Tag: AN-32

  • ಎಎನ್-32 ವಿಮಾನ ಪತನ: 13 ಜನರ ಪೈಕಿ 7 ಮೃತ ದೇಹಗಳು ಪತ್ತೆ

    ಎಎನ್-32 ವಿಮಾನ ಪತನ: 13 ಜನರ ಪೈಕಿ 7 ಮೃತ ದೇಹಗಳು ಪತ್ತೆ

    ನವದೆಹಲಿ: ಜೂ.3ರಂದು ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪತನವಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ 13 ಜನರ ಪೈಕಿ 7 ಜನರ ಮೃತದೇಹವನ್ನು ವಾಯು ಪಡೆ ಪತ್ತೆ ಹಚ್ಚಿದೆ.

    ಕಾಣೆಯಾದ ವಿಮಾನದ ಅವಶೇಷಗಳನ್ನು ಜೂ.11ರಂದು ಎಂಐ-17 ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಲಾಗಿತ್ತು. ನಂತರ ಶವಗಳನ್ನು ಹಾಗೂ ಒಂದು ವೇಳೆ ಅದೃಷ್ಟವಶಾತ್ ಬದುಕುಳಿದವರನ್ನು ಹುಡುಕುವ ಬೃಹತ್ ಕಾರ್ಯಾಚರಣೆಯನ್ನು ಭಾರತೀಯ ವಾಯು ಸೇನೆ ಪ್ರಾರಂಭಿಸಿತ್ತು.

    ಇದು ಸೋವಿಯತ್ ಅಭಿವೃದ್ಧಿಪಡಿಸಿದ, ಎರಡು ಎಂಜಿನ್‍ನ ಟರ್ಬೋಪ್ರಾಪ್ ಟ್ರಾನ್ಸ್‍ಪೋರ್ಟ್ ವಿಮಾನವಾಗಿದ್ದು, ಅಸ್ಸಾಂನ ಜೊಹ್ರಾತ್‍ನಿಂದ ಮೆಚುಕಾದ ಮಿಲಿಟರಿ ಲ್ಯಾಂಡಿಂಗ್ ಸ್ಟ್ರಿಪ್‍ಗೆ ಹಾರಾಟ ನಡೆಸುತ್ತಿದ್ದಾಗ ಜೂ.3ರಂದು ಮಧ್ಯಾಹ್ನ 1 ಗಂಟೆಗೆ ರಡಾರ್‍ನಿಂದ ಸಂಪರ್ಕ ಕಳೆದುಕೊಂಡಿತ್ತು.

    ಪತನವಾದ ಎಎನ್-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ ಎರಡು ದಿನಗಳ ನಂತರ ಭಾರತೀಯ ವಾಯು ಸೇನೆ ವಿಮಾನದಲ್ಲಿದ್ದ ಯಾರೂ ಬದುಕುಳಿದರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಮೃತ ದೇಹ ಹಾಗೂ ಅವಶೇಷವನ್ನು ಜೋಹ್ರಾತ್‍ನ ವಾಯು ನೆಲೆಗೆ ತರಲಾಗುವುದು ಎಂದು ವಾಯು ಪಡೆ ತಿಳಿಸಿದೆ.

    ಅಮೀದ್ ಪರ್ವತದ 12,000 ಅಡಿ ಎತ್ತರದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದು, ಪರ್ವತದ ಭಾಗದಲ್ಲಿ ಹವಾಮಾನ ವೈಪರಿತ್ಯ ಹಾಗೂ ಮೋಡಗಳಿದ್ದರಿಂದ ದಿಕ್ಕು ಸರಿಯಾಗಿ ಕಾಣದೆ ಎಎನ್-32 ವಿಮಾನವು ಪತನವಾಗಿತ್ತು. ವಿಮಾನದಲ್ಲಿದ್ದ ಪ್ರಮುಖ ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್), ವಿಮಾನದ ಡಾಟಾ ರೆಕಾರ್ಡರ್ ಹಾಗೂ ಬ್ಲ್ಯಾಕ್ ಬಾಕ್ಸ್‍ಗಳನ್ನು ಕಳೆದ ವಾರವೇ ವಾಯು ಪಡೆ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಬ್ಲ್ಯಾಕ್ ಬಾಕ್ಸ್‍ಗೆ ಹಾನಿಯಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ವಿಮಾನ ಪತನಕ್ಕೆ ನಿರ್ದಿಷ್ಟ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸಮಯಾವಕಾಶದ ಅಗತ್ಯವಿದೆ ಎಂದು ವಾಯು ಪಡೆಯ ಮೂಲಗಳು ತಿಳಿಸಿವೆ.

    ಪತನವಾದ ವಿಮಾನದಲ್ಲಿದ್ದ 13 ಜನರ ಸಂಬಂಧಿಕರು ಒಂದು ವಾರದಿಂದ ಜೊಹ್ರಾತ್ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತ ಕುಳಿತಿದ್ದು, ವಾಯುಪಡೆಯ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರಿದ್ದರು. ವಾಯುಪಡೆಯ ಸಿಬ್ಬಂದಿ ತಂಡಗಳು ಹಾಗೂ ಸ್ಥಳೀಯ ಪರ್ವತಾರೋಹಿಗಳು ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ನಿರಂತರ ಮಳೆ ಹುಡುಕಾಟದ ಕಾರ್ಯಾಚರಣೆಗೆ ಸವಾಲು ಅಡ್ಡಿಯುಂಟು ಮಾಡುತ್ತಿದೆ.

    ಪತನವಾದ ವಿಮಾನ ಜೋಹ್ರಾತ್‍ನಿಂದ ಹಾರಾಟ ಪ್ರಾರಂಭಿಸಿದಾಗ ಲೆಫ್ಟಿನೆಂಟ್ ಆಶಿಶ್ ತನ್ವಾರ್ ಅವರು ಏರ್ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತ್ನಿ ಸಂಧ್ಯಾ ತನ್ವಾರ್ ಸಹ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

    ನವದೆಹಲಿ: ಜೂ. 11 ರಂದು ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿದ್ದ ಸ್ಥಳಕ್ಕೆ ಭಾರತೀಯ ವಾಯುಸೇನೆಯ ಸಿಬ್ಬಂದಿ ತೆರಳಿದ್ದು, ವಿಮಾನಲ್ಲಿದ್ದವರು ಯಾರು ಬದುಕುಳಿದಿಲ್ಲ ಎಂದು ಸ್ಪಷ್ಟನೆ ನೀಡಿದೆ.

    ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ದಟ್ಟ ಅರಣ್ಯದ ನಡುವೆ ವಿಮಾನ ಪತನವಾಗಿತ್ತು. ಒಂದು ವಾರಗಳ ಕಾಲ ವಿಮಾನವನ್ನು ಹುಡುಕಾಟ ನಡೆಸಿದ ವಾಯುಸೇನೆ ಸಿಬ್ಬಂದಿ ಜೂ.11 ರಂದು ದುರಂತ ನಡೆದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಆದರೆ ಈ ವೇಳೆ ಸ್ಥಳಕ್ಕೆ ತೆರಳಲು ಹವಾಮಾನ ವೈಪರಿತ್ಯ ಹಾಗೂ ದಟ್ಟ ಅರಣ್ಯ ನಡುವೆ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಕಷ್ಟ ಸಾಧ್ಯವಾದ್ದರಿಂದ ಭೂಮಾರ್ಗದ ಮೂಲಕವೇ ಸ್ಥಳವನ್ನು ತಲುಪುವ ಕಾರ್ಯ ಮಾಡಲಾಗಿತ್ತು. ಆ ಬಳಿಕ ಘಟನಾ ಸ್ಥಳಕ್ಕೆ ಹತ್ತಿರ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ಅಲ್ಲಿಂದ ಸ್ಥಳಕ್ಕೆ ತೆರಳಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ವಾಯಸೇನೆ, ಘಟನೆಯಲ್ಲಿ ಯಾರು ಬದುಕುಳಿದಿಲ್ಲ. ದುರಂತದಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಕುಟುಂಬದೊಂದಿಗೆ ವಾಯಸೇನೆ ಇರಲಿದೆ ಎಂದು ತಿಳಿಸಿ ಶ್ರದ್ಧಾಂಜಲಿ ಸಲ್ಲಿಸಿದೆ.

    ಇಂದು ಬೆಳಗ್ಗೆ 8 ಸದಸ್ಯರ ವಾಯುಸೇನೆಯ ತಂಡ ಸ್ಥಳವನ್ನು ತಲುಪಿ ಪರಿಶೀಲನೆ ನಡೆಸಿತ್ತು. ಜೂನ್ 3 ರಂದು ಎಎನ್ -32 ವಿಮಾನ ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿ ಅರುಣಾಚಲ ಪ್ರದೇಶದ ಮೆನಸುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ಎಂಟು ಸಿಬ್ಬಂದಿ, ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ಮೃತರನ್ನ ವಿಂಗ್ ಕಮಾಂಡ್ ಜಿಎಂ ಚಾಲ್ರ್ಸ್, ಸ್ಕ್ವಾಡ್ರನ್ ಲೀಡರ್ ಎಚ್ ವಿನೋದ್, ಫ್ಲೇಟ್ ಲೆಫ್ಟನೆಂಟ್ ಗಳಾಗಿದ್ದ ಆರ್ ಥಾಪಾ ಹಾಗೂ ಎ ತನ್ವರ್, ಎಸ್ ಮೊಹಾಂತಿ, ಎಂಕೆ ಗರ್ಗ್, ವಾರಂಟ್ ಆಫೀಸರ್ ಕೆಕೆ ಮಿಶ್ರಾ, ಸರ್ಗೆಂಟ್ ಅನೂಪ್ ಕುಮಾರ್, ಕಾರ್ಪೋರಲ್ ಶೆರಿನ್, ಲೀಡ್ ಏರ್ ಕ್ರಾಫ್ಟ್ ಮನ್ ಎಸ್ ಕೆ ಸಿಂಗ್ ಹಾಗೂ ಮನ್ ಪಂಕಜ್, ಪುತಲಿ, ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. 2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಷಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

  • ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನವದೆಹಲಿ: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿರುವ ಮಾಹಿತಿ ವಾಯುಸೇನೆಯಿಂದ ತಿಳಿದು ಬಂದಿದೆ.

    ಏರ್ ಫೋರ್ಸ್ ನ ಮಿಗ್-17 ಹೆಲಿಕಾಪ್ಟರ್ ಗಳು ವಿಮಾನದ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ವಿಮಾನದ ಅವಶೇಷ ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಕುರಿತು ವಾಯುಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಹುಡುಕಾಟವನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದೆ.

    ಎಎನ್-32 ವಿಮಾನ ಜೂನ್ 03 ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ವಿಮಾನದಲ್ಲಿ ಎಂಟು ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ವಿಮಾನ ನಾಪತ್ತೆಯಾದ ಬಳಿಕ ಭಾರತ ಭೂಸೇನೆ, ವಾಯುಸೇನೆ, ಸಿ-130ಜೆ ಹಾಗೂ ಮಿಗ್ 17 ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿ ಕಾರ್ಯಾಚರಣೆ ನಡೆಸಿತ್ತು. ಸದ್ಯ ವಾಯುಸೇನೆ ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಮಾಹಿತಿ ಪಡೆಯಲು ಕಾದುಕುಳಿತ್ತಿದ್ದಾರೆ. ಶನಿವಾರವಷ್ಟೇ ವಾಯುಸೇನೆ ನಾಪತ್ತೆಯಾದ ವಿಮಾನ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

  • ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ನವದೆಹಲಿ: ಕಳೆದ ಏಳು ದಿನದಿಂದ ನಾಪತ್ತೆಯಾಗಿರುವ ವಾಯುಸೇನೆಯ ಎಎನ್-32 ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ವಿಮಾನದ ಸುಳಿವು ನೀಡಿ ದವರಿಗೆ 5 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಏರ್ ಮಾರ್ಷಲ್ ಆರ್.ಡಿ. ಮಾಥೂರ್ ಘೋಷಣೆ ಮಾಡಿದ್ದಾರೆ.

    ಎಎನ್-32 ಜೂನ್ 3ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ನೆರೆಯ ಚೀನಾ ಗಡಿ ಸಮೀಪವೇ ವಿಮಾನ ಸಂಪರ್ಕ ಕಳೆದುಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು.

    ವಿಮಾನದ ಸುಳಿವು ನೀಡಿದ ವ್ಯಕ್ತಿ ಅಥವಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಸಿಗಲಿದೆ. ಸುಳಿವು ಸಿಕ್ಕಲ್ಲಿ 0378-3222164, 9436499477, 9402077267, 9402132477 ಈ ನಂಬರ್ ಗಳಿಗೆ ಸಂಪರ್ಕಿಸಬೇಕು. ವಾತಾವರಣದ ಏರುಪೇರು ನಡುವೆಯೂ ಭೂ ಸೇನೆ, ವಾಯು ಸೇನೆ, ಸಿ-130ಜೆ, ಹೆಲಿಕಾಪ್ಟರ್ ಸಹಾಯದೊಂದಿಗೆ ಕಾಣೆಯಾಗಿರುವ ವಿಮಾನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸಿಯಾಂಗ್ ಜಿಲ್ಲೆಯ ಸುಮಾರು 2500 ಕಿ.ಮೀ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವಾಯುಸೇನೆಯ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

    ಭೂ ಮಾರ್ಗದಲ್ಲಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ವಿಮಾನ ಪತನ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಸಿಬ್ಬಂದಿಗೆ ವಿಮಾನದ ಅವಶೇಷಗಳು ಲಭ್ಯವಾಗಿಲ್ಲ. ಹೀಗಾಗಿ ವಿಮಾನ ಹುಡುಕಾಟದ ಕಾರ್ಯ ಮುಂದುವರಿದಿದೆ. ಉಪಗ್ರಹಗಳ ಮೂಲಕ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

    2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.