Tag: block

  • ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ

    ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ

    ನವದೆಹಲಿ: ಅದಾನಿ ಗ್ರೂಪ್‍ನ ವರದಿ ನಂತರ ಅಮೆರಿಕ ಮೂಲದ ಹಿಂಡೆನ್‍ಬರ್ಗ್ (Hindenburg) ರಿಸರ್ಚ್ ಇದೀಗ ಮಾಜಿ ಟ್ವಿಟ್ವರ್ ಸಿಇಒ ಹಾಗೂ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಸ್ಥಾಪಿಸಿದ ಪೇಮೆಂಟ್ ಕಂಪನಿಯಾದ ಬ್ಲಾಕ್ (Block) ವಿರುದ್ಧ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.

    ಹಿಂಡೆನ್‍ಬರ್ಗ್ ರಿಸರ್ಚ್ ಇದೀಗ ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ಲಾಕ್ ಇಂಕ್‌ನ ಮೇಲೆ ಕಣ್ಣಿಟ್ಟಿದ್ದೆವು. ಈ ಹಿಂದೆ ಬ್ಲಾಕ್ ಇಂಕ್ ಕಂಪನಿಯನ್ನು ಅನ್ನು ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿತ್ತು. ಬ್ಲಾಕ್ ಕಂಪನಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿವೆ. ಈ ಕಂಪನಿಯು ಹೂಡಿಕೆದಾರರಿಗೆ ತನ್ನ ಅಂಕಿ ಅಂಶಗಳ ಮಾಹಿತಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಬ್ಲಾಕ್‍ನಲ್ಲಿರುವ ಖಾತೆಗಳು 40 – 75% ನಕಲಿಯಾಗಿದೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ತಿಳಿಸಿದೆ.

    ಬ್ಲಾಕ್‍ನ ಮಾಜಿ ಉದ್ಯೋಗಿಗಳನ್ನು, ಇಂಡಸ್ಟ್ರಿಯ ಪರಿಣಿಯತರನ್ನೂ ಸಂದರ್ಶಿಸಲಾಗಿದ್ದು, ಕಂಪನಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದೆ.

    ವರದಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬ್ಲಾಕ್‍ನ ಷೇರು ದರ 20% ಕುಸಿದಿದೆ. ಜಾಕ್ ಡೋರ್ಸೆ ಒಡೆತನದ ಬ್ಲಾಕ್ ಕಂಪನಿಯು ಮೊಬೈಲ್ ಪೇಮೆಂಟ್ ಕಂಪನಿಯಾಗಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇದರ ಷೇರು ದರದಲ್ಲಿ 639% ಏರಿಕೆಯಾಗಿತ್ತು. ಇದನ್ನೂ ಓದಿ: ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಈ ಹಿಂದೆ ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

  • ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ, ಮುಡಿಸೇವೆ ಪ್ರಾರಂಭ

    ಇಂದಿನಿಂದ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ, ಮುಡಿಸೇವೆ ಪ್ರಾರಂಭ

    ಚಾಮರಾಜನಗರ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ದೇವಾಲಯದ ಎಲ್ಲ ಸೇವೆಗಳನ್ನು ಪುನರಾರಂಭಿಸಲಾಗಿದೆ.

    ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಸೋಹ ಮತ್ತು ಜಾತ್ರೆಗಳನ್ನು ಹೊರತುಪಡಿಸಿ, ನಡೆಯುತ್ತಿದ್ದ ದೈನಂದಿನ ಸಾಂಪ್ರದಾಯಿಕ ಸೇವೆಗಳನ್ನು ಪುನರಾರಂಭಿಸಲು ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲು ನಿಗಧಿಪಡಿಸಿದ್ದ ಕಾಲಮಿತಿ, ಭಕ್ತಾದಿಗಳ ವಾಸ್ತವ್ಯ ಮತ್ತು ಮುಡಿಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಇಂದಿನಿಂದ ಜಾರಿಗೆ ಬರುವಂತೆ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂಆರ್.ರವಿ ಆದೇಶ ಹೊರಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಬೆಳಿಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ, ಎಲ್ಲ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳು ಮಹದೇಶ್ವರನ ಭಕ್ತರಿಗೆ ಮುಕ್ತವಾಗಿವೆ. ಈ ಹಿಂದೆ ದೇವರ ದರ್ಶನ ವ್ಯವಸ್ಥೆ ಮಾತ್ರ ಇತ್ತು. ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವಂತಿರಲಿಲ್ಲ. ಇದೀಗ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು ಭಕ್ತರು ಎಂದಿನಂತೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿಸಬಹುದಾಗಿದೆ.

    12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶ ಇರುವುದಿಲ್ಲ. ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಇದ್ದ ದರ್ಶನ ಹಾಗೂ ಎಲ್ಲ ಸೇವೆಗಳನ್ನು ಬೆಳಿಗ್ಗೆ 4 ರಿಂದ ರಾತ್ರಿ 10ರವರೆಗೆ ವಿಸ್ತರಿಸಲಾಗಿದೆ. ದಾಸೋಹದಲ್ಲಿ ಹಾಲಿ ಇರುವ ತಿಂಡಿ ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ ಭಕ್ತರು ಜಾತಕಪಕ್ಷಿಯಂತೆ ಕಾಯುತ್ತಿದ್ದ ಮುಡಿಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

    ಅಲ್ಲದೆ ರಾತ್ರಿ ದೇವಾಲಯದ ವಸತಿಗೃಹಗಳಲ್ಲಿ ತಂಗುವ ವ್ಯವಸ್ಥೆ ಪ್ರಾರಂಭವಾಗಿದೆ. ಕಾಟೇಜು, ಡಾರ್ಮಿಟರಿಗಳನ್ನೂ ಸಹಾ ನೀಡಲಾಗುವುದು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ.

  • ಸಿನಿಮಾ ಪೈರಸಿ – ತಮಿಳ್ ರಾಕರ್ಸ್ ವೈಬ್‍ಸೈಟ್ ಸಂಪೂರ್ಣ ಬ್ಲಾಕ್

    ಸಿನಿಮಾ ಪೈರಸಿ – ತಮಿಳ್ ರಾಕರ್ಸ್ ವೈಬ್‍ಸೈಟ್ ಸಂಪೂರ್ಣ ಬ್ಲಾಕ್

    ನವದೆಹಲಿ: ಸಿನಿಮಾ ಪೈರಸಿ ವಿಚಾರವಾಗಿ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದ್ದ ತಮಿಳ್ ರಾಕರ್ಸ್ ವೈಬ್‍ಸೈಟ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ.

    ಇತ್ತೀಚೆಗೆ ಅಮೆಜಾನ್ ಇಂಟರ್ ನ್ಯಾಷನಲ್ ಈ ಪೈರಸಿ ವೆಬ್‍ಸೈಟ್ ವಿರುದ್ಧ ಎರಡು ಬಾರಿ ಡಿಎಂಸಿಎ (ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್)ಗೆ ವರದಿಗಳನ್ನು ಸಲ್ಲಿಸಿತ್ತು. ಈ ಕಾರಣದಿಂದ ಈ ಪೈರಸಿ ವೆಬ್‍ಸೈಟ್ ಅನ್ನು ಅಂತರ್ಜಾಲ ನಿರ್ದಿಷ್ಟ ಹೆಸರು ಮತ್ತು ಸಂಖ್ಯೆಯ ಕಾರ್ಪೊರೇಷನ್ (ಐಸಿಎಎನ್‍ಎನ್) ನೋಂದಾವಣೆಯಿಂದ ತೆಗೆದುಹಾಕಲಾಗಿದೆ.

    ಸಿನಿಮಾಗಳು ಬಿಡುಗಡೆಯಾದ ಮರುದಿನವೇ ಪೈರಸಿ ಮಾಡುತ್ತಿದ್ದ ತಮಿಳ್ ರಾಕರ್ಸ್ ಅನ್ನು ಅಂತಿಮವಾಗಿ ನಿರ್ಬಂಧಿಸಲಾಗಿದೆ. ತಮಿಳು ರಾಕರ್ಸ್ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲೆಯಾಳಂ, ಕನ್ನಡ ಮತ್ತು ಇತರ ಭಾಷೆಯ ಚಲನಚಿತ್ರಗಳನ್ನು ಬಿಡುಗಡೆಯಾದ ಮರುದಿನೇ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡುತ್ತಿತ್ತು. ಜೊತೆಗೆ ತನ್ನ ಸೈಟಿನ ಡೊಮೇನ್ ಅನ್ನು ಹೊಸ ಲಿಂಕ್‍ಗೆ ಪದೇ ಪದೇ ಬದಲಾಯಿಸುತ್ತಾ ಇಷ್ಟು ದಿನ ಅಕ್ರಮವಾಗಿ ಪೈರಸಿ ಮಾಡುತ್ತಾ ಬಂದಿತ್ತು.

    ಆದರೆ ಈಗ ಐಸಿಎಎನ್‍ಎನ್ ತಮಿಳ್ ರಾಕರ್ಸ್ ಲಿಂಕ್ ಅನ್ನೇ ಕಿತ್ತು ಹಾಕಿದೆ. ಈಗ ಈ ವೆಬ್‍ಸೈಟ್ ಕೆಲಸ ಮಾಡುತ್ತಿಲ್ಲ. ಭಾರತದ ಚಿತ್ರರಂಗದಲ್ಲೇ ತಮಿಳು ಚಿತ್ರರಂಗ ಈ ವೆಬ್‍ಸೈಟಿ ಹಾವಳಿಗೆ ಹೆಚ್ಚು ಬಲಿಯಾಗಿತ್ತು. ಹಲವಾರು ಸಿನಿಮಾ ನಿರ್ಮಾಪಕರು ಇದರಿಂದ ತೊಂದರೆಗೆ ಸಿಲುಕಿದ್ದರು. ಜೊತೆಗೆ ಕನ್ನಡದಲ್ಲೂ ಹಲವಾರು ಸಿನಿಮಾಗಳು ಈ ವೆಬ್‍ಸೈಟಿನಲ್ಲಿ ಪೈರಸಿ ಆಗಿದ್ದವು. ಇದರ ವಿರುದ್ಧ ಕೆಲ ಕನ್ನಡ ನಿರ್ಮಾಪಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

  • ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಬೀಜಿಂಗ್‌: ಭಾರತ ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಟಿಕ್‌ಕಂಪನಿಯ ಮಾತೃಸಂಸ್ಥೆಗೆ 6 ಶತಕೋಟಿ ಡಾಲರ್‌(ಅಂದಾಜು 45 ಸಾವಿರ ಕೋಟಿ ರೂ.) ನಷ್ಟ ಉಂಟಾಗಲಿದೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌, ಟಿಕ್‌ಟಾಕ್‌ ಕಂಪನಿಯ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ಗೆ ಭಾರತದ ಸರ್ಕಾರದ ನಿರ್ಧಾರದಿಂದಾಗಿ 6 ಶತಕೋಟಿ ಡಾಲರ್‌ ನಷ್ಟ ಉಂಟಾಗಲಿದೆ. ಭಾರತ, ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ ಎಂದು ಟ್ವೀಟ್‌ ಮಾಡಿದೆ.

    ವಿಶೇಷ ಏನೆಂದರೆ ಟಿಕ್‌ಟಾಕ್‌ಗೆ ಭಾರತದಿಂದ ಹೆಚ್ಚು ಆದಾಯ ಏನು ಬರುವುದಿಲ್ಲ. ಆದರೆ ಅತಿ ಹೆಚ್ಚು ಡೌನ್‌ಲೋಡ್‌ ಮಾಡಿದ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು 1 ಶತಕೋಟಿ ಡಾಲರ್‌ ಹಣವನ್ನು ಹೂಡಿಕೆ ಮಾಡಿತ್ತು. 2018ರಿಂದ ಆರಂಭಗೊಂಡ ಟಿಕ್‌ಟಾಕ್‌ ಅನ್ನು ಭಾರತದಲ್ಲಿ 20 ಕೋಟಿ ಜನ ಬಳಕೆ ಮಾಡುತ್ತಿದ್ದರು.

    ಬೈಟ್‌ಡ್ಯಾನ್ಸ್‌ ಕಂಪನಿ ಚೀನಾದಲ್ಲಿ ಟೌಟಿಯಾವೊ ಹೆಸರಿನಲ್ಲಿ ಸುದ್ದಿ ಸಂಸ್ಥೆಯನ್ನು ತೆರೆದಿದೆ. ಇದರ ಜೊತೆಗೆ ಬುಝ್‌ ವಿಡಿಯೋ, ವಿಗೋ ವಿಡಿಯೋ, ಹೆಲೋ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ಭಾರತದ ಡಿಜಿಟಲ್ ಸ್ಟ್ರೈಕ್‌ಗೆ ಗೂಗಲ್‌ನಿಂದ ಬಂತು ಮೊದಲ ಪ್ರತಿಕ್ರಿಯೆ

    ನವದೆಹಲಿ: ಚೀನಾದ 59 ಅಪ್ಲಿಕೇಶನ್‌ಗಳು ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದ ಬಳಿಕ ಮೊದಲ ಬಾರಿಗೆ ಗೂಗಲ್‌ ಪ್ರತಿಕ್ರಿಯೆ ನೀಡಿದೆ.

    ಭಾರತ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಡೆವಲಪರ್‌ಗಳಿಗೆ ಮಾಹಿತಿ ನೀಡಿದ್ದು, ಈ ಅಪ್ಲಿಕೇಶನ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿದ್ದೇವೆ ಎಂದು ಗೂಗಲ್‌ ವಕ್ತಾರರು ತಿಳಿಸಿದ್ದಾರೆ.

    ಗೂಗಲ್‌ ವಕ್ತಾರರು ಎಷ್ಟು ಅಪ್ಲಿಕೇಶನ್‌ ಬ್ಲಾಕ್‌ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಆದರೆ ಡೆವಲಪರ್‌ಗಳೇ ಕೆಲ ಅಪ್ಲಿಕೇಶನ್‌ಗಳನ್ನೆ ಪ್ಲೇ ಸ್ಟೋರ್‌ನಿಂದ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೀಗಿದ್ದರೂ ಕೆಲವೊಂದು ಅಪ್ಲಿಕೇಶನ್‌ಗಳು ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ವಿಬೋ, ಎಸ್‌ ಫೈಲ್‌ ಎಕ್ಸ್‌ಪ್ಲೋರರ್‌, ಯುಕ್ಯಾಮ್‌ ಮೇಕ್‌, ಕ್ಯೂಕ್ಯೂ ಆ್ಯಪ್‌ಗಳು  ಈಗಲೂ ಪ್ಲೇ ಸ್ಟೋರ್‌ನಲ್ಲಿದೆ. ಈ ಅಪ್ಲಿಕೇಶನ್‌ಗಳು ಡೌನ್‌ಲೋಡ್‌ ಮಾಡಿದರೆ ಪೂರ್ಣವಾಗಿ ಕೆಲಸ ಮಾಡುತ್ತದೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಬೀಜಿಂಗ್‌: ಚೀನಾದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲ ಎನ್ನುವುದು ಪ್ರಪಂಚಕ್ಕೆ ಗೊತ್ತಿದೆ. ಆದರೆ ಈಗ ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್‌ಸೈಟ್‌ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳ ಮೇಲೆ ಸೆನ್ಸಾರ್‌ ‌ ಕತ್ತರಿ ಪ್ರಯೋಗಿಸಿದೆ.

    ಹೌದು. ಭಾರತದಲ್ಲಿ ಚೀನಾದ ಎಲ್ಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಅವಕಾಶವಿದೆ. ಆದರೆ ಚೀನಾದಲ್ಲಿ ಭಾರತದ ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ ಅನ್ನು ಸುಲಭವಾಗಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

    ಇಲ್ಲಿಯವರೆಗೆ ಚೀನಾದ ಮಂದಿ ವಿಪಿಎನ್‌(ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌) ಸರ್ವರ್‌ ಮೂಲಕ ಭಾರತದ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಈಗ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿದೆ.

    ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಎಕ್ಸ್‌ಪ್ರೆಸ್‌ವಿಪಿಎನ್‌ ಫೋನ್‌ ಮತ್ತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿಲ್ಲ. ತಂತ್ರಜ್ಞಾನದಲ್ಲಿ ಮುಂದುವರಿದಿರುವ ಚೀನಾದ ಶಕ್ತಿಶಾಲಿ ಫೈರ್‌ವಾಲ್‌ ಸೃಷ್ಟಿಸಿ ವಿಪಿಎನ್‌ಗಳನ್ನೇ ಬ್ಲಾಕ್‌ ಮಾಡುವಲ್ಲಿ ಯಶಸ್ವಿಯಾಗಿದೆ.

    ಸೋಮವಾರ ಭಾರತ ಸರ್ಕಾರ ದೇಶದ ಪ್ರಜೆಗಳ ಪ್ರೈವೆಸಿ ಕಾರಣ ನೀಡಿ ಚೀನಾದ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಆದರೆ ಭಾರತದ ಈ ನಿರ್ಧಾರಕ್ಕೂ ಮೊದಲೇ ಚೀನಾ ವಿಪಿಎನ್‌ ಬ್ಲಾಕ್‌ ಮಾಡಿತ್ತು.

    ಇಂಟರ್‌ನೆಟ್‌ ಸೆನ್ಸಾರ್‌ ‌ ಮಾಡುವ ವಿಚಾರದಲ್ಲಿ ವಿಶ್ವದಲ್ಲೇ ಚೀನಾ ಸದಾ ಮುಂದು. ಈಗಾಗಲೇ ಇಲ್ಲಿ ಫೇಸ್‌ಬುಕ್‌, ವಾಟ್ಸಪ್‌, ಯೂಟ್ಯೂಬ್‌ಗಳು ಸೇರಿದಂತೆ ಹಲವು ತಾಣಗಳು ನಿಷೇಧವಾಗಿದೆ. ಸುದ್ದಿ ತಾಣಗಳಾದ ಬ್ಲೂಮ್‌ ಬರ್ಗ್‌, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌, ನ್ಯೂಯಾರ್ಕ್‌ ಟೈಮ್ಸ್‌ ಸಹ ಬ್ಲಾಕ್‌ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

    ಚೀನಾ ತನ್ನದೇ ಆದ ಮಸೇಜಿಂಗ್‌ ಅಪ್ಲಿಕೇಶನ್‌ ಮತ್ತು ಸಾಮಾಜಿಕ ಜಾಲತಾಣವನ್ನು ಹೊಂದಿದ್ದು ಇದರಲ್ಲೂ ದೇಶದ ವಿರುದ್ಧ ಕಮೆಂಟ್‌ ಮಾಡಿದರೆ ಸೆನ್ಸರ್‌ ಮಾಡುತ್ತದೆ. ತನ್ನ ವಿರುದ್ಧ ಯಾವುದೇ ಟೀಕೆಗಳನ್ನು ಚೀನಾ ಸಹಿಸುವುದಿಲ್ಲ. ಟೀಕೆ ಮಾಡುವ ವೆಬ್‌ಸೈಟ್‌ಗಳ ಯುಆರ್‌ಎಲ್‌ಗಳನ್ನು ಚೀನಾ ʼಗ್ರೇಟ್‌ ಫೈರ್‌ವಾಲ್‌ʼ ಮೂಲಕ ಬ್ಲಾಕ್‌ ಮಾಡಿಸುತ್ತದೆ.

    ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ನಲ್ಲಿ ಕಳೆದ ನವೆಂಬರ್‌ನಲ್ಲಿ ಬರೆಯಲಾದ ಅಂಕಣದ ಮಾಹಿತಿ ಪ್ರಕಾರ, 10 ಸಾವಿರ ವೆಬ್‌ಸೈಟ್‌ಗಳನ್ನು ಚೀನಾ ಬ್ಲಾಕ್‌ ಮಾಡಿದೆ. ಚೀನಾ ಸರ್ಕಾರ ಐಪಿ ಅಡ್ರೆಸ್‌, ಯುಆರ್‌ಲ್‌, ಕೀ ವರ್ಡ್‌ಗಳನ್ನು ಸಹ ಬ್ಲಾಕ್‌ ಮಾಡುತ್ತದೆ. ಕೋವಿಡ್‌ 19 ಆರಂಭದಲ್ಲಿ ಈ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳು ಶೇರ್‌ ಆಗದಂತೆ ತಡೆಯಲು ಕೆಲವು ಕೀ ವರ್ಡ್‌ಗಳನ್ನು ತನ್ನ ಬ್ಲಾಕ್‌ ಮಾಡಿ ಸರ್ಚ್‌ ಆಗದಂತೆ ನೋಡಿಕೊಂಡಿತ್ತು.

    ಲಡಾಖ್‌ ಗಡಿಯಲ್ಲಿ ಭಾರತೀಯ ಸೇನೆ ಚೀನಾದ ಪಿಎಲ್‌ಎ ಯೋಧರಿಗೆ ಬಿಸಿ ಮುಟ್ಟಿಸಿದ ಬಳಿಕ ಭಾರತದ ವೆಬ್‌ಸೈಟ್‌ಗಳಲ್ಲಿ ಚೀನಾದ ಕೃತ್ಯಗಳು ಬಯಲಾಗುತ್ತಿದೆ. ಅಷ್ಟೇ ಅಲ್ಲದೇ ಚೀನಾ ಯಾವೆಲ್ಲ ದೇಶಗಳ ಜೊತೆ ಕಿರಿಕ್‌ ಮಾಡಿದೆ ಅವುಗಳ ಬಗ್ಗೆ ದೀರ್ಘವಾದ ಬರಹಗಳು ಪ್ರಕಟವಾಗುತ್ತಿದೆ. ಈ ಬರಹಗಳು ತನ್ನ ಪ್ರಜೆಗಳ ಮೇಲೆ ಪ್ರಭಾವ ಉಂಟುಮಾಡುವ ಸಾಧ್ಯತೆ ಇರುವ ಕಾರಣ ಚೀನಾ ಈಗ ಭಾರತ ವೆಬ್‌ಸೈಟ್‌ಗಳು ಓಪನ್‌ ಆಗದಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

    ಗಲ್ವಾನ್‌ ಘರ್ಷಣೆಯ ಬಳಿಕ ಚೀನಾ ಸರ್ಕಾರದ ಮುಖವಾಣಿಯಾಗಿರುವ ಗ್ಲೋಬಲ್‌ ಟೈಮ್ಸ್‌ ಪ್ರತಿ ದಿನವೂ ಭಾರತದ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಇದಕ್ಕೆ ಭಾರತೀಯರು ಗ್ಲೋಬಲ್‌ ಟೈಮ್ಸ್‌ ಟ್ವೀಟ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡಿ ಅಲ್ಲೇ ಚೀನಾದ ಬಣ್ಣವನ್ನು ಬಯಲು ಮಾಡುತ್ತಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    – ನಿಜ ನೀನು ತುಂಬ ಕಿರಿಕಿರಿ ಮಾಡ್ತಿಯಾ

    ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ ವ್ಯಂಗ್ಯವಾಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಒಂದು ಕಾಲದ ಆರ್.ಸಿ.ಬಿ ಸಹ ಆಟಗಾರರಾದ ಚಹಲ್ ಮತ್ತು ಗೇಲ್ ಲೈವ್ ಬಂದು ಮಾತನಾಡಿದ್ದಾರೆ.

    https://www.instagram.com/p/B_HyhuGhfbn/

    ಈ ವೇಳೆ ಗೇಲ್, ನಾನು ಟಿಕ್‍ಟಾಕ್ ಕಂಪನಿಯವರಿಗೆ ನಿನ್ನನ್ನು ಬ್ಲಾಕ್ ಮಾಡಲು ಮನವಿ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ನೀನು ಸಖತ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದೀಯಾ. ನೀನು ಈಗಲೇ ಸಾಮಾಜಿಕ ಜಾಲತಾಣದಿಂದ ಹೊರಗೆ ಹೋಗಬೇಕು. ನಮಗೆ ಸಾಕಾಗಿದೆ ಚಹಲ್ ಮತ್ತೆ ನಿನ್ನನ್ನು ನನ್ನ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡಲು ಇಷ್ಟವಿಲ್ಲ. ನಾನು ನಿನ್ನನ್ನು ಬ್ಲಾಕ್ ಮಾಡುತ್ತೇನೆ ಎಂದು ಚಹಲ್ ಅವರನ್ನು ಟೀಕಿಸಿದ್ದಾರೆ.

    ಕ್ರಿಸ್ ಗೇಲ್ ಮತ್ತು ಚಹಲ್ ಅವರು ಒಂದು ಕಾಲದಲ್ಲಿ ಆರ್.ಸಿ.ಬಿ ಸಹ ಆಟಗಾರಗಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ಫನ್ನಿಯಾಗಿ ಆಡುತ್ತಿದ್ದ ಗೇಲ್ ಮತ್ತು ಚಹಲ್ ಜೋಡಿ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸದಾ ಸಕ್ರಿಯವಾಗಿ ಇರುತ್ತಿದ್ದರು.

  • ಇಂದು ಸಂಜೆಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

    ಇಂದು ಸಂಜೆಯಿಂದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

    ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆ ಇವತ್ತು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ಇಂದು ರಾತ್ರಿ 7 ರಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಉತ್ತನಹಳ್ಳಿ ಗೇಟ್, ದೈವೀವನ ಗೇಟ್, ಲಲಿತಮಹಲ್ ಗೇಟ್ ಹಾಗೂ ಪಾದದ ಬಳಿ ಇರುವ ಮಾರ್ಗಗಳು ಬಂದ್ ಮಾಡಲಾಗುತ್ತದೆ. ತಾವರೆಕಟ್ಟೆ ಗೇಟ್‍ನಲ್ಲೂ ಇಂದು ರಾತ್ರಿ 9 ರಿಂದ ನಾಳೆ ಬೆಳಿಗ್ಗೆ 6 ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ.

    ರಾತ್ರಿ ವೇಳೆ ಮೋಜು ಮಸ್ತಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ. ಚಾಮುಂಡಿಬೆಟ್ಟಕ್ಕೆ ಬರುವವರು ಅರಣ್ಯ ಪ್ರದೇಶಕ್ಕೆ ಹೋಗುವ ಸಾಧ್ಯತೆ ಇದ್ದು, ಈ ವೇಳೆ ಅಪರಾಧ ಪ್ರಕರಣಗಳು ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

  • ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ತುಮಕೂರು: ದಲಿತರಿಗೆ ಪ್ರವೇಶ ನಿರಾಕರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಗ್ರಾಮಕ್ಕೆ ಇಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅದ್ಧೂರಿ ಸ್ವಾಗತದೊಂದಿಗೆ ಪ್ರವೇಶಿಸಿದ್ದಾರೆ.

    ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಈ ಹಿಂದೆ ಸಂಸದರು ದಲಿತ ಸಮುದಾಯಕ್ಕೆ ಸೇರಿದವರೆಂದು ಗ್ರಾಮದ ಒಳಗೆ ಪ್ರವೇಶಿಸಲು ಗ್ರಾಮಸ್ಥರು ನಿರಾಕರಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹಲವು ಸ್ವಾಮೀಜಿಗಳು ಸಹ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರನ್ನು ಆಹ್ವಾನಿಸಿ, ಅದ್ಧೂರಿ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು.

    ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ನಾರಾಯಣಸ್ವಾಮಿ, ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಕೆಲವರು ಈ ಘಟನೆಯಿಂದ ನಮ್ಮ ನಡುವೆ ಕಂದಕ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಅಭಿವೃದ್ಧಿ ವಂಚಿತ ಗೊಲ್ಲರಹಟ್ಟಿ ಗ್ರಾಮಗಳ ಸಮೀಕ್ಷೆ ಮಾಡಲು ಬಂದಿದ್ದೆ. ಹಸಿವಿಗೆ ಜಾತಿ ಇಲ್ಲ. ಶಿಕ್ಷಣದ ಹಸಿವು ಇರಬಹುದು. ಆದರೆ ಹಸಿವಿಗೆ ಮಾನವೀಯತೆಯ ಸ್ಪರ್ಶ ಕೊಡಬೇಕು. ನಾನು ಆಗಮಿಸಿದ ಸಂದರ್ಭದಲ್ಲಿ ಇಲ್ಲಿಯ ಜನರು ಹಠ, ದಬ್ಬಾಳಿಕೆಯಿಂದ ಮಾತನಾಡಲಿಲ್ಲ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಸಂಸದ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

