Tag: Balasore Train Accident

  • ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

    ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

    ನವದೆಹಲಿ: ಸುಮಾರು 300 ಪ್ರಯಾಣಿಕರ ಜೀವವನ್ನು ಬಲಿತೆಗೆದುಕೊಂಡ ಬಾಲಸೋರ್ ಅಪಘಾತದ (Balasore Train Accident) ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಮೈಸೂರು-ದರ್ಭಾಂಗ ರೈಲು ಅಪಘಾತದ  (Mysuru-Darbhanga Train Accident) ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಮೈಸೂರು-ದರ್ಭಾಂಗ್ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ಹೋಲುತ್ತದೆ. ಆ ಅಪಘಾತದಿಂದ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಈ ಅಪಘಾತದ ಹೊಣೆಗಾರಿಕೆ ಮೇಲಿಂದ ಪ್ರಾರಂಭವಾಗುತ್ತದೆ. ಈ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲು ಇನ್ನೂ ಎಷ್ಟು ಕುಟುಂಬಗಳು ನಾಶವಾಗಬೇಕು? ಎಂದು ಅವರು ಟೀಕಿಸಿದ್ದಾರೆ.

    ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೈಸೂರು-ದರ್ಭಾಂಗ್ ಬಾಗಮತಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ಬೋಗಿಗಳು ಹಳಿ ತಪ್ಪಿದ್ದವು. ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿದೆ. ರೈಲು ಹಳಿಗಳ ಮೇಲೆ ಬಿದ್ದಿರುವ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

    ರೈಲು ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘರ್ಷಣೆಯ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ 22 ಆಂಬ್ಯುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವರ ತಂಗಲು ಮೂರು ಸಭಾಂಗಣಗಳನ್ನು ತೆರೆಯಲಾಗಿದೆ. ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

  • 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಭುವನೇಶ್ವರ: ದೇಶದ ರೈಲು ದುರಂತದ ಇತಿಹಾಸದಲ್ಲೇ ಒಡಿಶಾ ರೈಲು ಅಪಘಾತ (Odisha Train Accident) ಒಂದು ಕಪ್ಪು ಚುಕ್ಕೆ. ಮೂರು ರೈಲುಗಳು ಅಪಘಾತಕ್ಕೀಡಾಗಿದ್ದು, ಅಪಾರ ಸಾವು-ನೋವಿನ ದೃಶ್ಯಗಳು ಈಗಲೂ ಬೆಚ್ಚಿಬೀಳುಸುತ್ತವೆ. ಇಂತಹ ಭೀಕರ ಅಪಘಾತವಾದ ಬಳಿಕ ಏನೇನಾಯಿತು ಎಂಬ ವಿವರವನ್ನು ಇಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.

    ಸಿಎಸ್‌ಗೆ ಮೊದಲ ಫೋನ್‌ ಕರೆ
    ಅಂದು ಜೂನ್ 2 ರ ಸಂಜೆ 7 ರಿಂದ 7:10 ರ ಸಂದರ್ಭ. ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಅವರು ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಪಿ ಶಿಂಧೆ ಅವರಿಂದ ಕರೆ ಸ್ವೀಕರಿಸಿದರು. “ಸರ್, ಒಂದು ರೈಲು ಹಳಿತಪ್ಪಿದೆ ಮತ್ತು ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ” ಎಂದು ಶಿಂಧೆ ಹೇಳಿದರು. ಏನಾದರೂ ಅಗತ್ಯವಿದೆಯೇ ಎಂದು ಕೇಳಿದಾಗ ಜಿಲ್ಲಾಧಿಕಾರಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಸರಕು ರೈಲು ಹಳಿತಪ್ಪಿದರೂ ಸಹ, ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳ ಅಗತ್ಯವಿರುತ್ತದೆ. ಲೂಪ್‌ ಲೈನ್‌ಗೆ ತಪ್ಪಾಗಿ ಪ್ರವೇಶಿಸಿದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಹಳಿತಪ್ಪಿ ಸ್ಟ್ಯಾಟಿಕ್‌ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಕೊನೆಯ ಮೂರು ಕೋಚ್‌ಗಳಿಗೂ ಡಿಕ್ಕಿ ಹೊಡೆದಿತ್ತು. ಅಪಘಾತದ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲೆಯ ಎರಡು ತಂಡಗಳನ್ನು ಸಜ್ಜುಗೊಳಿಸಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಪರಿಹಾರದ ಹಣಕ್ಕಾಗಿ ಮೃತ ವ್ಯಕ್ತಿಯನ್ನು ಪತಿ ಎಂದ ಮಹಿಳೆ

    ಇದಾದ ಕೆಲವೇ ನಿಮಿಷಗಳಲ್ಲಿ ಬಾಲಸೋರ್ ಜಿಲ್ಲಾಧಿಕಾರಿಯಿಂದ ಮುಖ್ಯ ಕಾರ್ಯದರ್ಶಿಗೆ ಎರಡನೇ ಕರೆ ಬಂತು. “ಸರ್, ಇದು ರೈಲು ಅಪಘಾತ” ಎಂದರು. ಮರುನಿಮಿಷದಲ್ಲಿ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಹಠಾತ್ ಕರೆ ಬಂತು. ಅಪಘಾತದ ವಿಚಾರ ಪ್ರಸ್ತಾಪಿಸಿದರು. “ಅಪಘಾತದ ಬಗ್ಗೆ ಮಾಹಿತಿ ಬಂದಿದೆ. ನಾನು ಹೇಳಿದ್ದೇನೆ. ಸ್ಥಳಕ್ಕೆ ODRAF ಮತ್ತು ಅಗ್ನಿಶಾಮಕ ಸೇವೆಗಳ ತಂಡಗಳನ್ನು ನಿಯೋಜಿಸಿದ್ದೇನೆ. ಡಿಸಿ ಅಲ್ಲಿಗೆ ತಲುಪಿದಾಗ, ಇನ್ನೂ ಏನು ಅಗತ್ಯವಿದೆ ಎಂದು ಅವರಿಗೆ ತಿಳಿಯುತ್ತೆ. ಯಾವುದೇ ಪರಿಸ್ಥಿತಿ ಇದ್ದರೂ, ನಿಭಾಯಿಸಲು ರಾಜ್ಯ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದೇನೆ” ಎಂದು ಸಿಎಸ್‌ ಪ್ರತಿಕ್ರಿಯಿಸಿದರು. ನಂತರ ಟಿವಿ ಆನ್‌ ಮಾಡಿ ಸುದ್ದಿ ವಾಹಿನಿಯಲ್ಲಿ ರಾತ್ರಿ 7:15ರ ಸುಮಾರಿಗೆ ಮೊದಲ ದೃಶ್ಯಾವಳಿಗಳನ್ನು ನೋಡಿದಾಗ, ಮೇಜರ್ ಇದೆ ಎಂಬುದು ನಮಗೆ ಸ್ಪಷ್ಟವಾಯಿತು ಎಂದು ಸಿಎಸ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ದುರಂತದ ತೀವ್ರತೆ ಮತ್ತು ಪ್ರಮಾಣವನ್ನು ಅರಿತ ಕೂಡಲೇ ರಾಜ್ಯ ಸರ್ಕಾರದ ಒಂಬತ್ತು ಹಿರಿಯ ಅಧಿಕಾರಿಗಳನ್ನು 45 ನಿಮಿಷಗಳಲ್ಲಿ ಬಾಲಸೋರ್‌ಗೆ ನಿಯೋಜಿಸಲಾಗಿದೆ. ಅವರಲ್ಲಿ ಎಸಿಎಸ್ ಸತ್ಯಬ್ರತ್ ಸಾಹು, ಕೈಗಾರಿಕಾ ಕಾರ್ಯದರ್ಶಿ ಹೇಮಂಡ್ ಶರ್ಮಾ, ಡಿಜಿ ಅಗ್ನಿಶಾಮಕ ಸೇವೆ ಸುಧಾಂಶು ಸಾರಂಗಿ, ಸಾರಿಗೆ ಆಯುಕ್ತ ಅಮಿತಾಭ್ ಠಾಕೂರ್ ಮತ್ತು ಡಿಜಿ ಜಿಆರ್‌ಪಿ ಇದ್ದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ

    ಕಂಟ್ರೋಲ್ ರೂಂನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ತುರ್ತು ಸಭೆ ನಡೆಸಿದರು. “ಏನು ಬೇಕಾದರೂ ಮಾಡಿ. ಹಣದ ಬಗ್ಗೆ ಚಿಂತಿಸಬೇಡಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಡ್ರಾ ಮಾಡಿ” ಎಂದು ಸೂಚಿಸಿದರು. ಗಾಯಾಳುಗಳಿಗೆ ಚಿಕಿತ್ಸೆ, ಸಂತ್ರಸ್ತರಿಗೆ ಆಹಾರ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ನಿರ್ವಹಿಸಿ ಎಂದು ಜೀವಗಳನ್ನು ಉಳಿಸುವ ಕುರಿತು ಸಭೆಯಲ್ಲಿ ಸಿಎಂ ಒತ್ತಿ ಹೇಳಿದರು.

