆಗೂಡಿ ಅರ್ಥ ವ್ಯವಸ್ಥೆಯ ಸ್ಥಿರತೆ ಮತ್ತು ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಪಾಂಡಾ ರ ಮೇಲಿದೆ.

    6. ತುಹೀನ್ ಕಾಂತ್ ಪಾಂಡೆ: ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಓಡಿಶಾದ 1987ರ ಬ್ಯಾಚಿನ ಐಎಎಸ್ ಅಧಿಕಾರಿ. ಬಜೆಟ್ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ ಪಾಂಡೆ ಅವರ ಮೇಲಿದೆ.