Tag: bribery

  • ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ತಿಳಿಯಲು ರಾಯಚೂರಿನ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ಮಲಗಿಹೋಗಿದ್ದೇ ಬಂತು. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

    ಡಾ. ವಿಶ್ವನಾಥ್ ಸಿಂಧನೂರಿನ ಬಾದರ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡಾಕ್ಟರ್ ದುಡ್ಡು ಕೊಡದಿದ್ದರೆ ಯಾವ ರೋಗಿಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ. ಸುಮಾರು 10 ವರ್ಷಗಳಿಂದ ಇಲ್ಲೇ ವೈದ್ಯರಾಗಿರುವ ಡಾ.ವಿಶ್ವನಾಥ್ ಈ ವಿಚಾರದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

    ರೋಗಿಗಳು ಕಡಿಮೆ ಹಣ ಕೊಟ್ಟರೆ ಇಷ್ಟೇ ಕೊಡಬೇಕು ಎಂದು ಬೇಡಿಕೆ ಮಾಡಿ ರೋಗಿಗಳಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 200 ರೂಪಾಯಿಯಿಂದ ಒಂದೊಂದು ಚಿಕಿತ್ಸೆಗೆ ಒಂದೊಂದು ಫೀಸ್ ಅನ್ನು ಫಿಕ್ಸ್ ಮಾಡಿದ್ದಾರೆ. ಇದರ ಜೊತಗೆ ಒಮ್ಮೊಮ್ಮೆ ವಾರಗಟ್ಟಲೇ ಆಸ್ಪತ್ರೆಯ ಕಡೆ ಬಾರದೇ ಇದ್ದರೂ ಹಾಜರಾತಿಯಲ್ಲಿ ಮಾತ್ರ ಪ್ರತಿ ದಿನ ಹಾಜರಿ ಇರುತ್ತದೆ.

    ಬಾದರ್ಲಿ ಸೇರಿದಂತೆ ಸುತ್ತಮುತ್ತಲ ಗಿಣಿವಾರ, ಒಳಬಳ್ಳಾರಿ, ಯದ್ಲಡ್ಡಿ, ಆರ್ ಎಚ್ ಕ್ಯಾಂಪ್ 5, ಅಲಬನೂರು, ಅರೆಕನೂರು ಗ್ರಾಮಗಳ ಜನ ಈ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

    ವೈದ್ಯನ ಹಣಬಾಕುತನಕ್ಕೆ ಬೇಸತ್ತು ಜನರೇ ತಮ್ಮ ಮೊಬೈಲ್ ನಲ್ಲಿ ಲಂಚಾವತಾರ ಸೆರೆ ಹಿಡಿದಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಗ್ರಾಮೀಣ ಭಾಗದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಇಲ್ಲೂ ಫೀಸ್ ಎಂದು ಈ ವೈದ್ಯ ಹಣ ಕೀಳುತ್ತಿದ್ದಾರೆ.

    ಒಂದೆಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಅನ್ನೋ ಕೊರಗಿದ್ದರೆ ಇದ್ದ ವೈದ್ಯರಲ್ಲಿ ಇಂತಹವರು ರೋಗಿಗಳಿಂದ ಹಣ ವಸೂಲಿ ನಡೆಸಿದ್ದಾರೆ. ಒಂದು ವೇಳೆ ಈ ವೈದ್ಯನನ್ನ ಅಮಾನತು ಮಾಡಿದರೆ ಬೇರೆ ವೈದ್ಯರನ್ನ ನಿಯೋಜನೆ ಮಾಡ್ತಾರೋ ಇಲ್ವೋ ಅನ್ನೋ ಭಯ ಗ್ರಾಮಸ್ಥರಲ್ಲಿದೆ. ಕನಿಷ್ಠ ಈಗಲಾದರೂ ಮೇಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂತಹ ವೈದ್ಯರ ಕಡೆ ಗಮನಹರಿಸಬೇಕು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.

  • ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ಹುಬ್ಬಳ್ಳಿ: ಒಂದೆಡೆ ನೆರೆ ಪರಿಹಾರ ಸರಿಯಾಗಿ ಸಿಗತ್ತಿಲ್ಲ ಎಂದು ಸಂತ್ರಸ್ತರು ಪರದಾಡುತ್ತಿದ್ದರೆ, ಇತ್ತ ಅಧಿಕಾರಿಗಳು ಪರಿಹಾರಕ್ಕಾಗಿ ದಾಖಲೆ ನೀಡಲು ಬರುವ ರೈತರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ.

    ಹೌದು. ಸಂತ್ರಸ್ತರಿಗೆ ಪರಿಹಾರ ಕೊಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುಂದಗೋಳದಲ್ಲಿ ಬಯಲಿಗೆ ಬಂದಿದೆ. ಪರಿಹಾರಕ್ಕಾಗಿ ದಾಖಲೆಗಳ ಸಲ್ಲಿಕೆ ಮಾಡಲು ರೈತರು ಬಂದಾಗ ಅವರ ಬಳಿ ಗ್ರಾಮ ಲೆಕ್ಕಾಧಿಕಾರಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ ಪಡೆಯುವುದರ ಜೊತೆಗೆ ಲಂಚ ಪಡೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸುಬ್ಬಣ್ಣ ಪ್ರತಿಯೋರ್ವ ರೈತರಿಂದ 20 ರೂ. ಲಂಚ ಪಡೆಯುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಳೆ ಪರಿಹಾರ ಪಡೆಯಲು ಪ್ರತಿ ವರ್ಷ ಲಂಚ ಕೊಡುತ್ತಿರಲ್ಲ, ಹಾಗೆಯೇ ಈ ಬಾರಿಯೂ ಲಂಚ ಕೊಡಲೇಬೇಕೆಂದು ಗ್ರಾಮ ಲೆಕ್ಕಾಧಿಕಾರಿ ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಹಣ ಕೊಡದಿದ್ದರೆ ನಾನು ದಾಖಲೆಗಳನ್ನ ಮೇಲಾಧಿಕಾರಿಗಳಿಗೆ ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿ ರೈತರಿಂದ ಹಣ ಪೀಕುತ್ತಿದ್ದಾರೆ.

    ಮೊದಲೇ ಭೀಕರ ಪ್ರವಾಹಕ್ಕೆ ರೈತರು ಬೆಳೆ ಹಾನಿಯಾಗಿದೆ ಎಂದು ಕಂಗಾಲಾಗಿದ್ದಾರೆ. ಈ ನಡುವೆ ನೆರೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿರುವುದು ತಪ್ಪು. ಕೇವಲ 20 ರೂ. ತಾನೇ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಎಂದು ವಿಧಿ ಇಲ್ಲದೆ ರೈತರು ಅಧಿಕಾರಿಗಳಿಗೆ ಹಣ ಕೊಡುತ್ತಿದ್ದಾರೆ. ಆದರೆ ಕೆಲವೊಬ್ಬರ ಬಳಿ ಲಂಚ ನೀಡಲು 20 ರೂ. ಕೂಡ ಇರುವುದಿಲ್ಲ. ಅಂಥವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ರೋಗಿಗಳ ಆರೈಕೆಗೂ ಲಂಚ ಕೇಳುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ರೋಗಿಗಳ ಆರೈಕೆಗೂ ಲಂಚ ಕೇಳುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ರಾಯಚೂರು: ರೋಗಿಗಳ ಆರೈಕೆಗೆ ದುಡ್ಡು ವಸೂಲಿ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದ ಘಟನೆ ರಾಯಚೂರಿನ ದೇವದುರ್ಗದ ಜಾಲಹಳ್ಳಿಯಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಇಂಜಿಕ್ಷನ್ ಮಾಡಲು 50 ರೂಪಾಯಿ, ಉಚಿತ ಔಷಧಿ ನೀಡಲು ಸಹ ಹಣ ವಸೂಲಿ ಮಾಡುತ್ತಿದ್ದ ಹಿನ್ನೆಲೆ ರೋಗಿಗಳ ಕಡೆಯವರು ಜಗಳ ಮಾಡಿದ್ದಾರೆ. ಬಹಿರಂಗವಾಗಿ ಹಣ ವಸೂಲಿ ಮಾಡುತ್ತಿರುವ ನರ್ಸ್ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ರೋಗಿಗಳ ಗಲಾಟೆಗೆ ಸೊಪ್ಪು ಹಾಕದ ಸಿಬ್ಬಂದಿ ನಿಮ್ಮ ಹಣ ನೀವು ತೆಗೆದುಕೊಂಡು ಸುಮ್ಮನಿರಿ ಎಂದು ಗದರಿ, ಹಣ ವಾಪಸ್ ಕೊಟ್ಟಿದ್ದಾರೆ. ಇದನ್ನು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಿಸಿರುವ ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಹೊರಗಡೆ ಬರೆದುಕೊಡುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

    ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

    ಚಾಮರಾಜನಗರ: ಜಿಲ್ಲೆಯಲ್ಲಿರುವ ಜೈಲಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇಲ್ಲಿನ ಉಪಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ನೋಡಲು ಹಣ ಕೊಡಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಲಂಚಕೊಟ್ಟರೆ ಮಾತ್ರ ಕೈದಿಗಳನ್ನು ನೋಡಲು ಅವಕಾಶ ನೀಡಲಾಗುತ್ತೆ. ಇಲ್ಲಿನ ಜೈಲಧಿಕಾರಿಗಳು ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಾರೆ. ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುವ ದೃಶ್ಯಗಳು ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿವೆ.

    ಈ ಉಪಕಾರಾಗೃಹದಲ್ಲಿ 125ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು ಪ್ರತಿ ದಿನ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಉಪಕಾರಾಗೃಹದಲ್ಲಿ ಸಿಸಿ.ಕ್ಯಾಮೆರಾಗಳನ್ನು ಅಳವಡಿಸಿದ್ದರೂ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಜೈಲ್ ಸೂಪರಿಂಟೆಂಡೆಂಡ್ ವಿಜಯ್ ರೋಡ್ಕರ್ ನಿರಾಕರಿಸಿದ್ದಾರೆ. ತಮಗೇನು ಗೊತ್ತಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ.

  • ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

    ಗಣಪತಿ ಕೂರಿಸಲು 500 ರೂ. ಒಂದು ಫುಲ್ ಬಾಟಲ್ ಕೊಡ್ಬೇಕು: ಪೊಲೀಸಪ್ಪನ ಬೇಡಿಕೆ

    ಮಡಿಕೇರಿ: ನಿನ್ನೆಯಷ್ಟೇ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಹಾಡಿಗೆ ಸ್ಟೆಪ್ ಹಾಕಿದ್ದ ಹೆಡ್ ಕಾನ್‍ಸ್ಟೇಬಲ್ ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಅವರದ್ದೇ ಎನ್ನಲಾಗಿರುವ ಆಡಿಯೋ ಈಗ ವೈರಲ್ ಆಗಿದೆ.

    ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನನಗೆ 500 ರೂ. ಹಾಗೂ ಒಂದು ಫುಲ್ ಬಾಟಲ್ ಎಣ್ಣೆ ಕೊಡಬೇಕು ಎಂದು ಮೊಬೈಲ್‍ನಲ್ಲಿ ಸ್ಥಳೀಯ ಯುವಕರೊಂದಿಗೆ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ನೀವು ಗಣಪತಿ ಕೂರಿಸಲು ಮತ್ತು ವಿಸರ್ಜನೆ ಮಾಡಬೇಕು ಎಂದರೆ 500 ರೂ., ಒಂದು ಫುಲ್ ಬಾಟಲ್ ಮದ್ಯ ಕೊಡಬೇಕು ಎಂದು ಯುವಕರೊಂದಿಗೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಾರಂಗಿ ಔಟ್ ಪೋಸ್ಟ್ ಠಾಣೆ ಕಾನ್‍ಸ್ಟೇಬಲ್ ರಂಗೇಗೌಡರು ಮಾತನಾಡಿದ್ದಾರೆ.

    ಈ ಆಡಿಯೋದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ನಿವಾಸಿ ಕಿರಣ್ ಮತ್ತು ಸ್ನೇಹಿತರು ಹೆಡ್ ಕಾನ್‍ಸ್ಟೇಬಲ್ ರಂಗೇಗೌಡ ಎಂಬುವರ ಜೊತೆ ಮಾತನಾಡಿದ್ದು, ನಿನ್ನೆ ತಾನೆ ಒಂದು ಎಂ.ಹೆಚ್ ಕೊಟ್ಟಿದ್ದೇವೆ. ಅಲ್ಲದೆ ಕ್ಯಾಮೆರಾಕ್ಕೆ ಎಂದು 500 ತೆಗೆದುಕೊಂಡು ಹೋಗಿದ್ದೀರಾ. ಗಣಪತಿ ವಿಸರ್ಜನೆಗೆ ನಮಗೆ ಹಣವಿಲ್ಲ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಸರ್ ಎಂದು ಸಂಭಾಷಣೆ ನಡೆಸಿದ್ದಾರೆ. ಆಡಿಯೋ ಗಮನಿಸಿದರೆ ಯುವಕರು ಉದ್ದೇಶ ಪೂರ್ವಕವಾಗಿಯೇ ಸಿಬ್ಬಂದಿ ಜೊತೆ ಎಣ್ಣೆ ವಿಚಾರ ಮಾತನಾಡಿ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಲು ಲಂಚ ಕೇಳುತ್ತಿದ್ದಾರೆ ಅಧಿಕಾರಿಗಳು

    ಸಂತ್ರಸ್ತರಿಗೆ ಪರಿಹಾರ ಚೆಕ್ ನೀಡಲು ಲಂಚ ಕೇಳುತ್ತಿದ್ದಾರೆ ಅಧಿಕಾರಿಗಳು

    ಬೆಳಗಾವಿ: ಜಿಲ್ಲೆಯ ಜನರು ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿ ಈಗಲೂ ಒದ್ದಾಡುತ್ತಿದ್ದಾರೆ. ಪ್ರವಾಹ ನಿಂತು ತಿಂಗಳಾದರೂ ಬರೀ ಹತ್ತು ಸಾವಿರ ಕೊಡುವುದಕ್ಕೆ ರಾಜ್ಯ ಸರ್ಕಾರ ಸೀಮಿತವಾಗಿದೆ. ಈ ಮಧ್ಯೆ ಈ ಪರಿಹಾರ ಹಣದ ಚೆಕ್ ನೀಡಲು ಅಧಿಕಾರಿಗಳು ಹಾಗೂ ಕೆಲ ಸ್ಥಳೀಯ ಮುಖಂಡರು ಸಂತ್ರಸ್ತರ ಬಳಿ ಲಂಚ ಪೀಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಡಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿರುವ ಜಿಲ್ಲೆಯಲ್ಲಿ ಅಧಿಕಾರಿಗಳು ಏಜೆಂಟರುಗಳಿಂದ ಹಣದ ದಂಧೆ ನಡೆಯುತ್ತಿದೆ. ಒಂದೆಡೆ ಬಿದ್ದ ಮನೆಗಳು ಬಿದ್ದಲ್ಲಿಯೇ ಇವೆ. ಜನರಿಗೆ ಸುರಿಲ್ಲದೆ ದೇವಸ್ಥಾನ, ಮಸೀದಿಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ಹಣ ಬಂದರೂ ನಿರಾಶ್ರಿತರಿಗೆ ಚೆಕ್‍ಗಳು ಮುಟ್ಟುತ್ತಿಲ್ಲ. ಜಲಪ್ರವಾಹಕ್ಕೆ ಸಿಕ್ಕು ಕಣ್ಣೀರಿಡುತ್ತಿರುವ ಕುಟುಂಬಗಳಿಂದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕಮಾಯಿ ಮಾಡುತ್ತಿದ್ದಾರೆ. ಇದನ್ನೂ ಓದಿ:ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

    ಸಂತ್ರಸ್ತರಿಗೆ ನೀಡುವ ಚೆಕ್‍ಗಳನ್ನು 1500 ರೂಪಾಯಿಂದ 3 ಸಾವಿರದವರೆಗೂ ಮಾರಾಟವಾಗುತ್ತಿವೆ. ರಾಮದುರ್ಗ, ಗೋಕಾಕ್, ಅರಭಾವಿಯ ಗ್ರಾಮದ ಕೆಲ ಮುಖಂಡರು ಹಾಗೂ ಸ್ಥಳೀಯ ಅಧಿಕಾರಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಲ್ಲಿ ಹತ್ತು ಸಾವಿರದ ಚೆಕ್ ಕೊಟ್ಟರೆ ಸ್ಥಳದಲ್ಲೇ ಡ್ರಾ ಮಾಡಿಕೊಡಲಾಗುತ್ತೆ. ಚೆಕ್ ಹಿಡಿದು ಬ್ಯಾಂಕ್‍ಗಳಿಗೆ ಜನರು ಹೋದರೆ ಹಂಪಿಹೊಳಿ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗಳು ತಕ್ಷಣ ಹಣಬೇಕು ಎಂದರೆ ಗ್ರಾಮದ ಮುಖಂಡರನ್ನು ಸಂಪರ್ಕಿಸಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಅವರ ಬಳಿ ಹೋದರೆ ಹಣ ಪಡೆಯಲು ಒಂದು ಚೆಕ್‍ಗೆ ಒಂದೂವರೆ ಸಾವಿರದಿಂದ ಮೂರು ಸಾವಿರದವರೆಗೂ ಲಂಚವನ್ನು ಜನರು ನೀಡಬೇಕಾಗಿದೆ. ಹೀಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಸಂತ್ರಸ್ತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಪ್ರವಾಹದ ಹೆಸರಿನಲ್ಲಿ ಕೋಟ್ಯಾಂತರ ಅನುದಾನದ ಬಂದರೂ ಸಂತ್ರಸ್ತರಿಗೆ ಮಾತ್ರ ಅದು ಮುಟ್ಟುತ್ತಿಲ್ಲ. ಸಂತ್ರಸ್ತರ ಬದಲಿಗೆ ಪ್ರವಾಹದಿಂದ ಯಾವುದೇ ಹಾನಿಯಾಗದವರಿಗೆ ಚೆಕ್‍ಗಳು ಸುಲಭವಾಗಿ ಸಿಗುತ್ತಿವೆ. ಚೆಕ್ ಸಿಗದಿದ್ದಕ್ಕೆ ಗುರುವಾರವಷ್ಟೇ ಗೋಕಾಕ್ ತಾಲೂಕಿನ ಹಲವು ಗ್ರಾಮದ ನಿರಾಶ್ರಿತರು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    ಸರ್ಕಾರದಿಂದ ಚೆಕ್ ಬಂದರೂ ಅವುಗಳು ತಮಗೆ ಬೇಕಾದ ಕಾರ್ಯಕರ್ತರ ಕೈಗೆ ಸೇರುತ್ತಿವೆ. ಈ ದಂಧೆಯಲ್ಲಿ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಕೂಡ ಶಾಮೀಲಾಗಿದ್ದಾರಾ? ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಅವರಿಗೆ ಈ ಬಗ್ಗೆ ತಿಳಿದಿದ್ದರೂ ಸೈಲೆಂಟ್ ಆಗಿದ್ದಾರಾ ಎಂಬ ಅನುಮಾನಗಳು ಹುಟ್ಟುಕೊಂಡಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಿರಾಶ್ರಿತರಿಗೆ ಆಗುತ್ತಿರುವ ಮೋಸವನ್ನು ತಡೆದು, ಈ ದಂಧೆಗೆ ಬ್ರೇಕ್ ಹಾಕಿ ಸಂತ್ರಸ್ತರಿಗೆ ಹಣ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ.

    ಈ ಹಿಂದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡಿಯೂರಿನಲ್ಲಿ ಚೆಕ್ ಹಾಗೂ ರೇಷನ್ ಪಡೆಯೋಕೆ ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಸಂತ್ರಸ್ತರಿಗೆ ಗೋಳಾಡಿಸಿದ್ದರು. ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಅಂದರೆ, ಎಲ್ಲಾದರೂ ಹೋಗಿ ಏನಾದರೂ ಮಾಡಿ, ಆಧಾರ್ ತಗೆದುಕೊಂಡು ಬಂದರೇನೆ ನಿಮಗೆ ಚೆಕ್ ಕೊಡುತ್ತೇವೆ ಎಂದು ಅಧಿಕಾರಿಗಳು ಸಂತ್ರಸ್ತರನ್ನು ಪೀಡಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಪ್ರವಾಹಕ್ಕೆ ಕೆಲವರ ರೇಷನ್ ಕಾರ್ಡ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ರೇಷನ್ ಸಿಗದೆ, ಕೆಲಸವೂ ಇಲ್ಲದೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಈ ನೋವಿನಲ್ಲೂ ಅಸಾಹಯಕರ ಜೀವ ಹಿಂಡುತ್ತಿರುವ ಅಧಿಕಾರಿಗಳ ಈ ಕಿರುಕುಳದಿಂದ ಸಂತ್ರಸ್ತರು ಕಣ್ಣೀರು ಹಾಕಿದ್ದರು.

    ಪ್ರವಾಹದಿಂದ ಏನೆಲ್ಲಾ ಅನಾಹುತಗಳಾಗಿವೆ ಅನ್ನೋದು ರಾಜ್ಯದ ಜನತೆಗೆ ತಿಳಿದಿದೆ. ಪ್ರವಾಹ ಪೀಡಿತ ಪ್ರದೇಶದ ಜನರ ಬದುಕಿನ ಬಂಡಿಯ ಚಕ್ರಗಳೇ ಕಳಚಿಕೊಂಡಿವೆ. ಈಗ ಮತ್ತೆ ಆರಂಭದಿಂದ ಅವರು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಒಂದು ಹೊತ್ತಿನ ಊಟಕ್ಕೂ ಬೇಡಿ ತಿನ್ನೋ ಪರಿಸ್ಥಿತಿ ಬಂದಿದೆ. ಹಾಕೋಳೋಕೆ ಇರೋ ಒಂದೇರಡು ಬಟ್ಟೆಯಲ್ಲೆ ಕಂಡವರ ಮನೆಯಲ್ಲಿ ಜೀವನ ನಡೆಸುವ ಹಾಗಾಗಿದೆ. ಆದರೆ ಇದರ ಮಧ್ಯೆ ಸ್ಥಳೀಯ ಅಧಿಕಾರಿಗಳ ಕಾಟ ಅತೀರೇಕವಾಗಿದೆ.

  • ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ರಾಯಚೂರು: ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐ ಒಬ್ಬರು ಲಂಚ ಪಡೆಯುತ್ತಿರುವ ಘಟನೆ ರಾಯಚೂರಿನ ಹೆದ್ದಾರಿಯಲ್ಲಿ ನಡೆದಿದೆ.

    ರಾಯಚೂರು ನಗರದ ಮಧ್ಯೆ ಹಾದು ಹೋಗುವ ನಂದಿ ದೇವಾಸ್ಥಾನದ ಹತ್ತಿರದ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಆಂಧ್ರ ಮೂಲದ ಟ್ರಕ್ ಚಾಲಕನಿಂದ 300 ರೂಪಾಯಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನ ಮತ್ತು ಲಾರಿ ದಾಖಲೆ ಪರಿಶೀಲಿಸಿ ದಂಡ ವಿಧಿಸಬೇಕಾದ ಪೊಲೀಸರು ಲಂಚ ವಸೂಲಿ ದಂಧೆ ಮಾಡುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಕ್ಯಾರೆ ಎನ್ನದ ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್‍ಐ ಲಂಚ ತೆಗೆದುಕೊಳ್ಳುವಲ್ಲಿ ಮಗ್ನನಾಗಿದ್ದಾರೆ.

    ಪೊಲೀಸರಿಗೆ ಹಣ ನೀಡಿ ರಶೀದಿ ಪಡೆಯದೇ ದಾರಿಯುದ್ದಕ್ಕೂ ಎಷ್ಟು ಜನರಿಗೆ ಕೋಡಬೇಕು ಎಂದು ಲಾರಿ ಚಾಲಕ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಅವರಿವರದ್ದು ಬೇಡ ಇಲ್ಲಿ ಕೊಟ್ಟು ಮುಂದೆ ಹೋಗುತ್ತಾ ಇರು ಎಂದು ರಾಜಾರೋಷವಾಗಿ ಲಂಚ ಪಡೆದು ಬಿಲ್ ನೀಡದೆ ಬಿಟ್ಟು ಕಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  • ಕೈ ನಾಯಕಿ ಕೊಲೆ ಪ್ರಕರಣ-ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್

    ಕೈ ನಾಯಕಿ ಕೊಲೆ ಪ್ರಕರಣ-ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್

    ವಿಜಯಪುರ: ಕೈ ನಾಯಕಿ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದಾಗ ವಿಜಯಪುರ ಜಿಲ್ಲಾ ಪೊಲೀಸರೊಬ್ಬರು ಮಹಾರಾಷ್ಟ್ರದ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪವಿಭಾಗದ ರೈಟರ್ ಮಲ್ಲಿಕಾರ್ಜುನ ಪೂಜಾರಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರಿಯಾಜ್ ಕೊಕಟನೂರ್ ಎಂಬವರಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಸೋಲಾಪುರ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಗೆ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಪೂಜಾರಿ ಒಟ್ಟು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ನಂತರ ರಿಯಾಜ್ ಎಂಬ ಮಧ್ಯವರ್ತಿ ಮೂಲಕ 1.5 ಲಕ್ಷ ರೂ.ಗೆ ಈ ವ್ಯವಹಾರ ಕುದುರಿಸಿದ್ದನಂತೆ ಎಂದು ಹೇಳಲಾಗಿದೆ.

    ಇದಕ್ಕೆ ಒಪ್ಪಿದ್ದ ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ನೀಡಲು ಒಪ್ಪಿದ್ದರಂತೆ. ಈ ಲಂಚದ ಹಣ ಪಡೆಯಲು ಬಂದಾಗ ನಿನ್ನೆ ರಾತ್ರಿ ಸೋಲಾಪುರ ಎಸಿಬಿ ಅಧಿಕಾರಿಗಳು ಪೂಜಾರಿ ಹಾಗೂ ರಿಯಾಜ್ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಡಿವೈಎಸ್‍ಪಿ ಮಹೇಶ್ವರಗೌಡರನ್ನು ಬಂಧಿಸಲು ಒಂದು ತಂಡವನ್ನು ವಿಜಯಪುರಕ್ಕೆ ಕಳುಹಿಸಿರುವುದಾಗಿ ಎಸಿಬಿ ಅಧಿಕಾರಿ ಅಜಿತ್ ಜಾಧವ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

  • ಲಂಚ ಕೇಳಿದ್ದ ಆರೋಪ- ಮೂವರು NIA ಅಧಿಕಾರಿಗಳ ವರ್ಗಾವಣೆ

    ಲಂಚ ಕೇಳಿದ್ದ ಆರೋಪ- ಮೂವರು NIA ಅಧಿಕಾರಿಗಳ ವರ್ಗಾವಣೆ

    ನವದೆಹಲಿ: ಲಂಚ ಪಡೆಯಲು ಮುಂದಾದಗಿದ್ದ ಮೂವರು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ಎನ್‍ಐಎ ಸ್ಪಷ್ಟಪಡಿಸಿದೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ಸಯ್ಯದ್‍ನ ಉಗ್ರ ಸಂಘಟನೆ ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್(ಎಫ್‍ಐಎಫ್)ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಮೂವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ದೆಹಲಿ ಮೂಲದ ಉದ್ಯಮಿಯೊಬ್ಬರು ಈ ಸಂಘಟನೆಗೆ ಧನ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದಿಂದ ನಿಮ್ಮ ಹೆಸರನ್ನು ಕೈ ಬಿಡಬೇಕಾದ್ರೆ 2 ಕೋಟಿ ರೂ. ಹಣ ನೀಡಬೇಕೆಂದು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಎನ್‍ಐಎಗೆ ದೂರು ಸಲ್ಲಿಸಿದ್ದರು.

    ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೇರೊಂದು ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಓರ್ವ ಹಿರಿಯ ಅಧಿಕಾರಿಯನ್ನು ಎನ್‍ಐಎ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಿದ್ದು, ಇಬ್ಬರು ಕಿರಿಯ ಅಧಿಕಾರಿಗಳು ಮಾತೃ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಎನ್‍ಐಎ ತಿಳಿಸಿದೆ.

    26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ನಂತರ ಎನ್‍ಐಎ ಸ್ಥಾಪಿಸಲಾಗಿದೆ. ಭಯೋತ್ಪಾದನೆಯ ಪ್ರಕರಣಗಳನ್ನು ಇದು ಪ್ರತ್ಯೇಕವಾಗಿ ನಿರ್ವಹಿಸಲಿದೆ. ಇತ್ತೀಚೆಗೆ ಎನ್‍ಐಎಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಗೆ ತಿದ್ದುಪಡಿ ತಂದು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಹೆಸರಿಸುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿತ್ತು.

  • ಸ್ವಾತಂತ್ರ್ಯ ದಿನ ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ- ಮರುದಿನ ಲಂಚ ಪಡೆದು ಸಿಕ್ಕಿಬಿದ್ದ ಪೇದೆ

    ಸ್ವಾತಂತ್ರ್ಯ ದಿನ ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ- ಮರುದಿನ ಲಂಚ ಪಡೆದು ಸಿಕ್ಕಿಬಿದ್ದ ಪೇದೆ

    ಹೈದರಾಬಾದ್: ಸ್ವಾತಂತ್ರ್ಯ ದಿನಾಚರಣೆಯಂದು ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ ಪಡೆದ ಪೇದೆಯೊಬ್ಬರು, ಪ್ರಶಸ್ತಿ ಪಡೆದ 24 ಗಂಟೆಯಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಮಹಬೂಬ್‍ನಗರದ ಐ-ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಲ್ಲೆ ತಿರುಪತಿ ರೆಡ್ಡಿ ಲಂಚ ಪಡೆದ ಪೇದೆ. ಇವರಿಗೆ ಸ್ವಾತಂತ್ರ್ಯ ದಿನದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಅವರ ಸಮ್ಮುಖದಲ್ಲಿ ಅಬಕಾರಿ ಸಚಿವ ವಿ.ಶ್ರೀನಿವಾಸ್ ಗೌಡ ಅವರಿಂದ ಬೆಸ್ಟ್ ಕಾನ್ಸ್‌ಟೇಬಲ್ ಎಂಬ ಗೌರವ ಮತ್ತು ಪ್ರಶಸ್ತಿಯನ್ನು ಪಡೆದಿದ್ದರು.

    ಪ್ರಶಸ್ತಿ ಪಡೆದ ಒಂದು ದಿನದೊಳಗೆ ಪೊಲೀಸ್ ಅಧಿಕಾರಿ ಮತ್ತೆ ಲಂಚ ಪಡೆದು ಸುದ್ದಿಯಾಗಿದ್ದಾರೆ. ತಿರುಪತಿ ರೆಡ್ಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸದೆ ಇರಲು 17,000 ಹಣವನ್ನು ಲಂಚವಾಗಿ ಪಡೆದ ಆರೋಪದ ಮೇಲೆ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಗದು ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

    ರಮೇಶ್ ಎಂಬವರು ತಿರುಪತಿ ರೆಡ್ಡಿ ಅವರು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ ಮರಳು ಸಾಗಿಸುವಾಗ ಲಂಚ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೆಲಸ ಆರಂಭಿಸಿದ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ಡಿ ಬಿದ್ದಿದ್ದಾರೆ. ನಗದು ಸಮೇತ ಪೇದೆಯನ್ನು ಬಂಧಿಸಿದ ನಂತರ, ರೆಡ್ಡಿ ಅವರನ್ನು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಕಳೆದ ತಿಂಗಳು ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ರಾಜ್ಯದ ‘ಅತ್ಯುತ್ತಮ ತಹಶೀಲ್ದಾರ್’ ಎಂದು ಪ್ರಶಸ್ತಿ ಪಡೆದಿದ್ದ, ಕಂದಾಯ ಅಧಿಕಾರಿಯ ಮನೆಯಿಂದ 93.5 ಲಕ್ಷ ನಗದು ಮತ್ತು 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.