Tag: Bangalore

  • ರಾಜ್ಯಾದ್ಯಂತ ಭಾರೀ ಮಳೆ-ಜನ ಜೀವನ ಅಸ್ತವ್ಯಸ್ಥ

    ರಾಜ್ಯಾದ್ಯಂತ ಭಾರೀ ಮಳೆ-ಜನ ಜೀವನ ಅಸ್ತವ್ಯಸ್ಥ

    ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ಭಾರೀ ಮಳೆಯಿಂದಾಗಿ ಸಾವು-ನೋವುಗಳು ಸಂಭವಿಸಿದ್ದು, ಜನರು ಮನೆಗಳಲ್ಲಿಯೇ ಕೂರುವಂತಾಗಿದೆ.

    ಯಾದಗಿರಿ: ಜಿಲ್ಲೆಯಲ್ಲಿ ಹಲವೆಡೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ 7 ಜನ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಹೊರಗಡೆ ಬರಲು ಭಯಪಡುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಿಂದ ತೆರಳಲು ಅಂತಕ ವ್ಯಕ್ತಪಡಿಸುತ್ತಿದ್ದಾರೆ.

    ದಾವಣಗೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ನೀರಿನಿಂದ ಜಲಾವೃತ ವಾಗಿದ್ದು, ಹೋಟೆಲ್ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ನೀರು ತುಂಬಿಕೊಳ್ಳಲಿ ಕಾರಣವಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

    ಚಾಮರಾಜನಗರ: ಜಿಲ್ಲೆಯಾದ್ಯಂತ ಇಂದು ಎಡಬಿಡದೆ ಮಳೆ ಸುರಿಯುತ್ತಿದೆ. ಕಳೆದ ಐದು ವರ್ಷಗಳಿಂದ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಈಗಾ ಉತ್ತಮ ಮಳೆಯಾಗುತ್ತಿದ್ದು, ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

    ರಾಮನಗರ: ಶುಕ್ರವಾರ ರೇಷ್ಮೆನಗರಿ ರಾಮನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹತ್ತಾರು ಕೆರೆಗಳು ತುಂಬಿ ಕೋಡಿ ಹೊಡೆದು ಕೆಲವು ಕಡೆಗಳಲ್ಲಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ. ತಾಲೂಕಿನ ಶೇಷಗಿರಿ ಹಳ್ಳಿಯ ಕೆರೆ ಹಾಗೂ ರಂಗರಾಯರ ದೊಡ್ಡಿ ಕೆರೆ ಮಳೆಗೆ ಕೋಡಿ ಹೊಡೆದಿವೆ. ರಾಮನಗರ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಂಗರಾಯರದೊಡ್ಡಿ ಹಾಗೂ ಅರ್ಚಕರ ಹಳ್ಳಿ ಗ್ರಾಮದ ರಸ್ತೆ ಕೊಚ್ಚಿಕೊಂಡು ಹೋಗಿದೆ. ಗ್ರಾಮಸ್ಥರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ವಾಹನ ಸವಾರರು ತಮ್ಮ ವಾಹನಗಳನ್ನು ಪ್ರಾಣಾಪಾಯದ ನಡುವೆಯು ಚಲಾಯಿಸುತ್ತಿದ್ದಾರೆ. ಈ ಬಗ್ಗೆ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದವರು ಕೂಡಲೇ ರಸ್ತೆ ದುರಸ್ಥಿ ಕಾರ್ಯ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟಕ್ಕೆ ಎರಡು ಮನೆಗಳು ಕುಸಿದಿವೆ. ನಗರದ ಧರ್ಮಶಾಲಾ ರಸ್ತೆಯಲ್ಲಿರೋ ದಿವಾಕರ್ ಹಾಗು ಮಂಜಮ್ಮ ಎಂಬವರ ಹಳೆಯ ಮನೆಗಳ ಮೇಲ್ಚಾವಣೆ ಹಾಗು ಗೋಡೆ ನೆಲಕ್ಕೆ ಕುಸಿದಿದ್ದೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಪೌರಾಯುಕ್ತ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೂ ಕೂಡಲೇ ಕಟ್ಟಡ ತೆರವುಗೊಳಿಸುವಂತೆ ಮನೆ ಮಾಲಿಕರಿಗೆ ನೋಟೀಸ್ ನೀಡಿದ್ದಾರೆ. ಜಿಲ್ಲೆಯ ಚಳ್ಳಕೆರೆ, ಹಿರಿಯೂರು ತಾಲೂಕುಗಳಾದ್ಯಂತ ಬಾರಿ ಮಳೆಯಾಗಿದ್ದೂ ಕೆರೆ, ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

  • ಹಿರಿಯ ನಟಿ ಲೀಲಾವತಿ ನಿರ್ಮಾಣದ ಆಸ್ಪತ್ರೆ ಸಿಬ್ಬಂದಿಗೆ ಸಂಬಳ ನೀಡದ ಸರ್ಕಾರ!

    ಹಿರಿಯ ನಟಿ ಲೀಲಾವತಿ ನಿರ್ಮಾಣದ ಆಸ್ಪತ್ರೆ ಸಿಬ್ಬಂದಿಗೆ ಸಂಬಳ ನೀಡದ ಸರ್ಕಾರ!

    ಬೆಂಗಳೂರು: ಹಿರಿಯ ನಟಿ ಲೀಲಾವತಿ ನಿರ್ಮಾಣದ ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರ ಸಂಬಳ ನೀಡದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದ್ದು, ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

    ಹಿರಿಯ ನಟಿ ಡಾ. ಲೀಲಾವತಿಯವರು ಎಂಟು ವರ್ಷದ ಹಿಂದೆ ಗ್ರಾಮೀಣ ಪ್ರದೇಶದ ಬಡ ರೈತರ ಉಪಯೋಗಕ್ಕೆಂದು ಸ್ವಂತ ಹಣದಿಂದ ಈ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಕಾಲಕ್ರಮೇಣ ಆಸ್ಪತ್ರೆಯನ್ನ ನಿರ್ವಹಿಸಲು ಸರ್ಕಾರಿ ಆರೋಗ್ಯ ಇಲಾಖೆಯ ವಶಕ್ಕೆ ನೀಡಿದ್ದರು. ಅಂದಿನಿಂದ ಸರ್ಕಾರವೇ ವೈದ್ಯರಿಗೆ ಸಂಬಳ ನೀಡುತ್ತಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ವೈದ್ಯರಿಗೆ ಕಳೆದ 2 ತಿಂಗಳಿನಿಂದ ಸಂಬಳ ನೀಡದೇ ಕರ್ತವ್ಯಲೋಪವೆಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಈ ಆಸ್ಪತ್ರೆಯನ್ನ ಉನ್ನತ ದರ್ಜೆಗೆ ಏರಿಸುವ ಭರವಸೆಯನ್ನ ಅಧಿಕಾರಿಗಳು ಹಾಗೂ ಸಚಿವರು ನೀಡಿದ್ದರು. ಸರಿಯಾದ ಸಂಬಳ ನೀಡದ ಹಿನ್ನೆಲೆಯಲ್ಲಿ ವೈದ್ಯರು ಕೆಲಸಕ್ಕೆ ಬಾರದೆ ಬೇರೆ ಆಸ್ಪತ್ರೆಗೆ ಹೋಗುವ ಊಹಾಪೋಹಗಳು ಹರಿದಾಡುತ್ತಿದೆ. ವೈದ್ಯರಿಗೆ ಸಂಬಳ ನೀಡಿ ಆಸ್ಪತ್ರೆಯನ್ನು ಉಳಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಘಟನೆಯಿಂದ ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

     

  • ಕಾಂಗ್ರೆಸ್ ವಿರುದ್ಧ ಚಾರ್ಜ್‍ಶೀಟ್ ರಿಲೀಸ್ ಮಾಡ್ತೀವೆಂದು ಮುಜುಗರಕ್ಕೊಳಗಾದ ಬಿಜೆಪಿ ನಾಯಕರು

    ಕಾಂಗ್ರೆಸ್ ವಿರುದ್ಧ ಚಾರ್ಜ್‍ಶೀಟ್ ರಿಲೀಸ್ ಮಾಡ್ತೀವೆಂದು ಮುಜುಗರಕ್ಕೊಳಗಾದ ಬಿಜೆಪಿ ನಾಯಕರು

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್‍ಶೀಟ್ ರಿಲೀಸ್ ಮಾಡ್ತೀವಿ ಅಂತ ಬಂದ ಬಿಜೆಪಿ ನಾಯಕರೇ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.

     

    ಇಂದು ನಡೆದ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ಹಳೇ ಹಗರಣದ ಬಗ್ಗೆ ಮತ್ತೆ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಈ ದಾಖಲೆಗಳೆಲ್ಲಾ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಪ್ರಶ್ನಿಸಿದ ಕೂಡಲೇ ಈಶ್ವರಪ್ಪ ಪತ್ರಿಕಾಗೋಷ್ಠಿಯಿಂದ ಹೊರನಡೆದರು.

    ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಪುಟ್ಟಸಾಮಿ, ಕಾಂಗ್ರೆಸ್‍ನ 30 ಸಚಿವರ ವಿರುದ್ಧವೂ 30 ಹಗರಣಗಳ ದಾಖಲೆ ಇದೆ. ಅವುಗಳನ್ನು ಹಂತ ಹಂತವಾಗಿ ಬಡುಗಡೆಗೊಳಿಸುವುದಾಗಿ ತೇಪೆ ಹಚ್ಚೋ ಕೆಲಸ ಮಾಡಿದರು.

    ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಇನ್ನೆರಡು ದಿನದಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಹಗರಣ ಬಯಲು ಮಾಡುತ್ತಾರೆ. ಕಾಂಗ್ರೆಸ್‍ನ 20 ರಿಂದ 25 ಹಗರಣಗಳು ಇದ್ದು, ದಿನಕ್ಕೆ ಮೂರರಂತೆ ಬಿಡುಗಡೆಗೊಳಿಸಲಾಗುವುದು. ಅದಕ್ಕೆ ಸಿದ್ದರಾಮಯ್ಯ ಉತ್ತರ ನೀಡಲೇಬೇಕು ಅಂತ ಹೇಳಿದರು.

  • ವ್ಯಂಗ್ಯ ಮಾಡಲು ಹೋಗಿ ಅಗ್ನಿ ಅನಾಹುತ- ಯೂತ್ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಹಿಳೆಗೆ ಗಂಭೀರ ಗಾಯ

    ವ್ಯಂಗ್ಯ ಮಾಡಲು ಹೋಗಿ ಅಗ್ನಿ ಅನಾಹುತ- ಯೂತ್ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಹಿಳೆಗೆ ಗಂಭೀರ ಗಾಯ

    ಬೆಂಗಳೂರು: ಗ್ಯಾಸ್ ದರ ಏರಿಕೆಯ ಬಗ್ಗೆ ಕೇಂದ್ರದ ವಿರುದ್ಧ ಯೂತ್ ಕಾಂಗ್ರೆಸ್ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿ ಓರ್ವ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗ್ಯಾಸ್ ದರ ಏರಿಕೆ ಬಗ್ಗೆ ವ್ಯಂಗ್ಯ ಮಾಡಲು ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಲು ಬೆಂಕಿ ಹಚ್ಚಲು ಹೋದಾಗ ಆಕಸ್ಮಿಕವಾಗಿ ಸುಮಂತಾ ಎಂಬುವರ ಬಟ್ಟೆಗೆ ಬೆಂಕಿ ತಗುಲಿದೆ. ಇದರ ಪರಿಣಾಮ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣವೇ ಅವರನ್ನು ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಸುಮಂತಾ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    ಸರ್ಕಾರ ಎಲ್‍ಪಿಜಿ ದರ ಹಾಗೂ ದಿನಸಿ ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ನೀತಿಗಳ ವಿರುದ್ಧ ಯುವ ಕಾಂಗ್ರೆಸ್‍ನ ಅಧ್ಯಕ್ಷ ರಘುವೀರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ನೂರಾರು ಯುವ ಕಾರ್ಯಕರ್ತರು ಸೇರಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಲ್‍ಪಿಜಿ ಸಿಲಿಂಡರ್ ಹಾಗೂ ತರಕಾರಿ ಪ್ರದರ್ಶಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು. ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ರು.

    ಇಷ್ಟಾದರೂ ಪ್ರತಿಭಟನಾಕಾರರು ಮತ್ತೆ ಕಟ್ಟಿಗೆಗಳಿಂದ ಅಡುಗೆ ಮಾಡಲು ಮುಂದಾದ್ರು. ಅಷ್ಟೇ ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ತೀವ್ರ ಗೊಂದಲ ಉಂಟಾಗಿ, ವರದಿಗಾರರು ಬೆಂಕಿ ಅವಘಡವನ್ನು ವಿಡಿಯೋ ಮಾಡಲು ಬಿಡದೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಮೆರಾವನ್ನು ಒಡೆಯಲು ಯತ್ನಿಸಿದ್ರು.

    https://www.youtube.com/watch?v=qJGyi0cWI70

  • ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಬೆಂಗಳೂರು: ಬೆಳ್ಳಂದೂರು ಸಮೀಪದ ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಶ್ರೀನಿವಾಸ್ ಎಂಬವರು ಗುತ್ತಿಗೆ ಪಡೆದು ಮೀನುಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ನಗರದಲ್ಲಿ ಕಳೆದ ಹಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆ ನೀರಿನ ಜೊತೆ ಕಾರ್ಖಾನೆಗಳ ಹಾಗೂ ಒಳಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಮೀನುಗಳು ಸಾವನ್ನಪ್ಪಿವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

    ಮೀನುಗಳ ಸಾವಿನಿಂದ ಗುತ್ತಿಗೆದಾರ ಶ್ರೀನಿವಾಸ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ ಸಾವಿರಾರು ಮೀನುಗಳು ಸಾವನ್ನಪ್ಪಿದರೂ ಇನ್ನೂ ಕಾರ್ಖಾನೆಗಳ ಕಲುಷಿತ ನೀರು ಕೆರೆಗಳಿಗೆ ಸೇರುವುದು ನಿಂತಿಲ್ಲ ಎಂಬುದು ವಿಪರ್ಯಾಸವಾಗಿದೆ.

     

  • ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸ್ಫೋಟ – ತಪ್ಪಿದ ಬಾರೀ ಅನಾಹುತ

    ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸ್ಫೋಟ – ತಪ್ಪಿದ ಬಾರೀ ಅನಾಹುತ

    ಬೆಂಗಳೂರು: ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದಾರೆ.

    ಪೀಣ್ಯ ಎನ್.ಟಿಟಿ.ಎಫ್ ಬಳಿ ಇರುವ ಮನೆಯ ಎರಡನೇ ಮಹಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್ ನಡೆಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮನೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿಲಿಂಡರ್‍ಗಳಿದ್ದವು. ಆದರೆ ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

    ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ವಾಹನದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ನಟ ಲೂಸ್ ಮಾದ ಯೋಗೀಶ್ ಸಿಎಂ ಭೇಟಿ

    ನಟ ಲೂಸ್ ಮಾದ ಯೋಗೀಶ್ ಸಿಎಂ ಭೇಟಿ

    ಬೆಂಗಳೂರು: ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗೀಶ್ ಇಂದು ಸಿಎಂ ಸಿದ್ದರಾಯಯ್ಯ ಅವರನ್ನು ಭೇಟಿ ಮಾಡಿ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ನೀಡಿದ್ದಾರೆ.

    ನಟ ಯೋಗೀಶ್ ಹಾಗೂ ಅವರ ತಂದೆ ಸಿಎಂ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ಮದುವೆಯ ಆಮಂತ್ರಣ ನೀಡಿ ಆಹ್ವಾನಿಸಿದರು.

    ಕಳೆದ ಜೂನ್ 11 ರಂದು ತಮ್ಮ ಬಾಲ್ಯದ ಗೆಳತಿ ಮೈಸೂರಿನ ಅರಸ್ ಕುಟುಂಬಕ್ಕೆ ಸೇರಿರುವ ಸಾಹಿತ್ಯ ಜೊತೆ ಅದ್ಧೂರಿಯಾಗಿ ಯೋಗೀಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ನವೆಂಬರ್ 2 ರಂದು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  • ಪಕ್ಷ ಸಂಘಟನೆ ಮಾಡಿದವ್ರಿಗೆ ಮಾತ್ರ ಚುನಾವಣೆ ಟಿಕೆಟ್: ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಪಕ್ಷ ಸಂಘಟನೆ ಮಾಡಿದವ್ರಿಗೆ ಮಾತ್ರ ಚುನಾವಣೆ ಟಿಕೆಟ್: ಶಾಸಕರಿಗೆ ವೇಣುಗೋಪಾಲ್ ವಾರ್ನಿಂಗ್

    ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಿದವರಿಗಷ್ಟೆ ಟಿಕೆಟ್ ನೀಡಲಾಗುವುದು ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಲಿ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ ಅವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ರಾಜ್ಯದಲ್ಲಿ ಪಕ್ಷ ಸಂಘಟನೆ ಕಾರ್ಯ ಕುಂಠಿತವಾಗಿದೆ. ಕಾಂಗ್ರೆಸ್ ಶಾಸಕರು ಇರುವ ಸ್ಥಳದಲ್ಲೇ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಸದ್ಯ ಪಕ್ಷ ಸಂಘಟೆನಯಲ್ಲಿ ವಿಫಲರಾಗಿರುವ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿರುವ ಶಾಸಕರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಹೇಳಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮುಂದಿನ ಸಿಎಂ ಯಾರು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು ಈ ವೇಳೆ ಸಿಎಂ ಯಾರು ಅನ್ನೋ ವಿಚಾರ ವಿವಾದ ಮಾಡುವುದು ಬೇಡ. 2018ರ ಚುನಾವಣೆಯಲ್ಲಿ ತೀರ್ಮಾನವಾಗುತ್ತದೆ. ಈ ವಿಚಾರವಾಗಿ ಯಾರು ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

                                  

    ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ವಿಫಲ ಅನ್ನೋದೆಲ್ಲಾ ಸುಳ್ಳು. ಉತ್ತಮವಾಗಿ ನಡೆಯುತ್ತಿದೆ. ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಿಗೆ ಹಾಗೂ ಮುಖಂಡರಿಗೆ ಸೂಚನೆ ಕೊಟ್ಟ ವೇಣುಗೋಪಾಲ್ ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಬೇಕು ಅಂತಾ ಹೈಕಮಾಂಡ್ ಹೇಳಿದೆ. ಆದರೆ ಮುಂದಿನ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ಮುಂದೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ಸೋಷಿಯಲ್ ಮೀಡಿಯಾದಲ್ಲಿ ಭಾಗಿಯಾಗದೇ ಇರುವವರ ಬಗ್ಗೆ ಮಾತನಾಡಿದ ಅವರು, ಎಲ್ಲವನ್ನೂ ನೀವೇ ಮಾಡಲ್ಲ. ನಿಮಗೂ ಪಿಎ ಗಳಿದ್ದಾರೆ ಅಲ್ವಾ? ಅವರ ಕೈಲಿ ಮಾಡಿಸಿ. ಇಲ್ಲದೇ ಇದ್ದರೆ ಬೇರೆಯವರಿಗೆ ಕೊಟ್ಟು ಕೆಲಸ ಮಾಡಿಸಿ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಸಕ್ರೀಯರಾಗಿರಬೇಕು. ಜೊತೆಗೆ ಬೂತ್ ಕಮಿಟಿ ವರದಿಯನ್ನು ಆದಷ್ಟು ಬೇಗ ನೀಡುವಂತೆ ಕೆ.ಸಿ.ವೇಣುಗೋಪಾಲ್ ಮುಖಂಡರಿಗೆ ಹಾಗೂ ಶಾಸಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಈ ವೇಳೆ ಸಚಿವೆಯಾಗಿ ಉಮಾಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿಲ್ಲ ಎಂಬುದು ಕೇಳಿ ಬಂದಿದೆ. ಬಳಿಕ ಸೋಷಿಯಲ್ ಮೀಡಿಯಾದ ಮಹತ್ವದ ಬಗ್ಗೆ ಕೆಲ ಹೊತ್ತು ಸಚಿವೆ ಉಮಾಶ್ರೀಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಸಕ್ರಿಯಗೊಂಡಿದ್ದ 38 ಶಾಸಕರಿಗೆ ವೇಣುಗೋಪಾಲ್ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.

  • ಭಾರತದಲ್ಲಿ ಆಪಲ್, ಸ್ಯಾಮ್‍ಸಂಗ್ ಹಿಂದಿಕ್ಕಿದ ಒನ್ ಪ್ಲಸ್

    ಭಾರತದಲ್ಲಿ ಆಪಲ್, ಸ್ಯಾಮ್‍ಸಂಗ್ ಹಿಂದಿಕ್ಕಿದ ಒನ್ ಪ್ಲಸ್

    ಬೆಂಗಳೂರು: ಭಾರತದ ಅನ್ ಲೈನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯರ್ ಫೋನ್ ಎಂಬ ಹೆಗ್ಗಳಿಕೆಯನ್ನು ಚೀನಾ ಮೂಲದ ಒನ್ ಪ್ಲಸ್ ಕಂಪನಿಯ ಫೋನ್‍ಗಳು ಪಡೆದುಕೊಂಡಿದೆ.

    ಇಂಟರ್‍ನ್ಯಾಷನಲ್ ಡೇಟಾ ಕರ್ಪೋರೆಷನ್(ಐಡಿಸಿ) ಎರಡನೇ ತ್ರೈಮಾಸಿಕದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ ಫೋನ್ ಗಳಿಂಗಿತಲೂ ಹೆಚ್ಚಿನ ಸಂಖ್ಯೆಯಲ್ಲಿ ಒನ್ ಪ್ಲಸ್ ಕಂಪೆನಿಯ ಪ್ರೀಮಿಯರ್ ಫೋನ್ ಗಳು ಮಾರಾಟವಾಗಿದೆ ಎಂದು ತಿಳಿಸಿದೆ.

    ಐಡಿಸಿ ಮಾಹಿತಿಯಂತೆ ಭಾರತದಲ್ಲಿ ಮಾರಾಟವಾದ ಒಟ್ಟು ಪ್ರೀಮಿಯರ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ.57 ರಷ್ಟು ಪಾಲನ್ನು ಒನ್ ಪ್ಲಸ್ ಪಡೆದುಕೊಂಡಿದ್ದರೆ, ಆಪಲ್ ಐಫೋನ್ ಶೇ.38, ಸ್ಯಾಮ್ ಸಂಗ್ ಶೇ.4 ರಷ್ಟು ಪಡೆದುಕೊಂಡಿದೆ. ಇತರೇ ಕಂಪೆನಿಗಳು ಶೇ.1 ರಷ್ಟು ಪಾಲನ್ನು ಪಡೆದುಕೊಂಡಿದೆ.

    ಒನ್ ಪ್ಲಸ್ ಕಂಪೆನಿಯ 3ಟಿ, ಒನ್ ಪ್ಲಸ್ 5 ಫೋನ್ ಗಳು ಹೆಚ್ಚಾಗಿ ಮಾರಾಟವಾಗಿದ್ದರಿಂದ ಕಂಪೆನಿಗೆ ಮೊದಲ ಸ್ಥಾನ ಸಿಕ್ಕಿದೆ. ಇತ್ತೀಚೆಗೆ ಆನ್‍ಲೈನ್ ಶಾಪಿಂಗ್ ತಾಣ ಅಮೇಜಾನ್ ಘೋಷಿಸಿದ್ದ ಪ್ರೈಮ್ ಡೇ ಸೇಲ್‍ನಲ್ಲಿಯೂ ಒನ್‍ಪ್ಲಸ್ 5 ಸ್ಮಾರ್ಟ್ ಫೋನ್‍ಗಳು ಹೆಚ್ಚಾಗಿ ಮಾರಾಟವಾಗಿದೆ.

    ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒನ್ ಪ್ಲಸ್ ಸಂಸ್ಥೆ ಅಕ್ಟೋಬರ್ 4 ರಿಂದ 8ರ ವರೆಗೆ ಅಮೇಜಾನ್ ವರೆಗೆ ನಡೆಯುತ್ತಿರುವ ವಿಶೇಷ ಮಾರಾಟದಲ್ಲಿ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಈಗ ಒನ್‍ಪ್ಲಸ್ 3ಟಿ ಮೊಬೈಲ್ ಗೆ 24,999 ರೂ.ದರ ನಿಗದಿ ಪಡಿಸಿದೆ. ಅಷ್ಟೇ ಅಲ್ಲದೇ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಮೊಬೈಲ್ ಖರೀದಿಸಿದವರಿಗೆ 2 ಸಾವಿರ ರೂ. ಕ್ಯಾಶ್‍ಬ್ಯಾಕ್ ಮತ್ತು ಜೀರೋ ಇಎಂಐ ಆಫರ್ ನೀಡಿದೆ.

  • ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಕಡೆ ಬೆರಳು ತೋರಿಸುತ್ತಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿಯೇ ಪೆಟ್ರೋಲ್, ಡೀಸೆಲ್ ದರ ಅತೀ ಕಡಿಮೆ ಇದೆ. ರಾಜ್ಯ ಸರ್ಕಾರವು ಈಗಾಗಲೇ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಬ್ಯಾರಲ್‍ಗೆ 130 ಡಾಲರ್ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿತ್ತು? ಈಗ ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 42 ಡಾಲರ್ ಇದೆ ಎಂಬುವುದನ್ನು ಕೇಂದ್ರ ಗಮನಿಸಬೇಕು ಎಂದಿದ್ದಾರೆ. ಈ ಕುರಿತು ಸಿಎಂ ಕಚೇರಿಯಿಂದ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆಗೊಳಿಸಲಾಗಿದೆ.

    ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರೆಯಲಾಗಿದ್ದ ಪತ್ರಕ್ಕೆ ಸಿದ್ದರಾಮಯ್ಯ ಉತ್ತರವನ್ನು ನೀಡಿದ್ದು, ಪರೋಕ್ಷವಾಗಿ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರವು ಕಡಿತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಮಂಗಳವಾರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತ ಗೊಳಿಸಿತ್ತು. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ)ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ಇದಾದ ಬಳಿಕ ಬಿಜೆಪಿ ಸರ್ಕಾರಗಳು ವ್ಯಾಟ್ ಇಳಿಸಲು ಚಿಂತನೆ ನಡೆಸಿದ್ದು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ವ್ಯಾಟ್ ಇಳಿಸಲಾಗುವುದು ಎಂದು ಗುರುವಾರ ಪ್ರತಿಕ್ರಿಯಿಸಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಇರುವ ಉತ್ತರಪ್ರದೇಶ, ಗೋವಾ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲೂ ವ್ಯಾಟ್ ಇಳಿಕೆಯಾಗುವ ಸಾಧ್ಯತೆಯಿದೆ.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00
    ಕೇರಳ: ಪೆಟ್ರೋಲ್ – ಶೇ. 34.06

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್‍ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್‍ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್‍ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್‍ಗೆ)