Tag: Boxer

  • ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಸೆಮಿಯಲ್ಲಿ ಲವ್ಲೀನಾಗೆ ಸೋಲು – ಭಾರತಕ್ಕೆ ಕಂಚು

    ಟೋಕಿಯೋ: ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೆಮಿಯಲ್ಲಿ ಸೋತಿದ್ದು, ಕಂಚಿನ ಪದಕವನ್ನು ಗೆದ್ದಿದ್ದಾರೆ.

    69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ ಮನೇಲಿ ವಿರುದ್ಧ ಲವ್ಲೀನಾ 0-5 ಅಂಕಗಳಿಂದ ಸೋತಿದ್ದಾರೆ. ಈ ಪಂದ್ಯ ಸೋತರೂ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಎಲ್ಲ ಸ್ಪರ್ಧಿಗಳಿಗೆ ಪದಕ ನೀಡುವ ಕಾರಣ ಲವ್ಲೀನಾ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

    ಮೀರಾಬಾಯಿ ಚಾನು ಮತ್ತು ಪಿ.ವಿ. ಸಿಂಧು ಈಗಾಗಲೇ ಭಾರತಕ್ಕೆ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಿದ್ದಾರೆ.

  • ಕ್ಯಾನ್ಸರ್ ವಿರುದ್ಧ ಡಿಂಕೊ ಸಿಂಗ್ ಹೋರಾಟ- ಬಾಕ್ಸರ್ ಬೆಂಬಲಕ್ಕೆ ನಿಂತ ಸ್ಪೈಸ್ ಜೆಟ್

    ಕ್ಯಾನ್ಸರ್ ವಿರುದ್ಧ ಡಿಂಕೊ ಸಿಂಗ್ ಹೋರಾಟ- ಬಾಕ್ಸರ್ ಬೆಂಬಲಕ್ಕೆ ನಿಂತ ಸ್ಪೈಸ್ ಜೆಟ್

    – ಏರ್ ಅಂಬುಲೆನ್ಸ್ ಮೂಲಕ ದೆಹಲಿಗೆ ಶಿಫ್ಟ್‌

    ಇಂಫಾಲ್: ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತೀಯ ಬಾಕ್ಸರ್ ಡಿಂಕೊ ಸಿಂಗ್ ಅವರನ್ನು ಸ್ಪೈಸ್‍ ಜೆಟ್ ಏರ್ ಅಂಬುಲೆಂನ್ಸ್ ಮೂಲಕ ದೆಹಲಿಯ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.

    ಡಿಂಕೊ ಸಿಂಗ್ ಭಾರತದ ಪರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಣಿಪುರದ ರಾಜಧಾನಿ ಇಂಫಾಲ್‍ನಲ್ಲಿ ವಾಸಿಸುತ್ತಿರುವ 41 ವರ್ಷದ ಡಿಂಕೊ ಅವರಿಗೆ ಲಾಕ್‍ಡೌನ್‍ನಿಂದಾಗಿ ವಿಕಿರಣ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಅವರನ್ನು ಸ್ಪೈಸ್ ಜೆಟ್‍ನ ಏರ್ ಅಂಬುಲೆನ್ಸ್ ಮೂಲಕ ಇಂಫಾಲ್‍ನಿಂದ ದೆಹಲಿಗೆ ಕರೆತರಲು ಸಿದ್ಧತೆ ನಡೆದಿದೆ.

    ಬಾಕ್ಸರ್ ಡಿಂಕೊ ಸಿಂಗ್ ಅವರಿಗೆ ಸ್ಪೈಸ್ ಜೆಟ್ ಸಂಸ್ಥೆಯು ಉಚಿತವಾಗಿ ಏರ್ ಅಂಬುಲೆನ್ಸ್ ಸೇವೆ ನೀಡಲು ಮುಂದೆ ಬಂದಿದೆ. ಈ ನಿರ್ಧಾರವನ್ನು ಸ್ಪೈಸ್‍ಜೆಟ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಪ್ರಕಟಿಸಿದ್ದಾರೆ. ಅಜಯ್ ಸಿಂಗ್ ಅವರು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ (ಬಿಎಫ್‍ಐ) ಅಧ್ಯಕ್ಷರೂ ಆಗಿದ್ದಾರೆ.

    ಹಿರಿಯ ಬಾಕ್ಸರ್ ಗಳಾದ ವಿಜೇಂದರ್ ಸಿಂಗ್ ಮತ್ತು ಭಾರತದ ಮನೋಜ್ ಕುಮಾರ್ ಕೂಡ ಅರ್ಜುನ್ ಮತ್ತು ಪದ್ಮಾ ಪ್ರಶಸ್ತಿ ಪುರಸ್ಕೃತ ಡಿಂಕೊ ಸಿಂಗ್ ಅವರಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸುತ್ತಿದ್ದಾರೆ. ”ನಾವು ವಾಟ್ಸಾಪ್ ಗ್ರೂಪ್ ‘ಹಮ್ ಮೇನ್ ಹೈ ದಮ್’ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಿದ್ದೇವೆ. ಅದು ನೇರವಾಗಿ ಡಿಂಕೊ ಅವರ ಖಾತೆಗೆ ಹೋಗುತ್ತದೆ” ಎಂದು ವಿಜೇಂದರ್ ಹೇಳಿದ್ದಾರೆ.

    ಡಿಂಕೊ ಸಿಂಗ್ ಅವರನ್ನು ಏಪ್ರಿಲ್ 25ರಂದು ದೆಹಲಿಗೆ ಕರೆತರಲಾಗುವುದು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಜಯ್ ಸಿಂಗ್, ”ಲಾಕ್‍ಡೌನ್‍ನಿಂದಾಗಿ ಡಿಂಕೊ ಸಿಂಗ್ ಅವರ ಚಿಕಿತ್ಸೆ ಮಧ್ಯದಲ್ಲಿ ನಿಂತುಹೋಯಿತು. ಇದು ನಿಜವಾಗಿಯೂ ದುರದೃಷ್ಟಕರ. ನಮ್ಮ ದೇಶದ ವೀರನಿಗೆ ಏರ್ ಅಂಬುಲೆನ್ಸ್ ಸೇವೆಯನ್ನು ಒದಗಿಸುವುದು ಮತ್ತು ಅವರನ್ನು ದೆಹಲಿಗೆ ಕರೆತರುವುದು ಸ್ಪೈಸ್‍ಜೆಟ್‍ಗೆ ಒಂದು ಭಾಗ್ಯವಾಗಿದೆ. ಭಾರತೀಯ ಬಾಕ್ಸರ್ ಡಿಂಕೊ ಅನೇಕ ದೊಡ್ಡಮಟ್ಟದ ಪಂದ್ಯಗಳನ್ನು ಗೆದ್ದಿದ್ದಾರೆ. ಈ ಯುದ್ಧದಲ್ಲಿಯೂ ಅವರು ಗೆಲ್ಲಬೇಕು ಎಂಬುದು ನಮ್ಮ ಪ್ರಾರ್ಥನೆ” ಎಂದು ತಿಳಿಸಿದ್ದಾರೆ.

    ಈ ಹಿಂದೆ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಮಣಿಪುರ ಸರ್ಕಾರದೊಂದಿಗೆ ಮಾತನಾಡಿ ಡಿಂಕೊ ಸಿಂಗ್ ಅವರ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದರು. 1998ರಲ್ಲಿ ಬ್ಯಾಂಕಾಕ್‍ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬಾಂಟಮ್‍ವೈಟ್ ಬಾಕ್ಸರ್ ಡಿಂಕೊ ಸಿಂಗ್ ಚಿನ್ನದ ಪದಕ ಗೆದ್ದರು.

  • ಬಾಕ್ಸರ್‌ಗಾಗಿ ತೆಲುಗಿಗೆ ಹೊರಟ ಉಪೇಂದ್ರ

    ಬಾಕ್ಸರ್‌ಗಾಗಿ ತೆಲುಗಿಗೆ ಹೊರಟ ಉಪೇಂದ್ರ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಬಾಕ್ಸರ್ ಎಂಬ ತೆಲುಗಿನ ಚಿತ್ರಕ್ಕಾಗಿ ಟಾಲಿವುಡ್ ಮತ್ತೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‍ನಲ್ಲಿ ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಉಪ್ಪಿ, 2015 ರಲ್ಲಿ ತೆರೆಕಂಡಿದ್ದ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಯಾವುದೇ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ವರುಣ್ ತೇಜ್ ಅಭಿನಯದ ಬಾಕ್ಸರ್ ಚಿತ್ರದಲ್ಲಿ ಉಪ್ಪಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತದೆ.

    ಕಬ್ಜ, ಬುದ್ಧಿವಂತ-2, ಹೋಂ ಮಿನಿಸ್ಟರ್ ಮತ್ತು ರವಿಚಂದ್ರ ಎಂಬ ಸಾಲು ಸಾಲು ಚಿತ್ರದಲ್ಲಿ ಬ್ಯುಸಿ ಇರುವ ಉಪ್ಪಿ, ತೆಲುಗಿನಲ್ಲಿ ಹೊಸ ನಿರ್ದೇಶಕ ಕಿರಣ್ ಕೊರ್ರಪಟ್ಟಿ ನಿರ್ದೇಶನದ ಬಾಕ್ಸರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ಚಿತ್ರತಂಡ ಉಪೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದೆ ಎಂದು ಹೇಳಲಾಗಿದೆ. ಎಲ್ಲ ಅಂದುಕೊಂಡಂತೆ ಅದರೆ ಉಪ್ಪಿ ತೆಲುಗಿನಲ್ಲಿ ಮತ್ತೆ ಅಭಿನಯಿಸಲಿದ್ದಾರೆ.

    ಈ ಬಾಕ್ಸರ್ ಚಿತ್ರಕ್ಕೆ ತೆಲುಗಿನ ವರುಣ್ ತೇಜ್ ನಾಯಕರಾಗಿದ್ದು, ಈ ಚಿತ್ರದಲ್ಲಿ ಅವರು ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಬಹುಮುಖ್ಯವಾದ ಅತಿಥಿ ಪಾತ್ರವಿದ್ದು, ಅದಕ್ಕೆ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಒಬ್ಬರ ಆಗತ್ಯವಿದೆ. ಈ ಕಾರಣಕ್ಕಾಗಿ ಚಿತ್ರತಂಡ ಉಪ್ಪಿ ಅವರನ್ನು ಸಂಪರ್ಕಿಸಿದೆ. ಉಪೇಂದ್ರ ಅವರು ಈ ಹಿಂದೆ ಸತ್ಯಂ, ಟಾಸ್, ಒಕೆ ಮಾಟಾ ಹೀಗೆ ಹಲವು ತೆಲಗು ಚಿತ್ರದಲ್ಲಿ ನಟಿಸಿದ್ದರು.

    ಸದ್ಯ ಉಪ್ಪಿ ಅವರು ಕಬ್ಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆರ್.ಚಂದ್ರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂಲಕ ಐ ಲವ್ ಯು ಚಿತ್ರದ ಬಳಿಕ ಮತ್ತೆ ಉಪೇಂದ್ರ ಹಾಗೂ ಆರ್.ಚಂದ್ರು ಜೋಡಿ ಒಂದಾಗುತ್ತಿದೆ. ಚಿತ್ರ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ. ಬರೀ ಲಾಂಗು, ಮಚ್ಚು ಮಾತ್ರವಲ್ಲದೆ ಲವ್ ಹಾಗೂ ಸೆಂಟಿಮೆಂಟ್‍ಗಳನ್ನೂ ಒಳಗೊಂಡಿದೆಯಂತೆ. ಅಲ್ಲದೆ ಉಪೇಂದ್ರ ನಿರ್ದೇಶನದ ಓಂ ಚಿತ್ರಕ್ಕೆ ಇದನ್ನು ಹೋಲಿಸಲಾಗುತ್ತಿದೆ.

  • ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಮದುವೆ ನಿರಾಕರಿಸಿದ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ

    ಚಂಡೀಗಢ್: ಮದುವೆ ಆಗಲು ನಿರಾಕರಿಸಿದ್ದಕ್ಕೆ ತರಬೇತುದಾರ ಬಾಕ್ಸಿಂಗ್ ಆಟಗಾರ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಮಂಗಳವಾರ ಹರಿಯಾಣದ ಪಟೌದಿಯಲ್ಲಿ ನಡೆದಿದೆ.

    ಸರಿತಾ(25) ಮೃತಪಟ್ಟ ಯುವತಿ. ಸರಿತಾ ಟೇಕ್ವಾಂಡೋ (ಬಾಕ್ಸರ್) ಆಟಗಾರ್ತಿಯಾಗಿದ್ದು, ಆಕೆ ಬಾಕ್ಸಿಂಗ್ ಕಲಿಯುತ್ತಿದ್ದಳು. ಸರಿತಾಗೆ ಬಾಕ್ಸಿಂಗ್ ಹೇಳಿಕೊಡುತ್ತಿದ್ದ ತರಬೇತಿದಾರ ಸೋಮ್‍ಬೀರ್ ಆಕೆಯನ್ನು ಪ್ರೀತಿಸಲು ಶುರು ಮಾಡಿದ್ದನು.

    ಸೋಮ್‍ಬೀರ್ ಮದುವೆಯಾಗುವಂತೆ ಸರಿತಾ ಬಳಿ ಕೇಳಿಕೊಂಡಿದ್ದಾನೆ. ಆದರೆ ಸರಿತಾ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ತರಬೇತುದಾರ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ರಾಜ್ಯಮಟ್ಟದ ಕುಸ್ತಿ ಆಟಗಾರನಾಗಿರುವ ಸೋಮ್‍ಬೀರ್ ಆಗಾಗ ಸರಿತಾ ಮನೆಗೆ ಭೇಟಿ ನೀಡುತ್ತಿದ್ದನು. ಸೋಮ್‍ಬೀರ್ ವಿರುದ್ಧ ಬಿಲಾಸ್‍ಪುರ್ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಆತ ಯಾವಾಗಲೂ ನಶೆಯಲ್ಲಿ ತೇಲಾಡುತ್ತಿದ್ದನು.

    ಸೋಮ್‍ಬೀರ್, ಸರಿತಾಳನ್ನು ಮದುವೆ ಆಗಲು ಇಚ್ಛಿಸಿದ್ದನು. ಆದರೆ ಸರಿತಾ, ಸೋಮ್‍ಬೀರ್ ನಶೆ ಮಾಡುವುದನ್ನು ನೋಡಿದ್ದಳು. ಹಾಗಾಗಿ ಆಕೆ ಸೋಮ್‍ಬೀರ್ ನನ್ನು ಮದುವೆ ಆಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸೋಮ್‍ಬೀರ್ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

  • ಅಭ್ಯಾಸದ ವೇಳೆ ಕುಸಿದು ಮೃತಪಟ್ಟ 20 ವರ್ಷದ ಬಾಕ್ಸರ್

    ಅಭ್ಯಾಸದ ವೇಳೆ ಕುಸಿದು ಮೃತಪಟ್ಟ 20 ವರ್ಷದ ಬಾಕ್ಸರ್

    ಕೋಲ್ಕತ್ತಾ: ಅಭ್ಯಾಸದ ವೇಳೆ 20 ವರ್ಷದ ಬಾಕ್ಸರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಾವಾನಿಪುರದಲ್ಲಿ ನಡೆದಿದೆ.

