Tag: Andhra Pradesh

  • ಅವಳಿ ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ 74ರ ವೃದ್ಧೆ

    ಅವಳಿ ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ 74ರ ವೃದ್ಧೆ

    ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ 74 ವರ್ಷದ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ. ಇಳಿ ವಯಸ್ಸಿನಲ್ಲಿ 2 ಮಕ್ಕಳಿಗೆ ಜನ್ಮನೀಡಿ ತಾವು ತಾಯಿಯಾಗುವ ಬಯಕೆಯನ್ನು ತೀರಿಸಿಕೊಂಡಿದ್ದಾರೆ.

    ಹೌದು, ಈ ವಯಸ್ಸಿನಲ್ಲೂ ಮಗುವಿಗೆ ಜನ್ಮ ನೀಡೋದಾ ಎಂದು ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿ ಎರ್ರಮಟ್ಟಿ ಮಂಗಯಮ್ಮ(74) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟಿ ರಾಜ ರಾವ್(80) ಹಾಗೂ ಮಂಗಯಮ್ಮ ಅವರು ಮಾರ್ಚ್ 22, 1962 ರಂದು ಮದುವೆಯಾಗಿದ್ದರು. ಆದರೆ ರಾಜ ರಾವ್ ಮತ್ತು ಮಂಗಯಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಬಹುವರ್ಷದಿಂದ ಮಕ್ಕಳನ್ನು ಪಡೆಯುವ ಆಸೆ ಹೊತ್ತಿದ್ದ ದಂಪತಿಯ ಕನಸು ಈಗ ನನಸಾಗಿದೆ. ಈ ಮೂಲಕ ಮಂಗಯಮ್ಮ ಹೊಸ ದಾಖಲೆ ಬರೆದಿದ್ದಾರೆ.

    ಸುಮಾರು 30 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದರು.

    ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ತಾಯಿಯಾದ ಖುಷಿಯನ್ನು ಮಂಗಯಮ್ಮ ಅವರು ಹಂಚಿಕೊಂಡು, ನಾವು ಮಕ್ಕಳಿಲ್ಲದೆ ಕೊನೆಯುಸಿರು ಎಳೆಯುತ್ತೇವೆ ಎಂದು ಅಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಪಕ್ಕದಲ್ಲಿದ್ದ ಮಹಿಳೆಯೊಬ್ಬರು 55ರ ವಯಸ್ಸಿನಲ್ಲಿ ತಾಯಿಯಾಗಿದ್ದರು. ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳು ಪಡೆಯುವ ವಯಸ್ಸು ಮೀರಿದ್ದರೂ ಮಕ್ಕಳು ಪಡೆಯಬಹುದು ಎಂದು ಹೇಳಿದ್ದರು. ಆಗ ನಾನು ಪತಿಗೆ ಈ ಬಗ್ಗೆ ತಿಳಿಸಿದೆ, ಅವರೂ ಕೂಡ ಇದಕ್ಕೆ ಒಪ್ಪಿಕೊಂಡರು. ನಾನು ಈಗ ಬಹಳ ಖುಷಿಯಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಇತ್ತೀಚೆಗೆ ರಾಜಸ್ತಾನ ಮೂಲದ ದಲ್ಜಿಂಧರ್ ಕೌರ್ ಅವರು ತಮ್ಮ 70ರ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮಂಗಯಮ್ಮ ಅವರು ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.

  • ರಾಯಚೂರಿನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಆಂಧ್ರದಲ್ಲಿ ಶವವಾಗಿ ಪತ್ತೆ -ಆಟೋ ಚಾಲಕ ಬಂಧನ

    ರಾಯಚೂರಿನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಆಂಧ್ರದಲ್ಲಿ ಶವವಾಗಿ ಪತ್ತೆ -ಆಟೋ ಚಾಲಕ ಬಂಧನ

    ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಸಾವಿನ ಪ್ರಕರಣ ಮಾಸುವ ಮುನ್ನವೇ, ನಗರದ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಅಪ್ರಾಪ್ತೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

    17 ವರ್ಷದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಐದು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾಳೆ. ಕಾಲೇಜು ತರಗತಿಗಳು ಆರಂಭವಾಗದಿದ್ದರೂ ಪ್ಯಾರಾ ಮಡಿಕಲ್ ವಿದ್ಯಾರ್ಥಿನಿ ಆಗಸ್ಟ್ 16 ರಂದು ಗಣಮೂರು ಗ್ರಾಮದಿಂದ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ.

    ರಾಯಚೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಳು. ಇದರಿಂದ ಗಾಬರಿಯಾದ ಪೋಷಕರು ಆಗಸ್ಟ್ 17 ರಂದು ರಾಯಚೂರು ಮಹಿಳಾ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆದರೆ ಆಗಸ್ಟ್ 20 ರಂದು ಆಂಧ್ರದ ಕರ್ನೂಲ್‍ನ ಗುಡೂರು ಠಾಣಾ ವ್ಯಾಪ್ತಿಯ ಸುಂಕೇಶ್ವರ ಜಲಾಶಯ ಬಳಿ ತುಂಗಭದ್ರ ನದಿಯಲ್ಲಿ ಶವ ಪತ್ತೆಯಾಗಿದ್ದಾಳೆ.

    ಪೋಷಕರ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ಆಟೋ ಚಾಲಕ ವೀರೇಂದ್ರ ಎಂಬವನನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿದ್ಯಾರ್ಥಿನಿ ಸಾವಿನ ತನಿಖೆಯನ್ನ ಮುಂದುವರಿಸಿದ್ದಾರೆ.

    ವಿದ್ಯಾರ್ಥಿನಿ ಪೋಷಕರು 17ರಂದು ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ತನಿಖೆ ಮಾಡಿದ್ದೆವು. ಆದರೆ ದುರದೃಷ್ಟವಶಾತ್ ವಿದ್ಯಾರ್ಥಿನಿ ಶವ ಆಂಧ್ರ ಪ್ರದೇಶದ ಸುಂಕೇಶ್ವರ ಜಲಾಶಯ ಬಳಿ ಪತ್ತೆಯಾಗಿದೆ. ನಮ್ಮ ಇಲಾಖೆ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಅವರ ಪೋಷಕರು ಅನುಮಾನ ವ್ಯಕ್ತಪಡಿಸಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಅಮರಾವತಿ: ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಜನತೆಗೆ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸ್ಥಳೀಯ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಿರಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸೋಮವಾರ ನಡೆದ ಅಧಿವೇಶನದಲ್ಲಿ ಆಂಧ್ರ ಪ್ರದೇಶದ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ-2019 ಸಂಬಂಧಿಸಿದ ಮಸೂದೆ ಪಾಸ್ ಆಗಿದೆ.

    ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಕೈಗಾರಿಕೆಗಳು, ಫ್ಯಾಕ್ಟರಿಗಳು, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಜಂಟಿ ಉದ್ಯಮಗಳು ಹಾಗೂ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75 ರಷ್ಟು ಉದ್ಯೋಗ ಮೀಸಲಿಡಬೇಕು ಎನ್ನವ ಅಂಶ ಒಳಗೊಂಡಿದೆ. ಅಷ್ಟೇ ಅಲ್ಲದೇ ಖಾಸಗಿ ಸಂಸ್ಥೆಗಳು ಸ್ಥಳೀಯ ಯುವಜನತೆಯಲ್ಲಿ ಕೌಶಲ್ಯವಿಲ್ಲ ಎಂದು ದೂರುವಂತಿಲ್ಲ. ಸರ್ಕಾರದ ಸಹಭಾಗಿತ್ವದಲ್ಲಿ ಅವರಿಗೆ ತರಬೇತಿ ನೀಡಬೇಕಾಗುತ್ತದೆ.

    ಈ ಹಿಂದೆ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ವೇಳೆ ಈ ಭರವಸೆಯನ್ನು ನೀಡಿದ್ದರು. ಚುನಾವಣೆಯ ವೇಳೆ ಜಗನ್ ಅವರ ಪ್ರಣಾಳಿಕೆಯ ಅಂಶ ಕೂಡ ಆಗಿತ್ತು.

    ಕಾಯ್ದೆ ಜಾರಿಯಾದ ಬಳಿಕ ಆಂಧ್ರ ಪ್ರದೇಶದ 1.33 ಲಕ್ಷ ಗ್ರಾಮಗಳಲ್ಲಿ ಯುವಜನತೆ ಉದ್ಯೋಗಿಗಳಾಗುತ್ತಾರೆ. ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಯುವಜನತೆಗೆ ಉದ್ಯೋಗ ನೀಡುವ ಕೋಟಾವನ್ನು ಶೀಘ್ರ ಜಾರಿಗೆ ತರಬೇಕು ಎಂದು ತಿಳಿಸಿದರು.

    ಹಲವು ರಾಜ್ಯಗಳು ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗ ಕಾಯ್ದಿರಿಸುವ ಕಲ್ಪನೆಯನ್ನು ಮುಂದಿಟ್ಟಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮೀಸಲಿರಿಸುವ ಕಾನೂನು ರೂಪಿಸುವ ಭರವಸೆಯನ್ನು ನೀಡಿದ್ದಾರೆ.

  • ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಹೈದರಾಬಾದ್: 8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ತೆಲುಗುದೇಶಂ ಪಕ್ಷದ (ಟಿಡಿಪಿ) ಕಚೇರಿ `ಪ್ರಜಾ ವೇದಿಕೆ’ ಧ್ವಂಸಗೊಳಿಸಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದೆ.

    ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದೆ. ಪ್ರಜಾ ವೇದಿಕೆ ಸ್ಥಳದಿಂದ ಕೂಗಳತೆ ದೂರದಲ್ಲಿ ಚಂದ್ರಬಾಬು ನಾಯ್ಡು ಮನೆ ಇದೆ. ಪ್ರಸ್ತುತ ನಾಯ್ಡು ಅವರ ಕುಟುಂಬ ವಿದೇಶ ಪ್ರವಾಸದಲ್ಲಿದ್ದು, ನೊಟೀಸ್ ಅನ್ನು ಅವರ ನಿವಾಸಕ್ಕೆ ಅಂಟಿಸಲಾಗಿದೆ. ಒಂದು ವಾರದೊಳಗೆ ಉತ್ತರಿಸದಿದ್ದರೆ, ಕಟ್ಟಡ ತೆರವುಗೊಳಿಸುವ ಕುರಿತು ನಿರ್ಧರಿಸಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.

    ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದಾರೆ.

    ಪ್ರಜಾ ವೇದಿಕಾ ಎಂಬ ಅತಿಥಿ ಗೃಹದ ಒಂದು ಭಾಗವನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪ್ರಜಾ ವೇದಿಕಾವನ್ನು ಸರ್ಕಾರಿ ವೆಚ್ಚದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದೆ ಎಂದು ಹೇಳಿ ಆಂಧ್ರ ಸರ್ಕಾರ ನೆಲಸಮಗೊಳಿಸಲು ಆದೇಶ ನೀಡಿತ್ತು. ಇದೀಗ ಇದೇ ಕಾರಣವನ್ನು ನೀಡಿ ಮನೆಯನ್ನು ತೆರವುಗೊಳಿಸುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೂಚಿಸಲಾಗಿದೆ.

  • ‘ಪ್ರಜಾ ವೇದಿಕಾ’ ಕಟ್ಟಡ ಒಡೆದು ಹಾಕಲು ಅಧಿಕೃತ ಆದೇಶ ನೀಡಿದ ಸಿಎಂ ಜಗನ್

    ‘ಪ್ರಜಾ ವೇದಿಕಾ’ ಕಟ್ಟಡ ಒಡೆದು ಹಾಕಲು ಅಧಿಕೃತ ಆದೇಶ ನೀಡಿದ ಸಿಎಂ ಜಗನ್

    ಅಮರಾವತಿ: ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ದ್ವೇಷ ಹೆಚ್ಚಾಗುತ್ತಿದ್ದು, ಕೃಷ್ಣಾ ನದಿ ತೀರದ ಸಮೀಪ ಸಭೆ ನಡೆಸುವ ಉದ್ದೇಶದಿಂದ ನಾಯ್ಡು ನಿರ್ಮಿಸಿದ್ದ `ಪ್ರಜಾ ವೇದಿಕೆ’ ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಇಂದು ಅಧಿಕೃತ ಆದೇಶ ನೀಡಿದ್ದಾರೆ.

    2017ರಲ್ಲಿ ನಾಯ್ಡು ಮನೆ ಸಮೀಪದಲ್ಲೇ 5 ಕೋಟಿ ರೂ. ವೆಚ್ಚದಲ್ಲಿ ಈ ವೇದಿಕೆ ನಿರ್ಮಿಸಿದ್ದರು. ಮುಖ್ಯಮಂತ್ರಿ ಆದ ನಂತರ ಜಗನ್ ಮೊದಲ ಬಾರಿಗೆ ಪ್ರಜಾ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದರು. ಈ ವೇಳೆ, ಇದೇ ಕೊನೇ ಸಭೆ. ಪಾರದರ್ಶಕತೆ ನಿಟ್ಟಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಈ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಹೇಳಿದ್ದರು.

    ಕೆಲ ವಾರಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯಲಾಗಿತ್ತು. ಇತ್ತ ಜೂನ್ 4 ರಂದು ಪ್ರಜಾ ವೇದಿಕಾ ಬಳಿ ಇರುವ ಮನೆಯಲ್ಲೇ ಇರಲು ಅವಕಾಶ ಕೊಡುವಂತೆ ನಾಯ್ಡು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ‘ಪ್ರಜಾ ವೇದಿಕಾ’ ಹಾಲ್ ಅನ್ನು ಪಕ್ಷದ ಕಾರ್ಯಗಳನ್ನು ನಡೆಸಲು ಬಳಕೆ ಮಾಡಲು ನೀಡಬೇಕೆಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು.

    ಇತ್ತ ಜಗನ್ ಸರ್ಕಾರ ಕೃಷ್ಣ ನದಿಯ ತಟದಲ್ಲಿ ನಿರ್ಮಾಣ ಮಾಡಿರುವ ಈ ಮನೆಯೂ ಕೂಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದೆ. ಉಳಿದಂತೆ ಮೇ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಜಗನ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಮನವಿ ಮಾಡಿದ್ದರು. 2014ರಿಂದಲೂ ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರ ಬಳಿ ವಿಶೇಷ ಸ್ಥಾನಮಾನಕ್ಕಾಗಿ ಒತ್ತಡ ಹಾಕುತ್ತಲೇ ಇದೆ. ಇದೇ ವಿಚಾರವಾಗಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಎನ್‍ಡಿಎ ಒಕ್ಕೂಟವನ್ನು ತೊರೆದು ಬಂದಿದ್ದರು.

  • ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    -ಟಿಡಿಪಿ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಜಂಪ್

    ನವದೆಹಲಿ: ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ವಿದೇಶಿ ಪ್ರವಾಸದಲ್ಲಿರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಜರ್ ಸರ್ಜರಿ ಮಾಡಿದ್ದು, ನಾಲ್ವರು ಟಿಡಿಪಿ ರಾಜ್ಯಸಭಾ ಸದಸ್ಯರನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದಿಂದ ಒರ್ವ ಶಾಸಕ ಸೇರಿ 14 ಜನ ಕಾರ್ಪೋರೇಟರ್‍ಗಳು ಬಿಜೆಪಿ ಸೇರುವ ಮೂಲಕ ಟಿಎಂಸಿಗೆ ಶಾಕ್ ನೀಡಿದ್ದರು. ಇದೀಗ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದೀಯ ನಾಯಕ ವೈ.ಎಸ್.ಚೌಧರಿ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದು, ಈ ಮೂಲಕ ಮೇಲ್ಮನೆಯಲ್ಲಿ ಟಿಡಿಪಿ ಬಲ ಕೇವಲ 2 ಸ್ಥಾನಕ್ಕೆ ಕುಸಿದಿದೆ.

    ಚೌಧರಿ ಅವರು ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದು, ಅವರೊಂದಿಗೆ ಇನ್ನೂ ಮೂವರು ಸದಸ್ಯರಾದ ಟಿ.ಜಿ.ವೆಂಕಟೇಶ್, ಜಿ.ಮೋಹನ್ ರಾವ್, ಸಿ.ಎಂ.ರಮೇಶ್ ಹಾಗೂ ವೆಂಕಟೇಶ್ ಸಹ ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದಾರೆ. ಚೌಧರಿ ಅವರು ಈ ಹಿಂದೆ ಎಬಿವಿಪಿ ಹಾಗೂ ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿದ್ದರು ಹೀಗಾಗಿ ಈ ನಡೆ ಸಹಜ ಎಂದು ಹೇಳಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ರಾಷ್ಟ್ರದ ಒಟ್ಟಾರೆ ಹಿತದೃಷ್ಟಿಯಿಂದ ಹಾಗೂ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ಅಭಿವೃದ್ಧಿ ರಾಜಕಾರಣದಿಂದ ಪ್ರಭಾವಿತರಾಗಿ ತಕ್ಷಣದಿಂದಲೇ ಬಿಜೆಪಿ ಸೇರುತ್ತಿದ್ದೇವೆ ಎಂದು ಚೌಧರಿ ಅವರು ಸಹಿ ಮಾಡಿ ರಾಜ್ಯಸಭೆಗೆ ನೀಡಿರುವ ಟಿಡಿಪಿಯ ಶಾಸಕಾಂಗ ಪಕ್ಷದ ನಿರ್ಣಯವನ್ನು ಓದಿದ್ದಾರೆ.

    ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರಲು ಇಚ್ಛಿಸಿದ್ದು, ಅಂತಹ ನಾಯಕರನ್ನು ನಾವು ಸ್ವಾಗತಿಸುತ್ತೇವೆ. ಈ ಮೂಲಕ ಪಕ್ಷದ ಬಲವರ್ಧನೆಯಾದಂತಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ತಿಳಿಸಿದ್ದಾರೆ.

    ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ವಿದೇಶದಲ್ಲಿದ್ದು, ಸಂಸದರು ಬಿಜೆಪಿ ಸೇರುತ್ತಿರುವ ಸುದ್ದಿಯನ್ನು ತಿಳಿದು ಚೌಧರಿ ಅವರೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಪಕ್ಷದಿಂದ ಹೊರ ನಡೆಯದಂತೆ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಪಕ್ಷ ಸೋಲುಂಡಿರುವುದೇ ನಾಯಕರು ಪಕ್ಷ ತೊರೆಯಲು ಕಾರಣ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 126 ಸ್ಥಾನಗಳಿಂದ 23 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳಿಂದ ಕೇವಲ ಮೂರು ಸ್ಥಾನಕ್ಕೆ ಟಿಡಿಪಿ ಕುಸಿದಿದೆ.

    ಬಿಜೆಪಿ ನೂತನ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಂತರ ಮಾತನಾಡಿದ ಜೆಪಿ ನಡ್ಡಾ, ಟಿಡಿಪಿ ನಾಯಕರ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ವೈ.ಎಸ್. ಚೌಧರಿ ಅವರು 2014ರಲ್ಲಿ ಮೋದಿ ಸಂಪುಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018ರಲ್ಲಿ ಚಂದ್ರಬಾಬು ನಾಯ್ಡು ಎನ್‍ಡಿಎ ಕೂಟ ತೊರೆದ ಬಳಿಕ ಚೌಧರಿ ರಾಜೀನಾಮೆ ಕೊಟ್ಟಿದ್ದರು. ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಸದಸ್ಯ ಬಲ ಹೆಚ್ಚಳ ಆಗುತ್ತಿರುವುದು ಮೋದಿ ಸರ್ಕಾರಕ್ಕೆ ವರವಾಗಲಿದೆ. ರಾಜ್ಯ ಸಭೆಯಲ್ಲಿ ಸಂಖ್ಯಾಬಲ ಹೆಚ್ಚಾಗುವುದರಿಂದ ಪ್ರಮುಖ ಮಸೂದೆಗಳನ್ನು ಜಾರಿಗೆ ಬೆಂಬಲ ಪಡೆಯಲು ಸಹಕಾರಿ ಆಗಲಿದೆ. ಹಾಗಾಗಿಯೇ ರಾಜ್ಯಸಭೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ಗಮನ ಹರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ಅಮರಾವತಿ: ರೈತ ಭರವಸೆ ಯೋಜನೆಯನ್ನು ಅಕ್ಟೋಬರ್ 15ರಿಂದ ಜಾರಿಗೆ ತರಲಾಗುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‍ಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ.

    ಜಗನ್‍ಮೋಹನ್ ರೆಡ್ಡಿ ಅವರು ಚುನಾವಣೆಯಲ್ಲಿ ನೀಡಲಾದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲು ಮುಂದಾಗುತ್ತಿದ್ದು, ಇಂದು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

    ರೈತ ಭರವಸೆ ಯೋಜನೆ ಆರಂಭಿಸಿ, ರೈತರ ಖಾತೆಗೆ 12,500 ರೂ. ಹಾಕುತ್ತೇನೆ ಎಂದು ಜಗನ್‍ಮೋಹನ್ ರೆಡ್ಡಿ ಚುನಾವಣೆ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಅವರು ಈಗ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದ್ದಾರೆ.

    ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಫೆಬ್ರವರಿಯಲ್ಲಿ ‘ಅನ್ನದಾತ ಸುಖಿಭವ’ ಯೋಜನೆಯನ್ನು ಜಾರಿಗೆ ತಂದಿದ್ದರು. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯೋಜನೆ ಬಂದಿತ್ತು. ಅದನ್ನು ಜಗನ್‍ಮೋಹನ್ ರದ್ದುಗೊಳಿಸಿ, ರೈತ ಭರವಸೆ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.

    ನಕಲಿ ಬೀಜಗಳನ್ನು ಮಾರಾಟದ ವಿರುದ್ಧವೂ ಜಗನ್‍ಮೋಹನ್ ಕಿಡಿಕಾರಿದ್ದಾರೆ. ಒಂದು ವೇಳೆ ನಕಲಿ ಬೀಜಗಳ ಮಾರಾಟ ಮಾಡಿದಲ್ಲಿ ಅಂತವರನ್ನು ಜೈಲಿಗೆ ಹಾಕಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

  • ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    – ಒಂದೇ ದಿನದಲ್ಲಿ ಹೀರೋ ಆಗಿದ್ದ ನಿವೃತ್ತ ಸರ್ಕಲ್ ಇನ್‍ಸ್ಪೆಕ್ಟರ್

    ಹೈದರಾಬಾದ್: ಸಂಸದರಾಗಿ ಆಯ್ಕೆಯಾದ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಡಿವೈಎಸ್‍ಪಿ ಸೆಲ್ಯೂಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಂಧ್ರಪ್ರದೇಶದ ಕದಿರಿಯಲ್ಲಿ ಗೋರಂಟ್ಲಾ ಮಾಧವ್ ಅವರು ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಈಗ ಹಿಂದೂಪುರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

