Tag: Bank Officials

  • ಬ್ಯಾಂಕ್‌ನಿಂದ ಸಾಲಕ್ಕೆ ಲಾರಿ ಜಪ್ತಿ – ಟೈರನ್ನೇ ಕದ್ದ ಅಧಿಕಾರಿಗಳು!?

    ಬ್ಯಾಂಕ್‌ನಿಂದ ಸಾಲಕ್ಕೆ ಲಾರಿ ಜಪ್ತಿ – ಟೈರನ್ನೇ ಕದ್ದ ಅಧಿಕಾರಿಗಳು!?

    ಕಾರವಾರ: ಗ್ಯಾರೇಜಿನಲ್ಲಿ ರಿಪೇರಿಗಾಗಿ ಬಿಟ್ಟಿದ್ದ ಲಾರಿಯನ್ನು ಬ್ಯಾಂಕ್‌ ಸಿಬ್ಬಂದಿ ಏಕಾಏಕಿ ಬಂದು ಜಪ್ತಿ ಮಾಡುವ ಜೊತೆಗೆ ಲಾರಿಯ ಟಾಯರ್ ಕಳವು ಮಾಡಿದ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ‌ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ.ಎಸ್ ಮಣಿ ಆರೋಪಿಸಿದ್ದಾರೆ.

    ಕಾರವಾರ ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ ಮೂಲದ ಮಹಮದ್ ರಫೀಕ್‌ ಎನ್ನುವವರು ಕಳಚೆಯ ಸೈಹಾದ್ರಿ ಸೇವಾ ಸಹಕಾರಿ ಬ್ಯಾಂಕ್ ನಿಂದ 19.58 ಲಕ್ಷ ರೂ ಸಾಲ ಪಡೆದು ಲಾರಿ ಖರೀದಿಸಿದ್ದರು. ಡಿ.23 ರಂದು ಲಾರಿಯನ್ನು ಹುಬ್ಬಳ್ಳಿಯ ಗ್ಯಾರೇಜ್ ಒಂದರಲ್ಲಿ ರಿಪೇರಿಗೆ ಬಿಡಲಾಗಿತ್ತು. ಈ ವೇಳೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಲಾರಿಯನ್ನು ಜಪ್ತಿ‌ಮಾಡಿದ್ದಾರೆ.‌ ಆದರೆ ಲಾರಿಯನ್ನು ಬ್ಯಾಂಕಿಗೆ ಕೊಂಡೊಯ್ಯದೇ ಸಿಬ್ಬಂದಿಯೋರ್ವರ ಮನೆಗೆ ಕೊಂಡೊಯ್ದು ಲಾರಿಯ ಟಾಯರ್ ತೆಗೆದು ಬದಲಿಗೆ ಹಳೆಯ ಟಯರ್ ಹಾಕಿದ್ದಾರೆ. ಅಲ್ಲದೇ ಎರಡು ದಿನದ ಬಳಿಕ ಬ್ಯಾಂಕಿನ ಬಳಿ ಲಾರಿ ತಂದು ಇಟ್ಟಿದ್ದಾರೆ ಎಂದು ಆರೋಪಿಸಿದರು.

    ಲಾರಿಯ ಟಾಯರ್ ಕಳವು ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸ್ವೀಕರಿಸಿರಲಿಲ್ಲ. ಬಳಿಕ‌ ದೂರು ಸ್ವೀಕರಿಸಿದರೂ ಸರಿಯಾಗಿ ವಿಚಾರಣೆ ನಡೆಸಿಲ್ಲ. ಲಾರಿಯ ಟಾಯರ್ ತೆಗೆದ ಜಾಗದಲ್ಲಿ ಪಂಚನಾಮೆ ನಡೆಸಿಲ್ಲ. ಹೀಗಾಗಿ ಸರಿಯಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ‌. ಇಲ್ಲವಾದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಮುಂಭಾಗ ರಾಜ್ಯ ಲಾರಿ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡು, ಮಾಧವ ನಾಯಕ, ಕಿರಣ ನಾಯ್ಕ, ಶ್ರೀಕೃಷ್ಣ, ನೂರ್ ಭಾಷಾ, ಪ್ರಶಾಂತ‌ನಾಯ್ಕ, ದಿಲೀಪ‌ ಕುಮಾರ, ಸುಜಯ ಮರಾಠಿ, ಕ್ವಾಜಾ ಅಕ್ತರ ಮಹಮದ್ ರಫೀಕ್ ಇದ್ದರು‌.

  • ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ಬೆಂಗಳೂರು: ರೈತರಿಗೆ ನೋಟಿಸ್ ಕೊಟ್ಟಿದ್ದಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಂಡೆಪ್ಪ ಕಾಶೆಂಪೂರ್ ಅವರು ಬ್ಯಾಂಕ್ ಅಧಿಕಾರಿಗೆ ಫೋನ್ ಮಾಡಿ ಗರಂ ಆಗಿದ್ದಾರೆ. ರೈತರಿಗೆ ನೋಟಿಸ್ ಕೊಡಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಈ ಬಗ್ಗೆ ಸಿಎಂ ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ದರೂ ಸಹ ರೈತರಿಗೆ ನೋಟಿಸ್ ಕೊಡ್ತೀರಾ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ನವಲಿಹಾಳ ಗ್ರಾಮದ ಸಹಕಾರ ಬ್ಯಾಂಕ್ ನಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ನೋಟಿಸ್ ಕೊಟ್ಟರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧವೇ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.