    ಇಂತಹ ಕೆಲಸ ಸ್ವಾಮೀಜಿಗಳಿಂದ ಹಿಡಿದು ಎಲ್ಲ ವರ್ಗದ ಜನರಿಂದ ನಡೆಯಬೇಕು. ನಾವುಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮುಖ್ಯವಾಹಿನಿಯಿಂದ ಹಿಂದೆ ಇದ್ದರೆ ಅಂಥ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು. ನಾನು ಪ್ರಗತಿಪರ ಚಿಂತಕ, ಸಮಾಜ ಸುಧಾರಣೆ ಮಾಡುವುದು ನನ್ನ ಗುರಿ. ಯಾರಿಗೆ ಯಾವ ಯೋಜನೆ ಸಿಗಬೇಕೋ ಅಂತಹವರಿಗೆ ಅದು ತಲುಪಲೇಬೇಕೆಂಬುದು ನನ್ನ ಆದ್ಯತೆ. ಹೀಗಾಗಿ ಗ್ರಾಮಕ್ಕೆ ಆಗಮಿಸಿದ್ದೆ. ಆದರೆ ಅನೇಕ ಕಡೆ ಈ ಘಟನೆ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ದ್ವೇಷ ಹುಟ್ಟಿಸುವ ಕೆಲಸ ಆಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಕಂಟಕ. ಹೀಗಾಗಿ ಸ್ವಾಮೀಜಿಗಳ ಬಳಿ ಮಾತನಾಡಿದ್ದೆ. ಸಮಾಜದ ನಡುವೆ ಇಂತಹ ಕಂದಕ ನೋಡಿಕೊಂಡು ಇರುವವರು ನಿಜವಾದ ಅಪರಾಧಿ. ಅಂಥ ಸಮಾಜವನ್ನು ಎಚ್ಚರಿಸುವವನೇ ನಿಜವಾದ ದಾರ್ಶನಿಕ, ನಿಜವಾದ ಸ್ವಾಮೀಜಿ. ಈ ಘಟನೆಯಿಂದ ಗೊಲ್ಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈ ಗ್ರಾಮದ ಹಿರಿಯರಿಗೆ ವಂದಿಸುತ್ತೇನೆ. ದೇಶ ಕಟ್ಟಲು ಎಲ್ಲರ ಸಹಕಾರ ಬೇಕು. ಮೋದಿ ಅಥವಾ ಅಮಿತ್ ಶಾ ಮಾತ್ರ ದೇಶ ಕಟ್ಟಿಲ್ಲ ಅಥವಾ ಇಂದಿರಾ ಗಾಂಧಿ ಮಾತ್ರ ದೇಶ ಕಟ್ಟಿಲ್ಲ. ದೇಶದ 120 ಕೋಟಿ ಜನರು ದೇಶ ಕಟ್ಟಲು ಪಾಲುದಾರರು ಎಂದು ತಿಳಿಸಿದರು.

    ಈ ಹಿಂದೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿ ಅವರು ಪ್ರವೇಶಿಸದಂತೆ ಅಡ್ಡಿಪಡಿಸಲಾಗಿತ್ತು. ಇಂದು ಗೊಲ್ಲರಹಟ್ಟಿಯಲ್ಲಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ನಿರ್ಮಿಸಿ ಸಂಸದರನ್ನು ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರ ಜೊತೆಗೆ ಶ್ರೀ ಈಶ್ವರನಂದಪುರಿ ಸ್ವಾಮಿಜಿ, ಶ್ರೀ ಕೃಷ್ಣ ಯಾದವನಾಂದ ಸ್ವಾಮಿಜಿ, ಡಾ. ಶ್ರೀ ಶಾಂತವೀರ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‍ಪಿ ಕೆ.ವಂಶಿಕೃಷ್ಣ, ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

    ಏನಿದು ಘಟನೆ?
    ಗುಡಿಸಲು ಮುಕ್ತ ಯೋಜನೆ ರೂಪಿಸಲು ಗ್ರಾಮಕ್ಕೆ ಆಗಮಿಸಿದ್ದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯ ಒಳಗಡೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ್ದರು.

    ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದರು. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿಯೊಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದರು. ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಗೆ ಬಿಟ್ಟುಕೊಂಡಿರಲಿಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದವರಿಗೆ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗುವುದು ಬೇಡ ಎಂದು ನಾರಾಯಣಸ್ವಾಮಿಯವರಿಗೆ ಸಮಾಧಾನಪಡಿಸಿದ್ದರು.

    ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಕಥೆ ಕಟ್ಟಿದ್ದರು. ಇಷ್ಟೆಲ್ಲ ಅವಮಾನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಅರ್ಧ ಗಂಟೆ ಕಾರಿನಲ್ಲೇ ಕುಳಿತುಕೊಂಡಿದ್ದರು.

    ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆಯದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದ್ದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ವಾಪಾಸ್ ಹೋಗಿದ್ದರು.

  • ನನ್ನನ್ನು ಬ್ಲಾಕ್ ಮಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನನ್ನನ್ನು ಬ್ಲಾಕ್ ಮಾಡಿ ಎಂದ ಅಭಿಮಾನಿಗೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನವದೆಹಲಿ: ಅಂತರಧರ್ಮಿಯ ವಿವಾಹವಾಗಿದ್ದ ದಂಪತಿಗೆ ಪಾಸ್‍ಪೋರ್ಟ್ ನೀಡುವ ವಿಚಾರದಲ್ಲಿ ಟ್ರೋಲ್ ಆಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

    ಅಂದಹಾಗೆ ಸುಷ್ಮಾ ಸ್ವರಾಜ್ ಅವರ ನಡೆಯನ್ನು ವಿರೋಧಿಸಿದ್ದ ಸೋನಮ್ ಎಂಬವರು ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಆದರೆ ಅವರ ಟ್ವೀಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ಎಂಬಂತೆ ಅವರನ್ನು ಬ್ಲಾಕ್ ಮಾಡಿ ತಿರುಗೇಟು ನೀಡಿದ್ದರು. ಆದರೆ ಅವರನ್ನು ಬ್ಲಾಕ್ ಮಾಡಿ ಬಳಿಕ ಟ್ವೀಟಿಗರು ಮತ್ತೊಮ್ಮೆ ಟ್ರೋಲ್ ಮಾಡಿದ್ದು, ನಮ್ಮನ್ನು ಬ್ಲಾಕ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ಸೋನಮ್ ತಮ್ಮ ಟ್ವೀಟ್ ನಲ್ಲಿ, ಉತ್ತಮ ಆಡಳಿತ ನೀಡಲು ಬಂದಿದ್ದರು. ನೋಡಿ ಸದ್ಯ ಉತ್ತಮ ದಿನಗಳು ಬಂದಿದೆ. ಸುಷ್ಮಾ ಅವರೇ ನಾನು ನಿಮ್ಮ ಅಭಿಮಾನಿಯಾಗಿದ್ದು, ನಿಮ್ಮನ್ನು ವಿರೋಧಿಸುತ್ತೇನೆ. ಈಗ ನೀವು ನನ್ನನ್ನು ಬ್ಲಾಕ್ ಮಾಡುವ ಮೂಲಕ ಉತ್ತಮ ಬಹುಮಾನ ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ಗೂ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಇದಕ್ಕಾಗಿ ಏಕೆ ಕಾಯುತ್ತೀರಿ? ನಿಮ್ಮನ್ನು ಬ್ಲಾಕ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡುವ ಮಂದಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

    ಈ ಹಿಂದೆ ಇಸ್ಲಾಮಿಕ್ ಕಿಡ್ನಿ ಪಡೆದಿರುವ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ ಎಂದು ಕೆಲ ಮಂದಿ ನಿಂದಿಸಿ ಟ್ರೋಲ್ ಮಾಡಿದ್ದರು. ಈ ವೇಳೆ ಟ್ವಿಟ್ಟರ್ ಪೋಲ್ ನಡೆಸಿದ್ದ ಸುಷ್ಮಾ ಅವರು ಇಂತಹ ಟ್ವೀಟ್‍ಗಳನ್ನು ನೀವು ಇಷ್ಟ ಪಡುತ್ತೀರಾ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದರು. ಪೋಲ್ ನಲ್ಲಿ ಸುಷ್ಮಾ ಸ್ವರಾಜ್ ಅವರ ಪರ 57% ಮಂದೊ ವೋಟ್ ಹಾಕಿ ಬೆಂಬಲ ಸೂಚಿಸಿದ್ದರು.

    https://twitter.com/AsYouNotWish/status/1013771459615813632

    ಟ್ರೋಲ್ ಮಾಡುವವರಿಗೆ ಪೋಲ್ ನೀಡುವ ಮೂಲಕ ಸುಷ್ಮಾ ಸ್ವರಾಜ್ ಉತ್ತರ ನೀಡಿದ ಬಳಿಕವೂ ಅವರ ವಿರುದ್ಧ ಹಲವರು ಟ್ರೋಲ್ ಮಾಡುತ್ತಲೇ ಇದ್ದರು. ಈ ಕುರಿತು ಹಲವರು ರಾಜಕೀಯ ನಾಯಕರು ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದರು. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಟ್ವೀಟ್ ಮಾಡಿ, ಸುಷ್ಮಾ ಅವರ ಹಿರಿಯ ರಾಜಕಾರಿಣಿ, ಅವರ ವಿರುದ್ಧ ಬಳಕೆ ಮಾಡುತ್ತಿರುವ ಭಾಷೆಯನ್ನು ವಿರೋಧಿಸುವುದಾಗಿ ಹೇಳಿದ್ದರು.

    ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಸಹ ತಮ್ಮ ಸಂಪುಟ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಲಾಗುತ್ತಿದ್ದ ಭಾಷೆಯನ್ನು ಖಂಡಿಸಿ ಸುಷ್ಮಾ ರ ಬೆಂಬಲಕ್ಕೆ ನಿಂತಿದ್ದರು.