Tag: BJP government

  • ಸಂಪುಟ ರಚನೆಗೂ ಮುನ್ನವೇ ಇಂಧನ ಖಾತೆಯ ಮೇಲೆ ಶಾಸಕ ನಾಗೇಶ್ ಕಣ್ಣು

    ಸಂಪುಟ ರಚನೆಗೂ ಮುನ್ನವೇ ಇಂಧನ ಖಾತೆಯ ಮೇಲೆ ಶಾಸಕ ನಾಗೇಶ್ ಕಣ್ಣು

    ಕೋಲಾರ: ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಸಂಪುಟ ರಚನೆಯ ಕುರಿತು ಕಸರತ್ತು ನಡೆಸುತ್ತಿದ್ದರೆ ಇತ್ತ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಇಂಧನ ಖಾತೆಯ ಮೇಲೆ ಕಣ್ಣು ಹಾಕಿದ್ದಾರೆ.

    ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಇಂಧನ ಖಾತೆಗಾಗಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ರೇವಣ್ಣ ಅವರ ನಡುವೆ ಪೈಪೋಟಿ ನಡೆದಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ಖಾತೆಯನ್ನು ನಾನೇ ನಿಭಾಯಿಸುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಂಡಿದ್ದರು. ಈಗ ಬಿಜೆಪಿ ಸರ್ಕಾರ ಬಂದ ಮೇಲೂ ಇಂಧನ ಖಾತೆ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ. ಅದರಲ್ಲೂ ಪಕ್ಷೇತರ ಶಾಸಕ ನಾಗೇಶ್ ಬಹಿರಂಗವಾಗಿಯೇ ಈ ಖಾತೆ ನೀಡಿದರೆ ಉತ್ತಮವಾಗಿ ಕೆಲಸ ಮಾಡಬಲ್ಲೆ ಎಂದು ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ನಾಗೇಶ್ ಅವರೇ ಬಾಯಿಬಿಟ್ಟಿದ್ದಾರೆ. ಸಚಿವರಾಗಲು ಎಲ್ಲರಿಗೂ ಆಸೆ ಇರುತ್ತದೆ. ಕಳೆದ ಬಾರಿ ಸಣ್ಣ ಕೈಗಾರಿಕೆ ಸಚಿವನಾಗಿದ್ದೆ. ಈ ಬಾರಿ ಒಳ್ಳೆಯ ಇಲಾಖೆ ಕೊಟ್ಟರೆ ನಿಭಾಯಿಸುವೆ. ಅದರಲ್ಲೂ ಇಂಧನ ಇಲಾಖೆ ಕೊಟ್ಟರೆ ನಿರ್ವಹಿಸುತ್ತೇನೆ. ಎಲ್ಲವೂ ಗೊತ್ತಿರುವುದರಿಂದ ಸುಲಭವಾಗಿ ನಿಭಾಯಿಸಬಲ್ಲೆ ಎಂದು ತಿಳಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯ ಶಕ್ತಿ ಕೊಟ್ಟಿದ್ದಾನೆ. ಅದಕ್ಕೆ ಪ್ರವಾಹ ಪರಿಸ್ಥಿತಿ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿದ್ದಾರೆ. ಒಂದು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಇಳಿ ವಯಸ್ಸಿನಲ್ಲೂ ಶಕ್ತಿ ಮೀರಿ ಬಿಎಸ್‍ವೈ ಕೆಲಸಮಾಡುತ್ತಿದ್ದಾರೆ ಎಂದು ಸಿಎಂ ಕಾರ್ಯವೈಖರಿಯನ್ನು ಹೊಗಳಿದರು.

    ಈ ಹಿಂದೆ ನನಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗಾಡ್ ಫಾದರ್ ಎಂದಿದ್ದ ನಾಗೇಶ್ ಅವರು, ಈಗ ನೋಡಿಕೊಂಡು ಒಳ್ಳೆಯ ಗಾಡ್ ಫಾದರ್ ಹುಡಕಿಕೊಳ್ತೇನೆ, ನಾನು ಮಾಜಿ ಶಾಸಕ ಮಂಜುನಾಥ್ ಲವ-ಕುಶ ಇದ್ದಂತೆ ಎಂದು ಹೇಳಿದ್ದಾರೆ.

    ಮಾಜಿ ಸಂಸದ ಎಚ್. ಮುನಿಯಪ್ಪ ಅವರ ಬಗ್ಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಮ್ಮಂತವರ ಬಗ್ಗೆ ಮಾತನಾಡುವ ಅರ್ಹತೆ ಅವರಿಗೆ ಇಲ್ಲ. ನಮ್ಮ ಬೆಲೆ ಏನು ಅವರ ಬೆಲೆ ಏನು? ಅವರ 20 ವರ್ಷಗಳ ಜಮಾನ ಮುಗೀತು, ಈಗೇನಿದ್ದರು ಅವರು ವಾಚ್ ಮಾಡಬೇಕಷ್ಟೆ ಎಂದು ಸಲಹೆ ನೀಡುತ್ತಲೇ, ಕೈಲಾದ್ರೆ ಮಾಡಬೇಕು ಇಲ್ಲವಾದಲ್ಲಿ ಮನೆಯಲ್ಲಿರುಬೇಕು ಎಂದು ಟಾಂಗ್ ಕೊಟ್ಟರು.

  • ಸಿದ್ಧಾಂತಗಳಿಂದಲೇ ಕಾಂಗ್ರೆಸ್ ಆತ್ಮಹತ್ಯೆ – ಪಕ್ಷವನ್ನೇ ತ್ಯಜಿಸಿದ ಕೈ ನಾಯಕ

    ಸಿದ್ಧಾಂತಗಳಿಂದಲೇ ಕಾಂಗ್ರೆಸ್ ಆತ್ಮಹತ್ಯೆ – ಪಕ್ಷವನ್ನೇ ತ್ಯಜಿಸಿದ ಕೈ ನಾಯಕ

    ನವದೆಹಲಿ: ಸೋಮವಾರದಂದು ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದ ಪರಿಚ್ಛೇದ 370, 35(ಎ)ರನ್ನು ರದ್ದುಗೊಳಿಸಿದೆ. ಸರ್ಕಾರದ ಕ್ರಮದ ವಿರುದ್ಧ ಕಾಂಗ್ರೆಸ್ ನಿಂತಿರುವುದಕ್ಕೆ ಕೈ ನಾಯಕರೊಬ್ಬರು ಪಕ್ಷವನ್ನು ಬಿಟ್ಟು, ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ.

    ಅಸ್ಸಾಂನಿಂದ ಕಾಂಗ್ರೆಸ್ ರಾಜ್ಯಸಭಾ ಸಂಸದರಾಗಿರುವ ಭುಭನೇಶ್ವರ್ ಕಲಿತಾ ಅವರು ಪಕ್ಷಕ್ಕೆ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರವು ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ, ಪರಿಚ್ಛೇಧ 370 ಹಾಗೂ 35(ಎ) ವಿಧಿಯನ್ನು ರದ್ದು ಮಾಡಿರುವ ಕ್ರಮ ಸ್ವಾಗತರ್ಹ. ಆದರೆ ಕೇಂದ್ರದ ಕ್ರಮಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ತಮ್ಮ ಪಕ್ಷದ ಈ ನಡೆಗೆ ಬೇಸತ್ತು ಪಕ್ಷವನ್ನು ಬಿಟ್ಟು, ರಾಜ್ಯಸಭೆಗೆ ರಾಜೀನಾಮೆ ನೀಡುತ್ತಿರುವುದಾಗಿ ಕಲಿತಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.

    ತಮ್ಮ ರಾಜೀನಾಮೆ ಬಗ್ಗೆ ಭುವನೇಶ್ವರ ಕಲಿತಾ ಅವರು ಸ್ಪಷ್ಟನೆ ನೀಡಿದ್ದು, ಅವರು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ಸಿನ ನಿರ್ಧಾರದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಪತ್ರದ ಮೂಲಕ ಸ್ಪಷ್ಟವಾಗಿ ತಿಳಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವರು ಸೋಮವಾರದಂದು ಮಂಡಿಸಿದ ಕಾಶ್ಮೀರ ಮಸೂದೆಗೆ ಕಲಿತಾ ಅವರು ಕೂಡ ಬೆಂಬಲಿಸಿ ಮತದಾನ ಮಾಡಿದ್ದರು.

    ಕೇಂದ್ರದ ನಡೆ ವಿರುದ್ಧ ಕಾಂಗ್ರೆಸ್ ನಿಂತಿತ್ತು, ಆದರೆ ಪಕ್ಷದ ವಿಪ್ ಉಲ್ಲಂಘಿಸಿ ಕಲಿತಾ ಅವರು ಮತದಾನ ಮಾಡಿ ಕೇಂದ್ರದ ನಿರ್ಧಾರಕ್ಕೆ ಸಾಥ್ ನೀಡಿದ್ದಾರೆ. ಬಳಿಕ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದಾರೆ. ಈ ಬಗ್ಗೆ ಸ್ವತಃ ಕಲಿತಾ ಅವರೇ ಟ್ವೀಟ್ ಮಾಡಿ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಲಿತಾ ಅವರು, ಕಾಂಗ್ರೆಸ್ ನನಗೆ ವಿಪ್ ಜಾರಿಗೊಳಿಸಲು ಹೇಳಿತ್ತು. ಆದರೆ ಕೇಂದ್ರದ ನಿರ್ಧಾರದಿಂದ ದೇಶ ಬದಲಾಗಲಿದೆ, ಅಲ್ಲದೆ ಕಾಂಗ್ರೆಸ್ಸಿನ ನಡೆ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಈ ಮೂಲಕ ಕಾಂಗ್ರೆಸ್ ತನ್ನ ಸಿದ್ಧಾಂತಗಳಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದೆ. ಇದರಲ್ಲಿ ನಾನು ಭಾಗಿಯಾಗಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷವು ಹಾಳಾಗುತ್ತಿರುವುದನ್ನ ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಂಸತ್‍ನಲ್ಲಿ ಗೃಹ ಸಚಿವ ಅಮಿತ್ ಶಾ ತಮ್ಮ ಸರಕಾರದ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್, ಪಿಡಿಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಪಿಡಿಪಿ ಸಂಸದ ಮೀರ್ ಫಯಾಜ್ ಮತ್ತು ನಾಸಿರ್ ಅಹಮದ್ ಅವರು ಸಂವಿಧಾನದ ಪ್ರತಿಯನ್ನು ಸಂಸತ್ತಿನಲ್ಲಿ ಹರಿದುಹಾಕಲು ಯತ್ನಿಸಿದ ಘಟನೆ ಕೂಡ ನಡೆದಿತ್ತು. ಹಾಗೆಯೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ವಿಧಿ ರದ್ದುಗೊಳಿಸುವ ಮೂಲಕ ಬಿಜೆಪಿ ಸಂವಿಧಾನದ ಕಗ್ಗೊಲೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹರಿಹಾಯ್ದಿದ್ದರು. ಅಲ್ಲದೆ ಕೇಂದ್ರದ ಈ ನಡೆಯನ್ನು ಖಂಡಿಸಿದ್ದ ಕಾಂಗ್ರೆಸ್ ಭಾರತದ ಸಂವಿಧಾನದ ಇತಿಹಾಸದಲ್ಲಿ ಇದು ಕಪ್ಪು ದಿನ ಎಂದಿತ್ತು.

    ಆದರೆ ಕೇಂದ್ರ ಸರ್ಕಾರಕ್ಕೆ ಕೆಲ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಸಹಕಾರ ನೀಡಿದೆ. ಶಿವ ಸೇನೆ ಅಲ್ಲದೇ ಬಿಜೆಪಿ ವಿರೋಧಿಗಳಾದ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್, ಮಾಯಾವತಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

  • ಟಿಪ್ಪು ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ: ವಾಟಾಳ್ ನಾಗರಾಜ್

    ಟಿಪ್ಪು ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ: ವಾಟಾಳ್ ನಾಗರಾಜ್

    ರಾಮನಗರ: ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ರಾಮನಗರದಲ್ಲಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ನಗರದ ಐಜೂರು ವೃತ್ತದ ಬಳಿಯ ಕೆ.ಎಸ್‍.ಆರ್‍.ಟಿ.ಸಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಭಾವುಟವನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಟಿಪ್ಪು ಸುಲ್ತಾನ್ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ. ಆತ ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ಹೋರಾಟ ನಡೆಸಿದವನು ಎಂದು ಹೇಳಿದರು.

    ಇದೀಗ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿಯಿಂದ ಕೋಮುಗಲಭೆ ಉಂಟಾಗುತ್ತೆ ಎಂದು ರದ್ದು ಮಾಡಿದೆ. ಇದು ಸರಿಯಲ್ಲ ಕೂಡಲೇ ಟಿಪ್ಪು ಜಯಂತಿ ರದ್ದತಿ ಆದೇಶವನ್ನು ವಾಪಸ್ ಪಡೆದು, ಸರ್ಕಾರದಿಂದ ಆಚರಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಅಲ್ಲದೇ ಭಾನುವಾರ ಟಿಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

    ಇದರ ಜೊತೆಗೆ ರೈತರು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು. ರಾಜ್ಯದ ರೈತರಿಗೆ ನೀರಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸರಿಯಿಲ್ಲ. ರಾಜ್ಯದಲ್ಲಿ ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಸಿಎಂ ಬರುತ್ತಿದ್ದಾರೆ. ಒಂದೊಂದು ಜಯಂತಿಗಳು ಬರುತ್ತವೆ ಹೋಗುತ್ತದೆ. ಅಧಿಕಾರಿಗಳ ವರ್ಗಾವಣೆ ಜೋರಾಗಿ ನಡೆಯುತ್ತಿದ್ದು ಆಡಳಿತ ಕುಸಿಯುತ್ತಿದೆ ಎಂದು ಕಿಡಿಕಾರಿದರು.

    ಸರ್ಕಾರದ ಜಂಜಾಟದಿಂದ ಮೇಕೆದಾಟು ಅಣೆಕಟ್ಟೆ ನಿರ್ಮಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಮುಂದಿನ ವಾರ ಮೇಕೆದಾಟಿನಲ್ಲಿ ತಮ್ಮ ಚಳುವಳಿ ವೇದಿಕೆ ಮೂಲಕ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.