Tag: alpesh thakor

  • ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪೇಶ್ ಠಾಕೂರ್

    ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪೇಶ್ ಠಾಕೂರ್

    ನವದೆಹಲಿ: ಗುಜರಾತ್ ಕಾಂಗ್ರೆಸ್ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಇದೀಗ ಬಿಜೆಪಿಗೆ ಜಂಪ್ ಆಗಿದ್ದಾರೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಸಿಡಿದೆದ್ದಿದ್ದ ಹಿಂದುಳಿದ ವರ್ಗದ ಪ್ರಭಾವಿ ನಾಯಕ ಅಲ್ಪೇಶ್ ಠಾಕೂರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

    ಜುಲೈ 5 ರಂದು ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕಿದ್ದ ಅಲ್ಪೇಶ್ ಠಾಕೂರ್ ಬಳಿಕ ಕಾಂಗ್ರೆಸ್ ಶಾಸಕ ಸ್ಥಾನವನ್ನೂ ತ್ಯಜಿಸಿದ್ದರು. 2017ರಲ್ಲಿ ಕಾಂಗ್ರೆಸ್ ಸೇರಿದ್ದ ಅಲ್ಪೇಶ್, ರಾಧಾನ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಪ್ರಚಾರದ ವೇಳೆ ಮೋದಿ, ಅಮಿತ್ ಶಾ ವಿರುದ್ಧ ಖಂಡಾತುಂಡವಾಗಿ ಟೀಕಿಸಿದ್ದರು. ಆದರೆ ಆ ಬಳಿಕ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.

    ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೇ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.

    ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 2 ವರ್ಷಕ್ಕೆ ರಾಹುಲ್ ಗಾಂಧಿಗೆ ಕೈ ಕೊಟ್ಟಿದ ಅಲ್ಪೇಶ್ ಠಾಕೂರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಶಾಕ್ ನೀಡಿದ್ದರು. ಪರಿಣಾಮ ಬಿಜೆಪಿ ಗುಜರಾತ್ ನಲ್ಲಿ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವಿಪ್ ಮಾಡಲು ಸಹಕಾರಿ ಆಗಿತ್ತು. ಕಾಂಗ್ರೆಸ್ ಪಕ್ಷ ಠಾಕೂರ್ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅಲ್ಪೇಶ್ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಸೇರ್ಪಡೆ ವಿಚಾರವನ್ನು ಸ್ಪಷ್ಟಪಡಿಸಿರಲಿಲ್ಲ. ಇಂದು ಗುಜರಾತ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆ ಆಗುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

  • ರಾಹುಲ್ ನಮಗೆ ಏನನ್ನೂ ಮಾಡಿಲ್ಲ: ಇಬ್ಬರು `ಕೈ’ ರೆಬೆಲ್ ಶಾಸಕರು ರಾಜೀನಾಮೆ

    ರಾಹುಲ್ ನಮಗೆ ಏನನ್ನೂ ಮಾಡಿಲ್ಲ: ಇಬ್ಬರು `ಕೈ’ ರೆಬೆಲ್ ಶಾಸಕರು ರಾಜೀನಾಮೆ

    ಗಾಂಧಿನಗರ: ಗುಜರಾತ್ ಕಾಂಗ್ರೆಸ್‍ನ ರೆಬೆಲ್ ಶಾಸಕರಾದ ಅಲ್ಪೇಶ್ ಠಾಕೂರ್ ಹಾಗೂ ಧವಲ್ ಸಿನ್ಹಾ ಜಾಲಾ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

    ರಾಜ್ಯಸಭೆ ಎರಡು ಸ್ಥಾನಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಅಲ್ಪೇಶ್ ಠಾಕೂರ್ ಹಾಗೂ ಧವಲ್ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಮತ ಹಾಕಿದ್ದಾರೆ ಎನ್ನಲಾಗುತ್ತಿದೆ.

    ರಾಜೀನಾಮೆ ಬಳಿಕ ಮಾತನಾಡಿದ ಅಲ್ಪೇಶ್ ಠಾಕೂರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನಾನು ಪಕ್ಷಕ್ಕೆ ಸೇರಿಕೊಂಡೆ. ದುರಾದೃಷ್ಟವಶಾತ್ ಅವರು ನಮಗೆ ಏನನ್ನೂ ಮಾಡಲಿಲ್ಲ. ನಾವು ಪದೇ ಪದೇ ಅವಮಾನಕ್ಕೆ ಒಳಗಾದೆವು. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

    ಕಾಂಗ್ರೆಸ್ಸಿಗರು ನಮ್ಮನ್ನು ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದ ನಾಯಕರು ಕಾರ್ಯಕರ್ತರ ಮಾತುಗಳನ್ನು ಆಲಿಸುವುದಿಲ್ಲ ಎಂದು ಧವಲ್ ಸಿನ್ಹಾ ದೂರಿದ್ದಾರೆ.

    ಅಲ್ಪೇಶ್ ಠಾಕೂರ್ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸವಾಲು ಹಾಕಿ ಸದ್ದು ಮಾಡಿದ್ದರು. ಕೆಲ ದಿನಗಳ ಹಿಂದೆ ಅಲ್ಪೇಶ್ ಠಾಕೂರ್ ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, ಇಂತಹ ವದಂತಿಗಳನ್ನು ಯಾರು ಹಬ್ಬಿಸುತ್ತಿದ್ದಾರೆ ನನಗೆ ತಿಳಿದಿಲ್ಲ. ಆದರೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಕಾಂಗ್ರೆಸ್ ಜೊತೆಗಿದ್ದೇನೆ ಹಾಗೂ ಕಾಂಗ್ರೆಸ್ ಜೊತೆಯಲ್ಲೇ ಇರುತ್ತೇನೆ. 20,000 ಅನುಯಾಯಿಗಳ ಅಭಿಪ್ರಾಯ ಪಡೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವೆ. ಬಿಹಾರವೂ ಸೇರಿದಂತೆ ನಾನು ರಾಷ್ಟ್ರೀಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದ್ದರು.

    ಗುಜರಾತ್ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೆ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.

  • ರಾಹುಲ್‍ಗೆ ಶಾಕ್ – ಕೈ ಸೇರಿದ 2 ವರ್ಷಕ್ಕೆ ಹೊರನಡೆದ ಅಲ್ಪೇಶ್ ಠಾಕೂರ್

    ರಾಹುಲ್‍ಗೆ ಶಾಕ್ – ಕೈ ಸೇರಿದ 2 ವರ್ಷಕ್ಕೆ ಹೊರನಡೆದ ಅಲ್ಪೇಶ್ ಠಾಕೂರ್

    ಗಾಂಧಿನಗರ: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ವೇಳೆ ಎರಡು ವರ್ಷದ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಬಿಜೆಪಿಗೆ ತಲೆ ನೋವಾಗಿದ್ದ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಪಕ್ಷದಿಂದ ಹೊರ ನಡೆದಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಗಳಿಂದ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವರದಿಯನ್ನ ಅಲ್ಪೇಶ್ ಅಲ್ಲಗೆಳೆದಿದ್ದರು. ಆದರೆ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವ ವೇಳೆ ಪಕ್ಷದಿಂದ ಹೊರ ನಡೆದಿದ್ದಾರೆ.

    ಕಾಂಗ್ರೆಸ್ ಪಕ್ಷ ಠಾಕೂರ್ ಸಮುದಾಯವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸತ್ತ ಅವರು ಇತರೇ ಇಬ್ಬರು ಶಾಸಕರೊಂದಿಗೆ ಪಕ್ಷ ತೊರೆದಿದ್ದಾರೆ. ನನ್ನ ಜನರ ಹಕ್ಕುಗಳ ರಕ್ಷಣೆಗಾಗಿ ತಾವು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

    ಗುಜರಾತ್ ಚುನಾವಣೆ ವೇಳೆ ಯುವ ತ್ರಿವಳಿ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೇಲ್, ಜಿಗ್ನೇಶ್ ಮೇವಾನಿ ಬಿಜೆಪಿಗೆ ತಲೆನೋವಾಗಿದ್ದರು. 2011 ರಲ್ಲಿ ಗುಜರಾತ್ ಕ್ಷತ್ರಿಯ ಠಾಕೂರ್ ಸೇನಾ ಸಂಘಟನೆ ನಿರ್ಮಿಸಿದ್ದ ಠಾಕೂರ್ ತಮ್ಮ ಜನಾಂಗದ ಪರ ಹೋರಾಟಕ್ಕೆ ಇಳಿದಿದ್ದರು. ಅಲ್ಲದೇ ಓಬಿಸಿ, ಎಸ್‍ಟಿ ಎಸ್‍ಸಿ ಏಕತಾ ವೇದಿಕೆ ನಿರ್ಮಿಸಿ ಶೋಷಿತ ಸಮುದಾಯಗಳ ಪರ ಆಂದೋಲಗಳನ್ನು ರೂಪಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಇದೇ ವೇಳೆ ಅಲ್ಪೇಶ್ ಠಾಕೂರ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ. ಇತ್ತ ಲೋಕಸಭಾ ಚುನಾವಣೆಯ ಸಮಯದಲ್ಲೇ ಪಕ್ಷ ತೊರೆದಿರುವ ಅಲ್ಪೇಶ್ ಠಾಕೂರ್ ಅವರ ನಡೆ ಕಾಂಗ್ರೆಸ್ ಪಕ್ಷದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

  • ಅಣಬೆ ಕೇಕ್ ಕತ್ತರಿಸಿ ಬಿಜೆಪಿ ಸಂಭ್ರಮಾಚರಣೆ

    ಅಣಬೆ ಕೇಕ್ ಕತ್ತರಿಸಿ ಬಿಜೆಪಿ ಸಂಭ್ರಮಾಚರಣೆ

    ನವದೆಹಲಿ: ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಣಬೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡೋ ಮೂಲಕ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್‍ಗೆ ಟಾಂಗ್ ನೀಡಿದ್ದಾರೆ.

    ಪಕ್ಷದ ದೆಹಲಿ ಘಟಕದ ವಕ್ತಾರರಾದ ತಜಿಂದರ್ ಸಿಂಗ್ ಅಲ್ಪೇಶ್ ಠಾಕೂರ್ ಟಾಂಗ್ ಕಡುವ ಸಲುವಾಗಿ ಅಣಬೆ ಕೇಕ್ ಕತ್ತರಿಸೋ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

    ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೋರ್ ಚುನಾವಣಾ ಪ್ರಚಾರದ ವೇಳೆ ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಒಂದು ಅಣಬೆ ಬೆಲೆ 80 ಸಾವಿರ ರೂ. ದಿನಕ್ಕೆ 5 ಅಣಬೆಗಳನ್ನ ಮೋದಿ ತಿಂತಾರೆ ಅಂತ ಅಲ್ಪೇಶ್ ಹೇಳಿದ್ದರು.

    ಮೋದಿ ನನ್ನಂತೆ ಕಪ್ಪಗಿದ್ದರು. ಆದ್ರೆ ವಿದೇಶಿ ಅಣಬೆ ತಿಂದು ಬೆಳ್ಳಗಾದ್ರು ಎಂದು ಅಲ್ಪೇಶ್ ಹೇಳಿದ್ದರು.

    ಇನ್ನು ಗುಜರಾತ್‍ನ ರಾಧಾನ್‍ಪುರ್ ನಿಂದ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್‍ ಜಯ ಸಾಧಿಸಿದ್ದಾರೆ.

  • ಕಾಂಗ್ರೆಸ್ಸಿಗೆ ಸೇರಿದ್ದು ಯಾಕೆ? ‘ಕೈ’ಗೆ ಯುವಕರು ಮತ ಹಾಕಬೇಕು ಯಾಕೆ: ಗುಜರಾತ್ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಹೇಳ್ತಾರೆ ಓದಿ

    ಕಾಂಗ್ರೆಸ್ಸಿಗೆ ಸೇರಿದ್ದು ಯಾಕೆ? ‘ಕೈ’ಗೆ ಯುವಕರು ಮತ ಹಾಕಬೇಕು ಯಾಕೆ: ಗುಜರಾತ್ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಹೇಳ್ತಾರೆ ಓದಿ

    ಗುಜರಾತ್‍ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಗುಜರಾತ್ ಯುವ ನಾಯಕರಾದ ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತಷ್ಟು ಬಲ ಬಂದಿದೆ. ಒಗ್ಗಟಿನ ಮೂಲಕ ಕಾಂಗ್ರೆಸ್ ಎದುರಾಳಿ ಬಿಜೆಪಿಯನ್ನು ಬಗ್ಗು ಬಡಿದು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ಹೀಗಾಗಿ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಅವರು ನಾನು ರಾಜಕೀಯ ಪ್ರವೇಶಿಸಿದ್ದು ಯಾಕೆ? ಕಾಂಗ್ರೆಸ್ ಸೇರಿದ್ದು ಯಾಕೆ ಎನ್ನುವುದನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ನೀವು ರಾಜಕೀಯ ಪ್ರವೇಶಿಸಲು ಕಾರಣ ಏನು? ಅದರಲ್ಲೂ ಕಾಂಗ್ರೆಸ್ಸನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
    ಬಿಜೆಪಿ ವಿರುದ್ಧದ ಧೋರಣೆಯಿಂದ ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ. ನಾನು ಕಾಂಗ್ರೆಸ್ ಸೇರುವುದು ಜನಾದೇಶವಾಗಿತ್ತು. ಬಿಜೆಪಿ ಸುಧಾರಿಸದಿದ್ರೆ ರಾಜಕೀಯ ಪ್ರವೇಶಿಸುತ್ತೇವೆ ಎಂದು ನಾವು ಈ ಮೊದಲೇ ಹೇಳಿದ್ದೇವು. ಅದರಂತೆ ಜನಾದೇಶ ಪಡೆದು ಕಾಂಗ್ರೆಸ್ ಸೇರಿದ್ದೇನೆ. ನಾನು ಬಿಜೆಪಿ ಸೇರಿದರೆ ಅಪಾದಿತನಾಗುತ್ತಿದ್ದೆ ಮತ್ತು ಎಷ್ಟು ಹಣಕ್ಕೆ ನಾನು ಖರೀದಿಯಾದೆ ಎಂಬಂತೆ ಸಾರ್ವಜನಿಕ ವಲಯದಲ್ಲಿ ಚರ್ಚಗೆ ಗ್ರಾಸವಾಗುತ್ತಿತ್ತು. ಸಿದ್ಧಾಂತದ ವಿರುದ್ಧ ಹಾಗೂ ಬಿಜೆಪಿ ವೈಫಲ್ಯದ ವಿರುದ್ಧ ಹೋರಾಡಲು ನಾನು ಕಾಂಗ್ರೆಸ್ ಸೇರಿದ್ದೇನೆ.

    ಹಾರ್ದಿಕ್ ಪಟೇಲ್ ರೀತಿಯಲ್ಲಿ ನೀವೂ ಕಾಂಗ್ರೆಸ್ ಸೇರ್ಪಡೆಯಿಂದ ನಿಮ್ಮ ಪ್ರತಿಷ್ಠೆ ಕಡಿಮೆಯಾಗಿದೆ ಎಂದು ನಿಮ್ಮ ಪ್ರತಿಸ್ಪರ್ಧಿಗಳು ಹೇಳುತ್ತಿದ್ದಾರೆ
    ಸಮಯ ಬರಲಿ ಎಲ್ಲದಕ್ಕೂ ಉತ್ತರ ಸಿಗಲಿದೆ, ನಾವು ಎಲ್ಲರನ್ನು ತಯಾರಿ ಮಾಡುತ್ತಿದ್ದೇವೆ ಕಾರ್ಯಕರ್ತರರೊಂದಿಗೆ ಸಭೆ ನಡೆಸುತ್ತಿದ್ದೇವೆ. ಉತ್ತರ ಗುಜರಾತ್ ನಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದ ನಂತರ ಪರಿಸ್ಥಿತಿ ಅರ್ಥವಾಗಲಿದೆ.

