Tag: bakery shop

  • ಲಾಕ್‍ಡೌನ್‍ನಿಂದ ಕಾಂಡಿಮೆಂಟ್ಸ್, ಬೇಕರಿಗಳಿಗೆ ವಿನಾಯ್ತಿ ನೀಡಿದ ರಾಜ್ಯ ಸರ್ಕಾರ

    ಲಾಕ್‍ಡೌನ್‍ನಿಂದ ಕಾಂಡಿಮೆಂಟ್ಸ್, ಬೇಕರಿಗಳಿಗೆ ವಿನಾಯ್ತಿ ನೀಡಿದ ರಾಜ್ಯ ಸರ್ಕಾರ

    ಚಿಕ್ಕಬಳ್ಳಾಪುರ: ಭಾರತ ಲಾಕ್‍ಡೌನ್ ನಡುವೆ ರಾಜ್ಯದಲ್ಲಿ ಬೇಕರಿ, ಕಾಂಡಿಮೆಂಟ್ಸ್, ಮಿಠಾಯಿ ಹಾಗೂ ಸಿಹಿ ತಿನಿಸುಗಳ ತಯಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ವಿನಾಯ್ತಿ ನೀಡಿ ಇಂದು ಆದೇಶ ಹೊರಡಿಸಿದೆ.

    ಬೇಕರಿಯ ತಿಂಡಿ ತಿನಿಸುಗಳು, ಅವುಗಳಲ್ಲಿ ಪ್ರಮುಖವಾಗಿ ಬ್ರೆಡ್ ಹಾಗೂ ಬಿಸ್ಕೆಟ್‍ಗಳನ್ನ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿನ ರೋಗಿಗಳು ಹಾಗೂ ವಯಸ್ಸಾದವರು ಸೇರಿದಂತೆ ಮಕ್ಕಳು ಹಾಗೂ ಸಾಮಾನ್ಯ ಜನ ಸಹ ತಿನ್ನುತ್ತಾರೆ. ಹೀಗಾಗಿ ಬೇಕರಿ ತಿಂಡಿ ತಿನಿಸುಗಳ ಅವಶ್ಯಕತೆ ಇರುವ ಕಾರಣ ಬೇಕರಿ ಹಾಗೂ ಕಾಂಡಿಮೆಂಟ್ಸ್ ಗಳಿಗೆ ಲಾಕ್‍ಡೌನ್‍ನಿಂದ ಸಡಲಿಕೆ ನೀಡಲಾಗಿದೆ. ಆದರೆ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಆರೋಗ್ಯ ಇಲಾಖೆಯ ನಿಬಂಧನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

    ಪ್ರಮುಖವಾಗಿ ಬೇಕರಿ ತಿಂಡಿ ತಿನಿಸುಗಳನ್ನು ತಯಾರಿ ಹಾಗೂ ಮಾರಾಟ ಮಾಡುವ ವೇಳೆ ಕಡಿಮೆ ಕಾರ್ಮಿಕರನ್ನ ಬಳಕೆ ಮಾಡಿಕೊಳ್ಳಬೇಕು. ತಯಾರಿಕಾ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.

  • ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ಪ್ಲಾಸ್ಟಿಕ್ ಬ್ಯಾಗ್ ಕೊಡಲ್ಲ ಎಂದ ಬೇಕರಿ ಉದ್ಯೋಗಿಯನ್ನ ಕೊಂದೇ ಬಿಟ್ಟ

    ನವದೆಹಲಿ: ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದಿದ್ದಕ್ಕೆ ಗ್ರಾಹಕನೊಬ್ಬ ಬೇಕರಿ ಉದ್ಯೋಗಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿ ನಿವಾಸಿ ಖಲೀಲ್ ಅಹ್ಮದ್ (45) ಕೊಲೆಯಾದ ಬೇಕರಿ ಉದ್ಯೋಗಿ. ಈಶಾನ್ಯ ದೆಹಲಿಯ ದಯಾಲ್ಪುರ್ ಪ್ರದೇಶದ ಬೇಕರಿಯಲ್ಲಿ ಅಕ್ಟೋಬರ್ 15ರಂದು ಘಟನೆ ನಡೆದಿದೆ. ಫೈಝನ್ ಖಾನ್ (24) ಕೊಲೆಗೈದ ಗ್ರಾಹಕ. ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕ್!

    ದಯಾಲ್ಪುರ್ ಪ್ರದೇಶದ ಬೇಕರಿಗೆ ಫೈಝನ್ ಖಾನ್ ಬಂದಿದ್ದ. ಸ್ವೀಟ್ ಖರೀದಿಸಿದ್ದ ಫೈಝನ್ ಖಾನ್ ಪ್ಲಾಸ್ಟಿಕ್ ಬ್ಯಾಗ್ ಕೊಡುವಂತೆ ಕೇಳಿದ್ದಾನೆ. ಆದರೆ ಖಲೀಲ್ ಅಹ್ಮದ್ ಪ್ಲಾಸ್ಟಿಕ್ ಬ್ಯಾಗ್ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಫೈಝನ್ ಖಾನ್ ಬೇಕರಿ ಮುಂದೆ ಇದ್ದ ಇಟ್ಟಿಗೆಯಿಂದ ಖಲೀಲ್ ಅಹ್ಮದ್ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಲೀಲ್ ಅಹ್ಮದ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖಲೀಲ್ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಖಲೀಲ್ ಅಹ್ಮದ್ ಪುತ್ರ, ಘಟನೆ ನಡೆದು ಸುಮಾರು ದಿನಗಳು ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅಷ್ಟೇ ಅಲ್ಲದೆ ಆರೋಪಿಯು ತಾನು ಅಪ್ರಾಪ್ತ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.