Tag: australia

  • ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಂ.1 ಪಟ್ಟದಿಂದ ಕೆಳಗಿಳಿದ ವಿರಾಟ್

    ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಂ.1 ಪಟ್ಟದಿಂದ ಕೆಳಗಿಳಿದ ವಿರಾಟ್

    – 8ನೇ ಬಾರಿಗೆ ಅಗ್ರಸ್ಥಾನಕ್ಕೇರಿದ ಸ್ಮಿತ್
    – ಟಾಪ್ 10 ಬೌಲರ್‌ಗಳಲ್ಲಿ ಭಾರತದ ಅಶ್ವಿನ್‍ಗೆ ಮಾತ್ರ ಸ್ಥಾನ

    ದುಬೈ: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮತ್ತೆ ಹಿಂದಿಕ್ಕಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ.

    ವೆಲ್ಲಿಂಗ್ಟನ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ಪಾಯಿಂಟ್‍ಗಳನ್ನು ಕಳೆದುಕೊಂಡಿದ್ದಾರೆ. ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 2 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 43 ಎಸೆತಗಳಲ್ಲಿ 19 ರನ್ ಗಳಿಸಿದ್ದರು. ಇದನ್ನೂ ಓದಿ: 91 ದಿನದಲ್ಲಿ 19 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಸಿಡಿಸದ ವಿರಾಟ್

    ವಿರಾಟ್ ಕೊಹ್ಲಿ 906 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‍ಗಳ ಶ್ರೇಯಾಂಕದಲ್ಲಿ ಈಗ 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಟೀವ್ ಸ್ಮಿತ್ 5 ಅಂಕಗಳಿಂದ ಮುನ್ನಡೆಸಿದ್ದಾರೆ. ಈ ಮೂಲಕ ಸ್ಟೀವ್ ಸ್ಮಿತ್ ತಮ್ಮ ವೃತ್ತಿ ಬದುಕಿನಲ್ಲಿ 8ನೇ ಬಾರಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‍ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್‌ಮನ್‍ ಆಗಿ ಹೊರಹೊಮ್ಮಿದ್ದಾರೆ. ಸ್ಟೀವ್ ಸ್ಮಿತ್ 2015ರ ಜೂನ್‍ನಲ್ಲಿ ಮೊದಲ ಬಾರಿ ನಂ.1 ಸ್ಥಾನ ಪಡೆದಿದ್ದರು.

    ಕೊಹ್ಲಿ ಹೊರತುಪಡಿಸಿ, ಅಜಿಂಕ್ಯ ರಹಾನೆ 8ನೇ ಸ್ಥಾನ (760 ಅಂಕ), ಚೇತೇಶ್ವರ ಪೂಜಾರ 9ನೇ ಸ್ಥಾನ (757 ಅಂಕ) ಮತ್ತು ಮಾಯಾಂಕ್ ಅಗರ್ವಾಲ್ 10ನೇ ಸ್ಥಾನ (727) ಪಡೆದಿದ್ದಾರೆ.

    ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾದ ಬ್ಯಾಟಿಂಗ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಮರಳಿದ್ದಾರೆ. ಅವರು 853 ಅಂಕ ಪಡೆದುಕೊಂಡಿದ್ದಾರೆ. ಭಾರತ ಅನುಭವಿ ಬ್ಯಾಟ್ಸ್‌ಮನ್‍ ಚೇತೇಶ್ವರ್ ಪೂಜಾರ ಎರಡೂ ಇನ್ನಿಂಗ್ಸ್ ಗಳಲ್ಲಿ 11 ರನ್ ಗಳಿಸಿ ವೈಫಲ್ಯ ತೋರಿದರು. ಪರಿಣಾಮ 2 ಸ್ಥಾನಗಳನ್ನು ಕಳೆದುಕೊಂಡು 9ನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಭಾರತದ ವೇಗಿಗಳಾದ ಜಸ್‍ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಟಾಪ್ 10 ಶ್ರೇಯಾಂಕಿತ ಬೌಲರ್‌ಗಳಿಂದ ಹೊರ ಬಿದ್ದಿದ್ದಾರೆ. ಸ್ಪಿನ್ನರ್ ಆರ್.ಅಶ್ವಿನ್ ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ. ಅಶ್ವಿನ್ 765 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

    ನ್ಯೂಜಿಲೆಂಡ್‍ನ ಅನುಭವಿ ವೇಗಿ ಟಿಮ್ ಸೌಥಿ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಎಂಟು ಸ್ಥಾನಗಳ ಜಿಗಿತ ಕಂಡಿದ್ದಾರೆ. ಅವರು ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 110 ರನ್ ನೀಡಿ, 9 ವಿಕೆಟ್ ಪಡೆದುಕೊಂಡಿದ್ದರು.

    ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್‍ಗಳ ವೈಫಲ್ಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿಯೂ 200ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತವು 10 ವಿಕೆಟ್‍ಗಳಿಂದ ಹೀನಾಯ ಸೋಲು ಕಂಡಿತ್ತು.

  • ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ತಮ್ಮ ಈ ಸಾಧನೆಯನ್ನು ಆಸ್ಟನ್ ಅಗರ್ ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸಲ್ಲಿಸಿದ್ದಾರೆ.

    ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್ ನ 8ನೇ ಓವರಿನಲ್ಲಿ ಆಸ್ಟನ್ ಅಗರ್ ಅವರು ಮೂರು ಎಸೆತಗಳಲ್ಲಿ ಫ್ಲಾಫ್ ಡು ಪ್ಲೆಸಿಸ್, ಆಂಡಿಲೆ ಫೆಹ್ಲುಕ್ವೇವೊ ಮತ್ತು ಡೇಲ್ ಸ್ಟೇನ್‍ರ ವಿಕೆಟ್‍ಗಳನ್ನು ಪಡೆದರು. ಟಿ20 ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ  ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಆಸ್ಟನ್ ಅಗರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ 2007ರಲ್ಲಿ ಈ ಸಾಧನೆ ಮಾಡಿದ್ದರು.

    ಪಂದ್ಯದ ನಂತರ ಮಾತನಾಡಿದ ಆಸ್ಟನ್ ಅಗರ್, ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ನನ್ನ ಈ ಸಾಧನೆ ಸಲ್ಲುತ್ತದೆ. ಜಡೇಜಾ ಅವರು ನನ್ನ ನೆಚ್ಚಿನ ಕ್ರಿಕೆಟಿಗ. ಭಾರತದಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಟಿ20 ಪಂದ್ಯಗಳ ಸರಣಿ ನಡೆಯುತ್ತಿದ್ದು, ಅಗರ್ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ 24 ರನ್‍ಗಳಿಗೆ 5 ವಿಕೆಟ್ ಪಡೆದರು. ಆತಿಥೇಯರನ್ನು ಆಸ್ಟ್ರೇಲಿಯಾ 107 ರನ್‍ಗಳಿಂದ ಮಣಿಸಿತು. 196ರ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ತಂಡವನ್ನು ಕೇವಲ 89 ರನ್‍ಗಳಿಗೆ ಕಟ್ಟಿಹಾಕಿತ್ತು. ಅಗರ್ ಪಂದ್ಯಶ್ರೇಷ್ಠರಾಗಿದ್ದಾರೆ.

    ರವೀಂದ್ರ ಜಡೇಜಾ ರಾಕ್‍ಸ್ಟಾರ್:
    ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಗರ್, ‘ನಾನು ಜಡೇಜಾ ಅವರನ್ನು ರಾಕ್‍ಸ್ಟಾರ್ ಎಂದು ಪರಿಗಣಿಸುತ್ತೇನೆ. ಅವರು ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಲ್‍ರೌಂಡರ್ ಆಗಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

    ಜಡೇಜಾರಿಂದ ಮಾತ್ರ ಸ್ಫೂರ್ತಿ:
    ಭಾರತ ವಿರುದ್ಧದ ಸರಣಿಯಲ್ಲಿ ನಾನು ಜಡೇಜಾ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದೆ. ಅವರು ನನಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದರು. ಅವರು ಕ್ರಿಕೆಟ್ ಜಗತ್ತಿನಲ್ಲಿ ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಡಲು ಬಯಸುತ್ತೇನೆ. ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದು ಮೆಚ್ಚುಗೆ ಮಾತನಾಡಿದ್ದಾರೆ.

  • 4 ಓವರ್‌ನಲ್ಲಿ 19 ರನ್ ನೀಡಿ 4 ವಿಕೆಟ್ ಕಿತ್ತ ಪೂನಂ- 17 ರನ್‍ಗಳಿಂದ ಸೋತ ಆಸೀಸ್

    4 ಓವರ್‌ನಲ್ಲಿ 19 ರನ್ ನೀಡಿ 4 ವಿಕೆಟ್ ಕಿತ್ತ ಪೂನಂ- 17 ರನ್‍ಗಳಿಂದ ಸೋತ ಆಸೀಸ್

    – ಸತತ ಮೂರನೇ ಬಾರಿಗೆ ಮೊದಲ ಪಂದ್ಯದಲ್ಲಿ ಗೆದ್ದ ಭಾರತ

    ಸಿಡ್ನಿ: ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತವು ಸತತ ಮೂರನೇ ಬಾರಿಗೆ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.

    ಸಿಡ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಭಾರತವು 2018ರ ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 34 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಕೌರ್ 103 ರನ್ (51 ಎಸೆತ, 7 ಬೌಂಡರಿ, 8 ಸಿಕ್ಸರ್) ದಾಖಲಿಸಿದ್ದರು.

    2016ರ ಮಹಿಳಾ ವಿಶ್ವಕಪ್‍ನಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 72 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ 42 ರನ್ ಹಾಗೂ ಹರ್ಮನ್‍ಪ್ರೀತ್ ಕೌರ್ 40 ರನ್ ಗಳಿಸಿದ್ದರು. ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಜಯವನ್ನು ಭಾರತ ತಂಡ ದಾಖಲಿಸಿದೆ. 2018ರಲ್ಲಿ ಭಾರತದ ಮಹಿಳಾ ತಂಡವು ಆಸೀಸ್ ಪಡೆಯನ್ನು ಸೋಲಿಸಿತ್ತು.

    ಇಂದಿನ ಪಂದ್ಯದಲ್ಲಿ ಪೂನಂ ಯಾದವ್ ಭಾರತ ಪರ ಗರಿಷ್ಠ 4 ವಿಕೆಟ್ ಪಡೆದು ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಶಿಖಾ ಪಾಂಡೆ 3 ವಿಕೆಟ್, ರಾಜೇಶ್ವರಿ ಗೈಕ್ವಾಡ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ಭಾರತದ ಆರಂಭಿಕ ಆಟಗಾರರಾದ ಸ್ಮೃತಿ ಮಂದನಾ ಹಾಗೂ ಶೆಫಾಲಿ ವರ್ಮಾ ಜೋಡಿಯನ್ನು ಮುರಿಯಲು ಪರದಾಡಿತು. ಈ ಜೋಡಿಯು ಮೊದಲ ವಿಕೆಟ್‍ಗೆ 41 ರನ್ ಕೊಡುಗೆ ನೀಡಿತು. ಮಂದನಾ ವಿಕೆಟ್ ಬೆನ್ನಲ್ಲೇ 6 ರನ್‍ಗಳಿಗೆ ಭಾರತ ಮತ್ತೆರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆಗ ದೀಪ್ತಿ ಶರ್ಮಾ ಏಕಾಂಗಿಯಾಗಿ ಹೋರಾಡಿ ಔಟಾಗದೆ 49 ರನ್ ಹಾಗೂ ಕೃಷ್ಣಮೂರ್ತಿ ಅಜೇಯ 9 ರನ್ ಗಳಿಸಿದರು. ಇದರಿಂದಾಗಿ ಭಾರತವು 20 ಓವರ್‍ಗಳಲ್ಲಿ 4 ವಿಕೆಟ್‍ಗಳ ನಷ್ಟಕ್ಕೆ 132 ರನ್ ಗಳಿಸಿತ್ತು.

    ಭಾರತ ನೀಡಿದ್ದ 133 ರನ್‍ಗಳ ಗುರಿ ಬೆನ್ನಟ್ಟಿದ ಆಸೀಸ್ ತಂಡ ಪರ ಅಲಿಸಾ ಹಿಲ್ಲಿ 51 ರನ್ ಹಾಗೂ ಆಶ್ಲೇ ಗಾಡ್ರ್ನರ್ 34 ರನ್ ಮಾತ್ರ ಎರಡಂಕಿ ರನ್ ಗಳಿಸಿದರು. ಉಳಿದ ಎಲ್ಲಾ ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಒಂದು ಎಸೆತ ಬಾಕಿ ಇರುವಂತೆ ಆಸೀಸ್ ಪಡೆ ಎಲ್ಲಾ ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ ಸೋಲಿಗೆ ತುತ್ತಾಯಿತು.

    ಚಾಂಪಿಯನ್ ಪಟ್ಟ ಏರದ ಭಾರತ:
    ಇದುವರೆಗೆ 6 ಬಾರಿ ಮಹಿಳಾ ಟಿ20 ವಿಶ್ವಕಪ್ ನಡೆದಿದೆ. ಈ ಪೈಕಿ ಭಾರತವು ಒಂದು ಬಾರಿಯೂ ಫೈನಲ್‍ಗೆ ತಲುಪಿಲ್ಲ. ಆದರೆ ಆಸ್ಟ್ರೇಲಿಯಾ 4 ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಕೊನೆಯ ಬಾರಿ ಆಸ್ಟ್ರೇಲಿಯಾ ಫೈನಲ್‍ನಲ್ಲಿ ಇಂಗ್ಲೆಂಡ್‍ನ್ನು 8 ವಿಕೆಟ್‍ಗಳಿಂದ ಸೋಲಿಸಿತ್ತು. ಭಾರತ 3 ಬಾರಿ (2009, 2010, 2018) ಸೆಮಿಫೈನಲ್ ತಲುಪಿದೆ. ಸೆಮಿಫೈನಲ್‍ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

  • ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಸ್ಟಂಪ್ ಮೈಕ್‍ನಿಂದ ಆಸೀಸ್ ನಾಯಕಿ ಪಾರು- ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳೆಯರ ನಡುವೆ ನಡೆದ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಸ್ಟಂಪ್ ಮೈಕಿನಿಂದಾಗಿ ಆಸ್ಟ್ರೇಲಿಯಾದ ನಾಯಕಿ ಲ್ಯಾನಿಂಗ್ ಪಾರಾಗಿದ್ದಾರೆ.

    ಬುಧವಾರ ನಡೆದ ತ್ರಿಕೋನ ಸರಣಿಯ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭಾರತವನ್ನು ಸೋಲಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಮೆಗ್ ಲ್ಯಾನಿಂಗ್ ಅವರು ಸ್ಟಂಪ್-ಮೈಕ್‍ನಿಂದಾಗಿ ವಿಕೆಟ್ ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇನ್ನಿಂಗ್ಸ್ ನ 14ನೇ ಓವರಿನಲ್ಲಿ ಮೆಗ್ ಲ್ಯಾನಿಂಗ್ ವೇಗವಾಗಿ ಒಂಟಿ ರನ್ ಕದಿಯಲು ಮುಂದಾದರು. ತಕ್ಷಣವೇ ಕೈಗೆ ಸಿಕ್ಕಿದ ಬಾಲ್ ಎತ್ತಿಕೊಂಡ ಶಿಖಾ ಪಾಂಡೆ ವಿಕೆಟ್ ಕಡೆಗೆ ಎಸೆದರು. ಆದರೆ ಬಾಲ್ ಸ್ಟಂಪ್ ಹಿಂದಿದ್ದ ಮೈಕ್‍ಗೆ ಬಿದ್ದು ಬೇರೆ ಕಡೆಗೆ ಹೋಯಿತು. ಇದರಿಂದಾಗಿ ಲ್ಯಾನಿಂಗ್ ಅವರಿಗೆ ಜೀವದಾನ ಸಿಕ್ಕಂತಾಯಿತು. ಈ ವಿಡಿಯೋವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಥ್ ಮೂನಿ ಅವರ ಅಜೇಯ 71 ರನ್‍ಗಳಿಂದ ಆಸ್ಟ್ರೇಲಿಯಾ ಮಹಿಳಾ ತಂಡ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಅವರು ನಾಲ್ಕು ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ ಮೂರು ವಿಕೆಟ್ ಕಿತ್ತು ಮಿಂಚಿದರು.

    ಆಸ್ಟ್ರೇಲಿಯಾ ನೀಡಿದ್ದ 156 ರನ್‍ಗಳ ಗುರಿ ಬೆನ್ನಟ್ಟಿದ ಭಾರತವು ಕಳಪೆ ಆರಂಭಕ್ಕೆ ತುತ್ತಾಯಿತು. ಇನ್ನಿಂಗ್ಸ್ ಎರಡನೇ ಓವರಿನಲ್ಲಿ ಟೇಲಾ ವ್ಲೇಮಿಂಕ್ ಅವರು ಶಫಾಲಿ ವರ್ಮಾ ವಿಕೆಟ್ ಕಿತ್ತರು. ರಿಚಾ ಘೋಷ್ ಹಾಗೂ ಸ್ಮೃತಿ ಮಂಧನಾ ಎರಡನೇ ವಿಕೆಟ್‍ಗೆ 43 ರನ್ ಗಳಿಸಿದರು. 17 ರನ್ ಗಳಿಸಿದ್ದ ರಿಚಾ ಘೋಷ್ ಅವರನ್ನು ಅನ್ನಾಬೆಲ್ ಸದಲ್ರ್ಯಾಂಡ್ ಔಟ್ ಮಾಡಿದರು. ಆದರೆ ಮಂಧನಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 12ನೇ ಅಂತರರಾಷ್ಟ್ರೀಯ ಟಿ20 ಅರ್ಧಶತಕವನ್ನು ಗಳಿಸಿದರು.

    ಭಾರತವು 14 ಓವರ್‌ಗಳ ನಂತರ ನಾಲ್ಕು ವಿಕೆಟ್‍ಗೆ 113 ರನ್ ಗಳಿಸಿತ್ತು. ಕೊನೆಯ ಐದು ಓವರ್‌ಗಳಲ್ಲಿ ನಾಯಕಿ ಹರ್ಮನ್‍ಪ್ರೀತ್ ಕೌರ್ ಮತ್ತು ಮಂಧನಾ 43 ರನ್ ಗಳಿಸಿದರು. ಮಂಧನಾ ವಿಕೆಟ್ ಒಪ್ಪಿಸಿದ ಬಳಿಕ ಭಾರತ ತಂಡವು ಆಘಾತಕ್ಕೆ ಒಳಗಾಯಿತು. ಪರಿಣಾಮ 11 ರನ್‍ಗಳಿಂದ ಸೋಲು ಕಂಡಿತು.

  • ಆಸ್ಟ್ರೇಲಿಯಾದಲ್ಲಿ ಶ್ರೀನಿವಾಸ ಕಲ್ಯಾಣ- ಉಡುಪಿಯ ಪುತ್ತಿಗೆಶ್ರೀ ನೇತೃತ್ವ

    ಆಸ್ಟ್ರೇಲಿಯಾದಲ್ಲಿ ಶ್ರೀನಿವಾಸ ಕಲ್ಯಾಣ- ಉಡುಪಿಯ ಪುತ್ತಿಗೆಶ್ರೀ ನೇತೃತ್ವ

    ಉಡುಪಿ: ಆಸ್ಟ್ರೇಲಿಯಾದ ಸಿಡ್ನಿ ಶ್ರೀ ಪುತ್ತಿಗೆಮಠದಲ್ಲಿ ಶ್ರೀನಿವಾಸಕಲ್ಯಾಣ ಮಹೋತ್ಸವ ನಡೆಯಿತು. ಸಿಡ್ನಿ ಮಹಾನಗರದ ಶ್ರೀಪುತ್ತಿಗೆಮಠದ ಶ್ರೀವೆಂಕಟಕೃಷ್ಣ ವೃಂದಾವನದಲ್ಲಿ ಇದೇ ಪ್ರಥಮವಾಗಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವು ಆಯೋಜನೆಯಾಗಿತ್ತು.

    ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ಭಕ್ತರ ಪಾಲ್ಗೊಂಡಿದ್ದರು. ಸಿಡ್ನಿ ಮಹಾನಗರದ ಮೇಯರ್ ಹಾಗೂ ಸಂಸದರು, ಅನೇಕ ಗಣ್ಯರು ಪಾಲ್ಗೊಂಡಿದ್ದರು. ಅನಿವಾಸಿ ಭಾರತೀಯರ ಜೊತೆ ಆಸ್ಟ್ರೇಲಿಯಾದ ಜನರಿಗೆ ದೇವರ ಮದುವೆಯನ್ನು ನೋಡುವ ಅವಕಾಶ ಕಲ್ಪಿಸುವ ಇಚ್ಛೆ ಇತ್ತು. ಭಾರತದಲ್ಲಿ ಮದುವೆಗೆ ಪವಿತ್ರ ಸ್ಥಾನವಿದೆ. ದೇವರ ಕಲ್ಯಾಣ ಅದೊಂದು ಉತ್ಸವದ ರೀತಿಯಲ್ಲಿ ನಡೆದಿರಬಹುದು ಎಂಬುದು ನಮ್ಮ ಕಲ್ಪನೆ. ಅದರಂತೆ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ ಎಂದು ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಭಜನೆ, ನೃತ್ಯ ಸಂಗೀತ ಮತ್ತು ವಿದ್ವಾನ್ ಕೇಶವ ತಾಡಪತ್ರಿಯವರಿಂದ ಪ್ರವಚನ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪಾಲ್ಗೊಳ್ಳುವ ಜನಕ್ಕಿಂತ ಹೆಚ್ಚು ಸಭೆ ಆಸ್ಟ್ರೇಲಿಯಾದಲ್ಲಿ ಪಾಲ್ಗೊಂಡಿದ್ದು ವಿಶೇಷ.

  • 1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    ಮೆಲ್ಬರ್ನ್: ಒಂದು ಓವರ್ ಆಡಲು ನಿವೃತ್ತಿಯಿಂದ ಹೊರಬನ್ನಿ ಎಂಬ ಆಸ್ಟ್ರೇಲಿಯಾ ಮಹಿಳಾ ತಂಡ ಕ್ರಿಕೆಟರ್ ಮನವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್, ಉತ್ತಮ ಮನವಿ ಎಲಿಸ್. ನಾನು ಅಲ್ಲಿಗೆ ಹೋಗಲು ಮತ್ತು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದಾರೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್ ಮೈದಾನದಲ್ಲಿ ಭಾನುವಾರ ಬುಷ್ ಪೈರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಗಳಾದ ಆಡಂ ಗಿಲ್‍ಕ್ರಿಸ್ಟ್ ಹಾಗೂ ರಿಕ್ಕಿ ಪಾಂಟಿಂಗ್ ನೇತೃತ್ವದ ತಂಡಗಳು ಆಡಲಿವೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ರಿಕ್ಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದಾರೆ.

  • ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಣ್ಣಾವ್ರು -ವಿಷ್ಣು ದಾದ ಹಾಡುಗಳ ಕಂಪು

    ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಣ್ಣಾವ್ರು -ವಿಷ್ಣು ದಾದ ಹಾಡುಗಳ ಕಂಪು

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ಭರ್ಜರಿಯಾಗಿ ನಡೆಯಿತು. ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಯ್ತು. ಬೆಂಗಳೂರಿಗರಿಗೆ ಸಿಕ್ಸರ್, ಬೌಂಡರಿ ಬಾರಿಸುವ ಮೂಲಕ ಭಾರತದ ಬ್ಯಾಟ್ಸ್ ಮನ್ ಗಳು ರಸದೌತಣ ನೀಡಿದರು. ಇದು ನಿಜವಾದ ವಿಶೇಷ ಅಲ್ಲ. ಪಂದ್ಯದಲ್ಲಿ ಕನ್ನಡದ ವೈಭವ ಹಬ್ಬಿದ್ದು ವಿಶೇಷ. ಹೌದು. ನಿನ್ನೆಯ ಪಂದ್ಯದಲ್ಲಿ ಕನ್ನಡ ಹಾಡುಗಳ ಕಂಪು ಎಲ್ಲರನ್ನೂ ಮನಸೋರೆಗೊಳಿಸಿತು.

    ಪಂದ್ಯ ಪ್ರಸಾರದವಾದ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಈಗ ಕನ್ನಡ ವೀಕ್ಷಕ ವಿವರಣೆ ಲಭ್ಯವಾಗುತ್ತಿದೆ. ನಿನ್ನೆಯ ವೀಕ್ಷಕ ವಿವರಣೆ ಪ್ಯಾನಲ್ ಸಖತ್ ವಿಶೇಷವಾಗಿತ್ತು. ಭಾರತದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ ಹಾಗೂ ವಿಜಯ್ ಭಾರದ್ವಾಜ್ ನಿನ್ನೆ ವೀಕ್ಷಕ ವಿವರಣೆ ಜೊತೆ ಕನ್ನಡ ಹಾಡುಗಳ ಸುಧೆ ಹರಿಸಿ ಕೇಳುಗರ ಮನ ಗೆದ್ದರು.

    ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಈ ಇಬ್ಬರು ಮಾಜಿ ಆಟಗಾರರು ಪದ್ಮಭೂಷಣ ಡಾ.ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ ಹಾಡುಗಳನ್ನು ಹಾಡೋ ಮೂಲಕ ಕನ್ನಡದ ಕಂಪು ಹರಿಸಿದರು. ವೆಂಕಟೇಶ್ ಪ್ರಸಾದ್ ಅಂತು ಅದ್ಭುತವಾಗಿ ಕಾಮೆಂಟ್ರಿ ಜೊತೆ ಹಾಡನ್ನು ಹಾಡಿ ಎಲ್ಲರ ಮನಗೆದ್ದರು. ಇದನ್ನೂ ಓದಿ: ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

    ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಜಿಮ್ಮಿಗಲ್ಲು’ ಚಿತ್ರದ ‘ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ’ ಹಾಡು ಹಾಡಿದರು. ಅದಲ್ಲದೆ ರಾಜ್ ಕುಮಾರ್ ಅವರ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ ಕಲಕಿ ಉಕ್ಕಿದೆ ದ್ವೇಷದ ಬೆಂಕಿ’ ಗೀತೆ ಹಾಗೂ ‘ವಿಜಯನಗರ ವೀರಪುತ್ರ’ ಚಿತ್ರದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಹೇಳಿ ಮನರಂಜನೆ ನೀಡಿದರು.

    ವಿಜಯ್ ಭಾರದ್ವಾಜ್ ‘ಭಕ್ತ ಕುಂಬಾರ’ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ’ ಹಾಡು ಮತ್ತು ದಾಸರ ಪದವನ್ನ ಹಾಡಿ ಮುದ ನೀಡಿದರು. ಈ ಇಬ್ಬರ ಕನ್ನಡ ಹಾಡಿನ ಮೋಡಿಗೆ ಜನರು ಕೂಡ ಟ್ವೀಟ್ ಮಾಡಿ ಅಭಿನಂದನೆಗಳ ಮಹಾಪೂರ ಹರಿಸಿದರು.

  • ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

    ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

    – ಮಿಂಚಿದ ಶ್ರೇಯಸ್ ಅಯ್ಯರ್

    ಬೆಂಗಳೂರು: ಮೊಹಮ್ಮದ ಶಮಿ, ರವೀಂದ್ರ ಜಡೇಜಾ ಬೌಲಿಂಗ್ ದಾಳಿ ಹಾಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಬ್ಬರದ ಮುಂದೆ ಆಸ್ಟ್ರೇಲಿಯಾ ಸೋಲಿಗೆ ಶರಣಾಗಿದ್ದು, ಸರಣಿ ಗೆಲ್ಲುವ ಕನಸನ್ನು ಕೈಚೆಲ್ಲಿಕೊಂಡಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 15 ಎಸೆತಗಳು ಬಾಕಿ ಇರುವಂತೆ 7 ವಿಕೆಟ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2-1 ಅಂತರದಿಂದ ಕೊಹ್ಲಿ ಪಡೆ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾ ನೀಡಿದ್ದ 287 ರನ್‍ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ರೋಹಿತ್ ಶರ್ಮಾ 119 ರನ್ (128 ಎಸೆತ, 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 89 ರನ್ (91 ಎಸೆತ, 8 ಬೌಂಡರಿ) ಹಾಗೂ ಶ್ರೇಯಸ್ ಅಯ್ಯರ್ 44 ರನ್ (35 ಎಸೆತ, 6ಬೌಂಡರಿ, ಸಿಕ್ಸ್) ಸಹಾಯದಿಂದ 47.3 ಓವರ್‌ಗಳಲ್ಲಿ 289 ರನ್ ಗಳಿಸಿ ಗೆದ್ದು ಬೀಗಿದೆ.

    ಶರ್ಮಾ ದಾಖಲೆ:
    ಹಿಟ್‍ಮ್ಯಾನ್ ರೋಹಿತ್ ಶರ್ಮಾ ಪಂದ್ಯದ ಆರಂಭದಲ್ಲಿ ಮೊದಲ ನಾಲ್ಕು ರನ್‍ಗಳಿಸುವ ಮೂಲಕ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 9,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ರೋಹಿತ್ 9 ಸಾವಿರ ಏಕದಿನ ರನ್‍ಗಳನ್ನು ಪೂರೈಸಿದ ವಿಶ್ವದ 3ನೇ ವೇಗದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದನ್ನೂ ಓದಿ: ಗಂಗೂಲಿ, ಸಚಿನ್ ಹಿಂದಿಕ್ಕಿ ವಿಶ್ವ ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ಸಾಧನೆ

    ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡು ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ 19 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಮೈದಾನಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು.

    56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ ತಾಳ್ಮೆ ಆಟದ ಮೂಲಕ 110 ಎಸೆತಗಳಲ್ಲಿ ಶತಕ ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನ 29ನೇ ಶತಕವಾಗಿದೆ. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಈ ಜೋಡಿಯು 2ನೇ ವಿಕೆಟ್‍ಗೆ 137 ಜೊತೆಯಾಟದ ಕೊಡುಗೆ ನೀಡಿತು. ಆ್ಯಡಂ ಜಂಪಾ ಇನ್ನಿಂಗ್ಸ್ ನ 37ನೇ ಓವರ್ ನಲ್ಲಿ ರೋಹಿತ್ ಶರ್ಮಾ ವಿಕೆಟ್ ಕಿತ್ತರು. ರೋಹಿತ್ ಶರ್ಮಾ 119 ರನ್ (128 ಎಸೆತ, 8 ಬೌಂಡರಿ, 6 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು.

    ಬಳಿಕ ಮೈದಾಕ್ಕಿಳಿದ ಶ್ರೇಯಸ್ ಅಯ್ಯರ್ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿದರು. ಈ ಜೋಡಿ ವಿಕೆಟ್ ಕಾಯ್ದುಕೊಂಡು ಅರ್ಧಶತಕ ಪೂರೈಸಿದರು. ಟೀಂ ಇಂಡಿಯಾ ಗೆಲುವಿನ ಹಂತದಲ್ಲಿ ಇದ್ದಾಗ ಅಂದ್ರೆ ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 89 ರನ್ (91 ಎಸೆತ, 8 ಬೌಂಡರಿ) ಗಳಿಸಿ ವಿಕೆಟ್ ನೀಡಿ ಪೆವಿಲಿಯನ್‍ಗೆ ತೆರಳಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಔಟಾಗದೆ 44 ರನ್ (35 ಎಸೆತ, 6ಬೌಂಡರಿ, ಸಿಕ್ಸ್) ಹಾಗೂ ಮನೀಶ್ ಪಾಂಡೆ 8 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

    ಭಾರತದ ರನ್ ಏರಿಕೆ?:
    50 ರನ್- 49 ಎಸೆತ
    100 ರನ್- 123 ಎಸೆತ
    150 ರನ್- 170 ಎಸೆತ
    200 ರನ್- 214 ಎಸೆತ
    250 ರನ್- 259 ಎಸೆತ

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ 131 ರನ್ (132 ಎಸೆತ, 14 ಬೌಂಡರಿ, ಸಿಕ್ಸ್), ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ), ಅಲೆಕ್ಸ್ ಕ್ಯಾರಿ 35 ರನ್ ( 36 ಎಸೆತ, 5 ಬೌಂಡರಿ) ಸಹಾಯದಿಂದ 9 ವಿಕೆಟ್‍ಗಳ ನಷ್ಟಕ್ಕೆ 286 ರನ್‍ಗಳ ಸಾಧಾರಣ ಮೊತ್ತ ಪೇರಿಸಿತ್ತು.

    ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾಗಿದ್ದರು. ಸ್ಪಿನ್ನರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರೆ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದರು. ಆದರೆ ಯಾವುದೇ ವಿಕೆಟ್ ಪಡೆಯದ ಜಸ್‍ಪ್ರೀತ್ ಬುಮ್ರಾ 10 ಓವರ್ ಮಾಡಿ ಕೇವಲ 38 ರನ್ ನೀಡಿದ್ದರು.