    ಮಾಧವ್ ಅವರಿಗೆ ಹಿಂದಿನ ಮುಖ್ಯಸ್ಥ, ಸಿಐಡಿ ಉಪ ಅಧೀಕ್ಷಕ ಮೆಹಬೂಬ್ ಬಾಷಾ ಅವರು  ಸೆಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಮಾಧವ್ ಅವರ ಸಾಧನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಮಾಧವ್ ಅವರು ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ಮೂಲಕ ಅಲ್ಲಿನ ಸಂಸದರಾಗಿದ್ದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಂಸದ ಕ್ರಿಸ್ತಪ್ಪ ನಿಮ್ಮಾಲಾ ಅವರ ವಿರುದ್ಧ 1,40,748 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಸಂಸದರಾಗಲು ಪ್ರೇರಣೆ ಏನು?
    ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದ ಮಾಧವ್ ಅವರ ಕುಟುಂಬದಲ್ಲಿ ಯಾರೊಬ್ಬರೂ ರಾಜಕಾರಣಿಗಳಿಲ್ಲ. ಅಷ್ಟೇ ಅಲ್ಲದೆ ಅವರು ಚುನಾವಣೆಗೆ ನಿಲ್ಲಬೇಕೆಂದು ಬಯಸಿದವರಲ್ಲ. ಅಷ್ಟೇ ಅಲ್ಲದೆ ಚುನಾವಣಾ ಖರ್ಚು ನಿಭಾಯಿಸುವಷ್ಟು ಹಣವೂ ಅವರ ಬಳಿ ಇರಲಿಲ್ಲ. ಆದರೂ ಓರ್ವ ರಾಜಕಾರಣಿಯ ಅಸಭ್ಯ ವರ್ತನೆ ಅವರನ್ನು ಚುನಾವಣಾ ಕಣಕ್ಕೆ ತಂದು ನಿಲ್ಲಿಸಿತ್ತು. ಈಗ ಅವರು ಭರ್ಜರಿ ಗೆಲುವು ಸಾಧಿಸಿ, ತಿರುಗೇಟು ಕೊಟ್ಟಿದ್ದಾರೆ.

    ರಾಜಕಾರಣಿ ಜೆ.ಸಿ.ದಿವಾಕರ ರೆಡ್ಡಿ ಅವರು ಪ್ರಕರಣವೊಂದರ ವಿಚಾರವಾಗಿ ಪೊಲೀಸರ ಬಗ್ಗೆ ಅಸಭ್ಯ ಪದ ಬಳಸಿದ್ದರು. ಪೊಲೀಸರು ‘ಹಿಜಡಾ’ಗಳಿಗಿಂತ ಕಡೆ ಎಂದು ದಿವಾಕರ ರೆಡ್ಡಿ ಜರಿದಿದ್ದರು. ಈ ಮಾತುಗಳು ಮಾಧವ್ ಅವರ ಕೋಪಕ್ಕೆ ಕಾರಣವಾಗಿತ್ತು.

    ಜೆ.ಸಿ.ದಿವಾಕರ ರೆಡ್ಡಿ ಅವರ ಹೇಳಿಕೆ ವಿಚಾರವಾಗಿ ಮಾಧವ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಪೊಲೀಸರ ಬಗ್ಗೆ ಕಿಳುಮಟ್ಟದ ಪದ ಬಳಕೆ ಮಾಡಿದ ಜೆ.ಸಿ.ದಿವಾಕರ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಪೊಲೀಸ್ ಭಾಷೆಯಲ್ಲಿಯೇ ರೆಡ್ಡಿ ಅವರ ವಿರುದ್ಧ ಕಿಡಿ ಕಾರಿ ಮೀಸೆಯನ್ನು ತಿರುವಿ ಸವಾಲು ಹಾಕಿದ್ದರು.

    ಮಾಧವ್ ಅವರ ಸುದ್ದಿಗೋಷ್ಠಿಯ ವಿಡಿಯೋ ಆಂಧ್ರಪ್ರದೇಶದಲ್ಲಿ ವೈರಲ್ ಆಗಿತ್ತು. ಅಸಭ್ಯ ಪದ ಬಳಕೆ ಮಾಡುವ ರಾಜಕಾರಣಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮಾಧವ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮೂಲಕ ಮಾಧವ್ ಒಂದೇ ದಿನದಲ್ಲಿ ಜನಪ್ರಿಯತೆ ಗಳಿಸಿದರು. ಈ ವಿಡಿಯೋವನ್ನು ನೋಡಿದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಮಾಧವ್ ಅವರನ್ನು ಭೇಟಿಯಾಗಿ ಹಿಂದೂಪುರ್ ಟಿಕೆಟ್ ನೀಡಿದರು. ಇದರಿಂದಾಗಿ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿ ಮಾಧವ್ ಅವರು ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.