    ಜ್ಯೋತಿ ಪ್ರಧಾನ್ ಮೃತಪಟ್ಟ ಬಾಕ್ಸರ್. ಜ್ಯೋತಿ ಕಿಡ್ಡರ್ ಪುರ ಪ್ರದೇಶದ ಭೂಕೈಲಾಶ್‍ನ ನಿವಾಸಿಯಾಗಿದ್ದು, ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಜ್ಯೋತಿ ರಾಷ್ಟ್ರೀಯ ಟೂರ್ನಿಮೆಂಟ್‍ನಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದರು.

    ಬುಧವಾರ ಜ್ಯೋತಿ ಭವಾನಿಪುರದ ಬಾಕ್ಸಿಂಗ್ ಅಸೋಸಿಯೇಶನ್‍ನಲ್ಲಿ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಜ್ಯೋತಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಹತ್ತಿರದ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಸದ್ಯ ಜ್ಯೋತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ನಾವು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಬಳಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಚಿನ್ನಕ್ಕೆ ಮುತ್ತಿಟ್ಟ ಅಮಿತ್ ಪಂಗಲ್

    ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಚಿನ್ನಕ್ಕೆ ಮುತ್ತಿಟ್ಟ ಅಮಿತ್ ಪಂಗಲ್

    ಬ್ಯಾಂಕಾಕ್: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ 2019ರಲ್ಲಿ ಭಾರತೀಯ ಬಾಕ್ಸರ್ ಅಮಿತ್ ಪಂಗಲ್ ಪುರುಷರ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

    ಥೈಲಾಂಡ್‍ನ ಬ್ಯಾಂಕಾಕ್‍ನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನಡೆಯುತ್ತಿದ್ದು, 23 ವರ್ಷದ ಪಶ್ಚಿಮ ಬಂಗಾಳದ ಅಮಿತ್ ಪಂಗಲ್ ಅವರು ಚಿನ್ನದ ಪದಕದ ಖಾತೆಯನ್ನು ತೆರೆದಿದ್ದಾರೆ.

    ಅಮಿತ್ ಪಂಗಲ್ ಅವರು ಗುರುವಾರ ನಡೆದ ಸೆಮಿಫೈನಲ್‍ನಲ್ಲಿ ಚೀನಾದ ಜಿಯಾಂಗು ಅವರನ್ನು 4-1 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು. ಫೈನಲ್‍ನಲ್ಲಿ ಕಳೆದ ವರ್ಷ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದ ಕೊರಿಯಾದ ಕಿಮ್ ಇನ್ಕ್ಯೂ ಕೊರುಇಯಾ ಅವರ ವಿರುದ್ಧ ಸೆಣಸಿದ್ದಾರೆ. ಭಾರೀ ಪೈಪೋಟಿಯಿಂದ ನಡೆದಿದ್ದ ಪಂದ್ಯದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯಗಳಿಸಿದ್ದಾರೆ.

    ಅಮಿತ್ ಪಂಗಲ್ ಅವರು ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಸ್ಟ್ರಾಂಡ್ಜಾ ಮೆಮೋರಿಯಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಅವರು 49 ಕೆಜಿ ನಿಂದ 52 ಕೆಜಿಗೆ ಭಡ್ತಿ ಪಡೆದ ನಂತರ ನಡೆದ ಮುಖ್ಯ ಕ್ರೀಡಾಕೂಟವಾದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

    ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 49 ಕೆ.ಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದೀಪಕ್ ಸಿಂಗ್ ಅವರು ಉಜ್ಬೇಕಿಸ್ತಾನ್ ಬಾಕ್ಸರ್ ಅವರಿಂದ ಪರಜಯಗೊಂಡು ಬೆಳ್ಳಿ ಪದಕ ಗಳಿಸಿದ್ದಾರೆ.

  • ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.

    ವಿಜೇಂದರ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷ ಸೋಮವಾರ ಘೋಷಣೆ ಮಾಡಿದೆ. ಹೀಗಾಗಿ ಬಿಜೆಪಿಯ ರಮೇಶ್ ಬಿಧುರಿ ಹಾಗೂ ಆಮ್ ಆದ್ಮಿ ಪಕ್ಷದ ರಾಘವ್ ಚಂದ್ರ ವಿರುದ್ಧ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

    ಈ ಬಗ್ಗೆ ವಿಜೇಂದರ್ ಕೂಡ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷ ಕೊಟ್ಟ ಅವಕಾಶ ಹಾಗೂ ಜವಾಬ್ದಾರಿಗಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    20 ವರ್ಷಗಳ ವೃತ್ತಿಪರ ಬಾಕ್ಸಿಂಗ್‍ನಲ್ಲಿ ಸದಾ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದ್ದೇನೆ. ಇದೀಗ ದೇಶದ ಜನರಿಗಾಗಿ ಕೊಡುಗೆ ಹಾಗೂ ಸೇವೆ ಸಲ್ಲಿಸಲು ಒಳ್ಳೆಯ ಸಂದರ್ಭ ಒದಗಿಬಂದಿದೆ. ಒಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಹೊಸ ಜವಾಬ್ದಾರಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಧುರಿ ಅವರು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದರು. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ ನಡೆಯಲಿದ್ದು, 23ಕ್ಕೆ ಫಲಿತಾಂಶ ಹೊರಬೀಳಲಿದೆ.

  • 35ನೇ ವಯಸ್ಸಿನಲ್ಲಿ 6ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    35ನೇ ವಯಸ್ಸಿನಲ್ಲಿ 6ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ 6ನೇ ಬಾರಿಗೆ ಚಿನ್ನದ ಜಯಿಸಿ ಅತಿಹೆಚ್ಚು ವಿಶ್ಚ ಚಾಂಪಿಯನ್‍ಶಿಪ್ ಜಯಿಸಿದ ದಾಖಲೆ ಹೊಂದಿರುವ ಕ್ಯೂಬಾ ದಂತಕಥೆ ಫೆಲಿಕ್ಸ್ ಸ್ಯಾವನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ವಿಶ್ವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ನ 45 ಕೆಜಿ ವಿಭಾಗದಲ್ಲಿ ಗುರುವಾರ ಫೈನಲ್ ಪ್ರವೇಶ ಮಾಡಿದ್ದ ಮೇರಿಕೋಮ್ ಇಂದು ಉಕ್ರೇನ್ ದೇಶದ ಎಚ್ ಓಖೋಟಾ ವಿರುದ್ಧ 5-0 ಅಂಕಗಳಿಂದ ಗೆಲುವು ದಾಖಲಿಸಿದರು.

    ವಿಶ್ವ ಬಾಕ್ಸಿಂಗ್ ಚಾಂಪಿಯನ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 6 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ. 2006 ರಲ್ಲಿ ಸ್ವದೇಶದಲ್ಲೇ ಚಿನ್ನದ ಪದಕ ಗೆದ್ದಿದ್ದ ಮೇರಿ ಕೋಮ್ 2ನೇ ಬಾರಿಗೆ ತವರಿನ ಅಭಿಮಾನಿಗಳ ಮುಂದೇ ಈ ಸಾಧನೆ ಮಾಡಿದ್ದಾರೆ. 2010 ರಲ್ಲಿ 48 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ ಮೇರಿ ಕೋಮ್ ಚಿನ್ನದ ಪದಕ ಪಡೆದಿದ್ದರು.

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಮೇರಿ ಕೋಮ್, ತನ್ನ ಈ ಸಾಧನೆಯನ್ನು ಹಾಗೂ ಪದಕವನ್ನು ದೇಶಕ್ಕೆ ಅರ್ಪಿಸುವುದಾಗಿ ತಿಳಿಸಿದರು. ಟೂರ್ನಿಯ ಸೆಮಿ ಫೈನಲ್‍ನಲ್ಲಿ ಗುರುವಾರ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನ ಎದುರಿಸಿದ್ದ ಗೆಲುವು ಪಡೆದಿದ್ದ ಮೇರಿ ಕೋಮ್ ಫೈನಲ್ ಪ್ರವೇಶಿಸಿದ್ದರು.

  • ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಜೀವನೋಪಾಯಕ್ಕಾಗಿ ಅರ್ಜುನ ಪ್ರಶಸ್ತಿ ವಿಜೇತನಿಂದ ಕುಲ್ಫಿ ಮಾರಾಟ!

    ಚಂಡೀಗಢ: ಬಾಕ್ಸಿಂಗ್ ನಲ್ಲಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದು 2010ರ ಅರ್ಜುನ ಪ್ರಶಸ್ತಿ ಪಡೆದಿದ್ದ ಬಾಕ್ಸರ್ ಇಂದು ಜೀವನೋಪಾಯಕ್ಕಾಗಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.

    ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಗೆದ್ದಿದ್ದ ದಿನೇಶ್ ಕುಮಾರ್ ಸದ್ಯ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಒಟ್ಟು 23 ಪದಕಗಳನ್ನು ಗೆದ್ದಿದ್ದು ಇದರಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಸ್ಪರ್ಧೆಯ ಪದಕಗಳು ಸೇರಿದೆ.

    2014 ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 30 ವರ್ಷದ ದಿನೇಶ್ ಕುಮಾರ್ ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಅವರ ಚಿಕಿತ್ಸೆಗಾಗಿ ಕುಟುಂಬ ಸಾಲ ಮಾಡಿತ್ತು. ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದಿನೇಶ್ ಅವರ ಬಾಕ್ಸಿಂಗ್ ವೃತ್ತಿ ಜೀವನ ಅಲ್ಲಿಗೆ ಅಂತ್ಯವಾಗಿತ್ತು. ಆದರೆ ಇದಕ್ಕೂ ಮುನ್ನವೇ ದಿನೇಶ್ ಅವರ ತಂದೆ ಮಗನನ್ನು ತರಬೇತಿಗೊಳಿಸಿ ಉತ್ತಮ ಬಾಕ್ಸರ್ ಆಗಿ ಮಾಡಲು ಸಾಕಷ್ಟು ಹಣ ವ್ಯಹಿಸಿದ್ದರು. ಆದರೆ ಅವರ ಕನಸು ಸಂಪೂರ್ಣವಾಗಿ ನನಸಾಗುವ ಮುನ್ನವೇ ದಿನೇಶ್ ಅವರ ಜೀವನದಲ್ಲಿ ಅವಘಡ ಸಂಭವಿಸಿತ್ತು.

    https://twitter.com/ANI/status/1056582298257317888?

    ಕುಟುಂಬ ಮೇಲೆ ದಿನದಿಂದ ದಿನಕ್ಕೆ ಚಿಕಿತ್ಸೆ ಹಾಗೂ ತರಬೇತಿಗಾಗಿ ಪಡೆದ ಸಾಲದ ಮೊತ್ತದ ಒತ್ತಡ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ದಿನೇಶ್ ತಂದೆಗೆ ಸಹಾಯ ಮಾಡಲು ಅವರೊಂದಿಗೆ ಬೀದಿ ಬೀದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಇವರಿಗೆ ಸರ್ಕಾರದ ವತಿಯಿಂದ ಯಾವುದೇ ಸಹಾಯಕೂಡ ಲಭ್ಯವಾಗಿಲ್ಲ. ಸರ್ಕಾರ ನನಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ದಿನೇಶ್ ಪ್ರತಿಕ್ರಿಯೆ ನೀಡಿದ್ದಾರೆ.

    ತನಗಾದ ಅಪಘಾತದಿಂದ ಬಾಕ್ಸಿಂಗ್ ವೃತ್ತಿ ಜೀವನ ಅಂತ್ಯವಾದರೂ ನನ್ನಲ್ಲಿರುವ ಬಾಕ್ಸಿಂಗ್ ಹಾಗೆಯೇ ಇದೆ. ತಾನು ಈಗಲೂ ಕಿರಿಯರಿಗೆ ಬಾಕ್ಸಿಂಗ್ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದೆನೆ. ಅದ್ದರಿಂದ ರಾಜ್ಯಮಟ್ಟದಲ್ಲಿ ತರಬೇತಿ ನೀಡಲು ಉದ್ಯೋಗ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ದಿನೇಶ್ ಅವರ ಕೋಚ್ ಕೂಡ ದಿನೇಶ್ ಅವರಿಗೆ ಬೆಂಬಲವಾಗಿದ್ದು, ಸರ್ಕಾರ ಈತನಿಗೆ ಒಂದು ಉತ್ತಮ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ನೋಯ್ಡಾ: ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಾಕ್ಸರ್‍ ವೊಬ್ಬರು ಬುಲೆಟ್ ಗಾಯದ ಗುರುತುಗಳೊಂದಿಗೆ ತನ್ನ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಹೇಳಿದ್ದಾರೆ.

    ಜಿತೇಂದ್ರ ಮನ್ (27) ಎಂಬವರ ಮೃತ ದೇಹ ನೋಯ್ಡಾದ ಅವರ ಅಪಾರ್ಟ್‍ಮೆಂಟ್ ನಲ್ಲಿ ದೊರೆತಿದೆ. ಜೂನಿಯರ್ ಲೆವೆಲ್ ಬಾಕ್ಸರ್ ಆಗಿದ್ದ ಜಿತೇಂದ್ರ 2006 ರಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಹರಿಯಾಣ ರಾಜ್ಯ ಬಾಕ್ಸರ್ ಅಸೋಸಿಯೇಷನ್ ನಲ್ಲಿ ನೋಂದಣಿಯಾಗಿದ್ದರು. ಏಳು ತಿಂಗಳ ಹಿಂದೆ ಗಾಯದ ಸಮಸ್ಯೆಯಿಂದ ಜಿತೇಂದ್ರ ಅವರು ಬಾಕ್ಸಿಂಗ್ ನಿಂದ ದೂರ ಉಳಿದು ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ರೆ ಕಳೆದ ಎರಡು ದಿನಗಳಿಂದ ಜಿಮ್ ಗೂ ಹೋಗಿರಲಿಲ್ಲ. ಜೊತೆಗೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

    ಜಿತೇಂದ್ರ ಅವರ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಕಳೆದ ಐದು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡು ಆಪಾರ್ಟ್ ಮೆಂಟ್ ಬಳಿ ಬಂದು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಜಿತೇಂದ್ರ ಅವರ ಫ್ಲಾಟ್ ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಬಾಗಿಲು ಒಡೆದು ಒಳಪ್ರವೇಶಿಸಿದ ಸಮಯದಲ್ಲಿ ಜಿತೇಂದ್ರ ರಕ್ತದ ಮಾಡುವಿನಲ್ಲಿ ಬಿದ್ದಿದ್ದನ್ನು ಕುಟುಂಬಸ್ಥರು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುನಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ಮುಂದುವರೆಸುವುದಾಗಿ ಪೊಲೀಸ್ ಉಪ ಅಧೀಕ್ಷಕ ಅಮೀತ್ ಕಿಶೋರ್ ತಿಳಿಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 302(ಕೊಲೆ) ರಡಿ ಸೂರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.