Tag: Belavadi

  • ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರ ಅರೆಸ್ಟ್

    ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರ ಅರೆಸ್ಟ್

    ಹಾಸನ: ಗ್ರಾಹಕರು ಬ್ಯಾಂಕ್‍ನಲ್ಲಿ (Bank) ಗಿರಿವಿ ಇಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಿ, ನಕಲಿ ಚಿನ್ನ (Gold) ತಂದಿಟ್ಟ ಆರೋಪದ ಮೇಲೆ ಬ್ಯಾಂಕ್ ಸಿಬ್ಬಂದಿಯೊಬ್ಬನನ್ನು ಬಂಧಿಸಿದ ಪ್ರಕರಣ ಹಾಸನದ (Hassan) ಬೆಳವಾಡಿಯಲ್ಲಿ (Belavadi) ನಡೆದಿದೆ.

    ಬಂಧಿತ ಆರೋಪಿಯನ್ನು ಲವ ಬಿ.ಎನ್ ಎಂದು ಗುರುತಿಸಲಾಗಿದೆ. ಆರೋಪಿ 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಅಲ್ಲದೇ ಆ ಜಾಗದಲ್ಲಿ ನಕಲಿ ಚಿನ್ನವನ್ನು ತಂದಿಟ್ಟಿದ್ದ ಎಂದು ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕಿ ಅನುರಾಧ ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ ವ್ಯಕ್ತಿಗೆ ಚಾಕು ಇರಿತ – 10 ದಿನಗಳ ಕಾಲ ಒದ್ದಾಡಿ ಪ್ರಾಣಬಿಟ್ಟ

    ಆರೋಪಿ ಬೆಳವಾಡಿ ಗ್ರಾಮದ ಎಸ್‍ಬಿಐ (SBI) ಶಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸಗಳಿಸಿ 2013 ರಿಂದ ಚಿನ್ನದ ಸಾಲದ ದಾಸ್ತಾನು ಉಸ್ತುವಾರಿ ವಹಿಸಿಕೊಂಡಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಇತ್ತೀಚೆಗೆ ಗಿರವಿ ವಿಭಾಗದ ಚಿನ್ನವನ್ನು ಪರಿಶೀಲನೆ ಮಾಡಿದ ವೇಳೆ ವಂಚನೆ ಬಯಲಾಗಿದೆ. 30 ಪ್ಯಾಕೆಟ್ ಚಿನ್ನದಲ್ಲಿ 18 ಪ್ಯಾಕೆಟ್ ಚಿನ್ನದಲ್ಲಿ ನಕಲಿ ಚಿನ್ನ ಇರುವುದು ಪತ್ತೆಯಾಗಿತ್ತು. ಅದರಲ್ಲಿ 2 ಪ್ಯಾಕೆಟ್ ಚಿನ್ನವನ್ನು ಸಂಪೂರ್ಣ ಕಳ್ಳತನ ಮಾಡಲಾಗಿದೆ. ಉಳಿದ ಪ್ಯಾಕೆಟ್‍ಗಳಲ್ಲಿ ಕೆಲವು ಚಿನ್ನದ ಆಭರಣವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರರನ್ನು ಬಡಿದು ಕೊಂದ ದುಷ್ಕರ್ಮಿಗಳು

  • ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರನಿಗೆ ಇಂದಿಗೂ ಬಂಡಿ ಅನ್ನ ಹಾಕೋ ಗ್ರಾಮವಿದು!

    ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರನಿಗೆ ಇಂದಿಗೂ ಬಂಡಿ ಅನ್ನ ಹಾಕೋ ಗ್ರಾಮವಿದು!

    ಚಿಕ್ಕಮಗಳೂರು: ಮಹಾಭಾರತದಲ್ಲಿ ಭೀಮ ಕೊಂದ ಬಕಾಸುರ ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯಲ್ಲಿ ಇಂದಿಗೂ ಜೀವಂತವಾಗಿದ್ದಾನೆ. ಈ ಗ್ರಾಮದ ಜನ ಬಕಾಸುರನಿಗೆಂದು ಒಂದು ಬಂಡಿ ಅನ್ನ, ಎಂಟು ಬಂಡಿ ಪಾನಕವನ್ನ ಎಡೆ ಮಾಡೋ ಸಂಪ್ರದಾಯವನ್ನ ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ದಿನದಂದು ಆರಂಭವಾಗಿ ನಾಲ್ಕು ದಿನ ನಡೆಯೋ ಈ ಬಂಡಿಬಾನ ಜಾತ್ರೆಗೆ ಶೃಂಗೇರಿ ಮಠ ಧನಸಹಾಯ ಮಾಡ್ತಿದೆ. ಮಹಾಭಾರತದ ಕಾಲದಲ್ಲಿ ಏಕ ಚಕ್ರ ನಗರ ಎಂದು ಕರೆಯುತ್ತಿದ್ದ ಈ ಗ್ರಾಮ ಇಂದು ಬೆಳವಾಡಿ ಎಂದು ಕರೆಸಿಕೊಳ್ತಿದೆ.

    ಹೆಜ್ಜೆಗೊಂದು ತೆಂಗಿನಕಾಯಿ: ಬಕಾಸುರನಿಗೆ ಅನ್ನವನ್ನ ತೆಗೆದುಕೊಂಡು ಹೋಗುವಾಗ ಊರಿನ ಜನ ಹೆಜ್ಜೆಗೊಂದರಂತೆ ಬಂಡಿಯ ಚಕ್ರಕ್ಕೆ ತೆಂಗಿನ ಕಾಯಿಯನ್ನ ಒಡೆಯುತ್ತಾರೆ. ಸಾವಿರ ಮನೆಯ ಗ್ರಾಮವಾದ ಬೆಳವಾಡಿಯ ಪ್ರಮುಖ ಬೀದಿಗಳಲ್ಲಿ ಬಂಡಿ ಸಾಗುವಷ್ಟರಲ್ಲಿ ಸುಮಾರು ಏಳರಿಂದ ಎಂಟು ಸಾವಿರ ತೆಂಗಿನ ಕಾಯಿಯನ್ನ ಒಡೆದು ಭಕ್ತಿ ಸಮರ್ಪಿಸ್ತಾರೆ. ಬಕಾಸುರನಿಗೆ ಒಂದು ಗಾಡಿ ಅನ್ನವಾದ್ರೆ, ಎಂಟು ಗಾಡಿಗಳಲ್ಲಿ ಪಾನಕವನ್ನೂ ತೆಗೆದುಕೊಂಡು ಹೋಗ್ತಾರೆ. ಎಲ್ಲಾ ಜಾತಿ-ಧರ್ಮದೋರು ಇರೋ ಈ ಗ್ರಾಮದಲ್ಲಿ ಈ ಜಾತ್ರೆಯನ್ನ ಎಲ್ಲರೂ ಒಂದುಗೂಡಿ ವಿಜೃಂಭಣೆಯಿಂದ ಆಚರಿಸ್ತಾರೆ. ನಾಲ್ಕು ದಿನಗಳ ಕಾಲ ಯಾರೊಬ್ರು ಯಾವುದೇ ಕೆಲಸ-ಕಾರ್ಯಗಳಿಗೆ ತೆರಳದೇ ಭಕ್ತಿಪೂರ್ವಕವಾಗಿ ಜಾತ್ರೆ ನಡೆಸುತ್ತಾರೆ.

    ಬಂಡಿ ಅನ್ನದ ಮೆರವಣಿಗೆ: ಊರಿನಲ್ಲಿ ಮೆರವಣಿಗೆ ಮಾಡುವ ಹಿಂದಿನ ದಿನವೇ ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸಿ ತಂದು ಒಂದೆಡೆ ಇಟ್ಟು ಎಡೆ ಮಾಡ್ತಾರೆ. ಆದ್ರೆ ವಿಶೇಷವೆಂದರೆ ವಿವಿಧ ರೀತಿಯ ಖಾದ್ಯಗಳನ್ನೆಲ್ಲಾ ಒಂದೆಡೆ ಇಟ್ಟು 24 ಗಂಟೆ ಕಳೆದ್ರೂ ಆಹಾರ ಹಾಳಾಗುವುದಿಲ್ಲ. ತದನಂತರ ಮಾರನೇ ದಿನ ಇವ್ರು ಎಲ್ಲರೂ ತಂದ ಆಹಾರವನ್ನ ಬಂಡಿಯಲ್ಲಿ ಹಾಕಿ ಮೆರವಣಿಗೆ ಮಾಡಿ ಊರಿಂದ ಹೊರಗೆ ತೆಗೆದುಕೊಂಡು ಹೋಗ್ತಾರೆ. ಊರಿನಲ್ಲಿ ಮೆರವಣಿಗೆ ಮಾಡಿದ ಬಂಡಿಯನ್ನ ಊರ ಹೊರಗೆ ಊರಿನ ಹಿರಿಯರು ಪೂಜೆ ಮಾಡಿ ಅದನ್ನ ಪ್ರಸಾದದ ರೂಪದಲ್ಲಿ ಎಲ್ಲರಿಗೂ ನೀಡ್ತಾರೆ. ಕೆಲವರು ಅಲ್ಲೇ ತಿಂದ್ರೆ, ಕೆಲವರು ಮನೆಗೆ ತಂದು ಹಾಗೇ ಇಡ್ತಾರೆ.

    ಈ ಪ್ರಸಾದವನ್ನ ತಿಂದ್ರೆ ಒಂದು ವರ್ಷಗಳ ಕಾಲ ಯಾವುದೇ ರೋಗ-ರುಜಿನಗಳು ಬರೋದಿಲ್ಲ ಅನ್ನೋದು ಸ್ಥಳೀಯರ ನಂಬಿಕೆ. ಕೆಲವರು ಈ ಪ್ರಸಾದವನ್ನ ಮನೆಯಲ್ಲಿ ತಂದು ಇಡ್ಕೊಂಡು ದೊಡ್ಡವರಿಗೆ ಅಥವಾ ಮಕ್ಕಳಿಗೆ ಆರೋಗ್ಯ ಹದಗೆಟ್ಟಾಗ ನೀರಿನಲ್ಲಿ ಕದಡಿ ಕುಡಿಯುತ್ತಾರೆ. ಆಗ ಖಾಯಿಲೆ ಮಾಯವಾಗುತ್ತೆ ಅನ್ನೋದು ಇವ್ರ ನಂಬಿಕೆ. ಜಾತ್ರೆಯ ಸಮಯದಲ್ಲಿ ಇವ್ರು ತಮ್ಮ ಗ್ರಾಮವನ್ನ ತಳಿರು-ತೋರಣಗಳಿಂದ ಅಲಂಕರಿಸುತ್ತಾರೆ. ಯಾಕೆಂದರೆ, ಬಕಾಸುರನ ಅನ್ನದ ಬಂಡಿ ಸಾಗುವಾಗ ಅದು ಕಾಡಿನೊಳಗೆ ಸಾಗುತ್ತಿದೆ ಎಂದು ಭಾಸವಾಗಬೇಕು ಅನ್ನೋದು ಇವ್ರ ಆಶಯ.

    https://youtu.be/Rle96s0s5kU