Tag: athishi

  • ಜೂನ್‌ 4ರ ಬಳಿಕ ಬಿಜೆಪಿ ನಾಯಕರು ಜೈಲಿಗೆ ಹೋಗಲಿದ್ದಾರೆ: ಅತಿಶಿ

    ಜೂನ್‌ 4ರ ಬಳಿಕ ಬಿಜೆಪಿ ನಾಯಕರು ಜೈಲಿಗೆ ಹೋಗಲಿದ್ದಾರೆ: ಅತಿಶಿ

    ನವದೆಹಲಿ: ಜೂನ್‌ 4ರ ನಂತರ I.N.D.I.A ಒಕ್ಕೂಟ ಗೆದ್ದು ಸರ್ಕಾರ ರಚಿಸಿದಾಗ ಚುನಾವಣಾ ಬಾಂಡ್ ಕುರಿತು ತನಿಖೆಯನ್ನು ಪ್ರಾರಂಭಿಸಲಾಗುವುದು. ಈ ವೇಳೆ ಬಿಜೆಪಿ ಮಾತ್ರವಲ್ಲ, ಇಡಿ, ಸಿಬಿಐ, ಐಟಿ ಅಧಿಕಾರಿಗಳನ್ನು ಕೂಡ ಜೈಲಿಗೆ ಕಳುಹಿಸಲಾಗುವುದು ಎಂದು ಎಎಪಿ ಸಚಿವೆ ಅತಿಶಿ (Athishi) ಹೇಳಿದ್ದಾರೆ.

    ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ನಿಮ್ಮ ಅಂತ್ಯ ಹತ್ತಿರವಾಗಿದೆ ಎಂದು ಬಿಜೆಪಿಗೆ (BJP) ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಈ ದೇಶದ ಜನರು ತಮ್ಮ ಮತಗಳ ಮೂಲಕ ಬಿಜೆಪಿ ಸರ್ಕಾರವನ್ನು ತೊಡೆದುಹಾಕಲು ಮನಸ್ಸು ಮಾಡಿದ್ದಾರೆ. ಬಿಜೆಪಿಯವರು ಈಗ ಎಷ್ಟು ಬೇಕಾದರೂ ಹಗರಣಗಳನ್ನು ಮಾಡಬಹುದು. ಯಾಕೆಂದರೆ ಜೂನ್ 4 ರ ನಂತರ ದೇಶದ ಅತಿದೊಡ್ಡ ಹಗರಣದ ತನಿಖೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ಜೂನ್ 4 ರ ನಂತರ ನಮ್ಮ ಸರ್ಕಾರ ರಚನೆಯ ಬಳಿಕ ದೇಶದ ಅತಿದೊಡ್ಡ ಚುನಾವಣಾ ಬಾಂಡ್ ಹಗರಣದ (Electoral Bond) ತನಿಖೆ ನಡೆಯಲಿದೆ. ಬಿಜೆಪಿ ನಾಯಕರು ಮಾತ್ರವಲ್ಲದೆ ಇಡಿ, ಸಿಬಿಐ ಮತ್ತು ಐಟಿ ಅಧಿಕಾರಿಗಳೂ ಜೈಲಿಗೆ ಹೋಗುತ್ತಾರೆ. ಯಾಕೆಂದರೆ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅತಿಶಿ ಹೇಳಿದರು. ಇದನ್ನೂ ಓದಿ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

    ಇದೇ ವೇಳೆ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕುರಿತು ಮಾತನಾಡಿದ ಅತಿಶಿ, ನಾವು ಹೈಕೋರ್ಟ್ ಅನ್ನು ಗೌರವಿಸುತ್ತೇವೆ. ಆದರೆ ನ್ಯಾಯಾಲಯದ ಈ ನಿರ್ಧಾರವನ್ನು ನಾವು ಗೌರವದಿಂದ ಒಪ್ಪುವುದಿಲ್ಲ. ಯಾಕೆಂದರೆ ಈ ಸಂಪೂರ್ಣ ಮದ್ಯದ ಹಗರಣವು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ. ಚುನಾವಣಾ ಕಣದಲ್ಲಿ ಎಎಪಿಯನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗದಿದ್ದಾಗ ಪಿತೂರಿ ಹೊರಹೊಮ್ಮಿತು. ಇದಕ್ಕಾಗಿ ಇಡಿ ಮತ್ತು ಸಿಬಿಐ ಅನ್ನು ಬಳಸಲಾಯಿತು ಎಂದು ಆರೋಪಿಸಿದರು.

    ಮಂಗಳವಾರ ಮುಂಜಾನೆ, ಮದ್ಯದ ಹಗರಣ ಪ್ರಕರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ವಾರಕ್ಕೊಮ್ಮೆ ಭೇಟಿಯಾಗಲು ಕೋರ್ಟ್ ಅನುಮತಿ ನೀಡಿದೆ.

  • ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‍ಗೆ ಕೊರೊನಾ ಪಾಸಿಟಿವ್

    – ಎಎಪಿ ಶಾಸಕಿ ಅತಿಶಿಗೂ ಸೋಂಕು

    ನವದೆಹಲಿ: ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಇಂದು ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ತೀವ್ರ ಜ್ವರದಿಂದ ಬಳಲುತ್ತಿದ್ದ 55 ವರ್ಷದ ಸಚಿವರನ್ನು ಮಂಗಳವಾರ ಮುಂಜಾನೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಆರ್‍ಜಿಎಸ್‍ಎಸ್‍ಹೆಚ್)ಗೆ ಕರೆತರಲಾಗಿತ್ತು. ಅಲ್ಲದೆ ನಿನ್ನೆ ಬೆಳಗ್ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರ ವರದಿಯಲ್ಲಿ ಕೊರೊನಾ ನೆಗೆಟಿವ್ ಅಂತ ಬಂದಿತ್ತು.

    ಆದರೆ ಸಚಿವರಿಗೆ ಜ್ವರ ಕಡಿಯಾಗದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಆಗಿ 24 ಗಂಟೆಯ ನಂತರ ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಚಿವರ ಆರೋಗ್ಯ ಸ್ಥಿರವಾಗಿದ್ದು, ಆಕ್ಸಿಜನ್ ಸಹಾಯ ನೀಡಲಾಗಿದೆ ಎಂದು ಆರ್‍ಜಿಎಸ್‍ಎಸ್‍ಹೆಚ್ ನ ವೈದ್ಯರು ಹೇಳಿದ್ದಾರೆ.

    ಭಾನುವಾರ ಸತ್ಯೇಂದರ್ ಜೈನ್ ಅವರು ಕೇಂದ್ರ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಅರವಿಂದ್ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾರ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅಂದರೆ ಸೋಮವಾರ ಜ್ವರ ಹಾಗೂ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ಮುಂಗಳವಾರ ಮುಂಜಾನೆ ಜೈನ್ ಅವರು ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದರು.

    ಇತ್ತ ದೆಹಲಿಯ ಎಎಪಿ ಶಾಸಕಿ ಅತಿಶಿ(39) ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅತಿಶಿಗೆ ಮಂಗಳವಾರ ಕಫ ಹಾಗೂ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಟೆಸ್ಟ್‍ಗೆ ಕಳುಹಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ. ಸದ್ಯ ಅವರನ್ನು ಹೋಂಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

    ಅತಿಶಿ ಕೊರೊನಾ ವೈರಸ್ ಕಾಣಿಸಿಕೊಂಡು ಮೂರನೇ ಶಾಸಕಿಯಾಗಿದ್ದಾರೆ. ಈ ಹಿಂದೆ ತಮ್ಮ ಪಕ್ಷದ ವಿಶೇಷ್ ರವಿ ಹಾಗೂ ರಾಜ್ ಕುಮಾರ್ ಆನಂದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

    ಇಂದು ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರು ಆದಷ್ಟು ಬೇಗ ಕೊರೊನಾ ವೈರಸ್ ಮಹಾಮಾರಿಯಿಂದ ಗುಣಮುಖರಾಗಿ ಬರುತ್ತಾರೆ ಎಂಬ ನಂಬಿಎಕಯಿದೆ ಎಂದು ಬರೆದುಕೊಂಡಿದ್ದಾರೆ.