    ಇತ್ತ ಒಡಿಶಾ ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡಿತ್, ಜಿಲ್ಲೆಗೆ ಅಂಬುಲೆನ್ಸ್‌ಗಳನ್ನು ಸಜ್ಜುಗೊಳಿಸಿದರು. ರೋಗಿಗಳನ್ನು ಸ್ವೀಕರಿಸಲು ಸಿದ್ಧರಾಗಿರುವ ಬಾಲಾಸೋರ್ ಬಳಿಯ ಆಸ್ಪತ್ರೆಗಳನ್ನು ಎಚ್ಚರಿಸಿದರು. ಮೂರು ಗಂಟೆಗಳಲ್ಲಿ, ಅವರು 250 ಅಂಬುಲೆನ್ಸ್‌ಗಳು, SCB ವೈದ್ಯಕೀಯ ಕಾಲೇಜಿನಿಂದ 50 ವೈದ್ಯರು, ಬರಿಪಾದ ವೈದ್ಯಕೀಯ ಕಾಲೇಜಿನಿಂದ 30-40 ವೈದ್ಯರು ಮತ್ತು ಕೇಂದ್ರಪಾರಾ ಮತ್ತು ನೆರೆಯ ಜಾಜ್‌ಪುರದಿಂದ ಕೆಲವು ವೈದ್ಯರನ್ನು ಸಜ್ಜುಗೊಳಿಸಿದರು. ಬಾಲಾಸೋರ್‌ನಲ್ಲಿರುವ ಗ್ರೌಂಡ್ ಝೀರೋಗೆ “ಸಾಧ್ಯವಾದಷ್ಟು ಅಂಬುಲೆನ್ಸ್‌ಗಳನ್ನು ಕಳುಹಿಸಲು” ನೆರೆಯ ಭದ್ರಕ್ ಮತ್ತು ಜಾಜ್‌ಪುರದ ಡಿಸಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಅಂಬುಲೆನ್ಸ್‌ ಜೊತೆಗೆ ಸ್ಥಳಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಯಿತು. ಸಿಎಸ್‌ ಜೆನಾ ಅವರು ಸಾರಿಗೆ ಆಯುಕ್ತ ಅಮಿತಾಬ್ ಠಾಕೂರ್ ಅವರೊಂದಿಗೆ ಮಾತನಾಡಿದರು. ಪ್ರತಿಯಾಗಿ, ಬಾಲಸೋರ್, ಭದ್ರಕ್, ಜಾಜ್‌ಪುರ್ ಮತ್ತು ಬರಿಪದ ಜಿಲ್ಲೆಗಳ ಆರ್‌ಟಿಒಗಳಿಗೆ “ಕನಿಷ್ಠ 40 ಬಸ್‌ಗಳನ್ನು ಕಳುಹಿಸಲು” ಕೇಳಿದರು. “ರೈಲು ಅಪಘಾತದ ಎರಡು ಗಂಟೆಗಳ ಅವಧಿಯಲ್ಲಿ 40 ಅಂಬುಲೆನ್ಸ್‌ಗಳು, 40 ಬಸ್‌ಗಳು ಮತ್ತು 80 ವೈದ್ಯರು ಜಿಲ್ಲೆಯನ್ನು ತಲುಪಿದ್ದಾರೆ” ಎಂದು ಜೆನಾ ಹೇಳಿದರು.