    ನೀವೂ ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಬಿಜೆಪಿ ಸಾರ್ವಜನಿಕವಾಗಿ ಹೇಳುತ್ತಿದೆ. ನೀವೇನು ಮಾಡುತ್ತೀರಿ?
    ಆಡಳಿತದಲ್ಲಿರುವ ಬಿಜೆಪಿಯವರು ಸುಧಾರಣೆ ಮಾಡದೇ ಇದ್ದರೆ ನಾವು ರಾಜಕೀಯ ಸೇರುವುದು ನಿಶ್ಚಿತ ಎಂದು ಈ ಮೊದಲೇ ತಿಳಿಸಿದ್ದೆವು. ಕಳೆದ ಎರಡು ವರ್ಷದಲ್ಲಿ ಬಡತನ, ರೈತರ ಸಮಸ್ಯೆ, ನಿರುದ್ಯೋಗ, ಶಿಕ್ಷಣದ ಬಗೆಗೆ ನಾವು ಎತ್ತಿದ ಸಮಸ್ಯೆ ಗಳಿಗೆ ಉತ್ತರ ಇನ್ನು ಬಂದಿಲ್ಲ. ಈಗ ಬಿಜೆಪಿ ವಿರುದ್ಧ ಜನಾಕ್ರೋಶ ಇರುವ ಕಾರಣ ನಾವು ರಾಜಕೀಯ ಪ್ರವೇಶ ಮಾಡಿದ್ದೇವೆ.

    ಪಾಟೀದಾರ್ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾರಣ ನೀವೂ ಪ್ರತಿಪಾದಿಸುವ ಒಬಿಸಿ ಕೋಟಾಕ್ಕೆ ಪಾಟೀದಾರ ಮೀಸಲಾತಿ ಪೆಟ್ಟಾಗಬಹುದು
    ಮೀಸಲಾತಿಯ ಬಗ್ಗೆಯೇ ಎಲ್ಲ ಚರ್ಚೆ ಆರಂಭವಾಗಿ ಕೊನೆಗೊಳ್ಳುವುದು ಯಾಕೆ? ಬಹಳಷ್ಟು ಬೇರೆ ವಿಚಾರಗಳು ಇದೆಯಲ್ಲವೇ. ನಿರುದ್ಯೋಗ, ಬಡತನ, ಶಿಕ್ಷಣ ಬಡ ರೈತರು, ಸಣ್ಣ ಕೈಗಾರಿಕೆಗಳು ಸಾಯುತ್ತಿವೆ. ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಶ್ರೀಮಂತ ಸಮುದಾಯವೇ ಯಾಕೆ ಮೀಸಲಾತಿ ಕೇಳುತ್ತಿವೆ? ಗುಜರಾತ್ ನಲ್ಲಿ ಸರ್ಕಾರ ನೀತಿಯಿಂದ ಬೇಸತ್ತು ಹತಾಶೆಯಿಂದ ಅವರು ಕೇಳುತ್ತಿದ್ದಾರೆ. ಶ್ರೀಮಂತ ಸಮುದಾಯದವರೇ ಹತಾಶರಾಗಿರುವ ಬಡವರು ಮತ್ತು ಮಧ್ಯಮ ವರ್ಗದವರ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಹೀಗಾಗಿ ಮಧ್ಯಮ ವರ್ಗದ ಮತ್ತು ಬಡವರಾಗಿರುವ ನಾವು ಅಹಂಕಾರದ ವಿರುದ್ಧ ಹೋರಾಡುತ್ತಿದ್ದೇವೆ.

    ಮೀಸಲಾತಿ ಬೇಡಿಕೆಯನ್ನು ಇಡದೇ ಆಡಳಿತದಲ್ಲಿ ನೀತಿಗಳು ಬದಲಾವಣೆಯಾಗಬೇಕು ಎಂದು ನೀವು ಹೇಳುತ್ತೀರಾ?
    ನಾನು ಹಾಗಂತ ಹೇಳುತ್ತಿಲ್ಲ, ಮೀಸಲಾತಿ ಬೇಡಿಕೆ ಅವಶ್ಯಕತೆ ಯಾಕೇ ಬೇಕು? ಎಲ್ಲ ನೀತಿಗಳನ್ನು ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಅವರು ಓಬಿಸಿ ಕೋಟಾದ 49% ಬೇಕೆಂದು ಕೇಳುತ್ತಿಲ್ಲ. ಅವರು (ಪಾಟೀದಾರ್) ಮೆಲ್ಜಾತಿಯ ಬಡ ಮಕ್ಕಳಿಗಾಗಿ ಮನವಿ ಮಾಡುತ್ತಿದ್ದಾರೆ. ನನ್ನ ಪ್ರಕಾರ ಕೇವಲ ಗುಜುರಾತ್ ಮಾತ್ರವಲ್ಲದೇ ಇಡೀ ದೇಶದಲ್ಲಿ ಮೇಲ್ವರ್ಗದಲ್ಲಿರುವ ಬಡ ಮಕ್ಕಳಿಗೆ ಮೀಸಲಾತಿ ನೀಡಿದರೆ ತಪ್ಪಲ್ಲ.

    ನೀವು ಚಾನಸ್ಮಾದಿಂದ ಸ್ವರ್ಧಿಸುತ್ತೀರಿ ಎನ್ನುವ ವರದಿ ಬಂದಿದೆ. ಇದು ನಿಜವೇ?
    ಇಲ್ಲ. ನಾನು ಎಲ್ಲ ಕ್ಷೇತ್ರಗಳನ್ನು ನೋಡುತ್ತಿದ್ದೇನೆ. ಪಕ್ಷ ಮತ್ತು ಕಾರ್ಯಕರ್ತರು ಎಲ್ಲಿ ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಅಲ್ಲಿ ಸ್ವರ್ಧಿಸುತ್ತೇನೆ.

    ವ್ಯಸನ ಮುಕ್ತಿ ಅಭಿಯಾನ್ ಎಂದು ನೀವೂ ಪ್ರಚಾರ ಆರಂಭಿಸಿದ್ದೀರಿ. ಗುಜರಾತ್ ನಲ್ಲಿ ಯುವಕರು ವ್ಯಸನಕ್ಕೆ ದಾಸರಾಗಿದ್ದಾರೆ ಎಂದು ಹೇಳ್ತೀರಾ?
    ಮದ್ಯ ನಿಷೇಧದ ಹೊರತಾಗಿಯೂ ಮದ್ಯಪಾನ, ಡ್ರಗ್ಸ್, ತಂಬಾಕು ದೊಡ್ಡ ಚಟವಾಗಿ ಯುವಕರಲ್ಲಿ ಕಾಡುತ್ತಿದೆ. ಪ್ರತಿವರ್ಷ 10 ಸಾವಿರ – 15 ಸಾವಿರ ಯುವಕರು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕಾದ ಅವಶ್ಯಕತೆ ಇದೆ. ಆದರೆ ಅದು ಅನುಷ್ಠಾನವಾಗುತ್ತಿಲ್ಲ.

    ಒಬಿಸಿ ಏಕತಾ ವೇದಿಕೆ ನಡೆಸಿದ ಸರ್ವೆ ವರದಿ ಆಧರಿಸಿ ಈ ಸಂಖ್ಯೆ ಹೇಳ್ತಾ ಇದ್ದೀರಾ?
    ನಾವು ಗುಜುರಾತ್‍ನ ಪ್ರತಿ ಹಳ್ಳಿಗಳಲ್ಲೂ ಸಭೆ ನಡೆಸಲಾಗುತ್ತಿದೆ. ಅಲ್ಲಿ ಸ್ಥಳಿಯ ಅಂಕಿ ಅಂಶಗಳನ್ನು ಕಲೆಹಾಕಿ ವರದಿ ತಯಾರಿಸಿದೆ. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದು ಈ ಹಿನ್ನೆಲೆ ಮದ್ಯಪಾನದ ವಿರುದ್ಧ ನಾವು ಪ್ರಚಾರ ಆರಂಭಿಸಿದ್ದೇವೆ

    ಕಾಂಗ್ರೆಸ್ ಗೆ ಯುವಕರು ಮತ ಹಾಕಬೇಕು ಯಾಕೆ?
    ಕಳೆದ 22 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ? ಇಂದು ಗುಜುರಾತ್ ನಲ್ಲಿ 60 ಲಕ್ಷ ನಿರುದ್ಯೋಗಿ ಯುವಕರಿದ್ದಾರೆ. ಎಲ್ಲ ಯುವಕರು ನಮ್ಮ ಚಳುವಳಿಯ ಭಾಗವಾಗಿದ್ದಾರೆ. ರೈತರು, ಬಡವರು, ಮಹಿಳೆಯರು ಸಹ ಈ ಚಳುವಳಿಯ ಭಾಗವಾಗಿದ್ದು ಅವರಿಗೆಲ್ಲ ಬದಲಾವಣೆ ಬೇಕಾಗಿದೆ. ಇದು ಕಾಂಗ್ರೆಸ್, ಬಿಜೆಪಿ ನಡುವಿನ ಹೋರಾಟವಲ್ಲ, ಬಿಜೆಪಿ ಗುಜುರಾತ್ ನಡುವಣ ಹೋರಾಟ.

    ಪ್ರಚಾರಕ್ಕಾಗಿ ಗುಜರಾತ್ ನ ಒಂದು ಭಾಗವನ್ನು ಕೇಂದ್ರಿಕರಿಸುತ್ತಿರಾ..?
    ನಾಳೆಯಿಂದ ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಚಿಸಿದ್ದಿನಿ, ಬಿಜೆಪಿ ಸೌರಾಷ್ಟ್ರ ಉತ್ತರ ಮತ್ತು ಮಧ್ಯ ಗುಜುರಾತ್ ನಿಂದ ನಿರ್ಗಮಿಸುತ್ತಾರೆ. ನಮಗಾಗಿ ಏನು ಮಾಡಿದ್ದಾರೆ ಅಂತಾ ಬಿಜೆಪಿಯನ್ನು ಕೇಳಲು ನಾನು ಜನರಿಗೆ ಹೇಳುತ್ತೇನೆ. ಇದುವರೆಗೂ ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ನೀಡಿದ್ದಾರೆ. ಜಾತಿ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ಮತದಾರರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ.

    ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆ ಮತ್ತು ಬೂತ್ ಗಳ ನಿರ್ವಹಣೆ ಯನ್ನು ಕಾಂಗ್ರೆಸ್ ಹೇಗೆ ಮಾಡುತ್ತದೆ?
    ಕಾಂಗ್ರೆಸ್ ಈಗಾಗಲೇ ಬೂತ್ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಯೋಚಿಸಿದೆ. ಮತದಾರರ ಮೂಲಕವೇ ಸಾಧ್ಯವಾದಷ್ಟು ಬೂತ್ ಗಳಲ್ಲಿ ಕಾಂಗ್ರೆಸ್ ಪರ ಮತ ಹಾಕಿಸುವ ಪ್ರಯತ್ನ ಮಾಡುತ್ತೇವೆ. ಒಂದು ಮತಗಟ್ಟೆಗೆ ನೂರು ಸ್ವಯಂ ಸೇವಕರು ನೇಮಕ ಮಾಡಿದ್ದೇವೆ. ಮಹಿಳೆಯರು ಯುವಕರು ಮಕ್ಕಳು ಇರುವಂತೆ ಸ್ವಯಂ ಸೇವಕನ್ನು ಎಲ್ಲ ವಿಭಾಗದಲ್ಲೂ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ ಇವಿಎಂಗಳು ಪರೀಕ್ಷೆ ಗೆ ಒಳಗೊಳ್ಳಬೇಕು, ಎಣಿಕೆ ಅಂತ್ಯವಾಗುವರೆಗೂ ಮತಯಂತ್ರಗಳನ್ನು ಆಯೋಗ ಕಾವಲು ಕಾಯಬೇಕು.

    ರಾಹುಲ್ ಗಾಂಧಿಗೆ ಎಐಸಿಸಿ ಪಟ್ಟಕಟ್ಟಿದ್ದರೆ  ಗುಜರಾತ್ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸುತ್ತೀರಾ?
    ಸಾಕಷ್ಟು ಯುವಕರು ರಾಹುಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ರಾಹುಲ್ ಗಾಂಧಿ ಉತ್ತಮ ರೀತಿಯಲ್ಲಿ ಪರಿಣಾಮ ಬೀರಲಿದ್ದಾರೆ. ಯುವಕರು ಹೊಸ ನಾಯಕತ್ವವನ್ನು ಬಯಸುತ್ತಿದ್ದಾರೆ.

    ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಗುಜರಾತ್‍ನಲ್ಲಿ ಈ ಬಾರಿ ಗೆಲುವು ಯಾರಿಗೆ?