Tag: Bahmani Sultan

  • ಯಾವ ಬಹಮನಿ ಸುಲ್ತಾನರ ಉತ್ಸವ? ನನಗೇನು ಗೊತ್ತಿಲ್ಲ- ಸಿಎಂ ಸಿದ್ದರಾಮಯ್ಯ

    ಯಾವ ಬಹಮನಿ ಸುಲ್ತಾನರ ಉತ್ಸವ? ನನಗೇನು ಗೊತ್ತಿಲ್ಲ- ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಸರ್ಕಾರ ಬಹಮನಿ ಸುಲ್ತಾನರ ಆಚರಣೆಯನ್ನು ಮಾಡುತ್ತಿಲ್ಲ. ಇದ್ಯಾವುದು ನನಗೆ ಗೊತ್ತಿಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಸೂಫಿ ಸಂತರ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನುವ ಸುದ್ದಿಗೆ ಅವರು, ಸರ್ಕಾರದಿಂದ ಯಾವುದೇ ಉತ್ಸವ ಆಚರಣೆ ಮಾಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

    ಈ ವೇಳೆ ಕಲಬುರಗಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಬಹಮನಿ ಸುಲ್ತಾನರ ಉತ್ಸವ ಆಚರಣೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ನೀವು ಅವರನ್ನೇ ಕೇಳಿ ಎಂದ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.

    ಬಹಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಸೂಫಿ ಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದೆಂದು ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು, ಮಾರ್ಚ್ 6 ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಈಗ ರಾಹುಲ್ ರಾಜ್ಯ ನಾಯಕ, ಸಿದ್ದರಾಮಯ್ಯ ರಾಷ್ಟ್ರೀಯ ನಾಯಕ: ಶೋಭಾ ಕರಂದ್ಲಾಜೆ

    ಕಾಂಗ್ರೆಸ್ ನಾಯಕರು ಶತಾಯಗತಾಯ ಬಹಮಾನಿ ಸುಲ್ತಾನರ ಹೆಸರಿನಲ್ಲಿಯೇ ಉತ್ಸವವನ್ನು ಮಾಡಿಯೇ ತೀರುತ್ತೇವೆಂದು ನಿರ್ಧರಿಸಿದ್ದು, ಮಾರ್ಚ್ 6 ರಂದು ಖವಾಲಿ ಮತ್ತು ಬಹಮಾನಿ ಸುಲ್ತಾನರ ಸಂಸ್ಕೃತಿಯನ್ನು ಅನಾವರಣ ಮಾಡಲು ಸಜ್ಜಾಗಿದ್ದಾರೆ. ಈ ಕುರಿತು ಕಲಬುರಗಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆಯೋಜಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯಾರು ಏನೇ ಹೇಳಿದರೂ ಉತ್ಸವ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

  • ಬಹುಮನಿ ಸುಲ್ತಾನರು ಟಿಪ್ಪುವಿನ ತದ್ರೂಪ- ಕೋಟ ಶ್ರೀನಿವಾಸ ಪೂಜಾರಿ

    ಬಹುಮನಿ ಸುಲ್ತಾನರು ಟಿಪ್ಪುವಿನ ತದ್ರೂಪ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಬಹುಮನಿ ಸುಲ್ತಾನರು ಟಿಪ್ಪು ಸುಲ್ತಾನನ ತದ್ರೂಪ. ಸಿಎಂ ಸಿದ್ದರಾಮಯ್ಯ ಸರ್ಕಾರ ಬರೀ ಇಂತದ್ದೇ ಮಾಡ್ತಾ ಇದೆ ಅಂತ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾಪುರುಷರ ದಿನಾಚರಣೆ ಆದ್ರೆ ತಪ್ಪಲ್ಲ. ಕ್ರೌರ್ಯದ ಮತ್ತೊಂದು ಸಂಕೇತವಾದ ಟಿಪ್ಪು ಜಯಂತಿಯನ್ನು ಸರ್ಕಾರ ಮಾಡಿದೆ. ಬಹುಮನಿ ಸುಲ್ತಾನರು ಕನ್ನಡಿಗರಿಗೆ ಬಹಳ ತೊಂದರೆ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ಓದಿದ್ದೇನೆ. ಕೆಲ ಇತಿಹಾಸ ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

    ಟಿಪ್ಪುವಿನ ಮತ್ತೊಂದು ರೂಪ ಬಹುಮನಿ ಸುಲ್ತಾನ್. ಟಿಪ್ಪು ಸುಲ್ತಾನನ ಸಾಧನೆ ಏನು ಎಂಬುದನ್ನು ಮೂರ್ನಾಲ್ಕು ವರ್ಷದಿಂದ ಹೇಳುತ್ತಾ ಬಂದಿದ್ದೇನೆ. ಮತ್ತೆ ಪುನರಾವರ್ತನೆ ಮಾಡಲ್ಲ ಎಂದು ಹೇಳಿದರು.

    ಈ ಪ್ರಸ್ತಾಪದ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ರಾಜ್ಯದ ಜನರ ಅಭಿಪ್ರಾಯವನ್ನು ಪಡೆದು ಸರ್ಕಾರ ಈ ನಡೆ ಸರಿಯಿಲ್ಲ ಎಂದಾದರೆ ಕೂಡಲೇ ಕೈಬಿಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

  • ಬಹುಮನಿ ಸುಲ್ತಾನರು ಯಾರು?- ಕಾಗೋಡು ತಿಮ್ಮಪ್ಪ

    ಬಹುಮನಿ ಸುಲ್ತಾನರು ಯಾರು?- ಕಾಗೋಡು ತಿಮ್ಮಪ್ಪ

    ಉಡುಪಿ: ರಾಜ್ಯ ಸರ್ಕಾರದ ಬಹುಮನಿ ಸುಲ್ತಾನ್ ಜಯಂತಿ ಬಗ್ಗೆ ರಾಜ್ಯಾದ್ಯಂತ ಹೋರಾಟ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ಮತ್ತು ಬಿಜೆಪಿ ಇದನ್ನು ವಿರೋಧಿಸಿದೆ. ಈ ನಡುವೆ ಬಹುಮನಿ ಸುಲ್ತಾನ್ ಯಾರು? ಬಹುಮನಿ ಸುಲ್ತಾನ್ ಬಗ್ಗೆ ನನಗೆ ಗೊತ್ತಿಲ್ಲ ಅಂತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ಆಚರಣೆ ಬಗ್ಗೆ ಪಕ್ಷದೊಳಗೆ ಅಸಮಾಧಾನ ಇದೆಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ.

    ಉಡುಪಿಯ ಬ್ರಹ್ಮಾವರ ತಾಲೂಕು ಉದ್ಘಾಟಿಸಿ ಮಾತನಾಡಿದ ಕಾಗೋಡು, ಆ ಕಾಲದಲ್ಲಿ ನಾನು, ನೀವು ಯಾರು ಹುಟ್ಟಿರಲಿಲ್ಲ. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ. ಚರಿತ್ರೆ ಬರೆದವ ಅವನ ಆಲೋಚನೆ ಮತ್ತು ಮಾನಸಿಕ ಸ್ಥಿತಿಗೆ ಅನುಗುಣವಾಗಿ ಚರಿತ್ರೆ ಬರೆದಿರುತ್ತಾನೆ ಎಂದು ಹೇಳಿದರು.

    ಆಯಾಯ ಕಾಲದಲ್ಲಿ ಏನೇನು ಆಗಿದೆ ಅದು ಸರಿ. ರಾಜ ಮಹಾರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಬಂದವರು. ಆಗ ಆಳ್ವಿಕೆ ಮಾಡಿದ ರಾಜರಿಗೆ ಜನರ ಬಗ್ಗೆ ಕಾಳಜಿ ಇರುತ್ತಿರಲಿಲ್ಲ. ಸಾಮ್ರಾಜ್ಯ ವಿಸ್ತರಣೆ ಮಾತ್ರ ಆಗಿನ ರಾಜರ ಗುರಿಯಾಗಿತ್ತು. ಜನರಿಗೆ ಸ್ವಂತದ್ದೊಂದು ಭೂಮಿ ಕೊಡುವ ಕೆಲಸವನ್ನೂ ಆಗಿನ ರಾಜ ಮಹಾರಾಜರು ಮಾಡಿಲ್ಲ ಎಂದು ಕಾಗೋಡು ಟೀಕೆ ಮಾಡಿದರು.

    ಕುವೆಂಪು ಅವರು ಬರೆದ ಹಾಡು ನಾಡಗೀತೆ ಆಯ್ತು. ಆ ಸಂದರ್ಭ ವಿರೋಧ ಬಂದಿದ್ದರೆ ಅದೂ ಆಗ್ತಾ ಇರಲಿಲ್ಲವೇನೋ ಅಂತ ಕಾಗೋಡು ತಿಮ್ಮಪ್ಪ ಹೇಳಿದ್ರು.