ಪಾಟ್ನಾ: 70 ವರ್ಷದ ವ್ಯಕ್ತಿಯ ಶಿರಚ್ಛೇದನ ಮಾಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ನಗರದ ಚೌಕಕ್ಕೆ ನರೇಂದ್ರ ಮೋದಿ ಚೌಕ್ ಎಂದು ಹೆಸರಿಟ್ಟ ಕಾರಣ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಿಜೆಪಿ ಬೆಂಬಲಿಗರಾಗಿದ್ದ ರಾಮಚಂದ್ರ ಯಾದವ್ ಮೃತ ದುರ್ದೈವಿ. ಇಲ್ಲಿನ ದರ್ಭಂಗಾ ಜಿಲ್ಲೆಯಲ್ಲಿ ಗುರುವಾರದಂದು 40-50 ಜನರ ಗುಂಪು ಯಾದವ್ ಅವರ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಸುಮಾರು 25-30 ಬೈಕ್ಗಳಲ್ಲಿ ಬಂದಿದ್ದ ತಂಡ ಹಾಕಿ ಸ್ಟಿಕ್ ಹಾಗೂ ಕತ್ತಿಗಳಿಂದ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ನನ್ನ ತಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಇದಕ್ಕೆ ಅಂತ್ಯ ಹಾಡಬೇಕೆಂದಿದ್ದರು. ಆದ್ರೆ ಹಾಕಿ ಸ್ಟಿಕ್ ಹಾಗೂ ಕತ್ತಿಗಳನ್ನ ಹಿಡಿದು ಬಂದ ತಂಡ ಅವರ ಮೇಲೆ ದಾಳಿ ಮಾಡಿತು. ನನ್ನ ಸಹೋದgನÀನ್ನೂ ಅವರು ಕೊಲೆ ಮಾಡಲು ಯತ್ನಿಸಿದರು ಎಂದು ರಾಮಚಂದ್ರ ಯಾದವ್ ಅವರ ಮಗ ತೇಜ್ ನಾರಾಯಣ್ ಮಾಧ್ಯಮಗಳಿಗೆ ಹೇಳಿದ್ದಾರೆ.

2 ವರ್ಷಗಳ ಹಿಂದೆ ತನ್ನ ಸಹೋದರ ಚೌಕದಲ್ಲಿ ಪ್ರಧಾನಿ ಮೋದಿಯ ಫೋಟೋ ಹಾಕಿದ್ದಕ್ಕೆ ಅವರನ್ನೂ ಕೊಲೆ ಮಾಡಲಾಗಿತ್ತು ಎಂದು ತೇಜ್ ನಾರಾಯಣ್ ಹೇಳಿದ್ದಾರೆ. ದಾಳಿ ಮಾಡಿದವರು RJD(ರಾಷ್ಟ್ರೀಯ ಜನತಾ ದಳ) ಪಕ್ಷದ ಬೆಂಬಲಿಗರು ಎಂದು ಅವರು ತಿಳಿಸಿದ್ದಾರೆ.
ದಾಳಿಗೆ ಪ್ರಚೋದನೆಯಾದ ಅಂಶವೇನು ಎಂಬುದಕ್ಕೆ ಉತ್ತರಿಸಿದ ಅವರು, RJDಯ ಭದ್ರಕೋಟೆಯಲ್ಲಿ ಮೋದಿ ಚೌಕವಿರುವ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಉಪಚುನಾವಣೆಯಲ್ಲಿ ಆರ್ಜೆಡಿ ಗೆಲುವು ಸಾಧಿಸಿದ್ದು ಪ್ರಚೋದನೆಯಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಭಂಗಾ ಪೊಲೀಸರು ಶುಕ್ರವಾರದಂದು ನಾಲ್ವರನ್ನ ಬಂಧಿಸಿದ್ದಾರೆ. 2016ರ ಡಿಸೆಂಬರ್ ನಲ್ಲಿ ರಾಮಚಂದ್ರ ಯಾದವ್ ಜಿಲ್ಲೆಯ ಬುಧಾಲಾ ಗ್ರಾಮದ ಚೌಕಕ್ಕೆ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನ ಇಟ್ಟಿದ್ದರು. ಆದ್ರೆ ಗುರುವಾರದಂದು ಆಯುಧಗಳನ್ನ ಹೊಂದಿದ್ದ ತಂಡ ಯಾದವ್ ಅವರಿಗೆ ಹೆಸರು ಬದಲಾಯಿಸುವಂತೆ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆದ್ರೆ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಹಳೇ ಭೂವಿವಾದ. ಎಲ್ಲಾ ರೀತಿಯಿಂದ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಈವರೆಗಿನ ತನಿಖೆಯ ಪ್ರಕಾರ ಉಪಚುನಾವಣೆ ಗೆಲುವಿಗೂ ಇದಕ್ಕೂ ಸಂಬಂಧ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಯಾದವ್ ಒಪ್ಪದ್ದಕ್ಕೆ ಆಕ್ರೋಶಗೊಂಡ ತಂಡ ಅವರ ಶಿರಚ್ಛೇದನ ಮಾಡಿದೆ. ಈ ವೇಳೆ ತಂದೆಯನ್ನ ರಕ್ಷಿಸಲು ಬಂದ ಯಾದವ್ ಅವರ ಮಗ ಕಮಲ್ ದೇವ್ ಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆಯಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.