ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಜತ್ತ- ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದೆ. ಪೆಟ್ರೋಲ್ ಸೋರಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಕ್ರೇನ್ ಮೂಲಕ ಪೆಟ್ರೋಲ್ ಟ್ಯಾಂಕರ್ ತೆಗೆಯುವ ಕಾರ್ಯ ನಡೆಯುತ್ತಿದ್ದು, ಗ್ರಾಮದಲ್ಲಿನ ವಿದ್ಯುತ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲದೇ ಮೊಬೈಲ್ ಬಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಾಗೃತೆಯಿಂದ ಟ್ಯಾಂಕರ ತೆರವುಗೊಳಿಸಲಾಗುತ್ತಿದೆ. ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಕಾಣಿಸಿಕೊಂಡಿದ್ದಾರೆ.
ಅಭಿನಂದನಾ ಕಾರ್ಯಕ್ರಮಕ್ಕೂ ಮುನ್ನ ಜಮಖಂಡಿ ನಗರದ ರಾಯಲ್ ಪ್ಯಾಲೆಸ್ ಸ್ಕೂಲ್ ನಲ್ಲಿ ಭೋಜನವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಮತ್ತು ಉಮಾಶ್ರೀ ಒಟ್ಟಿಗೆ ಭೋಜನ ಮಾಡಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ತಯಾರಿ ನಡೆದಿದೆ. ಆದರೆ ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡಲ್ಲ. ಅವು ಉತ್ತರ ಪ್ರದೇಶದ ಅಮೇಥಿಯಿಂದಲೇ ಸ್ಪರ್ಧಿಸುತ್ತಾರೆ. ಪಕ್ಷದಿಂದ ಇಂತಹ ಚಿಂತನೆ ಕೂಡ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಂಪುಟ ವಿಸ್ತರಣೆ ಬಳಿಕ ಉಂಟಾಗಿರುವ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿ, ರಮೇಶ ಜಾರಕಿಹೊಳಿ, ಬಿ ಸಿ ಪಾಟೀಲ್ ಅವರ ಅಸಮಾಧಾನ ಸಹಜ. ಆದರೆ ಎಲ್ಲರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ರಮೇಶ ಜಾರಕಿಹೊಳಿ ಅವರೊಂದಿಗೆ ನಾನು ಮಾತುಕತೆ ಮಾಡುತ್ತೇನೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹಗಲು ಕನಸು ಕಾಣುತ್ತಿದ್ದಾರೆ. ಯಡಿಯೂರಪ್ಪ ಮಾತಿಗೆ ಕಿಮ್ಮತ್ತೆ ಇಲ್ಲ. ಇತ್ತೀಚಿಗೆ ಸುಳ್ಳು ಹೇಳುವ ಪದ್ಧತಿ ಹೆಚ್ಚಾಗಿದೆ ಎಂದು ಟಾಂಗ್ ನೀಡಿದರು.
– ಸಂಪುಟ ವಿಸ್ತರಣೆ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಬಿಗ್ ಶಾಕ್
– ಈ ವಾರ ಎಲ್ಲವೂ ನಿರ್ಧಾರ
ಬೆಳಗಾವಿ: ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಲು ಅತೃಪ್ತರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇದರ ಭಾಗವಾಗಿ ಮಾಜಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೊಂದನ್ನು ಈಗ ಹೇಳಲ್ಲ. ಒಂದು ವಾರ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.
ಈ ಕುರಿತು ಶಾಸಕ ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವ ಆಡಿಯೋ ಧ್ವನಿ ಪಬ್ಲಿಕ್ ಟಿವಿಗೆ ಲಭ್ಯವಿದ್ದು, ರಾಜೀನಾಮೆ ನಿರ್ಧಾರ ಮಾಡಿರುವುದು ನಿಜ, ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಈ ವಾರ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಚಿವ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ
ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದು ಖಚಿತವಾಗಿದ್ದು, ಯಾವ ಸಮಯದಲ್ಲಿ ಎಷ್ಟು ಮಂದಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದನ್ನು ಮಾತ್ರ ತಿಳಿಯಬೇಕಿದೆ. ಕಾಂಗ್ರೆಸ್ಸಿನ 5 ಜನ ಪರಿಷತ್ ಸದಸ್ಯರು ಹಾಗೂ 5 ರಿಂದ 6 ಜಿಲ್ಲೆಗಳ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಆಪ್ತ ಕಾಂಗ್ರೆಸ್ ಎಂಎಲ್ಸಿ ವಿವೇಕ್ ರಾವ್ ಪಾಟೀಲ್ ಸೇರಿದಂತೆ, ಹಲವು ಮುಖಂಡರು ರಮೇಶ್ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿರುತ್ತದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ನಿರ್ಧಾರ ರಾಜ್ಯ ರಾಜಕೀಯ ವಲಯದಲ್ಲಿ ಏನು ಪರಿಣಾಮ ಉಂಟು ಮಾಡಲಿದೆ ಎನ್ನುವುದು ಈ ವಾರ ಗೊತ್ತಾಗಲಿದೆ.
ಬೆಂಗಳೂರು: ರಾಜ್ಯದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಕೇಂದ್ರ ವಿಮಾನಯಾನ ಇಲಾಖೆಗೆ ಸಿಎಂ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿರುವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿರುವ ಸಿಎಂ ಕುಮಾರಸ್ವಾಮಿ ಅವರು, ಶಿಫಾರಸ್ಸು ಮಾಡಿರುವ ಹೆಸರು ನಾಮಕರಣ ಮಾಡಲು ಮನವಿ ಮಾಡಿದ್ದಾರೆ.
ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾಗಿ ನಾಡಿನ ಜನತೆಯ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದು, ಆದ್ದರಿಂದ ಈ ಹೆಸರುಗಳನ್ನೇ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಬೆಳಗಾವಿ (ಚಿಕ್ಕೋಡಿ): ಕೆಮಿಕಲ್ ತುಂಬಿದ ಕಂಟೇನರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ವಾಹನದಲ್ಲಿದ್ದ ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿಟಾ ಪಟ್ಟಣದಲ್ಲಿ ನಡೆದಿದೆ.
ವಿಟಾ ಪಟ್ಟಣದ ಹೊರವಲಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕೆಮಿಕಲ್ ತುಂಬಿದ ಕಂಟೇನರ್ ಲಾರಿಗೆ ಎದುರಿನಿಂದ ಬಂದ ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ವಾಹನಗಳು ಸ್ಫೋಟಗೊಂಡಿದೆ. ಎರಡೂ ಲಾರಿಗಳಿಗೂ ಬೆಂಕಿ ಹತ್ತಿದ ಪರಿಣಾಮ ವಾಹನದಲ್ಲಿ 5 ರಿಂದ 6 ಮಂದಿ ಸಜೀವ ದಹನವಾಗಿದ್ದಾರೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯವನ್ನು ನಡೆಸುತ್ತಿದ್ದಾರೆ. ಸದ್ಯ ಅಪಘಾತ ಸ್ಥಳದಲ್ಲಿ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಘಟನೆ ಕುರಿತು ವಿಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದಾರಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೋಗುತ್ತಿದ್ದಾರೆ. ನಾನು ವಾಸ್ತು ಹಾಗೂ ಭವಿಷ್ಯವನ್ನು ನಂಬುತ್ತೇನೆ ಎಂದು ಹೇಳಿದ್ದಾರೆ.
ನಾನೂ ಕೂಡಾ ವಾಸ್ತು ಫಾಲೋ ಮಾಡುತ್ತೀನಿ. ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡುವಾಗ ಸ್ವಲ್ಪ ಸಮಯ ನೋಡುತ್ತೇನೆ. ದಿನಾಲು ರಾಶಿ ಭವಿಷ್ಯ ನೋಡುತ್ತೇನೆ. ರಾಶಿ ಭವಿಷ್ಯದ ಮೇಲೆ ಅಪಾರ ನಂಬಿಕೆ ಹೊಂದಿದ್ದೇನೆ. ಉಡುಗೆ ತೊಡುಗೆಯಲ್ಲಿ ನಾನು ವಾಸ್ತು ನೋಡುತ್ತೀನಿ. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಅಂತ ನೋಡುತ್ತೀನಿ. ಮನೆಯಲ್ಲಿ ಹಿರಿಯರಿಂದ ದೇವರ ಭಕ್ತಿ, ವಾಸ್ತು, ಸಂಪ್ರದಾಯದ ಚಾಲ್ತಿಯಲ್ಲಿದೆ. ಹೀಗಾಗಿ ನಾನೂ ಕೂಡಾ ವಾಸ್ತು ಫಾಲೋ ಮಾಡುವದರ ಜೊತೆಗೆ ರಾಹುಕಾಲ ನಂಬುತ್ತೇನೆ ಎಂದರು.
