Tag: benagaluru

  • ಅಧಿಕಾರವನ್ನು ಅನುಭವಿಸಿದವರೇ ಕೈ ಕೊಟ್ಟರೆ ಹೇಗೆ – ಟಬು ರಾವ್ ಪ್ರಶ್ನೆ

    ಅಧಿಕಾರವನ್ನು ಅನುಭವಿಸಿದವರೇ ಕೈ ಕೊಟ್ಟರೆ ಹೇಗೆ – ಟಬು ರಾವ್ ಪ್ರಶ್ನೆ

    ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರ ಪತ್ನಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.

    “ಇಂದು ಕರ್ನಾಟಕದಲ್ಲಿ ರಾಜಕೀಯ ಎಂತಹ ದುರಂತ ಪರಿಸ್ಥಿತಿಗೆ ತಲುಪಿದೆ. ಅವಕಾಶವಾದವೂ ಒಂದು ಮಾನದಂಡವಾಗಿದ್ದು, ಅಧಿಕಾರವನ್ನು ಅನುಭವಿಸುವವರು ಈ ರೀತಿ ಕಾಂಗ್ರೆಸ್ಸಿಗೆ ಕೈಕೊಟ್ಟು ಹೋದರೆ ಯಾರನ್ನು ದೂಷಿಸುವುದು. ಇದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ದೂಷಿಸುವುದೇ ಅಥವಾ ಇದು ಕಾಂಗ್ರೆಸ್ಸಿನಲ್ಲಿರುವ ಜನರ ಗುಣಮಟ್ಟ ಎಂದು ಕೊಳ್ಳುವುದೇ?” ಎಂದು ಪ್ರಶ್ನೆ ಮಾಡಿದ್ದಾರೆ.

     

    ಸಿಎಂ ಅಮೆರಿಕ, ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸಕ್ಕೆ ತೆರಳಿದಾಗ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಕಾಂಗ್ರೆಸ್ಸಿನ 10, ಜೆಡಿಎಸ್‍ನ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಪಟ್ಟಿಗೆ ಮತ್ತಷ್ಟು ಶಾಸಕರು ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಸಿಎಂ ಅಮೆರಿಕದಿಂದ ಬಂದ ಬಳಿಕ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರ ಇರುತ್ತಾ? ಪತನಗೊಳ್ಳುತ್ತಾ ಎನ್ನುವುದು ಗೊತ್ತಾಗಲಿದೆ.

  • ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಮೊದಲ ವ್ಯಕ್ತಿ ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಮೊದಲ ವ್ಯಕ್ತಿ ಪತ್ತೆ

    ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ಇಬ್ಬರೂ ಉಗ್ರರರಲ್ಲ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ರಿಯಾಜ್ ಅಹಮದ್ ತಾವಾಗಿಯೇ ಬಂದು ಹೇಳಿಕೆ ನೀಡಿದ್ದಾರೆ. ಅನುಮಾನ ಮೂಡಿಸಿದ ಮತ್ತೊಬ್ಬ ವ್ಯಕ್ತಿ ಶಾಜಿದ್ ಖಾನ್ ಪತ್ತೆಯಾಗಿದ್ದಾರೆ. ಅವರು ರಾಜಸ್ಥಾನದ ಮೂಲದ ವ್ಯಕ್ತಿ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಮೆಟ್ರೋ ಸ್ಟೇಷನ್‍ಗೆ ಬಂದಿದ್ದ ವ್ಯಕ್ತಿ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿತ್ತು. ಆದರೆ ಆತ ಅಲ್ಲಿಂದ ಹೊರ ನಡೆದಿದ್ದ. ಈ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಶಂಕಿತ ವ್ಯಕ್ತಿಯ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಿದ್ದೇವು. ರಿಯಾಜ್ ಅಹಮದ್ ಉಪ್ಪಾರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಶೋಧ ಮಾಡಲಾಗಿತ್ತು. ಆ ವ್ಯಕ್ತಿ ಕೂಡ ಈಗ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಶಾಜಿದ್ ಖಾನ್, ಮಸೀದಿಯ ಬಳಿ ದಾನ ಪಡೆಯುವ ವ್ಯಕ್ತಿ ಆಗಿದ್ದಾರೆ. ಮೆಟ್ರೋ ಸ್ಟೇಷನ್ ಬಳಿ ಹೋದಾಗ ಅವರ ಜೇಬಿನಲ್ಲಿ ಇದ್ದ ಕಾಯಿನ್‍ಗಳಿಂದ ಶಬ್ಧ ಆಗಿತ್ತು. ಹೀಗಾಗಿ ಅವರನ್ನು ತಡೆ ಹಿಡಿಯಲಾಗಿತ್ತು. ಭದ್ರತಾ ಸಿಬ್ಬಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಇಬ್ಬರಿಗೂ ಸರಿಯಾದ ಭಾಷೆ ಬಾರದೇ ಇದ್ದ ಕಾರಣ ಈ ಗೊಂದಲ ನಿರ್ಮಾಣವಾಗಿದೆ ಎಂದರು.

    ಶಾಜಿದ್ ಖಾನ್ ಪತ್ನಿ ಮಕ್ಕಳನ್ನು ಕರೆದುಕೊಂಡು ಬಂದು ಮಸೀದಿ ಬಳಿ ದಾನ ಪಡೆಯುತ್ತಿದ್ದಾರೆ. ಅವರು ಮೊದಲ ಬಾರಿ (ಸೋಮವಾರ) ಮೆಟ್ರೋ ಹತ್ತಲು ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆ ಮಾಡಿದ್ದರಿಂದ ಗಾಬರಿಯಾಗಿ ಹೊರ ಹೋಗಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿದು ಬಂದಿದೆ ಎಂದು ತಿಳಿಸಿದರು.

    ಈ ಬುಧವಾರ ರಿಯಾಜ್ ಅಹ್ಮದ್ (70) ಅವರು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದರು. ನಾನು ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುತ್ತಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದರು.

    ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅವರು ಅಳಲು ತೋಡಿಕೊಂಡಿದ್ದರು.

    ಆಗಿದ್ದೇನು?:
    ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ಬಂದಿದ್ದ ವ್ಯಕ್ತಿ (ಶಾಜಿದ್ ಖಾನ್) ಮೆಟಲ್ ಡಿಟೆಕ್ಟರ್ ಬಳಿಗೆ ಹೋಗಿದ್ದಾಗ ಸದ್ದಾಗಿತ್ತು. ಆದರೆ ಸೆಕ್ಯೂರಿಟಿ ಕೈಗೆ ಸಿಗದೇ ಹೊರ ನಡೆದಿದ್ದರು. ಶಾಜಿದ್ ಖಾನ್ ಹೊರ ಹೋದ ಕೆಲ ನಿಮಿಷದಲ್ಲಿ ರಿಯಾಜ್ ಅಹ್ಮದ್ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಎಲ್ಲರಿಗಿಂತ ಜಾಸ್ತಿ ಸಮಯ ಪರಿಶೀಲನೆ ನಡೆಸಿದ್ದರು. ಇದಕ್ಕೆ ಸಿಟ್ಟಾಗಿ ಅವರು ತಿರುಗಿ ತಿರುಗಿ ಮುಂದೆ ಹೋಗಿದ್ದರು. ಕಾಕತಾಳೀಯ ಎಂಬಂತೆ ಇಬ್ಬರ ವರ್ತನೆ ಅನುಮಾನ ಮೂಡಿಸಿದ ಹಾಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರ ವಿಡಿಯೋ ಮಾಧ್ಯಮಗಳಲ್ಲಿ ರಿಲೀಸ್ ಆಗಿತ್ತು. ಪೊಲೀಸರು ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.

  • ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡಿದ್ದ ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡಿದ್ದ ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಪತ್ತೆ

    ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಬಿಳಿ ಬಣ್ಣದ ಬಟ್ಟೆ ಧರಿಸಿ  ಓಡಾಡಿದ್ದ ವ್ಯಕ್ತಿ ಪತ್ತೆಯಾಗಿದ್ದಾರೆ. ಸ್ವತಃ ಅವರೇ ಡಿಸಿಪಿ ಕಚೇರಿಗೆ ಭೇಟಿ ನೀಡಿ ನಿಜ ಘಟನೆಯನ್ನು ವಿವರಿಸಿದ್ದಾರೆ.

    ವೈರಲ್ ಆದ ವಿಡಿಯೋದಲ್ಲಿರುವ ವ್ಯಕ್ತಿ ರಿಯಾಜ್ ಅಹ್ಮದ್ (70) ಆಗಿದ್ದು ಮೆಜೆಸ್ಟಿಕ್‍ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುವ ವ್ಯಕ್ತಿಯಾಗಿದ್ದಾರೆ. ಅವರು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದಾರೆ.

    ನಾನು ನಾಯಂಡಹಳ್ಳಿ ನಿವಾಸಿಯಾಗಿದ್ದು, ಮೆಜೆಸ್ಟಿಕ್‍ನಲ್ಲಿ ವಾಚ್ ರಿಪೇರಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

    ಆಗಿದ್ದೇನು?:
    ಸೋಮವಾರ ರಾತ್ರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಕಪ್ಪು ಬಣ್ಣದ ಸೂಟ್ ಧರಿಸಿದ್ದ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿದೆ. ಈ ವೇಳೆ ಆತನ ತಪಾಸಣೆ ಮಾಡಲು ಸೆಕ್ಯೂರಿಟಿ ಮುಂದಾಗಿದ್ದಾರೆ. ಆಗ ಆ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ.

    ಶಂಕಿತ ಆಗಮಿಸೋ ಮುನ್ನ ಮೆಟ್ರೋ ನಿಲ್ದಾಣಕ್ಕೆ  ಜುಬ್ಬಾಧಾರಿಯಾಗಿದ್ದ  ರಿಯಾಜ್ ಅಹ್ಮದ್ ಆಗಮಿಸಿದ್ದರು. ಮೆಟಲ್ ಡಿಟೆಕ್ಟರ್ ಹಾದು ಮೆಟ್ರೋ ನಿಲ್ದಾಣಕ್ಕೆ ಎಂಟ್ರಿಯಾದ ಕೂಡಲೇ ಆ ಕಡೆ ಈ ಕಡೆ ನೋಡಿಕೊಂಡು ಮುಂದೆ ರಿಯಾಜ್ ಅಹ್ಮದ್ ಮುಂದೆ ತೆರಳಿದ್ದರು. ಇವರ ವರ್ತನೆ ಅನುಮಾನ ಮೂಡಿಸುವ ಹಾಗೆ ಇದ್ದ ಕಾರಣ  ವಿಡಿಯೋ ರಿಲೀಸ್ ಆಗಿತ್ತು. ಈಗ ಸ್ವತ: ಅವರೇ ಚೆನ್ನಣ್ಣನವರ್ ಅವರನ್ನು ಭೇಟಿಯಾಗಿ ವಿವರಿಸಿದ್ದಾರೆ.

    ಇಲ್ಲಿಯವರೆಗೂ ಕಪ್ಪು ಬಣ್ಣದ ಜುಬ್ಬಾ ಧರಿಸಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಡಿಜಿ ಐಜಿಪಿ ನೀಲಮಣಿ ರಾಜು ಅವರು, ಅದಷ್ಟು ಬೇಗ ಈ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

    ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟದ ಬೆನ್ನಲ್ಲೆ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮೆಟ್ರೋಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮೆಜೆಸ್ಟಿಕ್‍ನ ಕೆಂಪೇಗೌಡ ಮೆಟ್ರೋ ನಿಲ್ದಾಣ ಹಾಗೂ ಚಿಕ್ಕಲಾಲ್ ಬಾಗ್ ಗೇಟ್ ಎರಡು ಕಡೆಯಿಂದಲೂ ಇಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶಂಕಿತ ವ್ಯಕ್ತಿಯ ಭಯದಿಂದಾಗಿ ಎರಡೂ ಗೇಟ್‍ನಲ್ಲಿಯೂ ಹೆಚ್ಚುವರಿ ಪೊಲೀಸರ ಭದ್ರತೆ ಒದಗಿಸಲಾಗಿದೆ.

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.

  • ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಬೆಂಗಳೂರು: ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮಾಹಿತಿಯನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಲಿಂಗಾಯಿತ ಪ್ರಭಾವಿ ಸ್ವಾಮೀಜಿಗಳ ಬಳಿ ಹೇಳಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾಗಿದ್ದಾರಾ ಹೆಚ್‍ಡಿಕೆ ಅನ್ನೋ ಪ್ರಶ್ನೆಯೂ ಮೂಡಿದೆ.

    ಲಿಂಗಾಯಿತ ಸಮುದಾಯದವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ, ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ದೂರವಾಣಿ ಕರೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸ್ವಾಮೀಜಿ, ಹೊರಟ್ಟಿಗೆ ಸಚಿವ ಸ್ಥಾನ ಕೊಡಲ್ಲ, ಈಗಾಗಲೇ ಅವರನ್ನು ಎಂಎಲ್‍ಸಿ ಮಾಡಿದ್ದೇವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಮೂರು ವರ್ಷ ಬಿಟ್ಟು ನೋಡೋಣ ಅಂದಿದ್ದಾರೆ. ಆಗಲೂ ಕೊಡದೇ ಇದ್ದರೆ ಗಲಾಟೆ ಮಾಡೋಣ ಅಂದಿದ್ದಾರೆ.

    ಈ ಮೊಬೈಲ್ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಈ ಮಾತುಕತೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತಾನಾಡಿದ ಸ್ವಾಮೀಜಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಒಟ್ಟು ಇಪ್ಪತ್ತು ಜನ ಲಿಂಗಾಯಿತ ಸಮುದಾಯದವರಿದ್ದು, ಹೆಚ್ಚು ಖಾತೆಯನ್ನು ಲಿಂಗಾಯಿತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನು ಓದಿ: ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