  • ಆಂಧ್ರದಲ್ಲಿ ನಾಯ್ಡುಗೆ ಹೀನಾಯ ಸೋಲು -ಜಗನ್ ಗೆಲುವಿನ ಹಿಂದಿದೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ!

    ಆಂಧ್ರದಲ್ಲಿ ನಾಯ್ಡುಗೆ ಹೀನಾಯ ಸೋಲು -ಜಗನ್ ಗೆಲುವಿನ ಹಿಂದಿದೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ!

    ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಕಂಡಿದ್ದು, ವೈಎಸ್‍ಆರ್ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.

    ವೈ.ಎಸ್. ಜಗನ್‍ಮೋಹನ್ ರೆಡ್ಡಿ ಅವರು ಮಾರ್ಚ್ 2011ರಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಆದರೆ ಕಳೆದ ಎಂಟು ವರ್ಷಗಳಿಂದ ಎಷ್ಟೇ ಪರಿಶ್ರಮ ಪಟ್ಟಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಪ್ರಶಾಂತ್ ಕಿಶೋರ್ ಹಾಗೂ ಅವರ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ತಂತ್ರಗಾರಿಕೆಯಿಂದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಜಯಶಾಲಿಯಾಗಿದ್ದಾರೆ.

    ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು ಅವರು ತಾಂತ್ರಿಕ ಪರಿಣಿತರು. ಅದರಿಂದಲೇ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರವನ್ನು ರೂಪಿಸುವಲ್ಲಿ ನಿಸ್ಸೀಮರು. ಈ ಕಾರ್ಯತಂತ್ರಕ್ಕೆ ತಿರುಗೇಟು ನೀಡಲು ವೈ.ಎಸ್.ಜಗನ್ ಅವರು ಐ-ಪ್ಯಾಕ್ ಸಂಸ್ಥೆಯ ಮುಖ್ಯಸ್ಥ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಆರಿಸಿಕೊಂಡಿದ್ದರು.

    ವೈ.ಎಸ್.ಜಗನ್‍ಮೋಹನ್ ಅವರಿಗೆ ವಿಶೇಷ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಮೇ 2017 ರಲ್ಲಿ ನೇಮಕಗೊಂಡರು. ಈ ಮೂಲಕ ಚಂದ್ರಬಾಬು ನಾಯ್ಡು ಅವರ ವಿರುದ್ಧ ರಣತಂತ್ರ ರೂಪಿಸಲು ಆರಂಭಿಸಿದರು. ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಲು ರೂಪಿಸಿದ ಹಲವು ಕಾರ್ಯತಂತ್ರಗಳ ಪೈಕಿ ವಿಶೇಷ ವರ್ಗಗಳ ಸ್ಥಾನಮಾನ (ಎಸ್‍ಸಿಎಸ್) ಕೂಡ ಒಂದಾಗಿತ್ತು. 2017 ನವೆಂಬರ್ 6ರಂದು ಆರಂಭವಾದ ‘ಪ್ರಜಾ ಸಂಕಲ್ಪ ಯಾತ್ರಾ’ ಮೂಲಕ ಜಗನ್‍ಮೋಹನ್ ಅವರು ಎಸ್‍ಸಿಎಸ್ ವಿವಾದವನ್ನು ಎತ್ತಿದರು. ಈ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ವಾಗ್ದಾಳಿ ನಡೆಸಿದರು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಎಸ್‍ಸಿಎಸ್ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರು ಮೃದು ಧೋರಣೆ ತೋರಿದರು. ಇದರಿಂದಾಗಿ ಬಿಜೆಪಿ ಕೂಡ ಎಸ್‍ಸಿಎಸ್ ಬೇಡಿಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದ್ದರು.

    ಜಗನ್‍ಮೋಹನ್ ರೆಡ್ಡಿ ಅವರು, ಆಂಧ್ರ ಪ್ರದೇಶದಾದ್ಯಂತ 3,641 ಕಿ.ಮೀ ಪಾದಯಾತ್ರೆ ನಡೆಸಿದ್ದರು. ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಆಲಿಸಿದ್ದರು. ಜಗನ್ ಅವರು ತಮ್ಮ 14 ತಿಂಗಳ ಸುದೀರ್ಘ ಪಾದಯಾತ್ರೆಯಲ್ಲಿ ಸುಮಾರು 2 ಕೋಟಿ ಜನರನ್ನು ಭೇಟಿ ಮಾಡಿದ್ದರು. ಇದು ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ನೆರವಾಯಿತು. ಅಷ್ಟೇ ಅಲ್ಲದೆ ಲಕ್ಷಾಂತರ ಜನರು ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲ ಜಗನ್‍ಮೋಹನ್ ರೆಡ್ಡಿ ಜನಪ್ರಿಯತೆ ಅರಿತ ಟಿಡಿಪಿ ನಾಯಕರು ರಾಜೀನಾಮೆ ನೀಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

    ಜಗನ್‍ಮೊಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ‘ನವರತ್ನ ಯೋಜನೆ’ ಮತದಾರರನ್ನು ಓಲೈಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ರೈತರ ಸಮಸ್ಯೆಗಳು, ಮಹಿಳಾ ಪರ ಯೋಜನೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತಂತೆ ತಮ್ಮ ಯೋಜನೆಗಳನ್ನು ರೂಪಿಸಿದ್ದರು.

    ಜಗನ್ ಕ್ಲಿಕ್:
    ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಸಿದ್ಧಪಡಿಸಿದ ರಾವಾಲಿ ಜಗನ್ (ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‍ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿಗೂ ಅಧಿಕ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಜಗನ್‍ಮೋಹನ್ ಅವರು ಸಮರ್ಪಕವಾಗಿ ಬಳಸಿಕೊಂಡರು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಿದರು. ಜಗನ್‍ಮೋಹನ್ ಅವರ ಈ ಎಲ್ಲ ಯಶಸ್ವಿ ಪ್ರಚಾರದ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಅಡಗಿತ್ತು.

    ಪ್ರಶಾಂತ್ ಕಿಶೋರ್ ಯಾರು?:
    2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

    2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

    ಫಲಿತಾಂಶ ಏನು?
    ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಪರ ಶೇ. 49.9ರಷ್ಟು ಮತದಾನವಾಗಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಉಳಿದಂತೆ ತೆಲುಗು ದೇಶಂ ಪಕ್ಷವು 23 ಹಾಗೂ ಜನಸೇನಾ ಪಾರ್ಟಿ 1 ಕ್ಷೇತ್ರದಲ್ಲಿ ಜಯ ಗಳಿಸಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಶೇ 1.17 ಹಾಗೂ ಬಿಜೆಪಿ ಶೇ. 0.84 ಮತ ಪಡೆದಿದ್ದರೂ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.

  • ಗಂಗಮ್ಮನಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ ನಾಯ್ಡು

    ಗಂಗಮ್ಮನಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ ನಾಯ್ಡು

    – ಹರಕೆ ಸುತ್ತ ಅನುಮಾನದ ಹುತ್ತ

    ಕೋಲಾರ: ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿರುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಗಮ್ಮನ ಹರಿಕೆ ತೀರಿಸಿದ್ದಾರೆ.

    ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಸ್ವಕ್ಷೇತ್ರ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಚಂದ್ರಬಾಬು ನಾಯ್ಡು ಕಾಣಿಸಿಕೊಂಡಿದ್ದಾರೆ. ನಾಯ್ಡು ಅವರು ಪತ್ನಿ ಸಮೇತ ಇಂದು ಕುಪ್ಪಂನಲ್ಲಿರುವ ತಿರುಪತಿ ಗಂಗಮ್ಮ ದೇವಿಯ ದರ್ಶನ ಪಡೆದರು. ಬಳಿಕ ದೇವಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ್ದಾರೆ.

    ಪ್ರತಿ ಬಾರಿಯೂ ಚಂದ್ರಬಾಬು ನಾಯ್ಡು ದಂಪತಿ ಗಂಗಮ್ಮನ ದರ್ಶನ ಪಡೆದು ಹರಕೆ ತೀರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ಹರಕೆ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಚಂದ್ರಬಾಬು ನಾಯ್ಡು ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರಿಗೂ ಈ ಭಯ ಶುರುವಾಗಿದೆ ಎಂದು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಬಹುಮತ ಸಿಗದೇ ಅಧಿಕಾರ ಕಳೆದುಕೊಳ್ಳುವ ಭೀತಿ ಚಂದ್ರಬಾಬು ನಾಯ್ಡು ಅವರಿಗೆ ಎದುರಾಗಿದೆ. ಆಂಧ್ರಪ್ರದೇಶದಲ್ಲಿ 176 ವಿಧಾನಸಭಾ ಕ್ಷೇತ್ರಗಳಿದ್ದು, 2014ರ ಚುನಾವಣೆಯಲ್ಲಿ ಟಿಡಿಪಿ 103 ಹಾಗೂ ವೈಎಸ್‍ಆರ್ ಸಿಪಿ 66 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಉಳಿದಂತೆ ಬಿಜೆಪಿ 4, ನವೋದಯ ಹಾಗೂ ಪಕ್ಷೇತರ ತಲಾ 1 ಸ್ಥಾನ ಪಡೆದುಕೊಂಡಿತ್ತು.