Tag: Ashwin Hassan

  • ಜನ ಸಾಮಾನ್ಯರಿಂದಲೇ ಬಿಡುಗಡೆಯಾಯ್ತು `ಅಪಾಯವಿದೆ ಎಚ್ಚರಿಕೆ’ ಟ್ರೈಲರ್!

    ಜನ ಸಾಮಾನ್ಯರಿಂದಲೇ ಬಿಡುಗಡೆಯಾಯ್ತು `ಅಪಾಯವಿದೆ ಎಚ್ಚರಿಕೆ’ ಟ್ರೈಲರ್!

    ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ `ಅಪಾಯವಿದೆ ಎಚ್ಚರಿಕೆ’ ಚಿತ್ರ (Apaayavide Eccharike film) ಆರಂಭದಿಂದ ಇಲ್ಲೀವರೆಗೂ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿತ್ತು. ಇದೇ ಫೆಬ್ರವರಿ 28ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ.

    ಈಗಾಗಲೇ ಇದೊಂದು ಬೇರೆಯದ್ದೇ ತೆರನಾದ ಕಥೆಯನ್ನೊಳಗೊಂಡಿರೋ ಸಿನಿಮಾ ಎಂಬ ಸುಳಿವು ಪ್ರೇಕ್ಷಕರಿಗೆ ಸಿಕ್ಕಿತ್ತು. ಈಗ ಅದಕ್ಕೆ ತಕ್ಕುದಾಗಿ, ಅತ್ಯಂತ ವಿಶೇಷವಾಗಿ ಈ ಟ್ರೈಲರ್ ಅನ್ನು ಲಾಂಚ್ ಮಾಡಲಾಗಿದೆ. ಈಟಿ ಮಾಲ್ ನಲ್ಲಿ ನಡೆದ ಅಚ್ಚಕಟ್ಟಾದ ಕಾರ್ಯಕ್ರಮದಲ್ಲಿ ಜನಸಾಮಾನ್ಯರ ಕೈಯಿಂದಲೇ ಟ್ರೈಲರ್ (Apaayavide Eccharike trailer) ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ನಿಮ್ಮ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು, ಶೀಘ್ರವೇ ಭೇಟಿಯಾಗುತ್ತೇನೆ: ಅಭಿಮಾನಿಗಳಿಗೆ ದರ್ಶನ್‌ ಪತ್ರ

    ಸಾಮಾನ್ಯವಾಗಿ ಯಾವುದೇ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿಯೂ ಸಾಮ್ಯತೆಗಳಿರುತ್ತವೆ. ಸಿನಿಮಾ, ರಾಜಕೀಯ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರಿಂದ ಟ್ರೈಲರ್ ಲಾಂಚ್ ಮಾಡಿಸಲಾಗುತ್ತದೆ. ಆದರೆ, ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ (Abhijith Thirthahalli) ಬೇರೆಯದ್ದೇ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿವಕಾರ್ತಿಕೇಯನ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್

    ಆಟೋ ಚಾಲಕರು, ಕ್ಯಾಬ್ ಚಾಲಕರು ಸೇರಿದಂತೆ ನಾನಾ ಕೆಲಸ ಮಾಡುವ ಒಂದಷ್ಟು ಜನರಿಂದ ಅಪಾಯವಿದೆ ಎಚ್ಚರಿಕೆ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಈ ಮೂಲಕ ನಿಜವಾದ ಸಿನಿಮಾ ಪ್ರೇಮಿಗಳ ಕಡೆಯಿಂದಲೇ ಟ್ರೈಲರ್ ಬಿಡುಗಡೆಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದುಕೊಂಡಿದ್ದಾರೆ. ಇದನ್ನೂ ಓದಿ: ಹೆಡ್ ಬುಷ್ ಡೈರೆಕ್ಟರ್ ಇದೀಗ ಹೀರೋ

