Tag: Apoorva Srinivasan

  • ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಅದ್ಭುತ ಕಥೆಯ ಸುಳಿವು ಬಿಚ್ಚಿಟ್ಟ ರಾಂಧವ ಟ್ರೇಲರ್!

    ಬೆಂಗಳೂರು: ಮೊದಲ ಪ್ರಯತ್ನವೊಂದರಲ್ಲಿ ಯಾವುದೇ ಸಿನಿಮಾವಾದರೂ ಕಾಲೂರಿ ನಿಲ್ಲುವುದೇ ಕಷ್ಟ. ಅಂಥಾದ್ದರಲ್ಲಿ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಅಬ್ಬರಿಸೋದೆಂದರೆ ಅದೊಂದು ಪವಾಡವೇ. ಅಂಥಾದ್ದೊಂದು ಪವಾಡವನ್ನು ವಾಸ್ತವದಲ್ಲಿಯೇ ಸೃಷ್ಟಿಸೋದರಲ್ಲಿ ರಾಂಧವ ಚಿತ್ರತಂಡ ಈಗಾಗಲೇ ಗೆದ್ದಿದೆ. ಇದೇ ಇಪ್ಪತ್ಮೂರನೇ ತಾರೀಕಿನಂದು ತೆರೆಗಾಣಲಿರೋ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಬಿಡುಗಡೆಯ ಕಡೆಯ ಕ್ಷಣಗಳಲ್ಲಿ ಅದ್ಭುತ ಕಥಾಹಂದರದ ಸುಳಿವು ಬಿಚ್ಚಿಡುತ್ತಲೇ ನಿಗೂಢ ಅಂಶಗಳನ್ನು ಬಚ್ಚಿಟ್ಟುಕೊಂಡಿರೋ ಈ ಟ್ರೇಲರ್ ನೋಡಿದ ಪ್ರತಿಯೊಬ್ಬರೂ ಥ್ರಿಲ್ ಆಗಿದ್ದಾರೆ.

    ಸುನಿಲ್ ಆಚಾರ್ಯ ನಿರ್ದೇಶನದ ಚೊಚ್ಚಲ ಚಿತ್ರ ರಾಂಧವ. ಬಿಗ್‍ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣರಿಗೂ ನಾಯಕನಾಗಿ ಇದು ಮೊದಲ ಹಾಗೂ ಮಹತ್ತರ ಸಿನಿಮಾ. ಎರಡು ವರ್ಷಗಳಿಗೂ ಹೆಚ್ಚು ಕಾಲದ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಈ ಚಿತ್ರವೀಗ ಗೆಲುವಿನ ಸ್ಪಷ್ಟ ಸೂಚನೆಯೊಂದಿಗೆ ಥೇಟರಿನ ಹಾದಿಯಲ್ಲಿದೆ. ಈವರೆಗೂ ರಾಂಧವನ ಟೀಸರ್, ಟ್ರೇಲರ್‍ಗಳು ಬಂದಿವೆ. ಆದರೆ ಅದರಲ್ಲಿ ಕಥೆಯ ಬಗ್ಗೆ ಯಾವ ಸುಳಿವನ್ನೂ ಕೂಡಾ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಕಥೆಯ ಬಗ್ಗೆ ಒಂದು ಅಂದಾಜು ಮೂಡಿಕೊಳ್ಳುತ್ತದೆ. ಆದರೆ ಕಥೆ ಸಾಗೋ ಪಥ ಮಾತ್ರ ನಿಗೂಢ. ಇದುವೇ ಈ ಟ್ರೇಲರ್‍ನ ಶಕ್ತಿ ಎನ್ನಲಡ್ಡಿಯಿಲ್ಲ.

    ಈ ಟ್ರೇಲರ್ ನಲ್ಲಿಯೇ ಭುವನ್ ಪೊನ್ನಣ್ಣರ ಅಭಿನಯದ ಝಲಕ್‍ಗಳೂ ಅನಾವರಣಗೊಂಡಿವೆ. ಪಕ್ಷಿತಜ್ಞ ರಾಬರ್ಟ್ ಗೂಬೆಯೊಂದರ ಬೆಂಬಿದ್ದು ಒಡೆಯನ ಸಮುದ್ರ ಸಂಸ್ಥಾನಕ್ಕೆ ಹೋದಾಗ ಅಲ್ಲೆದುರಾಗೋ ವಿಚಿತ್ರ ಜಗತ್ತು, ಆತನನ್ನು ಕಾಡೋ ಜನ್ಮಾಂತರಗಳ ಪ್ರಶ್ನೆಗಳೊಂದಿಗೆ ಒಂದಷ್ಟು ಪಾತ್ರಗಳನ್ನೂ ಕೂಡಾ ಈ ಟ್ರೇಲರ್ ಕಾಣಿಸಿದೆ. ಈ ಮೂಲಕ ಮತ್ತಷ್ಟು ಪ್ರೇಕ್ಷರನ್ನೂ ರಾಂಧವ ತಲುಪಿಕೊಂಡಿದ್ದಾನೆ. ಈ ಟ್ರೇಲರ್‍ನೊಂದಿಗೆ ಈ ಚಿತ್ರ ಭರ್ಜರಿಯಾಗಿಯೇ ಪ್ರೇಕ್ಷಕರತ್ತ ದಾಪುಗಾಲಿಟ್ಟಿದೆ. ಇದನ್ನು ಕಂಡ ಎಲ್ಲರೊಳಗೂ ಬೇಗನೆ ಈ ಸಿನಿಮಾ ನೋಡಬೇಕೆಂಬ ಬಯಕೆ ಹುಟ್ಟುವಂತಿದೆ. ಅದು ರಾಂಧವನ ಗೆಲುವಿನ ಲಕ್ಷಣವಾಗಿಯೂ ಕಾಣಿಸುತ್ತಿದೆ.

  • ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಲು ರೆಡಿಯಾಗಿದೆ. ಭುವನ್ ಪೊನ್ನಣ್ಣ ನಾನಾ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋ ರೀತಿ, ಕಥೆಯ ಬಗ್ಗೆ ಚಿತ್ರತಂಡ ಜಾಹೀರು ಮಾಡಿರೋ ಒಂದಷ್ಟು ಸುಳಿವುಗಳ ಮೂಲಕವೇ ರಾಂಧವ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇನ್ನೇನು ಬಿಡುಗಡೆಗೆ ಒಂದಷ್ಟು ದಿನಗಳು ಬಾಕಿಯಿರುವಾಗಲೇ ರಾಂಧವನ ಆಡಿಯೋ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕವೇ ಚಿತ್ರತಂಡ ಐತಿಹಾಸಿಕ ಹೆಜ್ಜೆಯೊಂದರ ಮೂಲಕ ಗಮನ ಸೆಳೆದಿದೆ.

    ಸಿನಿಮಾಗಳ ಯಾವುದೇ ಸಮಾರಂಭವಿದ್ದರೂ ಅಲ್ಲಿ ತಾರೆಯರದ್ದೇ ಕಾರುಬಾರು. ಆಡಿಯೋ ಬಿಡುಗಡೆಯಂಥಾದ್ದಕ್ಕೂ ಸ್ಟಾರ್‍ಗಳನ್ನು ಮಾತ್ರವೇ ಕರೆಸುವಂಥಾ ಪರಿಪಾಠವೂ ಬೆಳೆದು ಬಂದಿದೆ. ಆದರೆ ರಾಂಧವ ತಂಡ ಆಡಿಯೋ ಬಿಡುಗಡೆ ಮಾಡಿಸಿರೋದು ಈ ನಾಡಿನ ಅನ್ನದಾತರಾದ ರೈತರು ಮತ್ತು ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟಿರುವ ಯೋಧರಿಂದ. ಈ ಮೂಲಕ ರಾಂಧವ ಚಿತ್ರತಂಡ ಹೊಸ ಪರಂಪರೆಗೆ ನಾಂದಿ ಹಾಡಿದೆ.

    ಹೀಗೆ ಹೊಸ ರೀತಿಯಲ್ಲಿ, ರೈತರು ಮತ್ತು ಯೋಧರು ಬಿಡುಗಡೆಗೊಳಿಸಿರೋ ರಾಂಧವ ಚಿತ್ರದ ಹಾಡುಗಳಿಗೆ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಈವರೆಗೂ ಗಾಯಕರಾಗಿದ್ದ ಶಶಾಂಕ್ ಶೇಷಗಿರಿ ತಮ್ಮ ಗೆಳೆಯ ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ತಾಜಾತನದಿಂದ ಕೂಡಿರುವ ಸಂಗೀತದ ಪಟ್ಟುಗಳೊಂದಿಗೆ ಹಾಡುಗಳನ್ನು ಕಟ್ಟಿ ಕೊಡುವ ಮೂಲಕ ಭರವಸೆಯನ್ನೂ ಮೂಡಿಸಿದ್ದಾರೆ. ನಿರ್ದೇಶಕ ಸುನೀಲ್ ಆಚಾರ್ಯರ ಕಥೆಗೆ, ಕಲ್ಪನೆಗೆ ಪೂರಕವಾಗಿ ಮೂಡಿ ಬಂದಿರೋ ಈ ಹಾಡುಗಳು ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿವೆ.