Tag: bs dhanoa

  • ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ

    ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ

    – ಅಭಿನಂದನ್ ತಂದೆಗೆ ಧೈರ್ಯ ತುಂಬಿದ್ದ ಮಾಜಿ ವಾಯು ಸೇನಾ ಮುಖ್ಯಸ್ಥ
    – ನಮ್ಮ ಶಕ್ತಿಯ ಅರಿವು ಪಾಕಿಗೆ ತಿಳಿದಿತ್ತು

    ನವದೆಹಲಿ: ಭಾರತೀಯ ವಾಯು ಸೇನೆಯ ಪೈಲಟ್ ಅಭಿನಂದನ್ ವಿಚಾರದಲ್ಲಿ ಪಾಕಿಸ್ತಾನಕ್ಕೆ ಢವ ಢವ ಶುರುವಾಗಿತ್ತು. ಸೇನಾ ಮುಖ್ಯಸ್ಥರ ಕೈ, ಕಾಲು ನಡುಗುತ್ತಿತ್ತು ಎಂಬ ವಿಚಾರವನ್ನು ಸ್ವತಃ ಪಾಕ್ ಸಂಸದ ಸಂಸತ್‍ನಲ್ಲಿ ಬಿಚ್ಚಿಟಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಈ ಕುರಿತು ಮಾತನಾಡಿದ್ದು, ಒಂದು ವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಲ್ಲಿ ಪಾಕಿಸ್ತಾನದ ಬ್ರಿಗೇಡ್‍ಗಳನ್ನೇ ಧ್ವಂಸ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.

    ಪಾಕಿಸ್ತಾನ ಸಂಸದರ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಧನೋವಾ, ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಯಾದಾಗ ನಾನು ಅವರ ತಂದೆಗೆ ಧೈರ್ಯ ತುಂಬಿದ್ದೆ. ಖಂಡಿತವಾಗಿಯೂ ನಾವು ಅಭಿನಂದನ್ ಅವರನ್ನು ಮರಳಿ ಕರೆ ತರುತ್ತೇವೆ ಎಂದು ಹೇಳಿದ್ದೆ ಎಂದು ಅವರು ತಿಳಿಸಿದ್ದಾರೆ.

    ಇದೀಗ ಪಾಕಿಸ್ತಾನ ಸಂಸದರ ಹೇಳಿಕೆಯನ್ನು ಗಮನಿಸಿದರೆ ನಮ್ಮ ಸೇನೆ ಎಷ್ಟು ಆಕ್ರಮಣಕಾರಿಯಾಗಿದೆ ಎಂಬುದನ್ನು ತಿಳಿಯಬಹುದು. ಪಾಕಿಸ್ತಾನದ ಫಾರ್ವರ್ಡ್ ಬ್ರಿಗೇಡ್‍ಗಳನ್ನು ಧ್ವಂಸ ಮಾಡಲು ನಾವು ಆಗಲೇ ಸಿದ್ಧತೆ ನಡೆಸಿದ್ದೆವು. ನಮ್ಮ ಸಾಮರ್ಥ್ಯ ಏನೆಂದು ಅವರಿಗೆ ತಿಳಿದಿದೆ ಎಂದು ಧನೋವಾ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?

    ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತೀಯ ಸೇನೆ ಶಕ್ತಿ ಕುರಿತು ವಿರೋಧ ಪಕ್ಷಗಳಿಗೆ ಅರಿವಿಲ್ಲ. ಕಾಂಗ್ರೆಸ್ ಪಕ್ಷ ನಮ್ಮ ಸಶಸ್ತ್ರ ಪಡೆಗಳನ್ನು ದುರ್ಬಲವಾಗಿಸುವ ಅಭಿಯಾನ ನಡೆಸಿದೆ. ನಮ್ಮ ಸಶಸ್ತ್ರ ಪಡೆಗಳ ಕುರಿತು ಅಪಹಾಸ್ಯ ಮಾಡಿದ್ದಾರೆ. ಅವರ ಶೌರ್ಯವನ್ನು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ರಫೇಲ್ ಯುದ್ಧ ವಿಮಾನ ಖರೀದಿಯನ್ನು ತಡೆಯಲು ಸಹ ಪ್ರತಿಯೊಂದು ತಂತ್ರವನ್ನು ಮಾಡಿದರು. ಆದರೆ ಜನ ಅಂತಹ ರಾಜಕೀಯವನ್ನು ತಿರಸ್ಕರಿಸಿ ಕಾಂಗ್ರೆಸ್‍ನ್ನು ಶಿಕ್ಷಿಸಿದರು ಎಂದು ಹರಿಹಯ್ದಿದ್ದಾರೆ.

    ಕಾಂಗ್ರೆಸ್ ಭಾರತದ ರಾಜತಾಂತ್ರಿಕತೆಯನ್ನು ನಂಬುವುದಿಲ್ಲ. ಅದು ಸೈನ್ಯವಾಗಲಿ, ನಮ್ಮ ಸರ್ಕಾರವನ್ನಾಗಲೀ, ನಮ್ಮ ಜನರನ್ನೇ ಆಗಲಿ ಯಾವುದನ್ನೂ ನಂಬುವುದಿಲ್ಲ. ಪಾಕಿಸ್ತಾನ ಅವರ ‘ಅತ್ಯಂತ ವಿಶ್ವಾಸಾರ್ಹ ರಾಷ್ಟ್ರವಾಗಿದೆ’. ಆಶಾದಾಯಕ ಬೆಳವಣಿಗೆ ಎಂಬಂತೆ ಅವರು ಈಗ ಬೆಳಕು ನೋಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಅಭಿನಂದನ್‍ಗೆ ಮಾರ್ಗದರ್ಶನ ನೀಡಿದ್ದ ಐಎಎಫ್ ಮಹಿಳಾ ನಿಯಂತ್ರಕಿಗೆ ಯುಧ್ ಸೇವಾ ಪದಕ

    ಪಾಕ್ ಸಂಸದ ಹೇಳಿದ್ದೇನು?
    ಬುಧವಾರ ಸಂಸತ್ತಿನಲ್ಲಿ ಮಾತನಾಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ಎನ್ ಪಕ್ಷದ ಮುಖ್ಯಸ್ಥ, ಸಂಸದ ಅಯಾಜ್ ಸಾದಿಕ್, ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಆ ರಾತ್ರಿ 9 ಗಂಟೆ ವೇಳೆಗೆ ಭಾರತ ಪಾಕಿಸ್ತಾನ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಖುರೇಷಿ ಬಂದು ಬೇಡಿಕೊಂಡಿದ್ದರು ಎಂದು ಮಾತನಾಡಿರುವ ಬಗ್ಗೆ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.


    ಪ್ರಮುಖ ಸಭೆಯಲ್ಲಿದ್ದ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ, ವಿರೋಧ ಪಕ್ಷ ನಾಯಕರು, ಸಂಸತ್ ಸದಸ್ಯರು ಸೇರಿದಂತೆ ಎಲ್ಲರೂ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಹೇಳಿದ್ದರು. ಸಭೆಯಲ್ಲಿ ಭಾಗಿಯಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಈ ವೇಳೆ ಸೇನಾ ಮುಖ್ಯಸ್ಥ ಜನಲರ್ ಬಾಜ್ವಾ ಕೋಣೆಗೆ ಬಂದರು. ಅವರ ಕಾಲುಗಳು ನಡುಗುತ್ತಿದ್ದವು, ಅವರು ಬೆವರುತ್ತಿದ್ದರು. ವಿದೇಶಾಂಗ ಸಚಿವರು ದೇವರ ಸಲುವಾಗಿ ಅವರನ್ನು ಬಿಡಲಿ, ಭಾರತ ರಾತ್ರಿ 9 ಗಂಟೆಗೆ ದಾಳಿ ಮಾಡಲಿದೆ ಎಂದಿದ್ದರು ಎಂದು ಸಾದಿಕ್ ಅಂದಿನ ಘಟನೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಮೊದಲು ಅಭಿನಂದನ್ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದ ಪ್ರತಿಪಕ್ಷಗಳು ಮತ್ತೆ ಬೆಂಬಲಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ಅಭಿನಂದನ್ ಸೆರೆಯಾಗಿದ್ದು ಹೇಗೆ?
    2019ರ ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. ಈ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ ಉಗ್ರರನ್ನು ಸದೆಬಡೆದಿತ್ತು.

    ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಫೆ.27 ರಂದು ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

  • ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

    ನವದೆಹಲಿ: ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿದ ಬಳಿಕ ಪಾಕಿಸ್ತಾನ ಎಂದಿಗೂ ಭಾರತದ ಗಡಿ ನಿಯಂತ್ರಣಾ ರೇಖೆಯನ್ನು ದಾಟಿಲ್ಲ ಎಂದು ಐಎಎಫ್ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ತಿಳಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಮುಚ್ಚಿರುವುದು ನೆರೆಯ ದೇಶಗಳಿಗೆ ತೊಂದರೆಯಾಗಿದೆಯೇ ಹೊರೆತು ಭಾರತಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ ಪಾಕ್‍ನ ಈ ನಿರ್ಣಯ ದೇಶದ ಒಳಗಡೆ ಇರುವ ನಾಗರಿಕಾ ವಿಮಾನಯಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು.

    ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಐಎಎಫ್ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿರುವ ಜೈಶ್ ಉಗ್ರರ ಅಡಗು ತಾಣದ ಮೇಲೆ ಏರ್‌ಸ್ಟ್ರೈಕ್ ಮಾಡಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಬಂದಿತ್ತು. ಆದರೆ ಉತ್ತರ ಕೊಡುವಲ್ಲಿ ವಿಫಲವಾಯ್ತು. ಭಾರತ ತನ್ನ ಕಾರ್ಯಾಚರಣೆಯಲ್ಲಿ ವಿಫಲವಾಗಿಲ್ಲ. ಹೀಗಾಗಿ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನ ಎಂದಿಗೂ ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿಲ್ಲ ಎಂದು ಐಎಎಫ್ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು.

    ಪಾಕ್ ನಮ್ಮ ವಾಯು ನೆಲೆಯ ಮೇಲೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಸೈನ್ಯದ ಕಾರ್ಯವೈಕರಿ. ನಾವು ಬಾಲಕೋಟ್‍ನಲ್ಲಿ ಏರ್‌ಸ್ಟ್ರೈಕ್ ಮಾಡಲು ಕಾರ್ಯಾಚರಣೆ ನಡೆಸಿದೆವು. ಅದನ್ನು ಸಾಧಿಸಿ ತೋರಿಸಿದೆವು. ಹಾಗೆಯೇ ಪಾಕಿಸ್ತಾನ ಕೂಡ ನಮ್ಮ ಸೈನ್ಯದ ಮೇಲೆ ದಾಳಿ ನಡೆಸಲು ಬಂದಿತ್ತು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಹೇಗೆ ಕಾರ್ಯಾಚರಣೆ ನಡೆಸಿದ್ದೇವೆ? ಎಷ್ಟು ಜೆಟ್ ಉಪಯೋಗಿಸಿದ್ದೇವೆ ಎನ್ನುವುದಕ್ಕಿಂತ ನೀವು ನಿಮ್ಮ ಸೈನ್ಯದ ಗುರಿಯನ್ನು ತಲುಪಿದ್ದೀರಾ ಎನ್ನುವುದೇ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ನಾವು ನಿರೀಕ್ಷಿತ ಸಾಧನೆ ಮಾಡಿದ್ದೇವೆ ಎಂದರು.

    ಈ ವೇಳೆ ಕಾರ್ಗಿಲ್ ಯುದ್ಧವಾಗಿ 20 ವರ್ಷ ಕಳೆದಿರುವ ಬಗ್ಗೆ ಮಾತನಾಡಿ, ಈವೆರೆಗೆ ಭಾರತ ನಡೆಸಿದ ಎಲ್ಲಾ ದಾಳಿಯಲ್ಲೂ ನಾವು ನಮ್ಮ ಸಂಕಲ್ಪ ಹಾಗೂ ಸಾಮರ್ಥ್ಯವನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

    ಭಾರತ ವಾಯು ಮಾರ್ಗ ಮುಚ್ಚುವ ಬಗ್ಗೆ ಪ್ರಶ್ನಿಸಿದಾಗ, ನಾವು ಫೆ.27ರಂದು ಶ್ರೀನಗರದ ವಾಯು ಮಾರ್ಗವನ್ನು ಮುಚ್ಚಿದ್ದೆವು. ಅದು ಕೇವಲ 2ರಿಂದ 3 ಗಂಟೆಗಳ ಕಾಲ ಮಾತ್ರ ಅಷ್ಟೇ ಎಂದು ಹೇಳಿದರು.

    ಪಾಕಿಸ್ತಾನದ ಜೊತೆ ಇರುವ ಉದ್ವಿಗ್ನ ಸ್ಥಿತಿಯಿಂದ ಭಾರತದ ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾಕೆಂದರೆ ನಮ್ಮ ಆರ್ಥಿಕತೆ ಅವರಿಗಿಂತ ಬಹಳ ದೊಡ್ಡದು. ಪಾಕಿಸ್ತಾನ ಅವರ ವಾಯು ಮಾರ್ಗವನ್ನು ಮುಚ್ಚಿದ್ದಾರೆ ಎಂದರೆ ಅದು ಅವರ ಸಮಸ್ಯೆ. ಆದರೆ ನಮ್ಮ ಆರ್ಥಿಕತೆಯಲ್ಲಿ ವಾಯು ಸಂಚಾರವು ಮುಖ್ಯ ಭಾಗವಾಗಿದೆ. ಹೀಗಾಗಿ ವಾಯುಪಡೆ ಕೂಡ ಎಂದಿಗೂ ನಾಗರಿಕ ವಿಮಾನಗಳನ್ನು ತಡೆಯುವುದಿಲ್ಲ ಎಂದು ಉತ್ತರಿಸಿದರು.

  • ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ನವದೆಹಲಿ: ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆ ಇದ್ದು ನೀವೆಲ್ಲರೂ ಸಿದ್ಧವಾಗಿರಿ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ವಾಯುಪಡೆಯ ಪ್ರತಿಯೊಬ್ಬ ಅಧಿಕಾರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ.

    ಈಗ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರೆ, ನೆರೆ ರಾಷ್ಟ್ರಗಳ ಬಾಹ್ಯ ಬೆದರಿಕೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಯಾವುದೇ ಸಮಯದಲ್ಲೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿರಿ ಎಂದು ಪತ್ರದಲ್ಲಿ ಬರೆದಿದ್ದಾರೆ.

    ವಾಯು ಸೇನೆಯ 12 ಸಾವಿರ ಅಧಿಕಾರಿಗಳಿಗೆ ಈ ಪತ್ರವನ್ನು ತಲುಪಿಸಲಾಗಿದೆ. ಈ ಪತ್ರದಲ್ಲಿ ನೆರೆ ರಾಷ್ಟ್ರಗಳಿಂದ ಭಾರತ ಎದುರಿಸುತ್ತಿರುವ ಯುದ್ಧ ಭಯವನ್ನು ಬಿಎಸ್ ಧನೋವಾ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ತರಬೇತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ವಾಯುಸೇನೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಈ ರೀತಿಯ ಪತ್ರ ಬರೆಯಲಾಗಿದೆ. ಈ ಮೊದಲು ಮೇ 1, 1950ರಲ್ಲಿ ಜನರಲ್ ಕಾರ್ಯಪ್ಪ ಮತ್ತು ಫೆಬ್ರವರಿ 1,1986ರಲ್ಲಿ ಜನರಲ್ ಸುಂದರ್ಜಿ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

    ಈ ವಿಚಾರದ ಬಗ್ಗೆ ವಾಯುಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಂತರಿಕ ಸಂವಹನಕ್ಕಾಗಿ ಈ ಪತ್ರ ಬರೆಯಲಾಗಿದೆ ಎಂದು ಹೇಳಿ ಈ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.