ಕನ್ನಡ ಸಿನಿಮಾ ಇಂಡಸ್ಟ್ರಿ ದೊಡ್ಡದಾಗಿ ಬೆಳೆದಿದೆ. ಹಾಗೇ ಸಿನಿಮಾಗಳ ತಯಾರಿ ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ವರ್ಷಕ್ಕೊಂದೊ ಎರಡೋ ಸಿನಿಮಾಗಳು ಬರ್ತಿದ್ದಂತ ಕಾಲ ಬದಲಾಗಿ ವಾರಕ್ಕೆ 9 ರಿಂದ 10 ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ ರಿಲೀಸ್ ಆದ ಸಿನಿಮಾ ಮುಂದಿನ ಶುಕ್ರವಾರ ಬರುವುದರೊಳಗೆ ಎತ್ತಂಗಡಿಯಾಗುತ್ತಿವೆ. ನಿರ್ಮಾಪಕರು ತಲೆ ಮೇಲೆ ಕೈ ಹೊತ್ತು ಕೂರುವಂತ ಪರಿಸ್ಥಿತಿ ಇದ್ದು, ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ. ಇಷ್ಟೆಲ್ಲಾ ಸಂಕಷ್ಟ ಪ್ರತಿವಾರ ಎದುರಾಗುತ್ತಿದೆ. ಆದ್ರೆ ಇಷ್ಟು ಸಮಸ್ಯೆಗಳ ನಡುವೆಯೂ ಕನ್ನಡ ಸಿನಿಮಾವೊಂದು ಗೆದ್ದಿದೆ.
ಇತ್ತೀಚಿನ ದಿನಗಳಲ್ಲಿ ಸಿನಿಮಾವೊಂದು ರಿಲೀಸ್ ಆಗಿ 100 ದಿನಗಳು ಓಡುವುದೆಂದರೆ ಅದೊಂದು ಅದ್ಭುತವೇ ಸರಿ. 100 ದಿನಗಳಿರಲಿ, ಎರಡು ವಾರಗಳ ಕಾಲ ಥಿಯೇಟರ್ ನಲ್ಲಿ ಉಳಿದರೆ ಸಾಕು ಎನ್ನುತ್ತಾರೆ. ಆದ್ರೆ ‘ಅಳಿದು ಉಳಿದವರು’ ಸಿನಿಮಾ ಇದಕ್ಕೆ ಹೊರತಾಗಿದೆ. ಎಲ್ಲಾ ಸಮಸ್ಯೆಗಳನ್ನು ದಾಟಿ ಮುಂದೆ ನುಗ್ಗಿದೆ. ರಿಲೀಸ್ ಆದಾಗಿನಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿರುವ ಸಿನಿಮಾ ಇಂದು 100 ದಿನಗಳನ್ನು ಪೂರೈಸಿದೆ. 100 ಡೇಸ್ ಸಿನಿಮಾ ಸಕ್ಸಸ್ ಎಂಬ ಮಾತನ್ನ ಕೇಳಿಯೇ ಅದೆಷ್ಟೋ ದಿನಗಳು ಆಗೋಗಿದೆ. ಈ ಸಿನಿಮಾದ ಸಕ್ಸಸ್ ಗೆ ಇಡೀ ಸ್ಯಾಂಡಲ್ ವುಡ್ ಖುಷಿ ಪಟ್ಟಿದ್ದು, ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಚಿತ್ರಕಥೆ, ನಿರೂಪನಾ ರೀತಿಗೆ ಜನ ಫಿದಾ ಆಗಿದ್ದು, ಈಗಲೂ ಡಿಮ್ಯಾಂಡ್ ಹಾಗೆಯೇ ಉಳಿದಿದೆ.
ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ‘ಅಳಿದು ಉಳಿದವರು’ ಸಿನಿಮಾವನ್ನು ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡಿದ್ದು, ಮಿಥುನ್ ಸಂಗೀತ ಎಲ್ಲರನ್ನು ಮೋಡಿ ಮಾಡಿದೆ. ಇನ್ನು ಅಭಿಷೇಕ್ ಕಾಸರಗೋಡು ಕ್ಯಾಮೆರಾದಲ್ಲಿ ಅದ್ಭುತ ಚಿತ್ರಗಳು ಸೆರೆಯಾಗಿದ್ದು, ಸಿನಿಮಾ ಇನ್ನಷ್ಟು ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಅಳಿದು ಉಳಿದವರು ಚಿತ್ರ ತನ್ನ ಶೀರ್ಷಿಕೆಯ ಮೂಲಕವೇ ಹೊಸತನದ ಕಂಪು ಹೊಮ್ಮಿಸುತ್ತಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪೋಸ್ಟರ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಟ್ರೇಲರ್ಗಳ ಹೊರತಾಗಿ ಚಿತ್ರತಂಡ ಯಾವ ಅಬ್ಬರದ ಪ್ರಚಾರದತ್ತಲೂ ಗಮನ ಹರಿಸಿರಲಿಲ್ಲ. ಅಷ್ಟಕ್ಕೂ ಅದು ತಣ್ಣಗೆ ಹೊತ್ತಿಸಿದ್ದ ನಿರೀಕ್ಷೆಗಳ ಕಾವಿನ ಮುಂದೆ ಅದೆಲ್ಲದರ ಅವಶ್ಯಕತೆಯೂ ಬಿದ್ದಿರಲಿಲ್ಲ. ಇದೆಲ್ಲದಕ್ಕೆ ತಕ್ಕುದಾದ ರೀತಿಯಲ್ಲಿಯೇ ನಿರ್ದೇಶಕ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ಕಟ್ಟಿ ಕೊಡುತ್ತದೆ. ಯಾವ ಥರದಲ್ಲಿ ಈ ಸಿನಿಮಾ ಸದ್ದು ಮಾಡಿತ್ತೋ ಅದೇ ತಣ್ಣಗಿನ ಆವೇಗವನ್ನು ಆತ್ಮವಾಗಿಸಿಕೊಂಡಂತಿರುವ ಈ ಚಿತ್ರ ಎಲ್ಲರಿಗೂ ಹಿಡಿಸುವಂತೆ ಮೂಡಿ ಬಂದು ಪ್ರೇಕ್ಷಕರನ್ನು ಮುದಗೊಳಿಸಿದೆ.
ಇಲ್ಲಿ ನಂಬಿಕೆ ಮತ್ತು ಮೂಢ ನಂಬಿಕೆಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ ಅದರ ಘರ್ಷಣೆಯಿಂದ ರೂಪುಗೊಂಡಂತಿರೋ ಕುತೂಹಲಕರವಾದ ಕಥೆಯನ್ನು ಹೇಳಲಾಗಿದೆ. ಒಂದು ಸಿನಿಮಾವನ್ನು ಮಾಮೂಲಿ ಜಾಡಿಗಿಂತ ಭಿನ್ನವಾಗಿ ರೂಪಿಸಬೇಕೆಂಬ ತುಡಿತ ಇದ್ದರೆ ಅಂಥಾ ಚಿತ್ರಗಳು ಎಲ್ಲ ರೀತಿಯಿಂದಲೂ ಡಿಫರೆಂಟೆಂಬಂತೆ ಮೂಡಿ ಬರುತ್ತವೆ. ಇಲ್ಲಿ ಪ್ರೀತಿ ಸೇರಿದಂತೆ ನಾನಾ ಛಾಯೆಯ ಕಥೆಯಿದೆ. ಆದರೆ ಎಲ್ಲಿಯೂ ಕೂಡಾ ಥ್ರಿಲ್ಲರ್ ಅಂಶಗಳನ್ನು ಬಿಟ್ಟುಕೊಡದಂಥಾ ಕಲೆಗಾರಿಕೆಯನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಪ್ರದರ್ಶಿಸಿದ್ದಾರೆ. ಹಾಗಂತ ಇಲ್ಲಿ ಬಿಲ್ಡಪ್ಪುಗಳಿಲ್ಲ. ಅದಿಲ್ಲದೆಯೂ ಒಂದು ದೃಷ್ಯವನ್ನು ಕಳೆಗಟ್ಟಿಸೋದು, ನೋಡುಗರನ್ನು ಕುತೂಹಲದ ಶಿಖರವೇರಿಕೊಳ್ಳುವಂತೆ ಮಾಡುವುದೆಲ್ಲ ಒಂದು ಕಲೆ. ನಿರ್ದೇಶಕರಿಲ್ಲಿ ಅದನ್ನು ಧಾರಾಳವಾಗಿಯೇ ಪ್ರದರ್ಶಿಸಿದ್ದಾರೆ. ಅಳಿದು ಉಳಿದವರ ಅಸಲಿ ಹೆಚ್ಚುಗಾರಿಕೆಯೇ ಅದು!
ಈ ಚಿತ್ರದ ನಾಯಕನಾಗಿ ಅಶು ಬೆದ್ರ ಶೀಲಂ ಎಂಬ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ಈತ ಎಲ್ಲರಿಗಿಂತಲೂ ತುಸು ಭಿನ್ನವಾದ ನಿರೂಪಕ. ಶೀಲಂ ನಂಬಿಕೆ ಮತ್ತು ಮೂಢನಂಬಿಕೆಗಳನ್ನೇ ಬೇಸ್ ಆಗಿಸಿಕೊಂಡಿರೋ ಕಾರಣ..? ಎಂಬೊಂದು ಕಾರ್ಯಕ್ರಮವನ್ನು ನಡೆಸುತ್ತಿರುತ್ತಾನೆ. ಪ್ರತೀ ಎಪಿಸೋಡಿನಲ್ಲಿಯೂ ವಿಷಯವೊಂದರ ಪಾತಾಳಗರಡಿಯಂಥಾ ವಿವರಗಳನ್ನು ಕಲೆ ಹಾಕುತ್ತಾ ಪ್ರತೀ ಎಪಿಸೋಡುಗಳಲ್ಲಿಯೂ ಆತ ದೆವ್ವ ಎಂಬುದಿಲ್ಲ ಎಂಬುದನ್ನೇ ಸಾಬೀತುಪಡಿಸುತ್ತಾ ಸಾಗುತ್ತಾನೆ. ಇದೇ ಥರದಲ್ಲಿ ತೊಬತ್ತೊಂಬತ್ತು ಎಪಿಸೋಡುಗಳನ್ನು ಪೈರೈಸಿಕೊಳ್ಳುವ ಆತನ ಮುಂದೆ ನೂರನೇ ಎಪಿಸೋಡನ್ನು ಎಲ್ಲಕ್ಕಿಂತ ವಿಶೇಷವಾಗಿ ರೂಪಿಸಬೇಕೆಂಬ ಸವಾಲು ಮೂಡಿಕೊಳ್ಳುತ್ತದೆ.
ಹಾಗೆ ಹುಡುಕಿ ಹೊರಡೋ ಶೀಲಂಗೆ ಪವನ್ ಕುಮಾರ್ ನಿರ್ವಹಿಸಿರುವ ಪಾತ್ರ ಎದುರಾಗುತ್ತೆ. ಆ ಪಾತ್ರ ತನ್ನ ಸೇಲಾಗದೇ ಉಳಿದ ಮನೆಯಲ್ಲಿ ದೆವ್ವವಿಲ್ಲ ಅಂತ ನಿರೂಪಿಸುವಂತೆ ಶೀಲಂಗೆ ಸವಾಲೊಡ್ಡುತ್ತೆ. ಅದನ್ನು ಸ್ವೀಕರಿಸಿ ಆ ಮನೆಗೆ ಶೀಲಂ ಕಾಲಿಡುತ್ತಲೇ ಕಥೆ ಮತ್ತಷ್ಟು ರೋಚಕ ಆಯಾಮ ಪಡೆದುಕೊಳ್ಳುತ್ತದೆ. ಅಲ್ಲಿ ಶೀಲಂಗೆ ನಿಜವಾಗಿಯೂ ದೆವ್ವದ ದರ್ಶನವಾಗುತ್ತದಾ ಎಂಬುದರಿಂದ ಹಿಡಿದು ಎಲ್ಲರನ್ನು ಕಾಡ ಬಹುದಾದ ಪ್ರತೀ ಪ್ರಶ್ನೆಇಗಳಿಗೂ ಇಲ್ಲಿ ರೋಚಕ ಉತ್ತರವಿದೆ. ವಿಶೇಷವೆಂದರೆ ಇಲ್ಲಿ ಮೂಢ ನಂಬಿಕೆಯ ವಿರುದ್ಧದ ಅಂಶಗಳನ್ನೇ ನಿರ್ದೇಶಕರು ಪ್ರಧಾನವಾಗಿಸಿಕೊಂಡಿದ್ದಾರೆ. ಇದರೊಂದಿಗೆ ನಾನಾ ಛಾಯೆಗಳಿರೋ ಗಟ್ಟಿ ಕಥೆಯನ್ನೇ ಕಟ್ಟಿ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಮನುಷ್ಯನಿಗೆ ಕಾಣಿಸೋದರ ಮೇಲಿರೋ ಕುತೂಹಲಕ್ಕಿಂತ ಕಾಣಿಸದಿರುವುದರ ಬಗ್ಗೆಯೇ ಆಸಕ್ತಿ ಹೆಚ್ಚು. ಅದುವೇ ಭ್ರಮೆಯ ರೂಪ ಧರಿಸಿ ಅದರ ಚಿಪ್ಪೊಳಗೆ ದೆವ್ವ ಭೂತಗಳಂಥವುಗಳು ನರ್ತನ ಶುರುವಿಟ್ಟುಕೊಳ್ಳುತ್ತವೆ. ಈ ಭೂಮಿಕೆಯಲ್ಲಿ ಸಿದ್ಧಗೊಂಡಿರೋ ಅಳಿದು ಉಳಿದವರು ಭರ್ಜರಿ ಎಂಟರ್ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಇಲ್ಲಿ ಹಾಡುಗಳ ಆಡಂಬರವಿಲ್ಲ, ಸಂತದ ಅಬ್ಬರವೂ ಇಲ್ಲ. ಆದರೆ ಕಥೆಯೇ ಅದೆಲ್ಲದರ ಸ್ಥಾನವನ್ನು ಆಕ್ರಮಿಸಿಕೊಂಡು ತಣ್ಣಗೆ ವಿಜೃಂಭಿಸುತ್ತದೆ. ಅಶು ಬೆದ್ರ ನಾಯಕನಾಗಿ ಮೊದಲ ಪ್ರಯತ್ನದಲ್ಲಿಯೇ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ಸಂಗೀತಾ ಭಟ್ ಕೂಡಾ ಅದಕ್ಕೆ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಅತುಲ್ ಕುಲಕರ್ಣಿ, ಪವನ್ ಕುಮಾರ್, ಬಿ ಸುರೇಶ್ ಅವರ ಪಾತ್ರಗಳೂ ಕಾಡುವಂತಿವೆ. ಅಂತೂ ಅತ್ಯಂತ ವಿಶಿಷ್ಟವಾದ ಚಿತ್ರವಾಗಿ ದಾಖಲಾಗುವಂತೆ ಅಳಿದು ಉಳಿದವರು ಚಿತ್ರ ಮೂಡಿ ಬಂದಿದೆ.
ಇದು ಹೇಳಿಕೇಳಿ ಹೊಸ ಅಲೆಯ, ಚಕಿತಗೊಳಿಸುವಂಥಾ ಪ್ರಯೋಗಾತ್ಮಕ ಗುಣಲಕ್ಷಣ ಹೊಂದಿರುವ ಸಿನಿಮಾಗಳ ಜಮಾನ. ಈ ವೆರೈಟಿಯ ಸಿನಿಮಾಗಳತ್ತ ಪ್ರೇಕ್ಷಕರು ಕೂಡಾ ಅಗಾಧವಾದ ಒಲವಿಟ್ಟುಕೊಂಡಿದ್ದಾರೆ. ಅದೆಂಥಾದ್ದೇ ಸವಾಲುಗಳೆದುರಾದರೂ ಕೂಡಾ ಇಂಥಾ ಸಿನಿಮಾಗಳು ಸೋಲದಂತೆ ಕಾಪಾಡುತ್ತಾ ಪೊರೆಯುತ್ತಿದ್ದಾರೆ. ಈ ಕಾರಣದಿಂದಲೇ ಕನ್ನಡ ಚಿತ್ರರಂಗದಲ್ಲಿ ವರ್ಷದ ಪ್ರತೀ ಋತುಮಾನಗಳೂ ಹೊಸತನದ ಸುಗ್ಗಿ ಸಂಭ್ರಮವಾಗಿ ಕಳೆಗಟ್ಟಿಕೊಂಡಿದೆ. ಈ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸುವಂತೆ ಮೂಡಿ ಬಂದಿರುವ ಚಿತ್ರ ‘ಅಳಿದು ಉಳಿದವರು’. ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಈಗಾಗಲೇ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ಅಷ್ಟಕ್ಕೂ ಈ ಸಿನಿಮಾ ಯಾವುದೇ ಅಬ್ಬರ, ಸದ್ದುಗದ್ದಲವೂ ಇಲ್ಲದಂತೆ ಚಿತ್ರೀಕರಣವನ್ನು ಪೂರೈಸಿಕೊಂಡಿತ್ತು. ಅಳಿದು ಉಳಿದವರು ಎಲ್ಲರ ಗಮನ ಸೆಳೆದುಕೊಂಡಿದ್ದದ್ದು ಫಸ್ಟ್ ಲುಕ್ ಪೋಸ್ಟರ್ ಮೂಲಕ. ಇದನ್ನು ಬಿಡುಗಡೆಗೊಳಿಸಿದ್ದ ರಕ್ಷಿತ್ ಶೆಟ್ಟಿ ಇಡೀ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದರು. ಈ ಬಗ್ಗೆ ಅವರಾಡಿದ ಮಾತುಗಳೇ ಪ್ರೇಕ್ಷಕರೆಲ್ಲ ಸದರಿ ಸಿನಿಮಾದತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿತ್ತು. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಮುಂಗಡವಾಗಿಯೇ ಟ್ರೇಲರ್ ಬಗ್ಗೆಯೂ ಮಾತಾಡಿದ್ದರು. ತಾವು ಈಗಾಗಲೇ ಟ್ರೇಲರ್ ನೋಡಿರೋದಾಗಿ ಹೇಳಿದ್ದ ರಕ್ಷಿತ್ ಅದು ಅದ್ಭುತವಾಗಿದೆ ಅಂದಿದ್ದರಲ್ಲಾ? ಆ ಕ್ಷಣದಿಂದಲೇ ಅಳಿದು ಉಳಿದವರತ್ತ ಪ್ರೇಕ್ಷಕರ ಚಿತ್ತ ನೆಟ್ಟುಕೊಂಡಿತ್ತು.
ಅಳಿದು ಉಳಿದವರು ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಟ್ರೇಲರ್ ಸಖತ್ ಕ್ರೇಜ್ ಸೃಷ್ಟಿಸೋದರ ಜೊತೆಗೆ ಇದರಲ್ಲಿ ಯಾರ ಎಣಿಕೆಗೂ ಸಿಗದ ಕುತೂಹಲಕರ ಕಥೆ ಇದೆ ಅನ್ನೋದನ್ನು ಸ್ಪಷ್ಟಪಡಿಸಿದೆ. ಚಿತ್ರತಂಡ ಈ ಬಗ್ಗೆ ಹೆಚ್ಚೇನೂ ಹೇಳಿಕೊಂಡಿಲ್ಲ. ಹಾಗಿದ್ದ ಮೇಲೆ ಕಥೆಯ ಸುಳಿವು ಬಿಟ್ಟು ಕೊಡುವಂಥಾ ಪ್ರಮೇಯವೇ ಎದುರಾಗಿಲ್ಲ. ಆದರೆ ಇಲ್ಲಿ ಪ್ರೇಕ್ಷಕರೆಲ್ಲರನ್ನು ಬೆರಗಾಗಿಸುವಂಥಾ, ಪ್ರತೀ ಕ್ಷಣವೂ ಥ್ರಿಲ್ಲಿಂಗ್ನ ಉತ್ತುಂಗಕ್ಕೆ ಕರೆದೊಯ್ಯುವಂಥಾ ಸಮ್ಮೋಹಕ ಕಥೆ ಇರುವುದಂತೂ ನಿಜ.
ಈಗಾಗಲೇ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಛಾಪು ಮೂಡಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಶು ಬೆದ್ರ ಈ ಮೂಲಕ ನಾಯಕನಾಗಿ ಆಗಮಿಸುತ್ತಿದ್ದಾರೆ. ಅಳಿದು ಉಳಿದವರು ಕಥೆಯ ಅಸಲಿ ಅಂತರಾಳ ನಾಳೆ ನಿಮ್ಮೆಲ್ಲರೆದುರು ಅನಾವರಣಗೊಳ್ಳಲಿದೆ.