Tag: bagalur lake

  • ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    ತುಂಬಿದ ಬಾಗಲೂರು ಕೆರೆ- ಕಣ್ಮನ ಸೆಳೆಯುತ್ತಿದೆ ರಮಣೀಯ ದೃಶ್ಯ

    – ಕೆಸಿ ವ್ಯಾಲಿ ಯೋಜನೆಯಡಿ ತುಂಬಿದ ಕೆರೆ
    – ಕೃಷಿ, ಜಾನುವಾರುಗಳಿಗೆ ಮಾತ್ರ ಉಪಯುಕ್ತ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನ ಪೈಪ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನ ತುಂಬಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿತ್ತು. ಈಗ ಬಾಗಲೂರು ಕೆರೆ ಕೆಸಿ ವ್ಯಾಲಿ ಯೋಜನೆಯಡಿ ತುಂಬಿದೆ. ಈ ರಮಣೀಯ ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತಿದೆ.

    ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 65 ಕೆರೆಗಳಿಗೆ ತುಂಬಿಸುವ ಯೋಜನೆಯ ಮೊದಲ ಹಂತಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಚಾಲನೆ ಸಿಕ್ಕಿತ್ತು. ಆದರೆ ಈಗ ಬಾಗಲೂರು ಕೆರೆ ತುಂಬಿದ್ದು, ಈ ನೀರನ್ನು ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಮಾತ್ರ ಬಳಸಬಹುದಾಗಿದೆ.

    ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 12 ಕೆರೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ 9 ಕೆರೆಗಳು, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳು ಸೇರಿ ಒಟ್ಟು 65 ಕೆರೆಗಳು ಈ ಯೋಜನೆಯಡಿ ಬರುತ್ತವೆ. ಈ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಆ ಭಾಗದ ವಾರ್ಷಿಕ ವಾಡಿಕೆ ಮಳೆಯಿಂದ ಲಭ್ಯವಾಗುವ ನೀರು ಸೇರಿದಲ್ಲಿ ಅನೇಕ ಕೆರೆಗಳು ತುಂಬಲಿವೆ. ರೈತಾಪಿ ವರ್ಗಕ್ಕೂ ಯೋಜನೆಯಿಂದ ಅನುಕೂಲವಾಗಲಿದೆ.

    ಬಾಗಲೂರು ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ. “ನಮ್ಮ ಕ್ಷೇತ್ರದ ಬಾಗಲೂರು ಕೆರೆ ತುಂಬಿರುವ ಒಂದು ರಮಣೀಯ ದೃಶ್ಯ. ಅಂದು ನಾವು ಕಂಡ ಕನಸು ಇಂದು ನನಸಾಗ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ನೀರನ್ನು ಪೈಪ್‍ಲೈನ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯಕ್ರಮವು ಹಂತಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆರೆ ತುಂಬಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.