    ತಮ್ಮ ಕಷ್ಟ ಕಾರ್ಪಣ್ಯಗಳಾಚೆಗೂ ಬಿಡುಗಡೆಗೊಂಡ ಸಿನಿಮಾಗಳನ್ನೆಲ್ಲ ನೋಡುವ ನಿಜವಾದ ಸಿನಿಮಾ ಪ್ರೇಮಿಗಳು ಇವರೇ. ಅಂಥವರಿಂದಲೇ ಟ್ರೈಲರ್ ಲಾಂಚ್ ಮಾಡಿಸೋದು ನಿಜಕ್ಕೂ ಥ್ರಿಲ್ಲಿಂಗ್ ಸಂಗತಿ ಎಂಬಂಥಾ ಶಹಬ್ಬಾಸ್ ಗಿರಿ ಸಾಮಾಜಿಕ ಜಾಲತಾಣಗಳ ಮೂಲಕ ಹೊಮ್ಮಿಕೊಳ್ಳುತ್ತಿದೆ. ಇದನ್ನೂ ಓದಿ: ದರ್ಶನ್ ಬರ್ತ್‌‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ

    ಅಪಾಯವಿದೆ ಎಚ್ಚರಿಕೆ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಜಾನರಿನ ಸಿನಿಮಾ. ಮಲೆನಾಡಿನ ದಟ್ಟ ಕಾಡೊಳಗೆ ಘಟಿಸುವ ಮೈ ನವಿರೇಳಿಸುವ ಕಥನ ಇದರ ಜೀವಾಳ. ಅದರ ಒಟ್ಟಾರೆ ಸ್ವರೂಪ ಹೇಗಿದೆ ಅನ್ನೋದರ ಸುಳಿವೊಂದು ಈ ಟ್ರೈಲರ್ ಮೂಲಕ ದಾಟಿಕೊಂಡಿದೆ. ಎದೆ ಅದುರಿಸೋ ದೃಷ್ಯಗಳ ಮೂಲಕ ಭಿನ್ನ ಕಥೆಯ ಸೂಚನೆ ಕೂಡಾ ಸದರಿ ಟ್ರೈಲರ್ ನಲ್ಲಿ ದಟ್ಟವಾಗಿದೆ. ಇದನ್ನೂ ಓದಿ: ದರ್ಶನ್ ಬರ್ತ್‌ಡೇ ಸಂಭ್ರಮ – ಪತಿ ಜೊತೆಗಿನ ಫೋಟೊ ಹಂಚಿಕೊಂಡು ವಿಜಯಲಕ್ಷ್ಮೀ ವಿಶ್

    ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಕಂಡು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ಒಟ್ಟಾರೆಯಾಗಿ ಈ ಟ್ರೈಲರ್ ಪ್ರಾಮಿಸಿಂಗ್ ಆಗಿದೆ ಎಂಬಂಥಾ ಅಭಿಪ್ರಾಯ ಎಲ್ಲೆಡೆ ಮೂಡಿಕೊಳ್ಳುತ್ತಿದೆ.

    ಪಂಚಭೂತಗಳ ಆಧಾರದಲ್ಲಿ ಇಲ್ಲಿನ ಪ್ರಧಾನ ಪಾತ್ರಗಳನ್ನು ನಿರ್ದೇಶಕರು ಸೃಷ್ಟಿಸಿದ್ದಾರಂತೆ. ವಿಕಾಸ್ ಉತ್ತಯ್ಯ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಧಾ ಭಗವತಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಹಾರರ್ ಸಿನಿಮಾ ಅಂದರೆ ಭೂತ ಬಂಗಲೆ ಸೇರಿದಂತೆ ಒಂದಷ್ಟು ಸಿದ್ಧ ಸೂತ್ರಗಳಿವೆ. ಅದೆಲ್ಲವನ್ನೂ ಮೀರಿಕೊಂಡು, ದಟ್ಟ ಕಾಡಿನಲ್ಲಿ ರಾತ್ರಿ ಘಟಿಸುವ ಕಥಾನಕವನ್ನಿಲ್ಲಿ ನಿರ್ದೇಶಕರು ಪ್ರೇಕ್ಷಕರ ಮುಂದಿಡಲಿದ್ದಾರೆ.

