Tag: Brahmin community

  • ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ: ಶೋಭಾ ಕರಂದ್ಲಾಜೆ

    ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ: ಶೋಭಾ ಕರಂದ್ಲಾಜೆ

    ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿರುವುದರಿಂದಾಗಿ ಪೊಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾಡಿರುವ ಅವರು, ಕೆಲವರಿಗೆ ಯಾವುದೋ ಸಮಾಜಕ್ಕೆ ಅಪಮಾನ ಮಾಡುವ ಮೂಲಕ ತಮಗೆ ಪ್ರಚಾರ ಮತ್ತು ಹಣ ಸಂಪಾದನೆ ಮಾಡಬಹುದು ಎಂದು ಅಂದು ಕೊಂಡಿದ್ದಾರೆ. ಇದು ವಿಕೃತ ಮಾನಸಿಕತೆ. ಸಿನಿಮಾ ನಿರ್ಮಾಣ ಮಾಡುವಾಗಲೇ ಈ ರೀತಿಯ ದೃಶ್ಯಗಳಿಂದ ಹೆಚ್ಚು ಪ್ರಚಾರ ಪಡೆಯಬಹುದು ಎಂಬುದು ಅವರ ಮನಸ್ಸಿನಲ್ಲಿದೆ ಇದನ್ನು ಮೊದಲು ಹೊಗಲಾಡಿಸಬೇಕು. ಚಿತ್ರದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಮೊದಲು ಸೆನ್ಸಾರ್ ಮಾಡಿ ನಂತರ ಸಿನಿಮಾ ಪ್ರದರ್ಶನ ಮಾಡಲಿ ಎಂದು ಗುಡುಗಿದ್ದಾರೆ.

    https://twitter.com/ShobhaBJP/status/1364159215695130624

    ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯನ್ನು ಟೀಕಿಸಿದರೂ ನಾವು ಏನೂ ಮಾಡುವುದಿಲ್ಲ. ಹಿಂದೂಗಳು ಶಾಂತಿ ಪ್ರಿಯರು ಎಂಬ ಭಾವನೆ ಇದೆ ಇದು ನಮ್ಮ ದೌರ್ಬಲ್ಯವಲ್ಲ. ವಿಕೃತ ಮನಸ್ಸಿನವರು ಕೂಡಲೇ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟರು.

    ಧರ್ಮದ ವಿಚಾರ ಬಂದಾಗ ರಾಜಕೀಯ ಬಿಟ್ಟು ಮಾತನಾಡುತ್ತಿದ್ದೇನೆ. ಹಿಂದೂ ಧರ್ಮವನ್ನು ಹೊರತು ಪಡಿಸಿ ಬೇರೆ ಧರ್ಮದ ಕುರಿತು ಸಿನಿಮಾಗಳಲ್ಲಿ ಅಪಮಾನ ಮಾಡಿದ್ದರು ನಾನು ಪ್ರಶ್ನಿಸುತ್ತಿದ್ದೆ ಎಂದು ಹೇಳಿದರು.

  • ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ಪೊಗರು ಟೀಮ್ – ನಂದಕಿಶೋರ್ ಕ್ಷಮೆಯಾಚನೆ

    ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ಪೊಗರು ಟೀಮ್ – ನಂದಕಿಶೋರ್ ಕ್ಷಮೆಯಾಚನೆ

    ಬೆಂಗಳೂರು: ಬ್ರಾಹ್ಮಣರಿಗೆ ಸಂಬಂಧಿಸಿದ ವಿವಾದಿತ ದೃಶ್ಯಗಳನ್ನು ಕತ್ತರಿಸಲು ಪೊಗರು ಟೀಮ್ ನಿರ್ಧರಿಸಿದ್ದು, ಸಿನಿಮಾ ನಿರ್ದೇಶಕ ನಂದಕಿಶೋರ್ ಸಹ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

    ಬ್ರಾಹ್ಮಣ ಸಮುದಾಯದವರ ಪ್ರತಿಭಟನೆ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಹಾಗೂ ನಿರ್ಮಾಪಕ ಬಿ.ಕೆ.ಗಂಗಾಧರ್ ಮಾತನಾಡಿದ್ದಾರೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರೊಂದಿಗೆ ಸಿನಿಮಾ ತಂಡದವರು ಅರವಿಂದ ಭವನದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

    ಚಿತ್ರದಲ್ಲಿನ 12 ರಿಂದ 14 ದೃಶ್ಯಗಳನ್ನು ತೆಗೆಯಲು ಮಂಡಳಿ ಅಧ್ಯಕ್ಷರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಚಪ್ಪಲಿ ಕಾಲಿನಿಂದ ಜನಿವಾರ ಹಾಕಿರುವ ಬ್ರಾಹ್ಮಣನನ್ನು ಒದೆಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಆ ದೃಶ್ಯಗಳಿಗೆ ಕತ್ತರಿ ಹಾಕಲು ಪೊಗರು ಟೀಮ್ ಒಪ್ಪಿದ್ದು, ನಿರ್ದೇಶಕ ನಂದಕಿಶೋರ್ ಕ್ಷಮೆಯನ್ನು ಸಹ ಯಾಚಿಸಿದ್ದಾರೆ.

    ಪೊಗರು ಚಿತ್ರತಂಡ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಬ್ರಾಹ್ಮಣರಿಗೆ ಅಪಮಾನದ ದೃಶ್ಯಗಳನ್ನು ತೆಗೆಯಲೇಬೇಕು ಎಂದು ಬ್ರಾಹ್ಮಣ ಸಮುದಾಯವರು ಆಗ್ರಹಿಸಿದ್ದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದ್ದರು. ಈ ವೇಳೆ ನಿರ್ದೇಶಕ ನಂದಕಿಶೋರ್ ಕ್ಷಮೆ ಕೇಳಿದರೆ ಸಾಲುವುದಿಲ್ಲ. ಅವಮಾನ ಮಾಡಿದ ದೃಶ್ಯಗಳನ್ನು ನಾಳೆ ಒಳಗಡೆ ತೆಗೆಯಬೇಕು ಎಂದು ಗಡುವು ನೀಡಿದ್ದರು.

    ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಹಾಗೂ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪೊಗರು ಸಿನಿಮಾದ ವಿರುದ್ಧ ದೂರು ನೀಡಿ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಆಗ್ರಹಿಸಲಾಗಿತ್ತು.

    ಪೊಗರು ಸಿನಿಮಾದ ವಿರುದ್ಧ ಇಂದು ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಮೈಸೂರು, ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿದ್ದು, ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪಾರ್ಹ ದೃಶ್ಯ ತೆಗೆಯಲು ಒತ್ತಾಯ ಮಾಡಲಾಗಿತ್ತು.

    ಪೊಗರು ನಿರ್ಮಾಪಕ ಬಿ.ಕೆ ಗಂಗಾಧರ್ ಪರ ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ, ಪೊಗರು ಸಿನಿಮಾ ಸೆನ್ಸಾರ್ ಆಗಿದೆ. ಈ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕು. ಒಮ್ಮೆ ಸೆನ್ಸಾರ್ ಆದಮೇಲೆ ಅದನ್ನು ಮತ್ತೆ ಸೆನ್ಸಾರ್ ಮಂಡಳಿ ಮೂಲಕವೇ ಬಗೆಹರಿಸಬೇಕು. ನಾವು ಈಗಾಗಲೇ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದೇವೆ. ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯಲು 48 ಗಂಟೆಗಳ ಕಾಲ ಅವಕಾಶ ಬೇಕು ಎಂದು ಹೇಳಿದ್ದರು.