    9 ಅಧಿಕಾರಿಗಳ ನಿರಂತರ ಕೆಲಸ
    ಅಗ್ನಿಶಾಮಕ ಸೇವೆಗಳ ಡಿಜಿ ಸುಧಾಂಶು ಸಾರಂಗಿ ಅವರು ಭುವನೇಶ್ವರದಿಂದ ಮೊದಲು ತಲುಪಿದರು. ನಂತರ ಎಸಿಎಸ್ ಸತ್ಯಬ್ರತ್ ಸಾಹು ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಹೇಮಂತ್ ಶರ್ಮಾ ಹೋದರು. ಆ ಹೊತ್ತಿಗೆ, ಅಗ್ನಿಶಾಮಕ ಇಲಾಖೆಯ 15 ತಂಡಗಳು ಮತ್ತು ಎರಡು ODRAF ತಂಡಗಳು ಸ್ಥಳಕ್ಕೆ ತಲುಪಿದ್ದವು. ಮಧ್ಯರಾತ್ರಿಯ ವೇಳೆಗೆ ರಕ್ಷಣಾ ಸಿಬ್ಬಂದಿಗಳ ಸಂಖ್ಯೆ 400 ಆಗಿತ್ತು. ದುರಂತ ಸ್ಥಳದಲ್ಲಿ ಸತ್ಯಬ್ರತ್ ಸಾಹು, ಹೇಮಂತ್ ಶರ್ಮಾ, ಬಲವಂತ್ ಸಿಂಗ್, ಅರವಿಂದ್ ಅಗರ್ವಾಲ್, ಭೂಪಿಂದರ್ ಸಿಂಗ್ ಪುನಿಯಾ, ಸುಧಾಂಶು ಸಾರಂಗಿ, ದಯಾಳ್ ಗಂಗ್ವಾರ್, ಅಮಿತಾಭ್ ಠಾಕೂರ್, ಹಿಮಾಂಶು ಕುಮಾರ್ ಲಾಲ್ ಒಂಬತ್ತು ಅಧಿಕಾರಿಗಳು ಹಾಗೂ ಬಾಲಸೋರ್ ಜಿಲ್ಲಾಧಿಕಾರಿ ಮತ್ತು ಎಸ್ಪಿ ಜೊತೆಯಲ್ಲಿ ನಿರಂತರವಾಗಿ ಕೆಲಸ ಮಾಡಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    3 ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ
    ತುರ್ತು ಪರಿಸ್ಥಿತಿಯಲ್ಲಿ ಯಾರು ಪರಿಹಾರದ ಉಸ್ತುವಾರಿ ವಹಿಸಬೇಕು, ಗಾಯಗೊಂಡವರನ್ನು ಯಾರು ಸ್ವೀಕರಿಸಬೇಕು, ಮೃತದೇಹಗಳನ್ನು ಯಾರು ನಿರ್ವಹಿಸಬೇಕು ಎಂದು ಅಧಿಕಾರಿಗಳು ಒಬ್ಬಬ್ಬರಾಗಿ ಒಂದೊಂದು ಜವಾಬ್ದಾರಿ ವಹಿಸಿಕೊಂಡರು. ಮೊದಲ ಹಂತದಲ್ಲಿ, ಇನ್ನೂ ಜೀವಂತವಾಗಿರುವ ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಬೇಕು. ನಂತರ ಟ್ರ್ಯಾಕ್‌ನಲ್ಲಿ ಮೃತದೇಹಗಳನ್ನು ಪಕ್ಕಕ್ಕೆ ಇರಿಸುವ ಕೆಲಸ ಮಾಡಿದರು. ಮೊದಲ 45 ನಿಮಿಷಗಳ ಕಾಲ, ಪ್ರಾಥಮಿಕವಾಗಿ ಶಿಂಧೆ ನೇತೃತ್ವದ ಸ್ಥಳೀಯ ಆಡಳಿತ, ಎಸ್ಪಿ ಮತ್ತು ಬಹನಾಗಾ ಜನರು ಪರಿಸ್ಥಿತಿಯನ್ನು ನಿಭಾಯಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ಅಧಿಕಾರಿಗಳಿಗೆ ಅಗತ್ಯ ಸಹಾಯ ಒದಗಿಸುವುದು ಮತ್ತು ರಕ್ತದಾನ ಮಾಡುವ ಮೂಲಕ ಸ್ಥಳೀಯರು ಸಾಥ್‌ ನೀಡಿದರು.

    ಅಷ್ಟೊತ್ತಿಗಾಗಲೇ ಕತ್ತಲಾವರಿಸಿತ್ತು. ಕತ್ತಲಿನಲ್ಲಿ ರಕ್ಷಣೆ ಕಾರ್ಯಾಚರಣೆ ಮಾಡುವುದು ಕಷ್ಟ ಎಂಬುದು ಅಧಿಕಾರಿಗಳಿಗೆ ಅರಿವಾಗಿದ್ದರಿಂದ ಮುಂಚೆಯೇ ಒಂದಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಇಡೀ ಪ್ರದೇಶವನ್ನು ಬೆಳಗಿಸುವುದು ಮೊದಲ ಕೆಲಸವಾಗಿತ್ತು. ನಾವು 53 ಲೈಟ್ ಟವರ್‌ಗಳನ್ನು ಮತ್ತು ಜನರೇಟರ್‌ಗಳನ್ನು ಸ್ಥಾಪಿಸಿದ್ದರು. ಇದರಿಂದ ರಕ್ಷಣಾ ಕಾರ್ಯಾಚರಣೆಗಳು ನಡೆಯಿತು. ಎರಡನೇ ಕೆಲಸ ಗಾಯಾಳುಗಳನ್ನು ಸ್ಥಳಾಂತರಿಸುವುದಾಗಿತ್ತು. ಸ್ಥಳೀಯ ಸಾರ್ವಜನಿಕರು ಮತ್ತು ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಿದ್ದರಿಂದ ಗಾಯಾಳುಗಳ ಸ್ಥಳಾಂತರವು ತಕ್ಷಣವೇ ಪ್ರಾರಂಭವಾಯಿತು. ಹೊಸ ತಂಡಗಳು ಆಗಮಿಸುತ್ತಿದ್ದಂತೆ ಅಧಿಕಾರಿಗಳಿಗೆ ಮತ್ತಷ್ಟು ಬಲ ಹೆಚ್ಚಾದಂತಾಯಿತು. ಹೀಗೆ ನಿರಂತರ ಕಾರ್ಯಾಚರಣೆ ನಡೆಸಿ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಬದುಕುಳಿದು ಗಾಯಗೊಂಡಿದ್ದ ಎಲ್ಲರನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕೆಲಸವಾಗಿತ್ತು. ಸರಿಸುಮಾರು 1,200 ಗಾಯಾಳುಗಳನ್ನು ರಕ್ಷಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಅಂಬುಲೆನ್ಸ್‌ ಮೂಲಕ ಹಾಗೂ ಸಣ್ಣಪುಟ್ಟ ಗಾಯಗಳಾಗಿದ್ದವರನ್ನು ಬಸ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸವಾಯಿತು. ಹೀಗೆ ಮೂರು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ರಕ್ಷಣಾ ಕಾರ್ಯದಲ್ಲಿ ಹಂತಹಂತವಾಗಿ ಎನ್‌ಡಿಆರ್‌ಎಫ್‌, ಸೈನ್ಯದವರು ರಕ್ಷಣಾ ತಂಡಗಳನ್ನು ಸೇರಿ ಸಾಥ್‌ ಕೊಟ್ಟರು. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ತಾಪಮಾನವು 39 ಮತ್ತು 40 ಡಿಗ್ರಿಗಳಿಗೆ ಏರುವುದರೊಂದಿಗೆ ಸುಡುವ ಬೇಸಿಗೆಯಲ್ಲಿ ಮೃತದೇಹಗಳನ್ನು ಸಂರಕ್ಷಿಸುವುದು ಮತ್ತೊಂದು ದೊಡ್ಡ ಸವಾಲಾಗಿತ್ತು. ಅಪಘಾತದ ಮರುದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ನಂತರ ಸ್ಥಳಕ್ಕೆ ವಿಐಪಿಗಳ ಭೇಟಿ, ಪರಿಶೀಲನೆ ಕಾರ್ಯವೂ ನಡೆಯಿತು. ಪ್ರಧಾನಿ ಮೋದಿ ಜೂನ್ 3 ರಂದು ಮಧ್ಯಾಹ್ನ ದುರಂತದ ಸ್ಥಳಕ್ಕೆ ತಲುಪಿದಾಗ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೈದಾನದಲ್ಲಿದ್ದ ಅಧಿಕಾರಿಗಳನ್ನು ಕೇಳಿದರು. ಅದೇ ದಿನ ಬೆಳಿಗ್ಗೆ ಅಪಘಾತದ ಸ್ಥಳದಲ್ಲಿದ್ದ ಪಟ್ನಾಯಕ್, ಮೃತದೇಹಗಳನ್ನು ಸಂರಕ್ಷಿಸುವಲ್ಲಿ ರಾಜ್ಯಕ್ಕೆ ಬೆಂಬಲದ ಅಗತ್ಯವಿದೆ ಎಂದು ಪ್ರಧಾನಿ ಮೋದಿಯವರಿಗೆ ತಿಳಿಸಿದರು.

    ಪ್ರಧಾನಿ ಮೋದಿ ಅವರು ಕೇಂದ್ರದ ಆರೋಗ್ಯ ಮಂತ್ರಿಗಳು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ನಂತರ ಒಂದೊಂದು ಅಂಬುಲೆನ್ಸ್‌ನಲ್ಲಿ 2 ಮೃತದೇಹಗಳನ್ನು ಭುವನೇಶ್ವರದ ಏಮ್ಸ್‌ಗೆ ಸಾಗಿಸಲಾಯಿತು. ಅಲ್ಲಿ ಶವಗಳಿಗಾಗಿ 150 ಹಾಸಿಗೆಗಳ ಶವಗಾರದ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯಿತು. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ

    ಮೃತರು ಮತ್ತು ಗಾಯಾಳುಗಳ ಬಂಧುಗಳಿಗೆ ಪರಿಹಾರವನ್ನು ಘೋಷಿಸುವುದರಿಂದ ಹಿಡಿದು, ಸಿಕ್ಕಿಬಿದ್ದ ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಗುರುತಿನ ನಂತರ ಮೃತದೇಹಗಳನ್ನು ಕುಟುಂಬಸ್ಥರು ಉಚಿತವಾಗಿ ಸಾಗಿಸುವುದು, ಮರಣ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆ ಸುಲಭಗೊಳಿಸುವುದು, ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸಂತ್ರಸ್ತರಿಗೆ ಆಹಾರ ಒದಗಿಸುವುದು. ಹೀಗೆ ಅನೇಕ ಸವಾಲುಗಳು ಎದುರಾದವು. ಸಿಎಂ, ಅಧಿಕಾರಿಗಳು ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರು.

  • ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    – ರೈಲು ದುರಂತಕ್ಕೆ ಸಿಲುಕಿದ್ದ ಮಗನಿಗಾಗಿ 230 ಕಿಮೀ ದೂರದಿಂದ ಬಂದ ಅಪ್ಪನ ನಂಬಿಕೆ ಹುಸಿಯಾಗಲಿಲ್ಲ

    ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ (Odisha Train Accident) ಮೃತಪಟ್ಟಿದ್ದಾನೆಂದು ನೂರಾರು ಶವಗಳ ರಾಶಿಯಲ್ಲಿ ಇಟ್ಟಿದ್ದ ತನ್ನ ಮಗನನ್ನು ಜೀವಂತವಾಗಿ ಗುರುತಿಸಿ ತಂದೆ ಹೊರ ತೆಗೆಸಿರುವ ಅಚ್ಚರಿಯ ಘಟನೆ ನಡೆದಿದೆ.

    ಹೆಲರಾಮ್‌ ಮಲಿಕ್‌ ಅವರು ತನ್ನ ಪುತ್ರ ಬಿಸ್ವಜಿತ್‌ ಬದುಕಿದ್ದಾನೆ ಎಂಬುದನ್ನು ಗುರುತಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮಗನನ್ನು ವಾಪಸ್‌ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ರೈಲು ದುರಂತದಲ್ಲಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಮಾತನ್ನು ಒಪ್ಪಲು ನಿರಾಕರಿಸಿದ ತಂದೆ ತನ್ನ ಮಗನಿಗಾಗಿ ಕೋಲ್ಕತ್ತಾದಿಂದ ಬಾಲಾಸೋರ್‌ಗೆ 230 ಕಿಮೀ ಪ್ರಯಾಣ ಮಾಡಿದ್ದರು.

    ಶವಗಾರದಲ್ಲಿ ಶವಗಳ ಮಧ್ಯೆ ಇರಿಸಿದ್ದ ಮಗನನ್ನು ಗುರುತಿಸಿ ಆತ ಬದುಕಿರುವುದನ್ನು ಖಚಿತ ಪಡಿಸಿಕೊಂಡರು. ನಂತರ ಒಡಿಶಾದಿಂದ ಮನೆಗೆ ಕರೆತಂದ ನಂತರ, ಮಗನನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಗಂಭೀರ ಗಾಯಗಳ ಹೊರತಾಗಿಯೂ, ಬಿಸ್ವಜಿತ್‌ ಆರೋಗ್ಯ ಸ್ಥಿರವಾಗಿದೆ. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!

    ಒಡಿಶಾದ ಬಾಲಾಸೋರ್‌ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕುಗಳಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

  • ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್‌ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು

    ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್‌ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು

    ಭುವನೇಶ್ವರ: ಒಡಿಶಾ (Odisha Train Tragedy) ರೈಲು ಅಪಘಾತ ಸಂಭವಿಸಿದ ನಂತರ ಈ ದುರಂತ ಕುರಿತು ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ದುರಂತಕ್ಕೂ ಮುಂಚೆ ರೆಕಾರ್ಡ್‌ ಮಾಡಲಾಗಿದ್ದು ಎನ್ನಲಾದ ವೀಡಿಯೋ ವೈರಲ್‌ ಆಗಿದೆ.

    ದುರಂತಕ್ಕೀಡಾದ ರೈಲೊಂದರ ಜನರಲ್‌ ಬೋಗಿಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ರೈಲು ದುರಂತ ಸಂಭವಿಸಿದಾಗ ಅಪಾರ ಪ್ರಮಾಣದಲ್ಲಿ ಸಾವು-ನೋವಾಗಲು ಇದೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ದುರಂತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಗಳು ಫುಲ್ ರಶ್ ಆಗಿದ್ದವು. ಪ್ರಯಾಣದ ವೇಳೆ ಫುಲ್ ರಶ್ ಆದ ವೀಡಿಯೋ ಮಾಡಿಕೊಂಡಿದ್ದ ಕೆಲ ಪ್ರಯಾಣಿಕರು ಅದನ್ನು ತಮ್ಮ ಸ್ನೇಹಿತರು, ಇತರರಿಗೆ ಶೇರ್ ಮಾಡಿದ್ದರು. ಆ ವೀಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

    ಒಡಿಶಾದಲ್ಲಿ 3 ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇದುವರೆಗೆ 288 ಮಂದಿ ಮೃತಪಟ್ಟಿದ್ದಾರೆ. 803 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತಕ್ಕೆ ಜಾಗತಿಕ ನಾಯಕರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ

    ಚೆನ್ನೈ-ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿತ್ತು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ದುರಂತ ಜರುಗಿತ. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ.

  • ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

    ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ

    ಬೆಂಗಳೂರು: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ (Odisha Train Accident) ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ (Santosh Lad) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿಯೋಜಿಸಿದ್ದಾರೆ.

    ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವು ಒದಗಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

    ಸಂತೋಷ್ ಲಾಡ್ ಅವರ ಜೊತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್ 

  • ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

    ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ

    ಬೆಂಗಳೂರು: ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತ (Odisha Train Accident) ಸಂಚಲನ ಸೃಷ್ಟಿಸಿದ್ದು, ಅಪಘಾತಕ್ಕೀಡಾದ ಮೂರು ರೈಲುಗಳ ಪೈಕಿ ಒಂದರಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರು ಸೇಫ್ ಆಗಿದ್ದಾರೆ.

    ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಕಳಸಾದಿಂದ ಪ್ರವಾಸಕ್ಕೆ ಹೊರಟಿದ್ದವರಿಂದ (Kalasa Tourists) ವೀಡಿಯೋ ಒಂದು ಬಿಡುಗಡೆಯಾಗಿದೆ. ಅಪಘಾತ ನಡೆದ ರೈಲಿನಲ್ಲಿಯೇ ಸಂಚಾರ ಮಾಡ್ತಿದ್ದ ಕನ್ನಡಿಗರು ತಾವು ಸೇಫ್ ಆಗಿದ್ದೇವೆ ಎಂದು ಹೇಳಿಕೊಂಡಿದ್ದು, ಟ್ರೇನ್‌ನಲ್ಲೇ ವೀಡಿಯೋ ಮಾಡಿ ದುರಂತದ ಘನಘೋರ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.

