Tag: b h anil kumar

  • ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಬೆಂಗಳೂರು: ಮಹಾನಗರದ ಬಡಜನತೆಯ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‍ಗೆ ಅನುದಾನದ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ನಡುವೆ ಅನುದಾನಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ.

    ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ನಕಾರ ಎಂದಿದೆ. ಕೇವಲ ಶೇ. 25ರಷ್ಟು ಅನುದಾನ ಕೊಡುವುದಕ್ಕೆ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೇ. 100ರ ಬದಲು ಐವತ್ತು ಪರ್ಸೆಂಟ್ ಆದರೂ ಅನುದಾನ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅವಧಿಯು ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಹೊಸ ಟೆಂಡರ್ ಕರೆಯುವವರೆಗೂ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್‍ನ ಅವ್ಯವಹಾರ ಆರೋಪದ ಹಿನ್ನಲೆ ಸರ್ಕಾರ ತನಿಖೆಗೂ ಆದೇಶ ನೀಡಿದೆ. ಆದರೆ 150 ಕೋಟಿ ರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ಬಿಬಿಎಂಪಿಗೆ ಹೊರೆಯಾಗಿದೆ ಎಂದು ಹೇಳಿದರು.

    ಸರ್ಕಾರದ ಆರ್ಥಿಕ ಇಲಾಖೆಯ ತೀರ್ಮಾನದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ಬಳಿಕ ಅವರ ತೀರ್ಮಾನದ ಮೇಲೆ ಇಂದಿರಾ ಕ್ಯಾಂಟೀನ್ ಅನುದಾನದ ಬಗ್ಗೆ ಅಂತಿಮ ಕೈಗೊಳ್ಳಲಾಗುವುದು ಎಂದು ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.

    ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು, ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದ್ದರು.

    ಆಗಸ್ಟ್ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ್ದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್‍ಗಳಿವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು ಎಂದು ಮಾಹಿತಿ ನೀಡಿದ್ದರು.

    2019-20ರ ಸಾಲಿನ ಬಜೆಟ್‍ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದ್ದರು.

  • ಮತದಾರರ ಪಟ್ಟಿ ನಿರೀಕ್ಷಿಸುತ್ತಿರೋರಿಗೆ ಗುಡ್ ನ್ಯೂಸ್

    ಮತದಾರರ ಪಟ್ಟಿ ನಿರೀಕ್ಷಿಸುತ್ತಿರೋರಿಗೆ ಗುಡ್ ನ್ಯೂಸ್

    ಬೆಂಗಳೂರು: ದೇಶಾದ್ಯಂತ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಬೆಂಗಳೂರಲ್ಲೂ ಪರಿಷ್ಕರಣೆಗೆ ಕರೆ ನೀಡಲಾಗಿದೆ. ಈ ಮೂಲಕ ಮತದಾರರ ಪಟ್ಟಿ ನಿರೀಕ್ಷಿಸುತ್ತಿರುವವರಿಗೆ ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅಕ್ಟೋಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ. ಹೊಸ ಮತದಾರರ ನೋಂದಣಿ ಅಥವಾ ಹೊಸ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆಗಳಿದ್ದಲ್ಲಿ ಸಾರ್ವಜನಿಕರು ನಾಗರಿಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಹುದು ಎಂದು ತಿಳಿಸಿದರು.

    ಬೆಂಗಳೂರಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,514 ಮತಗಟ್ಟೆಗಳಿವೆ. ಈವರೆಗೆ 91,00,207 ಮತದಾರರಿದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಇದ್ದಿದ್ದರಿಂದ ಮತದಾರರ ಲಟ್ಟಿ ಪರಿಶೀಲನೆ ತಡವಾಗಿ ಮಾಡಲಾಗುತ್ತಿದೆ. ಅರ್ಜಿಗಳ ಸ್ವೀಕರಿಸಿದ ಬಳಿಕ ಅಕ್ಟೋಬರ್ 16 ರಿಂದ ಮನೆಮನೆಗೆ ಹೋಗಿ ಪರಿಶೀಲಿಸಲಾಗುವುದು. ಮತಗಟ್ಟೆಗಿಂತ ಎರಡು ಕಿ.ಮೀ ಹೆಚ್ಚು ದೂರದಲ್ಲಿ ಮತದಾರ ಇರಬಾರದು. ಮತಗಟ್ಟೆಗಳ ಬದಲಾವಣೆ ಇದ್ದಲ್ಲಿಯೂ ಪರಿಷ್ಕರಣೆ ವೇಳೆ ಬದಲಾವಣೆ ಮಾಡಲಾಗುವುದು. ಫೆಬ್ರವರಿ 2002 ರಿಂದ ಜನವರಿ 2003ರ ವರೆಗೆ ಹುಟ್ಟಿದವರು ಹೊಸ ಮತದಾರರಾಗಲಿದ್ದು, ಈ ವೇಳೆ ನೋಂದಣಿ ಮಾಡಿಕೊಳ್ಳಬೇಕು ಎಂದರು.

    ಒಂದೇ ಕುಟುಂಬದ ಎಲ್ಲ ಸದಸ್ಯರು ಮತದಾರರಾಗಿ ಒಂದೇ ಸ್ಥಳದಲ್ಲಿ ಇರಬೇಕು. ಫಾರ್ಮ್ 7ರ ಮುಖೇನ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದು ಹಾಕುವುದು. ಮರಣವಾಗಿದ್ದರೆ ಅಥವಾ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕುವುದು. ಮತಗಟ್ಟೆಗಳು ಶಿಥಿಲವಾಗಿದ್ದರೆ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಒಟ್ಟಿನಲ್ಲಿ ಎಲ್ಲ ಅರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಸಮಗ್ರ ಪರಿಷ್ಕರಣೆಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

    ಮತದಾರರು ಸಲ್ಲಿಸಬೇಕಾದ ವಿವರಗಳು:
    1) ಪಾಸ್ ಪೋರ್ಟ್
    2) ಚಾಲನಾ ಪರವಾನಗಿ
    3) ಆಧಾರ್ ಪತ್ರ
    4) ಪಡಿತರ ಚೀಟಿ
    5) ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ
    6) ಬ್ಯಾಂಕ್ ಪಾಸ್ ಬುಕ್
    7) ರೈತರ ಗುರುತಿನ ಚೀಟಿ
    8) ಚುನಾವಣಾ ಆಯೋಗ ನಮೂದಿಸಿರುವ ಇತರ ಯಾವುದೇ ದಾಖಲೆಗಳು

    ಮತದಾರರಿಗೆ ಯಾವುದೇ ಗೊಂದಲಗಳಿದ್ದಲ್ಲಿ 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.