  • 4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ

    4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ

    – ಸ್ಮಿತ್ ತಾಳ್ಮೆಯ ಶತಕ, ಲಾಬುಶೇನ್ ಅರ್ಧಶತಕ
    – ಆಸೀಸ್‍ಗೆ ಆರಂಭದಲ್ಲಿ, ಕೊನೆಯಲ್ಲಿ ಆಘಾತ ನೀಡಿದ ಶಮಿ
    – ಶೂನ್ಯ ರನ್ ಅಂತರದಲ್ಲಿ ಎರಡು ವಿಕೆಟ್ ಕಿತ್ತ ಜಡೇಜಾ

    ಬೆಂಗಳೂರು: ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಅವರ ಅದ್ಭುತ ಬೌಲಿಂಗ್ ಎದುರು ಸ್ಟೀವ್ ಸ್ಮಿತ್ ತಾಳ್ಮೆಯ ಶತಕದಾಟ, ಮಾರ್ನಸ್ ಲಾಬುಶೇನ್ ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯಾ ತಂಡವು ಕೊಹ್ಲಿ ಪಡೆಗೆ 287 ರನ್‍ಗಳ ಗುರಿ ನೀಡಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಭಾನುವಾರ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 131 ರನ್ (132ಎಸೆತ, 14 ಬೌಂಡರಿ, ಸಿಕ್ಸ್), ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ), ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 5 ಬೌಂಡರಿ) ಸಹಾಯದಿಂದ 9 ವಿಕೆಟ್‍ಗಳ ನಷ್ಟಕ್ಕೆ 286 ರನ್‍ಗಳ ಸಾಧಾರಣ ಮೊತ್ತ ಪೇರಿಸಿದೆ.

    ಈ ಬಾರಿಯೂ ಟಾಸ್ ಗೆದ್ದ ಆಸ್ಟ್ರೇಲಿಯಾ ಬೃಹತ್ ಮೊತ್ತದ ರನ್‍ಗಳ ಗುರಿ ನೀಡುವ ಉದ್ದೇಶದಿಂದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಆಸೀಸ್ ಪಡೆ ಆರಂಭದಲ್ಲಿ ಭಾರೀ ಪಜೀತಿಗೆ ಸಿಲುಕಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಜೊತೆಯಾಟ ಕಟ್ಟಲು ಮುದಾಗಿದ್ದ ಆ್ಯರನ್ ಫಿಂಚ್ ಹಾಗೂ ಸ್ಟೀವ್ ಸ್ಮೀತ್ ಜೋಡಿ ರನ್ ಕದಿಯಲು ಯತ್ನಿಸಿ ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ ನ 9ನೇ ಓವರ್‍ನ ಮೊಹಮ್ಮದ್ ಶಮಿ ಬೌಲಿಂಗ್ ವೇಳೆ ಫಿಂಚ್ ರನ್ ಔಟ್ ಆದರು. ಫಿಂಚ್ 19 ರನ್ (26 ಎಸೆತ, ಬೌಂಡರಿ, ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು.

    ಜಡೇಜಾ ಕಮಾಲ್:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯ ಆಟ ಮುಂದುವರಿಸಿದ ಸ್ಮಿತ್‍ಗೆ ಮಾರ್ನಸ್ ಲಾಬುಶೇನ್ ಸಾಥ್ ನೀಡಿದರು. ಈ ಜೋಡಿ ಉತ್ತಮ ಜೊತೆಯಾಟ ಕಟ್ಟುವಲ್ಲಿ ಯಶಸ್ವಿಯಾಯಿತು. ಸ್ಮಿತ್ ಹಾಗೂ ಲಾಬುಶೇನ್ ಜೋಡಿ 3ನೇ ವಿಕೆಟ್‍ಗೆ 128 ರನ್‍ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಏರಿಸಿತು. ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಮಾರ್ನಸ್ ಲಾಬುಶೇನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಮಿಚೆಲ್ ಸ್ಟಾರ್ಕ್ ಗೆ ರನ್ ಗಳಿಸಲು ಅವಕಾಶ ನೀಡದೆ ಜಡೇಜಾ ವಿಕೆಟ್ ಕಿತ್ತಿದರು. ಈ ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದಿದ್ದು ಪಂದ್ಯಕ್ಕೆ ಉತ್ತಮ ತಿರುವು ನೀಡಿತು.

    ಐದನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಲೆಕ್ಸ್ ಕ್ಯಾರಿ ಸ್ಟೀವ್ ಸ್ಮಿತ್‍ಗೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 58 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಇನ್ನಿಂಗ್ಸ್ ನ 42ನೇ ಓವರ್ ನಲ್ಲಿ ಕುಲದೀಪ್ ಯಾದವ್ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದರು. ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 6 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

    ಸ್ಮಿತ್ ಶತಕ:
    63 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಸ್ಟೀವ್ ಸ್ಮಿತ್ 118 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನ ಒಂಬತ್ತನೇ ಶತಕವಾಗಿದೆ. ಆದರೆ ಸ್ಮಿತ್ ಶತಕ ಸಿಡಿಸಿದ ಇನ್ನಿಂಗ್ಸ್ ನ 44ನೇ ಓವರ್ ನಲ್ಲಿ ಭಾರತ ಯುವ ವೇಗಿ ನವದೀಪ್ ಸೈನಿ 4 ರನ್ ಗಳಿಸಿದ್ದ ಆಗಸ್ಟ್ ವಿಕೆಟ್ ಕಿತ್ತರು. ಆದರೆ ಸ್ಮಿತ್ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು.

    ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ಸ್ಮಿತ್ ಎರಡು ಬೌಂಡರಿ, ಒಂದು ಸಿಕ್ಸ್ ಸಿಡಿಸಿದರು. ಸೈನಿ ಎಸೆದ ಈ ಓವರ್ ನಲ್ಲಿ ಆಸೀಸ್ 16 ಗಳಿಸಿತು. ಆದರೆ ಸ್ಮಿತ್ ಅವರನ್ನು ಪೆವಿಲಿಯನ್‍ಗೆ ಅಟ್ಟುವಲ್ಲಿ ಮೊಹಮ್ಮದ್ ಶಮಿ ಸೈ ಎನಿಸಿಕೊಂಡರು. ಇನ್ನಿಂಗ್ಸ್ ನ 48ನೇ ಓವರ್ ನ ಮೊದಲ ಎಸೆತದಲ್ಲೇ ಸ್ಮಿತ್ ವಿಕೆಟ್ ಪಡೆದ ಶಮಿ, 4ನೇ ಎಸೆತದಲ್ಲಿ ಕಮ್ಮಿನ್ಸ್ ವಿಕೆಟ್ ಕಿತ್ತರು. ಬಳಿಕ ಮೈದಾಕ್ಕಿಳಿದ ಆಸೀಸ್ ಆಟಗಾರರು ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.

    ಅನುಭವಿ ಹಿರಿಯ ಆಟಗಾರ ಮೊಹಮ್ಮದ್ ಶಮಿ ಆಸೀಸ್ ತಂಡಕ್ಕೆ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಆಘಾತ ನೀಡಿದರು. 10 ಓವರ್ ಮಾಡಿದ ಶಮಿ 63 ರನ್ ನೀಡಿ 4  ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಸ್ಪಿನ್ನರ್ ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರೆ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಆದರೆ ಯಾವುದೇ ವಿಕೆಟ್ ಪಡೆಯದ ಜಸ್‍ಪ್ರೀತ್ ಬುಮ್ರಾ 10 ಓವರ್ ಮಾಡಿ ಕೇವಲ 38 ರನ್ ನೀಡಿದ್ದಾರೆ.

    ರನ್ ಏರಿದ್ದು ಹೇಗೆ?:
    50 ರನ್- 54 ಎಸೆತ
    100 ರನ್- 105 ಎಸೆತ
    150 ರನ್- 159 ಎಸೆತ
    200 ರನ್- 222 ಎಸೆತ
    250 ರನ್- 272 ಎಸೆತ
    286 ರನ್- 300 ಎಸೆತ

  • ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್

    ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್

    ಬೆಂಗಳೂರು: ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್‍ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹಂಗಾಮಿ ವಿಕೆಟ್ ಕೀಪರ್ ಆಗಿ ಸೈ ಎನಿಸಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಮುಂಬೈ ಮತ್ತು ರಾಜ್‍ಕೋಟ್ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ತಮ್ಮ ಅದ್ಭುತ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡ ರಿಷಭ್ ಪಂತ್ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಗ್ಲೌಸ್ ಕೀಪಿಂಗ್ ಮಾಡುತ್ತಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಅದ್ಭುತ ವಿಕೆಟ್ ಕೀಪಿಂಗ್ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಭಾನುವಾರ ಬೆಂಗ್ಳೂರಲ್ಲಿ ಇಂಡೋ-ಆಸೀಸ್ ಹೈವೋಲ್ಟೇಜ್ ಪಂದ್ಯ

    ಕಳೆದ ಕೆಲವು ಪಂದ್ಯಗಳಲ್ಲಿ ರಿಷಭ್ ಪಂತ್‍ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರ ಹೀಗಾಗಿ ಪಂತ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ‘ನೀವು ಈಗ ಹೊರಟುಹೋದರೆ ದೂರ ಹೋಗಿ ಎಂದು ನೆಟ್ಟಿಗರೊಬ್ಬರು ಪಂತ್ ಅವರನ್ನು ಟ್ರೋಲ್ ಮಾಡಿದ್ದಾರೆ.  ಇದನ್ನೂ ಓದಿ: 1 ರನ್ ಅಂತರದಲ್ಲಿ 2 ಪ್ರಮುಖ ವಿಕೆಟ್ ಪತನ- 36 ರನ್‍ಗಳಿಂದ ಗೆದ್ದ ಭಾರತ

    ಈ ಪಂದ್ಯದಲ್ಲಿ ರಾಹುಲ್ ವಿಶೇಷ ದಾಖಲೆಯೊಂದನ್ನು ಬರೆದರು. ಏಕದಿನ ಕ್ರಿಕೆಟ್ ನಲ್ಲಿ 1000 ರನ್‍ಗಳನ್ನು ಪೂರೈಸಿದ ಸಾಧನೆ ಮಾಡಿದರು. ಆ್ಯರನ್ ಫಿಂಚ್ ಅವರನ್ನು ರಾಹುಲ್ ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮೂಲಕ ಪೆವಿಲಿಯನ್‍ಗೆ ಅಟ್ಟಿದರು. ಇದನ್ನು ನೋಡಿದ ಅಭಿಮಾನಿಗಳು ರಿಷಭ್ ಪಂತ್ ಬದಲು ಧೋನಿ ಜಾಗಕ್ಕೆ ಕೆ.ಎಲ್.ರಾಹುಲ್ ಅವರೇ ಸೂಕ್ತ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 47 ರನ್ ಮತ್ತು ಎರಡನೇ ಪಂದ್ಯದಲ್ಲಿ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 80ರನ್ ಗಳಿಸಿದರು. ಇದಲ್ಲದೆ ಎರಡನೇ ಪಂದ್ಯದಲ್ಲಿ ಅವರು ಆ್ಯರನ್ ಫಿಂಚ್ ಅವರನ್ನು ಉತ್ತಮ ಶೈಲಿಯಲ್ಲಿ ಸ್ಟಂಪ್ ಮಾಡಿದರು. ಇದರ ನಂತರ ರಾಹುಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಯಿತು. ಇದನ್ನೂ ಓದಿ: ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್

    ಮುಂಬೈನಲ್ಲಿ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ 44ನೇ ಓವರ್ ನಲ್ಲಿ ಪಂತ್ ಅವರ ಹೆಲ್ಮೆಟ್‍ಗೆ ಬಾಲ್ ಬಡೆದು ಗಾಯಗೊಂಡಿದ್ದರು. ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಬದಲಿಗೆ ಆಂಧ್ರಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್.ಭರತ್ ತಂಡ ಸೇರಿದ್ದಾರೆ. ಆದರೆ ಭರತ್ ಅವರಿಗೆ ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಇಲೆವೆನ್‍ನಲ್ಲಿ ಅವಕಾಶ ಸಿಗಲಿಲ್ಲ.