Tag: Anna Canteen

  • 5 ರೂ.ಗೆ ಊಟ, ತಿಂಡಿ ನೀಡುವ `ಅಣ್ಣಾ ಕ್ಯಾಂಟೀನ್’ ಆಂಧ್ರದಲ್ಲಿ ಉದ್ಘಾಟನೆ

    5 ರೂ.ಗೆ ಊಟ, ತಿಂಡಿ ನೀಡುವ `ಅಣ್ಣಾ ಕ್ಯಾಂಟೀನ್’ ಆಂಧ್ರದಲ್ಲಿ ಉದ್ಘಾಟನೆ

    ಅಮರಾವತಿ: ಕೇವಲ 5 ರೂಪಾಯಿಗೆ ಊಟ ಮತ್ತು ಉಪಹಾರ ವಿತರಿಸುವ `ಅಣ್ಣಾ ಕ್ಯಾಂಟೀನ್’ ಅನ್ನು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡುರವರು ವಿಜಯವಾಡದಲ್ಲಿ ಉದ್ಘಾಟಿಸಿದ್ದಾರೆ.

    ಚಂದ್ರಬಾಬು ನಾಯ್ಡು ಅವರು ಇಂದು ವಿಜಯವಾಡದ ಭವಾನಿಪುರದಲ್ಲಿ ಅಣ್ಣಾ ಕ್ಯಾಂಟೀನ್ ಉದ್ಘಾಟಿಸಿದರು. ಇದಲ್ಲದೇ ರಾಜ್ಯಾದ್ಯಂತ ಒಟ್ಟು 60 ಕ್ಯಾಂಟೀನ್ ಗಳು ಇಂದು ಉದ್ಘಾಟನೆಗೊಂಡಿವೆ. ಈ ವೇಳೆ ಮಾತನಾಡಿದ ಅವರು ರಾಜ್ಯಾದ್ಯಂತ ಒಟ್ಟು 203 ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

    ಆಂಧ್ರದ ಪುರಸಭೆ ಮತ್ತು ನಗರಾಭಿವೃದ್ಧಿ ಸಚಿವರಾದ ಪಿ ನಾರಾಯಣ್ ರವರು ಮಾತನಾಡಿ, ಬಡವರು ಕೇವಲ 15 ರೂಪಾಯಿಗಳಿಗೆ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕೆಂಬುದು `ಅಣ್ಣಾ ಕ್ಯಾಂಟೀನ್’ನ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್ ಗಳಲ್ಲಿ ಕೇವಲ 5 ರೂಪಾಯಿಗಳಿಗೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಬೆಳಿಗ್ಗೆ ಮೂರು ಇಡ್ಲಿ, ಮೂರು ಪೂರಿ, ಉಪ್ಪಿಟ್ಟು ಹಾಗೂ ಪೊಂಗಲ್ ಅನ್ನು ಉಪಹಾರವಾಗಿ ನೀಡಿದರೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನಕ್ಕೆ ಅನ್ನ ಸಾಂಬಾರ್, ದಾಲ್, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಈ ಯೋಜನೆಯ ಉಸ್ತುವಾರಿಯನ್ನು ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದ್ದು, ದಿನನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು `ಅಣ್ಣಾ ಕ್ಯಾಂಟೀನ್’ ಹೊಂದಿದೆ ಎಂದು ನಾರಾಯಣ್ ರವರು ಹೇಳಿದ್ದಾರೆ.

    ಆರಂಭದಲ್ಲಿ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಆರಂಭಗೊಂಡ ಬಳಿಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು.

  • ರಾಯಚೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯಿಂದ `ಅಣ್ಣಾ ಕ್ಯಾಂಟೀನ್’: 5 ರೂ. ತಿಂಡಿ, 10 ರೂ. ಊಟ

    ರಾಯಚೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯಿಂದ `ಅಣ್ಣಾ ಕ್ಯಾಂಟೀನ್’: 5 ರೂ. ತಿಂಡಿ, 10 ರೂ. ಊಟ

    ರಾಯಚೂರು: ತಮಿಳುನಾಡಿನ ಅಮ್ಮಾ ಕ್ಯಾಂಟಿನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಆದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ರಾಯಚೂರಿನಲ್ಲಿ ಅಣ್ಣಾ ಕ್ಯಾಂಟೀನ್ ತೆಗೆದು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುತ್ತಿದ್ದಾರೆ.

    ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟಿನ್ ಆರಂಭಿಸುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯಾದ ರಾಯಚೂರಿನ ಮಾನ್ವಿ ಪಟ್ಟಣದ ನಿವಾಸಿ ಎಂ.ಈರಣ್ಣ ಹಾಗೂ ಅವರ ಸ್ನೇಹಿತರು `ಅಣ್ಣಾ ಕ್ಯಾಂಟೀನ್’ ಪ್ರಾಂಭಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಒದಗಿಸುವ ಮೂಲಕ ಇಡೀ ದೇಶದಲ್ಲೇ ಮನೆ ಮಾತಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನ ಅಮ್ಮಾ ಕ್ಯಾಂಟಿನ್ ಮಾದರಿಯ ಪ್ರಯೋಗ ಈಗ ರಾಜ್ಯದಲ್ಲೂ ಆರಂಭವಾಗಲಿದೆ.

    5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಶುಚಿ-ರುಚಿಯಾದ ಊಟ ಕೊಡುತ್ತಿದ್ದಾರೆ. ಕ್ಯಾಂಟಿನ್‍ನಲ್ಲಿ ಇಡ್ಲಿ, ಪಲಾವ್, ಪೂರಿ ಸೇರಿದಂತೆ ಒಂದೊಂದು ದಿನ ಒಂದೊಂದು ತಿಂಡಿ ಸಿಗುತ್ತೆ. ಅನ್ನ ಸಾಂಬರ್, ಚಿತ್ರಾನ್ನ, ಮಿರ್ಚಿ ಊಟ ಕಡಿಮೆ ದುಡ್ಡಿನಲ್ಲಿ ರೈತರ ಹೊಟ್ಟೆ ತುಂಬಿಸುತ್ತಿದೆ. ಕ್ಯಾಂಟಿನ್‍ನಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ತಿಂಡಿ ಸಿಗುತ್ತದೆ. ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ಊಟ ಸಿಗುತ್ತದೆ.

    ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಎಂ.ಈರಣ್ಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಸತತ ಎರಡು ವರ್ಷಗಳಿಂದ ರಾಯಚೂರಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಗುಳೆ ಹೋಗುವುದು ನಿಂತಿಲ್ಲ. ಹೀಗಾಗಿ ಮಾನ್ವಿಯ ಟಿಎಪಿಎಂಸಿ ಆವರಣದಲ್ಲಿ ಮುಖ್ಯವಾಗಿ ರೈತರಿಗಾಗಿ ಈರಣ್ಣ ಅವರು ತಮ್ಮ ನಾಲ್ಕೈದು ಜನ ಸ್ನೇಹಿತರೊಂದಿಗೆ ಅಣ್ಣಾ ಕ್ಯಾಂಟಿನ್ ತೆರೆದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿದ್ರೂ ರಾಜಕೀಯ ಬೇರೆ, ಜನಸೇವೆ ಬೇರೆ. ಜನರ ಕಷ್ಟಕ್ಕೆ ಸ್ಪಂದಿಸಲು ಕ್ಯಾಂಟಿನ್ ತೆರೆದಿದ್ದೇವೆ ಎಂದು ಈರಣ್ಣ ಹೇಳುತ್ತಾರೆ.

    ಈಗಾಗಲೇ ಮಾನ್ವಿ, ಸಿರವಾರ, ಕಲ್ಲೂರು, ಪೋತ್ನಾಳ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿನ ಅರವಟಿಗೆಗಳನ್ನ ತೆರೆದಿರುವ ಸಿದ್ದರಾಮಯ್ಯ ಅಭಿಮಾನಿಗಳು, ಮೊದಲ ಬಾರಿಗೆ ಅಣ್ಣಾ ಕ್ಯಾಂಟಿನ್ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಅಗಸ್ಟ್ 15ಕ್ಕೆ ಇಂದಿರಾ ಕ್ಯಾಂಟಿನ್ ಆರಂಭಿಸುವ ಮುನ್ನವೇ ರಾಯಚೂರಿನ ಮಾನ್ವಿಯಲ್ಲಿ ಅಣ್ಣಾ ಕ್ಯಾಂಟಿನ್ ಹೆಸರು ಮಾಡುತ್ತಿದೆ.