ವಾಸ್ತು ಫಾಲೋ ಮಾಡುವುದ್ದಕ್ಕೆ ಸಚಿವ ರೇವಣ್ಣ ಅವರು ನಿಮಗೆ ಪ್ರೇರೆಣೆ ನಾ? ಎಂದು ಪ್ರಶ್ನಿಸಿದ್ದಕ್ಕೆ, ನಗುತ್ತ ನನಗೆ ರೇವಣ್ಣ ಅವರು ಪ್ರೇರಣೆ ಅಲ್ಲ. ನನಗೆ ನನ್ನ ತಂದೆ- ತಾಯಿ ಪ್ರೇರಣೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಸ್ಥಾನ ನೀಡಿದ್ದಕ್ಕೆ ಸಂತೋಷವಿದೆ. ಬೆಳಗಾವಿಗೆ ಎರಡು ಸಂಸದೀಯ ಸ್ಥಾನ ಮತ್ತು ಒಂದು ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಎಲ್ಲೂ ಕೂಡ ಮಂತ್ರಿ ಪದವಿ ಬೇಕು ಅಂತ ಹೇಳಿಲ್ಲ. ಹೈಕಮಾಂಡ್ ಹೇಗೆ ಹೇಳುತ್ತೆ ಅದೇ ರೀತಿ ನಡೆದುಕೊಳ್ಳುತ್ತೇನೆ. ಅದರ ಚೌಕಟ್ಟಿನಲ್ಲಿ ನಾನಿದ್ದೀನಿ. ಅವರು ಏನು ಹೇಳುತ್ತಾರೋ ಅದು ನನಗೆ ಪ್ರಸಾದ. ನಾನು ನನ್ನ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.
ಬೆಳಗಾವಿ: ರಮೇಶ್ ಜಾರಕಿಹೊಳಿ ಅವರು ಮಂತ್ರಿಗಿರಿ ಕಳೆದುಕೊಂಡಿರುವುದಕ್ಕೆ ನನಗೆ ವೈಯಕ್ತಿಕವಾಗಿ ನೋವಾಗಿದೆ. ಅವರು ಕೂಡ ಪ್ರಭಾವಿ ನಾಯಕರು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಂಪುಟದಿಂದ ರಮೇಶ್ ಜಾರಕಿಹೊಳಿಗೆ ಕೊಕ್ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದು, ಬಹಳಷ್ಟು ನೋವಾಗಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಕೂಡ ಪ್ರಭಾವಿ ನಾಯಕರಾಗಿದ್ದಾರೆ. ಜನರಲ್ ಕೋಟಾದಲ್ಲೂ ಗೋಕಾಕ್ನ ಲಿಂಗಾಯತರ ಮಧ್ಯೆ ಗೆದ್ದು ಬಂದಿದ್ದಾರೆ. ಅವರನ್ನು ಇಷ್ಟು ಬೇಗ ಸಚಿವ ಸಂಪುಟದಿಂದ ತೆಗೆಯಬಾರದಿತ್ತು ಇದು ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಸತತ ಜಾರಕಿಹೊಳಿ ಕುಟುಂಬ ಮಂತ್ರಿ ಆಗಿದ್ದು ಸಂತೋಷವಾಗಿದೆ ಎಂದು ಜಾರಕಿಹೊಳಿ ಪರ ಮಾತನಾಡಿದ್ರು.
ಯಾವ ಲಿಂಗಾಯತರನ್ನು ಕಡೆಗಣಿಸುತ್ತಿಲ್ಲ. ಎಂ.ಬಿ ಪಾಟೀಲ್ ಅಥವಾ ಬಿ.ಸಿ ಪಾಟೀಲ್ ಮಂತ್ರಿ ಆಗುತ್ತಿದ್ದಾರೆ. ಬಹಳ ಸಂತೋಷವಾಗಿದೆ. 22ರಂದು ಸಚಿವ ಸಂಪುಟ ಅಂತ ನಮ್ಮ ವರಿಷ್ಠರು ಹೇಳಿದ್ದರು. ಅವರು ಹೇಳಿದಂಗೆ ಮಾತು ಉಳಿಸಿಕೊಂಡಿದ್ದಾರೆ. ಈಗ ಎಲ್ಲವೂ ಸುಖ್ಯಾಂತವಾಗಿದೆ. ದೋಸ್ತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯನ್ನ ನಾನು ಮನಸಾರೆ ಸ್ವಾಗತಿಸುವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರೇ ಇರಲಿ, ಯಾರಿಗೂ ಕೂಡ ಮತ್ತೆ ಚುನಾವಣೆಗೆ ಹೋಗಲು ಇಷ್ಟವಿಲ್ಲ. ಈ ರಾಜ್ಯಕ್ಕೆ ಇನ್ನೊಂದು ಚುನಾವಣೆ ಹೊರೆ ಆಗಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿಲ್ಲ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಸ್ಥಾನ ನೀಡಿದ್ದಕ್ಕೆ ನನಗೆ ಸಂತೋಷವಿದೆ. ಬೆಳಗಾವಿಗೆ ಎರಡು ಸಂಸದೀಯ ಸ್ಥಾನ ಮತ್ತು ಒಂದು ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಎಲ್ಲೂ ಕೂಡ ಮಂತ್ರಿ ಪದವಿ ಬೇಕು ಅಂತ ಹೇಳಿಲ್ಲ. ಹೈಕಮಾಂಡ್ ಹೇಗೆ ಹೇಳುತ್ತೆ ಅದೇ ರೀತಿ ನಡೆದುಕೊಳ್ಳುತ್ತೇನೆ. ಅದರ ಚೌಕಟ್ಟಿನಲ್ಲಿ ನಾನಿದ್ದೀನಿ. ಅವರು ಏನು ಹೇಳುತ್ತಾರೋ ಅದು ನನಗೆ ಪ್ರಸಾದ. ನಾನು ನನ್ನ ಪಕ್ಷದ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ರು.
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಬಳಿ ನಡೆದಿದೆ.
ದಾಸ್ತಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಘಡ ಸಂಭವಿಸಿದೆ. ಈ ಖಾಸಗಿ ವೋಲ್ವೋ ಬಸ್ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಹೊರಟಿತ್ತು. ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಬಳಿ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಗೆ ಕರೆ ಮಾಡಲಾಗಿದೆ. ಕೂಡಲೇ ಸ್ಥಳಕ್ಕೆ 5ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳ ಬಂದಿದ್ದು, ಅವುಗಳ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಸ್ಸಿನಲ್ಲಿ ಒಟ್ಟು 34 ಮಂದಿ ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಪ್ರಯಾಣಿಕರೆಲ್ಲರೂ ಪ್ರಾಣಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎಂ.ಕೆ.ಹುಬ್ಬಳ್ಳಿ ಉಪಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದೆ ಅವರು ಸೈಲೆಂಟ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟ ರಮೇಶ್ ಜಾರಕಿಹೊಳಿ, ಈವರೆಗೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡು ಫೋನ್ ಸಂಪರ್ಕಕ್ಕೂ ಸಿಗದೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಈ ನಡೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಯಾರ ಕೈಗೂ ಸಿಗದೆ ಫೋನ್ ಸಂಪರ್ಕಕ್ಕೂ ಸಿಗದ ರಮೇಶ್ ಜಾರಕಿಹೊಳಿ ಬೇರೆ ಏನಾದರೂ ಕಾರ್ಯ ತಂತ್ರ ಮಾಡುತ್ತಿದ್ದಾರಾ ಅಂತ ಅನುಮಾನ ಎದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಹಾಗೂ ರಮೇಶ್ ಜಾರಕಿಹೊಳಿ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ ಈಗ ರಮೇಶ್ ಜಾರಕಿಹೊಳಿ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಹಲವಾರು ಅನುಮಾನ ಸೃಷ್ಟಿಸಿದೆ. ಅವರು ವಿಮಾನದಲ್ಲಿ ಪ್ರಯಾಣಿಸಿದ್ರಾ? ಇಲ್ಲಾ ಮನ ಬದಲಾಯಿಸಿಕೊಂಡು ವಾಪಸ್ ಹೋದ್ರಾ? ಎಲ್ಲ ಪಕ್ಷವನ್ನು ಬಿಡುವ ನಿರ್ಧಾರ ಮಾಡಿದ್ದಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ಮಾಧ್ಯಮಗಳಿಂದ ದೂರ ಉಳಿಯಲು ರಮೇಶ್ ಜಾರಕಿಹೊಳಿಗೆ ಆಪ್ತರು ಸೂಚಿಸಿದ್ದಾರೆ. ಸದ್ಯ ಗೋಕಾಕ್ನಲ್ಲಿರುವ ಮನೆಯಲ್ಲೂ ಇಲ್ಲದೆ ಯಾರ ಕೈಗೂ ಅವರು ಸಿಗುತ್ತಿಲ್ಲ. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರು ಬೇಸರಗೊಂಡು ಈ ರೀತಿ ಯಾರ ಕಣ್ಮುಂದೆಯೂ ಬರದೆ ಕಣ್ಮರೆಯಾಗಿದ್ದಾರಾ ಎನ್ನುವ ಚರ್ಚೆಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.
ಬೆಳಗಾವಿ: ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಅವರು ಪಕ್ಷದಲ್ಲೇ ಇರ್ತಾರೆ, ಜೊತೆಗೂಡಿ ಇಬ್ಬರು ಕೆಲಸ ಮಾಡ್ತೀವಿ ಎಂದು ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಇಂದು ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಸತೀಶ್ ಜಾರಕಿಹೊಳಿ ಮಾತನಾಡಿ, ಸಂಪುಟ ಸೇರ್ಪಡೆ ಬಗ್ಗೆ ಈವರೆಗೂ ಪಕ್ಷದಿಂದ, ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆದ್ರೆ ಮಾಧ್ಯಮಗಳಿಂದ ಸಂಪುಟ ಸೇರ್ಪಡೆ ಬಗ್ಗೆ ಗೊತ್ತಾಗಿದೆ ಅಂದ್ರು.
ನನ್ನನ್ನು ಈ ಹಿಂದೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಅವಮಾನವಲ್ಲ. ನಮ್ಮ ಪಕ್ಷದ ತೀರ್ಮಾನವನ್ನು ಹಿಂದೆಯೂ ಒಪ್ಪಿದ್ದೇವೆ. ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ನನಗಿರಬಹುದು ಬೇರೆಯವರಿಗೆ ಇರಬಹುದು ಯಾವುದೇ ತೊಂದರೆಯಿಲ್ಲ ಎನ್ನುವ ಮೂಲಕ ಸಹೋದರ ರಮೇಶ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರು ಸರ್ಕಾರಕ್ಕೆ ತೊಂದರೆಯಿಲ್ಲ, ಇಬ್ಬರು ಜೊತೆಗೂಡಿ ಕೆಲಸ ಮಾಡ್ತೀವಿ ಎಂದು ಪರೋಕ್ಷವಾಗಿ ಹೇಳಿದರು.
ನಾನು ಮಂತ್ರಿ ಆದ್ರೆ ಬೆಳಗಾವಿ ಜಿಲ್ಲೆಗೆ ಮತ್ತೆ ರಾಜಕೀಯ ವೈಭವೀಕರಣ ಬರಲಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಎಲ್ಲಾ ಶಾಸಕರು ಸೇರಿ ಕೆಲಸ ಮಾಡ್ತುತ್ತೇವೆ. ರಮೇಶ್ ಪಕ್ಷದಲ್ಲೇ ಇರ್ತಾರೆ. ಅವರ ಜೊತೆಗೆ ನಾನು ಮಾತನಾಡುತ್ತೇನೆ. ಜಿಲ್ಲಾ ಮುಖಂಡರು ಅವರ ಜೊತೆಗೆ ಮಾತನಾಡುತ್ತಾರೆ. ಬರುವ ಲೋಕಸಭಾ ಚುನಾವಣೆಯನ್ನು ಎಲ್ಲರು ಒಟ್ಟಾಗಿ ಎದುರಿಸುತ್ತೇವೆ ಅಂತ ತಿಳಿಸಿದ್ರು.
ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ, ನಮ್ಮಲ್ಲಿ ಒಗ್ಗಟ್ಟಿದೆ. ಯಾವ ಖಾತೆ ನೀಡ್ತಾರೆ ಎನ್ನುವುದು ಗೊತ್ತಿಲ್ಲ. ಯಾವುದೇ ಒಳ್ಳೆಯ ಖಾತೆ ನೀಡಿದರು ಕೆಲಸ ಮಾಡುತ್ತೇವೆ. ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಮಾಡುವ ಖಾತೆ ನೀಡಿದರೆ ಖುಷಿಯಾಗುತ್ತೆ. ಈಗಿರುವ ಖಾಲಿ ಖಾತೆಯಲ್ಲಿ ಯಾವುದಾದರೂ ಒಂದು ಖಾತೆ ನೀಡ್ತಾರೆ ಅಂತಾ ಊಹಿಸಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.