Tag: Bipolar disorder

  • ಒಡಿಶಾ ಆರೋಗ್ಯ ಸಚಿವರ ಹತ್ಯೆ ಕೇಸ್ – ASIಗೆ ಇತ್ತು Bipolar Disorder ಮಾನಸಿಕ ಕಾಯಿಲೆ

    ಒಡಿಶಾ ಆರೋಗ್ಯ ಸಚಿವರ ಹತ್ಯೆ ಕೇಸ್ – ASIಗೆ ಇತ್ತು Bipolar Disorder ಮಾನಸಿಕ ಕಾಯಿಲೆ

    ಭುವನೇಶ್ವರ: ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ (Naba Kishore Das) ಅವರನ್ನ ಗುಂಡಿಕ್ಕಿ ಕೊಂದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ASI) ಓರ್ವ ಮಾನಸಿಕ ರೋಗಿಯಾಗಿದ್ದು, ಬೈಪೋಲಾರ್ ಡಿಸಾರ್ಡರ್ (Bipolar Disorder) ಹೆಸರಿನ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

    ಮಾನಸಿಕ ಅಸ್ವಸ್ಥತೆಯ (Mental Disorder) ಹೊರತಾಗಿಯೂ ಗೋಪಾಲಕೃಷ್ಣ ದಾಸ್‌ಗೆ ಸೇವಾ ರಿವಾಲ್ವರ್ ನೀಡಿ, ಬ್ರಜರಾಜನಗರದ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಅಲ್ಲಿಯೇ ಆತ ಆರೋಗ್ಯ ಸಚಿವರನ್ನ ಗುಂಡಿಕ್ಕಿ ಕೊಂದಿದ್ದಾನೆ ಎಂದು ತನಿಖಾ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು

    ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು

    ಈ ಕುರಿತು ಮಾಹಿತಿ ನೀಡಿರುವ ಮನೋವೈದ್ಯ ಡಾ.ಚಂದ್ರಶೇಖರ್ ತ್ರಿಪಾಠಿ, ASI ಗೋಪಾಲಕೃಷ್ಣ ದಾಸ್ ಮಾನಸಿಕ ಕಾಯಿಲೆಯಿಂದ (Mental Disorder) ಬಳಲುತ್ತಿದ್ದ. ಸುಮಾರು 10 ವರ್ಷಗಳ ಹಿಂದೆಯೇ ನನ್ನ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದ. ತುಂಬಾ ಬೇಗನೆ ಕೋಪಗೊಳ್ಳುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಸಹ ಪಡೆಯುತ್ತಿದ್ದ. ಆದರೆ ಅವರು ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದ ಬಗ್ಗೆ ಖಚಿತತೆಯಿಲ್ಲ. ಒಂದು ವೇಳೆ ಔಷಧಿ ತೆಗೆದುಕೊಳ್ಳದಿದ್ದರೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದೆ. ಆದರೂ ದಾಸ್ ಕಳೆದ ಒಂದು ವರ್ಷದಿಂದ ನನ್ನನ್ನ ಭೇಟಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಏನಿದು ಬೈಪೋಲಾರ್ ಡಿಸಾರ್ಡರ್?
    ಬೈಪೋಲಾರ್ ಡಿಸಾರ್ಡರ್ (Bipolar Disorder) ಒಂದು ಮಾನಸಿಕ ಆರೋಗ್ಯ ಕಾಯಿಲೆ. ಇದು ಅತ್ಯಂತ ಹೆಚ್ಚಿನ ಒತ್ತಡದಿಂದ ತೀವ್ರ ಖಿನ್ನತೆವರೆಗಿನ ಮನಸ್ಥಿತಿಯನ್ನು ಉಂಟು ಮಾಡುತ್ತದೆ. ಆದರೆ ಆಪ್ತ ಸಮಾಲೋಚನೆಯಂತಹ ಚಿಕಿತ್ಸೆಗಳಿಂದ ಕಾಯಿಲೆ ಗುಣಪಡಿಸಹುದು ಎಂದು ವೈದ್ಯರು ಹೇಳಿದ್ದಾರೆ.

    ಎಎಸ್‌ಐ ಪತ್ನಿ ಕೂಡ `ಪತಿ ಮಾನಸಿಕ ಅಸ್ವಸ್ಥತೆಗೆ ಔಷಧಿ ಸೇವಿಸುತ್ತಿದ್ದರು’ ಎಂಬುದನ್ನ ಖಚಿತಪಡಿಸಿದ್ದಾರೆ. ಆದರೆ ಆಕೆ ಸುಮಾರು 400 ಕಿಮೀ ದೂರದಲ್ಲಿದ್ದರು. ಆದ್ದರಿಂದ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅನ್ನೋ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಗಂಜಾಂ ಜಿಲ್ಲೆಯ ಜಲೇಶ್ವರಖಂಡಿ ಗ್ರಾಮದ ನಿವಾಸಿಯಾಗಿರುವ ದಾಸ್ ಬರ್ಹಮ್‌ಪುರಂದಲ್ಲಿ ಕಾನ್ಸ್ಟೇಬಲ್ ಆಗಿ ಪೊಲೀಸ್ ವೃತ್ತಿ ಜೀವನ ಆರಂಭಿಸಿದ್ದ. 12 ವರ್ಷಗಳ ನಂತರ ಜಾರ್ಸುಗುಡಾ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಬ್ರಜರಾಜನಗರ ಪ್ರದೇಶದ ಗಾಂಧಿ ಛಾಕ್‌ನಲ್ಲಿ ಪೊಲೀಸ್ ಉಸ್ತುವಾರಿಯಾಗಿ ವಹಿಸಿದ ನಂತರ ಎಎಸ್‌ಐ ಆಗಿ ಪರವಾನಿ ಪಡೆದ ರಿವಲ್ವಾರ್ ನೀಡಲಾಗಿತ್ತು ಎಂದು ಜರ್ಸುಗುಡಾ ಎಸ್‌ಡಿಪಿಒ ಗುಪ್ತೇಶ್ವರ ಭೋಯ್ ಹೇಳಿದ್ದಾರೆ.

    ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು

    ಒಡಿಶಾದ ಆರೋಗ್ಯ ಸಚಿವರಾಗಿದ್ದ ನಬಾ ಕಿಶೋರ್ ದಾಸ್ ಅವರು ಕಾರ್ಯಕ್ರಮವೊಂದಕ್ಕೆ ಭೇಟಿ ನೀಡುತ್ತಿದ್ದರಿಂದ ಗೋಪಾಲಕೃಷ್ಣ ದಾಸ್ ಅವರನ್ನು ಭಾನುವಾರ ರಕ್ಷಣಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು. ಸಚಿವರು ಕಾರಿನಿಂದ ಇಳಿದಾಗ ಬೆಂಬಲಿಗರು ಹೂಮಾಲೆ ಹಾಕುತ್ತಿದ್ದ ವೇಳೆ ಎರಡು ಬಾರಿ ಆತ ಗುಂಡು ಹಾರಿಸಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿ ದಾಸ್ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಒಡಿಶಾದ ಆರೋಗ್ಯ ಸಚಿವರ ಮೇಲೆ ASI ಗುಂಡಿನ ದಾಳಿ

    ಸದ್ಯ ಈ ಪ್ರಕರಣವನ್ನು ಒಡಿಶಾ ಪೊಲೀಸರ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಸೈಬರ್ ತಜ್ಞರು ಮತ್ತು ಅಪರಾಧ ವಿಭಾಗದ ಅಧಿಕಾರಿಗಳನ್ನು ಒಳಗೊಂಡ 7 ಸದಸ್ಯರ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಈಗಾಗಲೇ ತನಿಖೆ ಪ್ರಾರಂಭಿಸಿದ್ದು, ಬ್ಯಾಲಿಸ್ಟಿಕ್ ತಜ್ಞರ (Ballistic Expert) (ಮದ್ದು-ಗುಂಡುಗಳನ್ನು ಪರಿಶೀಲಿಸುವ ತಜ್ಞರು) ಬಳಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

    ಈ ಸಂಬಂಧ ಐಪಿಸಿ (IPC) 307 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಿಯಾಂಕ ಗಾಂಧಿ ಮಾನಸಿಕ ಅಸ್ವಸ್ಥೆ, ಆಕೆ ಜನರನ್ನು ಹೊಡೆಯಬಹುದು – ಸುಬ್ರಮಣಿಯನ್ ಸ್ವಾಮಿ

    ಪ್ರಿಯಾಂಕ ಗಾಂಧಿ ಮಾನಸಿಕ ಅಸ್ವಸ್ಥೆ, ಆಕೆ ಜನರನ್ನು ಹೊಡೆಯಬಹುದು – ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ಪ್ರಿಯಾಂಕ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಂತೆ ಅನೇಕರು ವಾಗ್ದಾಳಿ ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಪ್ರಿಯಾಂಕ ಗಾಂಧಿ ಬೈ ಪೊಲಾರಿಟಿ ಹೆಸರಿನ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂತಹ ಕಾಯಿಲೆ ಹೊಂದಿದವರಲ್ಲಿ ಹಿಂಸಾ ಪ್ರವೃತ್ತಿ ಇರುತ್ತದೆ. ಈ ಕಾಯಿಲೆ ಇರುವ ವ್ಯಕ್ತಿಗಳು ಜನರಿಗೆ ಹೊಡೆಯಬಹುದು. ಹೀಗಾಗಿ ಪ್ರಿಯಾಂಕಾ ಸಾರ್ವಜನಿಕ ಜೀವನಕ್ಕೆ ಯೋಗ್ಯರಲ್ಲ ಎಂದು ಹೇಳಿದ್ದಾರೆ.

    ಪ್ರಿಯಾಂಕ ಗಾಂಧಿ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ ಎನ್ನುವ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು. ಮರೆ ಮಾಚಿರುವ ಈ ಸತ್ಯ ಎಲ್ಲರಿಗೂ ಗೊತ್ತಾಗಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟ ಪ್ರಿಯಾಂಕ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಅನೇಕ ಬಿಜೆಪಿ ನಾಯಕರು ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಮೇಲಿರುವ ಭೂ ವಿವಾದ ಆರೋಪವನ್ನು ಮುಖ್ಯವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಪ್ರಧಾನಿ, ಅಜ್ಜಿ ಇಂದಿರಾ ಗಾಂಧಿ ಚರಿಷ್ಮವನ್ನು ಹೊಂದಿರುವ ಪ್ರಿಯಾಂಕ ಗಾಂಧಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತ್ರವಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ ಎಂದು ಪಕ್ಷದ ನಾಯಕರು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv