Tag: Ambi Ning Vayassaytho

  • ಅಂಬುಲೆನ್ಸ್ ನಲ್ಲಿ ಹೋಗಿ ತನ್ನ ಕೊನೆಯ ಚಿತ್ರವನ್ನು ವೀಕ್ಷಿಸಿದ್ದ ಅಂಬಿ

    ಅಂಬುಲೆನ್ಸ್ ನಲ್ಲಿ ಹೋಗಿ ತನ್ನ ಕೊನೆಯ ಚಿತ್ರವನ್ನು ವೀಕ್ಷಿಸಿದ್ದ ಅಂಬಿ

    – ಇದು ನನ್ನ ಕಡೆ ಸಿನಿಮಾ ಎಂದು ಹೇಳಿ ಅಂಬಿ ಭಾವುಕ
    – ಈಗ ಅದೇ ಕೊನೆಯ ಸಿನಿಮಾ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಕೊನೆಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ಅಂಬುಲೆನ್ಸ್ ನಲ್ಲಿ ಹೋಗಿ ವೀಕ್ಷಿಸಿದ್ದರು.

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಅಂಬರೀಶ್ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಿಚ್ಚ ಸುದೀಪ್ ಅವರು ಕಾರಣ. ಈ ಸಿನಿಮಾದಲ್ಲಿ ಅಭಿನಯಿಸುವ ವೇಳೆ ಅಂಬರೀಶ್ ಅನಾರೋಗ್ಯದಿಂದ ಸಾಕಷ್ಟು ಆಯಾಸಗೊಂಡಿದ್ದರು. ಇದನ್ನೂ ಓದಿ: ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

    ಅನಾರೋಗ್ಯದಿಂದ ಅಂಬಿ ಆಯಾಸಗೊಂಡ ಕಾರಣ ಅವರು ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಆದರೆ ಬಹುದಿನಗಳ ನಂತರ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದರು.

    ತಮಿಳಿನ ಪವರ್ ಪಾಂಡಿ ಚಿತ್ರ ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾಗ ಈ ಚಿತ್ರದಲ್ಲಿ ನಟಿಸಿದ್ದ ರಜನಿಕಾಂತ್ ಅವರು ಅಂಬರೀಶ್ ನಟಿಸಿದ್ದರೆ ಚೆಂದ. ಏಕೆಂದರೆ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಹೇಳಿದ್ದರು. ರಜನಿ ಅವರ ಮಾತು ಕೇಳಿ ಅಂಬಿ ನಾನು ಈ ಸಿನಿಮಾ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದರು.

    ಈ ಚಿತ್ರದ ಶೂಟಿಂಗ್ ವೇಳೆ ಅಂಬರೀಶ್ ಆರು ಬಾರಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂಬಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರು ಚಿತ್ರವನ್ನು ಸರಿಯಾದ ಸಮಯಕ್ಕೆ ಮುಗಿಸಿಕೊಟ್ಟಿದ್ದರು. ಈ ಚಿತ್ರದ ನಿರ್ಮಾಣಕ್ಕೆ ಅಂಬರೀಶ್ ಎಲ್ಲ ರೀತಿಯ ಸಹಾಯ ನೀಡಿದ್ದರು.

    ಈ ಚಿತ್ರ ಬಿಡುಗಡೆಯಾಗುವ ಎರಡು ದಿನದ ಮೊದಲು ಕಲಾವಿದರ ಸಂಘ ಈ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಆ ವೇಳೆ ಅಂಬರೀಶ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಆಸ್ಪತ್ರೆಯಿಂದ ಅಂಬುಲೆನ್ಸ್ ನಲ್ಲೇ ಹೋಗಿ ಸಿನಿಮಾವನ್ನು ವೀಕ್ಷಿಸಿದ್ದರು.

    ಅಂಬರೀಶ್ 15 ವರ್ಷದ ನಂತರ ಪೂರ್ಣ ಪ್ರಮಾಣವಾಗಿ ನಟಿಸಿದ ಸಿನಿಮಾ ಅದಾಗಿದ್ದು, ಆ ಸಂದರ್ಭದಲ್ಲಿ ಅವರು ಇದು ನನ್ನ ಕಡೆ ಸಿನಿಮಾ ಎಂದು ಹೇಳಿ ಭಾವುಕರಾಗಿದ್ದರು. ಆದರೆ ಈಗ ಅಂಬರೀಶ್ ಅವರಿಗೆ ಇದೇ ಕಡೆಯ ಸಿನಿಮಾ ಆಗಿ ಹೋಗಿದೆ.

    ಕೆಲ ದಿನಗಳ ಹಿಂದೆ ಅಂಬರೀಶ್ ತಮ್ಮ ಪತ್ನಿ ಸುಮಲತಾ ಅವರು ನಟಿಸಿದ್ದ ‘ತಾಯಿಗೆ ತಕ್ಕ ಮಗ’ ಚಿತ್ರವನ್ನು ವೀಕ್ಷಿಸಿದ್ದರು. ಚಿತ್ರ ನೋಡಿದ ನಂತರ ಅಂಬಿ ಸಿನಿಮಾವನ್ನು ಪ್ರಶಂಸೆ ನೀಡಿ ಸಂತಸ ವ್ಯಕ್ತಪಡಿಸಿದ್ದರು. ಸದ್ಯ ಇದು ಅಂಬಿ ವೀಕ್ಷಿಸಿದ ಕೊನೆಯ ಚಿತ್ರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ವಯಸ್ಸಾದ ಅಂಬಿ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

    ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ನಂತರ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ. ಅಂಬರೀಶ್ ಅವರ ವಯಸ್ಸಿಗೆ, ಮಾಗಿದ ಅಭಿನಯಕ್ಕೆ ಪಕ್ಕಾ ಹೇಳಿ ಮಾಡಿಸಿದಂಥಾ ಕಥೆಯಿರೋ ಚಿತ್ರವಿದು. ಇದೀಗ ಈ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿವೆ. ಚಿತ್ರರಂಗದ ತಾರೆಯರೂ ಕೂಡಾ ಈ ಹಾಡುಗಳನ್ನು ಕೇಳಿ ತಲೆದೂಗಿದ್ದಾರೆ.

    ನಟಿ ಮಾಲಾಶ್ರೀಯವರಂತೂ ಈ ಚಿತ್ರದ ಹಾಡುಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನು ಕೇಳಿದ ನಂತರ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾನು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಹಾಡುಗಳನ್ನು ಕೇಳಿದೆ. ಅಂಬರೀಶ್ ಅವರ ನಟನೆಯ ಬಗೆಗಂತೂ ಮಾತನಾಡಲು ಪದಗಳಿಲ್ಲ. ದೊಡ್ಡ ಯಶಸ್ಸು ಈ ಚಿತ್ರಕ್ಕೆ ಸಿಗಲಿ’ ಅಂತ ಮಾಲಾಶ್ರೀಯವರು ಹಾರೈಸಿದ್ದಾರೆ.

    ಈ ಚಿತ್ರದ ಹಾಡುಗಳು ಈ ಪಾಟಿ ಮೆಚ್ಚುಗೆ ಗಳಿಸಿಕೊಳ್ಳಲು ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೃಷ್ಟಿಸಿರುವ ಮಾಂತ್ರಿಕ ಟ್ಯೂನುಗಳು. ಅರ್ಜುನ್ ಆರಂಭದಿಂದಲೂ ಈ ಚಿತ್ರದ ಬಗ್ಗೆ ವಿಶೇಷವಾದ ಆಸಕ್ತಿಯಿಂದಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ. ಯಾವ ಹೋಲಿಕೆಗೂ ಸಿಗದ ಭಿನ್ನವಾದ ಹಾಡುಗಳನ್ನು ಸೃಷ್ಟಿಸಬೇಕೆಂಬ ಹಂಬಲದಿಂದಲೇ ಎಲ್ಲ ಹಾಡುಗಳನ್ನೂ ರೂಪಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ, ಅಂಬಿ ಮತ್ತು ಕಿಚ್ಚ ಸುದೀಪ್ ಕೂಡಾ ಸಂತಸಗೊಂಡಿದ್ದಾರೆ.

  • ಕಿಚ್ಚನ ಭೇಟಿ ಈ ಹುಡುಗನ ಬದುಕು ಬದಲಿಸಿತು!

    ಕಿಚ್ಚನ ಭೇಟಿ ಈ ಹುಡುಗನ ಬದುಕು ಬದಲಿಸಿತು!

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಇಪ್ಪತ್ತಾರು ವರ್ಷದ ಗುರುದತ್ ಗಾಣಿಗ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಇಷ್ಟು ಚಿಕ್ಕ ವಯಸಿನಲ್ಲಿಯೇ ಈ ಹುಡುಗನ ಅದೃಷ್ಟ ಕಂಡು ಅನೇಕರು ಬೆರಗಾಗಿದ್ದಾರೆ. ಆದರೆ ಗುರುದತ್ ನಡೆದು ಬಂದ ಹಾದಿಯನ್ನು ಗಮನಿಸಿದರೆ ಖಂಡಿತಾ ಇದು ಅದೃಷ್ಟವಲ್ಲ, ಬದಲಾಗಿ 10 ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ ಎಂಬ ವಿಚಾರ ಯಾರಿಗಾದರೂ ಮನದಟ್ಟಾಗುತ್ತದೆ!

    ಕುಂದಾಪುರದ ನಾಗೂರಿನ ಗುರುದತ್ ಗೆ ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಹತ್ತಿಕೊಂಡಿದ್ದು ಹೈಸ್ಕೂಲು ದಿನಗಳಲ್ಲಿಯೇ. ಓದಿನಲ್ಲಿ ಹೇಳಿಕೊಳ್ಳುವಂಥಾದ್ದೇನೂ ಆಸಕ್ತಿ ಇಲ್ಲದಿದ್ದ ಗುರುದತ್ ಮನೆ ಮಂದಿಯ ಒತ್ತಾಸೆಯ ಮೇರೆಗೆ ಪಿಯುಸಿ ಸೇರಿಕೊಂಡಿದ್ದರು. ಆದರೆ ಪಿಯುಸಿ ಫಲಿತಾಂಶ ಬರುವ ಮುನ್ನವೇ ನಾನು ಸಿನಿಮಾಗೆ ಸೇರ್ತೀನಿ ಅಂತ ಮನೆಯಲ್ಲಿ ಘೋಷಿಸಿದವರೇ ಹೆತ್ತವರಿಗೆ ಇಷ್ಟವಿಲ್ಲದಿದ್ದರೂ ಬೆಂಗಳೂರಿಗೆ ಹೊರಟಿದ್ದರು. ಹಾಗೆ ಗುರುದತ್ ಗುರುತು ಪರಿಚಯವೇ ಇಲ್ಲದಿದ್ದ ಬೆಂಗಳೂರಿಗೆ ಬಂದಿಳಿಯುವಾದ ಅವರಿಗೆ ಕೇವಲ ಹದಿನಾರು ವರ್ಷ!

    ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಆ ದಿನಗಳಲ್ಲಿ ಒಂದು ನರಪಿಳ್ಳೆಯ ಪರಿಚಯವೂ ಗುರುದತ್ ಗಿರಲಿಲ್ಲ. ಈ ಊರಿನಲ್ಲಿ ಹತ್ತಿರ ಸಂಬಂಧಿಗಳೂ ಇರಲಿಲ್ಲ. ಗುರಿ ಚಿತ್ರರಂಗವಾದರೂ ಗಾಂಧಿನಗರ ಯಾವ ದಿಕ್ಕಿನಲ್ಲಿದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ. ಒಂದಷ್ಟು ದಿನ ಹೊಟ್ಟೆ ಹೊರೆಯಲು ಅದೂ ಇದೂ ಕೆಲಸ ಮಾಡಿಕೊಂಡಿದ್ದ ಅವರು ಕಡೆಗೂ ಮೇಕಪ್ ಸಹಾಯಕರಾಗಿ ಚಿತ್ರರಂಗಕ್ಕೆ ಅಡಿಯಿರಿಸಿದ್ದರು. ಅಲ್ಲಿಂದಲೇ ಸಂಪರ್ಕ ಸಾಧಿಸಿ ನಿರ್ದೇಶನ ವಿಭಾಗಕ್ಕೆ ತೂರಿಕೊಳ್ಳಬೇಕೆಂಬುದು ಆ ದಿನಗಳಲ್ಲಿ ಗುರುದತ್ ಗಿದ್ದ ಏಕಮೇವ ಕನಸು!

    ಹೀಗೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಗುರುದತ್ ಅದೊಂದು ದಿವ್ಯ ಘಳಿಗೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಸಂಧಿಸಿದ್ದರು. ಬಳಿಕ ಅವರ ಬಳಿಯೇ ಕೆಲಸ ಗಿಟ್ಟಿಸಿಕೊಂಡಿದ್ದರು. ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿದ್ದುಕೊಂಡು ಸುದೀಪ್ ಅವರ ಶಿಸ್ತು, ನಿಖರವಾದ ಕಸುಬುದಾರಿಕೆ ಕಲಿತುಕೊಂಡ ಗುರುದತ್ ಗುರಿಯ ನೇರಕ್ಕೆ ಬಂದು ನಿಂತಿದ್ದು, ಅವರ ಬದುಕಿನಲ್ಲಿಯೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಆವಾಗಿನಿಂದಲೇ.

    ಆರಂಭದಲ್ಲಿ ಕಿಚ್ಚ ಸುದೀಪ್ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ನಿರ್ದೇಶನ ಮಾಡಲು ಒಂದಷ್ಟು ಮಂದಿಗಾಗಿ ಅರಸಿದ್ದರಂತೆ. ಅದು ತನ್ನದಾಗುತ್ತದೆ ಎಂಬ ಕನಸಾಗಲೀ, ನಿರೀಕ್ಷೆಯಾಗಲಿ ಗುರುದತ್‍ಗಿರಲಿಲ್ಲ. ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಗುರುದತ್ ರನ್ನು ಕರೆದ ಸುದೀಪ್ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಜವಾಬ್ದಾರಿಯನ್ನು ಹೊರಿಸಿದ್ದರು. ಹಾಗೆ ಮಹಾ ಜವಾಬ್ದಾರಿಯೊಂದನ್ನು ವಹಿಸಿಕೊಂಡ ಗುರುದತ್ ಗೀಗ ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

    ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

    ಬೆಂಗಳೂರು: ಸ್ಯಾಂಡಲ್‍ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. ಹೌದು, ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ತಮ್ಮ ಕೊನೆಯ ಸಿನಿಮಾ ಆಗಲಿದೆ ಎಂದು ಅಂಬರೀಶ್ ಹೇಳಿದ್ದಾರೆ.

    ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಈ ಚಿತ್ರ ಮಾಡುವಾಗಲೇ ಕರೆ ಮಾಡಿ ಅಂಬರೀಶ್ ನೀನು ಈ ಚಿತ್ರ ಮಾಡು ಎಂದು ಹೇಳಿದ್ದರು. ಆದರೆ ಈ ವೇಳೆ ನಾನು ಸುಮ್ಮನೆ ಇರಪ್ಪ ಅಂದಿದ್ದೆ. ಬಳಿಕ ಆ ಸಿನಿಮಾ ನೋಡಿ ಒಪ್ಪಿಕೊಂಡೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಬಹಳ ಇಷ್ಟ ಆಯ್ತು ಎಂದ್ರು.

    ಈ ವೇಳೆ ಪತ್ರಕರ್ತರಿಂದ ತೂರಿಬಂದ ನಿಮ್ಮ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿ, ಇದೇ ನನ್ನ ಕೊನೆ ಸಿನಿಮಾ ಅಂತಾ ಹೇಳಬಹುದು. ಏಕೆಂದರೆ ಈ ಹಿಂದೆ ವಿಷ್ಣುವರ್ಧನ್ ಅವರೊಂದಿಗೆ ದಿಗ್ಗಜರು ಸಿನಿಮಾ ಮಾಡಿದ್ದೆ. ಆದಾದ ಬಳಿಕ ಸಾಕಷ್ಟು ಮಂದಿ ಮತ್ತೆ ಸಿನಿಮಾ ಮಾಡಲು ಬಂದರು. ಆದನ್ನು ನಿರಾಕರಿಸಿದ್ದೆ. ಏಕೆಂದರೆ ದಿಗ್ಗಜರು ಸಿನಿಮಾ ಮೀರಿಸುವ ಕಥೆ ಬಂದಿರಲಿಲ್ಲ. ಒಂದೊಮ್ಮೆ ಉತ್ತಮ ಪಾತ್ರ ಬಂದರೆ ಮುಂದೆ ಮಾಡಬಹುದು. ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಂತಹ ಕಥೆಯ ಪಾತ್ರ ಮುಂದೆ ಬರಲ್ಲ ಅಂದುಕೊಂಡಿದ್ದೇನೆ ಎಂದು ಹೇಳಿದರು.

    ಸಿನಿಮಾ ಪ್ರತಿಯೊಂದು ಸನ್ನಿವೇಶ ಅತ್ಯುತ್ತಮವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರವೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ಸಿನಿಮಾ ಮಾಡಲು ಮೊದಲು ಸಿನಿಮಾ ಮಾಡಲು ನಿರ್ದೇಶಕರೊಬ್ಬರು ಕೇಳಿದ್ದರು. ಆದರೆ ಕೆಲ ಕಾರಣಗಳಿಂದ ನಿರ್ದೇಶಕರು ಬದಲಾದರು. ಆಗ ಸುದೀಪ್ ಅವರು ಯುವ ಅಸೋಸಿಯೇಟ್ ಡೈರೆಕ್ಟರ್ ಗುರುದತ್ ಅವರ ಪ್ರಸ್ತಾಪವಿಟ್ಟರು. ಇದಕ್ಕೆ ಒಪ್ಪಿ ಸಿನಿಮಾ ಆರಂಭಿಸಿದೆ. ಮೊದಲ ದಿನವೇ ನನಗೆ ಯುವ ನಿರ್ದೇಶಕರ ಕಾರ್ಯ ಇಷ್ಟ ಆಯಿತು. ಹೆದರಿಕೊಂಡು ಸಿನಿಮಾ ಮಾಡಬೇಡ ಅಂತಾ ಧೈರ್ಯ ತುಂಬಿದೆ. ಸುಹಾಸಿನಿ ಅವರು ಚಿತ್ರದ ಕೈ ಹಿಡಿದಿದ್ದಾರೆ. ಅವರ ಜೊತೆ ಚಿತ್ರ ಮಾಡಿರುವುದು ಸಂತಸ ತಂದಿದೆ. ಎಲ್ಲರೂ ಬಾಹುಬಲಿ ಮಾಡೋದಕ್ಕೆ ಆಗಲ್ಲ, ಚಿಕ್ಕ ಚಿಕ್ಕ ಶಾಟ್ ಆದರೂ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದರು.

    ಇದೇ ತಿಂಗಳ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಬಹುಭಾಷಾ ನಟಿ ಸುಹಾಸಿನಿ ಸೇರಿದಂತೆ ಶೃತಿ ಹರಿಹರನ್, ವೀಣಾ ಪೊನ್ನಪ್ಪ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಚಿತ್ರ ತಂಡದ ಪ್ರಮುಖರು ಭಾವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡರೆ ಕಿಚ್ಚನಿಂದ ಬಿಗ್ ಆಫರ್

    ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡರೆ ಕಿಚ್ಚನಿಂದ ಬಿಗ್ ಆಫರ್

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಒಂದು ವಿಶೇಷ ಆಫರ್ ನೀಡಿದ್ದಾರೆ. ಅಪ್ಪನ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ ಅವರಿಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರತಂಡದಿಂದ ಉಡುಗೊರೆ ಸಿಗಲಿದೆ.

    ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯಿಸಿದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಇದೇ ತಿಂಗಳು 27ರಂದು ಬಿಡುಗಡೆಯಾಗಲಿದೆ. ಈ ವೇಳೆ ಚಿತ್ರತಂಡ ಅಭಿಮಾನಿಗಳಿಗೆ ತಮ್ಮ ತಂದೆ ಜೊತೆಯಿರುವ ಫೋಟೋ ವಾಟ್ಸಾಪ್ ಮೂಲಕ ಕಳುಹಿಸಿ ತಮ್ಮ ಜೊತೆ ಚಿತ್ರವನ್ನು ವೀಕ್ಷಿಸಿ ಎಂಬ ಆಫರ್ ನೀಡಿದೆ.

    ಅಭಿಮಾನಿಗಳು ತಮ್ಮ ತಂದೆ ಜೊತೆ ತೆಗೆದುಕೊಂಡ ಸೆಲ್ಫಿ ಫೋಟೋವನ್ನು 96637 50657 ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ವಾಟ್ಸಾಪ್ ಮೂಲಕ ಕಳುಹಿಸಿದ ಫೋಟೋಗಳಲ್ಲಿ 250 ಫೋಟೋವನ್ನು ಆಯ್ಕೆ ಮಾಡಲಾಗುತ್ತದೆ.

    ಸದ್ಯ ಆಯ್ಕೆಯಾದ ಅಪ್ಪ- ಮಗ ಅಥವಾ ಮಗಳು ಚಿತ್ರತಂಡ ಹಾಗೂ ಸುದೀಪ್ ಜೊತೆ ಚಿತ್ರ ನೋಡಬಹುದು. ಚಿತ್ರ ವೀಕ್ಷಿಸುವುದರ ಜೊತೆ ಆಯ್ಕೆಯಾದ 250 ಅಪ್ಪ- ಮಗ ಅಥವಾ ಮಗಳಿಗೆ ಕಿಚ್ಚ ಸುದೀಪ್ ಅವರ ಆಟೋಗ್ರಾಫ್ ಕೂಡ ಸಿಗಲಿದೆ.

    ಸದ್ಯ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಅಂಬರೀಶ್, ಸುಹಾಸಿನಿ ನಟಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಸುದೀಪ್‍ಗೆ ನಾಯಕಿಯಾಗಿ ಶೃತಿ ಹರಿಹರನ್ ಮಿಂಚಿದ್ದಾರೆ. ಚಿತ್ರವನ್ನು ಗುರುದತ್ತ ಗಾಣಿಗ ನಿರ್ದೇಶನ ಮಾಡಿದರೆ, ಜಾಕ್ ಮಂಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾಖಲೆ ಬರೆಯೋಕೆ ಸಜ್ಜಾದ `ಅಂಬಿ ನಿಂಗ್ ವಯಸ್ಸಾಯ್ತೋ’

    ದಾಖಲೆ ಬರೆಯೋಕೆ ಸಜ್ಜಾದ `ಅಂಬಿ ನಿಂಗ್ ವಯಸ್ಸಾಯ್ತೋ’

    – ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್

    ಬೆಂಗಳೂರು: ಕನ್ನಡ ಚಿತ್ರರಂಗ ತಾರಾಮೇಳಕ್ಕೆ ಸಜ್ಜಾಗುತ್ತಿದೆ. 14 ವರ್ಷದ ಬಳಿಕ ರೆಬೆಲ್ ಸ್ಟಾರ್ ಅಂಬರೀಶ್ ಫುಲ್ ಫ್ಲೆಜ್ಡ್ ಆಗಿ ನಾಯಕನಟನಾಗಿರುವ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ದಾಖಲೆ ಬರೆಯೋಕೆ ಸಜ್ಜಾಗುತ್ತಿದೆ.

    ದಕ್ಷಿಣ ಭಾರತವೇ ತಿರುಗಿ ನೋಡುವ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸಜ್ಜಾಗುತ್ತಿದ್ದು, `ಅಂಬಿ ನಿಂಗ್ ವಯಸ್ಸಾಯ್ತೋ’ ಆಡಿಯೋ ರಿಲೀಸ್ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗ ಸೇರಿದಂತೆ ಟಾಲಿವುಡ್, ಕಾಲಿವುಡ್ ಚಿತ್ರರಂಗದ ಗಣ್ಯರು ಒಂದೆಡೆ ಸೇರಲಿದ್ದಾರೆ.

    ರೆಬೆಲ್ ಸ್ಟಾರ್ ಅಂಬರೀಶ್ 14 ವರ್ಷಗಳ ಬಳಿಕ ಫುಲ್ ಫ್ಲೆಜ್ಡ್ ಹೀರೂ ಆಗಿದ್ದಾರೆ. ಹೀಗಾಗಿ ಅಂಬಿ ಅಭಿನಯಿಸಿರುವ ಚಿತ್ರದ ಆಡಿಯೋ ರಿಲೀಸ್ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮಾಡುವ ಯೋಜನೆಗೆ ಸಿದ್ಧವಾಗಿದೆ. ಈಗಾಗಲೇ ಚಿರಂಜೀವಿ, ರಜನಿಕಾಂತ್, ಧನುಶ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕರಿಗೆ ಆಹ್ವಾನ ಹೋಗಿದೆ ಎಂದು ತಿಳಿದುಬಂದಿದೆ.

    ಕನ್ನಡದ ಹೊಸ ನಟರಿಂದ ಹಿಡಿದು ಸ್ಟಾರ್ ನಟರೆಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಖುದ್ದು ಅಂಬರೀಶ್, ದರ್ಶನ್ ರನ್ನ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ. ಚಿತ್ರದಲ್ಲಿ ಸುದೀಪ್ ಕೂಡ ಒಬ್ಬ ಹೀರೋ ಆಗಿರುವುದರಿಂದ ಒಂದೇ ವೇದಿಕೆಯಲ್ಲಿ ಹಳೆಯ ಕುಚಿಕು ಗೆಳೆಯರನ್ನ ಮತ್ತೆ ಒಟ್ಟಿಗೆ ನೋಡುವ ಸುವರ್ಣಾವಕಾಶ ಅಭಿಮಾನಿಗಳ ಪಾಲಿಗೆ ಬರುವ ನಿರೀಕ್ಷೆ ಇದೆ.

    ಹಿರಿಯ ನಟನಿಗೆ ಗೌರವ ಕೊಡೋದಕ್ಕಾಗಿ ಖುದ್ದು ಕಿಚ್ಚ ಸುದೀಪ್ ಅವರೇ ಈ ಅದ್ಧೂರಿ ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಏರ್ಪಡಿಸೋಕೆ ಮುಂದಾಗಿದ್ದಾರೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಎಲ್ಲಾ ತಾರೆಗಳ ಇರುವಿಕೆಯನ್ನು ನೋಡಿಕೊಂಡು ಕಾರ್ಯಕ್ರಮ ದಿನಾಂಕ ಫಿಕ್ಸ್ ಮಾಡಲಾಗುತ್ತದೆ ಎಂಬುದಾಗಿ ಸಿನಿ ಮೂಲಗಳಿಂದ ತಿಳಿದು ಬಂದಿದೆ.

  • ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸಂಭಾಳಿಸೋದು ಕಷ್ಟ ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿರುವ ಅಭಿಪ್ರಾಯ. ಈ ಹಿರಿಯ ನಟನನ್ನು ಸಂಭಾಳಿಸಲು ಚಿಕ್ಕ ವಯಸ್ಸಿನ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಏನು ಮಾಡಿರಬಹುದು ಎಂಬ ಕ್ಯೂರಿಯಾಸಿಟಿ ಅನೇಕರಲ್ಲಿದ್ದದ್ದು ಸುಳ್ಳಲ್ಲ!

    ಈ ಬಗ್ಗೆ ಇದೀಗ ಸ್ವತಃ ನಿರ್ದೇಶಕ ಗುರುದತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಜೊತೆ ಚಿತ್ರ ಮಾಡೋವಾಗ ಗುರುದತ್ ಆರಂಭದಲ್ಲಿ ಇದು ಕನಸೇನೋ ಅಂದುಕೊಂಡಿದ್ದರಂತೆ. ಅವರ ನಟನೆಯನ್ನು ನಿರ್ದೇಶನ ಮಾಡೋ ಸವಾಲನ್ನು ಎದುರುಗೊಳ್ಳಲು ತಮ್ಮಿಂದ ಸಾಧ್ಯವಾಗುತ್ತಾ ಅಂತಲೂ ಭಯಗೊಂಡಿದ್ದರಂತೆ. ಅವರ ಸಿಟ್ಟು ಸೆಡವುಗಳ ಕಥೆಗಳನ್ನೂ ಕೇಳಿರುವುದರಿಂದ ಆ ಬಗೆಗೂ ಗುರುದತ್ ಭಯ ಹೊಂದಿದ್ದರಂತೆ.

    ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದುದ್ದಕ್ಕೂ ಗುರುದತ್‍ಗೆ ಸಿಕ್ಕಿದ್ದು ಅಪ್ಪನಂಥಾ ಅಂಬರೀಶ್ ಯಾಕೆಂದರೆ ಅವರು ಒಂದು ಹಂತದಲ್ಲಿಯೂ ಸಿಟ್ಟು ಮಾಡಿಕೊಂಡಿಲ್ಲವಂತೆ. ಆದಷ್ಟು ಸಮಯವನ್ನೂ ಕೂಡಾ ಮೇಂಟೇನ್ ಮಾಡಿದ್ದಾರಂತೆ. ಇದೆಲ್ಲದರಿಂದ ಥ್ರಿಲ್ ಆಗಿರೋ ಗುರುದತ್ ಅಂಬಿ ಜೊತೆ ಕೆಲಸ ಮಾಡೋದೆಂದರೆ ಅಪ್ಪನ ಜೊತೆ ಕೆಲಸ ಮಾಡಿದಷ್ಟೇ ಕಂಫರ್ಟ್ ಫೀಲ್ ಕೊಟ್ಟಿದೆ ಅಂತ ಹೇಳಿಕೊಂಡಿದ್ದಾರೆ.

  • ಬಹು ವರ್ಷಗಳ ಬಳಿಕ ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿದ ರೆಬೆಲ್ ಸ್ಟಾರ್!

    ಬಹು ವರ್ಷಗಳ ಬಳಿಕ ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿದ ರೆಬೆಲ್ ಸ್ಟಾರ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಬಹಳ ವರ್ಷಗಳ ಬಳಿಕ ತನ್ನ ಆತ್ಮೀಯ ಗೆಳೆಯ ವಿಷ್ಣುವರ್ಧನ್ ಮನೆಗೆ ಭೇಟಿ ನೀಡಿದ್ದಾರೆ.

    ಜಯನಗರದಲ್ಲಿ ಅಂಬರೀಶ್ ನಟನೆಯ “ಅಂಬಿ ನಿಂಗ್ ವಯಸ್ಸಾಯತ್ತೋ” ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹತ್ತಿರದಲ್ಲೇ ಇದ್ದ ವಿಷ್ಣುವರ್ಧನ್ ಮನೆಗೆ ತೆರಳಿ ಸದಸ್ಯರ ಕುಶಲೋಪರಿ ವಿಚಾರಿಸಿದ್ದರು.

    ಭಾರತಿ ವಿಷ್ಣುವರ್ಧನ್ ಜೊತೆ ಕೆಲ ಕಾಲ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಸದ್ಯ ಅಂಬರೀಶ್ ರಾಜಕೀಯದಿಂದ ದೂರವಿದ್ದು, ಅಂಬಿ ನಿಂಗ್ ವಯಸ್ಸಾಯತ್ತೋ ಚಿತ್ರದ ಶೂಟಿಂಗ್ ನಲ್ಲಿ ತಮ್ಮನು ತಾವು ತೊಡಗಿದ್ದಾರೆ.

    ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚನಿಗೆ ಜೋಡಿ ಆಗಿ ಮುಗೂತಿ ಸುಂದರಿ ಶೃತಿ ಹರಿಹರನ್ ಅಭಿನಯಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದೆ.

  • ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಡಿಮ್ಯಾಂಡ್ ಕಡಿಮೆಯೇ ಆಗಿಲ್ಲ. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರೋ ರೆಬೆಲ್ ಸ್ಟಾರ್ ಹಿಂದೆ ಕಾಂಗ್ರೆಸ್ ಬಿದ್ದಿದೆ.

    ಮಂಡ್ಯ ಬಿ ಫಾರಂ ಕೊಟ್ಟರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಅಂಬರೀಶ್‍ಗೆ, ಪಕ್ಷದ ಪರ ಪ್ರಚಾರಕ್ಕಾದರೂ ಬನ್ನಿ ಎಂದು ಕೆಪಿಸಿಸಿ ನಾಯಕರು ಕೇಳಿಕೊಂಡಿದ್ದಾರೆ. ಆದರೆ ಅಂಬಿ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಎಲ್ಲಾ ಸರಿ ಇದ್ದಿದ್ದರೆ ಎಲೆಕ್ಷನ್‍ಗೆ ಕಂಟೆಸ್ಟ್ ಮಾಡುತ್ತಿರಲಿಲ್ವಾ. ಆರೋಗ್ಯ ಸರಿ ಇಲ್ಲಾ. ವಯಸ್ಸು ಸಹಕರಿಸುತ್ತಿಲ್ಲ. ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ ಎಂದು ಅಂಬಿ ಕೈ ಎತ್ತಿದ್ದಾರೆ ಎನ್ನಲಾಗಿದೆ.

    ಕೈ ಪಡೆ ಮಾತ್ರ ತನ್ನ ಪ್ರಯತ್ನ ಬಿಟ್ಟಿಲ್ಲ. ಅಂದಹಾಗೇ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್ ಗಳ ಪೈಕಿ ಸಿಎಂ, ಡಿ.ಕೆ.ಶಿವಕುಮಾರ್ ಬಿಟ್ಟರೆ ಅತಿ ಹೆಚ್ಚು ಬೇಡಿಕೆ ಇರುವುದು ಅಂಬರೀಶ್‍ಗೆ. ಅದರಲ್ಲೂ ವಿಶೇಷವಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಕೆಲವು ಅಭ್ಯರ್ಥಿಗಳು ಅಂಬರೀಶ್‍ರನ್ನು ಕರೆತಂದು ಪ್ರಚಾರ ಮಾಡಿಸಿ ಎಂದು ಕೆಪಿಸಿಸಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಇನ್ನೂ ಕೆಲವರು ತಾವೇ ಅಂಬರೀಶ್ ಸಂಪರ್ಕಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ನಲ್ಲಿರುವ ಮಾಜಿ ಸಂಸದೆ ರಮ್ಯಾ ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸಿಲ್ಲ.

  • ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ ಅಂಬಿ!

    ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ ಅಂಬಿ!

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಸೆಟ್‍ನಲ್ಲಿ ಶೂಟಿಂಗ್ ಸಮಯದ ಬಿಡುವಿನ ವೇಳೆ ಕಣ್ಸನ್ನೆ  ಬೆಡಗಿ ಪ್ರಿಯಾ ಪ್ರಕಾಶ್‍ರನ್ನು ಇಮಿಟೇಟ್ ಮಾಡಿದ್ದಾರೆ.

    ನಾಯಕನಿಗೆ ಕಣ್ಣು ಹೊಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಿಯಾ ಅವರನ್ನು ಇವರೆಗೂ ಸಿನಿಮಾ ನಟರು, ಅಭಿಮಾನಿಗಳು ಸೇರಿದಂತೆ ಹಲವಾರು ಮಂದಿ ಅವರನ್ನು ಇಮಿಟೇಟ್ ಮಾಡಿದ್ದರು.

    ಸದ್ಯ ಈಗ ಅಂಬರೀಶ್ ಪ್ರಿಯ ಪ್ರಕಾಶ್ ಅವರನ್ನು ಇಮಿಟೇಟ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಶೂಟಿಂಗ್ ಬಿಡುವಿನ ಸಮಯದಲ್ಲಿ ಅಂಬರೀಶ್ ಹಾಸ್ಯದ ರೀತಿಯಲ್ಲಿ ಪ್ರಿಯಾ ಅವರ ರೀತಿ ಮಾಡಿದ್ದಾರೆ.

    ಸದ್ಯ ಅಂಬರೀಶ್ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚ ಸುದೀಪ್ ಗೆ ಜೋಡಿ ಆಗಿ ಮುಗೂತಿ ಸುಂದರಿ ಶೃತಿ ಹರಿಹರನ್ ಅಭಿನಯಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದೆ.