Tag: belagavi

  • ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಚಿಕ್ಕೋಡಿ: ವಸತಿ ಕಾಲೇಜಿನ  (Residential College) ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ (PUC Student) ಸಾವನ್ನಪ್ಪಿದ ಘಟನೆ ಬೆಳಗಾವಿ  (Belagavi) ಜಿಲ್ಲೆ ಚಿಕ್ಕೋಡಿ (Chikkodi) ತಾಲೂಕಿನ ಹಿರೇಕೋಡಿ (Hirekodi) ಗ್ರಾಮದಲ್ಲಿ ನಡೆದಿದೆ.

    ಗೋಕಾಕ್ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದ ವಿದ್ಯಾರ್ಥಿನಿ ಆಫ್ರೀನ್ ಜಮಾದಾರ್ (17) ಮೃತ ದುರ್ದೈವಿ. ಮಂಗಳವಾರ ಪರೀಕ್ಷೆ ಇದ್ದ ಹಿನ್ನೆಲೆ ಸೋಮವಾರ ಮಧ್ಯರಾತ್ರಿ ವಸತಿ ಶಾಲೆಯ ಮೊದಲ ಮಹಡಿಯಲ್ಲಿ ಓದುತ್ತಾ ಕುಳಿತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋಯ್ತು ಸರ್ಕಾರಿ ಶಾಲಾ ಮೇಲ್ಛಾವಣಿ

    ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

  • ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋಯ್ತು ಸರ್ಕಾರಿ ಶಾಲಾ ಮೇಲ್ಛಾವಣಿ

    ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋಯ್ತು ಸರ್ಕಾರಿ ಶಾಲಾ ಮೇಲ್ಛಾವಣಿ

    ಚಿಕ್ಕೋಡಿ: ಚಿಕ್ಕೋಡಿ (Chikkodi) ಉಪವಿಭಾಗ ವ್ಯಾಪ್ತಿಯ ವಿವಿಧೆಡೆ ಮಳೆ ಆರ್ಭಟ ಮುಂದುವರೆದಿದ್ದು ಬಿರುಗಾಳಿ ಸಹಿತ ಭಾರೀ ಮಳೆಗೆ ಶಾಲೆಯ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ಹಂಚಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹಾರಿ ಹೋಗಿವೆ. ವಿದ್ಯಾರ್ಥಿಗಳು ಶಾಲೆ ಮುಗಿಸಿ ಮನೆಗೆ ಹೋದ ಮೇಲೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

    ನಿನ್ನೆಯಷ್ಟೇ (ಸೋಮವಾರ) ದಸರಾ ಬಳಿಕ ಶಾಲೆ ಆರಂಭವಾಗಿತ್ತು. ಸಾಯಂಕಾಲ ಶಾಲೆಗೆ ಬಿಡುವಾದ ಕಾರಣ ಭಾರೀ ಅನಾಹುತ ತಪ್ಪಿದೆ. ಬಿರುಗಾಳಿಗೆ ಶಾಲೆಯ ಮೇಲಿದ್ದ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿ ಶಾಲಾ ಮುಂಭಾಗದಲ್ಲಿ ಬಿದ್ದಿದೆ. ಕಳಪೆ ಕಾಮಗಾರಿಯಿಂದ ಶಾಲೆಯ ಮೇಲ್ಛಾವಣಿ ಹಾರಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವರುಣ ರೌದ್ರನರ್ತನ – ತಗ್ಗು ಪ್ರದೇಶ ಜಲಾವೃತ, ಕೆಟ್ಟು ನಿಂತ ವಾಹನಗಳು

    ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಭಾರೀ ಮಳೆಗೆ ಕಾಲುವೆಯಲ್ಲಿ ಕೊಚ್ಚಿಹೋಯಿತು ಎರಡು ಕಾರು

  • ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಬಳ್ಳಾರಿ: ಬೆಳಗಾವಿಯಲ್ಲಿ ಉದ್ಯಮಿ ಸಂತೋಷ್ ಪದ್ಮನ್ನವರ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತನ ಕರಾಳ ಮುಖದ ಪರಿಚಯವಾಗಿದೆ. ಹತ್ಯೆಯಾದ ಉದ್ಯಮಿಯ ಮನೆ ತಪಾಸಣೆ ವೇಳೆ ಆತ ಬೇರೆ ಬೇರೆ ಹೆಣ್ಣುಗಳ ಜೊತೆ ಕಳೆದ ಖಾಸಗಿ ವೀಡಿಯೋಗಳಿರುವ 13 ಹಾರ್ಡ್ ಡಿಸ್ಕ್‌ಗಳು ಪತ್ತೆಯಾಗಿವೆ.

    ಡಿಸ್ಕ್‌ಗಳು, ಸಿಸಿಟಿವಿ ಡಿವಿಆರ್, ಮೂರು ಪೆನ್‍ಡ್ರೈವ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳನ್ನು ಪರಿಶೀಲನೆಗಾಗಿ ಎಫ್‍ಎಸ್‍ಎಲ್‍ಗೆ ಕಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಅ.9ರಂದು ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಬಗ್ಗೆ ಸಂಶಯ ಬಂದು ಅ.14ರಂದು ತಾಯಿ ಸೇರಿ 5 ಜನರ ವಿರುದ್ಧ ಸಂತೋಷ್‍ನ ಮಗಳು ಕೊಲೆ ಕೇಸ್ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದಾಗ, ಪತ್ನಿ ಉಮಾ ಹಾಗೂ ಇಬ್ಬರು ಫೇಸ್‍ಬುಕ್ ಗೆಳೆಯರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.

    ತನಿಖೆ ವೇಳೆ ಹಾರ್ಡ್ ಡಿಸ್ಕ್‌ನಲ್ಲಿರುವ ಗಂಡನ ಅಶ್ಲೀಲ ವೀಡಿಯೋ ಕುರಿತು ಪತ್ನಿ ಉಮಾ ಮಾಹಿತಿ ನೀಡಿದ್ದಳು. ಅಲ್ಲದೇ ಮಕ್ಕಳೆದುರು ಕೂಡ ಬೆತ್ತಲಾಗಿ ಸಂತೋಷ್ ಓಡಾಡುತ್ತಿದ್ದ ಎಂದು ಹೇಳಿದ್ದಳು.

    ಪ್ರಕರಣ ಸಂಬಂಧ ಸಂತೋಷ್ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

  • ಮಠದಲ್ಲಿ ಹುಕ್ಕೇರಿ ಕೆಡಿಪಿ ಸಭೆ ನಡೆಸಿದ ಸಚಿವ ಸತೀಶ್‌ ಜಾರಕಿಹೊಳಿ

    ಮಠದಲ್ಲಿ ಹುಕ್ಕೇರಿ ಕೆಡಿಪಿ ಸಭೆ ನಡೆಸಿದ ಸಚಿವ ಸತೀಶ್‌ ಜಾರಕಿಹೊಳಿ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕು ಮಟ್ಟದ ಕೆಡಿಪಿ ಸಭೆಯನ್ನು (KDP Meeting) ಸರಕಾರಿ ಕಚೇರಿ ಬಿಟ್ಟು ಮಠದಲ್ಲಿ ಸಚಿವ ಸತೀಶ ಜಾರಕಿಹೊಳಿ (Satish Jarkiholi) ಅಧಿಕಾರಿಗಳ ಸಭೆ ನಡೆಸಿ ಗಮನ ಸೆಳೆದಿದ್ದಾರೆ.

    ಸರಕಾರಿ ಕಚೇರಿಗಳ ಸಭಾ ಭವನಗಳು ಇದ್ದರೂ ಹುಕ್ಕೇರಿ ಪಟ್ಟಣದ ಹೊರವಲಯದ ಅವಜೀಕರ ಆಶ್ರಮ ಮಠದಲ್ಲಿ ಸಭೆ ನಡೆಸಿದ್ದಾರೆ‌. ಸಭೆಯಲ್ಲಿ ಹುಕ್ಕೇರಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಸತೀಶ್‌ ಜಾರಕಿಹೊಳಿ ಅಭಿಮಾನಿಗಳು ಭಾಗಿಯಾಗಿದ್ದರು.

    ಮಠದಲ್ಲಿ ಸಭೆ ಕರೆದ ವಿಚಾರದ ಸಚಿವರನ್ನು ಪ್ರಶ್ನಿಸಿದ್ದಕ್ಕೆ, ಸ್ಥಳದ ಅಭಾವದಿಂದ ಮಠದಲ್ಲಿ ಸಭೆ ಕರೆಯಲಾಗಿದೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ| ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

    ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ. ಸಿಎಂ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ. ಮುಡಾ ಮೇಲೆ ತನಿಖೆ ನಡೆಯಬೇಕು ಎನ್ನುವದು ನಮ್ಮದು ವಾದವಿದೆ. ಇಡಿ ದಾಳಿಗೂ ಸಿಎಂ ರಾಜೀನಾಮೆ ನೀಡಬೇಕು ಎನ್ನುವುದು ಸರಿಯಲ್ಲ ಎಂದರು.

    ಮುಡಾ ವಿಚಾರದಲ್ಲಿ ಯಾವುದೇ ಹಣದ ವ್ಯವಹಾರವಿಲ್ಲದ ಕಾರಣ ಇಡಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವ ವಾದವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ ಆದೇಶ ಮಾಡಬೇಕು. ಸಿಬಿಐ ತನಿಖೆಯಾದರೂ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.

  • ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2.73 ಕೋಟಿ ಹಣ ಜಪ್ತಿ

    ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2.73 ಕೋಟಿ ಹಣ ಜಪ್ತಿ

    ಬೆಳಗಾವಿ: ಇಲ್ಲಿನ ಸಿಸಿಬಿ ಪೊಲೀಸರು (Belagavi CCB Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2.73 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ.

    ಮಹಾರಾಷ್ಟ್ರದ ಸಾಂಗಲಿ‌ಯಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಗೂಡ್ಸ್ ವಾಹನದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಾಹನ ಚಾಲಕನನ್ನು ವಶಕ್ಕೆ ಪಡೆದು ಹಣ ಜಪ್ತಿ (Money seized) ಮಾಡಿದ್ದಾರೆ. ಇದನ್ನೂ ಓದಿ: Chattisgarh | ಅಬುಜ್ಮಾರ್ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳ ಹತ್ಯೆ

    ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ಸಚೀನ ಮೇನಕುದುಳೆ, ಮಾರುತಿ ಮಾರಗುಡೆ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ತಲೆ ಸೀಳಿದ ಬುಲೆಟ್‌, ಬೆರಳು ಕಟ್‌; ಭೀಕರ ಹತ್ಯೆಯಾದ ಹಮಾಸ್‌ ಮುಖ್ಯಸ್ಥನ ದೇಹ ಸ್ಥಿತಿ ಹೇಗಿತ್ತು?

    ಹಣ ಸಾಗಾಟ ಮಾಡಲು ಗೂಡ್ಸ್ ವಾಹನದ ಕ್ಯಾಬಿನನ್ನೇ ಮಾಡಿಫೈ ಮಾಡಿದ್ದಾರೆ. ಜಪ್ತಿಯಾದ ಹಣದ ಮೂಲ ಯಾವುದು ಎಂದು ತನಿಖೆ ನಡೆಸುತ್ತಿರುವುದಾಗಿ ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದೆ. ಇದನ್ನೂ ಓದಿ: ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

  • ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಬೆಳಗಾವಿ ಉದ್ಯಮಿ ಹತ್ಯೆ – ಪತ್ನಿ ಸೇರಿ ಮೂವರು ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್‌

    ಬೆಳಗಾವಿ: ಉದ್ಯಮಿ ಸಂತೋಷ ‌ಪದ್ಮನ್ನವರ (Santosh Padmannavar) ಕೊಲೆ ಪ್ರಕರಣದ (Murder Case) ಮೂವರು ಆರೋಪಿಗಳನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

    ಬೆಳಗಾವಿಯಲ್ಲಿ (Belagavi) ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ಸಂತೋಷ ಪದ್ಮನ್ನವರ ಅಕ್ಟೋಬರ್ 9 ರಂದು ಮೃತಪಟ್ಟಿದ್ದರು. ತಂದೆಯ ಸಾವಿನ ಬಗ್ಗೆ ಪುತ್ರಿ ಸಂಜನಾ ಪದ್ಮನ್ನವರ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ಪ್ರಕರಣದ ಮೂವರು ಆರೋಪಿಗಳಾದ ಸಂತೋಷ ‌ಪತ್ನಿ ಉಮಾ ಪದ್ಮನ್ನವರ, ಶೋಭಿತ್‌ಗೌಡ, ಪವನ್ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.

    ಮಂಗಳೂರಲ್ಲಿ ತಲೆ ಮರೆಸಿಕೊಂಡಿದ್ದ ಶೋಭಿತ್‌ಗೌಡ, ಪವನ್ ವಶಕ್ಕೆ ಪಡೆದಿದ್ದ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಇಡೀ ದಿನ ವಿಚಾರಣೆ ಆದ ಬಳಿಕ ಮೂವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿಗಳನ್ನು  14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದ್ದು ಮೂವರನ್ನೂ ಹಿಂಡಲಗಾ ಜೈಲಿಗೆ ಮಾಳಮಾರುತಿ ಠಾಣೆ ಪೊಲೀಸರು ರವಾನಿಸಿದ್ದಾರೆ.

     

  • ಸ್ಕಿಡ್‌ ಆಗಿ ಸೇತುವೆಯಿಂದ ಘಟಪ್ರಭಾ ನದಿಗೆ ಬಿತ್ತು ಬೈಕ್‌ – ದಂಪತಿ ಸಾವು

    ಸ್ಕಿಡ್‌ ಆಗಿ ಸೇತುವೆಯಿಂದ ಘಟಪ್ರಭಾ ನದಿಗೆ ಬಿತ್ತು ಬೈಕ್‌ – ದಂಪತಿ ಸಾವು

    ಚಿಕ್ಕೋಡಿ: ಬೈಕ್‌ ಸ್ಕಿಡ್ ಆಗಿ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದ ಘಟಪ್ರಭಾ ನದಿಗೆ (Ghataprabha River) ಅಡ್ಡಲಾಗಿರುವ ಸೇತುವೆ ಮೇಲೆ ನಡೆದಿದೆ.

    ಘೋಡಗೇರಿ ಗ್ರಾಮದಿಂದ ಪೊಗತ್ಯಾನಟ್ಟಿ ಗ್ರಾಮಕ್ಕೆ ದಂಪತಿ ಬೈಕ್ ಮೇಲೆ ತೆರಳುವಾಗ ನೊಗನಿಹಾಳ ಗ್ರಾಮದ ಬಳಿ ಸೇತುವೆ ದಾಟುವಾಗ ಬೈಕ್‌ ಸ್ಕಿಡ್‌ ಆಗಿ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ್ದಾರೆ.

    ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ಸುರೇಶ ಬಡಿಗೇರ (53), ಜಯಶ್ರೀ ಬಡಿಗೇರ(45) ಮೃತ ದಂಪತಿ. ನದಿಯಲ್ಲಿನ ಜಯಶ್ರೀ ಶವವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಸುರೇಶ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ.  ಇದನ್ನೂ ಓದಿ: ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ- ಸೆಕ್ಷನ್ 6ಎ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

    ಸೇತುವೆಗೆ (Bridge) ತಡೆಗೋಡೆ ನಿರ್ಮಿಸದೇ ನೀರಾವರಿ ಇಲಾಖೆಯ ನಿರ್ಲಕ್ಷ್ಯ ಮಾಡಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಮನವಿ

    ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಮನವಿ

    – ಜೊತೆಗೆ ಅಂಚೆ ಚೀಟಿ ಬಿಡುಗಡೆಗೆ ಮನವಿ

    ನವದೆಹಲಿ: ಬ್ರಿಟಿಷರ ವಿರುದ್ಧ ಹೋರಾಡಿ ಜಯ ಸಾಧಿಸಿದ ಕಿತ್ತೂರು ರಾಣಿ ಚೆನ್ನಮ್ಮ (Kitturu Rani Chennamma) ವಿಜಯೋತ್ಸವಕ್ಕೆ 200 ವರ್ಷ ಪೂರ್ಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ (Belagavi Airport) ರಾಣಿ ಚೆನ್ನಮ್ಮ ಹೆಸರಿಡಬೇಕು ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಬೇಕು ಎಂದು ಕಿತ್ತೂರು ಕರ್ನಾಟಕದ ನಾಯಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಜಯೋತ್ಸವಕ್ಕೆ 200 ವರ್ಷ ಪೂರ್ಣವಾಗಲಿದೆ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವೀರ ಮಹಿಳೆಯಾಗಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿ ಗೆಲುವು ಸಾಧಿಸಿದರು. ಅವರ ತ್ಯಾಗ, ಬಲಿದಾನವನ್ನು ನಾವು ಮರೆಯಬಾರದು. ಇದಕ್ಕಾಗಿ ಅ.23ರಂದು ವಿಜಯೋತ್ಸವದ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ.ಇದನ್ನೂ ಓದಿ: ಹಾಸನ | ಆಹಾರ ಅರಸಿ ಬಂದಿದ್ದ ಕಾಡಾನೆ ವಿದ್ಯುತ್ ಸ್ಪರ್ಶದಿಂದ ಸಾವು

    ಈ ಬಾರಿ ಅ.23ಕ್ಕೆ 200 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆ ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಿದ್ದೇವೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನ ಹೆಸರಿಡಬೇಕು ಹಾಗೂ ವಿಮಾನ ನಿಲ್ದಾಣದ ಆವರಣದಲ್ಲಿ ಅವರ ಮೂರ್ತಿ ಸ್ಥಾಪಿಸಬೇಕು. ಜೊತೆಗೆ ರಾಣಿ ಚೆನ್ನಮ್ಮನ ಒಂದು ಅಂಚೆ ಚೀಟಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳು, ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

    ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ (Sangolli Rayanna) ಹೆಸರನ್ನು ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣಕ್ಕೆ, ಜಗಜ್ಯೋತಿ ಬಸವಣ್ಣನ ಹೆಸರನ್ನು ವಿಜಯಪುರಕ್ಕೆ (Vijayapura), ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಶಿವಮೊಗ್ಗ (Shivamogga) ವಿಮಾನ ನಿಲ್ದಾಣಕ್ಕೆ ಇಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.

    ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರ್ಕಾರದ ವಿವಿಧ ತರಬೇತಿ ಕೇಂದ್ರಗಳಿದ್ದು, ಆರ್ಥಿಕ ನಗರವಾಗಿ ಬೆಳೆಯುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಇನ್ನಷ್ಟು ಸಂಪರ್ಕ ಹೆಚ್ಚಿಸಬೇಕಿದೆ. ಹೀಗಾಗಿ ಇನ್ನು ಅನೇಕ ನಗರಗಳಿಗೆ ವಿಮಾನ ಸಂಪರ್ಕ ಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಶೀಘ್ರದಲ್ಲಿ ನಮ್ಮ ಮನವಿಗೆ ಸ್ಪಂದಿಸುವ ಭರವಸೆ ನೀಡಿದೆ ಎಂದು ತಿಳಿಸಿದರು.ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ – ಮುರುಗೇಶ್ ನಿರಾಣಿ

  • ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

    ಬೆಳಗಾವಿ| ತಂದೆಯ ಸಾವಿನ ಬಗ್ಗೆ ಮಗಳ ಅನುಮಾನ – ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

    ಬೆಳಗಾವಿ: ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನ ಸಾವು ಅನುಮಾನಕ್ಕೆ ಕಾರಣವಾಗಿದೆ. ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸಹಜ ಸಾವೆಂದು ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಮುಂದಾಗಿರುವ ಘಟನೆ ನಡೆದಿದೆ.

    ಅಕ್ಟೋಬರ್ 10 ರಂದು ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೇ ಅದೊಂದು ಸಿಸಿಟಿವಿ ವೀಡಿಯೋ, ಸಾವಿಗೆ ಟ್ವಿಸ್ಟ್ ಕೊಟ್ಟಿದೆ. ಇದರ ರಹಸ್ಯ ಮಗಳು ಹೊರಗೆ ತರುವ ಕೆಲಸ ಮಾಡಿದ್ದಾರೆ.

    ಘಟನೆ ಏನು?
    ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ 47 ವರ್ಷದ ಸಂತೋಷ ಪದ್ಮಣ್ಣವರ್ ಇದೇ ಅಕ್ಟೋಬರ್ 9 ರಂದು ಮನೆಯಲ್ಲಿ ಬೆಳಗಿನ ಜಾವ ಮೃತಪಟ್ಟಿದ್ದರು. ಇದೊಂದು ಸಹಜ ಸಾವು ಎಂದು ಅಕ್ಟೋಬರ್ 10 ರಂದು ಎಲ್ಲರೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದರು. ಆದರೇ ಎರಡು ದಿನಗಳ ಹಿಂದೆ ಮೃತ ಸಂತೋಷ್ ಮಗಳು ಸಂಜನಾ ಮನೆಯಲ್ಲಿ ಕುಳಿತ ಸಂದರ್ಭದಲ್ಲಿ ಮನೆಗೆ ಯಾರೆಲ್ಲ ಬಂದಿದ್ದರು ಎಂದು ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿದ್ದಾಳೆ. ಈ ವೇಳೆ ತಾಯಿ ಮಗಳನ್ನು ಗದರಿಸಿದ್ದು, ಸ್ನಾನಕ್ಕೆ ಹೋಗುವಂತೆ ಹೇಳಿದ್ದಾರೆ. ಸ್ನಾನ ಮಾಡಿ ವಾಪಸ್ ಬರುವಷ್ಟರಲ್ಲಿಯೇ ತಾಯಿ ಉಮಾ ಸಿಸಿಟಿವಿ ದೃಶ್ಯವನ್ನು ಡಿಲೀಟ್ ಮಾಡಿದ್ದಳು. ಇದು ಮಗಳಿಗೆ ಅನುಮಾನ ಮೂಡಿಸಿದೆ.

    ಸಂಜನಾ ನೇರವಾಗಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನ ಇದೆ, ತನಿಖೆ ಮಾಡುವಂತೆ ಮನವಿ ಮಾಡಿದ್ದಳು. ತಂದೆ ದೇಹ ದಾನ ಮಾಡಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಕಣ್ಣು ಮಾತ್ರ ಪಡೆದುಕೊಂಡಿದ್ದು, ದೇಹವನ್ನ ಪಡೆದುಕೊಂಡಿಲ್ಲ ಎಂದು ಪೊಲೀಸರ ಮುಂದೆ ಮಗಳು ಹೇಳಿದ್ದಳು. ಜೊತೆಗೆ ತಾಯಿಗೆ ಇನ್ಸ್ಟಾಗ್ರಾಂನಲ್ಲಿ ಒಬ್ಬ ಮಂಗಳೂರು ಮೂಲದ ಯುವಕ ಪರಿಚಯವಾಗಿದ್ದು, ಆತನ ಜೊತೆಗೆ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪುತ್ರಿ ದೂರು ನೀಡಿದ್ದಾಳೆ.

    ಸಂಜನಾ ದೂರು ಹಿನ್ನೆಲೆಯಲ್ಲಿ ಸಂತೋಷ ಪದ್ಮಣ್ಣವರ್ ಮೃತದೇಹವನ್ನು ಹೊರ ತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ದಾರೆ. ಮೃರಣೊತ್ತರ ಪರೀಕ್ಷೆ ವರದಿ ಬಂದ ಬಳಿಕ ಸಹಜ ಸಾವೋ, ಕೊಲೆಯೋ ಎಂಬುದು ಖಚಿತವಾಗಿ ಗೊತ್ತಾಗಲಿದೆ. ಇನ್ನು ಪದ್ಮಣ್ಣವರ್ ಮನೆಗೆ ಅಪರಿಚತರು ಬಂದು ಹೋಗಿರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತೋಷ್ ಅನೇಕರಿಗೆ ಬಡ್ಡಿ ಮೇಲೆ ಹಣ ಕೊಟ್ಟಿದ್ದ. ಹಣದ ವ್ಯವಹಾರ ಹಿನ್ನೆಲೆಯಲ್ಲಿ ಏನಾದರೂ ಕೊಲೆಯಾಗಿದೆಯಾ ಅಥವಾ ವೈಯಕ್ತಿಕ ಕಾರಣವೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

  • ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಹೆಬ್ಬಾಳ್ಕರ್

    ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಹೆಬ್ಬಾಳ್ಕರ್

    ಬೆಳಗಾವಿ: ಉತ್ತಮ ಮಳೆಯಿಂದ ಮಲಪ್ರಭಾ ಜಲಾಶಯ ಮಟ್ಟ ಸಂಪೂರ್ಣ ಭರ್ತಿಯಾಗಿದ್ದು, ಪ್ರತಿವರ್ಷದಂತೆ ಹುಬ್ಬಳ್ಳಿ (Hubballi), ಧಾರವಾಡ (Dharawada) ಸೇರಿದಂತೆ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar ) ಅವರು ಹೇಳಿದರು.

    ಮಲಪ್ರಭಾ ನೀರಾವರಿ ಸಲಹಾ ಸಮಿತಿ ವತಿಯಿಂದ ನವಿಲುತೀರ್ಥ ಅಣೆಕಟ್ಟು ಸ್ಥಳದಲ್ಲಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವಿಲುತೀರ್ಥ ಡ್ಯಾಂ ಉತ್ತರ ಕರ್ನಾಟಕದ ರೈತರ ಜೀವವಾಗಿರುವ ‘ಮಲಪ್ರಭಾ ಜಲಾಶಯ’ ಭರ್ತಿಯಾಗಿದೆ. ಈ ಶುಭ ಸಂದರ್ಭದಲ್ಲಿ ಮಲಪ್ರಭಾ ಜಲಾಶಯಕ್ಕೆ ಗಂಗಾ ಪೂಜೆ ಹಾಗೂ ‘ಬಾಗಿನ ಅರ್ಪಣೆ’ ಸಲ್ಲಿಸುವುದು ನಮ್ಮ ಭಾಗ್ಯ ಎಂದು ಹೇಳಿದರು. ಇದನ್ನೂ ಓದಿ: Bengaluru | ನಿಲ್ಲದ ವರುಣನ ಆರ್ಭಟ: ನಾಳೆ ಶಾಲೆಗಳಿಗೆ ರಜೆ ಘೋಷಣೆ

    ವರುಣನ ಕೃಪೆ, ತಾಯಿ ರೇಣುಕಾ ಯಲ್ಲಮ್ಮ ಅನುಗ್ರಹದಿಂದ ಮಲಪ್ರಭಾ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೇವೆ. ಈಗ ಮಲಪ್ರಭಾ ತಾಯಿಯ ಕೃಪೆ ನಮಗೆ ಸಿಕ್ಕಿದೆ. ಬೇಸಿಗೆ ಕಾಲದಲ್ಲಿ ಬಾದಾಮಿ, ರಾಮದುರ್ಗ, ನವಲಗುಂದ ತಾಲೂಕುಗಳ ಜೊತೆಗೆ ಮಲಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೂ ನೀರು ಬಿಡುಗಡೆಗೆ ಜಲಾಶಯದಲ್ಲಿ ನೀರು ಸಂಗ್ರಹಣೆ ಮಾಡಲಾಗಿದೆ. ಈ ಭಾಗದ ಶಾಸಕರ ಆಶಯದಂತೆ ಮುಂದಿನ ದಿನಗಳಲ್ಲಿ ಉದ್ಯಾನವನ, ವೀಕ್ಷಕರಿಗೆ ಆಸನ ಸೇರಿದಂತೆ ಜಲಾಶಯ ಅಭಿವೃದ್ಧಿಪಡಿಸಿ ಕೆಆರ್‌ಎಸ್ ಮಾದರಿಯಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: 95 ನಿಮಿಷಗಳ ಥ್ರಿಲ್ಲರ್ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಈ ವಾರ ತೆರೆಗೆ!

    ಕೆಆರ್‌ಎಸ್, ಆಲಮಟ್ಟಿ ಅಣೆಕಟ್ಟುಗಳು ಮಾದರಿಯಲ್ಲಿ ಮಲಪ್ರಭಾ ಜಲಾಶಯದ ಸುತ್ತಮುತ್ತ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರು, ಜನಪ್ರತಿನಿಧಿಗಳು ಶ್ರಮ ವಹಿಸಲಿದ್ದಾರೆ. ನಾಲ್ಕು ಜಿಲ್ಲೆಯ 13 ತಾಲೂಕುಗಳ ಜನರು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಈ ಜಲಾಶಯದ ಅವಲಂಬಿತರಾಗಿದ್ದಾರೆ. ಈಗ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜನರು ಸಂತಸದಲ್ಲಿದ್ದಾರೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರೆಡ್ಡಿ ಅವರು ಹೇಳಿದರು. ಇದನ್ನೂ ಓದಿ: ಕೋಲಾರ| ಮಳೆ, ಚಳಿಯನ್ನೂ ಲೆಕ್ಕಿಸದೇ ಚಿಕನ್ ಬಿರಿಯಾನಿಗಾಗಿ ಮುಗಿಬಿದ್ದ ಜನ

    ಮಲಪ್ರಭೆಯ ಇಂದಿರಾ ಗಾಂಧಿ ಜಲಾಶಯ ತುಂಬಿ ಹರಿಯುತ್ತಿದ್ದು, ಇದು ಎಲ್ಲರೂ ಸಂತಸ ಪಡುವ ವಿಷಯವಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರಿಗೆ, ದನಕರುಗಳಿಗೆ ಕುಡಿಯುವ ನೀರಿನ ಯಾವುದೇ ಅಡೆತಡೆ ಇಲ್ಲ. ಸರ್ಕಾರದಿಂದ ಜಲಾಶಯದ ಇನ್ನಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸವದತ್ತಿ ವಿಧಾನಸಭಾ ಮತಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರು ತಿಳಿಸಿದರು. ಇದನ್ನೂ ಓದಿ: ಭ್ರಷ್ಟ ಸರ್ಕಾರವನ್ನ ವಜಾ ಮಾಡಲು ರಾಷ್ಟ್ರಪತಿಗಳಿಗೆ ಮನವಿ: ಬಿ.ವೈ.ವಿಜಯೇಂದ್ರ

    ಬಾದಾಮಿ ಶಾಸಕ ಚಿಮ್ಮನಕಟ್ಟಿ, ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸಭೆಯ ಸದಸ್ಯರು, ಮಲಪ್ರಭಾ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ನವಿಲುತೀರ್ಥ ವೃತ್ತದ ಅಧೀಕ್ಷಕ ಎಂಜಿನಿಯರ್ ವಿ.ಎಸ್.ಮಧುಕರ, ನೀರಾವರಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹಾಡಹಗಲೇ ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