    ಮಲೆನಾಡು ಭಾಗದ ದಟ್ಟ ಕಾಡಿನಲ್ಲಿ ಇದರ ಬಹುಪಾಲು ಚಿತ್ರೀಕರಣ ನಡೆದಿದೆ. ಅದರ ಅಸಲೀ ಸ್ವಾದವನ್ನು ಈ ಟ್ರೈಲರ್ ಹಿಡಿದಿಟ್ಟುಕೊಂಡಿದೆ. ಹರಿಣಿ ಶ್ರೀಕಾಂತ್, ಅಶ್ವಿನ್ ಹಾಸನ್ ಮುಂತಾದವರ ತಾರಾಗಣವಿದೆ. ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಪಾಯವಿದೆ ಎಚ್ಚರಿಕೆ ಪ್ರೇಕ್ಷಕರ ಮುಂದೆ ಬರಲು ಒಂದು ವಾರವಷ್ಟೇ ಬಾಕಿ ಉಳಿದುಕೊಂಡಿದೆ.

  • ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ಬೆಂಗಳೂರು: ಅಪ್ಪಟ ಕನ್ನಡದ, ಕೇಳಿದಾಕ್ಷಣವೇ ಆಪ್ತವೆನ್ನಿಸುವ ಶೀರ್ಷಿಕೆಯ ಚಿತ್ರಗಳು ಆಗಾಗ ಗಮನ ಸೆಳೆಯುತ್ತಿರುತ್ತವೆ. ಇದೀಗ ಬಿಡುಗಡೆಗೆ ರೆಡಿಯಾಗಿರುವ ರಾಜ್ ಗೋಪಿ ನಿರ್ದೇಶನದ ಪಯಣಿಗರು ಕೂಡಾ ಅದೇ ಸಾಲಿನಲ್ಲಿ ಸೇರ್ಪಡೆಯಾಗಬಲ್ಲ ಚಿತ್ರ. ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಪಯಣಿಗರು ಇದೇ ಏಪ್ರಿಲ್ ಹದಿನೇಳನೇ ತಾರೀಕಿನಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

    ಸಂಸಾರದ ಜವಾಬ್ದಾರಿ ಹೊತ್ತ ಐವರು ನಡುವಯಸಿನ ಸ್ನೇಹಿತರು ಗೋವಾ ಟ್ರಿಪ್ಪಿಗೆ ಹೋಗೋದು ಈ ಕಥೆಯ ಮೂಲ. ನೆಮ್ಮದಿ ಅರಸಿ ಹೊರಡುವ ಈ ಸ್ನೇಹಿತರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸ್ವಭಾವ. ಆದರೆ ಅವರಿಗೆ ಬೆಂಗಳೂರಿನಿಂದ ಗೋವಾ ಪ್ರಯಾಣದಲ್ಲಿ ಅನಿರೀಕ್ಷಿತ ಘಟನಾವಳಿಗಳೇ ಪದೇ ಪದೇ ಎದುರಾಗುತ್ತವೆ. ಗೋವಾದಲ್ಲಿಯಂತೂ ಇರುವ ನೆಮ್ಮದಿಯನ್ನೂ ಕಿತ್ತುಕೊಳ್ಳುವಂಥಾ ಘಟನೆಯೊಂದು ನಡೆದು ಇಡೀ ಟೀಮು ಕಂಗಾಲಾಗುತ್ತೆ.

    ಇಂಥಾ ಹೊತ್ತಲ್ಲಿಯೇ ಈ ಪಯಣದಲ್ಲಿ ಅನಿರೀಕ್ಷಿತವಾಗಿ ರಾಮಣ್ಣ ತಾತ ಎಂಬ ಹಿರಿಯ ಕ್ಯಾರೆಕ್ಟರ್ ಒಂದು ಈ ಟೀಮು ಸೇರಿಕೊಳ್ಳುತ್ತದೆಯಂತೆ. ಈ ರಾಮಣ್ಣ ತಾತನ ಪಾತ್ರವನ್ನು ಹಿರಿಯ ನಟ ನಾಗರಾಜ್ ರಾವ್ ನಿರ್ವಹಿಸಿದ್ದಾರಂತೆ. ಎಲ್ಲ ಪಾತ್ರಗಳಂತೆಯೇ ಈ ಪಾತ್ರವೂ ಕೂಡಾ ಎಲ್ಲರನ್ನು ಕಾಡುವಂತೆ ಮೂಡಿ ಬಂದಿದೆಯಂತೆ. ನಿಖರವಾಗಿ ಹೇಳ ಬೇಕೆಂದರೆ, ಪಯಣಿಗರ ಪಯಣ ಪಕ್ಕಾ ಬೇರೆಯದ್ದೇ ಜಾಡಿನದ್ದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

    ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.