    ಹೆಸರು ಹೇಳದ ಪ್ರವಾಸಿಗರೊಬ್ಬರು, ನಾವು ಕಳಸಾದಿಂದ ಪ್ರವಾಸ ಹೊರಟಿದ್ದೆವು. ಇನ್ನೇನು ಒಡಿಶಾ ಗಡಿ ದಾಟಿ, ಕೋಲ್ಕತ್ತಾಗೆ ತಲುಪಬೇಕು ಎನ್ನುವಷ್ಟರಲ್ಲೇ ದೊಡ್ಡಮಟ್ಟದ ಸದ್ದು ಕೇಳಿಬಂತು. ತಕ್ಷಣಕ್ಕೆ ಏನಾಯ್ತು ಎಂದು ನೋಡಿದಾಗ ರೈಲು ಅಪಘಾತವಾಗಿರುವುದು ಕಂಡುಬಂದಿತು. ಸಮೀಪಕ್ಕೆ ಹೋಗಿ ನೋಡಿದಾಗ ನಮ್ಮ ರೈಲಿನಲ್ಲೇ ರಿಸರ್ವ್ S5 ಮತ್ತು ಇನ್ನುಳಿದ 2 ಜನರಲ್ ಬೋಗಿಗಳಿಗೆ ಹಾನಿಯಾಗಿತ್ತು. ಕೆಲವರು ತೀವ್ರವಾಗಿ ಗಾಯಗೊಂಡಿದ್ದರು, ಕೆಲವರು ಮೃತಪಟ್ಟಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ರಾತ್ರಿ ಸುಮಾರು 8:30ರ ವೇಳೆಗೆ ರೈಲು ಅಪಘಾತ ನಡೆದಿತ್ತು. ಬಳಿಕ ಅಲ್ಲಿಗೆ ಧಾವಿಸಿದ ಸ್ಥಳೀಯ ಜಿಲ್ಲಾಧಿಕಾರಿಗಳು ನಮಗೆ ಪರ್ಯಾಯ ರೈಲು ವ್ಯವಸ್ಥೆ ಮಾಡಿಕೊಟ್ಟರು. ನಾವು ಸೇಫ್ ಆಗಿದ್ದೇವೆ. ಉಳಿದವರೂ ಸೇಫ್ ಆಗಬೇಕಿತ್ತು. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ಸದ್ಯ ನಮ್ಮ ಪ್ರಯಾಣ ಮುಂದುವರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದಿಂದ ಸೇಫ್ ಆಗಿಯೇ ಹಿಂದಿರುಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

    ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದಲ್ಲಿ 233 ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿದೆ.

  • ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಒಡಿಶಾ ರೈಲು ದುರಂತ ಹೇಗಾಯ್ತು..? ಘಟನೆಗೆ ಕಾರಣ ಏನು..?

    ಭುವನೇಶ್ವರ: ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಈವರೆಗೆ 233 ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿದೆ. ಈ ನಡುವೆ ಭೀಕರ ರೈಲು ದುರಂತ (Train Accident) ಹೇಗಾಯ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಹೌದು.. ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು‌. ಈ ವೇಳೆ ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈನ್‌ನಲ್ಲಿ ಸಂಜೆ 7:30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ (ಸಂಖ್ಯೆ: 12841) (Coromandel Express) ಒಡಿಶಾದ ಬಹನಗಾ ಬಜಾರ್ ಸ್ಟೇಷನ್ ಬಳಿ ಹಳಿ ತಪ್ಪಿದೆ. ಇದರಿಂದಾಗಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಮೊದಲು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ 3ನೇ ರೈಲು ಮಾರ್ಗದ ಮೇಲೆ ಬಿದ್ದಿವೆ. ಇದನ್ನೂ ಓದಿ: Odisha Train Accident; ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ – 233 ಮಂದಿ ಬಲಿ, 900 ಮಂದಿಗೆ ಗಾಯ

    ಕೆಲವು ಸಮಯದ ಬಳಿಕ ಇದೇ ಮಾರ್ಗವಾಗಿ ಮತ್ತೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೆಂಗಳೂರಿನ ಹೌರ ಎಕ್ಸ್‌ಪ್ರೆಸ್‌ (ಸಂಖ್ಯೆ: 12864) ಕೋರಮಂಡಲ್‌ನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಬೆಂಗಳೂರು – ಹೌರಾ ಎಕ್ಸ್‌ಪ್ರೆಸ್‌ ಬೈಯಪ್ಪನಹಳ್ಳಿಯ ಎಸ್‌ಎಂವಿಟಿ ರೈಲು ನಿಲ್ದಾಣದಿಂದ ಹೊರಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ಹಲವರ ಸಾವಿನ ಶಂಕೆ

    ಈಗಾಗಲೇ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೆ ಇಲಾಖೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂ. ಪರಿಹಾರ ಘೋಷಿಸಿದೆ.